Monday, December 31, 2012

ಹೊಸವರ್ಷದ ಶುಭಾಶಯಗಳು-2013

ಹೊಸ ವರ್ಷದ ಶುಭಾಶಯಗಳು.
ಮೊಟ್ಟ ಮೊದಲ ಬಾರಿಗೆ ಹೊಸವರ್ಷದ ಕಲ್ಪನೆ ನನಗೆ ಬಂದದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೋದೆ. ನಮ್ಮ ಮನೆಗೆ ಒಂದು ದೊಡ್ಡ ಅಂಚೆ ಪತ್ರ ಬಂದಿತ್ತು. ನಮ್ಮ ಮನೆಯವರಿಗೆಲ್ಲಾ ಆಶ್ಚರ್ಯ. ಇದೇನು.. ಮಾಮೂಲಿ ಪತ್ರದ ಗಾತ್ರ ಬೇರೆ. ಇದರ ಉದ್ದಗಲವೇ ಬೇರೆ. ಅದನ್ನು ಬಿಡಿಸಿ ನೋಡಿದಾಗಲೇ ಗೊತ್ತಾದದ್ದು ಅದು ಹೊಸವರ್ಷದ ಶುಭಾಷಯ ಪತ್ರ ಎಂದು. ಅದನ್ನು ನಮ್ಮ ಚಿಕ್ಕಪ್ಪ ಕಳುಹಿಸಿದ್ದರು. ಅದು ನಮಗೆ ಬಂದ ಮೊದಲ ಹೊಸವರ್ಷದ ಶುಭಾಷಯ ಪತ್ರ. ನಾನಾಗ ಬಹುಶ ಪ್ರಾಥಮಿಕ ಶಾಲೆಯಲ್ಲಿದ್ದೆ. ಹೊಸವರ್ಷ, ಶುಭಾಷಯ ಪತ್ರ ಮುಂತಾದವುಗಳ ಪರಿಕಲ್ಪನೆ ಮೊಟ್ಟಮೊದಲ ಬಾರಿಗೆ ಮೂಡಿಸಿದ್ದು ನಮ್ಮ ಚಿಕ್ಕಪ್ಪನ ಆ ಪತ್ರ ಎಂದು ಹೇಳಬಹುದು. ತದನಂತರ ನಾವು ಒಂದಷ್ಟು ವರುಷಗಳು ಜನವರಿಗಾಗಿ ಕಾಯುತ್ತಿದ್ದೆವು. ಶುಭಾಷಯ ಪತ್ರ ಕಳುಹಿಸಲು ಮತ್ತು ಸ್ವೀಕರಿಸಲು. ನಾನು ಪ್ರೌಢ ಶಾಲೆಗೇ ಬಂದಾಗ ಶಾಲೆಯಲ್ಲಿ ಹೊಸವರ್ಷದ ಆಚರಣೆ ತುಸು ಜೋರಾಗೆ ಇರುತ್ತಿತ್ತು. ತೀರಾ ಆತ್ಮೀಯರಾಗಿ ಓಡಾಡುತ್ತಿದ್ದವರು ಯಾವುದೋ ಮಾತಿಗೆ ಜಗಳವಾಡಿಕೊಂಡು ಮಾತು ಬಿಟ್ಟಿದ್ದರೆ, ಇಬ್ಬರಿಗೂ ಮಾತಾಡಿಸಿಕೊಳ್ಳಬೇಕೆಂಬ ತುಡಿತ ಇರುತ್ತಿತ್ತಾದರೂ ಬಿಂಕ ಅದಕೆ ಅವಕಾಶ ಮಾಡಿಕೊಡುತ್ತಿರಲಿಲ್ಲ. ಆದರೆ ಹೊಸವರ್ಷದ ಒಂದು ಶುಭಾಷಯ ಪತ್ರ ಇಬ್ಬರನ್ನು ಒಂದು ಮಾಡಿಬಿಡುತ್ತಿತ್ತು.ನಾವು ಹೈಸ್ಕೂಲಲ್ಲಿದ್ದಾಗ ನಮ್ಮನ್ನು ನೋಡಿ ನನ್ನ ತಂಗಿಯೂ  ಶುಭಾಷಯ ಪತ್ರಗಳನ್ನೂ ತನ್ನ ಗೆಳತಿಯರಿಗೆ ಕೊಡುವುದಕ್ಕೆ ಶುರುಮಾಡಿದ್ದಳು. ಶ್ರುತಿ, ಬೇಬಿ ಶ್ಯಾಮಿಲಿಯ ಫೋಟೋಗಳು, ಗುಲಾಬಿ ಹೂವುಗಳ ಹೂಕುಂಡದ ಫೋಟೋಗಳು, ಸೂರ್ಯೋದಯ, ನದಿ,ದೋಣಿ, ಮಾಲಾಶ್ರೀ , ಸುಧಾರಾಣಿ ಮುಂತಾದವುಗಳೆ ಶುಭಾಷಯ ಪತ್ರಗಳಾಗಿದ್ದವು.ಅದರ ಹಿಂದೆ ಬರೆಯುತ್ತಿದ್ದ ನುಡಿಗಟ್ಟುಗಳು, ಚಿಕ್ಕ ಚಿಕ್ಕ ಕವನಗಳು ಮಜಾ ಕೊಡುತ್ತಿದ್ದವು.
ನನ್ನದೊಂದು ಉಡುಗೊರೆ
ನಿನ್ನದೊಂದು ಉಡುಗೊರೆ
ನಮ್ಮಿಬ್ಬರ ಉಡುಗೊರೆ ತವರುಮನೆ ಉಡುಗೊರೆ.,
ಆಕಾಶಕ್ಕೆ ಎಣಿಯಿಲ್ಲ
ಸಮುದ್ರಕ್ಕೆ ಸೇತುವೆಯಿಲ್ಲ
ನನ್ನ ನಿನ್ನ ಸ್ನೇಹಕ್ಕೆ ಮಿತಿಯಿಲ್ಲ.
ಎಂಬ ಕಿರುಕವನದ ತರಹದ ಬರಹಗಳಿಂದ ಹಿಡಿದು, 
ಕೈಕೆಸರಾದರೆ ಕೈ ತೊಳ್ಕೋ
ಬಾಯಿ ಮೊಸರಾದರೆ ಬಾಯಿ ಒರೆಸ್ಕೋ
ಆದರೆ ನನ್ನ ಸ್ನೇಹ ಯಾವತ್ತಿಗೂ ನೆನಪಿಟಕೋ
 ತರಹದ ತರಲೆ ನುಡಿಬರಹಗಳನ್ನೂ ಬರೆಯುತ್ತಿದ್ದದ್ದುಂಟು. ನನ್ನ ತಂಗಿಯರಂತೂ ತಮ್ಮ ಗೆಳೆತಿಯರಿಗೆಲ್ಲ ಬರೆಯಲು ಉತ್ಸುಕರಾಗುತ್ತಿದ್ದರಷ್ಟೇ ಅಲ್ಲ ಮೊದಲೇ' ನಿನಗೆ ಈ ಕಾರ್ಡ್ ಇಷ್ಟಾನಾ ಹಾಗಾದ್ರೆ ಇದನ್ನೇ ಕಳುಹಿಸ್ತೀನಿ, ಅವಳಿಗೆ ಇದು ಸಾಕು ಅಂತಲೋ, ಲೇ...ಅದು ನನಗೆ ಇಷ್ಟ ಆಯ್ತು...ನನಗೇನೆ ಅದ  ಕಳಿಸೆ...' ಎಂದು ಮೊದಲೇ ಪಿಕ್ಸಿಂಗ್ ಮಾಡಿಕೊಳ್ಳುತ್ತಿದ್ದದ್ದು ನನಗೆ ನಗೆ ತರಿಸುತ್ತಿತ್ತು.
 ನಮ್ಮ ಹೈಸ್ಕೂಲಿನಲ್ಲಿ ಬೇರೆಯದೆ ಆದ ವಾತಾವರಣವಿತ್ತು. ಯಾವ ಹುಡುಗಿ ಯಾವ ಹುಡುಗನಿಗೆ ಯಾವ ಗ್ರೀಟಿಂಗ್ ಕಾರ್ಡ್ಸ್ ಕೊಟ್ಟಿದ್ದಾನೆ/ಳೆ ಎಂಬುದು ಕುತೂಹಲ ತರುವ ರೋಮಾಂಚನಗೊಳಿಸುವ ವಿಷಯವಾಗಿತ್ತು.ಕೆಂಪು ಒಂಟಿ ಗುಲಾಬಿಯ , ಫೋಲ್ಡಿಂಗ್ ತರಹದ ಕಾರ್ಡ್ ಕೊಟ್ಟಿದ್ದಾನೆಂದರೆ  ಅಥವಾ ಕೊಟ್ಟಿದ್ದಾಳೆಂದರೆ ಅವರಿಬ್ಬರ ನಡುವೆ ಏನೋ ಇದೆ ಎಂಬುದನ್ನು ಅವರಿಗಿಂತ ಮೊದಲೇ ಬೇರೆಯವರು ನಿರ್ಧರಿಸಿಬಿಡುತ್ತಿದ್ದರು.ಕೆಲವೊಮ್ಮೆ ಕೆಲ ಖದೀಮರು ತಮಗಿಷ್ಟವಿದ್ದವರಿಗೆ [ ಆದರೆ ಆಕೆಗಿಷ್ಟವಿಲ್ಲದಿದ್ದರಿಂದ ] ಸಮಯಸಾಧಿಸಿ ಕೆಂಪು ಗುಲಾಬಿಯ ಹೂವಿನ ಶುಭಾಷಯ ಪತ್ರ ಕೊಟ್ಟು ಸಿನೆಮಾದ ಚಂದನೆಯ ಪ್ರೇಮಗೀತೆಯ ಸಾಲು ಬರೆಯುತ್ತಿದ್ದರು. ಮುಂದೆ ಅದು ವಿವಾದಗಳ ಗೂಡಾಗಿ ಶಿಕ್ಷಕರ ಹತ್ತಿರಕ್ಕೆ ಇತ್ಯರ್ಥಕ್ಕೆ ಬಂದಾಗ 'ನಾನು ಫ್ರೆಂಡ್ ಶಿಪ್ಪಲ್ಲಿ ಕೊಟ್ಟೆ..ಅದಕ್ಕೆ ತಪ್ಪು ತಿಳ್ಕೋಬೇಕಾ...ಅದು ಫಿಲಂ ಸಾಂಗು...ನಾ ಬರೆದಿದ್ದಾ..' ಎಂಬೆಲ್ಲಾ ಮಾತುಗಳಿಂದ ತಮ್ಮನ್ನು ತಾವು ಆರೋಪಮುಕ್ತನನ್ನಾಗಿ ಮಾಡಿಕೊಳ್ಳುತ್ತಿದ್ದರಲ್ಲದೆ 'ಮನಸ್ಸಲ್ಲಿ ಏನೇನೋ ಇಟ್ಕೊಂಡು ನಮ್ಮದೇ ತಪ್ಪು ಅಂತಾರೆ..' ಎಂಬರ್ಥದ ಮಾತುಗಳಿಂದ ಆರೋಪಿಸಿದವರನ್ನೇ ಸಣ್ಣಮನಸ್ಸಿನವರು ಎಂದು ಸಾಧಿಸುತ್ತಿದ್ದರು.
ಮುಂದೆ ಕಾಲೇಜಿನಲ್ಲೂ ಶುಭಾಷಯ ಪತ್ರವಿತ್ತಾದರೂ ಹೊಸವರ್ಷಕ್ಕೆ ಅದರಲ್ಲಿ ಅಂತಹ ಪುಳಕವಿರುತ್ತಿರಲಿಲ್ಲ. ಮೊದಲೇ ಜೋಡಿಗಳು ನಿಕ್ಕಿಯಾಗುತ್ತಿದ್ದರಿಂದ ಮತ್ತೆಲ್ಲಾ ಗೊತ್ತಿದ್ದರಿಂದ ಅವರ ಪಾಡಿಗೆ ಅವರು ನಮ್ಮ ಪಾಡಿಗೆ ನಾವು ಎಂಬಂತೆ ಇದ್ದುಬಿಡುತ್ತಿದ್ದೆವು. ಆದರೂ ಶುಭಾಷಯ ಪತ್ರಗಳ ಭರಾಟೆಯಂತೂ ಇದ್ದೆ ಇರುತ್ತಿತ್ತು. ಸಂಗೀತ ಹಾಡುವ ಬಣ್ಣಬಣ್ಣದ ದುಬಾರಿ ಬೆಲೆಯ ಕಾರ್ಡುಗಳ ವಿತರಣೆಯಂತೂ ನಡೆದು ಜೋಡಿಯಾಗಿ, ಜಗಳವಾಗಿ ಏನೇನೋ ಆಗುತ್ತಿದ್ದದುಂಟು.
ಈವಾಗ ಮೊಬೈಲ್ ಬಂದಿದೆ. ಇಮೇಲ್ ಇದೆ. ಕಡಿಮೆ ಖರ್ಚಿನಲ್ಲಿ ಶುಭಾಶಯಗಳ ರವಾನೆಯಾಗುತ್ತದೆ.ಒಂದೇ ಇಮೇಲ್, ಅಥವಾ ಒಂದೆ ಮೆಸೇಜ್ ಎಲ್ಲರಿಗೂ ಒಂದೆ ಸಾರಿ ರವಾನೆಯಾಗುತ್ತದೆ. ಅದು ಬೇರೆಯವರಿಗೆ ಗೊತ್ತಾಗುವ ಸಂಭವವೂ ಕಡಿಮೆ ಇದೆ. ಮೊದಲೆಲ್ಲಾ 'ನಿನಗೂ ಇದೆ ಕೊಟ್ಟಿದ್ದಾನಾ...ನೋಡು ನನಗೂ ಇದೆ ಗ್ರೀಟಿಂಗ್ಸ್ ಕಳಿಸಿದ್ದಾನೆ...? 'ಎನ್ನುವ  ಮಾತುಗಳು ಅರ್ಥ ಕಳೆದುಕೊಂಡಿವೆ.
ಇರಲಿ ಮತ್ತೊಮ್ಮೆ ಹೊಸವರ್ಷದ ಶುಭಾಶಯಗಳು...

Thursday, December 27, 2012

ಬೆಂಗಳೂರು ಸಿನೆಮೋತ್ಸವ-3

ಇವಾನ'ಸ್ ವುಮನ್: ಮಹಿಳಾ ನಿರ್ದೇಶಕಿ ಫ್ರಾನ್ಸಿಸ್ಕಾ ಸಿಲ್ವ ನಿರ್ದೇಶನದ ಸುಮಾರು 88 ನಿಮಿಷಗಳ ಅವಧಿಯ ಚಿಲಿಯನ್ ಚಲನಚಿತ್ರ ಇವಾನ'ಸ್ ವುಮನ್ 2011 ರಲ್ಲಿ ತೆರೆಗೆ ಬಂದಂತಹ ಚಲನಚಿತ್ರ. ಚಿತ್ರದ ನಾಯಕ ಇವಾನ್. ನಾಯಕಿ ನತಾಲಿಯನ್ನು ಒಂದು ಕೋಣೆಯೊಳಗೆ ಬಂಧಿಯನ್ನಾಗಿಸಿದ್ದಾನೆ. ಆಕೆಗೆ ಹೊತ್ತಿಗೊತ್ತಿಗೆ ಊಟ ತಿಂಡಿ ಕೊಡುತ್ತಿದ್ದಾನಾದರೂ ಆಕೆಯ ಪಾಲಿಗೆ ಸ್ವಾತಂತ್ರ್ಯ  ಮರೀಚಿಕೆಯಾಗಿದೆ. ನತಾಲಿ ಚಿಕ್ಕಂದಿನಿಂದಲೂ ಆತನ ಬಂಧನದಲ್ಲೇ ಇದ್ದಾಳೆ. ಬರುಬರುತ್ತಾ ಆಕೆಯ ಆಸೆಗಳಿಗೆ ಅಪಹರಣಕಾರ ಸ್ಪಂಧಿಸತೊಡಗುತ್ತಾನೆ. ಎಷ್ಟೇ ಅಂತರವನ್ನು ಕಾಪಾಡಿಕೊಳ್ಳಬೇಕೆನಿಸಿದರೂ ಆಕೆಯ ವರ್ತನೆಯಿಂದಾಗಿ ಹಲವಾರು ಸಾರಿ ಅಂತರಕಾಪಾಡಿಕೊಳ್ಳಲಾರದೆ ಸೋಲುತ್ತಾನೆ. ಕೊನೆಗೆ ಆಕೆಯ ಮೇಲೆ ಪ್ರೀತಿ ಹುಟ್ಟಿ ಯಾವಾಗಲೂ ನನ್ನೊಡನೆಯೇ ಇರು ಎಂದು ಭಾಷೆ ತೆಗೆದುಕೊಳ್ಳುತ್ತಾನೆ. ನತಾಲಿ 'ಹೂಂ' ಎನ್ನುತ್ತಾಳಾದರೂ ಸಮಯ ಸಾಧಿಸಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಾಳೆ. 
ಇಡೀ ಚಿತ್ರವನ್ನ  ಎರಡೇ ಪಾತ್ರಗಳು ಒಂದು ಕೋಣೆ/ಮನೆ ಆವರಿಸಿಕೊಂಡಿವೆ. ನತಾಲಿಯ ಒಂಟಿತನವನ್ನೂ ತೋರಿಸುತ್ತಾ ಹೋಗುವ ನಿರ್ದೇಶಕರು ಅದೇ ಹಾದಿಯಲ್ಲಿ ಅಪಹರಣಕಾರನ ಮನಸ್ಥಿತಿಯನ್ನೂ ತೋರಿಸುತ್ತಾರೆ. ಆದರೆ ಚಿತ್ರಕ್ಕೊಂದು ಅಥವಾ ಕಥೆಗೊಂದು ಹಿನ್ನೆಲೆ ಇಲ್ಲದಿರುವುದು ಸಿನಿಮಾದಲ್ಲಿ ಏನೋ ಕೊರತೆಯಿರುವುದನ್ನು ಎತ್ತಿ ತೋರಿಸುತ್ತದೆ. ಚಿತ್ರದಲ್ಲಿರುವ  ನತಾಲಿ-ಇವಾನ ರ ಸನ್ನಿವೇಶಗಳು ನಿಗೂಢತೆಯನ್ನು ಹುಟ್ಟಿಸಿದರೂ ಅದೂ ಕೆಲವೊಮ್ಮೆ ಬೇಸರ ತರಿಸುತ್ತದೆ.
ಚಿತ್ರದ ಪ್ರಾರಂಭದಲ್ಲಿ ಎಲ್ಲವೂ ಒಗಟು ಒಗಟಾಗಿ ಕಾಣುತ್ತದೆ. ಇವನ್ಯಾರು, ಇವಳ್ಯಾರು, ಹೀಗ್ಯಾಕೆ ಎಂಬ ಪ್ರಶ್ನೆಗಳನ್ನ ಹುಟ್ಟು ಹಾಕುತ್ತ ಸಾಗುವ ಚಿತ್ರಕಥೆ ಆಮೇಲೂ ಅದಕ್ಕೊಂದು ಪರಿಪೂರ್ಣ ಅರ್ಥ ಕೊಡುವಲ್ಲಿ ಯಶಸ್ಸಾಗುವುದಿಲ್ಲ. ಚಿತ್ರದ ನಿರೂಪಣೆ ಏಳು ಅದ್ಯಾಯಗಳಲ್ಲಿ ತೆರೆದುಕೊಳ್ಳುತ್ತದೆ. ನತಾಲಿ ಅಡಿಗೆ ಮಾಡಿದಳು, ನತಾಲಿ ಸಮುದ್ರ ತೀರಕ್ಕೆ ಹೋದಳು, ನತಾಲಿಗೆ ಕೊಡುಗೆ ಸಿಕ್ಕಿತು..ಹೀಗೆ ಕೊನೆಯ ಅದ್ಯಾಯ ನತಾಲಿಯೇ ಇವಾನನ ಹೆಂಗಸು ಎಂಬಲ್ಲಿಗೆ ಬಂದು ನಿಲ್ಲುತ್ತದೆ.
ಲೈಕ್  ಸಮ್ ಒನ್ ಇನ್ ಲವ್: ಅಬ್ಬಾಸ್ ಕೈರೋಸ್ತಮಿ ಇರಾನಿ ಚಿತ್ರರಂಗದಲ್ಲಿ ದೊಡ್ಡ ಹೆಸರು. ಚಿತ್ರೋತ್ಸವಗಳಲ್ಲಿ ಕೈರೋಸ್ತಮಿಯ ಒಂದಾದರೂ ಚಿತ್ರ ವಿದ್ದೆ ಇರುತ್ತದೆ.ಇರಾನಿ ಭಾಷೆಯಲ್ಲಿನ ಕ್ಲೋಸ್ ಅಪ್, ಥ್ರೂ ದಿ ಅಲಿವ್ ಟ್ರೀಸ್ , ಟೆನ್ ಚಿತ್ರಗಳು, ಫ್ರೆಂಚ್ ಭಾಷೆಯ ಸೆರ್ಟಿ ಫೈಡ ಕಾಪಿ ಚಿತ್ರಗಳಿಂದ ಹೆಸರುವಾಸಿಯಾದ ನಿರ್ದೇಶಕರು ಈಗ ಜಪಾನಿ ಭಾಷೆಯಲ್ಲಿ  ತುಂಬಾ ಚಂದನೆಯ ಹೆಸರಿಟ್ಟುಕೊಂಡು ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ.ಚಿತ್ರದ ಕಥೆಯ ಬಗೆ ಹೇಳುವುದಾದರೆ ತನ್ನ ವಿದ್ಯಾಭ್ಯಾಸದ ಖರ್ಚಿಗಾಗಿ ವೇಶ್ಯಾವಾಟಿಕೆಗೆ ಇಳಿದಿರುವ ಹುಡುಗಿ ಅದೊಂದು ದಿನ ವಯಸ್ಸಾದ ಪ್ರೊಫೆಸ್ಸರ್ ಒಬ್ಬರ ಬಳಿಗೆ ಹೋಗಲೇಬೇಕಾಗುತ್ತದೆ. ಆದರೆ ತನ್ನ ಅನ್ಯಮನಸ್ಕತೆಯಿಂದಾಗಿ ಅಲ್ಲೇನೂ ನಡೆಯದಿದ್ದರೂ ಆ ಪ್ರೊಫೆಸ್ಸರ್ ಮಾರನೆಯ ದಿನ ಆಕೆಯನ್ನು ಅವಳ ಕಾಲೇಜಿಗೆ ಬಿಡಲು ತನ್ನ ಕಾರಿನಲ್ಲಿ ಕರೆತಂದಾಗ ಅವಳ ಹುಚ್ಚು ಪ್ರೇಮಿಯ ಪರಿಚಯವಾಗುತ್ತದೆ. ಅವನು ಪ್ರೋಫೆಸ್ಸರನನ್ನು ನಾಯಕಿಯ ಅಜ್ಜ ಎಂದು ತಿಳಿದುಕೊಳ್ಳುತ್ತಾನೆ. ಚಿತ್ರ ಮುಂದುವರೆದಂತೆ ಆತನಿಂದ ಪೆಟ್ಟು ತಿಂದ ನಾಯಕಿಯನ್ನ ಪ್ರೊಫೆಸ್ಸರ್ ತನ್ನ ಮನೆಗೆ ಕರೆತಂದು ಶುಶ್ರೂಷೆ ಮಾಡುತ್ತಿದ್ದಾಗ ಆ ಹುಚ್ಚು ಪ್ರೇಮಿ ಮನೆಗೆ ಬಂದು ಬಾಗಿಲು ತೆರೆಯುವಂತೆ ಕೂಗಾಡುತ್ತಾನಲ್ಲದೆ ಕೋಣೆಯ ಕಿಟಕಿ ಗಾಜನ್ನೂ ಒಡೆದುಹಾಕುತ್ತಾನೆ.
ಚಿತ್ರ ನಮ್ಮ ತಾಳ್ಮೆ ಪರೀಕ್ಷಿಸುವಷ್ಟು ಮಂದಗತಿಯಲ್ಲಿದೆ. ಮಾರುದ್ದ ಸಂಭಾಷಣೆಗಳು, ಉದ್ದನೆಯ ದೃಶ್ಯ/ದೃಶಿಕೆಗಳು ಏನೇನೂ ನಡೆಯದ ಘಟನೆಗಳಿಂದಾಗಿ ಚಿತ್ರ ಬೋರ್  ಹೊಡೆಯಲು ಪ್ರಾರಂಭಿಸುತ್ತದೆ.ಸಂಭಾಷಣೆ ಕೆಲವು ಕಡೆ ಚುರುಕು ಎನಿಸಿದರೂ ಮತ್ತೆ ಸಾದಾರಣ ಎನಿಸಿ ಎಲ್ಲೂ ಮನಕ್ಕೆ ತಾಗುವುದಿಲ್ಲ. ಕೊನೆಯಲ್ಲಿ ಅಂತ್ಯವಿಲ್ಲದ ಅಥವಾ ಅದಕ್ಕೊಂದು ಪರಿಪೂರ್ಣತೆಯಿಲ್ಲದೆ ಚಿತ್ರ ಅರ್ಧಕ್ಕೆ ಮುಗಿದಂತೆನಿಸುತ್ತದೆ.
ಓದಿ ಮೆಚ್ಚಿದ್ದು:
ಹೀಗೆ ಓದಲಿಕ್ಕೆ ಏನಾದರೂ ಹುಡುಕುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದದ್ದು ಕೊಳಲು ಎಂಬ ಬ್ಲಾಗ್ ಸ್ಪಾಟ್ . ಅಲ್ಲಿದ್ದ ಲೇಖನ ನಿಜಕ್ಕೂ ನನಗೆ ನಗು ತರಿಸಿತು. ಹೆಸರಿನಿಂದಾಗುವ ಅವಾಂತರಗಳು ಅನೇಕ. ಹೆಸರಿನಲ್ಲಿ ಹಾಸ್ಯ... ಅಂತಹದ್ದೇ ಒಂದು ಲೇಖನ. ಇಲ್ಲಿ ಅಂತಹದ್ದೆ ಸುಮಾರು ಲೇಖನಗಳಿವೆ. ಅನುಭವ ಕಥನಗಳಿವೆ. ನೀವು ಒಮ್ಮೆ ಓದಿ.

Wednesday, December 26, 2012

ಬೆಂಗಳೂರು ಸಿನೆಮೋತ್ಸವ -2

ರೋಜ್: ಚಿತ್ರದ ಕಥೆ 1945ರ ಕಾಲಘಟ್ಟದ್ದು. ಜರ್ಮನ್ ಸೈನಿಕನೊಬ್ಬನ ಪತ್ನಿ ಚಿತ್ರದ ನಾಯಕಿ ರೋಜ. ಸೈನಿಕ, ರಶಿಯನ್ ರ ದಾಳಿಯಿಂದ ಸತ್ತ ನಂತರ ರೋಜಾ ಒಂಟಿಯಾಗಿ ತನ್ನ ಜಮೀನಿನಲ್ಲೆ ಉಳಿದುಕೊಳ್ಳುತ್ತಾಳೆ. ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರವನ್ನು ರಶಿಯನ್ ಸೈನಿಕರೂ ಎಸಗುತ್ತಿದ್ದರೂ ಆಕೆಯ ರಕ್ಷಣೆಗೆ ಯಾರೂ ಇರುವುದಿಲ್ಲ . ಚಿತ್ರದ ನಾಯಕ ಪೋಲೆಂಡ್ ದೇಶದ ಸೈನಿಕ. ವಾರ್ಸಾದ ಉಗಮದ ಸಮಯದಲ್ಲಿ ಕಣ್ಣಮುಂದೆಯೇ ತನ್ನ ಹೆಂಡತಿಯ ಮೇಲೆ ಅತ್ಯಾಚಾರವೆಸಗಿ ಸಾಯಿಸಿರುತ್ತಾರೆ. ತನ್ನ ಗುರುತನ್ನು ಮುಚ್ಚಿಟ್ಟುಕೊಳ್ಳಲು ಬರುವ ನಾಯಕ ರೋಜಾಳ ರಕ್ಷಣೆಗೆ ನಿಲ್ಲುತ್ತಾನೆ.ಮುಂದೆ ಆಕೆಯ ಹೊಲವನ್ನು ಹಸನುಮಾಡಿ, ಅವಳನ್ನು ರಶಿಯನ್ ಸೈನಿಕರಿಂದ ರಕ್ಷಿಸಲು ನಾನಾ ಪ್ರಯತ್ನ ಪಡುತ್ತಾನಾದರೂ ಆಕೆ ದುರ್ಮರಣಕ್ಕೀಡಾಗುತ್ತಾಳೆ . ಆಕೆಯ ಮಗಳನ್ನು ರಕ್ಷಿಸಲು ಪನತೊಡುವ ನಾಯಕ ಆನಂತರ ರಶಿಯನ್ ಸೈನಿಕರ ಕೈಗೆ ಸಿಕ್ಕಿ ನರಕಯಾತನೆ ಅನುಭವಿಸುತ್ತಾನೆ. ಅಷ್ಟೆಲ್ಲಾ ಹಿಂಸೆಯ ನಂತರವೂ ಬದುಕುಳಿಯುವ ನಾಯಕ ಕೊನೆಯಲ್ಲಿ ರೋಜಾಳ ಮಗಳನ್ನು ಹುಡುಕಿಕೊಂಡು ಹೋಗಿ, ಆಕೆಯನ್ನು ಸೇರುತ್ತಾನೆ. 
ಚಿತ್ರದ ಕಥೆ, ನಿರೂಪಣೆ ನಮಗೆ 1945ರ ಕರಾಳ ದಿನಗಳನ್ನು ಹಾಗೆಯೇ ತೆರೆದಿಡುತ್ತದೆ. ಜಯ ಯಾರ ಕಡೆಗೆ ಆಗಲಿ, ಯುದ್ಧದ ಭೀಕರತೆ ಮಾತ್ರ ಎರಡೂ ಕಡೆ ತನ್ನ ಕರಾಳ ಪ್ರಭಾವವನ್ನು ಬೀರದೆ ಇರುವುದಿಲ್ಲ. ಅಲ್ಲಿ ಹೆಂಗಸು, ಮಕ್ಕಳು ಗಂಡಸೆಂಬ ಭೇದ ಭಾವವಿಲ್ಲ.. ಆವತ್ತಿನ ದಿನದಲ್ಲಿ ಬದುಕೆಂಬುದು ಅದೆಷ್ಟು ಕಷ್ಟ ಕರವಾಗಿತ್ತೆ೦ಬುದು ಪ್ರಾರಂಭದ ದೃಶ್ಯದಲ್ಲಿಯೇ ನಿರ್ದೇಶಕ ನಮಗೆ ಮನವರಿಕೆ ಮಾಡಿಕೊಟ್ಟುಬಿಡುತ್ತಾನೆ. ಚಿತ್ರದಲ್ಲಿ ಇನ್ನೊಂದು ಗಮನ ಸೆಳೆಯುವ ಅಂಶವೆಂದರೆ ಕಲಾ ನಿರ್ದೇಶನ. ಯುದ್ಧದ ನಂತರದ ದೃಶ್ಯಗಳನ್ನು ಯಥಾವತ್ತಾಗಿ ಕಟ್ಟಿಕೊಡುವುದರಲ್ಲಿ ನಿರ್ದೇಶಕನಿಗೆ ಸರಿಸಮನಾಗಿ ಛಾಯಾಗ್ರಾಹಕ ಮತ್ತು ಕಲಾನಿರ್ದೇಶಕರೂ ಕೈ ಜೋಡಿಸಿದ್ದಾರೆ. ಹಾಗಾಗಿ ಚಿತ್ರದಲ್ಲಿ ನೈಜಕತೆ ಮೆರೆದಿದೆ.
ಯುದ್ಧದ ಬಗ್ಗೆ ಹಾಲಿವುಡಿನಿಂದ ಹಿಡಿದು ಪ್ರಪಂಚದ ಎಲ್ಲಾ ಚಿತ್ರರಂಗಗಳಲ್ಲೂ ಸುಮಾರಷ್ಟು ಚಿತ್ರಗಳು ತೆರೆಕಂಡಿವೆ. ದೇಶ ದೇಶ ಬೇರೆಯಾದರೂ, ಕಥೆಗಳು ಬೇರೆಯಾದರೂ ಒಟ್ಟಾರೆ ಪ್ರಭಾವ ಮಾತ್ರ ಒಂದೇ ಇರುತ್ತದೆ:ಯುದ್ಧ ಎನ್ನುವುದು ಅಮಾನವೀಯ ಎಂಬುದು.
ಬರೀ ಮೂರೊತ್ತು ತಿಂದು ಬದುಕುವುದಕ್ಕೆ, ತಮ್ಮ ನೆಲದಲ್ಲಿ ಬೆಳೆದು ತಮ್ಮ ಪಾಡಿಗೆ ತಾವಿರುತ್ತೆವೆಂಬುದಕ್ಕೆ ಬಿಡದ ಯುದ್ಧ ಯಾವತ್ತೂ ಯಾರಿಗೂ ಬೇಡ ಎಂಬ ಸಂದೇಶವನ್ನು ಚಿತ್ರ ಯಶಸ್ವಿಯಾಗಿ ಸಾರುತ್ತದಷ್ಟೇ ಅಲ್ಲ ತುಂಬಾ ದಿನದ ವರೆಗೆ ರೋಸ್ ಮತ್ತು ನಾಯಕ ತಾದೆಯುಜ್ ಪಾತ್ರಗಳು ಕಾಡುತ್ತವೆ. ಅವಶ್ಯವಾಗಿ ಒಮ್ಮೆ ನೋಡಬೇಕಾದ ಚಿತ್ರ ರೋಜ್.
ಇತರ ಮಾತರಂ:
 ಮಲಯಾಳಂ ನ ಕಾದಂಬರಿಕಾರ ಕಲ್ಪಟ್ಟ ನಾರಾಯಣನ್  ಅವರ ಕಾದಂಬರಿ ಆಧರಿಸಿದ ಚಿತ್ರ ಇತ್ರ ಮಾತರಂ 2012ರಲ್ಲಿ ತೆರೆಕಂಡ೦ತಹ ಚಿತ್ರ. ಒಂದೂವರೆ ಘಂಟೆಯಷ್ಟು ಅವಧಿಯ ಈ ಚಿತ್ರದ ನಿರ್ದೇಶಕ ಕೆ. ಗೋಪಿನಾಥನ್. ಚಿತ್ರದ ಪ್ರಮುಖ ಪಾತ್ರಧಾರಿ/ನಾಯಕಿಯ ಸಾವಿನೊಂದಿಗೆ ಸಿನೆಮಾ ಆರಂಭವಾಗುತ್ತದೆ. ಮೂವತ್ತೆಂಟು ವರ್ಷದ ಒಂದು ಮಗುವಿನ ತಾಯಿಯಾಗಿದ್ದ ಗೃಹಿಣಿಯ ಸಾವಿನ ನಂತರ ಆಕೆಯ ಅಂತಿಮ ದರ್ಶನಕ್ಕೆ ಬರುವ ಸಂಬಂಧಿಕರ ಮೂಲಕ ಆಕೆಯ ಹಿನ್ನೆಲೆ, ಜೀವನದ ಆಗುಹೋಗುಗಳು ತಿಳಿಯುತ್ತಾ ಹೋಗುತ್ತವೆ. ನನ್ನ ಒಡವೆಗಳನ್ನು ಜೋಪಾನವಾಗಿಡು  ಎಂದು ಪಕ್ಕದ ಮನೆಯ ಮುದುಕಿ ತನ್ನ ಆಭರಣಗಳನ್ನು ಕೊಟ್ಟಿರುತ್ತಾಳೆ. ಈಗ ಏಕಾಏಕಿ ಆಕೆ ಸತ್ತದ್ದರಿಂದ ಮುದುಕಿಗೆ ಆಭರಣದ ಚಿಂತೆಯಾಗುತ್ತದೆ. ಬಾಲ್ಯದ ಗೆಳತಿಗೆ ತನ್ನ ಕಷ್ಟಸುಖ ಹಂಚಿಕೊಳ್ಳಲು ಇದ್ದ ಏಕೈಕ ವ್ಯಕ್ತಿ ಇನ್ನಿಲ್ಲವಲ್ಲ ಎಂಬ ಚಿಂತೆ. ಪಕ್ಕದ ಮನೆಯ ಹುಡುಗ, ಕೆಲಸದಾಳು.. ಹೀಗೆ ಎಲ್ಲರ ಜೀವನದಲ್ಲೂ ಆಕೆಗಿದ್ದ ಪಾತ್ರವು ಚೀಚಿಯ ಜೀವನದ ವಿವಿಧ ಮಗ್ಗಲನ್ನು ವಿಶದಪಡಿಸುತ್ತವೆ.
ಚಿತ್ರದ ಕಥೆ-ಚಿತ್ರಕಥೆ ಭಿನ್ನವೆನಿಸಿದರೂ ಮಂದಗತಿಯ ನಿರೂಪಣೆ ಪ್ರೇಕ್ಷಕರನ್ನು ಆಕಳಿಸುವಂತೆ ಮಾಡುತ್ತದೆ. ಒಬ್ಬೊಬ್ಬರು ಹೆಣ ನೋಡಲು ಬಂದಾಗ ಅವರ ಮೂಲಕ ಅವರು ಮತ್ತು ನಾಯಕಿಗೆ ಸಂಬಂಧಪಟ್ಟ ಘಟನೆಗಳು ತೆರೆದುಕೊಳ್ಳುತ್ತವೆ. ಕೆಲವು ಘಟನೆಗಳು ಆತ್ಮೀಯವೆನಿಸುತ್ತವೆ. ಕೆಲವು ಆಸಕ್ತಿಕರವೆನಿಸುತ್ತವೆ. ಆದರೂ ಇನ್ನೂ ಏನಾದರೂ ಬೇಕಿತ್ತೇನೋ ಎನಿಸುವುದರಿಂದ ಚಿತ್ರ ಮಾಸ್ಟರ್ ಪೀಸ್ ಎನಿಸುವುದಿಲ್ಲ.
ದಿ ಮೂನ್'ಸ್ ಪಾಮ್:
 ಖಾಲಿದ್ ಯೂಸೆಫ್ ನಿರ್ದೇಶನ 2011ರಲ್ಲಿ ಬಿಡುಗಡೆಯಾದ ಈಜಿಪ್ಟ್ ಭಾಷೆಯ ಚಿತ್ರದ ಅವಧಿ ಎರಡು ಘಂಟೆಗಳು.ದಿ ಮೂನ್'ಸ್ ಪಾಮ್ ಚಿತ್ರದ ಕಥೆ ಇಷ್ಟೇ. ಒಬ್ಬಾಕೆಗೆ ಐದು ಜನ ಮಕ್ಕಳು. ಗಂಡನ ಕನಸು ಒಂದು ಸ್ವಂತ ಮನೆ ನಿರ್ಮಿಸುವುದಾಗಿರುತ್ತದೆ, ಆದರೆ ಅದು ಈಡೇರದೆ ಆಟ ಅಕಾಲ ಮರಣಕ್ಕೀಡಾದಾಗ ತಾಯಿ ಆ ಕನಸನ್ನು ಮಕ್ಕಳಿಗೆ ವರ್ಗಾಯಿಸುತ್ತಾಳೆ. ಮನೆ ಕಟ್ಟಲು ಹಣ ಸಂಪಾದಿಸಲು ಐವರೂ ನಗರಕ್ಕೆ ಹೊರಟುಬಿಡುತ್ತಾರೆ,.ಅಲ್ಲಿ ಐವರ ಬದುಕು ಕಾರಣಾ೦ತರದಿಂದಾಗಿ ಬೇರೆ ಬೇರೆ ಯಾಗುತ್ತದೆ. ಮುಂದೆ ಆಕೆಯ ಸಾಯುವ ಕೊನೆ ಕ್ಷಣದಲ್ಲಿ ಹಿರಿಯ ಮಗ ಜಿಕ್ರಿ ತನ್ನ ಉಳಿದ ನಾಲ್ವರು ತಮ್ಮಂದಿರನ್ನು ಹುಡುಕಿ ಜೊತೆಯಲ್ಲಿ ಕರೆದುಕೊಂಡು ಬರಲು ನಿರ್ಧರಿಸುತ್ತಾನೆ. ಅವರೆಲ್ಲರಿಗೂ ಅಣ್ಣನ ಮೇಲೆ ಅಸಮಾಧಾನವಿರುತ್ತಾದ್ದರಿಂದ ಯಾರೂ ಒಪ್ಪುವುದಿಲ್ಲ. ಕೊನೆಯಲ್ಲಿ ತಾಯಿಯ ಸಾವಿನೊಂದಿಗೆ ಐವರೂ ಒಂದಾಗುತ್ತಾರಲ್ಲದೆ ಅಮ್ಮನ ಕನಸಾದ ಮನೆ ಕಟ್ಟುವುದನ್ನು ನನಸಾಗಿಸುತ್ತಾರೆ.
ಚಿತ್ರವೂ ಮಾಮೂಲಿ ಮಸಾಲೆ ಚಿತ್ರದಂತಿದೆ. ಯಾವುದೇ ಕಲಾತ್ಮಕ ಅಂಶಗಳಾಗಲಿ, ಹೊಸತನವಾಗಲಿ ಚಿತ್ರದಲ್ಲಿಲ್ಲ. ಚಿತ್ರದ ಪಾತ್ರ ಪೋಷಣೆ ಅಷ್ಟಾಗಿ ಪರಿಣಾಮಕಾರಿಯೆನಿಸುವುದಿಲ್ಲ. ಐದು ನಾಯಕರ ಪಾತ್ರಗಳೂ ಅಷ್ಟೇ. ಯಾವುದು ನಮ್ಮನ್ನು ಅಷ್ಟಾಗಿ ಕಾಯುಡುವುದಿಲ್ಲವಾದರೂ ತಾಯಿಯ ಪಾತ್ರ ಕೆಲವು ಕಡೆ ಮೆಚ್ಚುಗೆಗೆ ಪಾತ್ರವಾಗುತ್ತದೆ.
ನಮ್ಮದೇ ತೊಂಬತರ ದಶಕದ ಹಿಂದಿ ಸಿನೆಮಾ ನೋಡಿದಂತೆ ಭಾಸವಾದರೆ ಅದಕ್ಕೆ ಖಾಲಿದ್ ಯೂಸಫ್ ಕಾರಣರಲ್ಲ. ಅದಕ್ಕೆ ನಾವೇ ಕಾರಣವಾಗುವುದೇಕೆಂದರೆ ಇಂತಹ ಚಿತ್ರಗಳನ್ನ ಈಗಾಗಲೇ ಸಾಕಷ್ಟು ನೋಡಿಬಿಟ್ಟಿದ್ದೇವೆ.
ಓಆಸ್:
ಅಭಿನವ್  ಶಿವ್ ತಿವಾರಿ ಎಂಬ ನವನಿರ್ದೆಶಕನ ಚಿತ್ರ ಓಆಸ್.ನೇಪಾಳದ ಚಿಕ್ಕ ಹಳ್ಳಿಯೊಂದರ ಬಾಳೆ ಕಿಕು. ಆಕೆಗೆ ತುಂಬಾ ಓದಬೇಕೆಂಬಾಸೆಯಿದ್ದರೂ ಆಕೆಯ ಮನೆಯ ಬಡತನ ಅದಕ್ಕೆ ಇಂಬು ನೀಡುವುದಿಲ್ಲ.ಆಕೆಯನ್ನು ಆಕೆಯ ಊರಿನವಳೇ ಆದ, ಸಂಬಂಧಿಯೊಬ್ಬಳು ಸೋಗಿನ ಮಾತಾಡಿ ಅಪ್ಪ ಅಮ್ಮನ ಮನವೊಲಿಸಿ ಸುಂದರ ಬದುಕನ್ನು ರೂಪಿಸುವ ಭರವಸೆ ನೀಡಿ ಅಲ್ಲಿಂದ ಕರೆದುಕೊಂಡು ಬಂದು ವೇಶ್ಯಾವಾಟಿಕೆಗೆ ತಳ್ಳುತ್ತಾಳೆ. ಅಲ್ಲಿಂದ ಶುರುವಾಗುತ್ತದೆ ಕಿಕುವಿನ ವೇಶ್ಯಾಗೃಹ ಯಾತ್ರೆ. ಅಲ್ಲಿಂದ ತಪ್ಪಿಸಿಕೊಳ್ಳಲು ಮತ್ತೊಂದು ಅದಕ್ಕಿಂತ ಹೆಚ್ಚಿನ ನರಕಸ್ವರೂಪಿ  ವೇಶ್ಯಾಗೃಹಕ್ಕೆ  ಬೀಳುತ್ತಾಳೆ. ನರಕಯಾತನೆ ಅನುಭವಿಸುತ್ತಾಳೆ. ಆದರೆ ಅಲ್ಲಿಂದ ತಪ್ಪಿಸಿಕೊಳ್ಳುವ ಕನಸನ್ನು ಮಾತ್ರ ಜೀವಂತವಾಗಿಟ್ಟುಕೊಂಡಿರುತ್ತಾಳೆ. ಕೊನೆಯಲ್ಲಿ ಸರ್ಕಾರೇತರ ಸಂಸ್ಥೆಯೊಂದರ ನೆರವಿನಿಂದ ಆಕೆ ಬಿಡುಗಡೆಯಾದರೂ ತಾನು ಅಲ್ಲೇ ಉಳಿದು ಆ ಸಂಸ್ಥೆಯಲ್ಲಿ ಕೆಲಸ ಮಾಡುವ ನಿರ್ಧಾರ ಕೈಗೊಳ್ಳುತ್ತಾಳೆ.
ಚಿತ್ರದ ಕಥೆ ಅದರ ಹಿಂದಿನ ಸತ್ಯ /ವಾಸ್ತವ ನಮಗೆಲ್ಲಾ ಗೊತ್ತಿರುವಂತಹದ್ದೆ. ವೇಶ್ಯಾವಾಟಿಕೆ, ಮಕ್ಕಳ ಕಳ್ಳ ಸಾಗಾಣಿಕೆಯ ಬಗ್ಗೆ ದೇಶದ ವಿವಿಧೆಡೆ ಎಲ್ಲಾ ರೀತಿಯಲ್ಲೂ ಚಿತ್ರಗಳು ಬಂದುಹೋಗಿವೆ. ಅದೇ ನಿಟ್ಟಿನಲ್ಲಿ ಇದು ಒಂದು ಚಿತ್ರ ಎನಿಸುತ್ತದೆಯೇ ಹೊರತು ಹೊಸದಾದ ಅನುಭಾವವನ್ನು ಕಟ್ಟಿಕೊಡುವುದಿಲ್ಲ. ಚಿತ್ರ ಮುಂದುವರೆದಂತೆ ಎಲ್ಲಾ ನಿರೀಕ್ಷಿತ ಎನಿಸುತ್ತದೆ. ಆದರೆ ಕೆಲವು ಕಡೆ ಚಿತ್ರ ಚಿತ್ರೀಕರಣವನ್ನು ಅಗತ್ಯಕ್ಕೆ ತಕ್ಕಂತೆ ಮೊನಚಾಗಿಸಿರುವುದರಿಂದ ಇದು ಭಾರತೀಯ ಚಿತ್ರವೇ ಎನ್ನುವ ಅನುಮಾನ ಉಂಟುಮಾಡುತ್ತದೆ. ಚಿತ್ರದ ಪ್ರಾರಂಭದಲ್ಲಿ ತೀವ್ರಗತಿಯಲ್ಲಿ ಮುಂದುವರೆಯುವ ಚಿತ್ರ ತದನಂತರ ಕೆಲವು ಸನ್ನಿವೇಶಗಳ ಪುನರಾವರ್ತನೆಯಿಂದಾಗಿ ನಿಧಾನವಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಬಹುತೇಕರಿಗೆ ಗೊತ್ತಿರುವ ಸತ್ಯವನ್ನು ಒಂದು ಸೀದಾಸಾದಾ ಕಥೆಯ ಮೂಲಕ ನಿರ್ದೇಶಕರು ನಮ್ಮ ಮುಂದಿಡುವ ಪ್ರಯತ್ನ ಮಾಡಿದ್ದಾರೆ .
ಕಿಕುವಿನ ಪಾತ್ರ ನಿರ್ವಹಿಸಿರುವ ದಿವ್ಯಾ ಚೆತ್ರಿ ನಿಜಕ್ಕೂ ಅಭಿನಂದನಾರ್ಹರು. ಜೊತೆಗೆ ವೇಶ್ಯಾವಾಟಿಕೆಯೊಂದರ ಮುಖ್ಯಸ್ಥೆಯ ಪಾತ್ರ ನಿರ್ವಹಿಸಿರುವ ಪ್ರಿಯಾಂಕ ಬೋಸ್ ಕೂಡ ಅತ್ಯುತ್ತಮ ಅಭಿನಯ ನೀಡಿದ್ದಾರೆ.



Monday, December 24, 2012

ಚಿತ್ರೋತ್ಸವದ ಚಿತ್ರಗಳು: ಪರ್ವಿಜ್ ಮತ್ತು ಹೋಮ್

ತನ್ನ ರೈನಿ ಸೀಸನ್ [2010] ಚಿತ್ರದಿಂದ ಗಮನಸೆಳೆದಿದ್ದ ನಿರ್ದೇಶಕ ಮಾಜಿದ್ ಬರ್ಜೆಗರ್ ನಿರ್ದೇಶನದ ಚಲನಚಿತ್ರ ಪರ್ವಿಜ್. ಚಿತ್ರದ ಪ್ರಮುಖ ಪಾತ್ರಧಾರಿ ಪರ್ವಿಜ್ ಗೀಗ ಐವತ್ತು ವರ್ಷ ವಯಸ್ಸು. ತನ್ನ ಜೀವಮಾನದಲ್ಲೇ ಏನೊಂದು ಕೆಲಸವನ್ನೂ ಮಾಡದೆ ಅಪ್ಪನ ಮನೆಯಲ್ಲಿ ಉಂಡಾಡಿ ಗುಂಡನಂತೆ ಕಾಲ ಕಳೆದವ. ಅವನ ಸುತ್ತಮುತ್ತಲ ಜನರಿಗೆ ಪರ್ವಿಜ್ ಎಂದರೆ ಏತಕ್ಕೂ ಬಾರದ ನಾಲಾಯಕ್ಕು, ನಿರುಪಯೋಗಿ ಎನ್ನುವ ಭಾವವಿದೆ. ಅದನ್ನು ಯಾವತ್ತೂ ಮುರಿಯುವ, ಅವರ ಅನಿಸಿಕೆಯನ್ನು ಸುಳ್ಳುಮಾಡುವ ಯಾವ  ಉಮ್ಮೇದು ಎಮ್ಮೆಕಿವಿಯ ಪರ್ವಿಜ್ ಗೆ ಇಲ್ಲ. 
ಆದರೆ ಬದುಕು ಅಂದುಕೊಂಡ ಹಾಗೆ ಇರುವುದಿಲ್ಲವಲ್ಲ. ಪರ್ವಿಜ್ ನ ತಂದೆ ಮತ್ತೆ ಮರುಮದುವೆಯಾಗಲು ಯೋಚಿಸಿ, ನಿಶ್ಚಯಿಸಿಕೊಂಡ ಮೇಲೆ ಮಗನನ್ನು ಮನೆಯಿಂದ ಹೊರಗಿರಿಸಲು ಯೋಚಿಸುತ್ತಾನೆ. ಅಷ್ಟೇ ಅಲ್ಲ ಅವನ ದೈನಂದಿನ ಖರ್ಚುವೆಚ್ಚವನ್ನು ತಾನೇ ವಹಿಸಿಕೊಂಡು ಅವನಿಗೊಂದು ಮನೆಯನ್ನೂ ಹುಡುಕಿ ಅದರ ಬಾಡಿಗೆಯನ್ನು ತನ್ನ ಜೇಬಿನಿಂದಲೇ ಕೊಡಲು ನಿರ್ಧರಿಸುತ್ತಾನೆ. ಪರ್ವಿಜ್ ಗೆ ಈ ವಿಷಯ ಇರುಸುಮುರುಸಾದರೂ ಅವನ ನಿರ್ಧಾರಕ್ಕಿಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲವಾದ್ದರಿಂದ ಮರುಮಾತಾಡದೆ ಅಪ್ಪ ನೋಡಿದ ಇನ್ನೊಂದು ಮನೆಗೆ ವಾಸ್ತವ್ಯ ಬದಲಿಸುತ್ತಾನೆ. ಹೊಸಮನೆಯಲ್ಲಿ ಪಕ್ಕದ ಮನೆಯ ಹುಡುಗ ಕೂಡ ಪರ್ವಿಜ್ ನ ಮಾತಿಗೆ ಬೆಲೆಕೊಡದೆ ತನ್ನಿಷ್ಟದಂತೆ ಪರ್ವಿಜ್ ಮನೆಯನ್ನ ಬಳಸಿಕೊಳ್ಳತೊಡಗುತ್ತಾನೆ.
ಹೀಗೆ ಎಲ್ಲ ಕಡೆಯಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗುವ ಪರ್ವಿಜ್ ತನ್ನ ಅಸ್ತಿತ್ವವನ್ನು, ಇರುವಿಕೆಯನ್ನು ತೋರಿಸುವ ಪ್ರಯತ್ನ ಪಡುತ್ತಾನೆ. ಅದು ಚಿತ್ರವನ್ನೂ ಏಕಾಏಕಿ ಆಸಕ್ತಿಕರವನ್ನಾಗಿ ಮಾಡುವುದಲ್ಲದೆ, ಚಿತ್ರದ ಮಗ್ಗಲಿಗೆ ಹೊಸ ಚೈತನ್ಯ ತುಂಬುತ್ತದೆ. ಮುಂದಿನ ಕಥೆ ಇಷ್ಟೆ. ಅಪ್ಪನಿಗೆ,  ತನ್ನನ್ನು ರೇಗಿಸುತ್ತಿದ್ದ ಲಾಂಡ್ರಿಯವನಿಗೆ, ತನ್ನಪ್ಪನ ಮಾತನ್ನು ಕೇಳಿಕೊಂಡು ಪರ್ವಿಜ್ ನನ್ನು ಮನೆಯಿಂದ ಖಾಲಿ ಮಾಡಿಸಲು ಬಂದ ಮನೆ ಮಾಲೀಕನಿಗೆ, ಸದಾ ಗೋಳು ಹೊಯ್ದುಕೊಳ್ಳುತ್ತಿದ್ದ ಪಕ್ಕದ ಮನೆಯ ಹುಡುಗನಿಗೆ ಎಲ್ಲರಿಗೂ ಪಾಠ ಕಲಿಸಲು ಪರ್ವಿಜ್ ನಿರ್ಧರಿಸುತ್ತಾನೆ. ಆವಾಗ ನಡೆಯುವ ಘಟನೆಗಳು ಅಥವಾ  ಪರ್ವಿಜ್ ಕೃತ್ಯಗಳು ಇಡೀ ಚಿತ್ರಕ್ಕೆ ಹೊಸ ಆಯಾಮವನ್ನು ಕೊಡುತ್ತದೆ.
ಚಿತ್ರದ ನಿರೂಪಣೆಯಲ್ಲಿ ಹೊಸತನವೇನಿಲ್ಲವಾದರೂ ಇರಾನಿ ಚಿತ್ರಗಳಂತೆ ವಾಸ್ತವಕ್ಕೆ ಹತ್ತಿರವಾದ ಕಥೆ ಚಿತ್ರಕಥೆ ಇದೆ. ಯಾವುದೇ ಅವಸರವಿಲ್ಲದೆ ಯಾರನ್ನೂ ನಾಯಕನನ್ನಾಗಿಯೂ ಖಳನಾಯಕನನ್ನಾಗಿಯೂ ಮಾಡದೆ ಪಾತ್ರಗಳು ಸಂದರ್ಭಕ್ಕನುಸಾರವಾಗಿ ವರ್ತಿಸುವಂತೆ ಕಥೆ ಹೆಣೆದಿರುವ/ನಿರೂಪಿಸಿರುವ ನಿರ್ದೇಶಕ ಆ ಕಾರಣದಿಂದಾಗಿಯೇ ನಮಗಿಷ್ಟವಾಗುತ್ತಾನೆ. ಪರ್ವಿಜ್ ನ ಪ್ರತಿ ವರ್ತನೆಯಲ್ಲೂ ವಾಸ್ತವದ ಅಂಶವಿದೆ.ಹಾಗಾಗಿಯೇ ಚಿತ್ರ ನೈಜ ಘಟನೆಯ ಸಾಕ್ಷ್ಯಚಿತ್ರದಂತೆ ಭಾಸವಾಗುತ್ತದೆಯೇ ಹೊರತು ಎಲ್ಲೂ ಸಿನಿಮೀಯ ಎನಿಸುವುದಿಲ್ಲ. ಅತನ ವರ್ತನೆಯಲ್ಲಿ ಹತಾಶೆಯಿದೆ, ಕ್ರೌರ್ಯವಿದೆ ಹಾಗೆ ನ್ಯಾಯವೂ ಇದೆ. ಹೀಗಾಗಿ ಪರ್ವಿಜ್ ಚಿತ್ರವನ್ನೂ ಒಂದು ವಿಭಾಗಕ್ಕೆ ಅಥವ ಪರ್ವಿಜ್ ಪಾತ್ರವನ್ನ ಒಂದು ಮಾನದಂಡಕ್ಕೆ ಒಳಪಡಿಸಿ ಕೈತೊಳೆದುಕೊಳ್ಳಲಾಗುವುದಿಲ್ಲ. ಚಿತ್ರದ ಶಕ್ತಿ ಇದೆ ಎನ್ನಬಹುದು.
ಮೊದಲ ಇಪ್ಪತ್ತು ನಿಮಿಷ ಮಂದಗತಿಯ ನಿರೂಪಣೆ ಆಕಳಿಕೆ ತರಿಸಿದರೂ ತದನಂತರ ಮಂದಗತಿ ಹಾಗೆ ಇರುತ್ತದೆ. ಆದರೆ ಚಿತ್ರದ ಕಥೆ ಆಸಕ್ತಿಕರವಾಗಿ ಶರವೇಗವನ್ನೂ, ತಿರುವುಗಳನ್ನೂ ಪಡೆದುಕೊಳ್ಳುತ್ತದೆ. ಒಮ್ಮೆ ನೋಡಲೇಬೇಕಾದ ಚಿತ್ರ ಪರ್ವಿಜ್.
ಹೋಮ್:ಒಂದು ತುಂಬು ಕುಟುಂಬ. ಅದಕ್ಕೊಬ್ಬ ಯಜಮಾನ. ಅವನಿಗೆ ಎಲ್ಲವೂ ಆತನ ಅಣತಿಯಂತೆ ನಡೆಯಬೇಕೆನ್ನುವ ಬಯಕೆ.ಅವನ ಮಕ್ಕಳೂ ಅಷ್ಟೇ ಒಬ್ಬನನ್ನು ಹೊರೆತುಪಡಿಸಿ, ಎಲ್ಲರೂ ಅವನು ಹಾಕಿದ ಲಕ್ಷ್ಮಣ ರೇಖೆ ದಾಟುವುದಿಲ್ಲ . ಹಿರಿಯ  ಮಗ ಒಂದು ಕೊಲೆ ಮಾಡಿ ಜೈಲು ಸೇರಿಕೊಂಡವನು ಹಾಗೆಯೇ ಕತ್ತಲ ರಾಜ್ಯಕ್ಕೆ ಅಧಿಪತಿಯಾಗುತ್ತಾನೆ. ಇಂತಹ ಮನೆಯಲ್ಲಿ ಹೊರಬರದ ಹಲವಾರು ಸೂಕ್ಷ್ಮವೆನಿಸಿದರೂ ಸಹಿಸಲಾಗದ ಹಲವಾರು ಸಮಸ್ಯೆಗಳಿರುತ್ತವೆ . ತಾತನ ಶತಮಾನೋತ್ಸವದ ಆಚರಣೆಗಾಗಿ ಇಡೀ ಕುಟುಂಬ ಸಂಭ್ರಮದಿಂದ ಸಿದ್ಧವಾಗುತ್ತದೆ. ಅಲ್ಲಿಗೆ ಹಿರಿಯ ಮಗ ಕೂಡ ಬರುತ್ತಾನೆ. ಆದರೆ  ಶತಮಾನದ ಸಂಭ್ರಮಾಚರಣೆ ಬದಲಿಗೆ ಅಲ್ಲಿ ಮಾರಣಹೋಮ ನಡೆಯುತ್ತದೆ. ಹಿರಿಯ ಮಗನ ಪಾಪಕೃತ್ಯಗಳು ಅವನ ಜೊತೆಗೆ ಮನೆಯ ಸದಸ್ಯರನ್ನೂ ಆಪೋಶನ ತೆಗೆದುಕೊಳ್ಳುತ್ತವೆ .
2011ರಲ್ಲಿ ಬಿಡುಗಡೆಯಾದ ರಶಿಯನ್ ಭಾಷೆಯ ಚಲನಚಿತ್ರ ಹೋಮ್.ಎರಡು ಘಂಟೆ ಏಳು ನಿಮಿಷಗಳಷ್ಟು ಅವಧಿಯ ಈ ಚಿತ್ರದ ನಿರ್ದೇಶಕ ಒಲೆಗ್ ಪೋಗೊದೀನ್. ಚಿತ್ರದಲ್ಲಿ ಮುಖ್ಯವಾಗಿ ಹರವಾಗಿರುವುದು ಕುಟುಂಬದೊಳಗಿನ ಸಂಬಂಧದಲ್ಲಿನ ಸೂಕ್ಷ್ಮತೆ ಮತ್ತು ದ್ವೇಷ. ಇವುಗಳನ್ನು ಬಿಚ್ಚಿಡುತ್ತಾ ಒಂದೊಂದೆ ಪಾತ್ರಗಳನ್ನೂ ಪರಿಚಯಿಸುತ್ತಾ ಹೋಗುವ ನಿರ್ದೇಶಕ ಕಡಿಮೆ ಸಂಖ್ಯೆಯ ದೃಶ್ಯಗಳಲ್ಲಿ ಚಿತ್ರದ ಹಂದರ, ಮತ್ತು ಅಲ್ಲಿನ ಜನಜೀವನವನ್ನು ಬಿಚ್ಚಿಟ್ಟು ಬಿಡುತ್ತಾನೆ. ಒಮ್ಮೆಲೆ ಮನೆಗೆ ಹಿರಿಯ ಮಗ ಹಿಂದಿರುಗಿದ ನಂತರ ಒಂದಷ್ಟು ಹಳೆಯ ರಹಸ್ಯಗಳ ಹಿನ್ನೆಲೆ ಬಯಲಾಗುವುದರೊಂದಿಗೆ ಚಿತ್ರ ಸಾಹಸಮಯ ಮತ್ತು ಕುತೂಹಲಭರಿತ ರೋಮಾಂಚಕ ಮಗ್ಗಲಿಗೆ ಹೊರಳುತ್ತದೆ. ಅಮೇಲಿನದೆಲ್ಲಾ ಹುಡುಕಾಟ, ಹೊಡೆದಾಟ, ಕೊಲೆ ಇಷ್ಟೇ. ಹಲವಾರು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿರುವ ಈ ಚಿತ್ರ ತೀರಾ ಮಹತ್ವದ ಚಿತ್ರವಾಗಿಲ್ಲದಿದ್ದರೂ ಒಮ್ಮೆ ನೋಡಲಡ್ಡಿಯಿಲ್ಲ.

ಓದಿ ಮೆಚ್ಚಿದ್ದು: 

 ಅಪ್ಪ ಯಾವತ್ತಿಗೂ ನನ್ನ ಹೀರೋ . ಈವತ್ತಿನ 'ನಾನು' ಗೆ ಕಾರಣ ನನ್ನಪ್ಪ. ನನಗೆ ಯಾವತ್ತೂ ನನಸು  ಮಾಡಿಕೊಳ್ಳಲಾಗದ ಕನಸನ್ನು ಹಾಗೆ ಕನಸಾಗಿಸಿ ಹೋದ ಅಪ್ಪನ ನೆನಪು  ದಿನವಿಲ್ಲ ನನಗೆ. ನಿನ್ನೆ ಜೀವನ್ಮುಖಿ ಬ್ಲಾಗ್ ನಲ್ಲಿದ್ದ  ಛೆ ಅಪ್ಪನಿಗೂ ವಯಸ್ಸಾಗಿ ಬಿಡ್ತೆ ಲೇಖನ ನನ್ನ ಕಣ್ಣನ್ನು ಆರ್ದ್ರವಾಗಿಸಿತು ಹಾಗೆ ಅದರಲ್ಲಿನ ಇನ್ನು ಕೆಲವು ಲೇಖನಗಳು ತೀರ ಆತ್ಮೀಯ ಎನಿಸಿದವು. ಬಿಡುವಾದಾಗ ನೀವು ಒಮ್ಮೆ ಲಗ್ಗೆಯಿಡಿ.

Thursday, December 20, 2012

ಚಿತ್ರೋತ್ಸವದ ಸಂಭ್ರಮ:ನೂರಾರು ಚಿತ್ರಗಳು

ಳೆದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ನನಗೆ ಭಾಗವಹಿಸಲು ಸಾಧ್ಯವಾಗಿರಲಿಲ್ಲ . ಹಾಗಾಗಿ ಆಲ್ಲಿ ಪ್ರದರ್ಶನಗೊಂಡಿದ್ದ  ಎಲ್ಲಾ ಸಿನೆಮಾಗಳನ್ನು ಪಟ್ಟಿ ಮಾಡಿಕೊಂಡು ಒಂದು ತಿಂಗಳಲ್ಲಿ ನೋಡಿಬಿಟ್ಟಿದ್ದೆ. ಆದರೆ ಈ ಸಾರಿಯ ಚಿತ್ರೋತ್ಸವದ ಪಟ್ಟಿಯಲ್ಲಿರುವ ಬಹುತೇಕ ಚಿತ್ರಗಳನ್ನು ನಾನು ಈಗಾಗಲೇ ನೋಡಿಬಿಟ್ಟಿದ್ದರೂ ಅದನ್ನು ತೆರೆಯ ಮೇಲೆ ಚಿತ್ರಮಂದಿರದಲ್ಲಿ ನೋಡುವ ಮಜವೇ ಬೇರೆ. ಈ ಸಾರಿ ಸುಮಾರು ಏಳು ದೇಶಗಳ ನೂರೈವತ್ತಕ್ಕೂ ಹೆಚ್ಚು ಸಿನೆಮಾಗಳಿವೆ. ಅವುಗಳಲ್ಲಿ ಸುಮಾರು ಗಮನಾರ್ಹವೆನಿಸಿರುವ ಚಿತ್ರಗಳಿವೆ .ನನಗೆ ಗೊತ್ತಿರುವಂತೆ[ನೋಡಿರುವ] ಚಿತ್ರಗಳಾದ  ಹೆಡ್ ಶಾಟ್[2012],ಕಿಮ್ ಕಿ  ಡುಕ್  ನಿರ್ದೇಶನದ ಪಿಯೇಟ [2012], ಜರ್ಮನ್ ಭಾಷೆಯ ಬಾರ್ಬರಾ[2012], ರಶಿಯಾ ದ ಹೋಂ [2012], ಕೆನಡಾ ದೇಶದ ಕ್ಯಾಮಿಒನ್ [2012], ಇರಾನ್ ನ ಆರೆಂಜ್ ಸೂಟ್ [2012], ಸೈಲೆನ್ಸ್ ಮುಂತಾದ ನೋಡಲೇ ಬೇಕಾದ ಚಿತ್ರಗಳಿವೆ. ಅವುಗಳಲ್ಲಿ ಸೋದರ-ಕಾಮಿ ಶೇಮೆಲೆಸ್ಸ್[2012/ಪೋಲೆಂಡ್]ತರಹದ ಸ್ವಲ್ಪ ಮುಜುಗರ ತರಿಸುವ ಚಿತ್ರವೂ ಇದೆ. ಒಟ್ಟಿನಲ್ಲಿ ದಿನಕ್ಕೈದು ಸಿನೆಮಾದಂತೆ ನೋಡಲು ತೊಡಗಿದರೆ ಅದೆಷ್ಟು ನಮ್ಮನ್ನು ನೋಡಿಸಿಕೊಳ್ಳುತ್ತವೋ ಗೊತ್ತಿಲ್ಲ . ನೋಡಿರುವ ಚಿತ್ರಗಳಿಂದಾಗಿ ಸ್ವಲ್ಪ ವಿರಾಮವೂ ದೊರೆಯುವುದರಿಂದ ಏಳು ದಿವಸಗಳಲ್ಲಿ ಸಾಧ್ಯವಾದಷ್ಟು ಚಿತ್ರಗಳನ್ನು ನೋಡಿಬಿಡಬೇಕೆನ್ನುವ ಆಸೆಯಂತೂ ಇದೆ. ಇವೆಲ್ಲಾ ಇತ್ತೀಚಿನ ಅಂದರೆ 2010ರ ಮೇಲಿನ ಚಿತ್ರಗಳು. ಇವುಗಳ ಜೊತೆಗೆ ರಾಬರ್ಟ್ ಬೆನಿನಿ ಯಾ ಮಾಸ್ಟರ್ ಪೀಸ್ 'ಲೈಫ್ ಇಸ್ ಬ್ಯೂಟಿ ಫುಲ್ [1997],  ಮೈಕೆಲ್ಯಾಂಜೆಲೊ ಅನ್ತೊನಿನಿಯ ಐಡೆಂಟಿಫಿಕೇಶನ್ ಆಫ್ ಎ ವುಮನ್[1982], ರೆಡ್ ಡೆಸರ್ಟ್[1964], ಹಲ ಅಷ್ಬಿ ನಿರ್ದೇಶನದ ಕಮಿಂಗ್ ಹೋಂ[1974], ಜೆಅನ್ ಪಾಲ್ ರಪ್ಪೆನೆಔ ನಿರ್ದೇಶನದ ದಿ ಹಾರ್ಸ್ ಮ್ಯಾನ್ ಆನ್ ದಿ ರೂಫ್[1995],  ಓಲ್ಡ್ ಬಾಯ್  [೨೦೦೩]ಮುಂತಾದ ಚಿತ್ರಗಳೂ ಇರುವುದರಿಂದ ಹೊಸ-ಹಳೆಯ ಸಂಗಮವೂ ದೊರೆಯುತ್ತದೆ. ಅದರ ಜೊತೆಗೆ ನಿರ್ದೇಶಕರಾದ ಫಾತಿಹ್ ಅಕಿನ್ , ಅಕಿರಾ ಕುರುಸೋವ ರ ಚಿತ್ರಗಳು, ಭಾರತದ ಜಾನ್ ಬರುವ, ರಾಮು ಕಾರಿಯತ್, ಗಿರೀಶ್ ಕಾಸರವಳ್ಳಿ, ಸಿದ್ದಲಿಂಗಯ್ಯನವ ಚಿತ್ರಗಳೂ ಇವೆ.
ಎಲ್ಲ ಚಿತ್ರಗಳನ್ನು ನೋಡಿದ ಮೇಲೆ ಮಾತಾಡಲು, ಚರ್ಚೆ ಮಾಡಲು ಸಾಕಷ್ಟು ವಿಷಯವಂತೂ ಇರುತ್ತದೆ . ಜೊತೆಗೆ ಒಂದು ಹೊಸ ಪ್ರಪಂಚವೂ ತೆರೆದುಕೊಂಡಿರುತ್ತದೆ .

ಓದಿ ಮೆಚ್ಚಿದ್ದು: 

ನಾನು ಕವನ ಬರೆದಿದ್ದು ತೀರಾ ಕಡಿಮೆ. ಆದರೆ ಓದಿ ಖುಷಿ ಪಡುತ್ತೇನೆ. ಗೆಳೆಯ ಚಂದ್ರ ಆಗಾಗ ಒಳ್ಳೆಯ ಕವನಗಳನ್ನು ಬರೆಯುತ್ತಿದ್ದ.ಅದು ಬಿಟ್ಟರೆ ಪತ್ರಿಕೆಯಲ್ಲಿ ಬರುವ ಕವನಗಳನ್ನು ಓದಿಯೇ  ಓದುತ್ತೇನೆ .ತೆರೆದ ಮನ ಬ್ಲಾಗಿನಲ್ಲಿರುವ ಒಂದೆರೆಡು ಕವನಗಳು ನನಗಂತೂ ತುಂಬಾ ಹಿಡಿಸಿತು. ಹಾಗೆ ಬೀಟಾ ಮಹಿಳೆ ಎನ್ನುವ ಲೇಖನವೂ.ಅಲ್ಲಿನ ಹಿತ ವಚನಗಳು ಚೆನ್ನಾಗಿದೆ  ಅಷ್ಟೇ ಅಲ್ಲ, ಅರ್ಥ ಗರ್ಭಿತವಾಗಿಯೂ ಇದೆ. ಒಮ್ಮೆ ನೀವು ಓದಿ.


Tuesday, December 18, 2012

ಪೂರ್ವ ತಯಾರಿ ಮತ್ತು ಸ್ಟೋರಿ ಬೋರ್ಡ್...

ನಾನಾಗ ಹತ್ತನೆಯ ತರಗತಿಯಲ್ಲಿದ್ದೆ. ಎಂಟನೆಯ ತರಗತಿಯಲ್ಲಿ ಮೊದಲ ಕಥೆ ಬರೆದಿದ್ದೆನಾದರೂ ಸಿನೆಮಾದ ಗೀಳು ನನಗೆ ಹತ್ತನೇ ತರಗತಿಯಲ್ಲಿ ಹತ್ತಿದ್ದು. ಅದ್ಯಾಕೆ ಹತ್ತಿತು ನನಗಿನ್ನೂ ಗೊತ್ತಿಲ್ಲ. ನಮ್ಮೂರಿದ್ದದ್ದು ಬೆಂಗಳೂರಿನಿಂದ ನೂರಾನಲವತ್ತು ಕಿಲೋಮೀಟರ್ ದೂರದಲ್ಲಿರುವ ಮೈಸೂರಿನಿಂದ 25 ಕಿಲೋಮೀಟರು ದೂರದಲ್ಲಿರುವ ನಂಜನಗೂಡಿನಿಂದ ಒಂಬತ್ತು ಕಿಲೋಮೀಟರು ದೂರದಲ್ಲಿ. ಅಲ್ಲಿ ಯಾವುದೇ ರೀತಿಯ ಸಿನಿಮಾ ಸಂಬಂಧಿ ಚಟುವಟಿಕೆಗಳು ನಡೆಯಲು ಸಾಧ್ಯವೇ ಇರಲಿಲ್ಲ. ಆಗೊಂದು ಈಗೊಂದು ಚಿತ್ರೀಕರಣ ತಂಡ ಬಂದು ಚಿತ್ರೀಕರಣ ಮಾಡುತ್ತಿದ್ದರೂ ಅದೆನೆಗೆ ತಲುಪುತ್ತಿರಲಿಲ್ಲ. ನನಗೆ ಸಿನಿಮಾ ಶೂಟಿಂಗ್ ನೋಡುವ ಆಸೆಯಿದ್ದರೂ ಸಾಧ್ಯವಾಗಿರಲಿಲ್ಲ. ಪೀಯುಸಿಗೆ ಬಂದ ಮೇಲೆ ನಂಜನಗೂಡಿಗೆ ಕಾಲೇಜು ಸೇರಿಕೊಂಡವನು ಮೊದಲಿಗೆ ಸಾರ್ವಜನಿಕ ಗ್ರಂಥಾಲಯಕ್ಕೆ ಲಗ್ಗೆಯಿಟ್ಟಿದ್ದೆ. ಸಿನಿಮಾ ಸಂಬಂಧಿ ಪುಸ್ತಕಗಳನ್ನ ತಡಕಾಡಿದ್ದೆ. ನಂಗೆ ಬೇಕಾದದ್ದು ಸಿನೆಮಾದ ಬಗೆಗಿನ ತಾಂತ್ರಿಕ ಜ್ಞಾನ ಮತ್ತು ತಯಾರಿಕೆಯ ಹಂತಗಳು. ಆದರೆ ಅದಕ್ಕೆ ಸಂಬಂಧ ಪಟ್ಟ ಪುಸ್ತಕಗಳು ಇರಲಿಲ್ಲ. ಸಿನೆಮಾದ ಕಥೆಯನ್ನ ನನ್ನಲ್ಲೇ ಹುಟ್ಟುಹಾಕುತ್ತಿದ್ದೆನಾದರೂ ಸಿನೆಮಾಕ್ಕೆ  ಅದನ್ನು ಚಿತ್ರಕಥೆಯಾಗಿ ಬರಹ ರೂಪದಲ್ಲಿ ಹೇಗೆ ಬರೆಯಬೇಕೆಂಬ ರೀತಿನೀತಿಯ ಮಾದರಿ ನನಗೆ ಗೊತ್ತಿರಲಿಲ್ಲ. ಇಡೀ ಗ್ರಂಥಾಲಯ ಹುಡುಕಿದ ಮೇಲೆ ಒಂದೇ ಒಂದು ಪುಸ್ತಕ ಸಿಕ್ಕಿದ್ದು ನನಗೆ ಭಗವದ್ಗೀತೆ ಸಿಕ್ಕಿದ ಹಾಗಾಗಿತ್ತು. ಅದರಲ್ಲಿ ಒಂದಷ್ಟು ಅಮೂಲ್ಯ ವಿಷಯಗಳೂ ಇದ್ದವು.
ನಮ್ಮ ಚಿತ್ರ ಮಾರ್ಚ್ 23 ಪೂರ್ವ ಚಿತ್ರೀಕರಣದಲ್ಲಿ ಬರವಣಿಗೆಗೆ ನಾವು ನಮ್ಮ ತಂಡ ತೆಗೆದುಕೊಂಡ ಒಟ್ಟು ಅವಧಿ ಸರಿ ಸುಮಾರು ಎಂಟು ತಿಂಗಳುಗಳು. ದೊಡ್ಡ ಸ್ಟಾರ್ ಇಲ್ಲದ ದೊಡ್ಡ ಬಜೆಟ್ ಇಲ್ಲದ್ದರಿಂದ ನಾನಂದುಕೊಂಡದ್ದನ್ನು ಸಾಧಿಸಲು ಪೂರ್ವ ತಯಾರಿ ಅತ್ಯಗತ್ಯವಾಗಿತ್ತು. ಹಾಗಾಗಿ ಸಂಭಾಷಣೆಯ ನಂತರ ದೃಶಿಕೆಯನ್ನು ವಿಂಗಡಿಸಿ, ಅದಕ್ಕೆ ಸ್ಟೋರಿ ಬೋರ್ಡ್ ಮಾಡತೊಡಗಿದೆ. ನನ್ನ ಚಿತ್ರಕಲೇ ಈ ವಿಷಯದಲ್ಲಿ ನೆರವಿಗೆ ಬಂತು. ಇಡೀ ಸಿನೆಮಾಕ್ಕೆ ಸ್ಟೋರಿ ಬೋರ್ಡ್ ಮಾಡುವಷ್ಟರಲ್ಲಿ ತಿಂಗಳುಗಳೇ ಕಳೆದುಹೋಗಿದ್ದವು. ನಿರ್ಮಾಪಕರು ನನ್ನ ಪೂರ್ವತಯಾರಿ ನೋಡಿ ಖುಷಿ ಪಟ್ಟಿದ್ದರು.
ನಮ್ಮ ಚಿತ್ರಕ್ಕೆ ನಾನು ಬಿಡಿಸಿದ ಸ್ಟೋರಿ ಬೋರ್ಡ್.
 ಆ ಅನುಭವದ ನಂತರವೇ ನನಗನಿಸಿದ್ದು ಒಂದು ಚಿತ್ರಕ್ಕೆ ಪೂರ್ವ ತಯಾರಿ ಎಷ್ಟು ಮುಖ್ಯ ಎನ್ನುವುದು. ನಾವು ಹಾಲಿವುಡ್ ಚಿತ್ರಗಳನ್ನ ಗಮನಿಸಿದಾಗ ಇದು ನಮಗರಿವಾಗುತ್ತದೆ. ಇಡೀ ಚಿತ್ರದ ಗತಿ, ಮೂಡನ್ನು ಸ್ವಲ್ಪವೂ ತುಳಿಯದೆ ಹೊತ್ತೊಯ್ಯುವ ಅವರ ಆ ಪ್ರಾವಿಣ್ಯತೆಗೆ ಆ ಪೂರ್ವ ತಯಾರಿಯೇ ಕಾರಣ. ಮೊನ್ನೆ ದಿ ಆವೆಂಜರ್ಸ್ ನೋಡಿದಾಗ ಅದರ ಪ್ರತಿಯೊಂದು, ದೃಶ್ಯ, ಅದಕ್ಕೆ ತಕ್ಕ ಗ್ರಾಫಿಕ್ಸ್, ಬೆಳಕು ಎಲ್ಲವೂ ಪೂರ್ವತಯಾರಿಯಿಂದ ಮಾತ್ರ ಸಾಧ್ಯ ಎನಿಸಿತು. ತೀರ ಮಹತ್ವದ ಚಿತ್ರವಲ್ಲವಾದರೂ ಒಮ್ಮೆ ನೋಡಿ ಖುಶಿಪಡಬಹುದಾದ ಚಿತ್ರ. ಸಾಹಸ, ಗ್ರಾಪಿಕ್ಸ್ ನಾಯಕರುಗಳು ಚಿತ್ರವನ್ನ ಬೋರಾಗದಂತೆ ಮಾಡುತ್ತವೆ.

ಓದಿ ಮೆಚ್ಚಿದ್ದು: 
ನಾನು ಕಾಲೇಜು ಮುಗಿಸಿ ಮನೆ ಸೇರುತ್ತಿದ್ದದ್ದು ರಾತ್ರಿ ಹತ್ತು ಘಂಟೆಗೆ. ಮನೆಯವರೆಲ್ಲಾ ಮಲಗಿಬಿಡುತ್ತಿದ್ದರಾದರೂ ನನ್ನ ತಂಗಿ ನನಗೆ ಊಟ ಬಡಿಸಲು ಎದ್ದಿರುತ್ತಿದ್ದಳು. ಊಟ ಮಾಡುವಾಗ ಅವಳಿಗೆ ಹೊಸದಾಗಿ ಬಿಡುಗಡೆಯಾದ ಸಿನೆಮಾದ ಕಥೆಯನ್ನೂ , ಓದಿದ್ದನ್ನೋ ರಸವತ್ತಾಗಿ ಹೇಳುತ್ತಿದ್ದೆ. ಕೆಲವೊಮ್ಮೆ ಕುಚೇಷ್ಟೆಗೆ ಸಾಂಸಾರಿಕ ಸಿನೆಮಾದ ಕಥೆಯನ್ನ ಕುತೂಹಲಕ್ಕೆ ಕೇಳಿದರೆ ನಾನು ಸಿನೆಮಾ ನೋಡಿರದಿದ್ದರೂ ಸುಮ್ಮನೆ ಏನೇನೋ ಕಲ್ಪಿಸಿ ಅವಳಿಗೆ ಹೇಳುತ್ತಿದ್ದೆ. ಅವಳು ' ಆ ಸಿನೆಮಾ ಹಾಗಿರುವಾ ಹಾಗೆ ಕಾಣುವುದಿಲ್ಲವಲ್ಲ...ಒಳ್ಳೆ ಕಥೆಯಿದದ್ದ ಹಾಗಿದೆ.  ನೀನು ನೋಡಿದ್ರೆ ರಕ್ತ ಕೊಲೆ ಅಂತ ಏನೇನೋ ಹೇಳ್ತಿದ್ದೀಯಾ..' ಎಂದು ಅನುಮಾನ ವ್ಯಕ್ತ ಪಡಿಸುತ್ತಿದ್ದಳು. ಆಮೇಲೆ ಸಿನೆಮಾ ನೋಡಿದ ಮೇಲೆ ಬೈದರೆ ಆವಾಗ ಹಾಗೆ ಇತ್ತು. ಈಗ ಬದಲಾಗಿದೆ ಎಂದು ನಗುತ್ತಿದ್ದೆ.ಆವಾಗಿನಿಂದಲೂ ನನಗೆ ನಾನು ನೋಡಿ ಖುಶಿಪಟ್ಟೆದ್ದನ್ನು ಎಲ್ಲರಿಗೂ ಹೇಳಿ ತಲೆ ತಿನ್ನುವ ಚಟ ಬಂದುಬಿಟ್ಟಿದೆ. ನನ್ನ ಗೆಳೆಯರ ತಂಡವೂ ಹಾಗೆ ಇದೆ. ಏನನ್ನಾದರೂ ನೋಡಿದಾಕ್ಷಣ, ಓದಿದಾಕ್ಷಣ ಫೋನ್ ಮಾಡಿ ಮಾತಾಡಲೇ ಬೇಕು. ನನ್ನ ಹಡಗು ನನ್ನದು ನನ್ನ ತೀರ ನನ್ನದು ಬ್ಲಾಗಿನಲ್ಲಿನ  ಸ್ಫೂರ್ತಿ ಕವನ ತುಂಬಾ ಹಿಡಿಸಿತು. 
ಚಿಗುರೊಡೆಯಿತು ಇನ್ನೊಮ್ಮೆ ನನ್ನೊಳಗಿದ್ದ,                      
ಮಗುವಿನ ಮನಸು                                                      
ನೆನಪಾಯಿತು  ಅಪ್ಪ -ಅಮ್ಮ ನನಗಾಗಿ,
                            
ಕಂಡ ಕನಸು 
ಸಾಲುಗಳು ಇಷ್ಟವಾಯಿತು.   ತೀರಾ ಪ್ರಾ ಸದ ಹಂಗಿಲ್ಲದ ಕವನ ನಿಮಗೂ ಇಷ್ಟವಾಗಬಹುದು.            

Monday, December 17, 2012

ಹಂದಿ, ಗಂಡ, ಮಕ್ಕಳು -5

ವೇಸ್ ಡಿ.ನೋಸೆಸ್ ಎನ್ನುವ ಬೆಲ್ಜಿಯಂ ಭಾಷೆಯ ಚಲನಚಿತ್ರವೊಂದಿದೆ. ಥಿಯೆರಿ ಜೆನೊ ಎನ್ನುವವ ಅದರ ನಿರ್ದೇಶಕ. ಚಿತ್ರದ ಕಥೆ ಇಂತಿದೆ ಕೇಳಿ. ಆತನೊಬ್ಬ ರೈತ. ಪ್ರಾಣಿಗಳೆಂದರೆ ಅದೊಂತರ ಪ್ರೀತಿಯೋ, ದ್ವೇಷವೋ ಗೊತ್ತಾಗದಂತ ಪರಿಸ್ಥಿತಿ ನಮಗೆ ಅಥವಾ ನಿರ್ದೇಶಕನಿಗೆ ಅಥವಾ ಸ್ವತಃ ನಾಯಕನಿಗೂ. ಅವನು ಎಲ್ಲರಿಗಿಂತ ಭಿನ್ನ ಎನ್ನುವುದಕ್ಕಿಂತ ಅಪಸಾಮಾನ್ಯ , ತಿಕ್ಕಲ ಎನ್ನಬಹುದು. ಕೋಳಿ ಪ್ರೀತಿಸುತ್ತಾನಾದರೂ ತಲೆ ಕತ್ತರಿಸುತ್ತಾನೆ, ಪಾರಿವಾಳದ ತಲೆಗೆ ಗೊಂಬೆ ಕಟ್ಟುತ್ತಾನೆ. ಇವೆಲ್ಲಕ್ಕಿಂತ ಅತಿರೇಕ ಮುಂದೆ ಇದೆ. ಆತನು ಒಂದು ಹೆಣ್ಣು ಹಂದಿಯನ್ನು ಪ್ರೀತಿಸುತ್ತಾನೆ. ಹೌದು. ಅದನ್ನೇ ನಮ್ಮ ಸಂಸ್ಕೃತಿಯ ಪ್ರಕಾರ ಹೇಳುವುದಾದರೆ ಮದುವೆಯಾಗುತ್ತಾನೆ. ಮುಂದೆ ಅದಕ್ಕೆ ಮಕ್ಕಳಾದಾಗ, ಅಥವಾ ಇವನಿಗೆ ಹಂದಿ ಮರಿಗಳಾದಾಗ ಅವಕ್ಕೆ ತಾನೆ ಹಾಲುಣಿಸಲು ಪ್ರಯತ್ನಿಸುತ್ತಾನೆ. ಆದರೆ ಅವು ತಟ್ಟೆಯಲ್ಲಿ ಹಾಲು ಕುಡಿಯುತ್ತವೆ.ಆದರೆ ಹಂದಿಗಳಿಗೆ ತಾಯಿಯ ಸಹವಾಸ ಬೇಕೇ ಬೇಕಲ್ಲವೇ..? ಅವುಗಳು ತಾಯಿ ಹಂದಿಯ ಬಳಿ ಹೋಗಲು ಹಾತೊರೆಯುತ್ತವೆ. ಇದರಿಂದ ಕೋಪಗೊಳ್ಳುವ ತಂದೆ ಅವುಗಳನ್ನೂ ಸಾಯಿಸುತ್ತಾನೆ. ಇದರಿಂದ ತಾಯಿ ಹಂದಿ ಖಿನ್ನತೆಗೊಳಗಾಗುತ್ತದೆ. ರೊಚ್ಚಿಗೆದ್ದು ಹುಚ್ಚುಚ್ಚಾಗಿ ಓಡತೊಡಗುತ್ತದೆ. ಹಾಗೆ ಓಡಿ ಗುಂಡಿಯೊಂದಕ್ಕೆ ಬೀಳುತ್ತದೆ.ಆದರೆ ಈತ ಬಿಡಬೇಕಲ್ಲಾ ..ಹುಡುಕೆ ಹುಡುಕುತ್ತಾನೆ. ಆ ದೇಹವನ್ನೂ ಹೊರತೆಗೆಯುತಾನೆ. ಅಳುತ್ತಾನೆ. ತಾನು ಸಾಯಲು ಪ್ರಯತ್ನಿಸುತ್ತಾನೆ. ಆಮೇಲೆ ಹುಚ್ಚನಂತಾಡಿ ಮನೆಯ ವಸ್ತುಗಳನ್ನೆಲ್ಲಾ ಒಡೆದು ಹಾಕುತ್ತಾನೆ. ಕೊನೆಯಲ್ಲಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಈ ಚಿತ್ರದ ಪೂರ್ಣ ಕಥೆ ಹೇಳಿದುದರ ಹಿಂದೆ ಒಂದು ಉದ್ದೇಶವಿದೆ.ಜಗತ್ತಿನಲ್ಲಿ ಎನೆಲ್ಲಾ ಸಿನೆಮಾಗಳನ್ನೂ ಮಾಡುತ್ತಾರೆ ಎನ್ನುವುದನ್ನು ಪರಿಚಯಿಸುವುದಾದರೂ ಕೆಲವೊಂದು ಸಿನೆಮಾಗಳನ್ನೂ ನೋಡಿ ಎಂದು ಶಿಫಾರಸ್ಸು ಮಾಡಲು ಧೈರ್ಯ ಬರುವುದಿಲ್ಲ. ಆದರೆ ಅದೇಗೋ ಏನೋ  ನಾನಂತೂ ನೋಡಿಬಿಟ್ಟಿರುತ್ತೆನಾದ್ದರಿಂದ ನೋಡಿದ ವಿಶೇಷವನ್ನು , ವಿಚಿತ್ರವನ್ನು ಹೇಳಿಕೊಳ್ಳಬೇಕೆಂಬ ತುಡಿತವಂತೂ ಇರುತ್ತದೆ.ಹಾಗಾಗಿ ಚಿತ್ರದ ಬಗ್ಗೆ ಹೇಳಿಕೊಳ್ಳುವ ಎನಿಸಿದರೂ ಕೆಲವೊಮ್ಮೆ ಕೆಲವು ಸಿನೆಮಾಗಳು ಆ ಧೈರ್ಯ ಕೊಡುವುದಿಲ್ಲ .
ಈ ಸಿನೆಮಾ ಕೂಡ ಅದೇ ಪಟ್ಟಿಗೆ ಸೇರಿದ್ದು. ಸಿನೆಮಾ ನೋಡಿದ ಮೇಲೆ ಇದನ್ನು ಯಾಕೆ ನೋಡಬೇಕು? ಎನ್ನುವ ಪ್ರಶ್ನೆಯಂತೂ ಕಾಡದೆ ಇರದು. ಸುಮಾರು ಒಂದು ಘಂಟೆ ಇಪ್ಪತ್ತು ನಿಮಿಷಗಳಷ್ಟು ಉದ್ದವಿರುವ ಈ ಚಿತ್ರವನ್ನ ನೋಡಬೇಕೆನ್ನಿಸಿದರೆ ಒಮ್ಮೆ ನೋಡಬಹುದು.
1975 ರಲ್ಲಿ ತಯಾರಾದ ಈ ಚಿತ್ರ ಸಾರ್ವಜನಿಕ ಪ್ರದರ್ಶನಕ್ಕೆ ಅನರ್ಹವೆಂದು ನಿಷೇಧಗೊಳಿಸಿಲಾಯಿತಾದರೂ ಅದರ ಡಿವಿಡಿ ಆವೃತ್ತಿಗಳು ಲಭ್ಯವಿದೆ.

ಓದಿ ಮೆಚ್ಚಿದ್ದು:

ನಾನು ಯಾವುದೇ ಕಥೆ ಬರೆದರೂ, ಅಥವಾ ಸಿನೆಮಾದ ಕಥೆಯ ಬಗ್ಗೆ ಆಲೋಚಿಸಿದರೂ ಅದನ್ನು ಬರೆಯುವ ಮೊದಲು ಅದರ ಪೋಸ್ಟರನ್ನು ವಿನ್ಯಾಸ ಮಾಡುತ್ತಿದ್ದೆ. ಅದೊಂತರ ಮಜಾ. ನಾನು ಎಷ್ಟೋ ಸಿನೆಮಾದ ಕಥೆಗಳು ಎಂದುಕೊಂಡಿರುವ ಕಥೆಗಳು ಬರಹರೂಪದಲ್ಲಿಲ್ಲ . ಆದರೆ ಅವುಗಳ ಪೋಸ್ಟರ್ ಡಿಸೈನ್ ಸಿದ್ಧವಾಗಿದೆ. ಮೊನ್ನೆ ನೆನಪಿನ ಸಂಚಿಯಿಂದ ಬ್ಲಾಗ್ ನಲ್ಲಿರುವ       ನನ್ನ ಕೆಲವು ಅಟೆಂಪ್ಟ್ ಗಳು ಲೇಖನವನ್ನು ಓದಿದಾಗ ನಂಗೆ ನೆನಪು ಬಂದದ್ದು ನನ್ನ ಕಥೆಗೆ ನಾನೇ ಚಿತ್ರಗಳನ್ನು ಬರೆಯುತ್ತಿದ್ದದ್ದು. ಹಾಗೆ ನಮ್ಮ ಊರಿನ ಗೋಡೆಯ ಮೇಲೆ ಬಣ್ಣಬಣ್ಣದ ಬಳಪಗಳಿಂದ ನನ್ನದೇ ಚಿತ್ರದ ಪೋಸ್ಟರ್ ಬಿಡಿಸುತ್ತಿದ್ದದ್ದು. ಇಲ್ಲಿ ಮಾಲತಿ ಮೇಡಂ ವರ್ಣಮಯ ಪುಸ್ತಕಕ್ಕಾಗಿ ಮುಖಪುಟ ಮಾಡಲು ಪ್ರಯತ್ನಿಸಿದ್ದನ್ನು ಅವರೇ ಹೇಳಿಕೊಂಡಿದ್ದಾರೆ. ಲೇಖನ ಮತ್ತು ಮುಖಪುಟದ ಮಾದರಿಗಳು ಎರಡೂ ಚೆನ್ನಾಗಿವೆ.

Friday, December 14, 2012

ಮಾಂಜ್ಹಾ-ಕಿರುಚಿತ್ರ.

ಈ ಕಿರುಚಿತ್ರ ಭಾರತದಲ್ಲಿ ನಿಷೇಧಕ್ಕೊಳಗಾಗಿದೆ.
ಅದರ ಅರ್ಥ ಈ ಚಿತ್ರದಲ್ಲಿ ಏನೋ ಕಠೋರವಾದ ಸತ್ಯವಿರಬೇಕು. ಅಥವಾ ಸಮಾಜದ ಕರಾಳ ಮುಖವನ್ನೂ ಹಸಿಹಸಿಯಾಗಿಯೇ ತೋರಿಸಿರಬಹುದು.ಯಾವ ಬೆದರಿಕೆಗೆ, ಆಮಿಷಕ್ಕೆ ಒಳಗಾಗದೆ ನಿರ್ದೇಶಕ ತನಗನಿಸಿದ್ದನ್ನು ಚಿತ್ರೀಕರಿಸಿರಬೇಕು.
ಹೌದು ಇದೆಲ್ಲವೂ ಈ ಕಿರುಚಿತ್ರದ ಮಟ್ಟಿಗೆ ಸತ್ಯ.
ಈ ಕಿರುಚಿತ್ರವನ್ನು ನೋಡಿದ ಸ್ಲಂ ಡಾಗ್ ಖ್ಯಾತಿಯ ನಿರ್ದೇಶಕ ಡ್ಯಾನಿ ಬೊಯ್ಲ್ ಮೆಚ್ಚಿದ್ದಲ್ಲದೆ ತಮ್ಮ ಚಿತ್ರ ಸ್ಲಂ ಡಾಗ್ ಮಿಲ್ಲೆನಿಯರ್ ನ ಬ್ಲೂ ರೇ ಡಿವಿಡಿಯಲ್ಲಿ ಹೆಚ್ಚುವರಿ ಅಡಕವಾಗಿ ಈ ಕಿರುಚಿತ್ರವನ್ನು ಸೇರಿಸಿದ್ದರು.
ದರರ್ಥ ಈ ಕಿರು ಚಿತ್ರ ಅತ್ಯುತ್ತಮವಾಗಿದೆ ಎಂಬರ್ಥವಿರಬೇಕು.
ಹೌದು. ಮಾ೦ಜ್ಹಾ ಮರಾಠಿ ಭಾಷೆಯಲ್ಲಿರುವ ಕಿರುಚಿತ್ರ. ಕಪ್ಪುಬಿಳುಪು ವರ್ಣದ ಈ ಚಿತ್ರದ ಕಥೆ, ನಿರೂಪಣೆ ಪ್ರೇಕ್ಷಕರನ್ನು ಕೆಲಕಾಲ ದಿಗ್ಭ್ರಾಂತರನ್ನಾಗಿಸದಿರದು. ಮುಂಬೈನಗರದ ಸ್ಲಮ್ಮಿನ ಇನ್ನೊಂದು ಕರಾಳ ಮುಖವನ್ನೂ ತೆರೆದಿಡುವ ಈ ಚಿತ್ರದ ನಿರ್ದೇಶಕ ರಾಹಿ ಅನಿಲ್ ಬರವೆ.
ಮುಂಬೈ ಮಹಾನಗರಿ ರಂಕಾನ ತಾಯಿಯನ್ನು ವೇಶ್ಯಯನ್ನಾಗಿ ಮಾಡಿರುತ್ತದೆ. ತಂದೆಯನ್ನು ಕಿತ್ತುಕೊಂಡಿರುತ್ತದೆ . ಹಾಗಾಗಿ ರಂಕಾನಿಗಿರುವವಳು ಚಿಕ್ಕ ತಂಗಿ ಮಾತ್ರ. ಗಾಳಿಪಟದ ದಾರವನ್ನು ತಯಾರಿಸುವೆಡೆ  ಕೆಲಸ ಮಾಡುವ ರಂಕಾನಿಗೆ ಒಬ್ಬ ಮತಿಗೆಟ್ಟ ಪೋಲೀಸ್ ಅಧಿಕಾರಿ ಪರಿಚಯವಾಗುತ್ತಾನೆ . ಬಾಲ್ಯದಲ್ಲಿ ತಂದೆಯಿಂದಲೇ ನಿರಂತರ ಅತ್ಯಾಚಾರಕ್ಕೊಳಗಾಗಿದ್ದ ಆತ ರಂಕಾಳ  ಪುಟ್ಟ ತಂಗಿಯನ್ನು ಲೈಂಗಿಕವಾಗಿ ಆಘಾತಗೊಳಿಸುತ್ತಾನೆ ಮುಂದೆ ರಂಕಾ ಹೇಗೆ ಆ ಪೈಶಾಚಿಕ ಮನೋಭಾವದ ಪೋಲೀಸ್ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದೇ ಕಥೆ.
ಚಿತ್ರದ ಹಿನ್ನೆಲೆ ಸಂಗೀತ, ನೇರವಂತಿಕೆಯ ಸಂಭಾಷಣೆ ನಮ್ಮನ್ನು ಕಾಡದಿರದು .41 ನಿಮಿಷಗಳಷ್ಟು ಉದ್ದವಿರುವ ಈ ಕಿರುಚಿತ್ರವನ್ನೊಮ್ಮೆ ಅವಶ್ಯ ನೋಡಿ.
ಓದಿ  ಮೆಚ್ಚಿದ್ದು: ಪ್ರಮೋದ ರ ಬ್ಲಾಗ್ CIPHERS SPACE ನಲ್ಲಿನ  ಮೂರ್ಖರ , ಮೂರ್ಖರಿಂದ ಮೂರ್ಖರಿಗಾಗಿ ಈವತ್ತಿನ ಮಾಧ್ಯಮಗಳ ಟಿ .ಆರ್.ಪಿ. ಸರ್ಕಸ್ಸಿನ ಬಗ್ಗೆ ವ್ಯಂಗ್ಯವಾಗಿ ತಿಳಿಸುವ ಅರ್ಥ ಗರ್ಭಿತ ಲೇಖನ. ಓದು ಓದುತ್ತಾ ಹೌದಲ್ಲ ಎನಿಸುವ ಲೇಖನ ಸಕತ್ತು ಮಜಾ ಕೊಡುತ್ತದೆ. ನೀವು ಓದಿ.

Monday, December 10, 2012

ಅಡ್ಡ-ಒಂದು ಗಿಡ್ಡ ವಿಮರ್ಶೆ

ಒಂದು ರೀಮೇಕ್ ಚಿತ್ರದ ಬಗ್ಗೆ ಮಾತಾಡುವಾಗ, ನೋಡುವಾಗ , ವಿಮರ್ಶೆ ಮಾಡುವಾಗ ಅನೂಚಿತವಾಗಿ ಮೂಲಚಿತ್ರದ ನೆನಪು ಬಂದೆ ಬರುತ್ತದೆ. ಬೇಡ ಬೇಡ ವೆಂದರೂ ಎರಡೂ ಚಿತ್ರಕ್ಕೆ ತಾಳೆ ಹಾಕುವ ಮನಸ್ಸು, ಅದು ಅಲ್ಲೇ ಚೆನ್ನಾಗಿತ್ತು, ಈ ದೃಶ್ಯವನ್ನು ಇಲ್ಲಿ ಚೆನ್ನಾಗಿ ಚಿತ್ರೀಕರಿಸಿದ್ದಾರೆ, ಅಲ್ಲೊಂದು ಬೋರಿನ ದೃಶ್ಯವನ್ನು ಇಲ್ಲಿ ತೆಗೆದುಹಾಕಿದ್ದು ಚಿತ್ರಕ್ಕೆ ಲಾಭವಾಗಿದೆ ಎಂದೆಲ್ಲಾ ತಪ್ಪು ಸರಿಗಳ ಲೆಕ್ಕಾಚಾರದಲ್ಲಿ ತೊಡಗುತ್ತದೆ. ಆದರೆ ಒಂದು ಸಿನೆಮಾವನ್ನು ಬರೀ ಸಿನೆಮಾವನ್ನಾಗಿ, ಇಲ್ಲಿನ ಸಿನೆಮಾವನ್ನಾಗಿ ನೋಡಲು ಪ್ರಯತ್ನಿಸಿದಾಗ ಆ ಚಿತ್ರದ ನಿಜವಾದ ವಿಮರ್ಶೆ ಸಾಧ್ಯವಾಗುತ್ತೇನೋ. ಆಮೇಲಿನಿಂದ ಬೇಕಾದರೆ ಹೋಲಿಕೆ ಮಾಡಬಹುದೇನೋ.
ಪ್ರೇಮ್ ಅಡ್ಡದ ಕಥೆ 2012ರಲ್ಲಿ  ಪ್ರಾರಂಭವಾಗಿ 1981 ಕ್ಕೆ ಹೋಗಿ ನಿಲ್ಲುತ್ತದೆ. 1981ರಲ್ಲಿ ನಡೆದ ಮಾರಣ ಹೋಮದ ಕಥೆ ಚಿತ್ರದ್ದು. ನಾಲ್ವರು ಹಾದಿಬೀದಿ ಹುಡುಗರು ಕೊಲೆಗಳನ್ನು ಮಾಡುತ್ತಾ ಎಲ್ಲವನ್ನೂ ಕಳೆದುಕೊಂಡು ಕೊನೆಗೆ ತಾವೂ ಕೊಲೆಯಾಗುವುದೇ ಕಥೆ. ಆದರೆ ಚಿತ್ರ ನೋಡ ನೋಡುತ್ತಾ ನಮ್ಮ ನಾಯಕರ ಮೇಲೆ ಪ್ರೇಕ್ಷಕರಿಗೆ ಕರುಣೆ ಹುಟ್ಟಿಸುವುದರ ಬದಲು 'ಅಯ್ಯೋ ಯಾಕೀಗೆ ಮಾಡಿಬಿಟ್ಟರು..' ಎನಿಸುತ್ತದೆ. ಆದರೆ ಮತ್ತೆ ಅದೇ ತಪ್ಪನ್ನು ಮಾಡಿದಾಗ ನೋಡುಗನಿಗೆ ಅವರ ಮೇಲೆಯೇ ಬೇಸರವಾಗುತ್ತದೆ. ಆದರೆ ಬರುಬರುತ್ತಾ ಮನೆಗೆ ಮಗನಾಗದ, ಯಾರಿಗೂ ಒಳ್ಳೆಯವರಾಗದ ನಾಲ್ವರು ಕತ್ತು ಕುಯ್ಯುತ್ತಾ ಜೀವನ ನಡೆಸುವುದು ಅರಗಿಸಿಕೊಳ್ಳುವುದೂ ಕಷ್ಟವಾಗುತ್ತದೆ. ಚಿತ್ರದ ಬಿಡಿ ಬಿಡಿ ದೃಶ್ಯಗಳು ಚೆನ್ನಾಗಿವೆ. ಆದರೆ ಒಟ್ಟಾರೆಯಾಗಿ ಪಾತ್ರ ಪೋಷಣೆ ಮತ್ತು ಕಥೆಯ ಗತಿ ತೃಪ್ತಿಕರವಾಗಿಲ್ಲ. ಹಾಗಾಗಿಯೇ ಚಿತ್ರ ನಿರೀಕ್ಷಿತ ಪರಿಣಾಮ ಬೀರುವಲ್ಲಿ ಸೋಲುತ್ತದೆ. ರಾಜಕೀಯದ ದೊಂಬರಾಟದಲ್ಲಿ ಯಾರೋ ಅಮಾಯಕನನ್ನು ಕೊಲೆ ಮಾಡುವ ನಾಯಕರ ತಂಡ ನಮಗೆಂದೂ[ನನಗೆಂದೂ] ಒಳ್ಳೆಯವರು, ಅಥವಾ ಮಾಡಿದ್ದು ಸರಿಯಾದ ಕೆಲಸ ಎನಿಸುವುದಿಲ್ಲ.
ಚಿತ್ರದ ತಾಂತ್ರಿಕ ಅಂಶಗಳು ಚೆನ್ನಾಗಿವೆ. ಪಾತ್ರಧಾರಿಗಳೂ ಚೆನ್ನಾಗಿಯೇ ಅಭಿನಯಿಸಿದ್ದಾರೆ. ಆದರೆ ಭಾವಕ್ಕಿಂತ ಹೆಚ್ಚಾಗಿ ಹಿಂಸೆ ವೈಭವೀಕರಿಸಿದೆ.ಮೊದಲ ಕೊಲೆಯಲ್ಲಿ ಚಾಕುವಿನಿಂದ ಇರಿದು ಆಮೇಲೆ ಮತ್ತೆ ಓಡಿ ಬಂದು ಕತ್ತು ಕುಯ್ಯುವುದು ಬರ್ಬರ ಎನಿಸುತ್ತದೆ. ಹಾಗೆ ಪ್ರಾರಂಭದಿಂದಲೂ ಏನೊಂದು ಒಳ್ಳೆಯ ಕೆಲಸವನ್ನ ನಾಯಕರು ಮಾಡದಿರುವುದು ಅವರ ವ್ಯಕ್ತಿತ್ವವನ್ನ ಅಧಪತನಕ್ಕಿಳಿಸುತ್ತದೆ.
ಚಿತ್ರದ ಋಣಾತ್ಮಕ ಮತ್ತು ಧನಾತ್ಮಕ ಅಂಶವೆಂದರೆ ಸಂಭಾಷಣೆ. ಹೆಸರಿಗೆ ಚಾಮರಾಜನಗರದ ಪಕ್ಕದ ಹಳ್ಳಿ, 1981 ರ ಇಸವಿ ಎಂದರೂ ಕೆಲವೇ ಕೆಲವೇ ಪಾತ್ರಗಳು ಹಳ್ಳಿಗಾಡಿನ ಮಾತಾಡುತ್ತವೆ. ನಾಯಕಿಯೂ ಸೇರಿದಂತೆ ಕೆಲವು ಪಾತ್ರಗಳು ಇದ್ದಕಿದ್ದಂತೆ ಬೆಂಗಳೂರು ಮಾತಿಗೆ ಶುರು ಹಚ್ಚಿ ಕೊಳ್ಳುತ್ತವೆ. ಚಾಮರಾಜನಗರದ ಮಾತುಗಳು ಕೆಲವೊಮ್ಮೆ ಮಂಡ್ಯದ ಮಾತಿನಂತೆ ಭಾಸವಾಗುತ್ತದೆ. ಚಿತ್ರದಲ್ಲಿ ಪ್ರೀತಿ, ತಾಯಿ ಮಮತೆ, ಸ್ನೇಹ,ಮಿತ್ರದ್ರೋಹ, ತ್ಯಾಗ ಎಲ್ಲವೂ ಇದೆ. ಆದರೆ ಹಿಂಸೆ, ಕ್ರೌರ್ಯ ಅದೆಲ್ಲವನ್ನೂ ಮೆಟ್ಟಿ ನಿಂತಿದೆ. ಹಾಗೆ ಚಿತ್ರವೂ 1981ರಲ್ಲಿ ಪ್ರಾರಂಭವಾದರೂ ಮುಂದುವರೆದಂತೆ ಪ್ರೇಕ್ಷಕರನ್ನು 1981ರ ಕಾಲಘಟ್ಟಕ್ಕೆ ಹೊತ್ತೊಯ್ಯುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ ಎನ್ನಬಹುದು.
2008ರಲ್ಲಿ  ಬಿಡುಗಡೆಯಾದ ತಮಿಳಿನ ಸುಬ್ರಮಣ್ಯ ಪುರಂ ಒಂದು ಕಡಿಮೆ ಬಜೆಟ್ಟಿನ ಚಿತ್ರ. ಅದರ ಒಟ್ಟು ಬಂಡವಾಳದಷ್ಟೇ ಹಣ ಕೇವಲ ತೆಲುಗು ಡಬ್ಬಿಂಗ್ ಹಕ್ಕಿನಿಂದ ಬಂತೆಂದರೆ ಅದರ ಯಶಸ್ಸಿನ ಅಂದಾಜು ಮಾಡಬಹುದು. ಆ ಚಿತ್ರದ ಭಾವ, ನಾಯಕ-ನಾಯಕಿಯ ವಸ್ತ್ರ, ಸಂಭಾಷಣೆಯ ಶೈಲಿ ಎಲ್ಲಕ್ಕಿಂತ ಹೆಚ್ಚಾಗಿ ಛಾಯಾಗ್ರಹಣ ಚಿತ್ರದ ಅಂದವನ್ನು ಹೆಚ್ಚಿಸಿತ್ತಲ್ಲದೆ, ಪರಿಣಾಮಕಾರಿಯನ್ನಾಗಿ ಮಾಡಿತ್ತು.
ಆದರೆ ಇಲ್ಲಿ ಎಲ್ಲವೂ ಇದ್ದು ಏನೋ ಇಲ್ಲಾ ಎನ್ನುವ ಭಾವ ಕಾಡುವುದು ಏಕೋ ಗೊತ್ತಾಗಲಿಲ್ಲ. ಅಂದ ಹಾಗೆ ಚಿತ್ರ ನೋಡಿದ ಮೇಲೆ ಹಿರಿಯರು ಕಿರಿಯರಿಗೆ ಬುದ್ದಿ ಹೇಳುವಾಗ 'ನಮ್ಮ  ಕಾಲದಲ್ಲಿ ಹೀಗಿರಲಿಲ್ಲ ನೋಡು..' ಎನ್ನುವ ಹಾಗಿಲ್ಲ. ಆ ಕಾಲದಲ್ಲಿ ಒಂದಷ್ಟು ಕೊಲೆ , ರಕ್ತ , ಮೋಸ ಬಿಟ್ಟರೆ ಇನ್ನೇನಿತ್ತು ಎನಿಸಿದರೆ ಅದಕ್ಕೆ ಈ ಸಿನೆಮಾ ಜವಾಬ್ದಾರಿಯಲ್ಲ.

Friday, December 7, 2012

ಜೋಗಿ ಲೇಖನಗಳೂ, ಚಿತ್ರರಂಗವೂ....

ಕಳೆದ ವಾರದ ಉದಯವಾಣಿಯ ಸಿನೆಮಾ ಪುರವಣಿಯಲ್ಲಿ ಮತ್ತು ಈ ವಾರದ ಸಿನೆಮಾ ಪುರವಣಿಯಲ್ಲಿ ಜೋಗಿಯವರ ಎರಡು ಲೇಖನಗಳು ಪ್ರಕಟವಾಗಿವೆ. ಒಂದು ಒಟ್ಟಾರೆಯಾಗಿ ನಿರ್ದೇಶಕರುಗಳ ಬಗ್ಗೆ ಮತ್ತೊಂದು ಕಥೆಯ ಬಗ್ಗೆ. ನಿಜಕ್ಕೂ ಎರಡೂ ಲೇಖನಗಳೂ ಒಳ್ಳೆಯ ಚಿಂತನೆಯನ್ನು ಬಡಿದೆಬ್ಬಿಸುವ ಲೇಖನಗಳು.
ಹೇಗೆ ಒಬ್ಬ ಕಲಾವಿದ/ಕಲಾವಿದೆ  ಒಂದೇ ಪಾತ್ರಕ್ಕೆ ಸೀಮಿತವಾಗಬಾರದೋ ಹಾಗೆಯೇ ಒಬ್ಬ  ನಿರ್ದೇಶಕ ಒಂದೇ ಶೈಲಿಗೆ ಜೋತು ಬೀಳಬಾರದು. ಹಾಗಂತ ಎಲ್ಲಾ ರೀತಿಯ ಎಲ್ಲಾ ವಿಭಾಗದ ಚಿತ್ರಗಳನ್ನೂ ಮಾಡಿಯೇ ತೀರಬೇಕೆಂದು ಹಠ ತೊಡಬೇಕಾಗಿಲ್ಲ. ಆದರೆ ತಮಗೆ ಆಗಿಬರುವ,ತಮ್ಮ ಮನಸ್ಸಿಗೆ, ಯೋಚನಾಲಹರಿಯ ಪರಿಧಿಯೊಳಗೆ ಬರುವ ಭಿನ್ನ ಭಿನ್ನ ರೀತಿಯ ಕಥಾವಸ್ತುವನ್ನು ದೃಶ್ಯ ಮಾಧ್ಯಮಕ್ಕೆ ತರಲು ಪ್ರಯತ್ನ ಪಡಬಹುದೇನೋ. ಅಥವಾ ತಮಗೊಲಿದ/ತಮಗೊಪ್ಪಿದ ಶೈಲಿಯಲ್ಲಿಯೇ ಬೇರೆ ಬೇರೆ ಕಥೆಯನ್ನೂ ಹೇಳಬಹುದು. ನಾವು  ಹಾಲಿವುಡ್ಡಿನ ನಿರ್ದೇಶಕ ರೋಲಂಡ್ ಎಮರಿಚ್ ನ ಸಿನೆಮಾಗಳನ್ನ ಗಮನಿಸಿದಾಗ ಆತನ ಹೆಚ್ಚಿನ ಸಿನೆಮಾಗಳು VFX ಅಥವಾ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಹೆಚ್ಚಾಗಿ ಹೊಂದಿರುವಂತಹ ಚಿತ್ರಗಳು ಕಂಡುಬರುತ್ತವೆ.. 2012 , 10000 B.C., ದಿ ಡೇ ಆಫ್ಟರ್ ಟುಮಾರೋ, ಗಾಡ್ಜಿಲ್ಲಾ, ಯೂನಿವೆರ್ಸಲ್ ಸೋಲ್ದರ್ , ಇಂಡೆಪೆಂಡೆನ್ಸ್ ಡೇ, ಅನಾನಿಮಸ್ ಮುಂತಾದವುಗಳು ಗ್ರಾಫಿಕ್ಸ್ ತಂತ್ರವನ್ನು ಹೆಚ್ಚಾಗಿ ನಂಬಿಕೊಂಡಿದ್ದರೂ   ವಸ್ತು ಮಾತ್ರ ಭಿನ್ನವಾದವುಗಳಾಗಿವೆ. ಹಾಗೆಯೇ ನಿರ್ದೇಶಕ ಸ್ಪೀಲ್ ಬರ್ಗ್ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನ. ವಸ್ತು ವಿಷಯದಲ್ಲಿ, ಶೈಲಿಯಲ್ಲಿ ಬೇರೆ ತರಹದ ಚಿತ್ರಗಳನ್ನ ಕೊಟ್ಟಿದ್ದಾನೆ ಸ್ಪೀಲ್ ಬರ್ಗ್.ಆತನ ಜಾಸ್ , ಈ.ಟಿ , ಇಂಡಿಯಾನ ಜೋನ್ಸ್, ದಿ ಕಲರ್ ಪರ್ಪಲ್, ಜುರಾಸಿಕ್ ಪಾರ್ಕ್, ಶಿಂಡ್ಲರ್ಸ್ ಲಿಸ್ಟ್, ಟರ್ಮಿನಲ್ ಹೀಗೆ. ಅದೇ ರೀತಿ ನಾವು ಸುಮಾರು ನಿರ್ದೇಶಕರನ್ನು ಗುರುತಿಸಬಹುದು. ಕನ್ನಡದಲ್ಲೂ ನಿರ್ದೇಶಕ ಉಪೇಂದ್ರರ ಮೊದಲ ನಾಲ್ಕು ಸಿನೆಮಾಗಳೂ ಎಲ್ಲಾ ರೀತಿಯಿಂದಲೂ ಭಿನ್ನವಾದವು.ಶ್, ಆಪರೇಶನ್ ಅಂತ, ಓಂ, ಎ  ಹಾರರ್, ಆಕ್ಷನ್ ಹೀಗ.ಆದರೆ ನಮ್ಮಲ್ಲಿ ಇತ್ತೀಚಿಗೆ ಯಾಕೆ ಆ ಕೆಲಸ ಆಗುತ್ತಿಲ್ಲ. ಒಬ್ಬ ನಿರ್ದೇಶಕ ಯಾಕೆ ಒಂದು ಯಶಸ್ಸಿನ ಸೂತ್ರಕ್ಕೆ ಹಿಡಿದುಕೊಂಡು ಅದಕ್ಕೆ ಜೋತಾಡುತ್ತಾನೆ ಎಂಬ ಪ್ರಶ್ನೆ ಕಾಡುವುದು ಸಹಜ. ಚಿತ್ರರಂಗದಲ್ಲಿ ತಮ್ಮ ಗುರುತೇ ಇರದಿದ್ದ ಸಮಯದಲ್ಲಿ ರಾಜಿಯಾಗದೆ , ತಮಗೆ ಅನಿಸಿದ ಚಿತ್ರವನ್ನ ಕಿತ್ತಾಡಿಕೊಂಡು ಜಗಳವಾಡಿಕೊಂಡು ಸಿನೆಮಾ ಮಾಡುವ ನಿರ್ದೇಶಕರು ತಮ್ಮ ದಿನಗಳು ಶುರುವಾದಾಗ ಯಾಕೆ ಸುಮ್ಮನಿದ್ದು ಬಿಡುತ್ತಾರೆ ಎನ್ನುವ ಪ್ರಶ್ನೆ ನನ್ನದು. ಪ್ರಾರಂಭದಲ್ಲಿ ಏನು ಮಾಡಲು ಹೊರಟರೂ ಅದಕ್ಕೆ ಉತ್ತರಗಳನ್ನು ಸಿದ್ಧವಾಗಿಟ್ಟು ಕೊಳ್ಳಬೇಕಾಗುತ್ತದೆ. ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಅದ್ಯಾಕೆ, ಅವರ್ಯಾಕೆ ಎಂಬ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿದ್ದರೂ ಇವರೇ ಸಾಕು, ಇದೆ ಸಾಕು ಎಂಬ ನಿರ್ಣಯಕ್ಕೆ ತಲೆಬಾಗಬೇಕಾಗುತ್ತದೆ. ಆದರೆ ಹೆಸರಾದ ಮೇಲೆ ಕೇಳಿದ ನಟರನ್ನು, ವಸ್ತುವನ್ನೂ, ಸ್ಥಳವನ್ನೂ ಕೊಡಲಿಕ್ಕೆ ನಿರ್ಮಾಪಕರು ಸಿದ್ಧವಾದಾಗಲೂ ನಿರ್ದೇಶಕರ್ಯಾಕೆ ತಾವೇ ಒಂದು ವೃತ್ತದೊಳಗೆ ಸೇರಿಕೊಳ್ಳುತ್ತಾರೆ ಎನ್ನುವುದೂ ಪ್ರಶ್ನೆಯಾಗಿಯೇ ಉಳಿದಿದೆ. 
 ಇನ್ನು ಕಥೆಯ ವಿಷಯಕ್ಕೆ ಬಂದರೆ ಆಗಿಲಿಂದ ಈವತ್ತಿಗೂ ಕಥೆಯ ಕೊರತೆ ಎದ್ದು ಕಾಡತೊಡಗುತ್ತದೆ. ಅಥವಾ ಇರುವ ಕಥೆ ಕಾದಂಬರಿಗಳನ್ನೂ ಸಿನೆಮಾ ರೂಪಕ್ಕೆ ಅಳವಡಿಸುವ ಪರಿಣತಿಯ ನಿರ್ದೇಶಕರು ಅಲ್ಪ ಸಂಖ್ಯಾತರು ಎನಿಸುತ್ತದೆ.
ಜೋಗಿಯವರ ಲೇಖನ ಎಲ್ಲೋ ಮೂಲೆಯಲ್ಲಿ ಕುಳಿತ ಕೇವಲ ಒಂದೇ ಒಂದು ಚಿತ್ರ ನಿರ್ದೇಶಿಸಿರುವ ನನ್ನನ್ನೇ ಅಷ್ಟು ಪರಿಯಾಗಿ ಕಾಡಿದೆಯೆಂದರೆ ನಮ್ಮ ಬಾಸ್ ಗಳನ್ನೂ ಬಡಿದೆಬ್ಬಿಸಲು ಸಾಕು. ಆ ಕೆಲಸವಾಗಲಿ ಮಾತು ನಮ್ಮ ನಿರ್ದೇಶಕರು ಚಿತ್ರದಿಂದ ಚಿತ್ರಕ್ಕೆ ಬೆಳೆಯಲಿ, ನಮಗೆ ದಾರಿದೀಪವಾಗಲಿ ಎಂಬ ಆಶಯ ನನ್ನದು.

Thursday, December 6, 2012

VFX-ಮಾಯಾಜಾಲದ ಬೆನ್ನುಬಿದ್ದು-2

ಅರೆ ಪಾರದರ್ಶಕ ಭೂತವನ್ನು  ಬೆಳ್ಳಿ ಬೆಳ್ಳಿಪರದೆಯ ಮೇಲೆ ತಂದದ್ದು ಇದೆ ಸ್ಮಿತ್. 1909ರಲ್ಲೇ ತೆರೆಗೆ ಬಂದ 'ದಿ  ಕಾರ್ಸಿಕಾನ್  ಬ್ರದರ್ಸ್ ' ಚಿತ್ರದಲ್ಲಿ ಭೂತವನ್ನು ನೋಡಿದ ಜನ ರೋಮಾಂಚಿತರಾಗಿದ್ದರಂತೆ ಹಾಗೆ ಡಬಲ್ ಎಕ್ಸ್ ಪೋಸರ್ ಗೆ ಇಂಗ್ಲಿಷ್ ಪೇಟೆಂಟ್ ಪಡೆದ ಸ್ಮಿತ್ ಆನಂತರ ಮತ್ತೊಬ್ಬ ವ್ಯವಹಾರಸ್ಥ ಚಾರ್ಲ್ಸ್ ಅರ್ಬನ್ ಜೊತೆ ಸೇರಿ ಹಲವಾರು ಸಿನೆಮಾಗಳನ್ನು ನಿರ್ಮಿಸಿದ ಅವುಗಳಲ್ಲಿ ಮುಖ್ಯವಾದುದೆಂದರೆ ಡಬ್ಲ್ಯೂ.ಆರ್ .ಬೂತ್ ನಿರ್ದೇಶನದ ಏರ್ ಶಿಪ್ ಡೆಸ್ಟ್ರಾಯರ್ . 1909ರಲ್ಲಿ ತೆರೆಗೆ ಬಂದ ಈ ಚಿತ್ರದ ಕಥೆ ಇಂತಿದೆ . ಅಂತರಿಕ್ಷಾವಾಹನವೊಂದು ಲಂಡನ್ ನಗರದ ಮೇಲೆ ಬಂದಿಳಿದು ಇಡೀ ನಗರವನ್ನು ಸುಟ್ಟುಹಾಕಲು ಹವಣಿಸುತ್ತದೆ . ಆಗ ನಾಯಕ ಅದರ ತಂತ್ರಜ್ಞಾನವನ್ನು ತಿಳಿದು ತನ್ನ ಬುದ್ದಿಶಕ್ತಿ  ಮತ್ತು  ತಂತ್ರಜ್ಞಾನದ  ಸಹಾಯದಿಂದ ಲಂಡನ್ ನಗರವನ್ನು ಉಳಿಸುವನು.ಇದೆ ಕಾಲ ಘಟ್ಟದಲ್ಲಿ ಹೆಸರಿಸಬಹುದಾದ  ಮತ್ತೊಬ್ಬ ಚಿತ್ರಕರ್ಮಿ ಎಂದರೆ ಸಿಸಿಲ್ ಎಂ. ಹೆಪ್ ವರ್ತ್ .ಹೆಪ್ ವರ್ತ್ ನಿರ್ದೇಶನದ  ಎಕ್ಷ್ ಪ್ಲೋಶನ್  ಆಫ್ ಎ ಮೋಟಾರ್ ಕಾರ್ ಬ್ರಿಟಿಶ್ ಟ್ರಿಕ್ಸ್ ಸಿನೆಮಗಳಲ್ಲೇ ಗಮನಾರ್ಹ ಸಿನೆಮಾ ಎಂದೇ ಹೇಳಬಹುದು ಕೇವಲ  ಒಂದೂವರೆ ನಿಮಿಷದ ಈ ಮೂಕಿ ಚಿತ್ರದ ಪರಿಣಾಮ ಮಾತ್ರ ಆ ಕಾಲಕ್ಕೆ ಅಗಾಧವಾದದ್ದು ಎಂದೇ ಹೇಳಬಹುದು. ಆಲಿಸ್ ಇನ್ ವಂಡರ್ ಲ್ಯಾಂಡ್ 1900 ಮತ್ತು ಹೌ ಇಟ್ ಫೀಲ್ಸ್ ಟು ಬಿ ರನ್ ಓವರ್ ಈತನ ಹೆಸರಿಸಬಹುದಾದ ಟ್ರಿಕಿ ಚಿತ್ರಗಳು.
ಬ್ರಿಟನ್ ಚಿತ್ರಕರ್ಮಿಗಳು vfx  ವಿಷಯದಲ್ಲಿ ಇಷ್ಟೆಲ್ಲಾ ತಲೆ ಕೆಡಿಸಿಕೊಳ್ಳು ತ್ತಿದ್ದರೂ ಅಮೆರಿಕನ್ ಚಿತ್ರಕರ್ಮಿಗಳು ಆ  ವಿಷಯದಲ್ಲಿ ಸ್ವಲ್ಪ  ಹಿಂದುಳಿದಿದ್ದರು  ಎಂದೇ ಹೇಳಬಹುದು. ಹಾಗಂತ ಅವರಿಗೆ ಇದೇನೂ ಹೊಸದಾಗಿರಲಿಲ್ಲ 1895ರಲ್ಲೇ ದಿ ಎಕ್ಸಿಕ್ಯೂಶನ್ ಆಫ್ ಮೇರಿ ಚಿತ್ರದಲ್ಲೇ ತಮ್ಮ vfx ಜ್ಞಾನ ಮೆರೆದಿದ್ದರು . ಆದರೂ ಆನಂತರದ ದಿನಗಳಲ್ಲಿ ಪ್ರಸ್ತುತ ಸುದ್ದಿಗಳನ್ನು ಚಿತ್ರರೂಪಕ್ಕೆ ತರಲು  ಆಸಕ್ತಿ ತೋರಿಸಿದರೆ ವಿನಾ ದೃಶ್ಯ ವೈಭವದ ಕಡೆಗೆ ಅಷ್ಟಾಗಿ ಒಲವು ತೋರಿರಲಿಲ್ಲ .
1898ರಲ್ಲಿ  ಅಲ್ಬರ್ಟ್ ಈ ಸ್ಮಿತ್  ಮತ್ತು ಸ್ಟುವಾರ್ಟ್ ಬ್ಲಾಕ್ಟನ್ ಸೇರಿಕೊಂಡು ತಮ್ಮ ವಿಟಾಗ್ರಾಫ್ ಕಂಪನಿಯ ಮೂಲಕ ದಿ ಬ್ಯಾಟಲ್ ಆಫ್ ಸ್ಯಾಂಟಿಯಾಗೊ ಬೇ ಚಿತ್ರವನ್ನು ನಿರ್ಮಿಸಿದರು. ಆ ಕಾಲಕ್ಕೆ  ವಿಭಿನ್ನ  ಪ್ರಯತ್ನವಾಗಿತ್ತು. ಯುಧ್ಧ ಭೂಮಿ, ಕಣಿವೆ,  ನೌಕೆಗಳು, ಪ್ರವಾಹ, ಬಾಂಬ್  ಮುಂತಾದವುಗಳನ್ನು ಆ ಕಾಲಕ್ಕೆ  ಭಿನ್ನ ಐಡಿಯ ಉಪಯೋಗಿಸಿ ಚಿತ್ರೀಕರಿಸಲಾಗಿತ್ತು ಅದಕ್ಕಾಗಿ ಸಣ್ಣ ಸಣ್ಣ ಮಾದರಿಗಳನ್ನು ಬಳಸಲಾಗಿತ್ತು . ಯುದ್ಧಭೂಮಿಯ ಪರಿಣಾಮ ತರುವುದಕ್ಕಾಗಿ  ಸಿಗಾರ್ ಮೂಲಕ ಹೊಗೆಬಿಟ್ಟು ಆನಂತರ ಚಿತ್ರದಲ್ಲಿ ಸಂಯೋಜಿಸಲಾಗಿತ್ತು .ಇದೆಲ್ಲದರ ಫಲಿತಾಂಶ ಅದ್ಭುತವಾಗಿತ್ತು ಈ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯ ನಂತರ ಇದೆ ವಿಟಾಗ್ರಾಫ್ ಕಂಪನಿ 1899ರಲ್ಲಿ ದಿ ವಿಂಡ್ಸರ್ ಹೋಟೆಲ್ ಫೈರ್ ಚಿತ್ರ ನಿರ್ಮಿಸಿತು .ಈ ಚಿತ್ರದಲ್ಲೂ ಬೆಂಕಿ, ಹೊಗೆ ಮುಂತಾದ ಪರಿಣಾಮಗಳಿಗಾಗಿ ಹಲವಾರು ಹೊಸ ಹೊಸ ತಂತ್ರಗಳನ್ನು ಬಳಸಲಾಗಿತ್ತು.
1903ರಲ್ಲಿ ಬಂದ ದಿ ಗ್ರೇಟ್ ಟ್ರೈನ್ ರಾಬರಿ ಚಿತ್ರ ಚಿತ್ರಜಗತ್ತಿನ ಹಲವಾರು ಹೊಸಹೊಸ ಸಾಧ್ಯತೆಗಳಿಗೆ ಮೆಟ್ಟಿಲಾಯಿತು ಎಂದರೆ ತಪ್ಪಾಗಲಾರದು .ಇದರ  ನಿರ್ದೇಶಕ ಎಡ್ವಿನ್ .ಎಸ್  ಪೋರ್ಟರ್ .1900ರಲ್ಲಿ ಎಡಿಸನ್ ಕಂಪನಿಗೆ ಬರೀ ಪ್ರೊಜೆಕ್ಟರ್ ಆಪರೇಟರ್ ಆಗಿ ಸೇರಿದ ಪೋರ್ಟರ್  ತನ್ನ ಪ್ರತಿಭೆಯಿಂದಾಗಿ  ಬೇಗನೆ ನಿರ್ದೇಶಕನ ಪಟ್ಟ ಗಳಿಸಿದ ವ್ಯಕ್ತಿ .ಆತನ ದಿ ಗ್ರೇಟ್ ಟ್ರೈನ್ ರಾಬರಿ ಆ ಕಾಲಕ್ಕೆ ಒಂದು ಉತ್ತಮ ಪ್ರಯತ್ನವಷ್ಟೇ ಅಲ್ಲ. ಕ್ಲೋಸ್ ಅಪ್ , ಲಾಂಗ್ ಶಾಟ್ಸ್ ಮುಂತಾದ ದೃಶ್ಯ ವಿಭಜನೆಯ ಸಂಯೋಜನೆಗಳನ್ನು ಗಳನ್ನು ದೃಶ್ಯವೊಂದಕ್ಕೆ ಸಮರ್ಥವಾಗಿ ಬಳಸಿಕೊಂಡಂತಹ ಚಿತ್ರ. ಈ ಚಿತ್ರದಲ್ಲಿ ಡಬಲ್ ಎಕ್ಸ್ ಪೋಸರ್ ಜೊತೆಗೆ ಗನ್ ಫೈರಿಂಗ್ ಪರಿಣಾಮಕ್ಕಾಗಿ ಚಿತ್ರದ ಫ್ರೇಮುಗಳನ್ನು ಕೆಂಪು ಬಣ್ಣಕ್ಕೆ ಪರಿವರ್ತಿಸಿದ್ದ.
ಮೆಲಿಸ್ ಮತ್ತು ಅವರ ಹಿಂದಿನ ಚಿತ್ರಕರ್ಮಿಗಳನ್ನು ಈ ಸ್ಪೆಷಲ್ ತಂತ್ರಜ್ಞಾನವನ್ನು ಪ್ರಯೋಗಾತ್ಮಕವಾಗಿ ಅಥವಾ ಆ ಪರಿಣಾಮವನ್ನು ತೋರಿಸುವುದಕ್ಕಾಗಿ, ಸಾಧಿಸುವುದಕ್ಕಾಗಿ ಬಳಸಿಕೊಂಡರೆ, ಪೋರ್ಟರ್ ಅದನ್ನು ಕಥೆಗೆ ಪೂರಕವಾಗಿ ಬಳಸಿಕೊಂಡ. ಸಿನೆಮಾದಲ್ಲಿನ ಕಥೆಯ ಅವಶ್ಯಕತೆಗೆ ತಕ್ಕಂತೆ ಪರಿಣಾಮಗಳನ್ನು ಬಳಸಿದ ಚಿತ್ರಕರ್ಮಿಗಳಲ್ಲಿ ಪೋರ್ಟರ್ ಮೊದಲಿಗ ಎನ್ನಬಹುದು.[ಸಶೇಷ]

Wednesday, December 5, 2012

ಕತ್ತಲನಗರದಲ್ಲಿ ಬೆಳಕು ಹುಡುಕುತ್ತಾ...

ಜಾನ್ ಮುರ್ಡೋಕನಿಗೆ ಎಚ್ಚರವಾಗುತ್ತದೆ. ಕಣ್ಣುಬಿಟ್ಟು ಸುತ್ತಲೋ ನೋಡಿದಾಗ ತಾನಿರುವುದು ಹೋಟೇಲ್ಲೊಂದರ ಬಾತ್ ಟಬ್ ನಲ್ಲಿ ಎಂಬುದರ ಅರಿವಾಗುತ್ತದೆ ಹೊರತು  ಯಾವ ಹೋಟೆಲ್, ನಾನ್ಯಾಕೆ ಇಲ್ಲಿ ಬಂದೆ ಎಂಬುದು ಗೊತ್ತಾಗುವುದಿಲ್ಲ. ಹಾಗೆ ಸುತ್ತ ಮುತ್ತ ನೋಡಿದ ಜಾನ್ ಮುರ್ಡೋಕ ಹೌಹಾರುತ್ತಾನೆ. ಪಕ್ಕದಲ್ಲಿ ಹೆಂಗಸಿನ ಶವ ಬಿದ್ದಿದೆ. ಆಕೆಯನ್ನು ಕೊಲೆ ಮಾಡಲಾಗಿದೆ. ಆಕೆ ಯಾರು..? ಅಷ್ಟರಲ್ಲಿ  ಫೋನ್ ರಿಂಗಾಗುತ್ತದೆ. ಈ ಗೊಂದಲಗಳಲ್ಲಿ ಮುಳುಗಿದ್ದ ನಾಯಕ ಆ ಫೋನ್ ರಿಸೀವ್  ಮಾಡಿದಾಗ ಅತ್ತಲಿನ ಧ್ವನಿ 'ಬೇಗ ತಪ್ಪಿಸಿಕೋ...ನಿನ್ನ ಕೊಲೆ ಮಾಡಲು ಬರುತ್ತಿದ್ದಾರೆ ' ಎನ್ನುತ್ತದೆ. ಯಾರಧ್ವನಿ ಅದು...ನನ್ನನ್ಯಾಕೆ ಯಾರಾದರೂ ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ? ಇಷ್ಟಕ್ಕೂ ಇಲ್ಲಿ ನಡೆದಿರುವುದಾದರೂ ಏನು...ನಾನ್ಯಾಕೆ ತಪ್ಪಿಸಿಕೊಳ್ಳಬೇಕು...ತಪ್ಪಿಸಿಕೊಂಡು ಹೋಗುವುದಾದರೂ ಎಲ್ಲಿಗೆ..? ಯಾರಿಂದ ತಪ್ಪಿಸಿಕೊಳ್ಳಬೇಕು...ಈ ಎಲ್ಲ ಪ್ರಶ್ನೆಗಳೂ ನಾಯಕನಲ್ಲಿ ಮೂಡುತ್ತವೆ. ಆದರೆ ಯೋಚಿಸುತ್ತ ಕೂರಲು ಸಮಯವಾದರೂ ಎಲ್ಲಿದೆ. ನಾಯಕ ಅಲ್ಲಿಂದ ಓಡುತ್ತಾನೆ...
ಮುಂದೆ..? ಇದಿಷ್ಟು ಈ ಸಿನೆಮಾವನ್ನು ನೋಡಿ ಎಂದು ಹೇಳಲು ಸಾಕು ಎನಿಸುತ್ತದೆ. ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಸಾಗುವ ಈ ಚಿತ್ರ ಥ್ರಿಲ್ಲರ್ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಐ ರೋಬೋಟ್, ನೋಯಿಂಗ್ ಚಿತ್ರಗಳ ನಿರ್ದೇಶಕ ಅಲೆಕ್ಸ್ ಪ್ರೋಯಾಸ್ ನಿರ್ದೇಶನದ ಈ ಚಿತ್ರ 1998 ರಲ್ಲಿ ತೆರೆಗೆ ಬಂದಿತು. ಒಂದು ಘಂಟೆ ನಲವತ್ತು ನಿಮಿಷಗಳ ಅವಧಿಯ ಈ ಚಿತ್ರ ನೋಡುತ್ತಾ ನೋಡುತ್ತಾ ನಮ್ಮಲ್ಲೂ ನಮ್ಮ ಅಸ್ತಿತ್ವದ ಬಗ್ಗೆ ಕೆಲವು ಪ್ರಶ್ನೆಗಳನ್ನೂ ಹುಟ್ಟುಹಾಕುತ್ತದೆ. ಕಣ್ಣಿಗೆ ಕಂಡದ್ದೆಲ್ಲಾ ಸತ್ಯವಲ್ಲಾ, ಹಾಗಂತ ಸುಳ್ಳೂ ಅಲ್ಲ ಎನ್ನುವುದು ಕಾಲ್ಪನಿಕ ನೆಲೆಗಟ್ಟಿನ ಮೇಲೆ ನಿರೂಪಿಸಿರುವುದು,  ಮತ್ತು ಆ ಪ್ರಯತ್ನದಲ್ಲಿ ಎಲ್ಲ ರೀತಿಯ ಮನರಂಜನೀಯ ಅಂಶಗಳನ್ನೂ ತುಂಬಿರುವುದು ಚಿತ್ರವನ್ನೂ ಬೋರಾಗದಂತೆ ಮಾಡಿದೆ. ಈ
ಸೈ-ಫೈ ಚಿತ್ರವನ್ನು ಈಗಾಗಲೇ ನೋಡಿರದಿದ್ದರೆ  ಸಿನೆಮಾವನ್ನೊಮ್ಮೆ ನೋಡಬಹುದು. ಸಿನಿಮಾದ ಹೆಸರು ಡಾರ್ಕ್ ಸಿಟಿ..

Saturday, December 1, 2012

ಎರಡು ಕವನಗಳು....

 ನನ್ನ ಪೇಂಟಿಂಗ್....
ಕೆಟ್ಟ ಸಮಯವಿದು...
1.
ಕಳೆಯೋಣ
ಈ ಸಮಯವನು

ತಲೆಯೆತ್ತಿದರೆ ಗ್ರಹಣ
ಹಿಡಿ ಅನ್ನ  ಮಣ್ಣು
ಕಣ್ಣ  ತುಂಬದ ನಿದಿರೆ
ಸೋಲು ಸೋಲೇ ಉಸಿರು.

ಹಾದು ಹೋಗಲಿ ಹೀಗೆ
ತಪ್ಪಿಸುವ ಮಾತೇಕೆ?

2.
 ಕಾಯೋಣ
ಆ ಕಾಲವನು

ಬದುಕು ಬೆಳದಿಂಗಳು
ಭರ್ತಿ ತೃಪ್ತಿಯ ಉದರ
ಸಂತೆಯಲು ನಿದ್ರೆ
ಕೈತಾಕಿದ್ದು ಚಿನ್ನ.

ಕಾಲ ಬರಲೇ ಬೇಕು ..
ಕಳೆದರೆ ರಾತ್ರಿ
ಉಳಿದದ್ದು ಹಗಲೇ ತಾನೇ..?

2. ಸೋತಿದ್ದೇನೆ..ಗೆಲ್ಲಲು ಬೇಕಿದೆ ಕನಸು...

ಒದ್ದಾಡುತ್ತಿದ್ದೇನೆ
ಮಗ್ಗುಲು ಬದಲಿಸುತ್ತಾ
ಕಣ್ಣರೆಪ್ಪೆ ಅದುಮುತ್ತಾ
ನೂರು ಸೋಲುಗಳನ್ನು ಪಕ್ಕಕ್ಕಿರಿಸಿ,
ಸುಡುಚಿಂತೆಗಳಿಗೆ ತಣ್ಣೀರೆರೆಚಿ,
ಇತಿಹಾಸವನ್ನು ಮೆದುಳಿ೦ದ ಅಳಿಸಿ
ನನ್ನ ನಾ ಮರೆಯುವ ಯತ್ನಗಳಿಂದ
ಸೋತು ಸೋತು ಮತ್ತೆ ಸೋತು
ಮಲಗಿದ್ದೇನೆ ನಿದ್ರೆ ಬಾರದೆ..!
****
ಬಾರದ ಪ್ರಿಯತಮೆಗಾಗಿ ಕಾದಿದ್ದೆ.
ಒಡನಾಡಿದ ನೆನಪುಗಳು ನನ್ನನ್ನುಳಿಸಿದ್ದವು
ಬೇಸರಿಸದಂತೆ ಬಸವಳಿಯದಂತೆ
ಸೋತು ಸಾಯದಂತೆ
ಮುಖ ತಿರುಗಿಸಿದವಳಿಗೆರೆಡು ಅಕ್ಷತೆ ಹಾಕಿ ಬಂದೆ
ಮತ್ತೆ ಕಾಯಲು ಹೋಗಲಿಲ್ಲ.

. ಬಾರದ ಮಳೆಗಾಗಿ ಕಾದಿದ್ದೆ. 
ಮಳೆ ಬಂದಂತೆ ಬೆಳೆ ಬೆಳೆದಂತೆ
ಬದುಕು  ಹಸನಾದಂತೆ...
ಹಗಲುಗನಸುಗಳೆನ್ನ  ಕಾದಿದ್ದವು
ಜಿಗುಪ್ಸೆಯಿಂದ ,ಹಸಿವಿಂದ
ಆತ್ಮಹತ್ಯಯಂತಹ ಪಾಪದಿಂದ

ಮಳೆಬರಲಿಲ್ಲ.
ರೂಢಿ ಬದುಕಾಗಿ ,
ಬದುಕು ರೂಢಿಯಾಗಿ ನಾನೀಗ ಮಳೆಗೆ ಕಾಯುತ್ತಿಲ್ಲ.
***
ಈಗ
ಬಾರದ ನಿದ್ರೆಗಾಗಿ ಕಾಯುತ್ತಿದ್ದೇನೆ
ನಿದ್ರೆ ಬಾರದೆ,ಕಣ್ಣು ಮುಚ್ಚದೆ
ಬೀಳದ ಕನಸುಗಳನ್ನ ಶಪಿಸುತ್ತಾ
ಕತ್ತಲಿದೆ, ಮಂಚವಿದೆ,
ಬದುಕು ನಿರ್ವರ್ಣ..

ನಿದ್ರೆಯಿಲ್ಲದೆ, ಕನಸಿಲ್ಲದೆ,
ನಾಳೆಗಳೆಲ್ಲವೂ ಶೂನ್ಯ...!!!

*****

ನನ್ನ ಹಳೆಯ ಡೈರಿಯಲ್ಲಿದ್ದ ಕವನಗಳಿವು. ಬೆಂಗಳೂರಿಗೂ  ಬರುವ ಮುಂಚಿನ ದಿನಗಳ ನನ್ನ ಪರಿಸ್ಥಿತಿಯನ್ನು ವ್ಯಕ್ತಪಡಿಸುತ್ತವೆ  . ಆಶ್ಚರ್ಯದ ಸಂಗತಿಯೆಂದರೆ ಈವತ್ತಿಗೂ ನನಗದು ಸೂಕ್ತ ಅನಿಸುತ್ತದೆ... ಇರಲಿ ನನಗೆ ಕವನವನ್ನು ಓದುವುದು ಇಷ್ಟ. ಬರೆಯುವುದೆಂದರೆ ಕಷ್ಟ . ಎಷ್ಟೋ ತಲೆಗೆ ಬಂದದ್ದನ್ನು ಗೀಚಿ ಆಮೇಲೆ ಹರಿದುಹಾಕಿದ್ದೇನೆ . ಈ ಎರಡು ಕವನಗಳೂ  ಅಷ್ಟೇ ಹತಾಶ ಮನೋಭಾವದಿಂದ ನಾನು ಹೊರಬರಲು ನನಗಾಗೆ ಬರೆದುಕೊಂಡದ್ದು .

Monday, November 26, 2012

ಡ್ರಾಮಾ:ಚಿತ್ರ ವಿಮರ್ಶೆ.

ಡ್ರಾಮಾ ಚಿತ್ರ ಬಂದಿದೆ.ನಿರ್ದೇಶಕ ಯೋಗರಾಜ್ ಭಟ್, ಅವರ ಹಿಂದಿನ ಚಿತ್ರಗಳು, ನಿರೀಕ್ಷೆಗಳನ್ನು ಬಿಟ್ಟು ಸುಮ್ಮನೆ ಕನ್ನಡ ಪ್ರೇಕ್ಷಕನಾಗಿ [ಅದು ಅತ್ಯವಶ್ಯ-ಯಾಕೆಂದರೆ ಭಟ್ಟರ ಸಿನೆಮಾದಲ್ಲಿ ಮಾತೆ ಬಂಡವಾಳ] ಸಿನಿಮಾಮಂದಿರದ ಒಳಹೊಕ್ಕರೆ ನಮಗೆ ಕಾಣಸಿಗುವುದು ಏನು ಎಂಬುದನ್ನು ಗಮನಿಸೋಣ. ಚಿತ್ರದ ಪ್ರಾರಂಭ ಅಂದರೆ ಟೈಟಲ್ ಕಾರ್ಡ್ ನಿಂದ ಹಿಡಿದು ಕೊನೆಯವರೆಗೆ ನಿರ್ದೇಶಕರು ಆಸಕ್ತಿ ವಹಿಸಿರುವುದು ಕಾಣಸಿಗುತ್ತದೆ. ಚಿತ್ರದಲ್ಲಿ ಇಬ್ಬರು ನಾಯಕರೂ ಮಹಾನ್ ತರಲೆಗಳು. ಉಡಾಫೆ ಮನೋಭಾವದವರು. ಪಿಯುಸಿಯಲ್ಲಿ ಆರು ಸಲ ಡುಮ್ಕಿ ಹೊಡೆದಿದ್ದಾರೆ. ಹಳ್ಳಿಯಲ್ಲಿ ಏನೆಲ್ಲಾ ತರಲೆ ಮಾಡಬಹುದೋ ಅಷ್ಟನ್ನು ಮಾಡಿಕೊಂಡಿದ್ದಾರೆ. ಅಲ್ಲಿಗೆ ಅಚಾನಕ್ಕಾಗಿ ಬರುವ ನಾಯಕಿ ಹುಡುಗರನ್ನು ನೋಡಿ ಕಬಡ್ಡಿ ಆಡಲು ಆಹ್ವಾನಿಸಿ, ಅದೇ ದೃಶ್ಯದಲ್ಲೇ ನಾಯಕನ ಮನಗೆದ್ದು 'ನಾನು ಬೇಕಿದ್ದರೆ ನನ್ನ ಹಿಂದೆ ಬಾ' ಎನ್ನುತ್ತಾಳೆ. ಇವನು ಗೆಳೆಯನನ್ನೂ ಕರೆದುಕೊಂಡು ಅಲ್ಲಿಂದ ಹೊರಟುಬಿಡುತ್ತಾನೆ. ಕಾಲೇಜು, ವಿಚಿತ್ರ ಪ್ರಾಂಶುಪಾಲರು, ಹುಡುಗ-ಹುಡುಗಿಯರ ಹಾಸ್ಟೆಲ್ಲು ಇದೆಲ್ಲದರ ಜೊತೆಗೆ ನಾಯಕಿಯ ತಂದೆ ಭೂಗತ ಜಗತ್ತಿನ ನಾಯಕ ಇಷ್ಟೆಲ್ಲಾ ಇದ್ದಮೇಲೆ ಒಂದು ಸಿನೆಮಾದ ಕಂಪ್ಲೀಟ್ ಪ್ಯಾಕೇಜ್ ರೆಡಿ ತಾನೇ? ಹೊಡೆದಾಟ, ಹಾಸ್ಯ, ಹಾಡುಗಳು ಕೊಲೆ ಸೆಂಟಿಮೆಂಟ್ ಎಲ್ಲದಕ್ಕೂ ಇಲ್ಲಿ ಸಾಕಷ್ಟು ಅವಕಾಶವಿದೆ. ಅದನ್ನೆಲ್ಲಾ ನಿರ್ದೇಶಕರು ಸಾಕಷ್ಟು ಸದುಪಯೋಗ ಪಡಿಸಿಕೊಂಡಿದ್ದಾರೆ ಎನ್ನಬಹುದು. ಹುಡುಗಿಯ ಮುತ್ತಿಗಾಗಿ, ಆ ಮೂಲಕ ಪ್ರೀತಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಾಗುವ ನಾಯಕ ಆ ಒಂದು ಘನಕಾರ್ಯದಿಂದಾಗಿ ಬಹುದೊಡ್ಡ ಸಮಸ್ಯೆಯೊಂದಕ್ಕೆ ಸಿಲುಕಿಕೊಳ್ಳುತ್ತಾನೆ. ಆದರೆ ಪ್ರೇಕ್ಷಕನಿಗೆ ಅಚ್ಚರಿಯಾಗುವಂತೆ ಬಹುಬೇಗ ಅದರಿಂದ ಹೊರಬಂದು ಮತ್ತೊಂದು ಸಮಸ್ಯೆಯಲ್ಲದ ಸಮಸ್ಯೆಗೆ ಸಿಲುಕಿಕೊಂಡ ನೆಪಹೇಳಿ ನಾಯಕಿಯೊಂದಿಗೆ ಗೆಳೆಯನನ್ನೂ ಆಕೆಯ ಗೆಳತಿಯನ್ನೂ ಕರೆದುಕೊಂಡು ಸಮುದ್ರ ತೀರಕ್ಕೆ ಹೋಗಿ ಹಾಡಿ ಕುಣಿದು ಅಲ್ಲೇ ಗೆಳೆಯನಿಗೆ ಬುದ್ಧಿಬರುವಂತೆ ಮಾಡಿ ಕ್ಲೈಮ್ಯಾಕ್ಸ್ ಕೂಡ ಮುಗಿಸುತ್ತಾನೆ. 
ಡ್ರಾಮಾ ಚಿತ್ರದಲ್ಲಿ ಕಥೆಯ ಎಳೆಯಷ್ಟೇ  ಇಲ್ಲ, ಗಟ್ಟಿಯಾದ ಹಲವಾರು ಕವಲುಗಳುಲ್ಲ ಕಥೆಯೇ ಇದೆ.ಅಲ್ಲಲ್ಲಿ  ಅಥವಾ ಅಗತ್ಯಕ್ಕಿಂತ ಹೆಚ್ಚಾಗಿಯೇ ಪಂಚಿಂಗ್ ಇರುವ ಸಂಭಾಷಣೆಗಳಿವೆ. ಚಂದನೆಯ, ಮಜಾ ಕೊಡುವ ಹಾಡುಗಳಿವೆ. ಕಚಗುಳಿಯಿಕ್ಕುವ ಹಾಸ್ಯದ ಸನ್ನಿವೇಶಗಳಿವೆ. ಆದರೆ ಬರೀ ಕಥೆಯಿದ್ದ ಮಾತ್ರಕ್ಕೆ ಅದು ಎಲ್ಲರಿಗೂ ಆಪ್ತವಾಗಬೇಕೆಂದೇನೂ ಇಲ್ಲವಲ್ಲ. ಇಲ್ಲೂ ಅದೇ ಆಗಿದೆ. ಇಬ್ಬರ ನಾಯಕರ ಉಡಾಫೆ ಕೊನೆಯವರೆಗೂ ಎಲ್ಲೂ ಒಂದು ತೂಕಕ್ಕೆ ಬರುವುದೇ ಇಲ್ಲ. ಪ್ರತಿ ಮಾತಿನಲ್ಲೂ ಉಡಾಫೆ ಮಾಡುತ್ತಾ , ಏನೇನೋ ಮಾಡುತ್ತಾ ಕಾಲ ಕಳೆಯುವವರು ಗಂಭೀರವಾದಾಗಲೂ  ಪ್ರೇಕ್ಷಕ ಮಾತ್ರ ಅನುಮಾನದಿಂದಲೇ ನೋಡುತ್ತಾನೆ. ಅಲ್ಲಿನ ಪಾತ್ರಗಳು ಅಳುವಾಗಲೂ, ಗಂಭೀರವಾಗಿ ಮಾತನಾಡುವಾಗಲೂ ನಮ್ಮದು ಅದೇ ನಿರೀಕ್ಷೆ. ಇಲ್ಲೇನಾದರೂ ಪಂಚಿಂಗ್ ಡೈಲಾಗ್ ಹೊಡಿಯಬಹುದಾ..? ಎಂಬುದು. ಅದಕ್ಕೆ ಕಾರಣ ನಿರ್ದೇಶಕರು. ನಮ್ಮನ್ನು ಅವರು ಹಾಗೆ ಮಾಡಿಬಿಟ್ಟಿದ್ದಾರೆ.  ಹಾಗಾಗಿಯೇ ಕೆಲವೊಂದು ಸನ್ನಿವೇಶಗಳು ಚೆನ್ನಾಗಿವೆಯಾದರೂ ತೀರ ಮನಸ್ಸಿಗೆ ತಟ್ಟುವುದಿಲ್ಲ. ಮಗಳು ಸುಖವಾಗಿರಲಿ ಎಂದು ಕೊನೆಯಲ್ಲಿ ತನ್ನನ್ನು ಕೊಂದುಕೊಂಡು  , ಎದುರಾಳಿಗಳನ್ನೂ ಸಾಯಿಸುವ ನಾಯಕಿಯ ಅಪ್ಪ ಗ್ರೇಟ್ ಎನಿಸುವುದಿಲ್ಲ. ಬಿಟ್ಟುಹೋದ ಹೆಂಡತಿಗಾಗಿ, ನೋಡೇ ಇರದ ಮಗಳಿಗೆ ಪರಿತಪಿಸುವ, ಕನ್ನಡದಲ್ಲೇ ಮಾತಾಡುವ ಪ್ರಾಂಶುಪಾಲ ಹುಚ್ಚನಂತೆ, ತಿಕ್ಕಲುನಂತೆ ಭಾಸವಾಗುವುದಕ್ಕೆ ಕಾರಣ ನಿರ್ದೇಶಕರೇ...ಇಲ್ಲಿನ ನಾಯಕಿ ತುಂಟಿಯಾ? ತಂದೆತಾಯಿ ಪ್ರೀತಿಯಿಂದ ವಂಚಿತ ಹುಡುಗಿಯಾ...? ಫ್ಲರ್ಟ್ ?.ಅಥವಾ ಈ ಎಲ್ಲವನ್ನೂ ಹೊಂದಿರುವ ಹೆಣ್ಣಾ ಎಂಬುದು ನಮಗೆ ಸ್ಪಷ್ಟವಾಗುವುದಿಲ್ಲ.
ಹಾಗಂತ ಡ್ರಾಮಾ ಕೆಟ್ಟ ಚಿತ್ರವಲ್ಲ. ನಾವು  ಅಂದರೆ ಪ್ರೇಕ್ಷಕರು ಇನ್ನೂ ಹೆಚ್ಚು ನಿರೀಕ್ಷಿಸುವುದಕ್ಕೆ ಕಾರಣವಿದೆ. ಅದೆಂದರೆ ನಿರ್ದೇಶಕ ಯೋಗರಾಜ್ ಭಟ್. ಅದ್ಯಾರೋ ಬೇರೆ ನಿರ್ದೇಶಕರು ಮಾಡಿದ್ದರೆ ಪರವಾಗಿಲ್ಲ ಎಂದು ಸುಮ್ಮನಿದ್ದುಬಿಡಬಹುದಿತ್ತು. ಆದರೆ ಮುಂಗಾರುಮಳೆಯ ನಂತರದ ಭಟ್ ಸಿನಿಮಾಗಳಿಗೆ  ಈಗಾಗಲೇ ಮೂರುಮೂರು ಸಾರಿ ಹಾಗೆ ಹೇಳಿ ಆಗಿದೆ. ಈ ಚಿತ್ರದಲ್ಲಿ ಏನೋ ಮಾಡುತ್ತಾರೆ ಎಂದು ಕಾದದ್ದೂ ಆಗಿದೆ. ಅದೂ ಭಟ್ಟರೇ ಕೊಟ್ಟಂತಹ ಭರವಸೆ. ಆದರೆ ಎರಡು ಉಡಾಫೆ ಹುಡುಗರ ಸರಳ ಕಥೆಯನ್ನೂ ನಿರೂಪಿಸುವುದಕ್ಕೆ ಭಟ್ ಬೇಕಾ..? ಚಿತ್ರದ ಎಲ್ಲಾ ಪಾತ್ರಗಳೂ ಅದೇ ಉಡಾಫೆಯಿಂದ ಮಾತಾಡಲೇ ಬೇಕಾ..? ಇವೆಲ್ಲಕ್ಕೂ ಭಟ್ರೇ ಉತ್ತರ ಹೇಳಬೇಕು. ಆಯಾ ದೃಶ್ಯಕ್ಕೆ ನಗೆತರಿಸಲು ಎಷ್ಟು ಬೇಕೋ ಅಷ್ಟನ್ನೇ ಮಾಡಿರುವ ಭಟ್ಟರು ಅದರಿಂದಾಚೆಗೆ ಯೋಚಿಸಿಲ್ಲವೇನೋ..? ಹಾಗಾಗಿಯೇ ಕೆಲವು ಪಾತ್ರಗಳು ಪೇಲವ ಎನಿಸುತ್ತವೆ. ಎಲ್ಲೋ ಬಂದು ಹೇಗೋ ಆಡಿ ಹೊರಟುಹೋಗುತ್ತವೆ. ದ್ವಿತೀಯ ನಾಯಕನ ನಾಯಕಿ ಮೂಕಿಯ ಪಾತ್ರವೂ ಅಷ್ಟೇ. ಅವರ ಪ್ರೀತಿಯೂ ಅಷ್ಟೇ. ಕಾಡುವುದಿಲ್ಲ.ಹಾಗೆ ನಾಯಕಿ ರಾಧಿಕಾಪಂಡಿತ್  ಪಾತ್ರವೇ ಜಾಳುಜಾಳಾದ್ದರಿಂದ ಅವರ ಪ್ರೀತಿ ಅಷ್ಟೊಂದು ಗಾಢ ಎನಿಸುವುದಿಲ್ಲ.
ಸಿನಿಮಾ ನೋಡಿದ ಮೇಲೆ ನನಗನಿಸಿದ್ದು ಈ ಅಂಶಗಳು. ಅತೀ ಹೆಚ್ಚು ನಿರೀಕ್ಷೆಯಲ್ಲಿದ್ದುದರಿಂದ ನನಗೆ ಹೀಗನ್ನಿಸಿತಾ..? ನಾನೇ ಪೂರ್ವಗ್ರಹ ಪೀಡಿತನಾಗಿದ್ದೆನಾ ..?ಎಂದು ನನ್ನನ್ನೇ ಹಲವಾರು ಸಾರಿ ಕೇಳಿಕೊಂಡೆ. ಆಮೇಲೆ ಚಿತ್ರ ಮುಗಿಸಿ ಹೊರಬಂದ ಮೂರ್ನಾಲ್ಕು ಅಪರಿಚಿತರಲ್ಲಿ  ಸುಮ್ಮನೆ ಸಿನಿಮಾದ ಬಗ್ಗೆ ವಿಚಾರಿಸಿದೆ. ಯಾರಲ್ಲೂ ಅದೊಂದು ತೃಪ್ತಿಯ ಭಾವ ಇರಲಿಲ್ಲ. ಇನ್ನೂ ಏನೋ  ಇರಬೇಕಿತ್ತು..ಇನ್ನೇನೋ ಕಡಿಮೆಯಾಗಿದೆ ಎನ್ನುವ ಭಾವವೇ ಅವರಲ್ಲೂ ಇದ್ದದ್ದರಿಂದ ನನ್ನ ಅನಿಸಿಕೆಯೂ ಸರಿ ಎನಿಸಿತ್ತು.
ಭಟ್ರ  ಹಿಂದಿನ ಸಿನೆಮಾಗಳಲ್ಲಿ ಕಥೆ ಇರಲಿಲ್ಲವೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನನ್ನ ಮುಂದಿನ ಚಿತ್ರದಲ್ಲಿ ಕಥೆಯಿಟ್ಟುಕೊಂಡೆ ಸಿನೆಮಾ ಮಾಡುತ್ತೇನೆಂದು ಭಟ್ ಭರವಸೆ ನೀಡಿದ್ದರು. ಮತ್ತದನ್ನು ಈಗ ಉಳಿಸಿಕೊಂಡಿದ್ದಾರೆ. ಈಗಲೂ ಅಷ್ಟೇ! ಇನ್ನೂ ಏನೇನು ಕೊರತೆ ಇದೆ ಎಂಬುದನ್ನು ಪಟ್ಟಿಮಾಡಿ ಭಟ್ಟರ ಮುಂದಿಟ್ಟರೆ ಮುಂದಿನ ಚಿತ್ರದಲ್ಲಿ ಆ ಎಲ್ಲ ಕೊರತೆ ನೀಗಿಸುತ್ತಾರೆಂಬ ತುಂಬು ಭರವಸೆಯಿಟ್ಟುಕೊಂಡು ನನ್ನ ಚಿತ್ರಾವಲೋಕನಕ್ಕೆ  ಪೂರ್ಣವಿರಾಮ ಇಡುತ್ತಿದ್ದೇನೆ.
[ಈ ಎಲ್ಲಾ ಅಭಿಪ್ರಾಯಗಳೂ ನನ್ನ ವೈಯಕ್ತಿಕವಾದವುಗಳಾಗಿವೆ. ನಾನೊಬ್ಬ ಪಕ್ಕಾ ಪ್ರೇಕ್ಷಕನಾಗಿ ಅನಿಸಿದ್ದನ್ನು ಅನಿಸಿದ ಹಾಗೆ ಬರೆದುಕೊಂಡಿದ್ದಾಗಿದೆ..]


Wednesday, November 21, 2012

ಯೋಗರಾಜ್ ಭಟ್ ರ ಡ್ರಾಮಾ ...

 ಯೋಗರಾಜ್ ಭಟ್ ನಿರ್ದೇಶನದ ಡ್ರಾಮಾ ಈ ವಾರ ತೆರೆಕಾಣುತ್ತಿದೆ. ಭಟ್ಟರು ಈಗೇನು ಮಾಡಿರಬಹುದು ಅಥವಾ ಇದನ್ನು ಎಷ್ಟು ಚೆನ್ನಾಗಿ ಮಾಡಿರಬಹುದು ಎನ್ನುವ ಕುತೂಹಲವಿದೆ. ಮುಂಗಾರುಮಳೆಯ ಪ್ರತಿಯೊಂದು ಅಂಶವು ಒಬ್ಬ ಚಿತ್ರಕರ್ಮಿಗೆ ಅದ್ಯಯನಕ್ಕೆ ಅರ್ಹವಾದದ್ದು. ಮೇಲ್ನೋಟಕ್ಕೆ ಆ ಸಿನಿಮಾದಲ್ಲಿ ಏನಿದೆ ಎನಿಸಿದರೂ ಸುಮ್ಮನೆ ಚಿತ್ರಕಥೆಯ ತಿರುವುಗಳನ್ನು ಗಮನಿಸುತ್ತಾ ಹೋದಂತೆ ಅದರ ವಿಶೇಷತೆ ನಮಗೆ ಗೊತ್ತಾಗುತ್ತದೆ. ಮೊದಲ  ನೋಟಕ್ಕೆ ತೀರ ಸಾದಾರಣ ಎನಿಸುವ ಮುಂಗಾರುಮಳೆಯ ಚಿತ್ರಕಥೆ ನಿಜಕ್ಕೂ ಅನಿರೀಕ್ಷಿತ ತಿರುವುಗಳನ್ನು ಒಳಗೊಂಡಿದೆ . ಸುಮ್ಮನೆ ಗಮನಿಸಿ. ನೋಡಿದ ಕೂಡಲೇ ನಾಯಕಿಗೆ ಮನಸೋಲುವ ನಾಯಕ ಶತಾಯಗತಾಯ ಆಕೆಯನ್ನು ಪ್ರೀತಿಸಿ ಮದುವೆಯಾಗಲೇಬೇಕು ಎಂಬ ನಿರ್ಧಾರಕೆ ಬಂದು ಬಿಡುತ್ತಾನೆ. ಆಕೆಯ ಹಿಂದೆ ಬೀಳುತ್ತಾನೆ. ಆದರೆ ಆಕೆಗೆ ಮದುವೆ ನಿಶ್ಚಿತಾರ್ಥವಾಗಿರುತ್ತದೆ.ಇದು ಮೊದಲ ತಿರುವು. ಅದು ಗೊತ್ತಾಗುತ್ತಿದ್ದಂತೆಯೇ ನಾಯಕ ಆಕೆಯ ಸಹವಾಸವೇ ಬೇಡ ಎಂದು ಹಿಂದಿರುಗಿ ಹೊರಟು ಬಿಡುತ್ತಾನೆ . ಆದರೆ ನಾಯಕಿ ತಮಾಷೆಗೆ ಕಿಚಾಯಿಸುತ್ತಾಳೆ, ಆತ ವಾಪಸ್ಸು ಬರುತ್ತಾನೆ . ಅದು ಎರಡನೇ ತಿರುವು. ಹಿಂದೆ ಬಂದವ ಆಕೆಯ ಹಿಂದೆ ಬಿದ್ದು ಬಿದ್ದು ರೋಸಿಹೋಗಿ ಆಕೆಯ/ಪ್ರೀತಿಯ  ಸಹವಾಸ ಬೇಡ ಎಂದು ಆಕೆಯನ್ನು ಬಿಡಲು ತಯಾರಾಗುತ್ತಾನೆ . ಆದರೆ ಅಷ್ಟರಲ್ಲಿ ಆಕೆಯೇ ಅವನಿಗೆ ಮನಸೋತಿರುತ್ತಾಳೆ. ಇದು ಮೂರನೆಯ ತಿರುವು. ಇಬ್ಬರ ಪ್ರೀತಿಯೂ ಒಂದಾಗಿ ಮದುವೆಯಾಗಬೇಕೆಂದು ನಿರ್ಧರಿಸಿದಾಗ ಆತ ಪರಿಸ್ಥಿತಿಯ ಒತ್ತಡಕ್ಕೆ ಮಣಿದು  ಬದಲಾಗುತ್ತಾನೆ. ಉಲ್ಟಾ ಹೊಡೆಯುತ್ತಾನೆ. ಇದು ಮತ್ತೊಂದು ತಿರುವು. ಹೀಗೆ ಇಡೀ ಚಿತ್ರವೇ ಗಿರಕಿ ಹೊಡೆಯುತ್ತಾ ಸಾಗುತ್ತದೆ. ಏನೋ ಆಗುವುದೆಂದು ಊಹಿಸಿದರೆ  ಇನ್ನೇನೋ ಆಗುತ್ತದೆ. ಯಾವುದೂ ಬೇಕು ಎಂದಾಗ ಸಿಗುವುದಿಲ್ಲ. ಸಿಕ್ಕಾಗ ಅದರ ಬಗ್ಗೆ ಒಲವಿರುವುದಿಲ್ಲ ಅಥವಾ ಅದು ಬೇಕಿರುವುದಿಲ್ಲ ಎಂಬ ಸಿದ್ಧಾಂತ ಚಿತ್ರಕ್ಕೆ ಚೆನ್ನಾಗಿ ಒಪ್ಪುತ್ತದೆ. ನಾನು ಮೊದಲಿಗೆ ಸಿನೆಮಾ ನೋಡಿದ ಮೇಲೆ ಸುಮ್ಮನೆ ಅದನ್ನೇ ಮೆಲುಕು ಹಾಕುತ್ತಿದ್ದಾಗ ಅದರ ಮಧ್ಯಂತರ ಎಲ್ಲಿ ಎಂಬುದೇ ಮರೆತುಹೋಗಿತ್ತು. ಅಷ್ಟರ ಮಟ್ಟಿಗೆ ಭಟ್ಟರ ತಂಡ ಪ್ರೇಕ್ಷಕನನ್ನು ಹಿಡಿದುಕೂರಿಸಿದ್ದಂತೂ ನಿಜ. 
 ಆದರೆ ಆಮೇಲಿನ ಭಟ್ಟರ ಚಿತ್ರಗಳು ಅದೇಕೋ ಅಷ್ಟು ರುಚಿಸಲಿಲ್ಲ. ಪುನರಾವರ್ತನೆ ಎನಿಸಿತು. ದೃಶ್ಯ ವೈಭವ, ಸಂಗೀತ, ಸಾಹಿತ್ಯ, ಸಂಭಾಷಣೆ ಹೀಗೆ ಪ್ರತಿ ಕ್ಷೇತ್ರದಲ್ಲೂ ದಕ್ಷತೆ ಮೆರೆದಿದ್ದ ಮುಂಗಾರುಮಳೆಯ ನಂತರದ ಚಿತ್ರಗಳು ಬರೀ ಸಂಭಾಷಣೆ-ಹಾಡುಗಳಷ್ಟೇ ಚಂದ ಎನಿಸುವಂತಾಗಿತ್ತು.
ಚಿತ್ರದಿಂದ  ಚಿತ್ರಕ್ಕೆ ಬೆಳೆಯುತ್ತಾ ಭಟ್ಟರು ಎಲ್ಲೋ ಸಾಗಿಹೋಗಬಹುದಿತ್ತೇನೋ ಎನಿಸುತ್ತದೆ. ಬಾಲಿವುಡ್ನಲ್ಲಿ ತಮಿಳರು ಮಾಡಿದ್ದನ್ನು ನಮ್ಮಲ್ಲಿನ ಶ್ರೇಷ್ಠ ನಿರ್ದೇಶಕರೇಕೆ ಮಾಡುವುದಿಲ್ಲ ಎಂಬ ಪ್ರಶ್ನೆ ಕಾಡುತ್ತದೆ.. ಉದಾಹರಣೆಗೆ ಮುರುಗದಾಸ್ ದೀನ ಚಿತ್ರದಿಂದ ತಮ್ಮ ಪಯಣ ಪ್ರಾರಂಭಿಸಿ ಈವತ್ತಿನ ತುಪಾಕಿಯವರೆಗೆ ಅವರ ಬೆಳವಣಿಗೆ ಏರುಮುಖವಾಗಿಯೇ ಇದೆ. ತುಪಾಕಿ ಈಗ ಹಿಂದಿಗೆ ರಿಮೇಕ್ ಆಗುತ್ತಿದೆ . ಹಾಗೆ ಶಂಕರ್ ಕೂಡ. ಆದರೆ ನಮ್ಮಲ್ಲಿ ಅದೇಕೆ ಅದಾಗುತ್ತಿಲ್ಲ. ಮುಂಗಾರುಮಳೆಯ ನಂತರ ಭಟ್ ಚಿತ್ರಗಳೇಕೆ ಯಾವರೀತಿಯಲ್ಲೂ ಅದಕ್ಕಿಂತ ಮುಂದಾಗಲಿಲ್ಲವಲ್ಲ ಎಂಬ ಪ್ರಶ್ನೆ ಕಾಡುತ್ತದೆ. ಚಿತ್ರದಿಂದ ಚಿತ್ರಕ್ಕೆ ಮಾರುಕಟ್ಟೆಯನ್ನೂ, ತಮ್ಮದೇ ಚಾಪನ್ನೂ ಹೆಚ್ಚಿಸಿಕೊಳ್ಳುವ ತಮಿಳರ ಛಾತಿ ನಮಗೇಕೆ ಬರುವುದಿಲ್ಲ. ಬಹುತೇಕ  ಹೊಸತನ, ಹೊಸ ಪ್ರಯೋಗಗಳು ನಮ್ಮಲ್ಲೇ ಮೊದಲು ಮೊಳಕೆ ಹೊಡೆದರೂ ನಾವೇಕೆ ನಮ್ಮ ಚಿತ್ರರಂಗದಿಂದಾಚೆಗೆ ನಮ್ಮ ಹೆಜ್ಜೆ ಇಡಲು ಸಾಧ್ಯವಾಗಿಲ್ಲ ಎನಿಸುತ್ತದೆ.ಬರೀ ರೀಮೇಕ್ ಮಾಡಿಕೊಂಡಿ ಹಿಂದಿಯಲ್ಲಿ ನೆಲೆಕಂಡುಕೊಂಡ ಪ್ರಿಯದರ್ಶನ್, ಪ್ರಭುದೇವ  ತಮ್ಮದೇ ಸಿನಿಮಾಗಳನ್ನು ಮತ್ತೊಮ್ಮೆ ನಿರ್ದೇಶಿಸಿ ಹೆಸರುಗಳಿಸಿದ ಶಂಕರ್, ಮುರುಗದಾಸ್, ಅಮೀರ್ ಮುಂತಾದವರನ್ನು ನೋಡಿದಾಗ ನಮ್ಮಲ್ಲಿನ ಟಾಪ್ ನಿರ್ದೇಶಕರೇಕೆ ಅಲ್ಲಿ ಬರೀ ಹೆಜ್ಜೆ ಇಡಲೂ  ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ಕಾಡುತ್ತದೆ.
ನನ್ನ  ಮೆಚ್ಚಿನ ನಿರ್ದೇಶಕ ಯೋಗರಾಜ್ ಭಟ್ ರಿಗೆ ಈವತ್ತು ಎಲ್ಲವೂ ಅವರ ಕೈಯಲ್ಲಿದೆ. ಅವರ ಸಿನೆಮಾಕ್ಕೆ ಬೇಕಾದ ಹೀರೋ, ತಂತ್ರಜ್ಞರನ್ನು  ಕೊಡುವ ನಿರ್ಮಾಪಕರಿದ್ದಾರೆ. ಅದೆಲ್ಲವನ್ನೂ ತಮ್ಮ ಅನುಭವ, ಬುದ್ದಿವಂತಿಕೆಯ ಜೊತೆ ಬೆರೆಸಿ ಇಡೀ ಭಾರತವೇ ತಿರುಗಿನೋಡುವಂತಹ  ಚಿತ್ರ ನೀಡಲಿ, ಮತ್ತು ನಮ್ಮದೂ ಚಿತ್ರರಂಗ ಸಮರ್ಥವಾಗಿದೆ ಎಂಬುದನ್ನು ಭಟ್ ತರಹದ ನಿರ್ದೇಶಕರು ಪರಭಾಷೆಯ ಚಿತ್ರರಂಗಕ್ಕೆ ತೋರಿಸಿಕೊಡಲಿ ಎಂಬುದು ನಮ್ಮಂತಹ ಬಹುತೇಕ ಅಭಿಮಾನಿಗಳ ಆಶಯ.
ಡ್ರಾಮಾವನ್ನ ಕಣ್ತುಂಬಿಕೊಳ್ಳಲು ಕ್ಷಣಗಣನೆ ಮಾಡುತ್ತಿದ್ದೇನೆ...

ಆತ ಹಂತಕ , ನಾನು ಚಿತ್ರಕಥೆಗಾರ-ಯಾಮಾರಿದರೆ ಕೊಲೆ.

ನಿಮಗೆ ಚೆಟ್ ಲೋಗನ್ ಬಗ್ಗೆ ಗೊತ್ತಿರಲಿಕ್ಕಿಲ್ಲ. ಭಯಾನಕ ಮನುಷ್ಯ ಅವನು . ತನ್ನ ದಾರಿಗೆ ಅಡ್ಡ ಬಂದರೆ ಯಾರನ್ನೂ ಸುಮ್ಮನೆ ಬಿಡುವುದಿಲ್ಲ . ಬೇರೆ ಮಾತೆ ಇಲ್ಲ . ಮುಗಿಸಿಬಿಡುವುದೇ.. ! ಕುಳಿತು ಮಾತಾಡುವುದು , ತರ್ಕದಿಂದ ವರ್ತಿಸುವುದು ಅದೆಲ್ಲಾ ಅವನ ಜಾಯಮಾನದಲ್ಲಿ ಇಲ್ಲವೇ ಇಲ್ಲ. ಅವನಿಗೆ ಗೊತ್ತಿರುವುದು ಒಂದೇ ಎದುರು ನಿಂತವರೆಲ್ಲಾ ಶತ್ರುಗಳು ಮತ್ತು ಅವರನ್ನು ಕೊಲ್ಲಲೇಬೇಕು.ಇಲ್ಲದಿದ್ದರೆ ನನಗೆ ಉಳಿಗಾಲವಿಲ್ಲ ಎಂಬುದು ಅವನ ಸಿದ್ಧಾಂತ. ಜೈಲಿನಿಂದ ತಪ್ಪಿಸಿಕೊಂಡವನು ಒಂದೇ ರಾತ್ರಿಯಲ್ಲಿ  ಆತ ಮಾಡಿದ ಕೊಲೆಗಳ ಸಂಖ್ಯೆ ಆರು. ಅದೂ ಬರ್ಬರವಾಗಿ. ಅವಳು..ಪಾಪಾ ಆ ಹುಡುಗಿಗೆ ಆತನ ಆಕ್ರಮಣ ಹೇಗಿತ್ತೆಂದರೆ ಅವಳ ತಲೆ  ಚೂರುಚೂರಾಗಿತ್ತು. ಇಡೀ ಮಿದುಳು ರಕ್ತ ಕೂದಲು ಎಲ್ಲವೂ ಮಿಕ್ಸಾಗಿದ್ದವು ಎಂದರೆ ಅದರ ಬರ್ಬರತೆಯನ್ನು ನೀವು ಊಹಿಸಬಹುದು. ಈಗ ಒಬ್ಬ ಪೋಲಿಸನನ್ನು ಕೂಡ ಕೊಲೆಮಾಡಿ ಅವನ ಟೋಪಿ ಮತ್ತು ಪಿಸ್ತೂಲ್  ಅನ್ನು ತನ್ನ ವಶಕ್ಕೆ ತೆಗೆದುಕೊಂಡು ಪರಾರಿಯಾಗಿದ್ದಾನೆ. ಅದೂ ಪೋಲಿಸ್ ವಾಹನದಲ್ಲೇ. ಈಗ ಇಡೀ ಪೋಲಿಸ್ ವ್ಯವಸ್ಥೆ ಆತನ ಹಿಂದೆ ಬಿದ್ದಿದ್ದೆ. ಎಲ್ಲ ಕಡೆ ರೇಡಿಯೋ  ಸಂದೇಶಹೋಗಿದೆ.
ಅಂಥವನು ಈಗ ನನ್ನ ಮುಂದಿದ್ದಾನೆ. ನನಗೆ ಪೋಲಿಸ್ ಅಪರಾಧಿಗಳು, ರಕ್ತ, ಕೊಲೆಗಳ ಅನುಭವವಿಲ್ಲ. ಅವೆಲ್ಲಾ ಸಿನಿಮಾಗಳಿಂದ ಮಾತ್ರ ನನಗೆ ಪರಿಚಿತ .ಯಾಕೆಂದರೆ ನಾನು ಚಿತ್ರರಂಗದಲ್ಲಿ ಬರಹಗಾರನಾಗಿ ತೊಡಗಿಸಿಕೊಂಡಿರುವವನು. ಚಲನಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದು ನನ್ನ ಕೆಲಸ . ಚಲನಚಿತ್ರಗಳಲ್ಲಿ ನನ್ನ ಪಾತ್ರದ ಮೂಲಕ ಹಲವಾರು ಕೊಲೆಗಳನ್ನೂ ಅತ್ಯಾಚಾರಗಳನ್ನೂ ಮಾಡಿಸಿದ್ದೇನೆ . ಆದರೆ ನಿಜ ಜೀವನದಲ್ಲಿ  ಅದರ ಬಗ್ಗೆ ಯೋಚಿಸಲೂ ನನಗೆ ಸಾಧ್ಯವಿಲ್ಲ . ಯಾವುದೋ ಸಿನೆಮಾದ ಕಥೆ ಬೆಳವಣಿಗೆಯ ಸಮಯದಲ್ಲಿ ಅದ್ಯಯನಕ್ಕಾಗಿ ಜೈಲಿನ ಒಳಗೆ ಹೋಗಿದ್ದೆ .
ಈ ಸಾರಿ ನಮ್ಮ ನಿರ್ಮಾಪಕರು   ಹೇಳಿಬಿಟ್ಟಿದ್ದರು. ಈ  ಸಾರಿಯ ಕಥೆಯಲ್ಲಿ ಎಲ್ಲಾ ರೀತಿಯ ರೋಚಕತೆ ಇರಬೇಕು. ಕೊಲೆ ಸುಲಿಗೆ ಶೃಂಗಾರ, ಹಾಸ್ಯ..ಹೀಗೆ ನವರಸಗಳೂ ತುಂಬಿ ತುಳುಕಬೇಕು ಎಂದು . ಅದಕ್ಕಾಗಿಯೇ ನಾನು ಪಟ್ಟಣದಲ್ಲಿದ್ದರೆ ಆ ಜನಜಂಗುಳಿಯಲ್ಲಿ ಏಕಾಗ್ರತೆ  ಸಾಧ್ಯವಿಲ್ಲವೆಂದು  ಈ  ಕಾಡೊಳಗೆ ವಾಸ್ತವ್ಯ ಮಾಡಿಕೊಟ್ಟಿದ್ದರು. ನಾನು ಏನು ಬರೆಯಬೇಕು ಯಾವ ರೀತಿಯ ಕಥೆ ಮಾಡಬೇಕು ಅಂಬ ಗೊಂದಲದಲ್ಲಿದ್ದಾಗಲೇ ಚೆಟ್ ನನ್ನ ಮನೆಗೆ ನುಗ್ಗಿದ್ದು . ಅವನ ಪರಿಚಯವಾದ ಮೇಲೆ ನಾನು ದಂಗು ಬಡಿದಿದ್ದೆ. ಈಗ ಅವನನ್ನು ಹೊರಗೆ ಕಳುಹಿಸುವುದೆಂತು ?..ಹಾಗೆ ಮಾತಾಡಿಸುತ್ತಿದ್ದಾಗ ಅವನು ತಾನು ಮಾಡಿದ ಕೊಲೆಗಳ ಬಗ್ಗೆ ಹೇಳಿದಾಗ ಅವನ ಕಥೆಯನ್ನು ಸಂಪೂರ್ಣ ಕೇಳಿಕೊಂಡು ಅದಕ್ಕೊಂದಿಷ್ಟು  ಸೇರಿಸಿ ಕಥೆ ಮಾಡಿದರೆ ನೈಜತೆಯ ಸ್ಪರ್ಶ ಸಿಗುತ್ತದೆ ಎನಿಸಿತು. . ಚೆಟ್ ನಿಗೆ ಪೂರ್ತಿ ಕಥೆ ಹೇಳುವಂತೆ ಕೇಳಿಕೊಂಡೆ .
'ನಾನೀಗಾಗಲೇ ಆರು ಕೊಲೆ ಮಾಡಿದ್ದೇನೆ. ಅವುಗಳ ಕಾರಣ  ಕೇಳಿದರೆ ನಿನಗೆ ಕ್ಷುಲ್ಲಕ ಎನಿಸಬಹುದು . ಆದರೆ ನನಗೆ ಹಾಗನ್ನಿಸುವುದಿಲ್ಲ . ಸುಮ್ಮನೆ ಕೇಳಿಸಿಕೊಳ್ಳುತ್ತಾ ಹೋಗು. ಸ್ವಲ್ಪ  ಹೆಚ್ಚುಕಡಿಮೆಯಾದರೂ ಏಳನೆಯವನು ನೀನಾಗಬಹುದು...' ಎಂದ ಚೆಟ್ ಕಣ್ಣಲ್ಲಿ   ಕ್ರೌರ್ಯ ತುಂಬಿ ತುಳುಕುತ್ತಿತ್ತು.
ಇದು ಜೇಮ್ಸ್ ಹಾಡ್ಲಿ ಚೇಸ್ ನ ಕಾದಂಬರಿ 'ವೀ ವಿಲ್ ಶೇರ್ ಎ ಡಬಲ್ ಫ್ಯೂನರಲ್ ' ನ ಪ್ರಾರಂಭದ ಪುಟಗಳ ಸಾರಾಂಶ . ನಾನು ಒಂದಷ್ಟು ಓದಿಯಾದ ಮೇಲೆ , ಬರೆದಾದ ಮೇಲೆ, ಸಿನಿಮಾಗಳನ್ನು ನೋಡಿಯಾದ ಮೇಲೆ ಬ್ರೇಕ್ ಎಂಬಂತೆ ಚೇಸ್ ಕಾದಂಬರಿಗಳನ್ನ ಓದುತ್ತೇನೆ . ಚೇಸ್ ನ ಕಾದಂಬರಿಗಳು ನನಗ್ಯಾವತ್ತೂ ಮೋಸ ಮಾಡಿಲ್ಲ ಅಥವಾ ಅದರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಇದೂ ಕೂಡ ಹಾಗೆಯೇ. ಪ್ರಾರಂಭದಲ್ಲೇ ಹಿಡಿದು ಕೂರಿಸಿಬಿಡುವ ಕಾದಂಬರಿ.   ಪುಟದಿಂದ ಪುಟಕ್ಕೆ ಕುತೂಹಲ ಕೆರಳಿಸುತ್ತಾ ಸಾಗುವ ಕಾದಂಬರಿಯ ಅಂತ್ಯ ಬಹಳ ರೋಚಕವಾಗಿದೆ. ಉತ್ತಮ ಟೈಮ್ ಪಾಸ್ ಕಾದಂಬರಿ. ಸುಮ್ಮನೆ ಓದಿ ಎಂದು ಶಿಫಾರಸ್ಸು ಮಾಡಬಹುದು .
..

ನಾನು ನಾನಲ್ಲ...ದೇವರಾಣೆಗೂ ಅವನೇ..?

ವರಿಬ್ಬರೂ  ತುಂಬಾ  ಅನೋನ್ಯವಾಗಿರುವ ಸಹೋದರರು. ಅಣ್ಣನಿಗೆ ಕಲೆಯಲ್ಲಿ  ಆಸಕ್ತಿ.   ಅಣ್ಣನಿಗೆ ಮದುವೆಯಾಗಿ ಸುಂದರವಾದ, ಒಳ್ಳೆಯ ಹೆಂಡತಿ ಇದ್ದಾಳೆ. ತಮ್ಮನಿಗೆ ಪ್ರೇಯಸಿ ಇದ್ದಾಳೆ ಆದರೂ ಮದುವೆಯಾಗಿಲ್ಲ. ಮರದಲ್ಲಿ ಕೆತ್ತನೆಯ ಕೆಲಸಗಳನ್ನು  ಮಾಡುವುದೆಂದರೆ ಖುಷಿ . ಆದರೆ ತಮ್ಮನಿಗೆ  ಕಾರ್ ರೇಸ್  ಹುಚ್ಚು.ಕಾರನ್ನು  ಶರವೇಗದಲ್ಲಿ ಓಡಿಸುವುದೆಂದರೆ  ಎಲ್ಲಿಲ್ಲದ ಉತ್ಸಾಹ . ಆದರೆ  ಅದು ಅಪಾಯಕಾರಿಯಾದ್ದರಿಂದ ಅಣ್ಣನಿಗೆ ಅದು  ಇಷ್ಟವಿರುವುದಿಲ್ಲ. ಆದರೆ  ಹೇಗೋ ಅಣ್ಣನ ಮನವೊಲಿಸುತ್ತಾನೆ . 'ಸರಿ ಇದೆ ಕೊನೆಯ ಪಂದ್ಯ. ಆಮೇಲಿನಿಂದ ಇದರಲ್ಲಿ ಭಾಗವಹಿಸುವಂತಿಲ್ಲ ' ಎಂದು ಹೇಳುವ ಅಣ್ಣ ಆ ಕಾರ್ ರೇಸ್ ಗೆ ತಮ್ಮನಿಗೆ ಪ್ರೋತ್ಸಾಹ ಕೊಡಲು  ತಾನೂ ಬರುತ್ತಾನೆ. ಪಂದ್ಯ ಮುಗಿಸಿ ಬರುವಾಗ ಅಪಘಾತವಾಗುತ್ತದೆ. ಅಣ್ಣತಮ್ಮ ಇಬ್ಬರಿಗೂ ಗಂಭೀರ ಸ್ವರೂಪದ ಗಾಯಗಳಾಗುತ್ತವೆ. ಇಬ್ಬರೂ ಕೋಮ ಸ್ಥಿತಿ ತಲುಪುತ್ತಾರೆ. ಒಂದು ವರ್ಷದ ನಂತರ ತಮ್ಮ ಕೋಮ ಸ್ಥಿತಿಯಿಂದ ಹೊರಬರುತ್ತಾನೆ. ಆಸ್ಪತ್ರೆಯಿಂದ ಮನೆಗೆ ಕರೆತಂದ ಅತ್ತಿಗೆಗೆ ಆತ ತಾನು 'ಅಣ್ಣ' ಎಂದೆ ಪರಿಚಯಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲ ಆತನ ನಡೆ, ನುಡಿ ಎಲ್ಲಾ ಪಕ್ಕಾ ಅಣ್ಣನಂತೆಯೇ. ಅತನ ಪ್ರತಿಯೊಂದು ಸೂಕ್ಷ್ಮಾತಿಸೂಕ್ಷ್ಮ ಅಂಶಗಳೂ ಅಣ್ಣನಂತೆಯೇ ಇರುತ್ತವೆ. ಅತ್ತಿಗೆಗೆ ಗಾಬರಿಯಾಗುತ್ತದೆ. ಅದೇಗೆ ಆತನನ್ನು ಗಂಡನೆಂದು ಸ್ವೀಕರಿಸುವುದು? ಇದು ಆಕೆಗಷ್ಟೇ ಅಲ್ಲ ವೈದ್ಯಲೋಕದಲ್ಲೂ ಗೊಂದಲಗಳಿಗೆ ಕಾರಣವಾಗುತ್ತದೆ. ವೈದ್ಯರುಗಳಿಗೆ ಇದೊಂದು ಸವಾಲೆನಿಸುತ್ತದೆ. ಕೊನೆಗೆ ಕೋಮಾದಲ್ಲಿರುವ ಅಣ್ಣನ ಆತ್ಮ ತಮ್ಮನ ದೇಹಕ್ಕೆ ಸೇರಿಕೊಂಡಿರಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾರೆ.
ಈಗ ಅತ್ತಿಗೆಗೆ  ಈತ ನಿಜವಾಗಲೂ ತನ್ನ ಗಂಡನಾ..? ಎನ್ನುವ ಪ್ರಶ್ನೆ ಕಾಡತೊಡಗುತ್ತದೆ. ತನ್ನ ಮತ್ತು ಗಂಡನ ಜೀವನದಲ್ಲಿ ನಡೆದ ಕೆಲವು ವೈಯಕ್ತಿಕ ವಿಷಯಗಳ ಬಗ್ಗೆ ಪ್ರಶ್ನೆ ಕೇಳಿದರೂ ಆತ ಅದಕ್ಕೆಲ್ಲಾ ನಿಖರವಾಗಿಯೇ 'ಅಣ್ಣ' ನಂತೆಯೇ ಉತ್ತರಿಸುತ್ತಾನೆ. ಆದರೂ ಆಕೆಗೆ ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ತಮ್ಮನ ಪ್ರೇಯಸಿ ಕರೆದು ಆಕೆಯ ಹತ್ತಿರ ಹೇಗೆ ವರ್ತಿಸುತ್ತಾನೆ ಎಂದು ಪರೀಕ್ಷಿಸುತ್ತಾಳೆ. ಅಲ್ಲೂ ಆಕೆಗೆ  ಅಚ್ಚರಿಯೇ...ಅಣ್ಣನ ಆತ್ಮ ತಮ್ಮನಿಗೆ ಸೇರಿಕೊಂಡರೆ ತಮ್ಮನ ಆತ್ಮ ಎಲ್ಲಿ?
ಅದೊಂದು ದಿನ ಜೋರು ಮಳೆಯಲ್ಲಿ ಮನಗೆ ಬರುವ ತಮ್ಮನ ನಡವಳಿಕೆ ಅತ್ತಿಗೆಯನ್ನು ಅಚ್ಚರಿಗೊಳಿಸುತ್ತದೆ. ಹಿಂದೊಂದು ದಿನ ಇದೆ ತರಹದ ಸನ್ನಿವೇಶದಲ್ಲಿ ಅಣ್ಣ ಹೇಗೆ ನಡೆದುಕೊಂಡಿದ್ದನೋ ಹಾಗೆಯೇ ಈವತ್ತು ತಮ್ಮ ನಡೆದುಕೊಂಡಾಗ ಆಕೆಗೆ ಇದು ಅಣ್ಣನೆ , ತನ್ನ ಗಂಡನೆ ಎನಿಸಿಬಿಡುತ್ತದೆ.
ಆಕೆಯ ಅನುಮಾನಗಳು ಸಂಪೂರ್ಣ ಅಳಿಸಿಹೋಗಿ,  ಇದು ತಮ್ಮನ ದೇಹದಲ್ಲಿರುವ ತನ್ನ ಗಂಡ ಎನಿಸಿಬಿಡುತ್ತದೆ.
ಹೌದಾ ..? ಇದೆಲ್ಲಾ ಸಾಧ್ಯವಾ ಎನ್ನುವ ಪ್ರಶ್ನೆಗಳಿಗೆ ಉತ್ತರವೆಂದರೆ  ...ಅದೆಲ್ಲವನ್ನೂ ದೃಶ್ಯರೂಪದಲ್ಲಿ ನೋಡಿದರೆ ಮಜಾ ಎಂಬುದು ನನ್ನ ಅನಿಸಿಕೆ. 2003ರಲ್ಲಿ ಬಿಡುಗಡೆಯಾದ ಪಾರ್ಕ್ ಯಂಗ್ ಹೂ ನಿರ್ದೇಶನದ ಕೊರಿಯನ್ ಭಾಷಾ ಚಲನಚಿತ್ರ   ' ಅಡಿಕ್ಟಡ್ '  ಚಿತ್ರದ ಸಾರಾಂಶ ಇದು. ಪ್ರಾರಂಭದಲ್ಲಿ ಏನೋ ಎನಿಸಿದರೂ ಬರುಬರುತ್ತಾ ಕಥೆಯ ರೋಚಕತೆಯಿಂದಾಗಿ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಕೊನೆಯವರೆಗೂ ಎಲ್ಲೂ ರಹಸ್ಯ ಬಿಟ್ಟುಕೊಡದ ನಿರ್ದೇಶಕ ಆ ಮೂಲಕ ತಮ್ಮ ಪ್ರಾವೀಣ್ಯತೆ ಮೆರೆದಿದ್ದಾರೆ ಎನ್ನಬಹುದು. ಒಂದು ಘಂಟೆ  ನಲವತ್ತಾರು ನಿಮಿಷವಿರುವ  ಈ ಚಿತ್ರವನ್ನೊಮ್ಮೆ ನೋಡಿ.

Thursday, November 15, 2012

'ವೇದಾ ಮೇಡಂ ಹಾಗೇಕೆ ಮಾಡಿದರು....?' ಭಾಗ-3

'ನಿಂಗೆ ಗೊತ್ತಿಲ್ಲಾ ಗುರು...ಹುಡುಗೀರು ಅಂದ್ರೆ ಸುಮ್ನೆ ಅಲ್ಲಾ ..ಅದ್ಕೆ ಹೆಣ್ಣು ಚಂಚಲೆ .ಅನ್ನೋದು...ಯಾವತ್ತೇ ಆಗಲಿ ಯಾರಿಗೆ ಮರುಳಾದ್ರೂ ಹುಡುಗೀರಿಗೆ ಮರುಳಾಗಬಾರದು ನೋಡು ' ಜಗದೀಶ  ಎಗ್ಗುಸಿಗ್ಗಿಲ್ಲದೆ ಮಾತಾಡುತ್ತಿದ್ದ. ಅವನು ಹಾಗೆಯೇ . ಮಾತಾಡಲು ಇಳಿದ ಅಂದರೆ ಮುಗೀತು. ಮಾತಾಡುತ್ತಲೇ ಇರುತ್ತಾನೆ. ಚಿತ್ರವಿಚಿತ್ರವಾಗಿ ವಾದ ಮಾಡುತ್ತಾನೆ. ಏನೇನೋ ಸಮರ್ಥನೆ ಕೊಡುತ್ತಾನೆ. ಅದರಲ್ಲೂ ಹುಡುಗಿಯರ ವಿಷಯ ಬಂತೆಂದರೆ ಸಾಕು ಪುಂಖಾನುಪುಂಖವಾಗಿ ಹೇಳುತ್ತಲೇ ಇರುತ್ತಾನೆ. ಜಗದೀಶ ನನ್ನ ಸಹೋದ್ಯೋಗಿ. ನನಗಿಂತ ಒಂದು ವರ್ಷಕ್ಕೂ ಮುನ್ನವೇ ನಮ್ಮ ಕಂಪನಿ ಸೇರಿದವ. ದಪ್ಪಗಿದ್ದಾನೆ . ಅವನ ದೇಹದ ಯಾವ ಭಾಗದಲ್ಲೂ ಅಧಿಕ ಮಾಂಸವಿರದ ಜಾಗವಿಲ್ಲ . ಅವನ ಪ್ಯಾಂಟಿನ ಅಳತೆಯನ್ನು ನೋಡಿದರೆ ನಮಗೆ ನಗು. ಆದರೆ ಅವನು ಯಾವತ್ತೂ ಇನ್ ಶರ್ಟ್   ಮಾಡದೆ ಬರುವುದಿಲ್ಲ . ಘಂ ಎನ್ನುವ ಸೆಂಟ್ ಪೂಸಿಕೊಲ್ಲದೆ ಆಫೀಸಿಗೆ ಕಾಲಿಡುವುದಿಲ್ಲ .
'ಸರಿಯಪ್ಪಾ ಗುರುವೇ ನೀ ಹೇಳೋದು..ನಿನ್ನನ್ನ ಇದುವರೆಗೂ ಯಾವ ಹುಡುಗಿ ಜೊತೆ ನೋಡಲೇ ಇಲ್ಲ..ಕಸ್ಟಮರ್ ಕೇರ್ ಬಿಟ್ಟರೆ ಬೇರಾವ ಹೆಣ್ಣು ಜೀವಾನೂ ನಿಂಗೆ ಫೋನ್ ಮಾಡಿದ್ದು ನಮಗೊತ್ತಿಲ್ಲಾ ..ಅದೆಂಗೆ ಹುಡುಗೀರ್ ಬಗ್ಗೆ ಇಷ್ಟೊಂದ್ ತಿಳ್ಕೊನ್ಡಿದ್ದೀಯಾ?' ರೋಹಿತ್ ಪ್ರಶ್ನೆ . ರೋಹಿತ್ ನಮ್ಮ ಗುಂಪಲ್ಲೆ ಜಾಲಿಯಾಗಿರುವ ಮನುಷ್ಯ  ಎಲ್ಲರನ್ನೂ ರೇಗಿಸುತ್ತಾನೆ ಅದರಲ್ಲೂ ಜಗದೀಶ್ ಮತ್ತು ರೋಹಿತ್ ಜುಗಲ್ ಬಂದಿ ನಮ್ಮ ಇಡೀ ಗುಂಪನ್ನು ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುತ್ತದೆ. 
ರೋಹಿತ್ ನ ಪ್ರಶ್ನೆ ಜಗದೀಶನಿಗೆ ಸರಿಯಾಗಿಯೇ ನಾಟಿದುದಕ್ಕೆ ಎರಡು ಕಾರಣವಿತ್ತು. ಮೊದಲನೆಯದಾಗಿ ಆತನಿಗೆ ಯಾರೂ ಸ್ನೇಹಿತೆಯರೇ ಇರಲಿಲ್ಲ . ನಮ್ಮ ಆಫೀಸಿನಲ್ಲಿ ಯಾರೂ ಅವನ ಜೊತೆ ಮಾತನಾಡುತ್ತಿರಲಿಲ್ಲ . ಗೆಳೆತನ ಬೆಳೆಸಿದರೂ ಎರಡೇ ದಿನಕ್ಕೆ 'ಬೇಜಾನ್ ಇರಿಟೇಟ್ ಮಾಡ್ತಾನೋ.' ಎಂದು ಆರೋಪಿಸುತ್ತಿದ್ದರು. ಅವರು ಒಂದಿಬ್ಬರ ಹತ್ತಿರ ಹಾಗೆ ಹೇಳಿದ್ದರೆ ಜಗದೀಶ ಇಡೀ ಆಫೀಸಿನವರ ಹತ್ತಿರ ' ಆಕೆ ಸರಿಯಿಲ್ಲ.ಲೂಸು..' ಎಂದೆಲ್ಲಾ ಅಪಪ್ರಚಾರ  ಮಾಡಿಬಿಡುತ್ತಿದ್ದ . ಅವನೊಂದಿಗೆ ಗೆಳೆತನ ಹಗೆತನ ಎರಡೂ ಅಪಾಯಕಾರಿಯಾಗಿರುತ್ತಿತ್ತು ಹುಡುಗಿಯರ ಪಾಲಿಗೆ .
ಎರಡನೆಯ ಕಾರಣವೆಂದರೆ  ಕಸ್ಟಮರ್ ಕೇರ್ ಹುಡುಗಿ. ಒಂದು ತಿಂಗಳ ಹಿಂದೆ ಅವನ ಫೋನಿಗೆ ಕಸ್ಟಮರ್ ಕೇರ್ ಹುಡುಗಿಯೊಬ್ಬಳು ಅವಳ ಕಾರ್ಯ ನಿಮಿತ್ತ ಫೋನ್ ಮಾಡಿದ್ದಳು . ಜಗದೀಶ್ ಆಕೆಯ ಜೊತೆ ಚೆನ್ನಾಗಿ ಮಾತನಾಡಿದ್ದ. ಆಕೆ ಆನಂತರ ದಿನದಿನ ಫೋನ್ ಮಾಡಲು ಶುರು ಮಾಡಿದ್ದಳು. ಇವನು ಸ್ವರ್ಗವೇ ಕೈಗೆ ಬಂದಂಗೆ ನಮ್ಮೆಲ್ಲರ ಮುಂದೆ ಜೋರಾಗಿ ಮಾತಾಡುತ್ತಿದ್ದ. 'ಸಿಗಲು ಹೇಳುತ್ತಿದ್ದಾಳೆ ಮಾರಾಯಾ.ನನಗೆ ಹುಡುಗೀರು ಜೊತೆ ಹಾಗೆಲ್ಲಾ ಅಡ್ದಾಡೋಕೆ ಇಷ್ಟ ಇಲ್ಲಾ...' ಎಂದೆಲ್ಲಾ ಜಂಭ ಕೊಚ್ಚಿಕೊಳ್ಳುತಿದ್ದನಾದರೂ ಆಕೆಯ ಫೋನಿಗೆ ಇವನೇ ಕಾಯುತಿದ್ದದ್ದು ನಮಗೆಲ್ಲ ಮೋಜಿನ ಸಂಗತಿಯಾಗಿತ್ತು . ಆಕೆ ಅಕಸ್ಮಾತ್ ಫೋನ್ ಮಾಡದಿದ್ದರೆ ಆವತ್ತೆಲ್ಲಾ ಚಡಪಡಿಸುತ್ತಿದ್ದರೂ ನಮ್ಮಗಳ ಮುಂದೆ ' ಸಧ್ಯ ಇವತ್ತು ಡಿಸ್ಟರ್ಬ್ ಮಾಡ್ತಿಲ್ಲಾ ..ಆರಾಮವಾಗಿ ಕೆಲಸ ಮಾಡಬಹುದು..' ಎಂದೆಲ್ಲ ಜಂಭ  ಕೊಚ್ಚಿಕೊಳ್ಳುತ್ತಿದ್ದ .ದಿನ ಕಳೆದಂತೆ ಅವನ ಆರ್ಭಟ ಹೆಚ್ಚಾಗಿತ್ತು .ಅವರಿಬ್ಬರೂ ಫೋನಲ್ಲೇ ಅಗತ್ಯಕ್ಕಿಂತ ಹೆಚ್ಚಾಗಿ ಮುಂದುವರೆದಿದ್ದರು . ಅದೊಂದು ದಿನ ಇಬ್ಬರೂ ಭೇಟಿಯಾಗಲು  ನಿರ್ಧರಿಸಿದ್ದರು. ಅದಕ್ಕೆಂದೇ ಹೊಸ ಶರ್ಟು ಪ್ಯಾಂಟು ಬೂಟು ವಾಚು  ಎಲ್ಲವನ್ನೂ ಖರೀದಿಸಿದ್ದ. ಭೇಟಿ ಮಾಡಿದರು.. ಆಮೇಲೇನಾಯಿತೋ .. ಭೇಟಿ ಮಾಡಿದ ಮೇಲೆ ಆಕೆ ಇವನ ಜೊತೆ ಗೆಳೆತನ ಮುರಿದುಕೊಂಡಿದ್ದಳು . ಇವನು ಮಾತ್ರ ' ವೇಸ್ಟು ಹುಡುಗಿ ಗುರು..ಬಲೆಗೆ ಹಾಕೊಳೋದಿಕೆ ನೋಡಿದಳು.ನಾನು ಗೊತ್ತಲ್ಲಾ . ..ಅಂತವಕ್ಕೆಲ್ಲಾ...ಊಹೂ...'ಎಂದಿದ್ದನಾದರೂ ನಮಗೆಲ್ಲ ನಿಜ ವಿಷಯ ಗೊತ್ತಿದ್ದರಿಂದ ನಾವು ಅವನನ್ನು ಅವಾಗವಾಗ ರೇಗಿಸುತ್ತಿದ್ದೆವು. 
'ಹೇ...ನೀನೆ  ಹೇಳು .. ಈ ನನ್ಮಗ ಹುಡುಗೀರ್ ಸಿಕ್ದಿರೋಕೆ ಈ ತರಾ ಮಾತಾಡ್ತಿದ್ದಾನೆ ..ಯಾವುದಾದರೂ ಮಹಿಳಸಂಘಕ್ಕೆ ಗೊತ್ತಾಗಬೇಕು... 'ಎಂದ ರೋಹಿತ್ ನನ್ನ ಕಡೆ ನೋಡಿದ. ಅಲ್ಲಿಯವರೆಗೂ ನಾನವರ ಮಾತುಗಳನ್ನು ಕೇಳುತ್ತಿದ್ದೆನಾದರೂ ಮನಸ್ಸು ಮಾತ್ರ ಬೇರೆಲ್ಲೂ ಇತ್ತು .
ನನ್ನನ್ನು ಕಾಡುತ್ತಿದ್ದದ್ದು ಅದೇ ಪ್ರಶ್ನೆ  
'ವೇದಾ  ಹಾಗೇಕೆ  ಮಾಡಿದರು..?'
******************      *********************    ****************
ಆವತ್ತು ಅಲಾರ್ಮ್ ಹೊಡೆದ ನಂತರ ಎಚ್ಚರವಾಯಿತು. ಆಮೇಲೆ  ಮಲಗುವುದಕ್ಕೆ  ಎಷ್ಟೇ ಪ್ರಯತ್ನಿಸಿದರೂ ಮತ್ತೆ ನಿದ್ರೆ ಬರಲೇ ಇಲ್ಲ . ಸುಮ್ಮನೆ ಮಲಗಿ ಮೈತುಂಬಾ ರಗ್ಗು ಹೊದ್ದುಕೊಂಡು ಬೆಚ್ಚನೆಯ ಅನುಭವವನ್ನು ಸವಿಯೋಣ ಎನಿಸಿದರೂ ಅದ್ಯಾಕೋ ಅದೂ ಹಿತ ಎನಿಸಲಿಲ್ಲ . ರಗ್ಗು ಎತ್ತಿ  ಬೀಸಾಡಲಾ  ಎನ್ನಿಸಿತ್ತು. ಅದೆಷ್ಟು ಬೇಗ ಸಮಯವಾಗುತ್ತದೋ ಎನಿಸುತ್ತಿತ್ತು. ಸುಮಾರು ಹೊತ್ತು ಹಾಸಿಗೆಯ ಮೇಲೆಯೇ ಹೊರಳಾಡಿದೆ. ಆಮೇಲೆ ಯಾಕೋ ಸುಮ್ಮನೆ ಮಲಗುವುದು ಅಸಹನೀಯ ವೆನಿಸಿದ್ದರಿಂದ ಎದ್ದು ಬಿಟ್ಟೆ. ಬೇಗ ರೆಡಿಯಾದೆ. ಆಮೇಲೇನು ಮಾಡುವುದು? ಹನ್ನೆರೆಡು ಘಂಟೆಗೆ ವೇದಾ ಮೇಡಂ ಎಲ್ಲಿ ಸಿಗಬಹುದು..? ಅವರು ಫೋನ್ ಮಾಡಬಹುದೇನೋ ಎಂದು ಕಾಯಹತ್ತಿದೆ . ನಾನೇ ಒಂದು ಫೋನ್ ಮಾಡಲಾ  ಎಂದು ಸಾವಿರಾರು ಬಾರಿ ಎನಿಸಿತ್ತಾದರೂ ಅದೇಕೋ ಮನಸ್ಸು ಹಿಂಜರಿದಿತ್ತು.
ಸಮಯ ಕಳೆಯುವುದು ಅಸಹನೀಯವೆನಿಸಿತ್ತು. ಪುಸ್ತಕ ತೆಗೆದುಕೊಂಡರೆ ಒಂದು ಪುಟವನ್ನು ಏಕಾಗ್ರತೆಯಿಂದ ಓದಲಾಗಲಿಲ್ಲ ಟಿವಿಯಲ್ಲಿನ ಕಾರ್ಯಕ್ರಮಗಳು ನೋಡುವ ಮುಂಚೆಯೇ ಬೋರ್ ಹೊಡೆಸುತ್ತವೇನೋ ಎನಿಸಲು ಪ್ರಾರಂಭಿಸಿತ್ತು. ಗೆಳೆಯರು ಫೋನ್ ಮಾಡಿದರೂ ಪ್ರತಿಕ್ರಿಯಿಸಲಿಲ್ಲ ಅಕಸ್ಮಾತ್ ಅಲ್ಲಿ ಬಾ ಇಲ್ಲಿ ಬಾ ಎಂದೆಲ್ಲಾ ಕರೆದರೆ ಏನು ಮಾಡುವುದು ಎಂಬುದು ದೊಡ್ಡ ಪ್ರಶ್ನೆಯಾಗಿ ಕಾಡತೊಡಗಿದರೂ ಅಂತರಾಳದಲ್ಲಿ ಅವರ್ಯಾರ ಜೊತೆ ಮಾತನಾಡಲು ಇಷ್ಟವಿರಲಿಲ್ಲ.
ಗಡಿಯಾರದ ಕಡೆಗೆ, ಆನಂತರ ಕೈ ಗಡಿಯಾರದ ಕಡೆಗೆ, ಆನಂತರ ಮೊಬೈಲಿನಲ್ಲಿ ತೋರಿಸುವ ಸಮಯದ ಕಡೆಗೆ ಬೇಡಬೇಡ ವೆಂದರೂ ಕಣ್ಣು ಹಾಯುತ್ತಿತ್ತು.
ಹನ್ನೆರೆಡಾಯಿತು . ಇನ್ನೇನು ಫೋನ್ ಬರಬಹುದು ಎನಿಸಿತು. ಫೋನ್ ಕೈಯಲ್ಲಿ ಹಿಡಿದುಕೊಂಡು ಕಾಯತೊಡಗಿದೆ.. ಎದೆಬಡಿತ ಜೋರಾಗಿತ್ತು. ಚಡಪಡಿಕೆ ಜಾಸ್ತಿಯಾಗುತಿತ್ತು .
ಹನ್ನೆರೆಡು  ಹತ್ತಾಯಿತು.
ಫೋನ್ ಬರಲಿಲ್ಲ .
ಅಕಸ್ಮಾತ್ ನೆಟ್ವರ್ಕ್ ಪ್ರಾಬ್ಲಂ ಇರಬಹುದಾ? ಕೆಲವೊಮ್ಮೆ ಆ ಕಡೆಯಿಂದ ಫೋನ್ ಮಾಡಿದರು. ಈ ನೆಟ್ ವರ್ಕ್ ಕೈ ಕೊಟ್ಟು ನನ್ನದು ನಾಟ್ ರೀಚಬಲ್ ಆಗಿಬಿಟ್ಟರೆ ...ಹೀಗೆ ಒಮ್ಮೆಲೇ  ಹಲವಾರು ಪ್ರಶ್ನೆಗಳು ಕಾಡಲು ಪ್ರಾರಂಭಿಸಿತ್ತು.
ಮತ್ತೆ ಮೊಬೈಲ್ ಕಡೆ ನೋಡುವುದು ...ಗಡಿಯಾರದ ಕಡೆಗೆ..ಹೀಗೆ..?
ಹನ್ನೆರೆಡುವರೆಯಾಯಿತು..
ಒಂದಾಯಿತು..
ವೇದಾ ಫೋನ್ ಮಾಡಲಿಲ್ಲ .
ಯಾಕೋ ಬೇಸರವಾಯಿತು. ವೇದಾ ಮೇಡಂ ಮರೆತುಬಿಟ್ಟರಾ ಹೇಗೆ? ಹಾಗೆಲ್ಲಾ ಆಕೆ ಮರೆಯುವವರಲ್ಲ ಎನಿಸಿತು. ಕೊನೆಗೆ ತಡೆಯಲಾರದೆ ನಾನೇ ಫೋನ್ ಮಾಡಿದೆ.
ಕಿವಿಯ ಹತ್ತಿರ ಮೊಬೈಲ್ ಹಿಡಿದುಕೊಂಡೆ. ಎದೆ ಬಡಿತ ಜೋರಾಗಿತ್ತು.
ಮಬೈಲ್ ಸ್ವಿಚೆಡ್  ಆಫ್ ಆಗಿತ್ತು.
ನನ್ನನ್ಯಾರೋ ಎತ್ತಿ ದೊಡ್ಡ ಕಂದಕಕ್ಕೆ ಬೀಸಾಕಿದ ಅನುಭವವಾಗಿತ್ತು. ಬೇಸರ ಮನಸಿನ ಮೂಲೆಮೂಲೆಯಲ್ಲೂ ತುಂಬಿಕೊಂಡಿತು . ಯಾಕೋ ನನಗರಿವಿಲ್ಲದೆ  ಕಣ್ಣಂಚಲ್ಲಿ ನೀರು ಬಂದಿತು.
 ಮತ್ತೆ ಮತ್ತೆ ಪ್ರಯತ್ನಿಸಿದೆ .
ಮತ್ತದೇ ಹೆಂಗಸು ಸ್ವಿಚೆಡ್  ಆಫ್ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿದ್ದಳು.
ಸೀದಾ ಹಾಸಿಗೆಯ ಮೇಲೆ ಹಾಗೆಯೇ ಬಿದ್ದುಕೊಂಡೆ ನನ್ನ ಮೂಡ್  ಹಾರಿ ಹೋಗಿತ್ತು.
ಪ್ಯಾಂಟು ಶರ್ಟು ಯಾವುದನ್ನು ತೆಗೆಯಬೇಕೆನಿಸಲಿಲ್ಲ .
ಊಟವನ್ನೂ ಮಾಡಲಿಲ್ಲ.
ಮತ್ತೆ ಮೊಬೈಲ್ ಟ್ರೈ ಮಾಡಿದೆ. ಮತ್ತದೇ...
ಹಾಗೆ ಇಡೀ ದಿನ ರಾತ್ರಿಯವರೆಗೂ ಟ್ರೈ ಮಾಡುತ್ತಲೇ ಇದ್ದೆ .
ಮತ್ತು ಅದೇ ಹೆಂಗಸು ಅದನ್ನೇ ಹೇಳಿ ಹೇಳಿ ಸುಸ್ತು ಹೊಡೆದುಹೋಗಿದ್ದಳು.
ನನ್ನ ಇಡೀ ಭಾನುವಾರ , ನನ್ನ  ಮನಸ್ಸು ಎಲ್ಲಾ ಹಾಳಾಗಿಹೋಗಿತ್ತು . ಇದ್ದಕಿದ್ದಂತೆ ನನ್ನ ಮೇಲೆ, ವೇದಾ ಮೇಲೆ ಅಸಾಧ್ಯ ಸಿಟ್ಟು ಬಂದಿತು.
ಒಂದು ವಾರ ರಜಾ ಹಾಕಿ ಎಲ್ಲಾದರೂ ಹೋಗಿಬಿಡಲಾ.ಕೆಲಸ ಬಿಟ್ಟುಬಿಡಲಾ. ಹೀಗೆ ಏನೇನೋ  ಹುಚ್ಚುಚ್ಚು ಯೋಚನೆಗಳು ಮನಸ್ಸಿನಲ್ಲಿ  ಹಾದುಹೋದವು.
ಆದರೆ ಅದ್ಯಾರೋ ಹೆಂಗಸಿಗೆ ನಾನ್ಯಾಕೆ ಹಾಗೆ ಮಾಡಬೇಕು..? ಎನಿಸಿತು ಕೂಡ .
ಕೊನೆಗೆ ಮನಸನ್ನು ಒಂದು ತಹಬದಿಗೆ ತರಲು ಸಾಕುಸಾಕಾಯಿತು.
ಬೆಳಿಗ್ಗೆ ಆಫೀಸಿನಲ್ಲಿ ನೇರವಾಗಿ ಕೇಳಬೇಕು..
ಅಥವಾ ಆಕೆ ಭೇಟಿ ಮಾಡದೆ ಇದ್ದುದರಿಂದ ನನಗೇನೂ ಆಗಿಲ್ಲವೆಂಬಂತೆ ಸುಮ್ಮನಿದ್ದುಬಿಡುವುದಾ?
ಮನಸ್ಸು ಗೊಂದಲದಲ್ಲೇ ಇತ್ತು.
ಆದರೂ ಒಂದು ಪ್ರಶ್ನೆ  ಕಾಡುತ್ತಲೇ ಇತ್ತು,
'ವೇದಾ ಮೇಡಂ ಹಾಗೇಕೆ ಮಾಡಿದರು....?'                                              [ಸಶೇಷ]
ನನ್ನ ಪುಸ್ತಕ ಇಲ್ಲಿ ದೊರೆಯುತ್ತದೆ:
ಗೂಗಲ್ ಪ್ಲೇ ನಲ್ಲಿ
ಗೂಗಲ್ ಬುಕ್ ನಲ್ಲಿ. 

Tuesday, November 13, 2012

ಕುಬಿ ಮತ್ತು ಹಿಟ್ ವಿಕೆಟ್ ...

 ಮೈಸೂರಿಗೆ ಹೋಗಿ ಬರುವುದಿತ್ತು. ಹಾಗಾಗಿ ಒಂದಷ್ಟು ಪುಸ್ತಕಗಳನ್ನು ಜತೆಯಲ್ಲಿಟ್ಟುಕೊಂಡಿದ್ದೆ . ಸಮಯ ಸಿಕ್ಕಾಗಲೆಲ್ಲಾ ಓದುವುದರಿಂದ ಸಮಯದ ಸದುಪಯೋಗ  ಆಗುತ್ತದೆನ್ನುವುದು ನನ್ನ ಅಭಿಪ್ರಾಯ. ಯಾಕೆಂದರೆ ಈಗಾಗಲೇ ಸುಮಾರು ಸಮಯವನ್ನು ಹೇಗೇಗೋ ಕಳೆದುಹಾಗಿದೆ. ನನ್ನ  ನೆಚ್ಚಿನ ನಿರ್ದೇಶಕ/ನಟ ಶಂಕರ್ ನಾಗ್ ನೆನಪಿಸಿಕೊಂಡರೆ ನನಗೆ ನಾಚಿಕೆಯಾಗುತ್ತದೆ. ಪ್ರತಿಕ್ಷಣವನ್ನು ದುಪ್ಪಟ್ಟು ದುಡಿಸಿಕೊಂಡವರು ಶಂಕರ್. 
ಹಾಗಾಗಿ ಈ ಸಾರಿ ಜೋಗಿಯವರ ಕಾದಂಬರಿ 'ಹಿಟ್ ವಿಕೆಟ್',  ಕಥಾ ಸಂಕಲನ ಸಂಕಲನ ಕಾಡು ಹಾದಿಯ ಕಥೆಗಳು ನನ್ನ ಪುಸ್ತಕದ ಸಂಗ್ರಹದಲ್ಲಿದ್ದವು. . ಹಿಟ್ ವಿಕೆಟ್ ಓದಿದೆ . ಕಾದಂಬರಿ ಸತ್ವವೇನೋ ಇಷ್ಟವಾಯಿತು. ಆದರೆ ನಿರೂಪಣೆ ಯಾಕೋ ಹಿಡಿಸಲಿಲ್ಲ . ಪ್ರತಿ ಅಧ್ಯಾಯದ ಕೊನೆಗೆ ಮುಂದಾಗುವುದರ ಸುಳಿವು ಪ್ರತಿ ಸಾರಿ ಕೊಡುವುದು ಯಾಕೋ ಕಿರಿಕಿರಿ ಎನಿಸಿತು. ಮೊದಲೆಲ್ಲಾ ಯಂಡಮೂರಿ ವೀರೇಂದ್ರನಾಥರ  ಧಾರಾವಾಹಿಗಳು ನಿಯತಕಾಲಿಕದಲ್ಲಿ ಬರುವಾಗ ಆ ತರಹದ ಸುಳಿವುಗಳನ್ನು ಮುಂದಿನವಾರಕ್ಕೆ ಕಾಯುವಂತೆ ಮಾಡುತ್ತಿದ್ದವು. ಯಾವುದೋ ಒಂದು ಘಟನೆಯ ಕೊನೆಯಲ್ಲಿ 'ಅದೇ ಮುಂದೆ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆನ್ನುವುದು ಆ ಕ್ಷಣದಲ್ಲಿ ಅವನಿಗೆ ಗೊತ್ತಿರಲಿಲ್ಲ', 'ಆಕೆಯ ನಿರ್ಧಾರ ಅಚಲವಾಗಿತ್ತು. ಅದೇ ಮುಂದೆ ಅವಳ ಬದುಕಿನಲ್ಲಿ ಬಿರುಗಾಳಿ ಎಬ್ಬಿಸುತ್ತದೆ ಎಂಬುದು ಆ ಕ್ಷಣಕ್ಕೆ ಆಕೆಯಾ ಅರಿವಿಗೆ ಬರಲಿಲ್ಲ' ಎಂಬೆಲ್ಲಾ ಸೂಚನೆ/ಸುಳಿವುಗಳು ಕುತೂಹಲವನ್ನು ಇಮ್ಮಡಿಗೊಳಿಸುತ್ತಿತ್ತು. ಆದರೆ ಅದೇ ಒಟ್ಟಾರೆಯಾಗಿ ಕಾದಂಬರಿ ರೂಪದಲ್ಲಿ ನಮ್ಮ ಕೈಗೆ ಸಿಕ್ಕಾಗ ಅಂತಹ ಮಜವನ್ನೇನೋ ಕೊಡುತ್ತಿರಲಿಲ್ಲ . ಆಗ ಕೊಡುತ್ತಿತ್ತೇನೋ ..ಆದರೆ ಇತ್ತೀಚಿಗೆ ಯಾಕೋ ಆ ತರಹದ ಸುಳಿವು ಕಿರಿಕಿರಿ ಉಂಟುಮಾಡುತ್ತವೆ . ಕಾರಣ ನನಗೂ ಗೊತ್ತಿಲ್ಲ . ಮೊನೆ ಹಿಟ್ ವಿಕೆಟ್ ಕಾದಂಬರಿ ಓದುವಾಗಲೋ ನನಗೆ ಹಾಗೆ ಆಯಿತು . ಕ್ರಿಕೆಟ್ , ಬೆಟ್ಟಿಂಗ್ ಅದರ ವಿರಾಟ ರೂಪ ಮುಂತಾದವುಗಳನ್ನು ಒಂದು ಕಾದಂಬರಿಯಲ್ಲಿ ಹಿಡಿದಿಡುವುದು ಕಷ್ಟ ಸಾಧ್ಯ . ಮತ್ತದಕ್ಕೆ ಸಾಕಷ್ಟು ದಾಖಲೆ , ನಿಜ ಘಟನೆಗಳನ್ನೂ ಸೇರಿಸಿದಾಗ ಇನ್ನೂ ಕಾದಂಬರಿ ಸತ್ವಯುತವಾಗುತ್ತದೆ . ಆದರೆ ಹಿಟ್ ವಿಕೆಟ್ ತೀರಾ ಸಾದಾರಣ ಎನಿಸಿತು. ಬಹುಶ ನನಗೆ ಜೋಗಿ ಮೆಚ್ಚಿನ ಲೇಖಕರಾದ್ದರಿಂದ ನಾನೇ ಅತಿಯಾಗಿ ನಿರೀಕ್ಷೆ ಮಾಡಿದುದರಿಂದ ಹೀಗಾಯಿತೇನೋ?
ಅವರ ಕಥಾಸಂಕಲನ ಕಾಡು ಹಾದಿಯ ಕಥೆಗಳು ಹಿಡಿಸಿತು. ಆ ಕಥೆಗಳನ್ನು ಅಲ್ಲಲ್ಲಿ ಓದಿದ್ದರೂ ಒಂದೇ ಪುಸ್ತಕದಲ್ಲಿ ಒಂದೇ ಗುಕ್ಕಿಗೆ ಸಿಕ್ಕಿದ್ದು ಖುಷಿಯಾಯಿತು. ಕಥೆಗಳೂ ಅಷ್ಟೇ ಬೇರೆ ಯಾವುದೋ ಲೋಕಕ್ಕೆ ಕರೆದುಕೊಂಡು ಹೋದವು. 
ಮನೆಯಲ್ಲಿ ನಮ್ಮ ಪುಸ್ತಕದ ನಿಮಿತ್ತ ಕುಬಿ ಮತ್ತು ಇಯಾಲ ಸಿನೇಮ ನೋಡಿದೆ . ತೇಜಸ್ವಿಯವರ  ಕಥೆಯನ್ನು ಮೊದಲೇ ಓದಿದ್ದೆ.  ಹಾಗೆ ಸಿನೆಮಾವನ್ನೂ ಮೊದಲೇ  ನೋಡಿದ್ದೆನಾದರೂ ಹೆಚ್ಚು ಕಡಿಮೆ ಸಿನೆಮಾ ವಿವರಗಳು ಮರೆತೇ  ಹೋಗಿತ್ತು. ಹಾಗಾಗಿ ಮತ್ತೆ ನೋಡಿದೆ. ನಿರ್ದೇಶಕರು ಸದಾನಂದ ಸುವರ್ಣ. ಇವರು ಗಿರೀಶ್ ಕಾಸರವಳ್ಳಿ ನಿರ್ದೇಶನದ ಘಟಶ್ರಾದ್ಧ ಚಿತ್ರದ ನಿರ್ಮಾಪಕರು. ಕುಬಿ ಮತ್ತು ಇಯಾಲ ಚಿತ್ರಕ್ಕೆ ರಾಷ್ಟ್ರ , ರಾಜ್ಯ ಪ್ರಶಸ್ತಿಗಳು ದೊರೆತಿವೆ . ಚಿತ್ರಕಥೆ ಸಂಭಾಷಣೆಯನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ಬರೆದಿದ್ದಾರೆ . ಇನ್ನು ಸಿನೆಮಾದ ಬಗ್ಗೆ ಎಲ್ಲರಿಗೂ ಗೊತ್ತಿರುವಂತಹದ್ದೆ .   ಹಳ್ಳಿಗೆ ಹೊಸದಾಗಿ ಬರುವ ವೈದ್ಯ ಕುಬಿಗೆ ಆ ಊರಿನ ಕ್ರೈಸ್ತ ಧರ್ಮದ ಹುಡುಗಿ ಇಯಾಲಳ  ಪರಿಚಯವಾಗುತ್ತದೆ . ಆಕೆಯ ಮುಗ್ಧತೆ, ತುಂತುತನಗಳು ಕುಬಿಯವರಿಗೆ ಆಕೆಯನ್ನು ಆಪ್ತಳನ್ನಾಗಿಸುತ್ತದೆ .ಆನಂತರ ಆಕೆಯ ಕೊಲೆಯಾಗುತ್ತದೆ . ಅದನ್ನು  ಜನರು ಹೇಗೆ ತಮ್ಮ ತಮ್ಮ ಸ್ವಾರ್ಥಕೆ ಬಳಸಿಕೊಳ್ಳುತ್ತಾರೆಂಬುದನ್ನು ನಿರ್ದೇಶಕರು ಬಹಳ ಚೆನ್ನಾಗಿ ನಿರೂಪಿಸುತ್ತ ಹೋಗುತ್ತಾರೆ. ಕುಬಿಯಾಗಿ ಚಾರು ಹಾಸನ್ ಉತ್ತಮ ಅಭಿನಯ ನೀಡಿದ್ದಾರೆ.

Monday, November 12, 2012

ಆತ ಹಂತಕ ಜೋ...

ಅದೊಂದು ಅಸ್ತವ್ಯಸ್ತ ಕುಟುಂಬ ಎಂದೇ ಹೇಳಬಹುದು. ಅಪ್ಪ, ಮಲತಾಯಿ, ಅಣ್ಣ ತಂಗಿ ಅದರ ಸದಸ್ಯರು. ಪ್ರತಿಯೊಬ್ಬರಿಗೂ ಅವರದೇ ಆದ ಸಮಸ್ಯೆಗಳಿವೆ. ಎಲ್ಲರಿಗೂ ಹಣದ ಅವಶ್ಯಕತೆ ಇದೆ . ಮಗ ಹುಟ್ಟಾ ಕುಡುಕ . ಜೂಜು ಕೋರ. ಊರಲ್ಲಿರುವ ದುಶ್ಚಟಗಳೆಲ್ಲಾ ಅವನಿಗೊಬ್ಬನಿಗೆ ಇದೆ .ಮೈತುಂಬಾ ಸಾಲ  ಮಾಡಿಕೊಂಡಿದ್ದಾನೆ. ಅವನನ್ನು ಸಾಲಗಾರರು ಬೆನ್ನೆತ್ತಿದ್ದಾರೆ . ನಿಗದಿತ ಸಮಯದಲ್ಲಿ ಅವರ ಹಣ ಕೊಡದಿದ್ದರೆ ಅವರು ಸಾಯಿಸಿಬಿಡುತ್ತಾರೆ. ಅಂತಹ ಕಟುಕರು ಅವರು . ಆಗ ಅವನಿಗೆ ಗೆಳೆಯ ಒಂದು ಐಡಿಯಾ ಕೊಡುತ್ತಾನೆ. ಈಗ ಇಡೀ ಕುಟುಂಬದಿಂದ ದೂರ ಉಳಿದಿರುವ ತಾಯಿಯ ಹೆಸರಲ್ಲಿ ಇನ್ಸ್ಯೂರನ್ಸ್ ಇದೆ. ಆಕೆ ಸತ್ತರೆ ಅದು ತಂಗಿಯ ಪಾಲಾಗುತ್ತದೆ . ಎಲ್ಲರೂ ಹಂಚಿಕೊಂಡರೆ ಕಷ್ಟಗಳು ಮಾಯವಾಗುತ್ತವೆ. ಆ ಐಡಿಯಾ ಮಗನಿಗೆ ಸರಿ ಎನಿಸುತ್ತದೆ . ಮೊದಲು ತಂದೆಯೊಂದಿಗೆ, ಆಮೇಲೆ ಇಡೀ ಕುಟುಂಬದ ಜೊತೆ ಚರ್ಚಿಸಿದಾಗ ಅಲ್ಲೂ ಗ್ರೀನ್ ಸಿಗ್ನಲ್ ದೊರೆಯುತ್ತದೆ.  ಆಕೆ ನಿಜಕ್ಕೂ ಯಾರಿಗೂ ಬೇಕಾಗಿರುವುದಿಲ್ಲ . ಆಕೆಗೀಗ ವಾರಸುದರರೂ ಇರುವುದಿಲ್ಲವಾದ್ದರಿಂದ ಅದರ ಲಾಭ ಪಡೆಯಲು ಇಡೀ ಕುಟುಂಬ ನಿರ್ಧರಿಸುತ್ತದೆ. ಈಗ ಆಕೆಯನ್ನು ಕೊಲೆ ಮಾಡಬೇಕು. ಯಾರು  ಮಾಡುವುದು? ಒಂದು ಕೊಲೆಯನ್ನು ಕರಾರುವಕ್ಕಾಗಿ ಮಾಡುವವರು ಯಾರು? ಪೋಲಿಸ್ ಕಣ್ಣುಗಳಿಂದ ತಪ್ಪಿಸಿ ಇನ್ಶ್ಯೂರನ್ಸ್ ಹಣ ತಲುಪುವಂತೆ ಮಾಡುವವರು ಯಾರು? ಅದಕ್ಕಾಗಿ  ಸರಿಯಾದ ವ್ಯಕ್ತಿಯೆಂದರೆ ಜೋ ಕೂಪರ್ . ವೃತ್ತಿಯಲ್ಲಿ ಆತ  ದಿಟೆಕ್ಟಿವ್. ಆದರೂ ಕೆಲವೊಮ್ಮೆ ಹಣಕ್ಕೋಸ್ಕರ ಈ ತರಹದ ಕೆಲಸ ಮಾಡುತ್ತಾನೆ . ಆದರೆ ಆತನ ಕೆಲಸ ಪಕ್ಕಾ. ಹಾಗೆ ದುಡ್ಡಿನ ವಿಷಯದಲ್ಲೂ ಆತ  ಅಷ್ಟೇ ಕಟ್ಟುನಿಟ್ಟು.ಅಪ್ಪ ಮಗ ಇಬ್ಬರೂ ಆತನನ್ನು ಭೇಟಿ  ಮಾಡುತ್ತಾರೆ. ಆತ ಒಂದು ದೊಡ್ಡ ಮೊತ್ತದ ಹಣಕ್ಕಾಗಿ ಕೆಲಸ ಒಪ್ಪಿಕೊಳ್ಳುತ್ತಾನೆ. ಹಾಗೆ ಕೆಲಸ ಕೂಡ ಮುಗಿಸುತ್ತಾನೆ.      ಆನಂತರ ಗೊತ್ತಾಗುವ ವಿಷಯವೆಂದರೆ ಆಕೆ ಸತ್ತರೆ ಆ ಹಣ ಇವರಿಗೂ ದೊರೆಯುವುದಿಲ್ಲಾ ಎಂಬುದು.? ಅಂದರೆ ಆಕೆ ತನ್ನ ಹಣವನ್ನು ಮಗಳ ಹೆಸರಿಗೆ ಬರೆದಿಲ್ಲ  ಹಾಗಾದರೆ ಮತ್ಯಾರಿಗೆ ದೊರೆಯುತ್ತದೆ..? ಈಗ ಕೊಲೆಯಂತೂ ಆಗಿ ಹೋಗಿದೆ. ಜೋ ಸುಮ್ಮನೆ ಬಿಡುವವನಲ್ಲ ... ಮುಂದೇನಾಗುತ್ತದೆ..?
 ಇದು  ಆಸ್ಕರ್ ಪ್ರಶಸ್ತಿ ವಿಜೇತ, ದಿ ಎಕ್ಸಾರ್ಸಿಸ್ಟ್, ಫ್ರೆಂಚ್ ಕನೆಕ್ಷನ್ ಮುಂತಾದ ಚಿತ್ರಗಳ  ನಿರ್ದೇಶಕ ವಿಲಿಯಂ ಫ್ರೈಡ್ ಕಿನ್ ನಿರ್ದೇಶನದ ಮ್ಯಾಥ್ಯೂ ಮೆಖಾನಿ ಅಭಿನಯದ ಕಿಲ್ಲರ್ ಜೋ ಚಿತ್ರದ ಕಥೆ. ಚಿತ್ರದ ಪ್ರಾರಂಭದಿಂದಲೇ ಹಿಡಿದು ಕೂರಿಸಿಬಿಡುವ ಗುಣವಿರುವ ಕಿಲ್ಲರ್ ಜೋ ಒಂದು ಪಕ್ಕಾತಿಪಕ್ಕ ಥ್ರಿಲರ್ ಎಂದೇ ಹೇಳಬಹುದು. ಇನ್ ಟು ದಿ ವೈಲ್ಡ್ ,ಮಿಲ್ಕ್ ಚಿತ್ರದಲ್ಲಿ ಗಮನಸೆಳೆದಿದ್ದ ಎಮಿಲಿ ಹಿರ್ಶ್ ನ ಅತ್ಯುತಮ ಅಭಿನಯವಿರುವ ಈ ಚಿತ್ರ ಇದೆ ಹೆಸರಿನ ನಾಟಕ ಆಧರಿಸಿದ ಚಿತ್ರ.
2011 ರಲ್ಲಿ  ತೆರೆಗೆ ಬಂದ ಈ ಚಿತ್ರ ಒಂದು ಗಂಟೆ ನಲವತ್ತೈದು ನಿಮಿಷಗಳಷ್ಟು ಉದ್ದವಿದೆ.