Friday, August 5, 2016

ಸಂತೆಯಲ್ಲಿ ನಿಂತವನನ್ನು ನಾವು ಗಮನಿಸದೆ ಇದದ್ದು,...

ಮಹಾತ್ಮ ಕಬೀರ  ಚಿತ್ರದಲ್ಲಿ ಪವಾಡ ಜಾಸ್ತಿಯಿದೆ. ಆದರೆ ಅನುಸೂಯಾದೇವಿ ಅವರ ಸಂಗೀತ ಖುಷಿ ಕೊಡುತ್ತದೆ. ಕೆಲವರು ಆ ಕಾಲಕ್ಕೆ ಅದು ಸೂಪರ್ ಎನ್ನಬಹುದೇನೋ?ಅದು ನಿಜವೂ ಹೌದು. ಮಗ್ಗ ನೇಯದ ಕಬೀರ ರಾಮಜಪ ಮಾಡುತ್ತಾ  ಕುಳಿತುಕೊಂಡರೆ ಮಗ್ಗ  ರಾಮನ ದಯೆಯಿಂದ ತಾನಾಗಿಯೇ ನೇಯುತ್ತದೆ. ಅಮ್ಮ  ಒಳ ಹೋಗಿ ಬರುವಷ್ಟರಲ್ಲಿ ಬಟ್ಟೆ ರೆಡಿ!. ಇಂತಹ ಪವಾಡಗಳು, ಪ್ರತ್ಯಕ್ಷನಾಗುವ ದೇವರುಗಳು ಇವೆಲ್ಲ  ಕಬೀರದಲ್ಲಿದೆ.  ಹಾಡು ಹಾಡುತ್ತಾ ಮಾತನಾಡುತ್ತ ಮಾತಿನಲ್ಲಿ ಬುದ್ದಿವಾದ  ಹೇಳುತ್ತಾ ಸಾಗುವ ಕಬೀರ  ಮೊದಲಿಗೆ ಅಪ್ಪ ಅಮ್ಮನನ್ನು  ಸರಿಯಾಗಿ ನೋಡಿಕೊಳ್ಳದ ಮಗನಾಗಿ ಕಾಣುತ್ತಾನೆ. ಪತ್ನಿಗಿಂತ ಭಕ್ತಿರಸದಲ್ಲಿ  ಮುಳುಗಿ ಆಕೆಯೂ ನಲುಗುವಂತೆ ಮಾಡುತ್ತಾನೆ. ಅವನಿದ್ದದ್ದೆ ಹಾಗೆ ಅಂದರೆ  ಸಿನಿಮಾ ಅವನ ಪಾತ್ರದ ವಿಮರ್ಶೆಯಿಂದ ದೂರ.. ಆದರೆ  ಸಂತೆಯಲ್ಲಿ ನಿಂತ ಕಬೀರನದೂ ಹೆಚ್ಚು ಕಡಿಮೆ ಅದೇ ಬುದ್ದಿಯಾದರೂ ಇಲ್ಲಿ ಪವಾಡಗಳ ಹಂಗಿಲ್ಲ. ಸಂತೆಯಲ್ಲಿ  ಬಟ್ಟೆ ಮಾರಲು ಬರುವ ಕಬೀರ ಹಾಡುತ್ತಲೇ ಜನರ ಗಮನ ಸೆಳೆಯುತ್ತಾನೆ, ಹಿಂದೂ ಮುಸ್ಲಿಂ ಎಂದು ಜನರು ಕಟ್ಟಿ ಮಸೆಯುತ್ತಾ ನಿಂತಾಗ ಮಧ್ಯ ನಿಂತು ಇಬ್ಬರ ಪರವಾಗಿಯೂ ಇಬ್ಬರ ವಿರೋಧವಾಗಿಯೂ ಮಾತನಾಡುತ್ತಾನೆ.
ಸೋಮವಾರದಂದು ಸಿನಿಮಾ ನೋಡಲು  ಚಿತ್ರಮಂದಿರಕ್ಕೆ ಹೋದಾಗ ಬೆರಳೆಣಿಕೆಯ ಜನರಿದ್ದದ್ದು ನೋಡಿ ಕಳವಳ ಉಂಟಾದದ್ದು ದೇವರಾಣೆ ಸತ್ಯ. ಲಾಂಗು ಹಿಡಿದು ಹೊಡೆದಾಡುವ ರೌಡಿಯ ಕತೆಗೆ ತುಂಬಿ ಬರುವ ಜನರು, ಸತ್ತು ದೆವ್ವವಾಗಿ ಕಾಡುವ ದೆವ್ವಕ್ಕೆ ಮುಗಿ ಬೀಳುವ ಜನರು ಒಳ್ಳೆಯದ್ದು ಹೇಳುವ ಕಬೀರನನ್ಯಾಕೆ ದೂರ ಮಾಡಿದರು ಎಂಬುದು ಪ್ರಶ್ನೆ. ಆವತ್ತು  ಹಿಂದೂ ಮುಸ್ಲಿಂ ಬಗೆಗೆ ನೀತಿ ಪಾಠ ಹೇಳಿದ ಕಬೀರನನ್ನು ದೂರ ಮಾಡಿದ ಅವರಿಗೂ ಈವತ್ತು  ಕಬೀರನಿಗೆ  ಸೊಪ್ಪು ಹಾಕದ ನಮಗೋ ಅಂತಹ ವ್ಯತ್ಯಾಸವಿಲ್ಲ ಎನಿಸುತ್ತದೆ. 
ಇದೆಲ್ಲ ಪಕ್ಕಕ್ಕಿಡೋಣ.
ಕಬೀರ ಒಂದು ಸಿನೆಮವಾಗಿ ಗೆಲ್ಲುವುದು ಸೋಲುವುದು ವಿಷಯವಲ್ಲ. ಮನಮುಟ್ಟುವುದು ಬೇಕಾದದ್ದು. ನೋಡಿದ ಪ್ರೇಕ್ಷಕನಿಗಾದರೂ ಸಿನಿಮಾ ತಲುಪಿಬಿಟ್ಟರೆ ಅಷ್ಟು ಸಾರ್ಥಕ. ಆದರೆ ಸಿನಿಮಾ ನೋಡುತ್ತ ನೋಡುತ್ತ ಸಾಗಿದಂತೆ ಸೆಳೆಯುವುದೇ ಇಲ್ಲ. ಮೊದಲಾರ್ಧ  ಒಂದಷ್ಟು ದೃಶ್ಯಗಳ ಕೊಲಾಜ್ ನಂತೆ ಕಾಣುತ್ತದೆ. ಒಂದಕ್ಕೊಂದು ಸಂಬಂಧವನ್ನು ಅದೇಗೆ ಹೊಂದಿಸಬೇಕೋ ಚಿತ್ರಮಂದಿರದಲ್ಲಿ  ಕುಳಿತ ಪ್ರೇಕ್ಷಕ  ನೋಡುವುದರ ಜೊತೆಗೆ  ಈ ಎಕ್ಸ್ಟ್ರಾ ಕೆಲ್ಸಕ್ಕೆ ಒದ್ದಾಡಿಹೋಗುತ್ತಾನೆ..ಕಬೀರ ಅವನ ಹಿನ್ನೆಲೆ ಅವನ ಆಶಯಗಳು ಸಿನಿಮಾದಲ್ಲಿ ಹೈ ಲೈಟ್ ಆಗುವುದಿಲ್ಲ. ಇನ್ನು  ಶರತ್ ಕುಮಾರ್  ಮೈನಾ ಚಿತ್ರದಲ್ಲಿ ನಿರ್ವಹಿಸಿದ್ದ ಪೋಲಿಸ್ ಪಾತ್ರವನ್ನೇ ಇಲ್ಲಿಯೂ ರಾಜನಂತೆ ಮುಂದುವರೆಸಿದ್ದಾರೆ. ಅಲ್ವೇನ್ರಿ ಕಬೀರ್ ಎನ್ನುತ್ತಾ ಬಯಲಿನಲ್ಲಿಯೇ ಮಾತನಾಡುವ ರಾಜ ಅವರು.
ಅದೇಕೋ ಏನೋ ಸಿನಿಮಾ ನೋಡುತ್ತಾ ನೋಡುತ್ತಾ ಎಲ್ಲೋ  ಮಿಸ್  ಹೊಡೆಯುತ್ತದೆ ಎನಿಸುತ್ತದೆ. ಆದರೆ ನೋಡಿಯಾದ ಮೇಲೆ ಕಬೀರ ನಮ್ಮನ್ನು ಕಾಡುವುದಿಲ್ಲ. ಬದಲಿಗೆ ಬಹಳ ಬೋರಿಂಗ್ ಮನುಷ್ಯನಾಗಿ, ಹಾಡುಗಳು ಕಾಡದೆ ಕಬೀರ ನಮ್ಮನ್ನು ಆ ಕಾಲದ ಅಂದರೆ ಅವನ ಕಾಲದ ಜನರಂತೆಯೇ ಅವನ ದ್ವೇಷಿಯನ್ನಾಗಿ ಮಾಡಿಬಿಡುತ್ತಾನೆ.
ಮಹಾತ್ಮರ, ಸಂತರ ಬದುಕಿನಲ್ಲಿ  ಮಸಾಲೆ ಅಂಶಗಳು ಕಡಿಮೆಯೇ ಎನ್ನಬಹುದೇನೋ? ಅಥವಾ ಅದನ್ನು ಚಿತ್ರದಲ್ಲಿ ತೋರಿಸಲಿಕ್ಕೆ ನೈಜತೆ ಅಡ್ಡಬರುತ್ತದೆ. ಕಬೀರ ಯಾರೋ  ಹೊಡೆಯುವವರನ್ನು ತಡೆದಾಗ ಅದನ್ನು ಫೈಟ್ ನೊಂದಿಗೆ ತೋರಿಸಲು ಸಾಧ್ಯವೇ? ಹಾಗೆಯೇ ತನ್ನ ಪತ್ನಿಯ ಜೊತೆಗೆ ಕಳೆಯುವ ರಸಮಯ ಸಮಯಕ್ಕೆ ಆದೆಷ್ಟರ ಮಟ್ಟಿಗೆ ಶೃಂಗಾರ ತುಂಬಿ, ದ್ರಾಕ್ಷಿ ಗೋಡಂಬಿ ಬಳಸಲು ಸಾಧ್ಯ..? ಹಾಗಾಗಿ ಸಿನಿಮಾದ ಇತಿಮಿತಿ ಕತೆಯ ಪಾತ್ರದಲ್ಲಿಯೇ ಇರುತ್ತದೆ. ಇಷ್ಟರ ನಡುವೆಯೂ ಒಬ್ಬ ವ್ಯಕ್ತಿಯ ಜೀವನ ಚರಿತ್ರೆ ಬೋರಿಂಗ್ ಅಲ್ಲ. ಅದು ರೋಚಕ. ಒಂದು ನಿಟ್ಟಿನಲ್ಲಿ ನೋಡಿದರೆ ಕಬೀರನದ್ದು ಅತಿ ರೋಚಕ. ಎರಡೂ ಕಡೆಯಿಂದ ಮತಾಂಧರು ಎದುರು ನಿಂತು ಹೊಡೆಯುವ ಬಡಿಯುವ ಸಾಯಿಸಲು ಪ್ರಯತ್ನಿಸುವ ಪ್ರಸಂಗಕ್ಕಿಂತ ರೋಚಕತೆ ಯಾವ ಕಮರ್ಷಿಯಲ್ ಪಾತ್ರಕ್ಕಿದ್ದೀತು.. ಆದರೆ ಅದನ್ನು ಹಿತಮಿತವಾಗಿ ನೋಡುವಂತೆ ಮಾಡಬೇಕಷ್ಟೆ. ಬಹುಶಃ ಚಿತ್ರಕತೆ ಇಲ್ಲಿ ಕೆಲಸ ಮಾಡುತ್ತದೆ. ಆದರೆ ಸಂತೆಗೆ ಬಂದು ಜನರ ಮುಂದೆ ನಿಂತವನ ನೇಯ್ಗೆಯಲ್ಲಿ ಕಸುವಿಲ್ಲದೆ ಇರುವ ಕಾರಣ ನೂಲಿನದ್ದಾ..? ಮಗ್ಗದ್ದಾ ನೋಡಿದವರು ಹೇಳ್ಬೇಕು.. ಹೇಳುವುದಕ್ಕಾದರೂ ಒಮ್ಮೆ ನೋಡಬೇಕಿತ್ತು ಅಲ್ಲವೇ? ಇಲ್ಲವಾದಲ್ಲಿ ಕಬೀರ ನಮ್ಮನ್ನು  ತಿದ್ದಿದಂತೆ ನಮ್ಮಂತಹ ಚಿತ್ರಕರ್ಮಿಗಳನ್ನು ತಿದ್ದುವವರಾರು..?