Friday, July 13, 2012

ಒಂದು ಪುಸ್ತಕ , ಒಂದು ಸಿನಿಮಾ :


ಗ್ಯಾಂಗ್ಸ್ ಆಫ ವಾಸ್ಸೇಪುರ್
ದೊಂದು ಸಣ್ಣಕಥೆಯನ್ನು ಓದಿ ಸುಮಾರು ವರ್ಷಗಳೇ ಕಳೆದಿದ್ದರೂ ಅದರ ಒಂದೊಂದು ಸಾಲುಗಳೂ ನನ್ನಲ್ಲಿ ಅಚ್ಚಳಿಯದೇ ಹಾಗೇ ಉಳಿದಿವೆ.ಆತ ಸಿನಿಮಾಗಳಲ್ಲಿ ಅಭಿನಯಿಸುವ ಸಹನಟ ಅರ್ಥಾತ್ ಜ್ಯೂನಿಯರ್ ಆರ್ಟಿಸ್ಟ್. ಆವತ್ತೂ ಕೂಡ ಎಂದಿನಂತೆ ಸಿನಿಮಾವೊಂದರಲ್ಲಿ ಸಹನಟನ ಪಾತ್ರ ಸಿಕ್ಕಿದೆ. ಅವನ ಪಾತ್ರವಿಷ್ಟೆ. ನಾಯಕ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾನೆ. ರಸ್ತೆಯಲ್ಲಿ ಸುಮಾರು ಜನ ದಾರಿಹೋಕರೂ ನಡೆದುಕೊಂಡು ಹೋಗುತ್ತಿರುತ್ತಾರೆ. ಈತ ಮಾತ್ರ ನಾಯಕನಿಗೆ ಡಿಕ್ಕಿ ಹೊಡೆದು ಕ್ಷಮೆ ಕೇಳಿ ಮುಂದೆ ಹಾದುಹೋಗಬೇಕು. ಆಗ ಆ ಸಹನಟನಿಗೆ ಡಿಕ್ಕಿ ಹೊಡೆದ ಮೇಲೆ ಯಾವ ರೀತಿ ಪ್ರತಿಕ್ರಿಯಿಸಬೇಕು, ಆತನ ಪ್ರತಿಕ್ರಿಯೆ ಏನು? ನಾನು ಹೇಗೆ ಯಾವ ರೀತಿ ಡಿಕ್ಕಿ ಹೊಡೆಯಬೇಕು ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.ತೀರಾ ಒಂದು ನಿಮಿಷವೂ ಬರದ ಆ ಪಾತ್ರಕ್ಕೆ ಆ ಸಹನಟ ತಯಾರಿಯಾಗುವುದೇ ಕಥೆಯ ವಸ್ತು. ನಿಜಕ್ಕೂ ಸಿನಿಮಾದಲ್ಲಿನ ತನ್ಮಯತೆ ಮತ್ತು ಹೊಂದಾಣಿಕೆ, ಪೂರ್ವ ತಯಾರಿ, ಕಲಾವಿದನಿಗಿರಬೇಕಾದ ಅಭಿನಯದೆಡೆಗಿನ ಪೂಜ್ಯಭಾವನೆ ಮುಂತಾದವುಗಳನ್ನು ಮನಮುಟ್ಟುವಂತೆ ವಿವರಿಸಿದ್ದಾರೆ ಸತ್ಯಜಿತ್ ರೇ. ಹೌದು.ಈ ಕಥಾಲೇಖಕ ಬೇರಾರೂ ಅಲ್ಲ. ಖ್ಯಾತ ಭಾರತೀಯ ನಿರ್ದೇಶಕ ಸತ್ಯಜಿತ್ ರೇ. ಅವರ ಸಣ್ಣಕಥೆಗಳು ಒಂದಕ್ಕಿಂತ ಒಂದು ಸ್ವಾರಸ್ಯಕರವಾಗಿದೆ. ಮೊನ್ನೆ ಮೈ ಇಯರ್ಸ್ ವಿಥ್ ಅಪು ಕಾದಂಬರಿ ಓದಿ ಮುಗಿಸಿದಾಗ ಆವರು ವಿಶ್ವಮಾನ್ಯ ಚಲನಚಿತ್ರ ಪಥೇರ್ ಪಾಂಚಾಲಿ ಸರಣಿಯ ನಿರ್ದೇಶನಕ್ಕಾಗಿ ಪಟ್ಟ ಕಷ್ಟಗಳು, ಅದರ ಪೂರ್ವ ತಯಾರಿಗಳು ಮುಂತಾದವುಗಳನ್ನು ಓದಿದಾಗ ಒಬ್ಬ ಚಿತ್ರಕರ್ಮಿ ತನ್ನ ಕನಸಿನ ಸಾಕ್ಷಾತ್ಕಾರಕ್ಕಾಗಿ ಏನೇನಲ್ಲಾ ತ್ಯಾಗ ಮಾಡಲು ತಯಾರಾಗಿ ಬಿಡುತ್ತಾನೆಂಬುವುದು ಆಶ್ಚರ್ಯತರಿಸುತ್ತದೆ. ಮತ್ತದು ಎಲ್ಲರ ಕೈಯಲ್ಲೂ ಸಾಧ್ಯವೂ ಇಲ್ಲ ಬಿಡಿ.ಚಿತ್ರದಲ್ಲಿ ಬರುವ ಮನೆಯ ಸೂರಿನ ಒಂದು ತೊಲೆ ಹೇಗಿರಬೇಕು ಎನ್ನುವುದರಿಂದಾ ಹಿಡಿದು ನಾಯಕಿಯ ಗೆಳತಿಯ ಮೂಗುತಿ ಎಷ್ಟು ದೊಡ್ಡದಿರಬೇಕು ಎನ್ನುವವರೆಗೆ ರೇ ಮೊದಲೇ ನಿರ್ಧರಿಸುತ್ತಾರೆ. ಅದರಲ್ಲೂ ಸಾಕಷ್ಟು ಹಣಕಾಸನ್ನು, ಹೆಸರನ್ನು ಕೊಟ್ಟಿದ್ದ ಜಾಹಿರಾತು ವಿಭಾಗದಿಂದ ಸಿನಿಮಾಕ್ಕೇ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡೇ ಬಂದ ರೇ ಅವರನ್ನು ಸಿನಿಮಾ ಅಷ್ಟು ಸುಲಭವಾಗಿ ಬಿಗಿದಪ್ಪಿಕೊಳ್ಳುವುದಿಲ್ಲ. ಎಲ್ಲಾ ಒಂದು ರೀತಿಯಲ್ಲಿ ಸೆಟ್ ರೈಟ್ ಆಗಿದೆ, ಸರಿಯಾಗಿದೆ ಎನ್ನುವಷ್ಟರಲ್ಲಿ ಮತ್ತೆಲ್ಲೋ ಎಡವಟ್ಟುಗಳು, ಮತ್ತಿನ್ನೇನೋ ಸಮಸ್ಯೆಗಳು ಅದನ್ನು ಪರಿಹರಿಸುವಷ್ಟರಲ್ಲಿ ಹಣಕಾಸಿನ ತೊಂದರೆ..ಹೀಗೆ ಇಡೀ ಚಿತ್ರದುದ್ದಕ್ಕೂ ಒಂದಲ್ಲಾ ಒಂದು ಸಮಸ್ಯೆಗಳು ಅವರನ್ನು ಎಡೆಬಿಡದೆ ಕಾಡುತ್ತವೆ. ಆದರೆ ರೇ ಅವುಗಳನ್ನು ಅನುಭವ ಗಳೆಂದು ಪರಿಗಣಿಸಿ ತಮ್ಮನ್ನು ಸಿನಿಮಾದಲ್ಲಿ ತೊಡಗಿಸಿಕೊಳ್ಳುತ್ತಾರೆ. ಬಿಭೂತಿ ಭೂಷಣ್ ಬ್ಯಾನರ್ಜೀಯವರ ಕಾದಂಬರಿ ಈ ಕಲಾಕೃತಿಯಲ್ಲಿ ಬರುವ ಮುಖ್ಯಪಾತ್ರಧಾರಿಗಳನ್ನು ಆಯ್ಕೆಮಾಡುವುದಕ್ಕೇ ರೇ ಪಡುವ ಶ್ರಮ, ಅವರ ಪರಿಪಕ್ವತೆ, ನಿಖರತೆಗಳೂ ಕೂಡ ಆಶ್ಚರ್ಯತರಿಸುವಂತಹುದ್ದೆ. ಸಿನಿಮಾಕ್ಕಾಗಿ ಮನೆಯ ಆಭರಣಗಳನ್ನು ಒತ್ತೆಯಿಡುವಾಗ, ಹಣಕಾಸಿನ ವ್ಯವಸ್ಥೆಗಾಗಿ ದಿನಗಟಲೇ ಓಡಾಡುವಾಗ ಎಲ್ಲೂ ಕೂಡ ರೇ ಸಿನಿಮಾ ತಂದಿಟ್ಟ  
 ವಿಪರೀತ ಪರಿಸ್ಥಿತಿಗೆ ಕೊರಗುವುದಿಲ್ಲ, ಶಪಿಸುವುದಿಲ್ಲ. ಅದೆಲ್ಲದರ ನಡುವೆಯೇ ಅವರು ಸಿನಿಮಾದ ಚಿತ್ರಕಥೆಯ ಹೊಸಹೊಸ ಸಾಧ್ಯತೆಗಳ ಬಗ್ಗೆ, ತಿರುವುಗಳ ಜೋಡನೆಯ ಬಗ್ಗೆ ಅಲೋಚಿಸುತ್ತಾರೆ.ಇದೊಂದು ಪುಸ್ತಕವನ್ನು ಓದಿಲ್ಲದಿದ್ದರೆ ಒಮ್ಮೆ ಓದಿಬಿಡಿ. ಇಂಥ ಪುಸ್ತಕಗಳನ್ನೋದುವುದರಿಂದ ಅನೇಕ ಲಾಭವಿದೆ. ಆವತ್ತಿನ ರಾಜಕೀಯ ಪರಿಸ್ಥಿತಿ, ಸಿನಿಮಾಜಗತ್ತಿನ ಸ್ಥಿತಿಗತಿ, ಆವತ್ತಿನ ತಂತ್ರಜ್ಞಾನ, ಜನರ ದೃಷ್ಟಿ ಕಲಾವಿದರ ವರ್ತನೆಗಳು, ಆವತ್ತಿನ ಬಜೆಟ್ ಮುಂತಾದವುಗಳೂ ಕೂಡ ಗೊತ್ತಾಗಿಬಿಡುತ್ತವೆ.
   ಅನುರಾಗ್ ಕಶ್ಯಪ್ ನಿರ್ದೇಶನದ ಗ್ಯಾಂಗ್ಸ್ ಆಫ ವಾಸ್ಸೇಪುರ್ ಮತ್ತೊಂದು ರಕ್ತಚರಿತ್ರ ಎನಿಸಿಕೊಳ್ಳುತ್ತದೆ. ಹಾಗಂತ ಅನ್ನುವುದಕ್ಕೇ ನೇರ ಕಾರಣ ನಿರೂಪಣಾ ತಂತ್ರವಲ್ಲ. ಕಥೆಯ ವಸ್ತು. ಇಸವಿ 1941ರಲ್ಲಿ  ವಾಸ್ಸೇಪುರದಲ್ಲಿ ನಡೆಯುವ ರೈಲು ದರೋಡೆಯಿಂದ ಪ್ರಾರಂಭವಾಗುವ ಚಿತ್ರ ಒಂದು ಅನೂಹ್ಯ ರಕ್ತಸಿಕ್ತವೊಂದರ ಇತಿಹಾಸವನ್ನು ತೆರೆದಿಡುತ್ತಾ  
 ಸಾಗುತ್ತದೆ. ನನಗೆ ಪ್ರತಿಸಾರಿಯೂ ಒಂದು ಪ್ರಶ್ನೆ ಕಾಡುತ್ತಲೇ ಇರುತ್ತದೆ: ಮಾನವನ ಇತಿಹಾಸ ಇಷ್ಟು ಅಮಾನವೀಯವಾ? ಹೌದು ಜನ ಒಬ್ಬರನ್ನೊಬ್ಬರು ಕೊಚ್ಚಿಹಾಕುವ ಕಥೆ ರಕ್ತಚರಿತ್ರದ್ದು. ಇದು ಕೂಡ ಅಂತಹುದೇ ಕಥೆ. ಇಲ್ಯಾರನ್ನೂ ನಾಯಕ ಎಂದು ಬಿಂಬಿಸಲಾಗುವುದಿಲ್ಲ. ಅಥವಾ ಅವನು ಮಾಡಿದ್ದು ಸರಿ, ಅವನು ಹಾಗೆಯೇ ಮಾಡಬೇಕಿತ್ತು ಎಂದು ಒಂದು ಗಟ್ಟಿ ನಿರ್ಧಾರಕ್ಕೆ ಬರಲಾಗುವುದಿಲ್ಲ. ಬದಲಿಗೆ ಮೂರು ಹೊತ್ತು ತಿಂದು, ಚ೦ದಗೆ ಸಂಸಾರ ಮಾಡಿ ಅರವತ್ತೆಪ್ಪತ್ತು ವರ್ಷಕ್ಕೆ ಕೊನೆಯಾಗಿಬಿಡಬಹುದಾದ ಬದುಕನ್ನೇಕೆ   ರಕ್ತಸಿಕ್ತಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಕಾಡದೇ ಬಿಡುವುದಿಲ್ಲ. ಇಲ್ಲಿ ಯಾವ ಕೊಲೆಯನ್ನೂ  
ನಿರ್ದೇಶಕ ವೈಭವೀಕರಿಸಿಲ್ಲ. ಅದು ಆವತ್ತು ಹೇಗೆ ನಡೆದಿತ್ತೋ ಹಾಗೆ ಚಿತ್ರೀಕರಿಸಿದ್ದಾನೆ. ಆದರೂ ಕೆಲವೊಮ್ಮೆ ಚಿತ್ರದ ಕಥೆಯ ಬಗ್ಗೆಯೇ ರೇಜಿಗೆ ಹುಟ್ಟಿಬಿಡುವುದಂತೂ ಸತ್ಯ. ಇದು ಒಬ್ಬನ, ಒಂದು ಕುಟುಂಬದ ಕಥೆಯಲ್ಲ. ತಲೆತಲೆಮಾರುಗಳ ಸುದೀರ್ಘ ಕಥನ. ಕಥೆಯನ್ನು ಹೇಳಬೇಕೆಂದರೆ; ಅವರಪ್ಪನನ್ನು ಕೊಂದನೆಂದು ಅವನ ಮಗ ಇವನನ್ನು ಕೊಲ್ಲಲು ಸಂಚುಮಾಡುತ್ತಾನೆ..ಮಧ್ಯದಲ್ಲಿ ಮತ್ತೊಂದಿಷ್ಟು ಜನರು ಸಾಯುತ್ತಾರೆ, ಇವನನ್ನು ಕೊಂದರೆಂದು ಇವನ ಮಗ ಅವರ ವಂಶವನ್ನೆ ನಿರ್ನಾಮಮಾಡಲು ನಿರ್ಧರಿಸುತ್ತಾನೆ..ಮಧ್ಯದಲ್ಲಿ ಮತ್ತೊಂದಷ್ಟು ಜನರು ಬರ್ಬರವಾಗಿ ಕೊಲೆಯಾಗುತ್ತಾರೆ..ಮತ್ತದು ಹೀಗೆಯೇ ಮುಂದುವರೆಯುತ್ತದೆ..
ಇದೆಲ್ಲದರ ನಡುವೆಯೂ ನಮಗಿಷ್ಟವಾಗುವುದು ಮನೋಜ್ ಬಾಜಪಯಿಯವರ ಅದ್ಭುತ ಅಭಿನಯ. ಇಡೀ ಒಂದು ಮನುಷ್ಯನ ಜೀವಿತಾವಧಿಯ ಪಾತ್ರವನ್ನು, ಆಯಾ ವಯಸ್ಸಿನ ಭಾವನೆಗಳನ್ನು ನಡವಳಿಕೆಯನ್ನು ವ್ಯಕ್ತಪಡಿಸುವ ಅವರ ಅಭಿನಯ ಸಾಮರ್ಥ್ಯಕ್ಕೆ ತಲೆಬಾಗಲೆಬೇಕು. ಹಾಗೇ ಯಾರ ಪರವೂ ವಹಿಸದೇ ಇದ್ದದ್ದನ್ನು ಇದ್ದ ಹಾಗೆ ತಣ್ಣಗೆ ನಿರೂಪಿಸುವ ನಿರ್ದೇಶಕ ಅನುರಾಗ್ ಕಶ್ಯಪ್‌ಗೂ ನಮನಗಳನ್ನು ಸಲ್ಲಿಸಬೇಕಾಗುತ್ತದೆ.
ಅಂದಹಾಗೆ  ಎರಡನೆಯ ಭಾಗವೂ ಬರುತ್ತದೆ ಎನ್ನುವ ಸೂಚನೆ ಕೊಡುತ್ತಾ ಚಿತ್ರವನ್ನ ಮುಗಿಸುವ ನಿರ್ದೇಶಕರು ಕಥೆಯನ್ನ ಅರ್ಧಕ್ಕೆ ನಿಲ್ಲಿಸಿಬಿಡುತ್ತಾರೆ.




Tuesday, July 10, 2012

ಭೂತದ ಭವಿಷ್ಯ....!!!


ಮಗೆಲ್ಲಾ ಗೊತ್ತಿ(?)ರುವಂತೆ ಭೂತಗಳ ಆವಾಸಸ್ಥಾನ ಹಳೆಯ, ಪಾಳುಬಿದ್ದ ಕಟ್ಟಡಗಳು, ಮರಗಳು ಇತ್ಯಾದಿ. ಅದರಲ್ಲೂ ಪಾಳುಬಂಗಲೆಗಳೆಂದರೆ ಅವುಗಳಿಗೆ ಹಬ್ಬವೇ ಸರಿ. ಅವು ಅದರಲ್ಲೂ ಸ್ಮಶಾನದ ಅಕ್ಕಪಕ್ಕ ಇದ್ದರಂತೂ ಅವುಗಳನ್ನು ತಡೆಯುವವರ್ಯಾರು. ಅದು ಅಂತಹುದ್ದೇ ಒಂದು ಬೃಹತ್ ಭೂತಬಂಗಲೆ. ಅದರ ಮಾಲೀಕ ಸತ್ತ ಕ್ಷಣದಿಂದ ಭೂತವಾಗಿ ಆರಾಮವಾಗಿ ಅಲ್ಲೆ ವಾಸಿಸುತ್ತಿರುತ್ತಾನೆ. ಆದರೆ ನಗರಾಭಿವೃದ್ಧಿಯಾಗುತ್ತಿದ್ದಂತೆ ಹಳೆಯ, ಪಾಳುಬಿದ್ದ ಕಟ್ಟಡಗಳನ್ನೆಲ್ಲಾ ನೆಲಸಮ ಮಾಡಿ ಆ ಜಾಗದಲ್ಲಿ ಮಾರಾಟಮಳಿಗೆ, ಮನೆ ಅಪಾರ್ಟ್‌ಮೆಂಟುಗಳನ್ನು ಮಾನವರು ಕಟ್ಟತೊಡಗಿದಾಗ ಅಲ್ಲಿದ್ದ ಭೂತಗಳು ನಿರಾಶ್ರಿತವಾಗುತ್ತವೆ. ರಸ್ತೆ ಬದಿಯ ಮರಗಳನ್ನೂ ಕಡಿದು ರಸ್ತೆ ಅಗಲೀಕರಣ ಮಾಡಿದಾಗ ಮರದ ಮೇಲೆ ನೆಲೆ ಕಂಡುಕೊಂಡಿದ್ದ ಭೂತಗಳ ಪರಿಸ್ಥಿತಿ ಚಿಂತಾಜನಕವಾಗುತ್ತದೆ. ಅವೆಲ್ಲವೂ ಭೂತಬಂಗಲೆಗೆ ಬಂದಾಗ ಆ ಭೂತಬಂಗಲೆಯ ಮಾಲೀಕ ಎಲ್ಲರನ್ನೂ ಸೇರಿಸಿಕೊಳ್ಳಲು ಸಾಧ್ಯವಿಲ್ಲ.ಒಂದು ಇಂಟರ್ವ್ಯೂ ಇಟ್ಟುಕೊಳ್ಳೋಣ..ಎಂದು ಇಂಟರ್ವ್ಯೂ ಮಾಡಿ ಒಂದಷ್ಟು ಭೂತಗಳನ್ನು ಸೇರಿಸಿಕೊಂಡು ಆ ಮನೆಗೆ ಹೌಸ್‌ಫುಲ್ ಬೋರ್ಡ್ ನೇತುಹಾಕಿಬಿಡುತ್ತವೆ.ಅವುಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ನಾಯಕಿ, ಬ್ರಿಟಿಷರ ಅಧಿಕಾರಿ, ಜಮೀನ್ದಾರ, ಭಗ್ನ ಪ್ರೇಯಸಿ, ಕಲ್ಕತ್ತಾಟಾಂಗಾವಾಲಾ, ಸೇನಾಧಿಕಾರಿ ಇನ್ನೂ ಮುಂತಾದವರ ಭೂತಗಳಿರುತ್ತವೆ. ಈಗ ತಮ್ಮದೇ ಒಂದು ಬಂಗಲೆಯಾಯಿತೆ೦ದು ಖುಷಿಯಾಗಿರುವಾಗಿಷ್ಟರಲ್ಲಿ ಸಿನಿಮಾದವರು ಶೂಟಿಂಗಿಗಾಗಿ ಅಲ್ಲಿಗೆ ಬಂದುಬಿಡುತ್ತಾರೆ. ಮತ್ತೇ ತಮ್ಮ ಜಾಗಕ್ಕೆ ಕುತ್ತುಬಂದಿತೆಂದು ಭೂತಗಳೆಲ್ಲಾ ಭಾವಿಸಿ ಭೂತನಾಯಕಿಯನ್ನು ಕಳುಹಿಸಿ ಆ ಸಿನಿಮಾದ ನಾಯಕಿಯ ಪಾತ್ರಧಾರಿಗೆ ಹೆದರಿಸಿ ಆ ಬಂಗಲೆಯಲ್ಲಿ ನಡೆಯುತ್ತಿದ್ದ ಶೂಟಿಂಗ್ ನಿಲ್ಲಿಸಿ ಖುಷಿಯಿಂದ ಬೀಗಬೇಕೆನ್ನುವಷ್ಟರಲ್ಲಿ ಸಾಹುಕಾರನೊಬ್ಬ ಆ ಬಂಗಲೆಯನ್ನು ಖರೀದಿಸಿ ಅಲ್ಲೊಂದು ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಿಸಬೇಕೆಂದುಕೊಳ್ಳುತ್ತಾನೆ ..ಈ ಭೂತಗಳು ನಿಜಕ್ಕೂ ಗಾಬರಿಯಾಗುತ್ತವೆ.. ಸಾಹುಕಾರ ಬಂಗಲೆಯನ್ನು ಖರೀದಿ ಮಾಡದಂತೆ ಹೇಗೆ ತಡೆಯುವುದು ಎಂಬ ಯೋಚನೆಗೆ ಬೀಳುತ್ತವೆ..ಹಾಗಂತ ಸುಮ್ಮನಿರಲಾದೀತೆ..? ಅದಕ್ಕೆ ಒಂದು ಮಾಸ್ಟರ್ಪ್ಲಾನ್ ಮಾಡುತ್ತವೆ..ಮುಂದೆ..?
ಅನಿಕ್ ದತ್ತ
ಇದು 2012 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆದ ಬೆಂಗಾಲಿ ಸಿನಿಮಾ ಭೂತೆರ್ ಭಬಿಷ್ಯಾತ್ ನ ಕಥೆ. ಅನಿಕ್ ದತ್ತ ನಿರ್ದೇಶನದ ಈ ಚಿತ್ರ ಈವತ್ತಿನ ನಗರಜೀವನ, ಸಿನಿಮಾರಂಗ ಮುಂತಾದವುಗಳನ್ನು ಯಾವೊಂದು ಪೂರ್ವಗ್ರಹವಿಲ್ಲದೆ ವಿಡಂಬನೆ ಮಾಡುತ್ತಾ ಸಾಗುತ್ತದೆ. ಈ ಚಿತ್ರದಲ್ಲಿ ನನಗಿಷ್ಟವಾದದ್ದು ಕಥೆಯಲ್ಲಿನ ಹೊಸತನ. ಇಂತಹಾ ಒಂದು ಕಥೆಯನ್ನೂ ಸಿನಿಮಾ ಮಾಡಬಹುದಾ.? ಎಂಬ ಪ್ರಶ್ನೆ ಮೂಡುವಂತಹ ಕಥೆಗಳನ್ನು ಸಿನಿಮಾ ಮಾಡುವಲ್ಲಿ ನನಗೆ ಗೊತ್ತಿರುವಂತೆ ಬೆಂಗಾಲಿ ಮತ್ತು ಮಳಯಾಳಂ ಭಾಷಿಗರು ಮೊದಲಿಗರು. ಸಣ್ಣ ಸಣ್ಣ ನೀತಿಕಥೆಗಳು, ಕೇವಲ ಒಂದೇ ಎಳೆಯ ಕಥೆಗಳು, ದೊಡ್ಡ ಕಾದಂಬರಿಗಳು ಹೀಗೆ ಯಾವುದನ್ನೂ ಬೇಕಾದರೂ ಸಿನಿಮಾ ಮಾಡಿಬಿಡುತ್ತಾರೆ.
ಭೂತೆರ್ ಭಬಿಷ್ಯಾತ್ ಕೂಡ ಅಂತಹುದೇ ಒಂದು ಚಿತ್ರವಾದರೂ ನಿರೂಪಣೆಯಲ್ಲಿರುವ ತಿಳಿಹಾಸ್ಯ, ಕಲಾವಿದರ  ಪಾತ್ರೋಚಿತ ಅಭಿನಯ ಮುಂತಾದವು ಸಿನಿಮಾವನ್ನು ಎತ್ತರಕ್ಕೇರಿಸುತ್ತವೆ.
ಬಿಡುವು  ಮಾಡಿಕೊಂಡು ಈ ಸಿನಿಮಾವನ್ನೊಮ್ಮೆ ನೋಡಿ..





Monday, July 9, 2012

ನೋಡಲೇ ಬೇಕಾದ ಚಿತ್ರಗಳು -9


ಪಿಮ್ ಮತ್ತು ಪ್ಲಾಯ್ ಸಯಾಮಿ ಅವಳಿಗಳು. ಹುಟ್ಟಿದಾಗಿನಿಂದ ಹೊಟ್ಟೆಯ ಒಂದು ಭಾಗ ಅಂಟಿಕೊಂಡಿದ್ದರಿಂದ ಅವರಿಬ್ಬರಿಗೂ ಯಾವಾಗಲೂ ಜೊತೆಯಲ್ಲಿರಬೇಕಾದ ಅನಿವಾರ್ಯತೆ ಇದೆ.ಅದವರಿಗೆ ಬೇಸರವೂ ಇಲ್ಲ. ಮತ್ತು ರೇಜಿಗೆಯನ್ನೂ ಹುಟ್ಟಿಸಿಲ್ಲ. ಎರಡುದೇಹವಿದ್ದರೂ ಅದು ಒಂದಕ್ಕೊಂದು ಬೆಸೆದುಕೊಂಡಿರುವುದರಿಂದ ಎರಡುಜೀವ ಒಂದು ದೇಹವೆನ್ನುವಂತಾಗಿಬಿಟ್ಟಿರುತ್ತಾರೆ. ಅದರಲ್ಲೂ ಪ್ಲಾಯ್‌ಗೆ ಪಿಮ್ ಮೇಲೆ ಅತೀವ ಪ್ರೀತಿ. ಅತೀ ಎನ್ನುವಷ್ಟು ಪೊಸ್ಸೆಸಿವ್ ಆಗಿದ್ದರೂ ಪಿಮ್‌ಗೆ ಉಸಿರುಕಟ್ಟಿಹಾಕಿದಂತಾಗಿರುವುದಿಲ್ಲ. ಆ ಪ್ರೀತಿ ಅವಳಿಗೂ ಇಷ್ಟವೆ. ಆದರೆ ಅದೊಂದು ದಿನ ವೀ ಎನ್ನುವ ಹುಡುಗ ಪಿಮ್-ಪ್ಲಾಯ್‌ಗೆ ಪರಿಚಯವಾಗುತ್ತಾನೆ. ಅವನಿಗೆ ಪಿಮ್‌ನ ಮೇಲೆ ಪ್ರೀತಿ ಹುಟ್ಟುತ್ತದೆ. ಹಾಗೆ ಪಿಮ್‌ ಕೂಡ ಅವನಿಗೆ ಮನ ಸೋಲುತ್ತಾಳೆ.ಅವರ ಪ್ರೀತಿಗೆ ಅಡ್ಡಬರುವುದು ಇದೇ ಪ್ಲಾಯ್. ಪ್ಲಾಯ್ ಅವರಿಬ್ಬರು ಒಂದಾಗುವುದನ್ನು ಸಹಿಸದೆ ತಡೆಯಲು  ಪ್ರಾರಂಭಿಸುತ್ತಾಳೆ. ಅವರಿಬ್ಬರ ನಡುವೆ ತಾನೇ ತಡೆಗೋಡೆಯಾಗುತ್ತಾಳೆ.ಆಗ ಪಿಮ್ ಳಿಗೆ ಪ್ಲಾಯ್ ನ ಪ್ರೀತಿ ಚಿತ್ರಹಿ೦ಸೆಯಾಗಿ ಕಾಣತೊಡಗುತ್ತದೆ.ಜೀವನ ಪರ್ಯಂತ ನಾವು ಜೊತೆಯಲ್ಲೇ ಇರೋಣ ಎಂದು ಒಬ್ಬರೊನ್ನಬ್ಬರು ಹಚ್ಚಿಕೊಂಡಿದ್ದ ಸೋದರಿಯರಿಗೆ ಈಗ ಅರೆಘಳಿಗೆ ಜೊತೆಯಲ್ಲಿರುವುದೂ ಯಾತನಾಮಯವೆನಿಸುತ್ತದೆ.ಪಿಮ್ ವೈದ್ಯಕೀಯ ನೆರವಿನಿಂದ ಬೇರಾಗಲು ಯೋಚಿಸುತ್ತಾಳೆ.. ಆದರೆ ಪ್ಲಾಯ್ ಒಪ್ಪುವುದಿಲ್ಲ...ಇಂಥ ಸಂದಿಗ್ಧ ಪರಿಸ್ಥಿತಿ ಮುಂದೆ ಅದೆಷ್ಟು ಅವಘಡಗಳಿಗೆ ಕಾರಣವಾಗುತ್ತದೆಂದರೇ ಅದನ್ನು ನೋಡಿ ಅನುಭವಿಸುವುದೇ ಒಳ್ಳೆಯದು. ಹಾ..ಅಂದಹಾಗೆ ಇದು ಥೈವಾನ್ ಭಾಷೆಯ ಅಲೋನ್ ಚಿತ್ರದ ತಿರುಳು.
2007ರಲ್ಲಿ ತೆರೆಗೆ ಬಂದ ಈ ಚಿತ್ರದ ನಿರ್ದೇಶಕರು ಬಾಂಜೋಂಗ್ ಪಿಸನ್‌ತನುಕನ್ ಮತ್ತು ಪಾರ್ಕ್‌ಪೂಮ್ ವಾಂಗ್‌ಪೂಮ್. ಈ ನಿರ್ದೇಶಕದ್ವಯರ ಹಿಂದಿನ ಚಿತ್ರ ಶಟರ್ ನೀವು ನೋಡಿರಬಹುದಾದರೂ ಈ ಚಿತ್ರದ ವಿಭಿನ್ನ ಕಥೆ ಅವರ ನಿರ್ದೇಶನದ ಚಿತ್ರಗಳಲ್ಲೇ ವಿಶಿಷ್ಟವೆನಿಸುತ್ತದೆ. ಪ್ರಾರಂಭದಲ್ಲಿ ಹಾರರ್ ಭೂತ-ಪ್ರೇತ ಪಿಶಾಚಿಯ ಚಿತ್ರದಂತೆ ಭಾಸವಾದರೂ ಬರುಬರುತ್ತಾ ಮನಶಾಸ್ತ್ರದಡಿಯಲ್ಲಿ ಉತ್ತಮ ಮನೋವೈಜ್ಞಾನಿಕ ಚಿತ್ರವಾಗಿಯೂ, ಮನೋಜ್ಞ ಚಿತ್ರವಾಗಿಯೂ ನಮ್ಮ ಮನಗೆಲ್ಲುತ್ತದೆ. ಚಿತ್ರದ ಮಂದಗತಿಯ ನಿರೂಪಣೆ ಬೋರ್ ತರಿಸುವುದಿಲ್ಲ.
ಸಯಾಮಿ  ಅವಳಿಗಳ ಬಗ್ಗೆ ಸುಮಾರು ಸಿನೆಮಾಗಳು ಬಂದಿವೆ.ನೀವು ಖ್ಯಾತ ನಿರ್ದೇಶಕ ಬ್ರಯಾನ್ ಡಿ ಪಲ್ಮ ನಿರ್ದೇಶನದ 1973 ರಲ್ಲಿ ತೆರೆಗೆ ಬಂದ ಸಿಸ್ಟರ್ಸ್ ಸಿನೆಮಾ ನೋಡಿರಬಹುದು.ಅದು 2006 ರಲ್ಲೂ ಕೂಡ ಪುನರ್ನಿರ್ಮಾಣವಾಗಿತ್ತು. ಸಿಸ್ಟರ್ಸ್ ಹೆಚ್ಚುಕಡಿಮೆ ಇದೆ ರೀತಿಯ ಕಥೆ ಹೊಂದಿದ್ದರೂ ಅದರಲ್ಲಿ ಪತ್ತೆಧಾರಿಕೆಗೆ ಹೆಚ್ಚು ಗಮನಕೊಡಲಾಗಿತ್ತು.ಹಾಗೆ 2003ರಲ್ಲಿ ಬಂದ ಸ್ಟಕ್ ಆನ್ ಯೂ, 1999ರಲ್ಲಿ ಬಂದ ಟ್ವಿನ್ಸ್ ಫಾಲ್ಸ್ ಇಡಾಹೋ ಕೂಡ ಸಯಾಮಿ ಅವಳಿಗಳ ಕುರಿತಾದ ಸಿನೆಮಾಗಳಾಗಿವೆ.
ಈಗ ಕನ್ನಡದಲ್ಲೂ ಕೂಡ ದ್ವಾರಕೀಶ್ ನಿರ್ಮಾಣದ. ಪಿ.ಕುಮಾರ್ ನಿರ್ದೇಶನದ 'ಚಾರುಲತ' ಕೂಡ ಸಯಾಮಿ ಅವಳಿಸೋದರಿಯರ ಕಥೆಯಾಧಾರಿತ ಚಿತ್ರವಾಗಿದೆ.

.