Thursday, August 18, 2016

ಸೆನ್ಸಾರ್ ಬಗೆಗಿನ ಪುಸ್ತಕ ಬರೆದದ್ದು ಯಾಕೆಂದರೆ..?


ನನ್ನದೇ ಉದಾಹರಣೆ  ಹೇಳುತ್ತೇನೆ ಕೇಳಿ..ನಮ್ಮ ಚಿತ್ರ ಮಾರ್ಚ್ 23 ಒಂದು ಬರ್ಬರತೆ ಮತ್ತು ಕ್ರೌರ್ಯವನ್ನು  ಒಳಗೊಂಡಿದ್ದ ಥ್ರಿಲ್ಲರ್ ಚಿತ್ರ. ಅದನ್ನು ನಾನು  ಹಾರರ್ ಥ್ರಿಲ್ಲರ್ ಎಂದೆ ಕರೆಯುತ್ತೇನೆ. ಏಕೆಂದರೆ ಅದರಲ್ಲಿ ವ್ಯಕ್ತಿಯೊಬ್ಬನ ಕೊರಳನ್ನು ಗರಗಸದಿಂದ ಕುಯ್ಯುವ ದೃಶ್ಯವಿದೆ, ಮತ್ತೊಬ್ಬನನ್ನು ಮುಳ್ಳಿನ ಕುರ್ಚಿಯ ಮೇಲೆ ಕೂರಿಸಿ ಶಿಕ್ಷೆ ಕೊಡುವಾಗ ಅವನ ಅಂಡು ರಕ್ತಮಯವಾಗುವ ಸನ್ನಿವೇಶವಿದೆ, ಸೊಂಟಕ್ಕೆ ಈಟಿಯಿಂದ ರಕ್ತ  ಚಿಮ್ಮುವಂತೆ ಚುಚ್ಚುವ ಶಾಟ್ ಇದೆ. ಜೊತೆಗೆ ಸ್ವಾಮಿಜಿಯೊಬ್ಬನನ್ನು ಚಿತ್ರಹಿಂಸೆ ಕೊಡುವ ದೃಶ್ಯವಿದೆ. ಈಗ ಹೇಳಿ ನನ್ನ ಚಿತ್ರಕ್ಕೆ ಯಾವ ಪ್ರಮಾಣ ಪತ್ರ ಕೊಡಬಹುದು..?
ಆವತ್ತಿಗೆ ಮತ್ತು ಈವತ್ತಿಗೂ ಸೆನ್ಸಾರ್ ಮತ್ತು ಚಿತ್ರಕರ್ಮಿಗಳ ಯುದ್ಧ ನಡೆಯುತ್ತಲೇ ಇತ್ತು. ಯಾವುದೇ ಮುಲಾಜಿಲ್ಲದೆ ನಮ್ಮ ಚಿತ್ರಕ್ಕೆ ಎ ಪ್ರಮಾಣ ಪತ್ರ ಬಂದುಬಿಡುತ್ತದೆ ಸಾರ್, ಆಮೇಲೆ ಉಪಗ್ರಹ ಹಕ್ಕು ಮಾರಾಟವಾಗುವುದಿಲ್ಲ, ಎ ಸರ್ಟಿಫಿಕೇಟ್ ಎಂದಾಕ್ಷಣ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಕಾಲಿಕ್ಕುವುದಿಲ್ಲ..ಎಂದು ಅಲವತ್ತುಗೊಂಡಿದ್ದರು ನಿರ್ಮಾಪಕರು. ಅವರ ಕಷ್ಟ ನನಗೆ ಅರ್ಥವಾಗುತ್ತದೆ. ಕೋಟಿ ರೂಪಾಯಿ ಹಣ ಸುರಿದಾಗ ಎಲ್ಲೆಲ್ಲಿ ಸೇಫ್ ಆಗಬಹುದೋ ಅಲ್ಲೆಲ್ಲಾ ಸೇಫ್ ಆಗುವುದಕ್ಕೆ ನೋಡುವುದರಲ್ಲಿ ತಪ್ಪಿಲ್ಲ.
 ಸಾರ್ ಯೋಚಿಸಬೇಡಿ.. ಒಂದು ಕತ್ತರಿ ಪ್ರಯೋಗವಿಲ್ಲದೆ  ಸಿನಿಮಾಕ್ಕೆ ಯುಎ ಬರುತ್ತದೆ. ಯಾವ ಶಬ್ಧವೂ ಮ್ಯೂಟ್ ಆಗುವುದಿಲ್ಲ ... ಎಂದು ನಾನು ಹೇಳಿದ್ದಕ್ಕೆ ಮಾತಾಡದೆ ಸುಮ್ಮನೆ ನನ್ನ ಮುಖ ನೋಡಿದ್ದರು ನಿರ್ಮಾಪಕರು. ಅವರಷ್ಟೇ ಅಲ್ಲ, ಸಾಕಷ್ಟು ಜನ. ನಾನು ಭರವಸೆಯಿಂದ ನುಡಿಯಲು ನನ್ನದೇ ಆದ ಕಾರಣವಿತ್ತು. ನಾನು ಸ್ಕ್ರಿಪ್ಟ್  ಬರೆಯುವ ಸಮಯದಲ್ಲಿ ಸೆನ್ಸಾರ್ ಮಂಡಳಿಗೆ ಹೋದವನೇ ಅಲ್ಲಿ ದೊರೆಯುವ ನಿಯಮಾವಳಿ ಪುಸ್ತಕವನ್ನು ತೆಗೆದುಕೊಂಡು ಬಂದಿದ್ದೆ. ಅದನ್ನು ವಿವರವಾಗಿ ಅದ್ಯಯನ ಮಾಡಿದ್ದೆ. ಹಾಗಾಗಿ ಅದರ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಿದ್ದೆ.
ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ, ಒಂದೇ ಕತ್ತರಿ ಪ್ರಯೋಗ, ಮತ್ತು  ಒಂದೇ ಮ್ಯೂಟ್ ಜೊತೆಗೆ ನನಗೆ ಯುಎ ಸಿಕ್ಕಾಗ ನಿರ್ಮಾಪಕರು ಖುಷಿಯಾಗಿದ್ದರು. ಲೀಟರ್ ಗಟ್ಟಲೆ ರಕ್ತ ಚಲ್ಲಿದ್ದನ್ನು ಸೆನ್ಸಾರ್ ಮಂದಿ ಸುಮ್ಮನೆ ಬಿಟ್ಟಿದ್ದರು, ಕತ್ತರಿಸಿದ್ದು, ಕುಯ್ದದ್ದು ಹಾಗೆಯೇ ಬಿಟ್ಟಿದ್ದರು. ಆದರೆ ಸ್ವಾಮಿಜಿಯ ದೃಶ್ಯದಲ್ಲಿ ಅದು ನಿಜವಾದ ಸ್ವಾಮಿಜಿಯ ವೀಡಿಯೊಗೆ ಹೋಲುತ್ತದೆ ಎನ್ನುವ ಕಾರಣದಿಂದ ಕತ್ತರಿಸಲು ಹೇಳಿದ್ದರು, ಅದೂ ಕೇವಲ ಹನ್ನೊಂದು ಸೆಕೆಂಡ್ಸ್...
ಸೆನ್ಸಾರ್ ಮಂದಿ  ಚಿತ್ರರಂಗ ಇಬ್ಬರದೂ ಅವಿನಾಭಾವ ಮತ್ತು  ಅನಿವಾರ್ಯ  ಸಂಬಂಧ ಇದ್ದೇ ಇದೆ. ಸೆನ್ಸಾರ್  ಇಲ್ಲದೆ  ಸಿನಿಮಾ ಬಿಡುಗಡೆ ಮಾಡುವ ಹಾಗೆ ಇಲ್ಲ. ಆದರೆ  ಈ ಸೆನ್ಸಾರ್  ಮಂದಿ  ಮತ್ತು  ಚಿತ್ರಕರ್ಮಿಗಳ ನಡುವಣ ಗುದ್ದಾಟಕ್ಕೆ ಇತಿಹಾಸವಿದೆ. ಏಕೆ ಹೀಗಾಗುತ್ತದೆ..?
ಸೆನ್ಸಾರ್  ಮಂದಿ  ಸರಿಯಾಗಿ  ಸಿನೆಮಾವನ್ನು  ನೋಡುವುದಿಲ್ಲ, ಅರ್ಥೈಸಿಕೊಳ್ಳುವುದಿಲ್ಲ...
ಅವರು ಸುಖಾಸುಮ್ಮನೆ ಕೆಂಪು ಕಡೆ ರಕ್ತ ಅನ್ನುತ್ತಾರೆ, ಕಟ್  ಮಾಡಿಸುತ್ತಾರೆ...
ಮಾಮೂಲಿ ಜನರು ಆಡುವ ಮಾತು ಮಾತಿಗೂ  ಕತ್ತರಿ  ಹಾಕುತ್ತಾರೆ..
ಒಟ್ಟಾರೆ ಇಡೀ  ಸಿನಿಮಾದ ಒಟ್ಟಾರೆ ಭಾವವನ್ನು ಕೊಂದು ಬಿಡುವ ಅಥವಾ  ಗಣನೀಯ  ಪ್ರಮಾಣದಲ್ಲಿ  ಕಡಿಮೆ ಮಾಡುವುದರಲ್ಲಿ ಸೆನ್ಸಾರ್  ಮಂದಿ  ಯಾವತ್ತಿಗೂ ಮುಂದು..
ಎಂಬಿತ್ಯಾದಿ  ಆರೋಪಗಳನ್ನು ಸರ್ವೇ ಸಾಮಾನ್ಯವಾಗಿ ನಾವು ಕೇಳಬಹುದು.ಆದರೆ ಸೆನ್ಸಾರ್  ಮಂದಿ ತುಂಬಾ ವಿವರವಾಗಿ ಸಿನಿಮಾ ನೋಡುತ್ತಾರೆ, ಅದನ್ನು ಸ್ಕ್ರಿಪ್ಟ್ ಜೊತೆಗೆ ತಾಳೆ ಹಾಕುತ್ತಾರೆ, ಮುಂದೆ ಕೂರಿಸಿಕೊಂಡು ಸ್ಪಷ್ಟೀಕರಣ ಕೇಳುತ್ತಾರೆ. ಆಮೇಲೆ ಸರ್ಟಿಫಿಕೇಟ್ ಬಗ್ಗೆ ಮಾತನಾಡುತ್ತಾರೆ. ಒಬ್ಬ ಚಿತ್ರಕರ್ಮಿಗೆ ಮೊದಲೇ ಸೆನ್ಸಾರ್  ಬಗೆಗೆ ತಿಳಿದುಹೋದರೆ ಕತ್ತರಿ ಪ್ರಯೋಗಕ್ಕೆ ಕತ್ತರಿ ಹಾಕಿಬಿಡಬಹುದು. ಎಷ್ಟನ್ನು ಚಿತ್ರೀಕರಿಸಬೇಕು, ಯಾವ ಪದ ಬಳಸಬೇಕು, ಸೆನ್ಸಾರ್ ಕಾಯಿದೆ ಏನು ಹೇಳುತ್ತದೆ, ಕಾನೂನಿನ ಚೌಕಟ್ಟಿನಲ್ಲಿ ಏನಿದೆ..? ಪರಿಷ್ಕರಣ ಸಮಿತಿ ಎಲ್ಲಿದೆ..? ಸೆನ್ಸಾರ್  ನಮಗೆ ಸಮಂಜಸ ಎನಿಸದಿದ್ದಾಗ ನಮ್ಮ ಮುಂದಿನ ನಡೆ ಏನು..? ಇತ್ಯಾದಿಗಳ ಬಗ್ಗೆ ಚಿತ್ರಕರ್ಮಿ ಅರಿತುಕೊಳ್ಳುವುದು ಅಗತ್ಯ. ಏಕೆಂದರೆ ಚಿತ್ರೀಕರಿಸಿದ ಮೇಲೆ ಅದನ್ನು ಕತ್ತರಿಸಿದರೆ, ಮಂಕಾಗಿಸಿದರೆ ಸಮಯ ಹಣ ಮತ್ತು ದೃಶ್ಯದ ಭಾವ ಮೂರು ವ್ಯರ್ಥವಾಗಿಬಿಡುತ್ತದೆ. ಒಂದೊಂದು ಶಾಟ್ ತೆಗೆಯಲು ಗಂಟೆಗಟ್ಟಲೆ ಸಮಯ, ಹಲವಾರು ಜನರ ಶ್ರಮ ಮತ್ತು ಲಕ್ಷಾಂತರ ಹಣ ಖರ್ಚಾಗಿರುತ್ತದೆ. ಅದನ್ನು ಸೆನ್ಸಾರ್ ಮಂದಿ ಸಾರಾಸಗಟಾಗಿ ಕತ್ತರಿಸಿ ಎಂದರೆ ಮೈಯೆಲ್ಲಾ ಉರಿಯುತ್ತದೆ.
ಮೇಡಂ ರೇಖಾರಾಣಿ ಅದೊಂದು  ದಿನ  ಕರೆಮಾಡಿ ಸೆನ್ಸಾರ್ ಮಂಡಳಿಯಾ ನಿಯಮಾವಳಿಗಳ ಪುಸ್ತಕ ಇಂಗ್ಲೀಷ್ ನಲ್ಲಿದೆ, ಅದನ್ಯಾಕೆ ನೀವು ಕನ್ನಡೀಕರಿಸಬಾರದು ಎಂದರು. ಹಾಗಂದದ್ದೇ ನನಗೂ ಹೌದಲ್ಲ ಎನಿಸಿದ್ದೆ ಬರೆಯಲು ಪ್ರಾರಂಭಿಸಿದೆ. ಆವಾಗ ಅಚಾನಕ್ ಆಗಿ ಸಿಕ್ಕ ಹುಬ್ಬಳ್ಳಿಯ ಶಿವಾನಂದ್ ಮುತ್ತನ್ನನವರ್ ಸಾರ್ ನೀವು ಬರೆಯಿರಿ, ನಾನದನ್ನು ಪ್ರಕಟಿಸುತ್ತೇನೆ, ಅದನ್ನು ಉಚಿತವಾಗಿಯೇ ಆಸಕ್ತರಿಗೆ ನೀಡೋಣ ಎಂದುಬಿಟ್ಟರು.ಪರಮೇಶ್ವರ್ ಹೆಗಲ ಮೇಲೆ ಕುಳಿತು ಬರೆಯಲೇ ಬೇಕೆಂದರು, ಜಗದೀಶ್ ಮತ್ತು ಚಂದ್ರಶೇಖರ್ ಬರೆದುಬಿಡಿ ನಾವಿದ್ದೀವಿ ಎಂದರು, ಗೆಳೆಯರು ಕೈಜೋಡಿಸಿದರು... ಇನ್ನು ಮಾತಾಡುವುದು ಏನಿದೆ.. ಅದೊಂದು ಪುಸ್ತಕ ಬರೆದುಬಿಟ್ಟೆ. ಅದು  ಮಾಜಿಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಕೈಯಿಂದ ಆಗಸ್ಟ್ 15  ra ಸ್ವಾತಂತ್ರ್ಯದಿನಾಚರಣೆಯಂದು ಅದ್ದೂರಿಯಾಗಿ  ಬಿಡುಗಡೆಯಾಯಿತು..