Saturday, September 5, 2015

ರಿಮೇಕ್? ನನಗೆ ಗೊತ್ತಿಲ್ಲ..

ಅದನ್ನು ಧೈರ್ಯ ಎನ್ನಬೇಕೆ ಎಂಬುದು ಪ್ರಶ್ನೆ. ನಮಗೆಲ್ಲಾ ಗೊತ್ತಿರುವಂತೆ ಕೇಸ್ ನಂಬರ್ 18/9 ಚಿತ್ರದ ಮೂಲ ತಮಿಳು. ನಿರ್ದೇಶಕ ಬಾಲಾಜಿ ಶಕ್ತಿವೇಲು ಸುಮಾರು ಒಂದೂವರೆ ವರ್ಷ ಸಮಯ ತೆಗೆದುಕೊಂಡು ರಚಿಸಿದ ಸ್ಕ್ರಿಪ್ಟ್ ಅದು. ಬಿಡುಗಡೆಯಾಗಿ ಸೂಪರ್ ಹಿಟ್ ಆದ ಚಿತ್ರ ಆಸ್ಕರ್ ವರೆಗೂ ಸಾಗಿತ್ತು. ಅದನ್ನೇ ಕನ್ನಡದಲ್ಲಿ ಮಾಡಿದರು. ವಿಷಯ ಏನೆಂದರೆ ಆ ಚಿತ್ರದ್ದು ನಿಜವಾದ ಕತೆ, ಆ ಕತೆಯಲ್ಲಿರುವ ಪಾತ್ರಧಾರಿಗಳು ಈವತ್ತಿಗೂ ಬೆಂಗಳೂರಿನಲ್ಲಿದ್ದಾರೆ, ಜೆಪಿ ನಗರದಲ್ಲೋ ಎಲ್ಲೋ ಇದ್ದಾರೆ ಎಂದಿದ್ದರು ನಿರ್ದೇಶಕರು. ಅಷ್ಟೇ ಅಲ್ಲ, ವಾಹಿನಿಯೊಂದರಲ್ಲಿ ನೇರ ಪ್ರಸಾರದಲ್ಲಿ ದಿನಪೂರ್ತಿ ಅದರ ಬಗ್ಗೆ ಮಾತನಾಡಿದ್ದರು.
ಹಾಗಾದರೆ ಅದು ಧೈರ್ಯವಾ? ಕಣ್ಮುಂದೆ ಅದು ರಿಮೇಕ್ ಎಂಬುದು ಗೊತ್ತಿದ್ದರೂ ಒಬ್ಬ ನಿರ್ದೇಶಕ ಪ್ರಜ್ಞಾಪೂರ್ವಕವಾಗಿ ಅದೇಗೆ ಹಾಗೆ ಹೇಳಲು ಸಾಧ್ಯ. ಅದಕ್ಕಾಗಿ ಪುರಾವೆ ಸೃಷ್ಟಿಸಾಲು ಸಾಧ್ಯ. ಹಾಗೆಯೇ ಮತ್ತೊಂದು ಚಿತ್ರದ ಕನ್ನಡ ಅವತರಣಿಕೆಯಲ್ಲಿ ಇದು ಮಂಡ್ಯ ಬಳಿ ನಡೆದ ಸತ್ಯ ಘಟನೆ ಅದರ ನಿಜವಾದ ವ್ಯಕ್ತಿಗಳು ಇವರು ಎಂದು ಸಿನಿಮಾದಲ್ಲಿಯೇ ತೋರಿಸಲಾಗಿತ್ತು.
ಈಗ ಸಧ್ಯಕ್ಕೆ ಆಟಗಾರ ಚಿತ್ರದ ನಿರ್ದೇಶಕರು ನಾನು ರಿಮೇಕ್ ಮಾಡುವುದಿಲ್ಲ, ಅಡುಥದು ಚಿತ್ರದ ರಿಮೇಕ್ ಆಟಗಾರ ಎಂಬುದು ಸುಳ್ಳು ಎಂದಿದ್ದಾರೆ. ನನ್ನದು ಅಗಾಥಕ್ರಿಸ್ಟಿ ಕಾದಂಬರಿ ಪ್ರೇರಿತ ಸ್ವಮೇಕ್ ಎನ್ನುವ ಮಾತನಾಡಿದ್ದಾರೆ. ಹಾಗಾದರೆ ಇದು ಧೈರ್ಯವೇ?
ಕಣ್ಮುಂದೆ ಪುರಾವೆ ಇಟ್ಟು ತೋರಿಸಿದರೂ ಅದಲ್ಲ ಎಂದರೆ ಅದನ್ನು ಏನನ್ನೋದು ಅಲ್ಲವೇ? ಇಷ್ಟಕ್ಕೂ ರಿಮೇಕ್ ಸ್ವಮೇಕ್ ನಡುವೆ ರಿಮೇಕ್ ಮಾಡಲೇಬಾರದು ಎಂದು ಕಾನೂನು ಇಲ್ಲವಲ್ಲ. ಆಪ್ತಮಿತ್ರ ನೋಡಿದ ಸೂಪರ್ ಸ್ಟಾರ್ ರಜನಿ ಚಂದ್ರಮುಖಿಯನ್ನು ಭಟ್ಟಿ ಇಳಿಸಲಿಲ್ಲವೇ? ಘಜನಿ ಚಿತ್ರದಲ್ಲಿನ ಅಷ್ಟೂ ಪ್ರೀತಿಯ ದೃಶ್ಯಗಳು ಇಂಗ್ಲಿಷ್ ಚಿತ್ರದ ನಕಲಲ್ಲವೇ? ಲೈಫ್ ಇನ್ ಎ ಮೆಟ್ರೋ ಚಿತ್ರದ ನಾಲ್ಕು ಕತೆಗಳು ನಾಲ್ಕು ಚಿತ್ರಗಳಿಂದ ಯಥಾವತ್ತಾಗಿ ಕಾಪಿ ಮಾಡಿದ್ದಲ್ಲವೇ? ಎಷ್ಟು ಬಾರಿ ನೋಡಿದರೂ ಬೋರ್ ಆಗದ ಬರ್ಫಿ ಚಿತ್ರದ ಪ್ರತಿ ದೃಶ್ಯವೂ ಎರವಲು ಅಲ್ಲವೇ?
ರವಿಚಂದ್ರನ್ ಯಶಸ್ವಿ ಚಿತ್ರಗಳೆಲ್ಲಿ  ರಿಮೇಕ್ ಸಿಂಹಪಾಲಿದೆ. ಆದರೆ ಅವರ ರಿಮೇಕ್ ಗೆ ನಾವು ಅಂದರೆ ಪ್ರೇಕ್ಷಕರು ಮನಸೋತಿದ್ದೇವೆ. ಎಷ್ಟು ಚೆನ್ನಾಗಿ ರಿಮೇಕ್ ಮಾಡಿದ್ದಾರೆ ಎಂದು ಖುಷಿ ಪಟ್ಟಿದ್ದೇವೆ ಅಲ್ಲವೇ. ಅನುರಾಗ್ ಬಸು ಬರ್ಫಿ ಚಿತ್ರದಲ್ಲಿನ ಎಲ್ಲಾ ದೃಶ್ಯಗಳು ಕಾಪಿ ಆದರೂ ಅದನ್ನೆಲ್ಲಾ ಸೇರಿಸಿ ಹೆಣೆದ ಕತೆಗೆ ನಾವು ಮಾರುಹೊಗಿದ್ದೇವೆ. ಇಲ್ಲಿ ರಿಮೇಕ್ ಸ್ವಮೇಕ್ ಮುಖ್ಯವಾಗಿಲ್ಲ. ಬದಲಿಗೆ ಅದನ್ನು ಹೆಣೆದ ಪರಿಗೆ ಅನುವಾದಿಸಿದ ರೀತಿಗೆ ಮಾರುಹೋಗುವುದು ನಮ್ಮ ಜಾಯಮಾನ. ಚಿತ್ರ ಚೆನ್ನಾಗಿದೆ ಎಂದರೆ ಮತ್ತದನ್ನು ಚೆನ್ನಾಗಿ ಮಾಡಿದ್ದಾರೆ ಎಂದರೆ ಅದರ ಇತರೆ ವಿಷಯಗಳು ಗೌಣ. ಹಾಗಂತ ಶಾಟ್ ಗಳಿಂದ ಹಿಡಿದು, ಪಾತ್ರಧಾರಿಗಳ ಬಟ್ಟೆಗಳನ್ನು ಅನುಕರಿಸಿ ಪಕ್ಕಾ ಜೆರಾಕ್ಸ್ ಮಾಡುವುದು ಅಷ್ಟು ಸಮಂಜಸವಲ್ಲ. ಆ ಕತೆಯ ಭಾವವನ್ನು ಇಲ್ಲಿಯ ಸೊಗಡಿನ ಕತೆಗೆ ಅಳವಡಿಸಿದರೆ ಅದಕ್ಕಿಂತ ಚಂದವಾಗುವುದರಲ್ಲಿ ಸಂದೇಹವಿಲ್ಲ.
ಬಾಜಿಗರ್ ಚಿತ್ರವನ್ನು ತೆಗೆದುಕೊಳ್ಳಿ. ಎ ಕಿಸ್ ಬಿಫೋರ್ ಡೈಯಿಂಗ್ ಸಿನಿಮಾಕ್ಕೆ ಹಿನ್ನೆಲೆಕೊಟ್ಟು ನಾಯಕನ ಪ್ರತಿಕಾರಕ್ಕೆ ಕಾರಣ ಹೆಣೆದದ್ದರಿಂದ ಮ್ಯಾಟ್ ದಿಲ್ಲೊನ್ ಗಿಂತ ಶಾರುಖ್ ಇಷ್ಟ ಆಗುತ್ತಾರೆ. ಅಣ್ಣಯ್ಯ, ರಾಮಾಚಾರಿ ಮೂಲಕ್ಕಿಂತ ನಮ್ಮಲ್ಲೇ ಖುಷಿ ಕೊಟ್ಟಿವೆ. ಕೋರಿಯನ್ ಸಸ್ಪೆಕ್ಟ್ ಎಕ್ಷ್ ನ ಮೂಲ ತಿರುಳನ್ನು ತೆಗೆದುಕೊಂಡು ಇಲ್ಲಿಯ ಕತೆ ಹೆಣೆದ ದೃಷ್ಯಂ ಮೂಲಕ್ಕಿಂತ ಸಾವಿರಪಾಲು ಥ್ರಿಲ್ ಕೊಡುತ್ತದೆ. ಹೀಗೆ ರಿಮೇಕ್ ನಲ್ಲಿಯೂ ಸೂಪರ್ ಎನಿಸುವ ಚಿತ್ರಗಳನ್ನು ನಾವು ನೋಡಿದ್ದೇವೆ. ಆರನೆಯ ರಿಮೇಕ್ ಆದ ಟೈಟಾನಿಕ್ ಎಲ್ಲಾ ಟೈಟಾನಿಕ್ ಚಿತ್ರಗಳಿಗಿಂತ ಮುದ ನೀಡಿದೆ ಅಲ್ಲವೇ?
ಹಾಗಾಗಿ ಎಲ್ಲ ಕಡೆ ರಿಮೇಕ್ ಇದೆ. ಆದರೆ ಅದನ್ನು ಸಮರ್ಥವಾಗಿ ನಿರೂಪಿಸದೇ ಇದ್ದಾಗ ಮೂಲವೇ ಎಷ್ಟು ಚೆನ್ನಾಗಿತ್ತು ಎನಿಸಿಕೊಳ್ಳುತ್ತದೆ.  ಜಾನಿ ಡೆಪ್ ಅಂಜೆಲಿನಾ ಜೂಲಿ ಇದ್ದೂ ನಮಗೆ ಟೂರಿಸ್ಟ್ ಗಿಂತ ಫ್ರೆಂಚ್ ಚಿತ್ರ ಅಂತೋನಿ ಜಿಮ್ಮರ್ ಇಷ್ಟವಾಗುತ್ತದೆ, ಹಾಗೆಯೇ ದಿ ಗರ್ಲ್ ವಿಥ್ ಡ್ರ್ಯಾಗನ್ ಟಾಟೂ, ಓಲ್ಡ್ ಬಾಯ್ ಮುಂತಾದ ಚಿತ್ರಗಳ ರಿಮೇಕ್ ಪೇಲವ ಎನಿಸುತ್ತದೆ. ಕನ್ನಡದಲ್ಲಿಯೂ ಅಂತಹ ಪಟ್ಟಿ ಮಾಡಬಹುದಾಗಿದೆ. ಆದರೆ ಅದಲ್ಲವೇ ಅಲ್ಲಾ ಎನ್ನುವ ಧೈರ್ಯಕ್ಕೆ ಮಾತ್ರ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಸಧ್ಯದ ಚರ್ಚೆಯ ಸಂಗತಿ.
ಪ್ರೇಮಾಭಿಷೇಕ ಎನ್ನುವ ಕನ್ನಡ ಚಿತ್ರವೊಂದರ ಪತ್ರಿಕಾಗೋಷ್ಠಿ. ಅದರಲ್ಲಿ ನಿರ್ದೇಶಕರು ನಾನು ಶಿಕ್ಷಕ, ಒಂದೊಳ್ಳೆ ಕತೆ ಮಾಡಿ ಚಿತ್ರ ನಿರ್ದೇಶನ ಅಮಡಿ ನಾನೇ ನಾಯಕನಾಗಿದ್ದೇನೆ ಎಂದು ತಮ್ಮನ್ನೇ ಪರಿಚಯಿಸಿಕೊಂಡಿದ್ದರು. ಅದಾದ ಮೇಲೆ ತಮ್ಮ ಬಗ್ಗೆ ಹೇಳುತ್ತಾ ನಾನು ಆಗಾಗ ಸಣ್ಣಕವಿತೆಗಳನ್ನು ಬರೆಯುತ್ತೇನೆ, 
ಉದಾಹರಣೆಗೆ ಎಂದು ಒಂದು ಕವನವನ್ನು ಓದಿದರು.
ಅವಳು ಎದುರಿಗೆ ಸಿಕ್ಕಳು
ನನ್ನನ್ನು ನೋಡಿ ನಕ್ಕಳು
ನಮಗೀಗ ಎರಡು ಮಕ್ಕಳು 
ಎಂದರು. ಆಶ್ಚರ್ಯಚಕಿತರಾದ ಮಾಧ್ಯಮದವರು ಇದು ಡುಂಡಿರಾಜ್ ಅವರ ಕವನ ಅಲ್ಲವೇ ಎನ್ನುವ ಪ್ರಶ್ನೆಗೆ ಅವರ ಉತ್ತರ ಹೀಗಿತ್ತು.
"ಏನೋಪ್ಪಾ.. ಅವರೂ ಬರೆದಿರಬಹುದು.. ನನಗೆ ಗೊತ್ತಿಲ್ಲ..."

Friday, September 4, 2015

ಆಟ ಅಡ್ಸೋನು ಎಲ್ಲೋ ಕುಂತವ್ನೆ...

ಮೃತ್ಯು ಭಯ ಕಾಡಿದಾಗ ಮನುಷ್ಯ ಸತ್ಯವನ್ನು ಬಾಯಿಬಿಟ್ಟೆ ಬಿಡುತ್ತಾನೆ, ಸಾವು ಕಣ್ಣೆದುರಿಗೆ ಕಂಡಾಗ ಆತನಿಗೆ ತನ್ನ ತಪ್ಪಿನ ಅರಿವಾಗುತ್ತದೆ..ಇದು ನನ್ನ ಮೊದಲ ಚಿತ್ರದ ಒಂದು ಸಾಲಿನ ಎಳೆ. ಹಾಗೆ ನೋಡಿದರೆ ಮಾರ್ಚ್ 23 ಚಿತ್ರವನ್ನು ಒಂದು ಕತೆ ಬರೆದು ಅದಕ್ಕೆ ಚಿತ್ರಕತೆ ಹೆಣೆದು ಆನಂತರ ಮಾಡಿದ ಚಿತ್ರವಲ್ಲ. ಒಂದು ಸಿನಿಮಾ ಆಫೀಸ್ ನಲ್ಲಿ ಕುಳಿತಿದ್ದಾಗ ತಿಂಗಳು ಗಟ್ಟಲೆ ಆ ಸಿನಿಮಾ ಸೆಟ್ಟೇರದೇ ಇದ್ದಾಗ ಗೆಳೆಯರೆಲ್ಲಾ ಸೇರಿ ನಮ್ಮೆಲ್ಲರ ಬಳಿ ಇಷ್ಟು ಹಣವಿದೆ, ಇದಕ್ಕೆ ತಕ್ಕ ಹಾಗೆ ಒಂದು ಥ್ರಿಲ್ಲರ್ ಚಿತ್ರವನ್ಯಾಕೆ ಮಾಡಬಾರದು ಎಂದಿದ್ದರು. ಸರಿ. ಥ್ರಿಲ್ಲರ್ ಹೇಗೆ ಮಾಡಬಹುದು, ಯಾವ ಕತೆ ಆಯ್ಕೆ ಮಾಡಿಕೊಳ್ಳಬಹುದು  ಎಂದೆಲ್ಲಾ ತಲೆ ಕೆಡಿಸಿಕೊಂಡಿದ್ದ ನನಗೆ ಮಾಮೂಲಿ ಒಂದು ಕೊಲೆ ನಡೆಯುತ್ತದೆ, ಅದನ್ನು ಹುಡುಕುತ್ತಾರೆ ಎಂದೋ, ಅಥವಾ ಒಂದು ಪ್ರದೇಶದಲ್ಲಿ ಅಥವಾ ಒಂದು ನಿರ್ಧಿಷ್ಟ ಜಾಗದಲ್ಲಿ ಒಂದಷ್ಟು ಜನ ಟ್ರ್ಯಾಪ್ ಆಗುತ್ತಾರೆ, ಬಿಡಿಸಿಕೊಂದು ಬರಲು ಒದ್ದಾಡುತ್ತಾರೆ.. ಎಂದೋ ಕತೆ ಮಾಡುವುದು ಅಷ್ಟು ಸೇರಲಿಲ್ಲ. ಈ ನಡುವೆ ನಾನು ಸಾಕಷ್ಟು ತಲೆ ಕೆಡಿಸಿಕೊಂಡಿದ್ದು ಬ್ಲೇರ್ ವಿಚ್ ಪ್ರಾಜೆಕ್ಟ್ ಬಗ್ಗೆ. ಅಷ್ಟರಲ್ಲಾಗಲೇ ಟಿವಿ ವಾಹಿನಿಯೊಂದರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧೀ ಹಂತಕ  ಶಿವರಾಸನ್ ಮತ್ತವನ ತಂಡ ಸತ್ತ ಕೋಣನಕುಂಟೆ ಒಂಟಿ ಮನೆಯ ಸುತ್ತಾ ಈಗಲೂ ನರಳುವ, ಯಾರೋ ಓಡಾಡುವ ಸಪ್ಪಳ ಕೇಳಿ ಬರುತ್ತಿದೆ, ಜನ ಅಲ್ಲಿಗೆ ಹೋಗಲು ಹೆದರುತ್ತಿದ್ದಾರೆ ಎನ್ನುವ ಸುದ್ದಿ ಪ್ರಸಾರವಾಗಿತ್ತು. ನಾನು ಅದನ್ನೇ ಸಿನಿಮಾ ಮಾಡಿದರೆ ಹೇಗೆ ಎಂದು ಯೋಚಿಸಿದೆ. ಕತೆ ಇಷ್ಟೇ. ಸುದ್ದಿ ವಾಹಿನಿಯ ಸುದ್ದಿ ನೋಡಿದ ಐದಾರು ಯುವ ಸಿನಿಮಾಮಂದಿ ಅಥ್ವಾ ಸಿನಿಮಾ ವಿದ್ಯಾರ್ಥಿಗಳು ಅದನ್ನು ಲೈವ್ ಚಿತ್ರೀಕರಿಸಲು ಅದೊಂದು ದಿನ ಕೋಣನ ಕುಂಟೆ ಮನೆಗೆ ಹೋಗುತ್ತಾರೆ. ಆದರೆ ಯಾರೂ ವಾಪಸ್ಸು ಬರುವುದಿಲ್ಲ. ಮೂರುದಿನದ ನಂತರ ಅವರ ಕ್ಯಾಮೆರಾ ಮತ್ತು ಟೇಪ್ ಸಿಗುತ್ತದೆ. ಅದರಲ್ಲಿನ ವೀಡಿಯೊದ ಸಂಕಲಿತ ಚಿತ್ರಣವೇ ನಮ್ಮ ಸಿನಿಮಾ ಎಂದೇ. ಆದರೆ ಗೆಳೆಯರು ಅಯ್ಯೋ ಅದನ್ನೇ ಹೇಗೋ ಮಾರಾಯ ಎರಡು ಘಂಟೆ ಎಳೀತೀಯಾ ಜನ ಎದ್ದು ಹೋಗ್ತಾರೆ ಎಂದಿದ್ದರು.
ಈ ನಡುವೆ ನನಗೆ ಎ ವೆಡ್ನೆಸ್ ಡೇ ಇಷ್ಟವಾಗಿತ್ತು, ಸಾಮಾನ್ಯನೊಬ್ಬ ದೊಡ್ಡ ಮಟ್ಟದ ಮಾಸ್ಟರ್ ಪ್ಲಾನ್ ಮಾಡುವ ಕತೆ ಹಿಡಿಸಿತ್ತು. ನಮ್ಮಲ್ಲೂ ಒಬ್ಬ ಅತೀ ಸಾಮಾನ್ಯನನ್ನು ನಾಯಕನನ್ನಾಗಿ ಮಾಡಿ, ಒಂದು ಮಾಸ್ಟರ್ ಪ್ಲಾನ್, ಒಂದು ದಿನದ ಕತೆ ಆಯ್ಕೆ ಮಾಡಿಕೊಂಡೆವು. ಆವತ್ತಿನ ಜ್ವಲಂತ ವಿವಾದಗಳು ಯಾವುದು ಎಂದಾಗ, ನಿತ್ಯಾನಂದ ರಂಜಿತ ಪ್ರಕರಣ, ರಾಜಕಾರಣಿ ಅನೈತಿಕ ಪ್ರಕರಣ, ಸರಣಿ ಹಂತಕ ಮೋಹನ್ ಪ್ರಕರಣ ಹೀಗೆ .. ಒಂದಷ್ಟು ಘಟನೆಗಳನ್ನೂ ಆಯ್ಕೆ ಮಾಡಿಕೊಂಡು ಅದಕ್ಕೆ ಚಿತ್ರಕತೆ ಹೆಣೆದು ಸಿನಿಮಾ ಮಾಡಿದ್ದಾಯಿತು.
ಆನಂತರದ್ದು ಏನೇನೋ ಆಯಿತು ಬಿಡಿ. ಮೊನ್ನೆ ಯಾರೋ ಗೆಳೆಯರು ಆಟಗಾರ ಸಿನಿಮಾ ನೋಡಿ, ಗುರು ನೀನು ಹೇಳಿದ್ಯಲ್ಲಾ ನಿನ್ನ ಸಿನಿಮಾದ ಬಗ್ಗೆ ಅದೇ ಕತೆ ನೋಡು, ಅವರು ಸಿನಿಮಾ ಮಾಡಿ ಬಿಡುಗಡೆ ಮಾಡಿದ್ದಾರೆ, ನೀನು ಡಬ್ಬದಲ್ಲೇ ಇಟ್ಟುಕೊಂಡಿದ್ದೀಯ ಎಂದರು. ಇದ್ದರೂ ಇರಬಹುದು ಎಂದುಕೊಂಡೆ. ಒಂದು ಆಲೋಚನೆ ಮತ್ತೊಬ್ಬರಿಗೆ ಬರದಿರಲು ಅದೇನೋ ಅಂತಹ ಗ್ರೇಟ್ ಥಾಟ್ ಅಲ್ಲ ಬಿಡಪ್ಪ.. ಸಿನಿಮಾ ಇಷ್ಟವಾಯ್ತಾ ಖುಷಿ ಪಡು ಎಂದು ಅವನಿಗೆ ದಬಾಯಿಸಿದೆ.
ಆನಂತರ ಆಟಗಾರ ನೋಡಿದೆ. ಅದರ ವಿಮರ್ಶೆ ಬಿಡಿ. ನಮ್ಮ ಸಿನೆಮಾಕ್ಕೂ ಅದಕ್ಕೂ ಯಾವುದೇ ಸಾಮ್ಯತೆಯಿಲ್ಲದಿದ್ದದ್ದು ಖುಷಿಯ ಸಂಗತಿಯೇ. ಅದನ್ನೇ ಕರೆ ಮಾಡಿ ಹೇಳಿದೆ ಆತನಿಗೆ. ಆಟಗಾರ ಚಿತ್ರದ ಕತೆ ಅಗಾಥಕ್ರಿಷ್ಟಿ ಕಾದಂಬರಿಯ ಮೂಲದ ಕತೆಯೋ, ಅದನ್ನು ಆಧರಿಸಿ ತಯಾರಾದ ನಾಲ್ಕೈದು ಚಿತ್ರಗಳ ಅವತರಣಿಕೆಯೋ ಎನ್ನುವುದು ವಿಷಯವಲ್ಲ. ಹಾಗೆ ನೋಡಿದರೆ ಆಟಗಾರ ರಿಮೇಕ್ ಚಿತ್ರ. ತಮಿಳಿನಲ್ಲಿ ಅಷ್ಟಾಗಿ ಸದ್ದೇ ಮಾಡದ ಅಡುಥದು ಚಿತ್ರದ ಕನ್ನಡ ಅವತರಣಿಕೆ. 2011 ರಾಲಿ ತೆರೆಕಂಡ ಈ ಚಿತ್ರವನ್ನು ಥಕ್ಕಳಿ ಶ್ರೀನಿವಾಸನ್ ನಿರ್ದೇಶನ ಮಾಡಿದ್ದರು. ಬಹುತೇಕ ಹೊಸಬರೇ ನಟಿಸಿದ್ದ ಈ ಚಿತ್ರದಲ್ಲಿ ಅನಂತನಾಗ್ ಪಾತ್ರವನ್ನು ನಾಸರ್ ನಿರ್ವಹಿಸಿದ್ದರು. ಅಡುಥದು ಚಿತ್ರದ ಮಕ್ಕಿಕಾಮಕ್ಕಿ ಕನ್ನಡ ಅವತರಣಿಕೆಯಾದ ಆಟಗಾರ ಅಧಿಕೃತ ರಿಮೇಕೋ ಅನಧಿಕೃತ ರಿಮೇಕೋ ಗೊತ್ತಿಲ್ಲ.  
ಒಂದಷ್ಟು ವಿರಾಮವೋ, ಏನೋ ಚಿತ್ರರಂಗದಿಂದ ಅನಾಮತ್ತು ಎರಡು ವರ್ಷ ದೂರ ಇದ್ದದ್ದು ಆಯಿತು. ಆಕ್ಷನ್ ಕಟ್ ಪ್ರಪಂಚದಿಂದ ಬೇರೆ ಪ್ರಪಂಚಕ್ಕೆ ತೆರೆದುಕೊಂಡಿದ್ದೂ ಆಯಿತು. ಈಗ ಮತ್ತೆ ಹಳೆಯ ಕಡತಗಳಿಗೆ ಮನಸ್ಸು ಹೊರಳಿದೆ. ಹೊಸ ಚಿತ್ರಕ್ಕೆ ತಯಾರಿ ನಡೆದು, ಸ್ಕ್ರಿಪ್ಟ್ ಮುಗಿದಿದೆ. ಮೊನ್ನೆ ಲೊಕೇಶನ್ ಹಂಟಿಂಗ್ ಕೂಡ ಮಾಡಿದ್ದಾಗಿದೆ. ಇನ್ನೂ ಕಾಸ್ಟಿಂಗ್ ಅಥವಾ ತಾರಾಗಣದ ಆಯ್ಕೆಯ ದೊಡ್ಡ ಕೆಲಸ ಬಾಕಿಯಿದೆ.
ಕಲಾವಿದ ಆಕಾಂಕ್ಷಿಗಳು ಫೋಟೋ ಡೀಟೇಲ್ಸ್ ಅನ್ನು ಇಮೇಲ್ ಮಾಡಿದರೆ ಒಮ್ಮೆ ಪರಿಗಣನೆಗೆ ತೆಗೆದುಕೊಳ್ಳಬಹುದು.
ನಮಸ್ಕಾರ.