Tuesday, September 9, 2014

ಭೂತದ ಬೆನ್ನು ಬಿದ್ದು.

ಅವರು ಕನ್ನಡದಲ್ಲಿ ಹೆಸರು ಮಾಡಿದ ಖ್ಯಾತ ಪೋಷಕ ನಟರು. ತಮಿಳು ಚಿತ್ರರಂಗದಲ್ಲೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ದೇವರು ದೆವ್ವ ಮುಂತಾದವುಗಳ ಬಗ್ಗೆ ನಂಬಿಕೆ ಇಲ್ಲದ ಹಾಗೆಯೇ ಮೂರ್ತಿ ಪೂಜೆ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದವರು. ತಾವಾಯಿತು ತಮ್ಮ ಕೆಲಸವಾಯಿತು ಎಂದು ತಮ್ಮ ಪಾಡಿಗೆ ಇರುವವರು.
ಒಮ್ಮೆ ಯಾವುದೂ ಚಿತ್ರದ ಶೂಟಿಂಗ್ ಗಾಗಿ ಬೆಂಗಳೂರಿನಿಂದ ಮುನ್ನೂರು ಕಿಲೋಮೀಟರುಗಳ ದೂರಕ್ಕೆ ಹೋಗಿದ್ದರು. ಚಿತ್ರೀಕರಣ ಮುಗಿದಾಗ ಸಂಜೆ ಎಂಟು ಘಂಟೆ. ಇಡೀ ಚಿತ್ರತಂಡ ನಾಳೆ ಬೆಳಿಗ್ಗೆಯೇ ಹೋದರಾಯಿತು ಉಳಿದುಕೊಳ್ಳಿ ಎಂದಿದೆ. ಆದರೆ ಸುಖಾ ಸುಮ್ಮನೆ ಯಾಕೆ ಉಳಿಯುವುದು ನೀಟಾಗಿ ಊಟ ಮಾಡಿಕೊಂಡು ಹೊರತುಬಿಡೋಣ ಎಂದು ಆ ತಕ್ಷಣ ತಮ್ಮದೇ ಕಾರಿನಲ್ಲಿ ಹೊರಟಿದ್ದಾರೆ.ಆದರೆ ಮಾರ್ಗ ಮದ್ಯದಲ್ಲಿ ಯಾಕೋ ಸುಸ್ತಾದಂತೆನಿಸಿ ಇಲ್ಲಿ ಎಲ್ಲಾದರೂ ಹೋಟೆಲ್ ರೂಂ ಮಾಡಿ ಮಲಗಿಬಿಡೋಣ ಎನಿಸಿ ಸುತ್ತ ಮುತ್ತಲ ಊರನ್ನು ಹುಡುಕಾಡಿದ್ದಾರೆ. ಅದೊಂದು ಚಿಕ್ಕ ನಗರ. ಇರುವುದೊಂದೇ ಲಾಜ್.ಅದರಲ್ಲಿ ಹೋಗಿ ಕೇಳಿದಾಗ ಸಾರ್ ಇರುವೆಲ್ಲಾ ಕೋಣೆಗಳು ಈಗಾಗಲೇ ಬುಕ್ ಆಗಿಹೋಗಿವೆ. ಒಂದೇ ಒಂದು ಕೋಣೆ ಇದೆ. ನೀವು ಬೇಕೇ ಬೇಕು ಎಂದರೆ ನಾನು ಅದನ್ನೇ ಕೊಡುತ್ತೇನೆ. ಎಂದಿದ್ದಾನೆ. ಇವರು ಬೇಕಪ್ಪಾ.. ಅದಕ್ಕಲ್ಲವೇ ಕೇಳುತ್ತಿರುವುದು ಎಂದಿದ್ದಾರೆ.ಆತ ಸ್ವಲ್ಪ ಹಿಂದೆ ಮುಂದೆ ನೋಡಿದವನು ಕೀ ಕೊಟ್ಟು ಹುಷಾರು ಸಾರ್, ಏನಾದರೂ ಬೇಕಾದರೆ ಒಂಬತ್ತಕ್ಕೆ ಕರೆ ಮಾಡಿ ಎಂದಿದ್ದಾನೆ. ಆತನ ಮಾತಿನಲ್ಲಿದ್ದ ಬಿಗುವನ್ನು ಇವರು ಗಮನಿಸದೆ ಆಯಿತು ಎಂಬಂತೆ ತಲೆಯಲ್ಲಾಡಿಸಿ ಅಲ್ಲಿಂದ ಹೊರಟು ಬಂದಿದ್ದಾರೆ.
ದಣಿವಾದ್ದರಿಂದ ಕೋಣೆಗೆ ಬಂದವರೇ ಹಾಸಿಗೆ ಮೇಲೆ ಅಡ್ದಾಗಿದ್ದಾರೆ. ತಟ್ಟನೆ ನಿದ್ರೆಯೂ ಆವರಿಸಿಬಿಟ್ಟಿದೆ. ಸ್ವಲ್ಪ ಸಮಯವಾಗಿರಬಹುದು. ತಟ್ಟನೆ ಯಾರೋ ಬಡಿದು ಎಬಿಸಿದಂತೆ ಎಚ್ಚರವಾಗಿದೆ. ಕಣ್ಣು ಬಿಟ್ಟು ಸುಮ್ಮನೇ  ಅತ್ತಿತ್ತ ತಲೆಯಲ್ಲಾಡಿಸಿ ಮಂಚದ ಪಕ್ಕ ಇದ್ದ ಕುರ್ಚಿಯ ಮೇಲೆ ಮನುಷ್ಯ ಆಕೃತಿಯೊಂದು ಇವರತ್ತಲೇ ನೋಡುತ್ತಾ ಕುಳಿತಿದೆ. ಮೊದಲಿಗೆ ಎದೆ ಝಾಲ್ ಎಂದಿದೆ. ಇವನ್ಯಾರು.. ಕಳ್ಳನಾ..? ದರೋಡೆ ಕೋರನಾ... ಈ ಕ್ಷಣ ಏನು ಮಾಡುವುದು ಇದೆಲ್ಲಾ ನನ್ನ ಭ್ರಮೆಯ ಎಂಬಿತ್ಯಾದಿ ಗೊಂದಲಗಳು ಆ ಕ್ಷಣದಲ್ಲಿ ಹಾಗೆಯೇ ಬಂದು ಹೋಗಿವೆ. ಆದರೆ ಆತ ನಿಚ್ಚಳವಾಗಿ ಕುಳಿತಿದ್ದಾನೆ. ಕಣ್ಣ ಬಾಲಿ ಪ್ರಕಾಶಮಾನವಾದ ಎರಡು ಹರಳುಗಳಿವೆ. ಅದು ಬಿಟ್ಟರೆ ಇಡೀ ಆಕೃತಿ ಬರಿಯ ಛಾಯೆಯಂತಿದೆ. ಮಂದ ಬೆಳಕಿನಲ್ಲಿ ಇವರತ್ತಲೇ ಮುಖ ಮಾಡಿ ಕುಳಿತಿರುವ ಆತನ ಮುಖ ಮಂದ ಬೆಳಕಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಮೊದಲಿಗೆ ಗಾಬರಿಯಾದರೂ ಸ್ವಲ್ಪ ಧೈರ್ಯ ತಂದು ಕೊಂಡವರು ಏಯ್ ಯಾರಪ್ಪಾ ನೀನು... ಎಂದಿದ್ದಾರೆ. ಉತ್ತರ ಬಂದಿಲ್ಲ. ಯಾರೋ ನೀನು ಸ್ವಲ್ಪ ದನಿ ಏರಿಸಿದ್ದಾರೆ. ಸ್ವಲ್ಪ ತಡಬಡಾಯಿಸಿದ್ದಾರೆ.
ಆಗ ನಿಧಾನಕ್ಕೆ ಮೇಲೆ ಎದ್ದು ನಿಂತಿದೆ ಆ ಆಕೃತಿ. ಒಂದು ತಾರಾ ಹೊಗೆಯ ಆಕೃತಿಯಂತೆ ಭಾಸವಾಗಿದೆ ಇವರಿಗೆ. ನಿಧಾನಕ್ಕೆ ಎದ್ದ ಅದು ಹಾಗೆಯೇ ಬಾಗಿಲು ಹತ್ತಿರ ಸರಿದು ಹೋಗಿದೆ. ಅಷ್ಟೇ. ಅದಾದ ನಂತರ ಎದ್ದು ಲೈಟ್ ಆನ್ ಮಾಡಿದವರಿಗೆ ಹಾಕಿದ ಬಾಗಿಲು ಚಿಲಕ ಅಣಕಿಸಿದಂತಾಗಿದೆ. ಆದರೆ ಅದು ಯಾರು? ದೆವ್ವ ಭೂತ ಯಾವುದನ್ನೂ ನಂಬದ ಅವರಿಗೆ ಏನು ಮಾಡಬೇಕೋ ತೋಚಿಲ್ಲ. ಇದೆನ್ನ ಭ್ರಮೆಯಾ ಅಥವಾ ನಿಜಕ್ಕೂ ಅದ್ಯಾರೋ ಕುಳಿತಿದ್ದರಾ? ಹಾಗಾದರೆ ಅದು ದೆವ್ವ ಇರಬಹುದಾ?
ಸುಮಾರು ಹೊತ್ತು ನಿದ್ರೆ ಮಾಡದೆ ಹಾಗೆಯೇ ಒಂದರ ಮೇಲೊಂದು ಸಿಗರೇಟು ಸುಡುತ್ತಾ ಅದೇ ಶಾಕ್ ನಲ್ಲಿ ಕುಳಿತುಬಿ್ಟ್ಟಿದಾರೆ. ಬೆಳಿಗ್ಗೆಯಾದ ತಕ್ಷಣ ರಿಸೆಪ್ಶನ್ ಕೌಂಟರ್ ಗೆ ಓಡಿ ಹೋದರೆ ಆತ ಅಲ್ಲೇ ಕವುಚಿ ಮಲಗಿದ್ದಾನೆ. ಇವರೇ ಎಬ್ಬಿಸಿದ್ದಾರೆ. ನಡೆದ ವಿಷಯ ಹೇಳಿದ್ದಾರೆ. ಸಾರ್.. ನಾವು ಆ ರೂಂ ಯಾರಿಗೂ ಕೊಡೋದಿಲ್ಲ ಸಾರ್. ಅಲ್ಲೊಬ್ಬ ವ್ಯಕ್ತಿ ಸುಮಾರು ದಿನದ ಹಿಂದೆ ಬಂದವನು ವಾರಗಟ್ಟಲೆ ಆ ರೂಮಲ್ಲೇ ಇದ್ದ. ಬೆಳಿಗ್ಗೆಯಿಂದ ಸಂಜೆಯವರೆಗೂ ಅಲ್ಲೇ ಇರೋನು. ಸಂಜೆ ಒಂದು ಸುತ್ತು ಬಂದು ಸುತ್ತಾಡಿ ಮತ್ತೆ ಎಣ್ಣೆ ಬಾಟಲು ತಗೊಂಡು ಒಳಗೆ ಹೋಗೋವ್ನು..ಯಾರ್ನೂ ಮಾತಾಡಿಸ್ತಾನೆ ಇರ್ಲಿಲ್ಲ...ನೋಡಿದ್ರೆ ಸ್ಮೈಲ್ ಮಾಡೋನು ಅಷ್ಟೇ.. ಸ್ವಲ್ಪ ದಿನ ಆದ್ಮೇಲೆ ಅವನು ಹೊರಗೆ ಬರ್ಲಿಲ್ಲ. ಹೋಗಿ ನೋಡಿದ್ರೆ ಅಲ್ಲೇ ನೇಣು ಹಾಕ್ಕೊಂಡು ಸತ್ತು ಹೋಗಿದ್ದ ಸಾರ್.. ಆಮೇಲಿಂದ ಆ ರೂಮಲ್ಲಿ ಕಾಟ ಶುರುವಾಯಿತು ನೋಡಿ. ಯಾರಾದ್ರೂ ರೂಮಿಗೆ ಬಂದ್ರೆ ಹಾಸಿಗೆ ಪಕ್ಕದಲ್ಲಿ ಮಲಗಿದಂತೆ...ಪಕ್ಕದಲ್ಲಿ ಕೂತಂಗೆ...ನೇತಾಡೋ ಹಂಗೆ.. ಆಮೇಲೆ ನಮ್ಮ ಸಾವುಕಾರ್ರು ಮಾಡೋ ಪೂಜೆ ಎಲ್ಲಾ ಮಾಡಿಸಿದರು.. ಆದರೂ ಕಂಪ್ಲೇಂಟ್ ಇದ್ದೇ ಇತ್ತು. ಅದಕ್ಕೆ ಅದನ್ನು ಯಾರಿಗೂ ಕೊಡ್ತಿರಲಿಲ್ಲ.. ರಾತ್ರಿ ನೀವು ರೂಮು ಬೇಕೇ ಬೇಕು ಅಂದ್ರಲ್ಲಾ..ಅದಕ್ಕೆ ಕೊಟ್ಟಿದ್ದು ಎಂದ.
ಅದಾದ ನಂತರ ಊರು ಸೇರಿಕೊಂಡ ಅವರಿಗೆ ಮೂರು ದಿನ ಜ್ವರ ಬಂದು ನರಳುವ ಹಾಗೆ ಆಯಿತಂತೆ. ಆನಂತರ ದೇವರ ಪೂಜೆ ಮಾಡಿಸಿ, ಈಗ ದೇವರನ್ನು ನಂಬುತ್ತಾರೆ.
ಸುಮ್ಮನೆ ದೆವ್ವ ಭೂತದ ಕತೆಯಿಟ್ಟುಕೊಂಡು ಸಿನಿಮಾ ಮಾಡಿಕೊಡಿ ಎಂದಾಗ ನನಗೆ ಏನು ಕತೆ ಮಾಡುವುದು ಎನಿಸದೇ ಇರಲಿಲ್ಲ. ಯಾಕೆಂದರೆ ಸತ್ತ ಆತ್ಮ/ಪ್ರೇಮಿ .. ಒಂದು ಹಾಂಟೆಡ್ ಹೌಸ್ ಇದನ್ನು ಬಿಟ್ಟು ತಾರ್ಕಿಕವಾಗಿ ಏನಾದರೂ ಮಾಡಿದರೆ ಜನರು ಒಪ್ಪಬಹುದೇನೋ? ಆದರೆ ನಿರ್ಮಾಪಕರು ಒಪ್ಪಬೇಕಲ್ಲ. ಪ್ರಯೋಗ ಎಲ್ಲಾ ಬೇಡಿ ಸಾರ್.. ಸುಮ್ನೆ ಒಂದು ದೆವ್ವದ ಫಿಲಂ ಮಾಡಿ.. ಎಂದು ಅಂದುಬಿಟ್ಟರೆ ಏನು ಮಾಡುವುದು. ಇಷ್ಟಕ್ಕೂ ಹಾರರ್ ಸಿನಿಮಾ ಮಾಡುವುದು ಒಂದು ಸವಾಲೇ. ಆದರೆ ಇತ್ತೀಚಿಗೆ ಅದರಲ್ಲೂ 6-5 ಬಂದ ಮೇಲೆ ಅದರ ಪರಿಕಲ್ಪನೆಯೇ ಬದಲಾಗಿದೆ. ಎಲ್ಲರೂ ನಿಜ ದೆವ್ವ ತೋರಿಸುವ ಎಂದೆ ಹೊರಟಿದ್ದಾರೆ. ಅಲುಗಾಡುತ್ತಾ ಸಾಗುವ ಕ್ಯಾಮೆರಾ, ಕತ್ತಲಲ್ಲಿ ಒಬ್ಬೊಬ್ಬರೇ ಹೋಗುವ ಬುದ್ದಿಗೇಡಿಗಳು, ಮುಖದ ತುಂಬಾ ಪೌಡರ್ ಹಚ್ಚಿಕೊಂಡ ದೆವ್ವ, ಪಿಕ್ನಿಕ್ ಗೆ ಹೋಗಿ ಸಿಕ್ಕಿ ಕೊಳ್ಳುವ ಹುಡುಗ ಹುಡಿಗಿಯರು... ಹೀಗೆ. ಆಡದೆ ಕ್ಲೀಷೆ ಎನಿಸುತ್ತಾದರೂ ಬೇರೆ ಏನು ಸಾದ್ಯತೆಗಳಿವೆ ಎಂಬ ಪ್ರಶ್ನೆ ನನ್ನಲ್ಲೇ ಹಾಕಿಕೊಂಡೆ.
ಇದೆಲ್ಲದಕ್ಕೂ ಮೊದಲು ದೆವ್ವ ಭೂತ ಎಂಬುದರ ಸ್ಪಷ್ಟ ಅರ್ಥ ಬೇಕು. ನಿಜವಾ ಸುಳ್ಳಾ ..ಇದನ್ನೆಲ್ಲಾ ಸುಮ್ಮೆನೆ ಒಂದಷ್ಟು ಅದ್ಯಯನ ಮಾಡೋಣ ಎನ್ನುವ ನಿಟ್ಟಿನಲ್ಲಿ ಆರು ತಿಂಗಳು ಕಳೆದೆ ನೋಡಿ. ಒಂದಷ್ಟು ಜನರನ್ನು ಭೇಟಿ ಮಾಡಿದೆ, ಅವರ ಅನುಭವ ಕೇಳಿದೆ. ಅದೆಲ್ಲಾ ರೋಚಕ ನಿಗೂಡ ಎನಿಸದೇ ಇರಲಿಲ್ಲ.
ಮನುಷ್ಯನಿಗೆ ನಿಲುಕದ ಯಾವುದೋ ಅಗೋಚರವಾದದ್ದು ಇರಬೇಕು ಎನಿಸಿತು. ಹಾಗೆಯೇ ಜನರ ಒಂದಷ್ಟು ಅನುಭವ ಕೂಡ ತರ್ಕಕ್ಕೆ ನಿಲುಕಲಿಲ್ಲ. ಅಂತಹ ಅನುಭವದಲ್ಲಿ ಮೇಲಿನ ಅನುಭವ ಕಥನ ಕೂಡ ಒಂದು.