ನಾನಾಗ
ಮೂರನೆಯ ತರಗತಿಯಲ್ಲಿದ್ದೆ. ಸಂತೋಷಪ್ಪ ಎಂಬ ಕನ್ನಡ ಇತಿಹಾಸ ಮತ್ತು ಗಣಿತ ಮೂರನ್ನೂ ಕಲಿಸುತ್ತಿದ್ದ
ಮಾಸ್ಟರೊಬ್ಬರಿದ್ದರು. ಉದ್ದನೆಯ ಜುಬ್ಬಾದಂತಹ ಉದ್ದನೆಯ ಶರ್ಟು, ದೊಗಳೆ ಪ್ಯಾಂಟು ಧರಿಸಿ, ಕೈಯಲ್ಲೊಂದು ಜೋಳಿಗೆಯಂತಹ ಬ್ಯಾಗು ಹಿಡಿದುಕೊಂಡು,
ತಲೆಗೆ ಎಣ್ಣೆಹಾಕಿ ಕೂದಲನ್ನು ಅಂಟಿಸಿದಂತೆ ಬಾಚಿಕೊಂಡು ಬರುತ್ತಿದ್ದರು. ಅವರು ಅದೇನು
ಪಾಠ ಮಾಡುತ್ತಿದ್ದರೋ ದೇವರಾಣೆಗೂ ಇಂದಿಗೂ ನೆನಪಿಲ್ಲದಿದ್ದರೂ ಅವರ ಕಂಚಿನಂತಹ ಕಂಠವನ್ನೂ ಮಾತ್ರ ಮರೆಯಲು
ಸಾಧ್ಯವೇ ಇಲ್ಲ. ಆದರೆ ಮದ್ಯಾಹ್ನ ಹನ್ನೆರೆಡು ಗಂಟೆಯಾಗುತ್ತಿದ್ದಂತೆಯೇ ಮೇಜಿನ ಮೇಲೆ ಜೋರಾಗಿ ಕೋಲಿನಿಂದ
ಬಡಿದು ಎಲ್ಲರನ್ನೂ ಬೆಚ್ಚಿಬೀಳಿಸಿ, ‘ಲೋ ಇಲ್ಲಿ ಕೇಳ್ರೋ..’ಎಂದದ್ದೇ ಮುಂದಿನ ಸಾಲಿನ ರಮೇಶನಿಂದ ಪ್ರಾರಂಭಿಸುತ್ತಿದ್ದರು. “ಏನ್ಲಾ ಈವತ್ತು ನಿಮ್ಮನೇಲೆ ಸಾರು..”
“ಈವತ್ತು ಉಪ್ಪೆಸ್ರು ಸಾ..’
‘ಅದ್ಯಾವನು ತಿಂತಾನೆ..ರುದ್ರಪ್ಪ ನಿಮ್ಮನೇಲಿ..’
‘ ಬೇಳೆ ಸಾರು ಸಾ’
‘ತಥ್ ನೀವಳ್ಳಿ ಜನ ಯಾವತ್ತೂ ಚನ್ನಾಗಿರ್ತೀರೋ..’
‘ನಿಮ್ಮನೇಲೇನೋ..’
‘ಮೊಳುಲ್ಲಿ ಸಾರು’
‘ನಿನ್ನೇನೂ ಅದೇ ಅಲ್ವಾ..ತಂಗಳಿರಬೇಕು..ನಿಮ್ಮನೇಲಿ..’
‘ಅವರೆಕಾಲು ಸಾರು’
‘ಗ್ಯಾಸು ಕಣೋ..’
ಹೀಗೆ ಮುಂದಿನ ಮೂರು ಸಾಲುಗಳನ್ನು ಕೇಳಿ ಆನಂತರ
ಅಷ್ಟು ಸಾರುಗಳಲ್ಲಿ ತಮಗೆ ರುಚಿಯೆನಿಸಿದ ಒಂದು ಸಾರನ್ನು ಮದ್ಯಾಹ್ನದ ಊಟಕ್ಕೆ ತರಿಸುತ್ತಿದ್ದರು.
ಅದೇನೆ ಆದರೂ ಅವರು ನಾಲ್ಕನೇ ಸಾಲಿನತ್ತ ತಮ್ಮ ಸಾರಿನ ಸಂಭಾಷಣೆಯನ್ನು ಹರಿಯಬಿಡುತ್ತಿರಲಿಲ್ಲ. ಮೂರನೆಯ
ಸಾಲಿನ ಕೊನೆ ವಿದ್ಯಾರ್ಥಿಯ ಮನೆಯ ಸಾರು ಇಷ್ಟವಾಗದಿದ್ದರೆ ವಾಪಸು ಮತ್ತೆ ಒಂದನೆಯ ಸಾಲಿನ ವಿದ್ಯಾರ್ಥಿಗೆ
ಪ್ರಶ್ನೆ ವರ್ಗಾಯಿಸಿ ಸಾರು ತರಿಸುತ್ತಿದ್ದರು. ಅವರ್ಯಾಕೆ ನಾಲ್ಕನೇ ಸಾಲಿನ ಹುಡುಗನನ್ನು ಕೇಳುತ್ತಿರಲಿಲ್ಲ
ಎಂಬುದು ಯಕ್ಷ ಪ್ರಶ್ನೆಯಾಗಿ ಬಹುದಿನಗಳವರೆಗೆ ನನ್ನನ್ನು ಕಾಡುತ್ತಿತ್ತು. ನಾಲ್ಕನೆಯ ಸಾಲಿನ ವಿದ್ಯಾರ್ಥಿಗಳು
ಕೀಳುಜಾತಿಯವರಾದ್ದರಿಂದ ಅವರ ಮನೆಯ ಅಡುಗೆಯನ್ನು ಮೇಸ್ಟ್ರು ತಿನ್ನುವುದಿಲ್ಲ ಎಂಬುದು ಸುಮಾರು ದಿನದ
ನಂತರ ನನಗೆ ಗೊತ್ತಾದ್ದಷ್ಟೇ ಅಲ್ಲ, ನಾಲ್ಕನೇಯ ಸಾಲಿನ ವಿದ್ಯಾರ್ಥಿಗಳನ್ನು ಮುಟ್ಟಿಸಿಕೊಳ್ಳದಿದ್ದರೆ, ಅವರ ಊಟ ಮಾಡದಿದ್ದರೆ ನಾವು ಮೇಲೆಂಬ ಭಾವನೆ
ನನ್ನಲ್ಲಿ ಆ ವಯಸ್ಸಿನಲ್ಲಿ ನೆಲೆಯೂರುವಂತೆ ಮಾಡಿತ್ತು. ಆದರೆ ಮೇಷ್ಟ್ರು ಮಾತ್ರ ಕುಲವೊಂದೇ ನೆಲವೊಂದೇ..ಜಲವೊಂದೇ
ಎಂದು ಪಾಠದ ಹೊತ್ತಿನಲ್ಲಿ ಗಂಟಲು ಹರಿದುಕೊಳ್ಳುತ್ತಿದ್ದರು.
ಕೆಲವು ಪಾಠಗಳನ್ನು ಅಥವಾ ನಮ್ಮ ವರ್ತನೆಗಳನ್ನು
ನಾವು ಕಲಿತಿದ್ದಾದರೂ ಎಲ್ಲಿ? ಹೇಗೆ? ಎಂಬ ಪ್ರಶ್ನೆ ಆವಾಗಾವಾಗ ಕಾಡುತ್ತಲೇ ಇರುತ್ತದೆ. ಅಂಗನವಾಡಿ,
ಪ್ರಾಥಮಿಕ , ಪ್ರೌಢಶಿಕ್ಷಣ ಹೀಗೆ ಮಾತು ಬರುವ ಮುನ್ನವೇ
ಪ್ರಾರಂಭವಾಗುವ ನಮ್ಮ ನಡೆ ನುಡಿ ತಿದ್ದುವ , ಒಳ್ಳೆಯದು-ಕೆಟ್ಟದನ್ನು ಮನವರಿಕೆ
ಮಾಡಿಕೊಡುವ ಕಾರ್ಯ ಮುಂದುವರೆಯುತ್ತಲೇ ಇರುತ್ತವೆ. ಆದರೂ ನಾವೇಕೆ ಸುಳ್ಳರಾಗುತ್ತೇವೆ, ಭ್ರಷ್ಟರಾಗುತ್ತೇವೆ, ಅಷ್ಟೆಲ್ಲಾ ನೀತಿ ಕಥೆಗಳನ್ನು ಕೇಳಿದರೂ,
ಮಾಸ್ಟರುಗಳು ಹೇಳಿಕೊಟ್ಟರೂ ನಾವೇಕೆ ಶಿಸ್ತಿನ ಸಿಪಾಯಿಗಳಾಗುವುದಿಲ್ಲ. ಗಾಂಧಿ-ಸತ್ಯಹರಿಶ್ಚಂದ್ರರ
ಕಥೆಗಳನ್ನು ಓದಿಕೊಂಡೇ ನಾವು ಅದೇಗೆ ಸುಳ್ಳರಾಗುತ್ತೇವೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದುಬಿಟ್ಟಿದೆ. ಆದರೆ ಮೊಟ್ಟಮೊದಲಿಗೆ ನಾನು ಸುಳ್ಳು ಹೇಳಿದ್ದು ಯಾವಾಗ,
ಅದು ಯಾರಿಂದ ಪ್ರೇರೇಪಿತವಾದದ್ದು, ಹೇಗೆ ನಾನೊಂದು ಸುಳ್ಳನ್ನು
ಸೃಷ್ಟಿಸಿದೆ, ನಾನು ಮೊಟ್ಟಮೊದಲಿಗೆ ಲಂಚ ಕೊಟ್ಟದ್ದಾದರೂ ಏಕೆ?
, ಅದ್ಯಾರು ನಾನು ಲಂಚಕೊಡುವುದನ್ನು ಪ್ರೋತ್ಸಾಹಿಸಿದವರು ಅಥವಾ ಅದೇಕೆ ಬೈಯದೇ ಇದ್ದರು?
ಎಂಬುದನ್ನು ಮೆಲುಕುಹಾಕಿದಾಗ ಕೆಲವು ಅಚ್ಚರಿಯ ಘಟನೆಗಳು ನೆನಪಿಗೆ ಬರುತ್ತವೆ.
ನಮ್ಮೂರಿನ ಶಾಲೆಯಲ್ಲಿ ನಮ್ಮನ್ನು ಬೆಳಿಗ್ಗೆ ಹತ್ತಕ್ಕೆ
ಕೋಣೆಯೊಳಗೆ ಕೂಡಿಹಾಕಿ ಮದ್ಯಾಹ್ನ ಒಂದರವರೆಗೆ ಒಬ್ಬರಾದ ಮೇಲೊಬ್ಬರು ಅದೇನೇನೋ ಕೊರೆಯುತ್ತಿದ್ದದ್ದು
ನಮಗೆ ಯಾವ ಜೈಲಿನ ಶಿಕ್ಷೆಗಿಂತಲೂ ಕಡಿಮೆಯೆನಿಸಿರಲಿಲ್ಲ. ಭಾನುವಾರವೆಂಬುದು ಉಳಿದೆಲ್ಲಾ ದಿನಗಳಿಗಿಂತ
ಅದ್ಭುತ ದಿನವೆನಿಸುತ್ತಿತ್ತು. ಆದರೆ ಅದು ವಾರಕ್ಕೊಮ್ಮೆ ಮಾತ್ರ ಬರುತ್ತಿದ್ದುದರಿಂದ ಅದರ ಇರುವಿಕೆಯ
ಸಂಭ್ರಮ ಕ್ಷಣದಂತೆ ಮಾಯವಾಗಿಬಿಡುತ್ತಿತ್ತು.ಉಳಿದ ದಿನಗಳಲ್ಲಿ ಒಂದು ದಿನವೂ ನಾವು ಶಾಲೆಗೆ ತಪ್ಪಿಸುವಂತಿರಲಿಲ್ಲ.
ಅಕಸ್ಮಾತ್ ತಪ್ಪಿದರೇ ಎರಡೆರೆಡು ಕಡೆ ಹೊಡೆತ ಬೀಳುತ್ತಿದ್ದವು.ಆದರೆ ಜಾತ್ರೆ, ಹಬ್ಬ, ಮನೆಯಲ್ಲೇನಾದರೂ ಸಮಾರಂಭಗಳಾದರೆ ಮಾತ್ರ ಒಂದು ದಿನ ಮುಂಚೆಯೇ ಮನೆಯವರೇ ಶಾಲೆಗೆ ಹೋಗಬಾರದೆಂದು,
ಕೆಲಸ ಮಾಡಬೇಕೆಂದೂ ತಾಕೀತುಮಾಡುತ್ತಿದ್ದರು. ಅದು ನಮ್ಮ ಮಾವನ ನಿಶ್ಚಿತಾರ್ಥದ ಸಮಾರಂಭದ
ಸಿದ್ಧತೆಯ ದಿನಗಳು. ನಮ್ಮಮ್ಮ ನನ್ನನ್ನು ಕರೆದು ನಾಳೆಯಿಂದ ನಿಶ್ಚಿತಾರ್ಥ ಮುಗಿಯೋವರ್ಗೂ ಸ್ಕೂಲಿಗೆ
ಹೋಗಬೇಡ ಅಂದರು. ನಿಶ್ಚಿತಾರ್ಥಕ್ಕೆ ಇನ್ನೂ ಮೂರು ದಿನವಿತ್ತು. ಅಷ್ಟು ದಿನ ಶಾಲೆಗೆ ತಪ್ಪಿಸಿಕೊಳ್ಳುವುದು
ಖುಷಿಯೇ. ಆದರೆ ನಾಲ್ಕನೆಯ ದಿನ ಇರುತ್ತಿತ್ತಲ್ಲ ಶಿಕ್ಷೆ! ಅದನ್ನು ನೆನಪಿಸಿಕೊಂಡರೇ ಚಡ್ಡಿ ಒದ್ದೆಯಾಗುತ್ತಿತ್ತು.ಕೈಗೆ
ರಪರಪನೇ ಭಾರಿಸುತ್ತಿದ್ದರು, ಹುಡುಗಿಯರ ಮುಂದೆಯೇ ಕಿವಿ ಹಿಂಡಿ,
ಕುಕ್ಕರುಗಾಲಿನಲ್ಲಿ ಕೂರಿಸಿ, ಕುಂಡೆ ಮೇಲೆತ್ತಿ,
ಕಾಲಿನ ಸಂಧಿಯಿಂದ ಕೈಯನ್ನು ತಂದು ಕಿವಿ ಹಿಡಿಸಿ ಕುಂಡೆಗೆ ಬಾಸುಂಡೆ ಬರುವವರೆಗೆ
ಭಾರಿಸುತ್ತಿದ್ದರು, ದಿನಗಟ್ಟಲೇ ತರಗತಿಯಲ್ಲಿ ನಿಲ್ಲಿಸುತ್ತಿದ್ದರು..!
‘ಅಮೌ ಸ್ಕೂಲಲ್ಲಿ ಬೈತಾರೆ ತಪ್ಪಿಸಿಕೊಂಡ್ರೆ..’ ಎಂದವನಿಗೆ, ‘ಹುಷಾರಿರ್ನಿಲ್ಲಾನ್ನು..ಜೊರ ಬಂದಿತ್ತೂನ್ನು..’ ಎಂದು ಅಮ್ಮ ಹೇಳಿದ್ದಳು. ‘ಆದ್ರೆ ಜೊರ ಬಂದಿಲ್ವಲ್ಲಾ.. ಅಮ್ಯಾಕೆ ಸುಳ್ಳು ಹೇಳಿದ್ರೆ ಮೇಸ್ಟ್ರು ಹೊಡಿತಾರೆ..’ ಎಂದರೆ ‘ನೀಯೇನ್ ಸತ್ಯಹರಿಶ್ಚಂದ್ರನ ತುಂಡಾ..ಸುಮ್ಕೆ ಹೇಳೋಗು..’ ಎಂದು ಗದರಿದ್ದರಲ್ಲದೇ ತಾನೇ
ಶಾಲೆಯ ಹತ್ತಿರ ಬಂದು ‘ನಿನ್ನೆಯಿಂದ ನಮ್ಮುಡುಗನಿಗೇ ಹುಶಾರಿಲ್ಲ ಸಾರ್’ ಎಂದು ಸುಳ್ಳು ಹೇಳಿಬಿಟ್ಟಿದ್ದಳು.
ಅದನ್ನೆ ನಾನು ಆನಂತರ ಚೆನ್ನಾಗಿ ಕಲಿತುಬಿಟ್ಟಿದ್ದೆ. ಮಾವಿನ ತೋಪಿನಲ್ಲಿ ದಿನಗಟ್ಟಲೇ ಕಳೆದು ಮನೆಯಲ್ಲಿ
ಶಾಲೆಗೆ ಹೋಗಿದ್ದವೆಂದೂ, ಶಾಲೆಯಲ್ಲಿ ಹುಷಾರಿರಲಿಲ್ಲವೆಂದು ಆರಾಮವಾಗಿ ಸುಳ್ಳು
ಹೇಳಿಬಿಡುತ್ತಿದ್ದೆ. ಆದರೆ ಅದೇಗೋ ಏನೋ ಸಿಕ್ಕಿ ಹಾಕಿಕೊಳ್ಳುತ್ತಿದ್ದೆ. ಆಗ ಕೋಲಿನಿಂದ ರಪರಪನೇ ಭಾರಿಸಿ
‘ಈ ವಯಸ್ಗೇ ಸುಳ್ಳು ಹೇಳೀಯ..ಬಾ ನಿನಗೆ ಮೇಸ್ಟ್ರ
ಕೈಲಿ ಮಾಡಿಸ್ತೀನಿ ಎಂದು ಶಾಲೆಯ ಹತ್ತಿರ ದರದರನೇ ಎಳೆದುಕೊಂಡೋಗಿ ‘ಸಾರ್..ನೋಡಿ ಸುಳ್ಳು ಹೇಳೋದು ಜಾಸ್ತಿಯಾಗಿದೆ ಇತ್ತೀಚೆಗೆ..’ ಎಂದು ಆರೋಪಿಸುತ್ತಿದ್ದದ್ದು
ಅದೇ ಅಮ್ಮ. ಮೇಸ್ಟ್ರಂತೂ ಕೋಲು ತೆಗೆದುಕೊಂಡು ‘ಸುಳ್ಳು ಹೇಳ್ತೀಯ..ಸುಳ್ಳು ಹೇಳೋದು ತಪ್ಪು ಅಂತ
ಹೇಳೀಕೊಟ್ಟಿಲ್ಲ..’ ಎಂದು ಆವತ್ತೆಲ್ಲಾ ಮನಸೋ ಇಚ್ಛೆ
ಭಾರಿಸುತ್ತಿದ್ದರು.
ಅದೊಂದು ದಿನ ತರಗತಿಯಲ್ಲಿ ನಾವೆಲ್ಲ ತೂಕಡಿಸುತ್ತ
ಕುಳಿತಿದ್ದೆವು. ಆಗ ಮೇಸ್ಟ್ರು ಬರಬರನೇ ತರಗತಿಗೆ ನುಗ್ಗಿಬಂದವರೇ ‘ನೋಡ್ರೋ ಈಗ ಇನ್ಸ್ಪೆಕ್ಟ್ರು ಬತ್ತಾರೆ.. ಅವರು
ಕೇಳಿದ್ರೆ ಎಲ್ಲಾ ಪಾಠ ಮುಗಿದಿದೇ ಅಂತ ಹೇಳಬೇಕು..ಸಾರು ವಿಷ್ಯ, ಟೀ ವಿಷ್ಯ ಯಾವನಾದ್ರು ಬಾಯಿ
ತೆಗೆದ್ರಾ ಚಮ್ಡಾ ಸುಲಿತೀನಿ..’
ಎಂದು ಸತ್ಯ ಹೇಳದಿರುವಂತೆ ನಮಗೆ ಧಮಕಿಹಾಕಿದ್ದರು.
ನಾನು ಪಿಯುಸಿಗೆ ಬಂದಾಗ ಗ್ರಾಮೀಣವಿದ್ಯಾರ್ಥಿಯ
ಸೆರ್ಟಿಪಿಕೇಟು ಬೇಕಾಗಿದ್ದರಿಂದ ತಾಲೂಕು ಆಫ಼ೀಸಿಗೆ
ಹೋಗಬೇಕಿತ್ತು. ಆಗ ಮನೆಯಲ್ಲಿ ‘ನೀನು ಹೋಗಿ ಅಲೀ ಬೇಕಾಯ್ತದೆ..ಅದ್ಕೆ ಅಲ್ಲಿ ರಮೇಶಪ್ಪ
ಅನ್ನೋನು ಇರ್ತಾನೆ ಅವನತ್ರ ಐವತ್ತು ರೂಪಾಯ್ ಕೊಟ್ಟು ಬಾ..ಒಂದ ದಿನಕ್ಕೆ ರೆಡಿ ಮಾಡಿಸ್ಕೊಡ್ತಾನಾ..ಎಂದು
ಹೇಳಿದ್ದರು. ನಾನು ಅದ್ಯಾವುದೋ ಫ಼ೀಸು
ಇರಬೇಕೆಂದುಕೊಂಡಿದ್ದದು ಲಂಚವಾಗಿತ್ತು. ಎರಡು ದಿನ ಅಲೆದರೂ ಪರ್ವಾಗಿಲ್ಲ..ನಿನಗೇನಂತಹ ಕೆಲ್ಸ ಇದೆ..ಹೋಗಿ
ಸೆರ್ಟಿಫ಼ಿಕೇಟ್ ಮಾಡಿಸಿಕೊಂಡು ಬಾ..ಲಂಚ ಕೊಡುವುದು ತಪ್ಪು
ಎಂದು ಮನೆಯವರೇಕೆ ಹೇಳಲಿಲ್ಲ ಎಂಬ ಪ್ರಶ್ನೆ ನನ್ನನೂ ಈಗಲೂ ಕಾಡುತ್ತಿದೆ.
ಮೊನ್ನೆ ಭಾನುವಾರ ಯಾವುದು ಹೋಟೆಲಿಗೆ ಊಟಕ್ಕೆ ಹೋಗಿದ್ದೆ.ಮದ್ಯಾಹ್ನವಾದ್ದರಿಂದ
ಮತ್ತು ರಜಾದಿನವಾದ್ದರಿಂದ ಹೋಟೆಲಿನ ತುಂಬ ಜನವೋ ಜನ. ಬಂದವರೆಲ್ಲಾ ಕ್ಯೂ ನಿಲ್ಲಲೇ ಬೇಕಾಗಿತ್ತು.
ನನ್ನ ಟೇಬಲ್ಲಿನ ಹಿಂದೆ ಪುಟ್ಟ ಹುಡುಗಿಯೊಬ್ಬಳು ಬಂದು ನಿಂತುಕೊಂಡಳು. ನಾನು ತಲೆ ತಿರುಗಿ ನೋಡಿದರೆ
ಅವಳ ಕಣ್ಣು ನನ್ನ ತಟ್ಟೆಯ ಮೇಲೇ ಇತ್ತು. ನನಗೆ ಒಂದು ತರವಾದರೂ ತಿನ್ನುವುದನ್ನು ಮುಂದುವರೆಸಿದೆ..
ಆಗ ಆ ಹುಡುಗಿಯ ಹತ್ತಿರಕ್ಕೆ ಬಂದ ಆಕೆಯ ತಾಯಿ ‘ಇಲ್ಲೇ ನಿಂತಿರು..ಆದ ತಕ್ಷಣ ನನ್ನ ಕೂಗು..’ ಎಂದವಳು ಇನ್ನೊಂದು ಮಗುವನ್ನು
ಕಂಕುಳಲ್ಲಿ ಹೊತ್ತುಕೊಂಡು ಆಚೆ ಹೋದಳು..ಸ್ವಲ್ಪ ಹೊತ್ತಿನಲ್ಲಿ ಆ ಹುಡುಗಿ ‘ಮಮ್ಮಿ ಮಮ್ಮಿ ಕಮ್ ಹಿಯರ್..ಈ ಅಂಕಲ್ದು ಇನ್ನು
ಸ್ವಲ್ಪನೇ ಇದೆ..ಇನ್ನರ್ಧ ಚಪಾತಿ ಇದೆ..’
ಎಂದು ಅಮ್ಮನಿಗೆ ಕೂಗಿ ಕೂಗಿ ಹೇಳತೊಡಗಿದಳು.ಅವರಮ್ಮ ಅಲ್ಲಿಂದಲೇ ‘ಬೇಬಿ ಸಿಟ್ ದೇರ್ ಇಮ್ಮಿಡಿಯೇಟಲಿ..” ಎಂದು ಕಿರುಚಿಹೇಳಿದಳು. ಬೆಂಗಳೂರಿನ
ಇನ್ನೊಂದು ಸಂಸ್ಕೃತಿಯನ್ನು ಕಂಡು ನನಗೆ ಇರುಸುಮುರುಸಾಗಿ ಊಟ ಬೇಗಬೇಗನೇ ಮುಗಿಸಿ ಅವರಿಗೆ ಜಾಗ ಬಿಟ್ಟುಕೊಟ್ಟೆ..!
ಇದು ನನಗೆ ಮದುವೆಯ ಊಟದ ಸಾಲಿನಲ್ಲಿ ಬಹಳಷ್ಟು ಬಾರಿ ಆಗಿದೆ.
ಒಮ್ಮೆ ನನ್ನ ಗೆಳೆಯನೊಬ್ಬ ಮನೆಗೆ ಹೋಗಿ ಅವನ ಪುಟ್ಟ
ಹುಡುಗನ ಜೊತೆ ಮಾತಿಗಿಳಿದಿದ್ದೆ. ಅವನು ಕಾನ್ವೆಂಟಿನಲ್ಲಿ ಕನ್ನಡ ಮಾತಾಡುವ ಹಾಗಿಲ್ಲ..ಅಪ್ಪಿತಪ್ಪಿ
ಮಾತಾಡಿದರೆ ಫ಼ೈನ್ ಹಾಕುತ್ತಾರೆ, ರಾಷ್ಟ್ರಗೀತೆ ಹಾಡಿಸುವುದಿಲ್ಲ
ಎಂಬಿತ್ಯಾದಿ ವಿಷಯಗಳನ್ನು ಕೇಳಿದಾಗ ಆಶ್ಚರ್ಯವಾಗಿತ್ತು. ‘ಅಲ್ಲಯ್ಯ ಇದೇನಿದು ಅತಿರೇಕ..’ ಎಂದು ಗೆಳೆಯನನ್ನು ಕೇಳಿದ್ದಕ್ಕೆ
‘ಇಲ್ಲಾಪ್ಪಾ..ಹಾಗೆ ಮಾಡಿದಾಗಲೆ ಮಕ್ಕಳು ಕಲಿಯೋದು..ಅವರ
ಫ಼್ಯೂಚರ್ ಬ್ರೈಟಾಗಬೇಕಂದ್ರೆ ಇವೆಲ್ಲಾ ಬೇಕು..’ ಎಂದ. ಅಂದರೆ ಅಷ್ಟು ದುಡ್ಡು
ಕೊಟ್ಟು ಸೇರಿಸುವ ಶಾಲೆಯಲ್ಲಿ ದೇಶಭಕ್ತಿ, ಭಾಷಾಪ್ರೇಮವಿರುವುದಿಲ್ಲವಾದರೆ
ಅದೆಂತಹ ವಿದ್ಯಾಭ್ಯಾಸ..’ ಎಂದದ್ದಕ್ಕೆ ಅವನಲ್ಲಿ ಉತ್ತರವಿರಲಿಲ್ಲ.
ಯಾವುದೆ ಮಗುವು ಹೆಚ್ಚಾಗಿ ಕಲಿಯುವುದು ಅನುಸರಿಸುವಿಕೆಯಿಂದ.
ಮಾತಾಡುವುದನ್ನು, ಬೈಯುವುದನ್ನು ಹೊಡೆಯುವುದನ್ನು
ಮಗು ಗಮನಿಸಿಯೇ ಕಲಿಯುತ್ತದೆ. ಮೊದಮೊದಲಿಗೆ ಮಕ್ಕಳು ಮಾಡುವುದು ಮುದ್ದಾಗಿ ಕಂಡರೂ ಅಂಥವುಗಳನ್ನು ಬೆಳೆಯಲು
ಬಿಡಬಾರದು ಎಂದು ಹಿರಿಯರೇಕೆ ಯೋಚಿಸುವುದಿಲ್ಲ. ಬಾಲ್ಯದಿಂದಲೇ ತಪ್ಪುಗಳ ಅರಿವು ಗೊತ್ತಾಗಿಬಿಡಬೇಕೆಂದರೆ
ಹಿರಿಯರು ಸರಿಯಾದುದನ್ನೇ ಮಾಡಬೇಕು. ಆದರೆ ಅವರು ಒಳ್ಳೆಯದು ಎಂಬುದನ್ನು ಬಾಯಲ್ಲಿ ಹೇಳುತ್ತಾರೆಯೇ
ಹೊರೆತು ಕೃತಿಯಲ್ಲಲ್ಲ. ಈಗಂತೂ ಅದು ಇನ್ನೂ ಮುಂದುವರೆದಿದೆ. ಮನೆಯಲ್ಲಿಯೇ ಕುಳಿತು, ಯಾವುದಾದರೂ ಫೋನು ಬಂದಾಗ ‘ಅಪ್ಪಾ ಮನೇಲಿಲ್ಲಾಂತ ಹೇಳು..’
ಎನ್ನುವುದು ಸುಳ್ಳಿನ ಮೊದಲಪಾಠವಾಗುತ್ತದೆ. ಎಲ್ಲರೂ ಒಮ್ಮೊಮ್ಮೆ ನಾನೇಕೆ ಮೊದಲ ಬಾರಿಗೆ
ಸುಳ್ಳು ಹೇಳಿದೆ? ಅದಕ್ಕೆ ಕಾರಣಗಳೇನು ಎಂಬುದನ್ನು ನೆನಪಿಸಿಕೊಂಡರೆ ಅದಕ್ಕೆಲ್ಲೋ
ಬಾಲ್ಯದಲ್ಲಿ ಅಡಿಪಾಯ ಸಿಕ್ಕಿದ್ದು ಸ್ಪಷ್ಟವಾಗಿ ಗೋಚರವಾಗುವುದಂತೂ ಸತ್ಯ.
ಹಾಗೇ ಯಾರಾದರೂ ಬುದ್ದಿವಾದ ಹೇಳಿದರೆ, ‘ಅವನು ನನ್ ಮಗ ಅವನ್ನ ಹೆಂಗೆ ಬೆಳೆಸಬೇಕಂತ ನಂಗೆ ಗೊತ್ತು..” ಎಂದು ಮಗ ಮಾಡಿದ್ದನ್ನು ಸಮರ್ಥಿಸಿಕೊಳ್ಳುವ
ತಾಯಂದಿರನ್ನು ನಾನು ನೋಡಿದ್ದೇನೆ.
ಶಿಸ್ತು, ಪ್ರಾಮಾಣಿಕತೆ ಎಂಬುದು ಮನೆಯಲ್ಲೇ ಪ್ರಾರಂಭವಾಗಿಬಿಟ್ಟರೇ
ಅದು ಮುಂದಿನ ಪೀಳಿಗೆಗೆ ಸರಾಗವಾಗಿ ಹರಿದುಬರುತ್ತದೆ. ಹಾಗೆ ಅದು ಬಲವಾಗಿ ಬೇರೂರುತ್ತದೆ ಎಂಬುದು ನನಗೆ
ಮೊನ್ನೆ ಮೊನ್ನೆ ಯವರೆಗೂ ಗೊತ್ತಿರಲಿಲ್ಲ.
[ಜನವರಿ ಒಂದರ 'ಸಖಿ' ಪಾಕ್ಷಿಕದಲ್ಲಿ ಈ ಪ್ರಬಂಧ ಪ್ರಕಟವಾಗಿದೆ.]