Thursday, May 12, 2016

ವಿಮರ್ಶೆ, ಕಟು ವಿಮರ್ಶೆ, ದೋಷಗಳು..ಇತ್ಯಾದಿ..ಇತ್ಯಾದಿ

 ತಿಥಿ ಸಿನಿಮಾ ನೋಡಿ ಜನ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಸಿದ್ಧ ಸೂತ್ರಗಳನ್ನು ಪಕ್ಕಕ್ಕಿಟ್ಟ ಸಾದಾರಣ ಸರಳ ಕತೆ, ಸರಳ ನಿರೂಪಣೆಯ ಚಿತ್ರದ ನೈಜತೆ ಪ್ರೇಕ್ಷಕರನ್ನು ಮೋಡಿ ಮಾಡಿದ್ದು, ಗ್ರಾಮೀಣ ಸೊಗಡನ್ನು ಅದು ಹಾಗೆಯೇ ತೆರೆಯ ಮೇಲೆ ತಂದಿರುವ ಪರಿಗೆ ಅಚ್ಚರಿ ಪಡುವಂತಹದ್ದೆ. 
ಆದರೆ ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲಿನ ದೋಷಗಳನ್ನು ಕುರಿತಾಗಿ ಚರ್ಚೆಯೂ ನಡೆಯುತ್ತಿದೆ. ಅಷ್ಟು ಹೊಗಳುವ ಸಿನಿಮಾ ತಿಥಿ ಅಲ್ಲ, ಅದೊಂದು ಸಾಮಾನ್ಯ ಚಿತ್ರ, ಅದರಲ್ಲಿ ತಪ್ಪುಗಳಿವೆ ಎಂದು ಶುರುವಾಗುವ ಚರ್ಚೆ, ಒಕ್ಕಲಿಗರು ಹೆಣವನ್ನು ಸುಡುವುದಿಲ್ಲ, ಮಾಂಸದ ಊಟಕ್ಕೆ ಶ್ಯಾನುಭೋಗ, ತಿಥಿ ದಿನಾಂಕ ಗೊತ್ತು ಮಾಡಿದ ವ್ಯಕ್ತಿ ಯಾಕೆ ಬಂದರು, ಸೆಂಚುರಿ ಗೌಡನ ಮಕ್ಕಳು ನಾಲ್ವರಾದರೆ ಗಡ್ಡಪ್ಪ ಮಾತ್ರ ಕಾಣಿಸಿಕೊಂಡಿದ್ದಾರೆ, ಉಳಿದವರು ಎಲ್ಲಿ..? ಹೀಗೆ. ಸುಮ್ಮನೆ ಇದನ್ನೆಲ್ಲಾ ಓದಿದರೆ ಹೌದಲ್ಲ  ಎನಿಸದೆ ಇರದು. ಆದರೆ ಒಂದು ಚಿತ್ರದಲ್ಲಿ ದೋಷಗಳು ಇರುವುದು ದೊಡ್ಡ ದೋಷವೇ..? ಹಾಗಾದರೆ ವಿಮರ್ಶೆ ಎಂದರೆ ಏನು..? ಅದು ಪೋಸ್ಟ್ ಮಾರ್ಟಂ ಅಲ್ಲ. ಇಷ್ಟಕ್ಕೂ ಒಂದು ಸಿನಿಮಾ ಎಂದರೆ ಮನರಂಜನೆ, ಕತೆಯ ನಿರೂಪಣೆ...ಹೀಗೆ. ಅದೊಂದು ಸಮಗ್ರ ಕಲೆಗಳ ಮಿಶ್ರಣ. ಹಾಗಾಗಿ ಹಲವಾರು ಕಲಾಪ್ರಕಾರಗಳು ಒಂದೆಡೆ ಸರಿದಾಗ ಎಲ್ಲವನ್ನು ಕರಾರುವಕ್ಕಾಗಿ ಅಚ್ಚಿಳಿಸುವುದು ಸಾಧ್ಯವೇ ಇಲ್ಲ. ಅಲ್ಲದೆ ಅದು ಒಬ್ಬರ ಕೈ ಅಡುಗೆ ಅಲ್ಲ.. ನಿರ್ದೇಶಕನಿಂದ ಪ್ರಾರಂಭ ಟೀ ಕಾಫಿ ಕೊಡುವ ಹುಡುಗನ ತನಕ ಎಲ್ಲರ ಕೊಡುಗೆಯೂ ಸಿನಿಮಾದಲ್ಲಿರುತ್ತದೆ. ತೆರೆಯ ಮೇಲೆ ಕಲಾವಿದರ ಕಾಣಿಸಿದರೆ, ಸಂಗೀತ ಮಾತುಗಳು ಕೇಳಿಸಿದರೆ ಅದರ ಹಿಂದೆ ಹಲವರ ಕೈಚಳಕ ಇದ್ದೇ ಇರುತ್ತದೆ.
ನಮ್ಮ ಸಿನೆಮಾಗಳಲ್ಲಿನ ದೋಷಗಳನ್ನು ತಾಂತ್ರಿಕ ದೋಷಗಳು, ವಸ್ತು-ನಿಖರತೆ ದೋಷಗಳು, ನಿರಂತರತೆಯಲ್ಲಿನ ದೋಷಗಳು ಎಂದೆಲ್ಲಾ ಪಟ್ಟಿ ಮಾಡಬಹುದು. ಇವುಗಳ ಸಿನಿಮಾದ ಓಘಕ್ಕೆ ಗತಿಗೆ ಅದೆಷ್ಟರ ಮಟ್ಟಿಗೆ ಪ್ರಭಾವ ಬೀರುತ್ತವೋ ಇಲ್ಲವೋ ದೋಷವಂತೂ ಇದ್ದೇ ಇರುತ್ತದೆ ಎಂದು ದಾಖಲಿಸಬಹುದಷ್ಟೇ. ಕೇಳಿಕೊಳ್ಳುವ ಪ್ರಶ್ನೆಗೆ ಉತ್ತರಿಸಲು ಸಿನಿಮಾದಲ್ಲಿ ಯಾರಿರುತ್ತಾರೆ ಹೇಳಿ...? ಸಿನಿಮ  ಪ್ರೇಕ್ಷಕನನ್ನು ತನ್ನೊಳಗೆ ಸೆಳೆದುಕೊಳ್ಳುತ್ತಾ ಸಾಗಿದಾಗ ಅದೆಲ್ಲಾ ಗೌಣ. ಆಮೇಲೆ ಸುಮ್ಮನೆ ಎಲ್ಲೋ ಕುಳಿತುಕೇಳಿಕೊಳ್ಳಬಹುದು. ಆದರೆ ಪ್ರೇಕ್ಷಕ ತಪ್ಪು ಹುಡುಕುವುದಿಲ್ಲ, ಅವನು ಕೇಳುವುದು ಸಿನೆಮಾದಲ್ಲಿನ ನಿರೀಕ್ಷಿತ ಭಾವವನ್ನು. ಸೆಂಟಿಮೆಂಟ್ ಎಂದುಕೊಂಡ ಸಿನಿಮಾಕ್ಕೆ ಹೋದರೆ ಅದರಲ್ಲಿ ಹಾರರ್ ಇದ್ದು, ಅದು ಇಷ್ಟ ಪಡಿಸದೇ ಇದ್ದಾಗ ರೊಚ್ಚಿಗೇಳದೇ ಹೇಗಿರುತ್ತಾನೆ ಹೇಳಿ..? ಸಾಯಿಕುಮಾರ್ ಅಭಿನಯದ ಪೋಲಿಸ್ ಚಿತ್ರವೊಂದರಲ್ಲಿ ಹೊಡೆದಾಟವೆ ಇಲ್ಲದೆ, ಕ್ಲೈಮಾಕ್ಸ್ ಹಾಡಿನಲ್ಲಿ ಕೊನೆಯಾದಾಗ ಕೂಗಾಡಿದ ಪ್ರೇಕ್ಷಕರಿದ್ದಾರೆ, ಹಾಗೆಯೇ ವಯಸ್ಕರ ಚಿತ್ರವೊಂದಕ್ಕೆ ಮೈಮನಗಳನ್ನು ಬಿಸಿ ಮಾಡಿಕೊಳ್ಳಲು ಪ್ರೇಕ್ಷಕ ಬಂದಿದ್ದರೆ ಅದರಲ್ಲಿ ಮಾಮೂಲಿ ಸಿನೆಮದಲ್ಲಿರುವಷ್ಟೂ ರೋಮ್ಯಾನ್ಸ್ ಇಲ್ಲದೆ ಇದ್ದಾಗ ಕೋಪಗೊಂಡ ಅವನು ಕುದಿಯುತ್ತಿರುವಾಗಲೇ, ಅಷ್ಟು ಸಾಲದೆಂಬಂತೆ ಮಧ್ಯ ಡಾ. ಅಶೋಕ್ ಪೈ ಬಂದು ಪಾಠ ಮಾಡಿದರೆ ಕುರ್ಚಿ ಮುರಿಯದೆ ಬಿಡುತ್ತಾನೆಯೇ..?ಹಾಸ್ಯ ಎಂದುಕೊಂಡು ಹೋದವರಿಗೆ ಸೆಂಟಿಮೆಂಟ್ ತಗ್ಲಾಕಿಕೊಂಡರೆ ಅದೆಷ್ಟು ಕೋಪ ಬರುತ್ತದೆ ಅಲ್ಲವೇ..? ಇದೆಲ್ಲಾ ಸಿನಿಮಾದಲ್ಲಿ ಆಗಿರುವಂತಹದ್ದೆ. ಸಿನಿಮಾ ತನ್ನ ಪೋಸ್ಟರ್ ಗಳಿಂದ, ಟ್ರೈಲರ್ ಗಳಿಂದ, ಹಾಡುಗಳಿಂದ, ನಿರ್ದೇಶಕರಿಂದ, ನಟರಿಂದ ಬರೀ ನಿರೀಕ್ಷೆಯಂನಷ್ಟೇ ಹುಟ್ಟುಹಾಕಿರುವುದಿಲ್ಲ, ಜೊತೆಗೆ ಒಂದಷ್ಟು ಸುಳಿವು ನೀಡಿರುತ್ತದೆ, ಒಂದು ಊಹೆಯನ್ನು ಕಲ್ಪನೆಯನ್ನು ಪ್ರೇಕ್ಷಕನಲ್ಲಿ ತುಂಬಿರುತ್ತದೆ, ಹಾಗೆಯೇ ಅವನನ್ನು ಸಿನಿಮಾಕ್ಕೆ ತಯಾರಿ ಮಾಡಿರುತ್ತದೆ. ಆ ಭಾವದ ಸಿನೆಮಾವನ್ನು ನೋಡಲು ಉತ್ಸುಕನಾಗಿ ಮಾನಸಿಕವಾಗಿ ತಯಾರಾಗಿ ಬಂದ ಪ್ರೇಕ್ಷಕನಿಗೆ ಒಳಗೆ ಬೇರೆಯದನ್ನು ತೋರಿಸಿದರೆ ಅದು ಅದೆಲ್ಲವನ್ನು ಮರೆಸುವಷ್ಟು ಚೆನ್ನಾಗಿರಬೇಕಾಗುತ್ತದೆ. ಇಲ್ಲವಾದಲ್ಲಿ ಅದರಲ್ಲಿನ ತಪ್ಪುಗಳು ರಾಚುತ್ತವೆ.
ನಮ್ಮ ಸಿನೆಮಾಗಳಲ್ಲಿ ತಾಂತ್ರಿಕ-ದೋಷಗಳು ಸರ್ವೇ ಸಾಮಾನ್ಯ. ಬೆಳಕಿನ ಸಾಮ್ಯತೆ, ಕ್ಯಾಮೆರಾ ಕೋನದಲ್ಲಿ ಬದಲಾವಣೆಯಾದಾಗ ವ್ಯತ್ಯಾಸವಾಗುವುದು ಇತ್ಯಾದಿ ಇತ್ಯಾದಿ. ಹಾಗೆಯೇ ನಿರಂತರತೆಯ ದೋಷವನ್ನು ತಡೆಯಲು ಕಷ್ಟ. ಲಾಂಗ್ ಶಾಟ್ ನಲ್ಲಿ ಚಿತ್ರಣವಿದ್ದಾಗ ಇದ್ದ ಮುಖ್ಯ ಕಲಾವಿದರನ್ನು ಹೊರತುಪಡಿಸಿ ಹಿಂದೆ ಮುಂದೆ ಇದ್ದ ಜನರು, ವಸ್ತುಗಳು ಶಾಟ್ ಬದಲಾದಾಗ ಕಾಣೆಯಾಗಬಹುದು, ಬದಲಾಗಬಹುದು, ಹಾಗೆಯೇ ನಾಯಕನ ಶರ್ಟ್, ಪ್ಯಾಂಟ್, ಬೆಲ್ಟ್, ಸ್ಥಳ ಹೀಗೆ ಚಿತ್ರೀಕರಣಕ್ಕೆ ಅನುಕೂಲಕ್ಕೆ ತಕ್ಕಂತೆ, ಅದನ್ಯಾರು ಗಮನಿಸುತ್ತಾರೆ ಬಿಡು ಎಂದು ಚಿತ್ರತಂಡ ನಿರ್ಲಕ್ಷ್ಯ ತೋರಿದಾಗ ಇಂತಹ ದೋಷಗಳು ಸರ್ವೇ ಸಾಮಾನ್ಯ. ಹಾಗೆಯೇ ವಸ್ತು ನಿಖರತೆ ದೋಷಗಳು- ಈಗ ತಿಥಿಯಲ್ಲಿ ಪಟ್ಟಿ ಮಾಡಿರುವಂತಹದ್ದು ಇದೆ. ಆದರೆ ಇದನ್ನು ಸಂಪೂರ್ಣ ದೋಷ ಎಂದೂ ಹೇಳಲಾಗುವುದಿಲ್ಲ, ಜ್ಯೋತಿಷ್ಯ ಹೇಳಿ, ದಿನಾಂಕ ನಿಗದಿ ಪಡಿಸುವವ ಬ್ರಾಹ್ಮಣನೆ ಆಗಬೇಕೆಂದಿಲ್ಲ, ಹಾಗೆಯೇ ಊರಲೊಬ್ಬ ಸಸ್ಯಾಹಾರಿ ಮಾಂಸದ ಊಟವನ್ನು ರೂಢಿಸಿಕೊಂಡಿರಬಹುದು, ಶ್ಯಾನುಭೋಗ ಎಂಬುದು ಅವನ ಹೆಸರು, ಹುದ್ದೆ, ಅಡ್ಡ ಹೆಸರು ಇರಬಹುದು, ಅಥವಾ ಅವನು ಮಾಂಸ ತಿನ್ನುವಂತವನಾಗಿರಬಹುದು, ಇನ್ನು ಗಡ್ದಪ್ಪನ ಸೋದರರಲ್ಲಿ ಎಲ್ಲರೂ ಸತ್ತಿರಬಹುದು, ಅಥವಾ ಬೇರೆ ಬೇರೆ ಊರಲ್ಲಿರಬಹುದು, ಅಥವಾ ಅಲ್ಲಿ ಬಂದಿದ್ದರೂ ಕತೆಗೆ ಬೇಕಾಗಿಲ್ಲವಾದ್ದರಿಂದ ಅವರನ್ನು ನಿರ್ದೇಶಕ ನಮಗೆ[ಪ್ರೇಕ್ಷಕ]ರಿಗೆ ಪರಿಚಯಿಸಿಲ್ಲದೆ ಇರಬಹುದು... ಹೀಗೆ ಸಮರ್ಥನೆ ನೀಡುತ್ತಾ ಸಾಗಬಹುದು. ಇಷ್ಟಕ್ಕೂ ತಿಥಿ ಜೀವನ ಚರಿತ್ರೆಯಲ್ಲ, ಸಾಕ್ಷ್ಯ ಚಿತ್ರವೂ ಅಲ್ಲ, ಅದೊಂದು ಕಾಲ್ಪನಿಕ ಕತೆ. ಹಾಗೆ ನೋಡಿದರೆ ಪ್ರತಿಯೊಂದು ಚಿತ್ರದಲ್ಲೂ ಇಂತಹ ಪ್ರಶ್ನೆಗಳು ಪ್ರೇಕ್ಷಕನನ್ನು ಕಾಡದೆ ಇರದು. ಆದರೆ ಅದೆಲ್ಲವನ್ನು ಮರೆಸಿಕೊಂಡು ಸಿನಿಮಾ ನೋಡಿಸಿಕೊಂಡು ಬಿಟ್ಟರೆ ಅದು ಆ ಸಿನಿಮಾದ ಸಾರ್ಥಕತೆ. ಉದಾಹರಣೆಗೆ ರಂಗಿತರಂಗ. ಗೆಳೆಯರ ಜೊತೆಗೆ ಹಾಡಿ ಕುಣಿದು, ಪ್ರೇಯಸಿಗೆ ಹಳೆಯ ಗೆಳೆಯರನ್ನು ಭೇಟಿ ಮಾಡಿಕೊಂಡು ಬರುತ್ತೇನೆ ಎಂದು ಹೋಗುವ ನಾಯಕ ಅಪಘಾತದಲ್ಲಿ ಸತ್ತು ಬೇರೆ ವ್ಯಕ್ತಿಯಾಗುತ್ತಾನೆ, ಕಾದಂಬರಿಕಾರನಾಗಿ, ಮದುವೆಯಾಗಿ ಬದುಕು ನಡೆಸುತ್ತಾನೆ. ಓಕೆ. ಆದರೆ ಅವನ ಗೆಳೆಯರು, ಮನೆಯವರು ಇವನೆಲ್ಲಿ ಕಾಣೆಯಾದ ಎಂದು ಹುಡುಕುವುದಿಲ್ಲವೇ..? ಅವನ ಪ್ರೇಯಸಿ ಬಿಟ್ಟರೆ ಬೇರ್ಯಾರಿಗೂ ಅವನು ಮಾಯವಾದ ಬಗೆ ಅಚ್ಚರಿ ಗಾಬರಿ ಹುಟ್ಟಿಸುವುದಿಲ್ಲವೇ..? ಹಾಗೆಯೇ ಅಪಘಾತದಲ್ಲಿ ಸತ್ತವರ ಕುಟುಂಬಗಳು ಅವರನ್ನು ಹುಡುಕುವುದಿಲ್ಲವೇ..? ಅಪಘಾತಕ್ಕೂ ಮೊದಲು ನಾಯಕಿ ಅಪಘಾತ/ಕೊಲೆ ಮಾಡಿ ಅವಳನ್ನು ಕಾಡುತ್ತಿದ್ದ ಪ್ರಭಾವಿ-ಶ್ರೀಮಂತ ಯುವಕನನ್ನು ಸಾಯಿಸುತ್ತಾಳಲ್ಲಾ ಅವನ ಹೆಣದ, ಕೊಲೆಯ ಇನ್ವೆಸ್ಟಿಗೇಷನ್ ಇತ್ಯಾದಿ ನಡೆಯುವುದಿಲ್ಲವೆ..? ಹೀಗೆ ಪ್ರಶ್ನಿಸಲೂ ಬಹುದು. ಮತ್ತದಕ್ಕೆ ಉತ್ತರವನ್ನು ನೀಡಬಹುದು. ಕಾಣೆಯಾದ ನಾಯಕನ ಗೆಳೆಯರು/ಕುಟುಂಬದವರು ಸತ್ತನೆಂದು ತಿಳಿದಿರಬಹುದು, ಹುಡುಕುತ್ತಿರಬಹುದು, ನಾಯಕಿ ಸಾಯಿಸಿದ ವ್ಯಕ್ತಿಯ ತನಿಖೆ ಕೂಡ ನಡೆಯುತ್ತಿರಬಹುದು, ಸಿನಿಮಾದ ಕತೆಯ ನಿರೂಪಣೆಯ ದಿಕ್ಕು ಬೇರೆಯಾದ್ದರಿಂದ ಅದು ಬೇರೆ ದಿಕ್ಕಿನಲ್ಲಿ/ಟ್ರ್ಯಾಕ್ ನಲ್ಲಿ ನಡೆಯುತ್ತಿದ್ದು ಸಿನಿಮಾದಲ್ಲಿ ಕಾಣುವುದು ಒಂದು ಮುಖ ಮಾತ್ರ ಎನ್ನಬಹುದು. ಇದು ಸಮರ್ಥನೆಯೂ ಹೌದು, ಉತ್ತರವೂ ಹೌದು. ಅಥವಾ ಅದು ಇರೋದೇ, ಇದ್ದಿದೆ ಹೌದು ಎನ್ನಬಹುದು. ಇನ್ನು ಕಮರ್ಷಿಯಲ್ ಚಿತ್ರಗಳಲ್ಲಿ ಇಂತಹ ಪ್ರಶ್ನೆಗಳು ದೋಷಗಳು ದಂಡಿಯಾಗಿ ಸಿಗುತ್ತವೆ. ಹಾಗೆಯೇ ಕಲಾತ್ಮಕ ಚಿತ್ರಗಳಲ್ಲೂ ಹುಡುಕಬಹುದು. ಆದರೆ ತಪ್ಪು ಹುಡುಕಿ ಮಾರ್ಕ್ಸ್ ಕೊಡಲು ಯಾರಿದ್ದಾರೆ, ಅದು ಯಾರಿಗೆ ಬೇಕಿದೆ. ಚಿತ್ರಮಂದಿರಕ್ಕೆ ಹೊಕ್ಕವನಿಗೆ ರಂಜಿಸಿದರೆ ಎಲ್ಲಾ ತಪ್ಪು ಮಾಫಿ.. ಇಲ್ಲವಾದಲ್ಲಿ ಎಷ್ಟೇ ಚಂದವಿದ್ದರೂ ತಥ್..ಅಲ್ಲವೇ..?
ಬಹುಶ ವಿಮರ್ಶೆ ಎಂದರೆ ಇದೆ ಇರಬೇಕು. ಹೀಗಿರಬೇಕಿತ್ತು, ಹಾಗೇಕಿದೆ, ಹೀಗಿರಬಾರದಿತ್ತು ಎನ್ನುವುದು ವಿಮರ್ಶೆಯೇ..? ಇರುವುದರಲ್ಲಿ ಇಲ್ಲದ್ದನ್ನು ಇಲ್ಲದ್ದರಲ್ಲಿ ಇರುವುದನ್ನು ಹುಡುಕುವುದು ಅದ್ಯಾವ ವಿಮರ್ಶೆ..? ಸಿನಿಮಾದ ಆಶಯ ಮತ್ತು ಅದರ ಫಲಿತಾಂಶ- ಇವೆರೆಡು ಶೇಕಡಾ ಲೆಕ್ಕದಲ್ಲಿ ಅರವತ್ತಷ್ಟಾದರೂ ಹೊಂದಿಕೆಯಾದರೆ ಅದೊಂದು ಸಿನಿಮಾ ಎನಿಸಿಕೊಳ್ಳುತ್ತದೆ. ವಿಮರ್ಶಕರು ಅಷ್ಟನ್ನು ಮಾತ್ರ ಹೊಂದಿಸುತ್ತಾ ಸಾಗಿದರೆ ಸಿನಿಮಾದ ಲೆಕ್ಕ ಪಕ್ಕಾಗುತ್ತದೇನೋ? ಇಲ್ಲವಾದಲ್ಲಿ ಸಿನಿಮಾದ ವಿಮರ್ಶೆ-ವಿಮರ್ಶಕನಿಗೂ- ನೋಡುಗನಿಗೂ ಚಿತ್ರಕರ್ಮಿಗೂ ಅಜಗಜಾಂತರ ವ್ಯತ್ಯಾಸ ಬಂದುಬಿಡುತ್ತದೆ. ಸಿನಿಮಾದ ಬಗೆಗೆ ಬರೆದದ್ದು ಅದನ್ನು ಓದಿಕೊಂಡು ಹೋದ ಬಹುಪಾಲು ಪ್ರೇಕ್ಷಕ/ಓದುಗನಿಗೆ ಅಹುದು ಎನಿಸದಿದ್ದರೆ ಅದು ಚಿಕಿತ್ಸೆಯಾಗದೆ, ಪೋಸ್ಟ್ ಮಾರ್ಟಂ ಆಗುತ್ತದೆ ಅಷ್ಟೇ..ಸಿನೆಮಾವನ್ನು ಇನ್ನಷ್ಟು ಜೀವಂತ ಗೊಳಿಸುವ ಚಿಕಿತ್ಸೆ ತೆರನಾಗಿ ವಿಮರ್ಶೆ ಇದ್ದರೆ ಅದಕ್ಕೆ ಬೆಲೆ, ಇಲ್ಲವಾದಲ್ಲಿ ಅದು ಪೋಸ್ಟ್ ಮಾರ್ಟಂ. ಅಷ್ಟೇ ಅಲ್ಲವೇ..?
ಒಂದೂ ದೋಷವಿಲ್ಲದ, ಎಲ್ಲದರಲ್ಲೂ ನಿಖರತೆಯಿರುವ ಚಿತ್ರವನ್ನು ಮಾಡಲು ಸಾಧ್ಯವಿದೆಯೇ....? ಇರಬಹುದು. ಆದರೆ ಅದನ್ನು ಸಂಪೂರ್ಣವಾಗಿ ನೋಡಿ ಅನುಭವಿಸಿ, ಖುಷಿ ಪಡಲು ನಮ್ಮಿಂದ ಸಾಧ್ಯವೇ..? ಹೇಳುವುದು ಕಷ್ಟ...

No comments:

Post a Comment