Saturday, May 14, 2016

ಚಕ್ರವ್ಯೂಹದಲ್ಲಿ ನಿರ್ದೇಶಕರೇ ಸಿಲುಕಿದ್ದೇಕೆ..?-ಒಂದು ಹರಟೆ..

ಮೊನ್ನೆ ಮತ್ತೊಮ್ಮೆ  ಅನಿವಾರ್ಯ ಕಾರಣಗಳಿಂದಾಗಿ ಚಕ್ರವ್ಯೂಹ  ಚಿತ್ರವನ್ನು ನೋಡಬೇಕಾಗಿ  ಬಂದಿತ್ತು. ಸಿನಿಮಾ ಅದೆಷ್ಟೇ ಒಳ್ಳೆಯದಿರಲಿ, ಕೆಟ್ಟದ್ದಿರಲಿ  ಪದೇ ಪದೇ ನೋಡಲು  ನನಗಡ್ಡಿಯಿಲ್ಲ. ಒಮ್ಮೆ  ಹಮನಿಸಿದ, ಯೋಚಿಸಿದ, ಗ್ರಹಿಸಿದ  ವಿಷಯಗಳನ್ನು ಪಕ್ಕಕ್ಕಿಟ್ಟು ಮತ್ತೊಂದು ಬೇರೆಯದೇ ಆದ ವಿಷಯವನ್ನು ಅದರಲ್ಲಿ ಹುಡುಕುವ ಪ್ರಯತ್ನ ಮಾಡುತ್ತಾ ಸಿನಿಮಾ ನೋಡುವುದು ನನಗೆ ಖುಷಿಯಾ ಸಂಗತಿ. ನಾನು ಸಿನಿಮಾಕ್ಕೆ ಎರಡನೆಯ ಬಾರಿ ಹೋದದ್ದು ಚಿತ್ರ ಬಿಡುಗಡೆಯಾದ ಹತ್ತನೆಯ ದಿನಕ್ಕೆ. ಚಿತ್ರಮಂದಿರದಲ್ಲಿ ಬೆರಳೆಣಿಕೆಯಾ ಜನವಿದ್ದರು, ಅದರಲ್ಲೂ ಬಾಲ್ಕನಿಯಲ್ಲಿ ಇದ್ದದ್ದು ಇಪ್ಪತ್ತು-ಇಪ್ಪತ್ತೈದು ಜನರು ಮಾತ್ರ. ಅದು ಸಂಜೆಯ ಪ್ರದರ್ಶನದಲ್ಲಿ. ಕನ್ನಡದಲ್ಲಿ  ಬೃಹತ್  ಅಭಿಮಾನಿಗಳನ್ನು  ಹೊಂದಿರುವ, ನಟನೆಯಲ್ಲಿ, ನೃತ್ಯದಲ್ಲಿ, ಹೊಡೆದಾಟದಲ್ಲಿ  ಸೈ ಎನಿಸಿಕೊಂಡಿರುವ ಕಲಾವಿದ ಪವರ್ ಸ್ಟಾರ್ ಪುನೀತ್  ರಾಜಕುಮಾರ್. ಗುಣಮಟ್ಟಕ್ಕೆ ಹೆಚ್ಚು ಗಮನ ಕೊಡುವ ಕತೆ ಚಿತ್ರಕತೆಗೆ ಹೆಚ್ಚು ಗಮನ ಹರಿಸುವ ಪುನೀತ್ ರಾಜಕುಮಾರ್ ಅವರ ಚಿತ್ರದ
ಪ್ರದರ್ಶನದಲ್ಲಿ ಕಡಿಮೆ ಪ್ರೇಕ್ಷಕರನ್ನು ಕಂಡು ನನಗೆ ಒಂದು ರೀತಿಯಾಯಿತು. ಇಷ್ಟಕ್ಕೂ ಚಕ್ರವ್ಯೂಹ ಚಿತ್ರದಲ್ಲಿ ಇಲ್ಲದೆ ಇರುವುದೇನು? ಭರಪೂರ ಹೊಡೆದಾಟಗಳು, ಹಾಡುಗಳು, ಶ್ರೀಮಂತ ಲೊಕೇಶನ್ಗಳು, ಅನುಭವಿ ಕಲಾವಿದರುಗಳು, ಪರಿಣತ ತಂತ್ರಜ್ಞರು... ಹೀಗೆ. ಇಷ್ಟೆಲ್ಲಾ ಇದ್ದು ಮೇಲಾಗಿ ಪವರ್ ಸ್ಟಾರ್ ಪುನೀತ್ ಇದ್ದು  ಸಿನಿಮಾ ಜನರನ್ನು ಆಕರ್ಷಣೆ ಮಾಡುತಿಲ್ಲವಲ್ಲ ಏಕೆ? ಎಂಬ ಪ್ರಶ್ನೆ ನನ್ನನ್ನು ಕಾಡಿದ್ದು ಸತ್ಯ. ಹಾಗೆ ಸಿನಿಮಾ ಒಂದು ಕೈಗೆ ಸಿಗುವುದಿಲ್ಲ, ಇದಿಷ್ಟೇ ಸಿನಿಮಾ ಎಂದು ಯಾವ ಚಿತ್ರಬ್ರಹ್ಮನೂ ಹೇಳಲು ಸಾಧ್ಯವಿಲ್ಲ. ಇಂತಹದ್ದೇ ಯಶಸ್ಸಿನ ಸೂತ್ರ, ಈ ಕತೆ ಪಕ್ಕ ಹಿಟ್ ಆಗುವ ಕತೆ ಎಂದೆಲ್ಲಾ ಹೇಳಲು, ಅಂದಾಜು ಮಾಡಲು ಸಾಧ್ಯವೇ ಇಲ್ಲ. ಆದರೂ ಕೆಲವೊಂದು ಗೆಸ್ ಗಳನ್ನೂ ಮಾಡಬಹುದು. ಪ್ರೇಕ್ಷಕ ಏನನ್ನು ಕೇಳುತ್ತಾನೆ, ಭರಪೂರ ಮನರಂಜನೆ. ಅದರಲ್ಲೂ ಸ್ಟಾರ್ ನಟ ಎಂದಾಗ ಅವನ ನಿರೀಕ್ಷೆ ಇನ್ನೂ ಹೆಚ್ಚಾಗುತ್ತದೆ. ಆದರೆ ಅದನ್ನು ಸಂಧಿಸಲು ಚಿತ್ರಕರ್ಮಿ, ಅದರಲ್ಲೂ ನಿರ್ದೇಶಕ, ನಿರೂಪಕ ಚಿತ್ರಕತೆಗಾರ ಕಷ್ಟ ಪಡಬೇಕಾಗುತ್ತದೆ.. ತಾನೂ ಪ್ರೇಕ್ಷಕನಾಗಿ ಅಭಿಮಾನಿಯಾಗಿ ಆ ಸಿನಿಮಾವನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆ.
ಚಕ್ರವ್ಯೂಹ ಚಿತ್ರದ ಕತೆ ತಮಿಳಿನ ಇವನ ವೇರ ಮಾದಿರಿ ಚಿತ್ರದ್ದು. ಅದರ ರಿಮೇಕ್ ಆದ ಚಕ್ರವ್ಯೂಹಕ್ಕೆ ನಿರ್ದೇಶಕ ಅದರ ತಿರುಳನ್ನಷ್ಟೇ ಆಯ್ದುಕೊಂಡಿದ್ದಾರೆ. ಉಳಿದಂತೆ ಇಲ್ಲಿಗೆ ಬೇರೆಯದೇ ಆದ ಚಿತ್ರಕತೆ ರಚಿಸಿದ್ದಾರೆ. ಆ ಸಿನಿಮಾ ನೋಡಿದವರಿಗೆ ಇಲ್ಲೇನು ಮಿಸ್ ಆಗಿದೆ ಎಂಬುದು ಗೊತ್ತಾಗುತ್ತದೆ. ಚಕ್ರವ್ಯೂಹದಲ್ಲಿ ಮಿಸ್ ಆಗಿರುವುದು ಡೀಟೇಲ್ಸ್. ಯಾವುದೇ ಚಿತ್ರದಲ್ಲಿ ಹೀರೋ ಸ್ಟ್ರಾಂಗ್ ಆಗಬೇಕಾದರೆ ವಿಲನ್ ಅವನಿಗಿಂತ ಸ್ಟ್ರಾಂಗ್ ಎಂದು ತೋರಿಸಬೇಕು. ಖಳಪಾತ್ರ ಪೋಷಣೆ ಗಟ್ಟಿಯಾಗಿದ್ದಾಗ ಅವನನ್ನು ಮೆಟ್ಟಿ ನಿಲ್ಲುವ ನಾಯಕನ ಶಕ್ತಿ ಯುಕ್ತಿಗೆ ಒಂದು ಖದರ್ ಬಂದು ಬಿಡುತ್ತದೆ. ನಿರ್ದೇಶಕ ಶರವಣನ್ ತಮಿಳಿನಲ್ಲಿ ಆ ಪಾತ್ರವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ನಾಯಕನನ್ನು ಸುಮ್ಮನೆ ಆಸ್ಪತ್ರೆಯಲ್ಲಿ ಅನಾವರಣಗೊಳಿಸುವ ನಿರ್ದೇಶಕರು ಅದಕ್ಕೂ ಮುನ್ನ ಖಳನ ಕೇಡಿತನವನ್ನು ತುಂಬಾ ಚೆನ್ನಾಗಿ ವಿಶದ ಪಡಿಸಿದ್ದಾರೆ. ಅವನ ಕೃತ್ಯಗಳ ವಿವರಣೆ ನೀಡಿದ್ದಾರೆ. ಅದೆಲ್ಲವನ್ನು ದೃಶ್ಯರೂಪದಲ್ಲಿ ತೋರಿಸಿದ್ದಾರೆ. ಹಾಗೆಯೇ ಚಿತ್ರವನ್ನು ನೇರಾ ನೇರಾ ಪ್ರಾರಂಭಿಸಿದ್ದಾರೆ. ಆದರೆ ಚಕ್ರವ್ಯೂಹದಲ್ಲಿ ಫ್ಲಾಶ್ ಬ್ಯಾಕ್ ತಂತ್ರವನ್ನು ಉಪಯೋಗಿಸಿದ್ದಾರೆ. ಅಲ್ಲದೆ ನಾಯಕನನ್ನೇ ಮೊದಲಿಗೆ ಪರಿಚಯಿಸಿ, ಕತೆಯುದ್ದಕ್ಕೂ ನಾಯಕನನ್ನು ತಂದಿದ್ದಾರೆ. ಹಾಗಾಗಿ ಖಳ ಪಾತ್ರ ಸೊರಗಿ, ಅದು ಹೀರೋಇಸಂ ಗೂ ಮಾರಕವಾಗಿಬಿಟ್ಟಿದೆ.
ಹಾಗೆಯೇ ತಮಿಳಿನಲ್ಲಿರುವ ಮತ್ತೊಂದು ಗಮನಾರ್ಹ ಅಂಶವೆಂದರೆ ತಿರುವುಗಳು. ಒಂದು ಚಿಕ್ಕ ಚಿಕ್ಕ ಸುಳಿವುಗಳು, ಮತ್ತವುಗಳನ್ನು ನಾಯಕ ಮೆಟ್ಟಿ ನಿಲ್ಲುವ ಪರಿ ಕುತೂಹಲ ಹುಟ್ಟಿಸುತ್ತದೆ. ಉದಾಹರಣೆಗೆ ಖಳನನ್ನು ಹೊಡೆದು ತಂದು ರೂಮಿಗೆ ಕೂಡಿಹಾಕುವಾಗಲ್ಲಿನ ಹೊಡೆದಾಟದಲ್ಲಿ ಅವನ ಜೇಬಿನಿಂದ ಆಸ್ಪತ್ರೆಯ ಸ್ಲಿಪ್ ಬಿದ್ದು ಕಾರಿನ ಚಕ್ರಕ್ಕೆ ಸಿಲುಕಿರುತ್ತದೆ. ಕಾರನ್ನು ನೋಡಿ, ಅದನ್ನು ಪರೀಕ್ಷಿಸುವಾಗ ಕಾನೂನು ಮಂತ್ರಿಯ ಕೈಗೆ ಆ ಸ್ಲಿಪ್ ಸಿಕ್ಕಿ ಅವನು ಆಸ್ಪತ್ರೆಯನ್ನು ಹುಡುಕಿಕೊಂಡು ಹೋಗಿ ಅದು ಯಾರಿಗೆ ಬರೆದುಕೊಟ್ಟ ಸ್ಲಿಪ್ ಎಂಬುದನ್ನು ಹುಡುಕಿ ಎಂದು ಹೇಳಿದಾಗ ನಾಯಕ ಆ ಫೈಲ್ ಅನ್ನು ಕಾಣೆಯಾಗಿಸುತ್ತಾನೆ. ಆದರೆ ಕನ್ನಡದಲ್ಲಿ  ಈ ಸನ್ನಿವೇಶವೇ ಇಲ್ಲದಿರುವುದು ಒಂದು ಕುತೂಹಲಕರ ದೃಶ್ಯ ಇಲ್ಲದಂತಾಗಿದೆ. ಹಾಗೆಯೆ ಮಧ್ಯಂತರದ ನಂತರ ಚಿತ್ರ ಬಹುಬೇಗ ಮುಗಿಯುತ್ತದೆ. ತಮಿಳಿನ ಚಿತ್ರದ ಅವಧಿ ಎರಡು ಘಂಟೆ, ಮೂವತ್ತು ನಿಮಿಷ  ಇದ್ದರೆ ಕನ್ನಡದಲ್ಲಿ ಎರಡು ಘಂಟೆ ಹದಿನಾಲ್ಕು ನಿಮಿಷ ಮಾತ್ರವಿದೆ. ಹಾಗೆಯೇ ಕನ್ನಡದಲ್ಲಿ ಅನಗತ್ಯವಾದ ಎರಡು ಹೊಡೆದಾಟಗಳು ಸೇರ್ಪಡೆಯಾಗಿವೆ. ಇವೆಲ್ಲ ಕತೆಯ, ಕುತೂಹಲಕರ ಮೈಂಡ್ ಗೇಮ್ ಇರಬಹುದಾಗಿದ್ದ ಸಮಯವನ್ನು ತಿಂದುಬಿಟ್ಟಿದ್ದು ಸಿನಿಮಾವನ್ನು ಸರಳೀಕರಿಸಿದೆ. ಹಾಗಾಗಿಯೇ ಚಿತ್ರದ ತುಂಬಾ ಸಾದಾರಣ ಎನಿಸುತ್ತದೆ. ಉಸಿರುಬಿಗಿಹಿಡಿದು ಕಾಯಬೇಕಾಗಿದ್ದ ಪ್ರೇಕ್ಷಕ ನಿರಾಳವಾಗಿ ಸಿನಿಮಾ ನೋಡುವಂತೆ ಮಾಡಿಬಿಟ್ಟಿದೆ. ನಾಯಕಿಯನು ಕಿಡ್ನಾಪ್ ಮಾಡಿದಂದಿನಿಂದ ಬಿಡಿಸುವವರೆಗಿನ ಕತೆ ಸುಮಾರು ಸಮಯ ತೆಗೆದುಕೊಂಡು ಬಿಡುತ್ತದೆ. ವಿಷಯ ಕಡಿಮೆಯಿದ್ದು ಅದರ ನಿರೂಪಣೆ ಸಮಯ ಹಿಗ್ಗಿದ್ದು ಅದು ನೋಡಿದ ನಂತರ ಇಷ್ಟೇನಾ ಎನಿಸುವಂತೆ ಮಾಡಿಬಿಡುತ್ತದೆ. ಹಾಗೆಯೇ ಶರವಣ ತಮಿಳು ಆವೃತ್ತಿಯನ್ನು ಹೆಚ್ಚು ದೃಶ್ಯಗಳಿಂದ ಸೆರೆಹಿಡಿದಿದ್ದರೆ, ಚಕ್ರವ್ಯೂಹವನ್ನು ವಾಚ್ಯವಾಗಿಸಿದ್ದಾರೆ. ನಾಯಕನ ಸ್ವಗತವನ್ನು ಅಲ್ಲಲ್ಲಿ ಸೇರಿಸುವ ಮೂಲಕ ಭಾವತೀವ್ರತೆಯನ್ನು ತೆಳುಗೊಳಿಸಿದ್ದಾರೆ.
ಅದೇಕೋ ಒಂದೇ ಚಿತ್ರವನ್ನು ಬೇರೆ ಬೇರೆ ಭಾಷೆಯಲ್ಲಿ ನಿರ್ದೇಶಿಸಿ ಗೆದ್ದ ನಿರ್ದೇಶಕರ ನಡುವೆ ಪವರ್ ಸ್ಟಾರ್ ಅಂತಹ ಸ್ಟಾರ್ ಇದ್ದು ಶರವಣ ಗೆಲುವು ಸಾಧಿಸದೆ ಇದ್ದದ್ದು ವಿಷಾದನೀಯ ಎನಿಸುತ್ತದೆ. ಪಿ.ವಾಸು ಆಪ್ತಮಿತ್ರವನ್ನು ಆಪ್ತರಕ್ಷಕವನ್ನು ತಮಿಳು ತೆಲುಗು ಎಲ್ಲಾ ಕಡೆ ನಿರ್ದೇಶನ ಮಾಡಿ ಗೆದ್ದಿದ್ದಾರೆ, ಹಾಗೆಯೇ ಮುರುಗದಾಸ್ ಘಜಿನಿ, ತುಪಾಕಿ ಚಿತ್ರಗಳನ್ನು  ಬಾಲಿವುಡ್ ವರೆಗೂ ತೆಗೆದುಕೊಂಡು ಹೋಗಿ ಗೆಲ್ಲಿಸಿದ್ದಾರೆ. ಆದರೆ ಪುನೀತ್ ವಿಷಯದಲ್ಲಿ ಕನ್ನಡದ ವಿಷಯದಲ್ಲಿ ಪುನರಾವರ್ತನೆಯಾಗದೆ ಇದ್ದದ್ದು ಬೇಸರದ ಸಂಗತಿ. ತಮಿಳಿನಲ್ಲಿ ಯಶಸ್ಸು ಕಂಡ ಪೋರಾಳಿ ಚಿತ್ರವನ್ನು ತಾವೇ ಖುದ್ದು ನಿಂತು ಯಾರೇ ಕೂಗಾಡಲಿ ಎಂದು ಭಾಷಾಂತರಿಸಿದ ಸಮುದ್ರಕನಿ ಆ ಚಿತ್ರದ ಮೂಲಕ ಪ್ರಭಾವ ಬೀರಲೇ ಇಲ್ಲ. ಈಗ ಶರವಣ ಕೂಡ ಎಲ್ಲೋ ಎಡವಿದ್ದಾರೆ. ತಮ್ಮದೇ ಕತೆಯನ್ನು ಅದಕ್ಕಿಂತ ಪ್ರಭಾವಕಾರಿಯಾಗಿ ಪವರ್ಫುಲ್ ಆಗಿ ನಿರೂಪಿಸುತ್ತಾರೆ ಎನ್ನುವ ನಿರೀಕ್ಷೆ ಯನ್ನು ಸುಳ್ಳು ಮಾಡಿದ್ದಾರೆ.
ಇದೆಲ್ಲಾ ಸಿನಿಮಾದ ಫಲಿತಾಂಶ ಬಂದ ಮೇಲೆ ಮಾತಾಡುವುದು ಸುಲಭ ಎನಿಸುವುದಾದರೂ ಒಮ್ಮೆ ಚಿತ್ರದ ಹೊರಗೆ ನಿಂತು ಚಿತ್ರಕರ್ಮಿ ಆ ಚಿತ್ರವನ್ನು ಊಹಿಸಿಕೊಂಡಲ್ಲಿ ಒಂದಷ್ಟು ಬದಲಾವಣೆಯಾಗುವ ಸಾಧ್ಯತೆ ಇದ್ದೇ ಇರುತ್ತದೆ. ಆದರೆ ಸ್ವಲ್ಪ ಆಲೋಚನೆಗಳು ಏಕಮುಖ ಆದಾಗ ಹೀಗಾಗುತ್ತದೆ.

No comments:

Post a Comment