Wednesday, October 19, 2016

ಅಪ್ಪ ಅಂದರೆ ಏನೋ ಹರುಷವು...

ನಮ್ಮ ಮನೆಯಿದ್ದದ್ದು  ಬಸ್ ಸ್ಟಾಪ್  ನಿಂದ  ಒಂದು  ಕಿಲೋಮೀಟರು ದೂರದಲ್ಲಿ. ಅದು ಟೀಚರ್ ಸ್ ಕ್ವಾರ್ಟರ್ಸ್ .  ನನ್ನ ಕಾಲೇಜು  ಐದಕ್ಕೆ  ಮುಗಿದರೂ  ಆರರಿಂದ ಎಂಟರವರೆಗೆ  ನಂಜನಗೂಡಿನ  ಗ್ರಂಥಾಲಯದಲ್ಲಿ  ಪುಸ್ತಕ ಸೋಸುವಿಕೆಯಲ್ಲಿ ತೊಡಗಿಸಿಕೊಂಡು  ಕೊನೆಯ  ಎಂಟೂವರೆ  ಬಸ್ಸಿಗೆ ಹತ್ತಿದರೆ  ಊರಿಗೆ ಬರುವಷ್ಟರಲ್ಲಿ ಒಂಭತ್ತೂವರೆಯಾಗುತ್ತಿತ್ತು. ನಮ್ಮೂರಲ್ಲಿ  ಬಸ್ ಸ್ಟಾಂಡ್ ಒಂದರಲ್ಲಿ ಬಿಟ್ಟರೆ ಬೇರೆಲ್ಲೂ  ಬೀದಿದೀಪ  ಇರಲಿಲ್ಲ.  ಹಾಗಾಗಿ  ಕತ್ತಲೆಯಲ್ಲಿಯೇ  ನಡೆದುಸಾಗಬೇಕು. ನನಗೂ  ಗ್ರಂಥಾಲಯದಲ್ಲಿ  ಕುಳಿತಾಗ, ಪುಸ್ತಕ  ಓದುವಾಗ, ಅಥವಾ ಸಿನಿಮಾ  ನೋಡುವಾಗ ಯಾವುದೇ  ಭಯ ಭಾವ ಕಾಡುತ್ತಿರಲಿಲ್ಲ.  ಆದರೆ  ಬಸ್ಸತಿದಾಕ್ಷಣ ಹೇಗಪ್ಪಾ  ಕತ್ತಲೆಯಲ್ಲಿ  ನಡೆದುಕೊಂಡು  ಸಾಗುವುದು ಎನ್ನುವ ಭಯ  ಕಾಡತೊಡಗುತ್ತಿತ್ತು. ಅದಕ್ಕೆ ಕಾರಣವೂ ಇಟ್ಟು. ನಮ್ಮೂರಲ್ಲಿ  ಆಕಸ್ಮಿಕವಾಗಿ ಸತ್ತವರಲ್ಲಿ ಅನೇಕರು ದೆವ್ವಗಳಾಗದೆ ಇರುತ್ತಿರಲಿಲ್ಲ. ಹಾಗಾಗಿ ಬೇಲಿಯ ಮರೆಯಲ್ಲಿ ಸದ್ದಾದರೂ  ಅದು ನಿಂಗಪ್ಪನದೋ ಜಲಜಕ್ಕನದೋ  ಪ್ರೇತ ಎನ್ನುವ ನಿರ್ಣಯಕ್ಕೆ ಬಂದುಬಿಡಬೇಕಾಗಿತ್ತು. ಅಂತಹ ಸಂದರ್ಭದಲ್ಲಿ ನಾನು ಬಸ್ಸಿಳಿದ ತಕ್ಷಣ ನನ್ನ ಹೆಸರನ್ನು ಕೂಗುತ್ತಿದ್ದರು ನಮ್ಮಪ್ಪ. ನಾನು ಖುಷಿಯಾಗಿಬಿಡುತ್ತಿದ್ದೆ. ಕಾಲೇಜು  ನಾಲ್ಕು  ಘಂಟೆಗೆ ಬಿಡುತ್ತದೆ, ಎಲ್ಲರೂ  ಐದರ ಬಸ್ಸಿಗೆ ಬಂದಿಳಿದರೆ ನೀನ್ಯಾಕೆ ಇಷ್ಟು ಲೇಟು ಎಂದು ನಮ್ಮಪ್ಪ ಒಂದೂ  ದಿನಕ್ಕೂ ಕೇಳುತ್ತಿರಲಿಲ್ಲ. ಬದಲಿಗೆ, ಬಂದ್ಯಾ ಬಾ.. ಎಂದು  ಜೊತೆಯಲ್ಲಿ  ನಡೆಯುತ್ತಿದ್ದರು. ಇಬ್ಬರೂ ನನ್ನ ಕಾಲೇಜಿನದು, ಅವರ ಶಾಲೆಯದು ಅದೂ ಇದೂ  ಮಾತನಾಡುತ್ತಾ ಜೊತೆಯಾಗಿ ಸಾಗುತ್ತಿದ್ದೆವು.  ಆನಂತರ  ನಾನು ಮೈಸೂರಿನ  ಕಾಲೇಜಿಗೆ ಉನ್ನತ ವ್ಯಾಸಂಗಕ್ಕೆ ಸೇರಿಕೊಂಡೆ. ಹಾಸ್ಟೆಲ್ಲಿನಲ್ಲಿ  ಉಳಿದುಕೊಂಡೆ. ವಾರಕ್ಕೆ ಒಮ್ಮೆ ಊರಿಗೆ ಬರುತ್ತಿದೆ. ಯಥಾಪ್ರಕಾರ ನಾನು  ಬರುತ್ತಿದ್ದದ್ದೆ ಕೊನೆಯ  ಬಸ್ಸಿಗೆ. ಆವಾಗಿನ್ನೂ  ಮೊಬೈಲ್  ಬಂದಿರಲಿಲ್ಲವಲ್ಲ. ಆಮೇಲೆ ನಾನೀಗ ಹೆದರಿಕೊಳ್ಳುವಷ್ಟು ಚಿಕ್ಕವನು ಇರಲಿಲ್ಲ. ಆದರೂ  ಕೊನೆಯ  ಬಸ್ಸಿಳಿದಾಕ್ಷಣ ಅತ್ತಿತ್ತ  ನೋಡುತ್ತಿದ್ದಂತೆಯೇ ಅಪ್ಪ ನನ್ನ ಹೆಸರು  ಕೂಗುತ್ತಿದ್ದರು. ಯಥಾಪ್ರಕಾರ  ನಡೆದುಕೊಂಡು ಇಬ್ಬರೂ ನಮ್ಮ ನಮ್ಮ ವಿಷಯಗಳನ್ನು ಮಾತಾಡುತ್ತಾ ನಗುತ್ತಾ ದಾರಿ ಸವೆಸುತ್ತಿದ್ದೆವು. ಆದರೆ ನನಗೆ ಆಶ್ಚರ್ಯವಾಗುತ್ತಿದ್ದದ್ದು ನಾನು ಊರಿಗೆ ಬರುವ ಯಾವುದೇ ಮುನ್ಸೂಚನೆಯನ್ನೂ ಕೊಡುತ್ತಿರಲಿಲ್ಲ.  ಬರುಬರುತ್ತಾ ವಾರಕ್ಕೆ ಬದಲಿಗೆ ಹದಿನೈದು ದಿನಕ್ಕೊಮ್ಮೆ, ಪ್ರತಿ ಶನಿವಾರ ಬದಲಿಗೆ ಸಮಯ ಸಿಕ್ಕಾಗ ಮನಸ್ಸು ಬಂದಾಗ ಊರಿಗೆ ಬರುತ್ತಿದ್ದೆ. ನಾನು ಊರಿಗೆ ಬರುವ ದಿನಗಳು ಬದಲಾದರೂ ಸಮಯದಲ್ಲಿ ಮಾತ್ರ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಹಾಗೆಯೇ ಬಸ್ಸಿಳಿದ ತಕ್ಷಣ ನನ್ನ ಹೆಸರು ಕೂಗುವ ಅಪ್ಪನೂ  ಬದಲಾಗಿರಲಿಲ್ಲ. ಒಂದೂ ಸಲವೂ ಮಿಸ್ಸಾಗದಂತೆ ಬಸ್ ನಿಲ್ದಾಣಕ್ಕೆ ಬಂದು ನಿಲ್ಲುತ್ತಿದ್ದರು ನಮ್ಮಪ್ಪ. ನಾನು ಹಾಸ್ಟೆಲಿನಲ್ಲಿ ಇದ್ದಾಗಲೂ ಅವರು ಪ್ರತಿದಿನ ಬಸ್ ಸ್ಟಾಂಡ್ ಗೆ  ಬಂದು  ನಿಲ್ಲುತ್ತಿದ್ದರು. ಕೊನೆಯ ಬಸ್ಸು ಬಂದು, ನಿಂತು ಜನರನ್ನು ಇಳಿಸಿದಾಗ ನಾನು ಕಾಣಿಸದಿದ್ದಾಗ ಓ..ಈವತ್ತು  ಬಂದಿಲ್ಲ  ಎಂದುಕೊಂಡು ಮನೆಗೆ ಹೊರಡುತ್ತಿದ್ದರು. ಇದನ್ನವರು ಅವರ ಕೊನೆಯ ಉಸಿರಿರುವವರೆಗೂ  ಮಾಡಿದ್ದರು. ಆದರೆ ಈ ಯಾವ ಸೂಕ್ಷ್ಮವೂ ನನಗೆ ಗೊತ್ತಾಗದೆ ನಾನು ಇಷ್ಟ ಬಂದಾಗ ಬರುತ್ತಿದ್ದೆ, ಅವರು ಕಂಡಾಗ ಖುಷಿಯಾಗುತ್ತಿದ್ದೆ. ಆದರೆ ಅವರು ಪ್ರತಿದಿನವೂ ನಾನು ಬಂದರೂ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಕಾಯುತ್ತಿದ್ದರಲ್ಲ.. ಅದಕ್ಕೆ ಏನು ಹೇಳುವುದು..?
ನನಗೆ ಅಪ್ಪ ಯಾವತ್ತಿಗೂ ಮಾದರಿ. ಇಷ್ಟು ವರ್ಷಗಳಲ್ಲಿ ನಾನು ಅಪ್ಪನನ್ನು ಮಿಸ್ ಮಾಡಿಕೊಳ್ಳದ ಕ್ಷಣಗಳಿಲ್ಲ. ಪ್ರತಿದಿನ ಪ್ರತಿಕ್ಷಣ ನನ್ನ ಕಣ್ಮುಂದೆ ಬರುವುದು ನನ್ನಪ್ಪ. ಹಾಗಾಗಿ ಅಪ್ಪನ ಲಾಲಿ  ಚಿತ್ರ ನೋಡಿದಾಗ ನಿಜಕ್ಕೂ ಕನಲಿಹೋಗಿದ್ದೆ. ಆದರೆ ಅದಕ್ಕೂ ಮೀರಿ ಕಣ್ಣೀರಾಗಿದ್ದು ಲೈಫ್ ಈಸ್  ಬ್ಯೂಟಿಫುಲ್ ಸಿನೆಮಾವನ್ನು ನೋಡಿದಾಗ. ಆ ಸಿನೆಮಾವನ್ನು ಅದೆಷ್ಟು ಸಾರಿ ನೋಡಿದನೆಂದರೆ ಲೆಕ್ಕವಿಲ್ಲ.. ನೋಡುತ್ತಾ ನೋಡುತ್ತಾ ಅಪ್ಪ ನೆನಪಿಗೆ ಬರುತ್ತಿದ್ದರು, ತಮ್ಮ ಇತಿಮಿತಿಯಲ್ಲಿಯೇ ನಮಗೆ ಒಂದು ಚೂರು ಕೊರತೆಯಾಗದ ಹಾಗೆ ಬೆಳೆಸಿದರಲ್ಲ..ಅದು ನೆನೆಪಿಸಿಕೊಂಡು  ಕಣ್ಣೀರಾಗಿದ್ದೇನೆ. ಅಂತಹ ಸಂದರ್ಭದಲ್ಲಿ ಕೋರಿಯನ್ ಭಾಷೆಯ ಮಿರಾಕಲ್ ಇನ್ ಸೆಲ್ ನಂಬರ್ ಸೆವೆನ್ ಚಿತ್ರ ನೋಡಿದೆ. ಅದರದೇ ರೀತಿಯ ಸಿನಿಮಾಗಳನ್ನು ಈ ಹಿಂದೆ ನೋಡಿದ್ದೇ. ಅಜಯ ದೇವಗನ್ ಅಭಿನಯದ ಮೈ ಐಸಾ ಹೀ ಹೂ, ಐ  ಅಂ ಸ್ಯಾಮ್, ಟುಗೆದರ್, ದೈವ ತಿರುಮಗನ್  ಹೀಗೆ. ಆದರೆ ಮಿರಾಕಲ್  ಮಾತ್ರ ನನ್ನನ್ನು  ಕಾಡಿಬಿಟ್ಟಿತ್ತು. ಲೈಫೇ ಈಸ್  ಬ್ಯೂಟಿಫುಲ್ ಚಿತ್ರ  ನೋಡಿ, ನನ್ನದೇ ನನ್ನ ತಂದೆಯದೇ ಒಂದಷ್ಟು ಅಂಶಗಳನ್ನು ಸೇರಿಸಿ ಸಿನಿಮಾ ಕತೆ ಮಾಡಿದ್ದವನಿಗೆ ಮಿರಾಕಲ್  ಚಿತ್ರ ಮತ್ತಷ್ಟು ಅಂಶಗಳನ್ನು ದೊರಕಿಸಿಕೊಟ್ಟಿತು. ಅದೇ ಸಂದರ್ಭದಲ್ಲಿ ಗೆಳೆಯನೊಬ್ಬ ಈ ಚಿತ್ರವನ್ನು ಕನ್ನಡೀಕರಿಸಿದರೆ  ಹೇಗೆ ಎನ್ನುವ ಪ್ರಶ್ನೆಯನ್ನು ಎತ್ತಿಬಿಟ್ಟಿದ್ದ. ಕನ್ನಡೀಕರಿಸುವುದು ಸುಲಭದ ಕೆಲಸವಲ್ಲ. ರಿಮೇಕ್ ಮಾಡುವುದು ಸುಲಭ. ಏಕೆಂದರೆ ಅಲ್ಲಿಯ ಪಾತ್ರಗಳನ್ನೂ, ದೃಶ್ಯಗಳನ್ನು ಯಥಾವತ್ತು ಇಳಿಸಿಬಿಟ್ಟರೆ  ಮುಗಿಯಿತು. ಆದರೆ ಅದಕ್ಕೆ ನಮ್ಮದೇ ಸೊಗಡು ತುಂಬುವ ಕೆಲಸವಿದೆಯಲ್ಲ ಅದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ನೋಡಿದ ಸಿನಿಮಾ  ಮರೆತು ಕತೆ ಮಾಡುತ್ತಾ ಸಾಗಬೇಕು. ಅಲ್ಲಿನ ದೃಶ್ಯದ ಹೋಲಿಕೆ ಸಿಕ್ಕಿತು ಎನಿಸಿದರೆ ತಕ್ಷಣ ಬದಲಿಸಬೇಕು. ಹಾಗಾಗಿ ಅನಾಮತ್ತು ಮೂರು ವರ್ಷಗಳು ಅದಕ್ಕಾಗಿ ತೆಗೆದುಕೊಂಡೆ. ಮೂರುವರ್ಷಗಳಲ್ಲಿ  ಪಾತ್ರದ ಹಿನ್ನೆಲೆ ವ್ಯಕ್ತಿತ್ವ ಬದಲಿಸಿದೆ. ಈಗಾಗಲೇ ಮಾನಸಿಕ ಕುಬ್ಜನ  ಪಾತ್ರಗಳನ್ನೂ ವಿಕ್ರಂ ಮುಂತಾದವರು  ಮಾಡಿದ್ದರಿಂದ ಮತ್ತು ಒಬ್ಬ ಆಟಿಸ್ತಿಕ್ ಅಪ್ಪನಿಗಿಂತ ಸಾಮಾನ್ಯ ಅಪ್ಪನ ಬವಣೆಗಳನ್ನು ಲವಲವಿಕೆಯ ಜೊತೆಗೆ ಕತೆ ಹೇಳುವ ನಿರೂಪಣೆ  ಆಯ್ದುಕೊಂಡೆ. ಎಲ್ಲವೂ ಮುಗಿಯಿತು. ನನ್ನ ಅಸಂಖ್ಯಾತ ಕೆಲಸಗಳ ನಡುವೆ ಯಾವುದೇ ನಿರ್ಮಾಪಕರು ಇಲ್ಲದೆ ಇದ್ದಾಗಲೂ ಇಡೀ ಸ್ಕ್ರಿಪ್ಟ್ ಬರೆದು ಮುಗಿಸಲು ಮೂರು  ವರ್ಷಗಳು ತೆಗೆದುಕೊಂಡಿತ್ತು. ಕತೆಯಾಯಿತು.. ಮುಂದೇನು ಎನ್ನುವ ಪ್ರಶ್ನೆ..? ಕತೆ ಹೇಳಬೇಕು, ನಿರ್ಮಾಪಕರಿಗೆ, ಕಲಾವಿದರಿಗೆ...ನನ್ನ ಕತೆಗೆ ಸೂಕ್ತ ಪಾತ್ರಧಾರಿ ಕಮಲ್ ಹಾಸನ್ ಎನಿಸಿತು. ಆದರೆ ಅವರನ್ನು ರೀಚ್ ಮಾಡುವುದು ಕಷ್ಟ ಎನಿಸಿತು, ಅಲ್ಲಿಂದ ಮೋಹನ್ ಲಾಲ್, ಪ್ರಕಾಶ್ ರಾಜ್... ಹೀಗೆ ಕೊನೆಗೆ ಪಾತ್ರಧಾರಿ ಪ್ರಕಾಶ್ ರಾಜ್ ಆದರೆ ಸೂಪರ್ ಎನಿಸಿತು. ಸೀದಾ ಎದ್ದವನೇ ಬಿ.ಸುರೇಶ ಅವರಿಗೆ ಕತೆ ಹೇಳಿದೆ, ಕಂಪ್ಲೀಟ್ ಬೌಂಡ್ ಸ್ಕ್ರಿಪ್ಟ್ ಕೊಟ್ಟೆ. ಅದನ್ನು ಅಷ್ಟೇ ಸಾವಧಾನವಾಗಿ ಸಮಯ ತೆಗೆದುಕೊಂಡು ಓದಿದ ಬಿ.ಸುರೇಶ ಒಂದಷ್ಟು ಬದಲಾವಣೆ ಸೂಚಿಸಿದರು. ಆನಂತರ ಅದೇ ಕತೆಯನ್ನು ಯೋಗರಾಜ್ ಭಟ್ ಅವರ ಮುಂದೆ ಇರಿಸಿದೆ. ಶಿವಣ್ಣ ಅವರಿಗೆ ಮಾಡಿದರೆ ಹೇಗೆ ಎಂದರು. ಅಷ್ಟರಲ್ಲಾಗಲೇ ದಿಕ್ಕು  ಬದಲಾಗಿತ್ತು. ಕೊನೆಗೆ ರಮೇಶ್ ಅರವಿಂದ್ ಅವರಿಗೆ ಕತೆ ಹೇಳೋಣ ಎಂದುಕೊಂಡೆ. ಫೋನ್ ಮಾಡಿದೆ. ಆದರೆ ಫೋನ್ ಸಿಗಲಿಲ್ಲ. ಅವರಿಗೆ ಇಮೇಲ್ ಮೂಲಕ ಸಂಪೂರ್ಣ ಸ್ಕ್ರಿಪ್ಟ್ ಕಳುಹಿಸಿಕೊಟ್ಟೆ. ಆದರೆ ನನಗೆ ಗೊತ್ತಿಲ್ಲದ ವಿಷಯವೇನೆಂದರೆ ಅಷ್ಟರಲ್ಲಾಗಲೇ ಮಿರಾಕಲ್ ಚಿತ್ರದ ರಿಮೇಕ್ ಕನ್ನಡದಲ್ಲಿ ಆಗುತ್ತಿತ್ತು.
ಈಗ ತಿಳಿದುಬಂದ ವಿಷಯವೆಂದರೆ ಮೂಲಚಿತ್ರದ ಅಧಿಕೃತ ರಿಮೇಕ್ ಹಕ್ಕನ್ನು ಮತ್ಯಾರೋ ತಂದಿದ್ದಾರಂತೆ. ಆದರೆ ನಾನು ಸೃಜಿಸಿದ ಕತೆಯಲ್ಲಿ ಮಿರಾಕಲ್  ಚಿತ್ರದ ಕೆಲವು  ಅಂಶವಿತ್ತಾದರೂ ವಿಷಯಗೊತ್ತಾದಾಗ ಆ ಭಾಗವನ್ನು ಪುನರ್ರಚಿಸಿದೆ. ಪ್ರಸ್ತುತ ಪುಟಾಣಿ ಸಫಾರಿ ಚಿತ್ರದ ಪೋಸ್ಟ್ ಪ್ರೊಡಕ್ಷನ್  ನಡೆಯುತ್ತಿದೆ.