Saturday, March 5, 2016

ರೇ...ರೇ.....

ದೇಸಾಯಿ ಕಳೆದುಹೋಗಿ ತುಂಬಾ ದಿನಗಳೇ ಆಗಿವೆ. ಆದರೆ ಅವರನ್ನು ಮತ್ತೆ ಮತ್ತೆ ಹುಡುಕುವ ಪ್ರೇಕ್ಷಕನ ಪ್ರಯತ್ನ ವಿಫಲವಾಗುತ್ತಲೇ ಇದೆ ಎಂಬುದು ರೆ ಚಿತ್ರದ ಒಂದು ಸಾಲಿನ ವಿಮರ್ಶೆ ಎಂದರೆ ತಪ್ಪಾಗಲಾರದು. 
ಅವನಿಗೆ ಮದುವೆ ಆಗಿಲ್ಲ, ಅವನಿಗೆ ಮದುವೆ ಮಾಡಬೇಕು, ಹಾಗಾದರೆ ಇದೊಂದು ಪ್ರೇಮ ಕೌಟುಂಬಿಕ ಮದುವೆ ಇತ್ಯಾದಿ ಸಂಗತಿಗಳ ಸಾಂಸಾರಿಕ ಚಿತ್ರ ಅಂದುಕೊಳ್ಳಬಹುದೇ..? ಮುಂದೆ ಕೇಳಿ..ಅವರೊಂದು ಮನೆಯಲ್ಲಿ ಅನಿವಾರ್ಯವಾಗಿ ಉಳಿಯಲೇ ಬೇಕು. ನಿಜ,, ಅಲ್ಲಿ ಒಂದಲ್ಲ ಎರಡಲ್ಲ ಐದು ಪ್ರೇತಾತ್ಮಗಳಿವೆ, ಅಯ್ಯೋ ಇದು ಹಾರರ್ ಇರಬಹುದಾ..?  ಆ ಪ್ರೆತಾತ್ಮಗಳಿಗೆ ಮುಕ್ತಿ ಸಿಗಬೇಕಾದರೆ ನಾಯಕನ ಮದ್ವೆ ಆಗಬೇಕು.. ಅದಕ್ಕಾಗಿ ಪ್ರೇತಗಳ ತಂತರ್ಗಾರಿಕೆ, ಉಪಾಯ.. ಒಹೋ ಇದು ಹಾರರ್ ಕಾಮಿಡಿ.. ಉಹೂ.. ಚಿತ್ರ ಕ್ಷಣ ಕ್ಷಣಕ್ಕೂ ಬದಲಾಗುತ್ತದೆ. ಪಾತ್ರಗಳು ಬರುತ್ತವೆ, ಮಾತನಾಡುತ್ತವೆ, ನಟಿಸುತ್ತವೆ, ಹೋಗುತ್ತವೆ. ಹಾಡುಗಳು ಬರುತ್ತವೆ. ಅವುಗಳು ಇಂಪಾಗಿದೆಯಾ? ಬೇಡ ಬಿಡಿ.. ಅವುಗಳು ಬರುವ ಸಂದರ್ಭ ಸಿನಿಮಾಕ್ಕೆ ಸೂಕ್ತವೆ..? ಉಹೂ..
ದೇಸಾಯಿ ಚಿತ್ರಗಳೆಂದರೆ ಅದರ ಖದರ್ರೆ ಬೇರೆ ಇರುತ್ತಿತ್ತು. ನಾನು ಹೈ ಸ್ಕೂಲ್ ನಲ್ಲಿದ್ದಾಗ ನಿಷ್ಕರ್ಷ ಬಿಡುಗಡೆಯಾಗಿತ್ತು. ವಿಷ್ಣುವರ್ಧನ್ ಅಷ್ಟೇ ನಮಗೆ ಮುಖ್ಯವಾಗಿದ್ದ ಸಮಯವದು. ವಿಷ್ಣುವರ್ಧನ್, ಸೈನಿಕನ ಡ್ರೆಸ್, ಕೈಯಲ್ಲಿ ಮಷೀನ್ ಗನ್ ಒಂದು ಸಿನಿಮಾ ನೋಡಲು ನಮಗೆ ಬೇರೆ ಯಾವ ಕಾರಣಗಳೂ ಬೇಕಿರಲಿಲ್ಲ. ಫೈಟ್ ಇರುತ್ತವೆ ಎನ್ನುವುದು ಆವತ್ತಿನ ಸಿನೆಮಾ ನೋಡಲು ಮುಖ್ಯವಾದ ಏಕೈಕ ಆಕರ್ಷಣೀಯ ಸಂಗತಿ. ಹಾಗಾಗಿ ಹುಚ್ಚೆದ್ದು ಸಿಎಂಮ ನೋಡಿದ್ದೆವು. ಆದರೆ ನಿಷ್ಕರ್ಷ ಮಾಮೂಲಿ ಫೈಟಿಂಗ್ ಸಿನಿಮಾದಂತಿರಲಿಲ್ಲ. ನಮಗೆ ಬೇಕಾದ ಅಂಶಗಳ ಜೊತೆಗೆ ಅದರದೇ ಆದ ಕಸುವಿತ್ತು ಸಿನಿಮಾದಲ್ಲಿ. ಅದೊಂದು ಅನುಭವವೇ ಬೇರೆಯಾಗಿತ್ತು. ಆಗ ನಮಗೆ ದೇಸಾಯಿ ಪರಿಚಯವಾದದ್ದು. ಆನಂತರ ಅವರ ತರ್ಕ, ಉತ್ಕರ್ಷ ಸಿನಿಮಾಗಳನ್ನು ಹುಡುಕಿಕೊಂಡು ಹೋಗಿ ನೋಡಿ ಖುಷಿ ಪಟ್ಟು ನಿರ್ದೇಶಕ ಎಂದರೆ ದೇಸಾಯಿ ಎನ್ನುವಂತಾಗಿತ್ತು. ಪುಟ್ಟಣ್ಣ ಎಂದರೆ ಒಂದು ಚಿತ್ರ ಮೂಡುತ್ತಿದ್ದ ಪಟ್ಟಿಯಲಿ ಈಗ ದೆಸಾಯಿಯವರ್ದೆ ಬೇರೆಯದೇ ಚಿತ್ರ ನಿಲ್ಲುತ್ತಿದ್ದು. ದೇಸಾಯಿ ಎಂದರೆ ರೋಚಕತೆ ಎನ್ನುವಮಟ್ಟಿಗೆ ದೇಸಾಯಿ ನಮ್ಮನ್ನು ಸೆಳೆದಿದ್ದರು. ಆನಂತರ ನಮ್ಮೂರ ಮಂದಾರ ಹೂವೆ ನೋಡಿ ಒಹೋ ದೇಸಾಯಿ ಹೀಗೂ ಮಾಡುತ್ತಾರೆ, ಹೇಗೆ ಬೇಕಾದರೂ ಮಾಡುತ್ತಾರೆ, ಏನು ಬೇಕಾದರೂ ಮಾಡುತ್ತಾರೆ ಅವರೊಬ್ಬ ಸಿನಿಮಾ ಮಾಂತ್ರಿಕ ಎನ್ನುವ ನಿರ್ಧಾರ ನನ್ನದಾಗಿತ್ತು.
ಆದರೆ ಆನಂತರ ದೇಸಾಯಿ ಕಳೆದುಹೋಗುತ್ತಾ ಬಂದರು. ಅವರನ್ನು ಹುಡುಕುವ ಕೆಲಸಕ್ಕೆ ನಾನು ನಿಂತುಕೊಂಡೆ. ಬಿಡುಗಡೆಯಾಗುವ ಅವರ ಚಿತ್ರದಲ್ಲಿ ಅದಿಲ್ಲದಿದ್ದರೆ, ಇದಿರಬಹುದು, ಇದಿಲ್ಲದಿದ್ದರೆ ಬೇರೇನೋ ಇರಬಹುದು.. ಹೀಗೆ. ಆದರೆ ದೇಸಾಯಿ ದೇಸಾಯಿಯಾಗಿಯೇ ಉಳಿದಿಲ್ಲ ಎಂಬುದು ಬೇಸರದ ಸಂಗತಿ. 
ಅವರ ಪರ್ವ, ಕ್ಷಣ ಕ್ಷಣ ಚಿತ್ರಗಳಲ್ಲಿದ್ದ ಗೊಂದಲ ರೇ ಚಿತ್ರದಲ್ಲಿಯೂ ಇದೆ ಎಂಬುದೇ ಬೇಸರ ತರಿಸುತ್ತದೆ. ಒಬ್ಬ ನಿರ್ದೇಶಕ ಅಪ್ಡೇಟ್ ಆಗದೆ ಇದ್ದರೂ ಪರವಾಗಿಲ್ಲ, ಆದರೆ ತಮ್ಮ ಹಳೆಯ ಖದರ್ ಬಿಟ್ಟುಕೊಡಬಾರದು. ಆದರೆ ದೇಸಾಯಿ ಅಲ್ಲೂ ಇಲ್ಲ, ಮುಂದೆಯೂ ಬಂದಿಲ್ಲ  ಎಂದರೆ ಬೇಸರವಾಗುತ್ತದೆ.
ದೇಸಾಯಿ ಮತ್ತೊಂದು ಸಿನಿಮ ಮಾಡುತ್ತಾರೆ, ಮಾಡಲೇಬೇಕು, ಸಿನಿಮಾ ಅಲ್ಲದೆ ಅವರು ಬೇರೇನೂ ಮಾಡಲು ಸಾಧ್ಯ? ದಶಕಗಳ ಸಿನೆಮಾವನ್ನೇ ಉಸಿರುಮಾಡಿಕೊಂಡ ನಿರ್ದೇಶಕನಿಗೆ ಬೇರೆ ಶಕ್ತಿಗಳಿಗಿಂತ ಸಿನೆಮವೇ ಶಕ್ತಿ. ಆ ದೇಸಾಯಿ ಬಂದ"ರೆ" ಕಾಣಿಸಿಕೊಂಡ"ರೇ:" ಅದಕ್ಕಿಂತ ಖುಷಿಯ ಸಂಗತಿ ನಮ್ಮಂತಹ ಸಿನಿಪ್ರೇಮಿಗಳಿಗೆ ಬೇರೇನಿದೆ.