Saturday, June 21, 2014

ಚಿತ್ರಕತೆ ಬರವಣಿಗೆ:

ಚಿತ್ರಕತೆ ಬರೆಯುವುದು ಹೇಗೆ ಎನ್ನುವ ಪ್ರಶ್ನೆ ನನ್ನನ್ನು ತುಂಬಾ ದಿನಗಳವರೆಗೆ ಕಾಡಿದ ಪ್ರಶ್ನೆ ಎನ್ನಬಹುದು. ಅಂದರೆ ಶೈಲಿ ಹೇಗೆ, ಹೇಗೆ ಪ್ರಾರಂಭಿಸಬೇಕು ಮತ್ತು ಯಾವ ರೀತಿ ಬರೆಯುವುದು ಸರಿಯಾದದ್ದು ಮತ್ತು ಅನುಕೂಲಕರವಾದದ್ದು ಎಂಬುದು ಪ್ರಶ್ನೆ.
ಆದರೆ ಚಿತ್ರರಂಗಕ್ಕೆ ಬಂದ ಮೇಲೆ ನನಗೆ ಅದರ ಸ್ಪಷ್ಟ ರೂಪ ಗೊತ್ತಾಯಿತು ಎನ್ನಬಹುದು.
ಆದರೆ ಮೈಸೂರಿನಲ್ಲಿ ಇದ್ದಾಗಲೇ ಅದರ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದೆ. ಆಗ ಗಾಂಧೀ ಸಿನಿಮಾದ ಚಿತ್ರಕತೆ ಪುಸ್ತಕದ ರೂಪದಲ್ಲಿ ಸಿಕ್ಕಿತ್ತು. ಅದನ್ನು ನನ್ನ ಟೆಕ್ಸ್ಟ್ ಪುಸ್ತಕಕ್ಕಿಂತ ಹೆಚ್ಚಾಗಿ ಹಗಲು ರಾತ್ರಿ ಓದಿದ್ದೆ ಅನ್ನುವುದಕ್ಕಿಂತ ಅದನ್ನು ಗಮನಿಸಿದ್ದೆ. ಅದೇನು ಇಂಟೀರಿಯರ್, ಎಕ್ಷ್ತೇರಿಯರ್, ಕಟ್ ಟು, ಫೇಡ್ ಔಟ್, ಫೇಡ್ ಇನ್ ...ಅದರ ಬಗ್ಗೆ ವಿಸ್ತೃತವಾಗಿ ಅದ್ಯಯನ ಮಾಡಿದ ನಂತರ ಅದರ ರೀತಿಯಲ್ಲೇ ಬರೆಯಲು ಪ್ರಾರಂಭಿಸಿ ನಾನಂದುಕೊಂಡ ಒಂದಿಡೀ ಕತೆ ಚಿತ್ರಕತೆಯನ್ನು ಬರೆದುಬಿಟ್ಟಿದ್ದೆ.
ಆದರೆ ಇಲ್ಲಿ ಬಂದಾಗ ಅದು ಚಿತ್ರೀಕರಣಕ್ಕೆ ಅಷ್ಟು ಉಪಯೋಗವಾಗುವುದಿಲ್ಲ ಎನಿಸಿತು. ಈಗೀಗಂತೂ ಅದರ ಉಪಯೋಗವಿಲ್ಲ ಎನಿಸಿತು. 
ಹಾಳೆಯ ಒಂದು ಮಗ್ಗಲಲ್ಲಿ ಅಂದರೆ ಎಡಭಾಗದಲ್ಲಿ ದೃಶ್ಯದ ಸಂಖ್ಯೆ, ಸ್ಥಳ, ಪಾತ್ರಧಾರಿಗಳು ಮುಂತಾದವುಗಳನ್ನು ಬರೆದು a ಪುಟದ ಅರ್ಧ ಭಾಗದಲ್ಲಿ ಎಡಭಾಗಕ್ಕೆ ಚಿತ್ರಕತೆ ಸಂಭಾಷಣೆ ಬರೆಯುವುದು ಒಳ್ಳೆಯದು. ಯಾಕೆಂದರೆ ಚಿತ್ರೀಕರಣದ ಸಮಯದಲ್ಲಿ ಮುಂದೆ ಸಂಕಲನಕ್ಕೆ ಉಪಯೋಗವಾಗಲೆಂದು ಎಡಿಟಿಂಗ್ ರಿಪೋರ್ಟ್ ಬರೆಯುತ್ತಾರೆ. ಅದರಿಂದ ಅದರ ರೀಡಿಂಗ್ ನಿಂದ ok ಯಾದ, ok ಆಗದ ದೃಶಿಕೆಗಳನ್ನ ವಿಂಗಡಿಸುವುದು ಸುಲಭ ಸಾಧ್ಯ. ಹಾಗೆಯೇ ಚಿತ್ರೀಕರಣದ ಸಮಯದಲ್ಲಿ ಶಾಟ್ ವಿಭಜನೆ, ಸಂಯೋಜನೆ ದಾಖಲೆಗಳನ್ನು ಬರೆದುಕೊಳ್ಳಲು ಸುಲಭ. ಹಾಗಾಗಿ ಒಂದು ಅರ್ಧ ಭಾಗ ಖಾಲಿಯಿದ್ದಾಗ ok ಶಾಟ್, ಅಥವಾ ಏನಾದರೂ ತಿದ್ದುಪಡಿ ಇದ್ದರೇ, ಅಥವಾ ಆಯಾ ಶಾಟ್ ನ ಕ್ಯಾಮೆರಾ ಕ್ಲಿಪ್ ನಂಬರ್ ಮುಂತಾದವುಗಳನ್ನು ನಮೂದಿಸಲು ಉಪಯೋಗವಾಗುತ್ತದೆ ಎನ್ನಬಹುದು.
ಆದರೆ ಹಾಲಿವುಡ್ ಶೈಲಿಯಲ್ಲಿ ಅದಕ್ಕೆ ಆಸ್ಪದವಿಲ್ಲ. ನೋಡಲು ಓದಲು ಅದು ಚೆನ್ನಾಗಿರುತ್ತದೆ. ಪ್ರಾಯೋಗಿಕವಾಗಿ ಇಷ್ಟು ಅನುಕೂಲಕಾರಿಯಲ್ಲ .
ಅಂದ ಹಾಗೆ ರಕ್ಷಿತ್ ಶೆಟ್ಟಿ ತಮ್ಮ ಉಳಿದವರು ಕಂಡಂತೆ ಚಿತ್ರದ ಸ್ಕ್ರಿಪ್ಟ್ ಪ್ರತಿಯನ್ನು ಅಂತರ್ಜಾಲದಲ್ಲಿ ಹಾಕಿದ್ದಾರೆ. ಮತ್ತದು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ್ದಾರೆ. ಒಂದು ಚಿತ್ರ ಭರ್ಜರಿ ಯಶಸ್ಸು ಕಂಡರೆ ಅದರ ಪುಸ್ತಕಗಳು ಬರುವುದು ಸಾಮಾನ್ಯ. ಕನ್ನಡದಲ್ಲಿ ಮಠ, ಎದ್ದೇಳು ಮಂಜುನಾಥ ಚಿತ್ರಗಳು ಬರಹರೂಪದಲ್ಲಿ ಬಂದಿವೆ. ಹಾಗೆ ನೋಡಿದರೆ ಉಕ ಅದ್ಭುತ ಯಶಸ್ವೀ ಚಿತ್ರವಲ್ಲ. ಹಾಗಂತ ತೆಗೆದು ಹಾಕುವ ಚಿತ್ರವೂ ಅಲ್ಲ. ಅದೊಂತರ ಚಿತ್ರ. ನಾನು ಸಿನಿಮಾ ನೋಡುತ್ತಾ ನೋಡುತ್ತಾ ಬೋರ್ ಆಯಿತು ಎನಿಸಿದೆ. ನೋಡಿದ ಮೇಲೆ ಇದೇನು ಕುತೂಹಲವೇ ಇಲ್ಲವಲ್ಲ ಎನಿಸಿದೆ. ಆದರೆ ಅಷ್ಟರ ನಡುವೆಯೂ ನೋಡಿಸಿಕೊಂಡಿದೆ. 
ಒಂದು ಚಿತ್ರದಲ್ಲಿ ಭರವಸೆ, ಅತಿ ಭರವಸೆ ನಿರೀಕ್ಷೆ ಗಳು ಸಿನಿಮಾವನ್ನು ಸಾಮಾನ್ಯವಾಗಿ ನೋಡಲು ಬಿಡುವುದಿಲ್ಲ ಎನ್ನುವುದಕ್ಕೆ ಉಕ ಉತ್ತಮ ಉದಾಹರಣೆ ಎನ್ನಬಹುದು, ಅದರ ಪ್ರಚಾರ, ಪ್ರೊಮೊ, ರಕ್ಷಿತ್ ಶೆಟ್ಟಿ ಇವುಗಳನ್ನು ಸಿನಿಮಾದ ಮೇಲೆ ಅದೆಂತಹ ಪರಿಣಾಮ ಬೀರಿದ್ದವು ಎಂದರೆ ಚಿತ್ರ ನೋಡಿದವರು ಇಲ್ಲಾ ಹೊಗಳಬೇಕು, ಇಲ್ಲಾ ತೆಗಳಬೇಕು ಎನ್ನುವ ನಿರ್ಧಾರಕ್ಕೆ ಬಂದು ಬಿಟ್ಟರು. ಹಾಗಾಗಿ ಮುಖಪುಸ್ತಕದಲ್ಲಿ ಅಲ್ಲಲ್ಲಿ ಅದರ ಚರ್ಚೆಗಳು ಬೈಗುಳ ಹೊಗಳಿಕೆಗಳು ಎಗ್ಗಿಲ್ಲದೆ ನಡೆದವು ಎನ್ನಬಹುದು. ಹೇಗೆ ವಸ್ತು ಮಾನ್ಯಕ್ಕಿಂತ ಹೆಚ್ಚು ಹೊಗಳಿದರೆ ತಡೆದುಕೊಳ್ಳಲಾಗುವುದಿಲ್ಲವೋ ಹಾಗೆಯೇ ವಿನಾಕಾರಣ ತೆಗಳಿದರೆ ತಡೆದುಕೊಳ್ಳಲಾಗುವುದಿಲ್ಲ. ಸಿನಿಮಾ ಅಂದ್ರೆ. ಸಿನಿಮಾ ಅಷ್ಟೇ.ಏನೇ ಪ್ಯಾಶನ್, ಅದೂ ಇದೂ ಎಂದರೂ ಕತ್ತಲೆಯಲ್ಲಿ ಎರಡೂವರೆ ಗಂಟೆಯ ಜಗತ್ತಿನ ಅನುಭವವೇ ಅಂತಿಮ. ಹಾಗಾಗಿ ಒಂದು ಚಿತ್ರವನ್ನು ಹೊಗಳುವುದಕ್ಕಿಂತ ಅಥವಾ ಪೋಸ್ಟ್ ಮಾರ್ಟಂ ಮಾಡುವುದಕ್ಕಿಂತ ಸುಮ್ಮನೆ ನೋಡಬೇಕು ಅಲ್ಲವೇ?
ಉಕ ಚಿತ್ರಕತೆಯ ಬರಹದ ಪ್ರತಿಯನ್ನು ರಕ್ಷಿತ್ ಅಂತರ್ಜಾಲದಲ್ಲಿ ಬಿಟ್ಟಿದ್ದಾರೆ. ನಿಜಕ್ಕೂ ಅದು ಸಂತೋಷದ ವಿಷಯ. ಸಿನಿಮಾ ನೋಡಿ ಅರ್ಥವಾಗಲಿಲ್ಲ ಎಂದು ಕೊಳ್ಳುವವರು ಅದನ್ನೊಮ್ಮೆ ಓದಿ ಅರ್ಥ ಮಾಡಿಕೊಳ್ಳಬಹುದು ಎಂಬುದಕ್ಕಿಂತ ಸಿನಿಮಾಕ್ಕೆ ಬರಲು ಅಪೇಕ್ಷೆ ಇರುವವರಿಗೆ ಚಿತ್ರಕತೆ ಬರೆಯುವ ಶೈಲಿಯ ಬಗ್ಗೆ ತಿಳಿದುಕೊಳ್ಳಬಯಸುವವರಿಗೆ ಅದು ಅತ್ಯವಶ್ಯ. ಆದರೆ ಅದರ ಶೈಲಿ ಹಾಲಿವುಡ್ ಚಿತ್ರಗಳ ಬರಹದ ಪ್ರತಿಯ ಹಾಗಿರುವುದು ಮತ್ತು ಪ್ರಾಯೋಗಿಕವಾಗಿ ಅದರ ಉಪಯೋಗ ನಾನು ಕಂಡ ಮಟ್ಟಿಗೆ ಇಲ್ಲದಿರುವುದು ಬೇಸರದ ಸಂಗತಿ. ಜಗತ್ತಿನ ಚಿತ್ರಕರ್ಮಿಗಳ ಕಾರ್ಯರೂಪವನ್ನು ಅನುಸರಿಸುವುದು ಅವಶ್ಯ. ಅದು ನಮ್ಮಲ್ಲಿನ ಕೆಲಸಕ್ಕೆ ಎಷ್ಟು ಅನುಕೂಲ ಎನ್ನುವುದನ್ನು ಮನಗಂಡಾಗ ಆ ಕೆಲಸಕ್ಕೂ ಒಂದು ಸಾರ್ಥಕತೆ ಬರುತ್ತದೆ.ಹಾಗಾಗಿ ರಕ್ಷಿತ್ ಕೆಲಸವನ್ನು ಮೆಚ್ಚಿಕೊಳ್ಳುತ್ತಲೇ ಸ್ವಲ್ಪ ಅಸಮಾಧಾನ ವ್ಯಕ್ತಪಡಿಸಬೇಕಾಗುತ್ತದೆ.
ಅದರ ಜೊತೆಗೆ ಚಿತ್ರದಲ್ಲಿ ಬಳಸಿರುವ ಹೊಸ ತಂತ್ರಜ್ಞಾನಗಳ ಬಗ್ಗೆ ಸ್ವಾನುಭವವನ್ನು ಅದರ ಪ್ರಾಯೋಗಿಕವಾಗಿ ಆದ ಲಾಭ ನಷ್ಟಗಳನ್ನು ಹಂಚಿಕೊಂಡರೆ ಚಿತ್ರಕರ್ಮಿಗಳಿಗೆ ಇನ್ನೂ ಲಾಭದಾಯಕವಾಗುತ್ತದೆ ಎನಿಸುತ್ತದೆ.
ಅವರು ಬಿಡುವಿದ್ದಾಗ ಅದನ್ನು ಮಾಡಲಿ ಎಂಬುದು ನನ್ನ ಆಶಯ..

Monday, June 16, 2014

ಕೌಂಟರ್ ವೀರರು:


ಇಲ್ಲಿ ಕೌಂಟರ್ ವೀರರು ಎಂದರೆ ನಾನಾ ಅರ್ಥ ಬರಬಹುದು. ಬಾರ್ ನಲ್ಲಿ ಒಳ ಹೋಗಿ ಮಟ್ಟಸವಾದ ಟೇಬಲ್ ಹಿಡಿದು ಕುಳಿತುಕೊಂಡು ನಿಧಾನಕ್ಕೆ ಗುಟುಕರಿಸುವ ಮದ್ಯಪಾನಿಯ ಹೊರತಾಗಿ ಆತುರಾತುರವಾಗಿ ಬಾರ್ ಕೌಂಟರ್ ನಲ್ಲಿಯೇ ಒಂದೆರೆಡು ಕಾಳು ಉಪ್ಪಿನಕಾಯಿ ಕೊಯ್ಲಿ ಹಿಡಿದು ಲಬಕ್ಕನೆ ಇಡೀ ಲೋಟದ ಪಾನೀಯವನ್ನು ಗಂಟಲಿಗೆ ಸುರಿದುಕೊಂಡು  ಆ ಕ್ಷಣದಲ್ಲೇ ಉಪ್ಪಿನಕಾಯಿ ನೆಕ್ಕಿ ಏನೋ ಕೆಲಸವಾಯಿತಪ್ಪ ಎನ್ನುವಂತೆ ಮುಖಭಾವ ವ್ಯಕ್ತ ಪಡಿಸುವವರನ್ನೂ ಕೂಡ ಕೌಂಟರ್ ವೀರರು ಎನ್ನಬಹುದು. ಆದರೆ ನಾವಿಲ್ಲಿ ಮಾತನಾಡುತ್ತಿರುವುದು ಆ ಕೌಂಟರ್ ವೀರರ ಬಗ್ಗೆಯಲ್ಲ.
ನಮ್ಮ  ಸಿನಿಮಾದಲ್ಲಿ ಡೈಲಾಗ್ ಕೌಂಟರ್ ಡೈಲಾಗ್ ಎಂಬ ಪದಗಳನ್ನು ಬಳಸುತ್ತೇವೆ. ಡೈಲಾಗ್ ಗೆ ಪ್ರತಿಯಾಗಿ ಎದುರುತ್ತರ ಎನ್ನಬಹುದು. ಈ ಎದುರುಮಾತುಗಳು ಅಲ್ಲಲ್ಲಿ ಬಂದಾಗ ಜನರಲ್ಲಿ ನಗೆ ಉಕ್ಕಿಸಬಹುದು, ಅಥವಾ ರೋಮಾಂಚನ ಉಂಟು ಮಾಡಬಹುದು. ಹಾಗಾಗಿ ಪಂಚಿಂಗ್ ಡೈಲಾಗ್ ಎಂದೆ ಕರೆಯಲ್ಪಡುವ ಈ ಮಾತುಗಳೇ ಕೆಲಚಿತ್ರಗಳ ಬಂಡವಾಳ ಎನ್ನಬಹುದು. ಅದರಲ್ಲೂ ಹಾಸ್ಯ ಚಿತ್ರಗಳಿಗೆ ಈ ಪಂಚಿಂಗ್ ಡೈಲಾಗ್ ಗಳು ಬೇಕೇ ಬೇಕು.
ಆದರೆ ಇವೆಲ್ಲಾ ಸಿನಿಮ ಒಳಗಿನ ಕತೆಯಾಯಿತು. ನೀವು ಚಿತ್ರಮಂದಿರದೊಳಗೆ ಹೋದಾಗ ಅಲ್ಲೂ ಪಂಚಿಂಗ್ ಡೈಲಾಗ್ ಹೇಳುವವರನ್ನು ಕಾಣಬಹುದು. ಅವರೇ ಪ್ರೇಕ್ಷಕರು. ಸುಖಾ ಸುಮ್ಮನೆ ಎಲ್ಲಾ ಸಿನಿಮಾಗಳಿಗೂ ಇವರೇನು ಪಂಚಿಂಗ್ ಡೈಲಾಗ್ ಹರಿ ಬಿಡುವುದಿಲ್ಲ. ಚಿತ್ರ ಬೋರಾದಾಗ, ಆಕಳಿಕೆ ಹೆಚ್ಚಾದಾಗ ತೆರೆಯ ಮೇಲಿನ ಪಾತ್ರಧಾರಿಗಳ ಮಾತಿಗೆ ಸರಿಯಾದ ಎದುರುತ್ತರವನ್ನು ಹೊರಗೆ ಕುಳಿತೆ ನೀಡುವವರು. ಅವರ ಮಾತುಗಳು ಕೆಲವೊಮ್ಮೆ ಸಿನಿಮಾದ ಬೋರ್ ಕಳೆಯುತ್ತದೆ ಎಂದರೆ ಅದನ್ನು ಅತಿಶಯೋಕ್ತಿ ಎನ್ನುವ ಹಾಗಿಲ್ಲ. ಮಲ್ಟಿಫ್ಲೆಕ್ಸ್ ನಲ್ಲಿ ಇವರು ಕಡಿಮೆ ಎನ್ನಬಹುದು. ಯಾಕೆಂದರೆ ಅಲ್ಲಿ ಬರುವವರೆಲ್ಲಾ ಡೀಸೆಂಟ್ ಆಗಿರಬೇಕು ಎಂದುಕೊಂಡು ಮೊದಲೇ ನಿರ್ಧಾರ ಮಾಡಿಬಿಟ್ಟಿರುತ್ತಾರೆ. ಆದರೆ ನಮ್ಮವರು ಆಗಲ್ಲ. ಯಾವ ಹಿಂಜರಿಕೆಯೂ ಇಲ್ಲದೆ ತಮ್ಮ ಅನಿಸಿಕೆ ಅಭಿಪ್ರಾಯ ಕೆಲವೊಮ್ಮೆ ಸಿನಿಮಾದ ಒಂದು ಸಾಲಿನ ವಿಮರ್ಶೆಯನ್ನು ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ವ್ಯಕ್ತಪಡಿಸುತ್ತಿರುತ್ತಾರೆ.
ಮೊನ್ನೆ ಗಜಕೇಸರಿ ಚಿತ್ರಕ್ಕೆ ಹೋಗಿದ್ದೆ. ನಾನು ಸಾಮಾನ್ಯವಾಗಿ ದ್ವಿತೀಯ ತರಗತಿಗೆ ಹೋಗುತ್ತೇನೆ. ಅಲ್ಲಾದರೆ ಪ್ರೇಕ್ಷಕರು ಜಾಸ್ತಿಯೂ ಇರುತ್ತಾರೆ. ಸ್ವಲ್ಪ ಹಣ ಉಳಿದು ಮಧ್ಯಂತರದ ಖರ್ಚಿಗೂ ಆಗುತ್ತದೆ ಎನ್ನುವುದು ನನ್ನ ಹುನ್ನಾರ. ನನ್ನ ಪಕ್ಕದಲ್ಲಿ ಅಭಿಮಾನಿಯೊಬ್ಬ ಕುಳಿತುಬಿಟ್ಟಿದ್ದ. ಅವನಾಗಲೇ ಭಜರಂಗಿ ಚಿತ್ರವನ್ನು ನೋಡಿ ಬಿಟ್ಟಿದ್ದ ಅಲ್ಲದೆ ಗಜಕೇಸರಿ ಚಿತ್ರದ ಕತೆ ಸ್ವಲ್ಪ ಭಜರಂಗಿ ಚಿತ್ರದ್ದನ್ನೇ ಹೋಲುತ್ತದಲ್ಲಾ ಅವನಿಗೆ ಸ್ವಲ್ಪ ಬೋರಾಗಲು ತೊಡಗಿತು. ಶುರುವಾಯಿತು ನೋಡಿ ಅವನ ಆರ್ಭಟ.
ಹಿಂದುಗಡೆ ಸಾಲಿನಲ್ಲಿ ಕುಳಿತ ಯಾರಿಗೂ ಫೋನ್ ಬಂದು ಆತ ರಿಸೀವ್ ಮಾಡಿ ಗುರು ನಾನು ಸಿನಿಮಾ ನೋಡ್ತಿದ್ದೀನಿ.. ಎಂದ. ಆ ಕಡೆಯವನು ಯಾವ ಸಿನಿಮಾ ಎಂದು ಕೇಳೆ ಕೇಳುತ್ತಾನೆ ಎಂಬುದನ್ನು  ಊಹಿಸಿದ ನಮ್ಮ ಕೌಂಟರ್ ವೀರ ಗುರು ಭಜರಂಗಿ-2 ನೋಡ್ತಿದ್ದೀನಿ ಅಂತ ಹೇಳು ಎಂದು ಜೋರಾಗಿ ಕಿರುಚಿದ. ಚಿತ್ರಮಂದಿರ ಒಮ್ಮೆ ಗೊಳ್ ಎಂದು ನಕ್ಕಿತ್ತು.
ಯಶ್ ನ ಬಾಹುಬಲಿ ಪಾತ್ರಕ್ಕೆ ಖಳನಾಯಕ ವಿಷ ಕುಡಿಸಿದಾಗ ಸಾಯಲು ಹತ್ತೇ ನಿಮಿಷ ಇದೆ ಎಂದಾಗ ಹೊಡೆದಾಡುವ ಮುನ್ನ ಬಾಹುಬಲಿ ವೀರಾವೇಶದ ಒಂದಷ್ಟು ಮಾತುಗಳನ್ನು ಆಡುತ್ತಾನೆ. ಅದರಲ್ಲಿ ಕನ್ನಡದ ವೀರರ ಘನತೆ, ಇತಿಹಾಸ ಮುಂತಾದವೆಲ್ಲಾ ತುಂಬಿರುತ್ತದೆ. ಆದರೆ ನಮ್ಮ ಕೌಂಟರ್ ವೀರ ಅದಾವುದನ್ನೂ ಗಮನಿಸಲಿಲ್ಲ.
ಗುರು.. ಇರದೇ ಹತ್ತು ನಿಮಿಷ ...ಟೈಮ್ ವೇಸ್ಟ್ ಮಾಡಬೇಡ...ಹೊಡೆದಾಕು.. ಆಮೇಲೆ ಟೈಮ್ ಇದ್ರೆ ಮಾತಾಡೋವಂತೆ...
ಎಂಬ ಕೌಂಟರ್ ಕೊಟ್ಟ. ಯಶ್ ಬಿಟ್ಟು ಎಲ್ಲರೂ ನಕ್ಕರು.
ಫ್ಲಾಶ್ ಬ್ಯಾಕ್ ಮುಗಿದು ಆನೆ ಮುಂದೆ ನಿಂತ ನಾಯಕ ಹೇಳುತ್ತಾನೆ ಈ ಕತೆಯಲ್ಲಾ ನಾನು ನಂಬಬೇಕಾ...ಎಂದೆಲ್ಲಾ ಮಾತಾಡುವಾಗ ನಾಯಕಿ ಅಮೂಲ್ಯ ಬಂದು ಒಂದಷ್ಟು ಮಾತಾಡಿ ಕನ್ವಿನ್ಸ್ ಮಾಡುತ್ತಾಳೆ. ಆದರೆ ನಮ್ಮ ಕೌಂಟರ್ ವೀರ ಅಷ್ಟು ಕಾಯದೆ.
ನೀನು ನಂಬಬೇಕು ಗುರು.. ಇದಕ್ಕೂ ಮುನ್ನ ಭಜರಂಗಿ ನೋಡ್ ಬಂದಿದ್ರೆ ನಿಂಗೆ ಎಲ್ಲಾ ಗೊತ್ತಾಗಿರೋದು ಎಂದ.
ಆಮೇಲೆ ಅದೆಷ್ಟೋ ಕೌಂಟರ್ ಗಳು ಬಂದವೆಂದರೆ ಸಿನಿಮಾ ಮುಗಿಯೋವರೆಗೂ ನಗುವುದೇ ಆಗಿತ್ತು.
ಇಂತಹ ಕೌಂಟರ್ ವೀರರನ್ನು ನಾನು ಪ್ರತಿ ಚಿತ್ರಮಂದಿರದಲ್ಲೂ ಗಮನಿಸುತ್ತೇನೆ. ಅದರಲ್ಲೂ ಸಿನಿಮಾ ಚೆನ್ನಾಗಿಲ್ಲದಿದ್ದರಂತೂ ಅದರ ಮಜಾವೇ ಬೇರೆ. ಕೆಲವು ಅಂತಹ ಕೌಂಟರ್ ಗಳಿವೆ.
ಚಪ್ಪಾಳೆ ಚಿತ್ರದ ಕೊನೆಯ ದೃಶ್ಯದಲ್ಲಿ ಖಳರು ನಾಯಕನನ್ನು ಹೊಡೆದು ಬೀಳಿಸುತ್ತಾರೆ. ಆಗ ಆತನ ಸ್ನೇಹಿತರು ಎಲ್ಲಾ ಬಂದು ಅಲ್ಲೇ ಒಂದು ಬ್ಯಾಂಡ್ ಸೆಟ್, ಡ್ರಮ್ ಸೆಟ್ ರೆಡಿ ಮಾಡಿ ಭಾರಿಸುತ್ತಾರೆ. ಆಗ ನಾಯಕ ಎಚ್ಚರಗೊಳ್ಳುತ್ತಾನೆ.
ಗುರು..ಬರೀ ಆ ಡ್ರಮ್ ಭಾರಿಸೋವಷ್ಟೇ ಏಟು ಕೇಡಿಗಳಿಗೆ ಭಾರಿಸಿದ್ರೆ ಅವನು ಆರಾಮವಾಗಿ ಮಲಗಿರ್ತಿದ್ದ.. ಏಳೋದೇ  ಬೇಕಿರಲಿಲ್ಲವಲ್ಲಪ್ಪ..
***

ನಾಯಕ: ನೀನು ಹೀಗೆ ಮಾಡ್ತೀಯ ಅಂತ ನನಗೆ ಗೊತ್ತಿರಲಿಲ್ಲ...ಎಂತ ಕೆಲಸ ಮಾಡ್ಬಿಟ್ಟೆ..
ಕೌಂಟರ್ ವೀರ: ನಮಗೂ ನೀನು ಇಷ್ಟು ಬೋರ್ ಮಾಡ್ತೀಯ ಅಂತ ಗೊತ್ತಿರಲಿಲ್ಲ. ಎಂತ ಕೆಲಸ ಮಾಡ್ಬಿಟ್ಟೆ..
***
ನಾಯಕಿ: ನೀನು ನನ್ನ ಸರ್ವಸ್ವ ಕಣೋ...ನಿನಗೆ ಏನು ಬೇಕೋ ಕೇಳು ..
ಕೌಂಟರ್ ವೀರ: ಆಮೇಲೆ ಅವನಿಗೆ ಏನು ಬೇಕೋ ಕೊಡುವಿಯಂತೆ ತಾಯಿ..ನಮಗೆ ನಮ್ಮ ಟಿಕೆಟ್ ದುಡ್ಡು ಕೊಟ್ಬಿಡವ್ವಾ..
****
ನಾಯಕ: ನನಗೆ ಎಷ್ಟು ಕೋಪ ಬರ್ತಿದೆ ಅಂದ್ರೆ... ಆದ್ರೆ ಏನ್ಮಾಡ್ಲಿ..
ಕೌಂಟರ್ ವೀರ: ಏನ್ ಮಾಡ್ತೀಯ ಗುರು ..ನಮಗೂ ಬರ್ತಿದೆ... ಪರದೆ ಹರಿದು ಹಾಕಬೇಕಷ್ಟೇ..


ಹೀಗೆ ಎಷ್ಟೋ ಕೌಂಟರ್ ವೀರರ ಕೌಂಟರ್ ಗಳು ಸಿನಿಮಾದ ಹೊರಗೆ ಮಜಾ ಕೊಡುತ್ತವೆ. ನಿಮಗೂ ಇಂತಹ ಕೌಂಟರ್ ವೀರರ ಭೇಟಿಯಾಗಿದ್ದರೆ, ಅವರ ಮಾತುಗಳನ್ನು ಹರಿಬಿಟ್ಟರೆ ನಾವು ಖುಷಿ ಪಡಬಹುದು.