Sunday, October 12, 2014

ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್.

ಆಕೆಯ ಕೈ ಮೀರಿ ಹೋಗಿತ್ತು. ಮಗಳು ಪಕ್ಕದಲ್ಲಿ ನಡುಗುತ್ತಾ ಕುಳಿತಿದ್ದಳು. ಏನು ಮಾಡುವುದು ಎಂದು ಇಬ್ಬರಿಗೂ ತೋಚದಂತಾಗಿತ್ತು. ಸುಮ್ಮನೆ ಮಾತನಾಡುತ್ತೇನೆ ಎಂದು ಬಂದವನು ತನ್ನ ಮಾಜಿ ಗಂಡ. ಐದು ವರ್ಷಗಳ ಹಿಂದೆಯೇ ವಿಚ್ಛೇದನ ಪಡೆದಾಗಿದೆ. ಅವನೀಗ್ ಎಲ್ಲಿದದ, ಏನು ಮಾಡುತ್ತಿದ್ದ ಎಂಬುದು ಮರೆತೇಹೋಗಿತ್ತೇನೋ? ಆದರೆ ನಿನ್ನೆ ಇದ್ದಕ್ಕಿದ್ದ ಹಾಗೆ ಪ್ರತ್ಯಕ್ಷವಾದವನು ತನ್ನ ಹುಳುಕು ಹಲ್ಲು ತೋರಿಸುತ್ತಾ ಹಲ್ಲು ಗಿಂಜಿದ್ದ. ನಿನ್ನ ಜೊತೆ ಮಾತನಾಡಬೇಕಿತ್ತು, ಸಿಕ್ತೀಯ ಎಂದವನನ್ನು ಮರು ಮಾತಾಡದೆ ಭೇಟಿ ಮಾಡಿದ್ದಳು. ಅಲ್ಲೇ ಮಾತು ಮುಗಿದು ಹೋಗಿತ್ತು. ಆದರೆ ಮನೆಗೆ ಬಂದು ಸ್ವಲ್ಪ ವಿರಾಮ ತೆಗೆದುಕೊಳ್ಳೋಣ ಎನ್ನುವಷ್ಟರಲ್ಲಿ ಅವನು ಮನೆಗೆ ಬಂದು ಬಿಟ್ಟಿದ್ದ. ಈಕೆಯೇನು ವಿಳಾಸ ಹೇಳಿರಲಿಲ್ಲ. ಅವನೇ ಬಂದಿದ್ದ ಇವಳನ್ನು ಹಿಂಬಾಲಿಸಿಕೊಂಡು. ಸುಮ್ಮನೆ ಅಕ್ಕ ಪಕ್ಕದವರಿಗೆ ಗೊತ್ತಾದರೆ ಸಮಸ್ಯೆ ಎಂದು ಒಳಬಿಟ್ಟುಕೊಂಡು ಖಡಕ್ಕಾಗಿ ಮಾತನಾಡಿ ಹೋಗುವಂತೆ ಹೇಳಿದ್ದಳು. ಒಂದಷ್ಟು ಉಳಿಸಿದ್ದ ಹಣವನ್ನು ಕೊಟ್ಟು ಇನ್ಯಾವತ್ತೂ ನಮ್ಮನ್ನು ನೋಡುವುದಕ್ಕೆ ಬರಬೇಡ ಎಂದು ಖಡಾಖಂಡಿತವಾಗಿ ನುಡಿದಿದ್ದಳು. ಅವನು ತಲೆಯಲ್ಲಾಡಿಸಿ ನಕ್ಕಿದ್ದ. ಅದರಲ್ಲಿ ಎಳ್ಳಷ್ಟೂ ನಂಬುವ ಭರವಸೆ ಇರಲಿಲ್ಲ. ಅದೆಲ್ಲಾ ಸರಿ ಇನ್ನೇನು ಹೋಗುವಷ್ಟರಲ್ಲಿ ಎಂತಹ ಅನಾಹುತ ಆಗಿಹೋಯಿತು. ಅವನನ್ನು ಕೊಲ್ಲಲೇ ಬೇಕಾಯಿತು. ಆತನ ಕತ್ತಿಗೆ ವೈರಿನಿಂದ ಬಿಗಿದರೆ ಮಗಳು ಸಹಾಯ ಮಾಡಿದ್ದಳು. ಇದೆಲ್ಲ ಅದೆಷ್ಟು ಬೇಗ ನಡೆದುಹೋಯಿತೆಂದರೆ ನಿಮಿಷಗಳ ಅಂತರದಲ್ಲಿ ಅವನು ಹೆಣವಾಗಿದ್ದ. ಇಬ್ಬರೂ ಕೊಲೆಗಾರರಾಗಿದ್ದರು.
ಅಷ್ಟರಲ್ಲಿ ಬಾಗಿಲು ಬಡಿದ ಶಬ್ದವಾಗಿ ಬಾಗಿಲು ತೆರೆದಾಗ ಎದುರಿಗೆ ಕಂಡದ್ದು ಪಕ್ಕದಲ್ಲಿ ವಾಸವಾಗಿದ್ದ ಗಣಿತ ಶಿಕ್ಷಕ. ಒಂದೇ ಮಾತಿಗೆ ಆತ ಹೇಳಿದ್ದಿಷ್ಟೇ. ಮುಂದೇನು ಮಾಡುತ್ತೀರಿ.. ಆಕೆ ನಡುಗಿ ಹೋದಳು. ಸೀದಾ ಹೋಗಿ ಪೋಲಿಸ್ ಗೆ ಶರಣಾಗತಿ ಆಗುವುದೇ ಸರಿ ಎಂದಳು. ಆತ ಸುಮ್ಮನೆ ಸ್ವಲ್ಪ ಹೊತ್ತು ಇದ್ದವನು ನೀವೇನು ಹೆದರಬೇಡಿ, ನಾನು ಹೇಳಿದಂತೆ ಮಾಡಿ, ಮುಂದಿನದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದ.
ಮಾರನೆಯ ದಿನ ಪಕ್ಕದ ಕೆರೆಯ ಪಕ್ಕ ಅನಾಥ ಶವವೊಂದು ಸಿಕ್ಕಿತ್ತು. ಆತನ ಬಟ್ಟೆ ಕಳಚಿ ವಿವಸ್ತ್ರಗೊಳಿಸಲಾಗಿತ್ತು. ಆತನ ಮುಖದ ಗುರುತು ಸಿಗದಂತೆ ಜಜ್ಜಿ ಹಾಕಲಾಗಿತ್ತು. ಕೈ ಬೆರಳುಗಳನ್ನು ಸುಟ್ಟುಹಾಕಲಾಗಿತ್ತು. ಆತನ ದವಡೆ ಹಲ್ಲುಗಳೂ ಗೊತ್ತಾಗದಂತೆ  ಜಜ್ಜಿ ಹಾಕಲಾಗಿತ್ತು. ಅಂದರೆ ಯಾವೊಂದು ಗುರುತೂ ಸಿಗದಂತೆ ಮುನ್ಸೂಚನೆ ತೆಗೆದುಕೊಂಡಿದ್ದರೂ ಕೆಲವೊಂದು ಕುರುಹನ್ನು ಉಳಿಸಲಾಗಿತ್ತು.
ಅದು ನಿಜಕ್ಕೂ ತಂತ್ರವಾ..?
ಇದು ಕೀಗೋ ಹಿಗಾಶಿನೋ ಬರೆದ ಕಾದಂಬರಿ ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಷ್ ಕಾದಂಬರಿ ಪ್ರಾರಂಭವಾಗುವ ರೀತಿ. ಸರಿ ಸುಮಾರು ನೂರೆಪ್ಪತ್ತು ಪುಟಗಳ ಈ ಕಾದಂಬರಿ ಓದುತ್ತಾ ಓದುತ್ತ ತನ್ನ
ತೆಕ್ಕೆಗೆ ಸೆಳೆದುಕೊಂಡು ಬಿಡುತ್ತದೆ. ಮೂಲ ಜಪಾನಿ ಕಾದಂಬರಿಯನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿದವರು ಅಲೆಕ್ಸಾಂಡರ್ ಓ.ಸ್ಮಿತ್ ಮತ್ತು ಎಲ್ಯೇ ಜೆ.ಅಲೆಕ್ಸಾಂಡರ್.

ಇದು ಈಗಾಗಲೇ ಈ ಕಾದಂಬರಿ 2008 ಮತ್ತು 2012 ರಲ್ಲಿ ಚಿತ್ರ ರೂಪಕ್ಕೆ ತಾಳಿ ಯಶಸ್ವಿಯಾಗಿದೆ.ಇದರ ಬಗ್ಗೆ ಹೇಳಬೇಕೆಂದರೆ ಇದೀಗ ಭಾರತದಲ್ಲಿಯೂ ಕೂಡ ಅಧಿಕೃತವಾಗಿ ಸಿನಿಮಾ ರೂಪು ತಾಳಲಿದೆ. ಆದರೆ ಈಗಾಗಲೇ ಈ ಚಿತ್ರದ ಜೀವಾಳವನ್ನು ಮಲಯಾಳಂ ಚಿತ್ರದವರೂ ಎರವಲು ಪಡೆದುಬಿಟ್ಟಿದ್ದಾರೆ. ಮೋಹನ್ ಲಾಲ್ ಅಭಿನಯದ ದೃಶ್ಯಂ ಚಿತ್ರ ಇದೆ ಕಾದಂಬರಿಯ ಎರವಲು ಎನ್ನಬಹುದು. ಅದನ್ನು ಭಾರತೀಯ ಸೊಗಡಿಗೆ ರೂಪಾನತರ ಮಾಡಿದ್ದಾರೆ ನಿರ್ದೇಶಕ ಜೀತು ಜೋಸೆಫ್. ಇದೆ ಚಿತ್ರ ಕನ್ನಡದಲ್ಲಿ ರವಿಚಂದ್ರನ್ ಅಭಿನಯದಲ್ಲೂ ತೆಲುಗಿನಲ್ಲಿ ವೆಂಕಟೇಶ್ ಅಭಿನಯದಲ್ಲೂ ತೆರೆಕಂಡು ಯಶಸ್ವಿಯಾಗಿದೆ. ಅಷ್ಟೇ ಅಲ್ಲ ಈಗ ತಮಿಳು ಭಾಷೆಯಲ್ಲಿ ಖ್ಯಾತ ನಟ ಕಮಲ್ ಹಾಸನ್ ಅಭಿನಯದಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು , ಹಿಂದಿಯಲ್ಲೂ ರಿಮೇಕ್ ಆಗುವ ಲಕ್ಷಣಗಳಿವೆ.