Saturday, February 9, 2013

ಒಂದು ಸುಂದರ ಅನುಭೂತಿ...

ಸೂನ್ಗವಾ ಎನ್ನುವುದು ಒಂದು ನೇಪಾಲಿ ಭಾಷೆಯ ಚಿತ್ರದ ಹೆಸರು.ಇದು. ಸ್ತ್ರೀಸಲಿಂಗಿ ಸಂಬಂಧದ ಕಥೆಯನ್ನೂ ಹೊಂದಿರುವ ಚಿತ್ರ.  ಒಂದು ಸಿನೆಮವಾಗಿ ಅದರ ನಿರೂಪಣೆ, ಚಿತ್ರಕಥೆ ಮುಂತಾದವು ಹಿಡಿದುಕೂರಿಸುವಂತಹ ಚಿತ್ರ.ಸಲಿಂಗ ಪ್ರೇಮದ ಚಿತ್ರಗಳಾದ ಮಿಲ್ಕ್, ಬ್ರೋಕ್ ಬ್ಯಾಕ್ ಮೌಂಟನ್ . ಮುಂತಾದ ಚಿತ್ರಗಳನ್ನೂ ನಾವು ಈಗಾಗಲೇ ನೋಡಿದ್ದೇವೆ, ಮೆಚ್ಚಿದ್ದೇವೆ.ಹಾರ್ವೆ ಮಿಲ್ಕ್ ಜೀವನ ಚರಿತ್ರೆಯಾಧಾರಿತ ಚಿತ್ರ ಮಿಲ್ಕ್ ಎಲ್ಲಾ ವಿಭಾಗದಲ್ಲೂ ಉತ್ಕೃಷ್ಟ ವೆನಿಸಿದ್ದರೂ ವಾಸ್ತವದ ಅಂಶ ಹೆಚ್ಚಾದ್ದರಿಂದ ಅಷ್ಟೇನೂ ಆಪ್ತ ಎನಿಸಿರಲಿಲ್ಲ. ಆದರೆ ಸೂನ್ಗವ ಚಿತ್ರಕ್ಕೆ ನಾನು ನಿಜಕ್ಕೂ ಮರುಳಾಗಿ ಬಿಟ್ಟೆ. ಮೊನ್ನೆ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ನೋಡಿದ ಚಿತ್ರ ಇದು. ಸ್ವಲ್ಪ ಇರುಸುಮುರುಸಿನಿಂದಲೇ ಒಳಹೋದ ನನಗೆ ಒಂದು ಅಪ್ಯಾಯಮಾನವಾದ ಅನುಭವವಾದ್ದದಂತೂ ಸತ್ಯ.
ಚಿತ್ರವನ್ನ ಇಷ್ಟೊಂದು ಪ್ರಶಂಸೆ ಮಾಡಲಿಕ್ಕೆ ಪ್ರಮುಖವಾಗಿ ಮೂರು ಕಾರಣಗಳಿವೆ. ಅವುಗಳೆಂದರೆ : ಸುಂದರವಾದ ನಟಿಯರು ಮತ್ತು ಅವರ ಅದ್ಭುತ ಅಭಿನಯ, ಸರಳವಾದ ಚಿತ್ರಕಥೆ ಮತ್ತು  ಪೂರ್ವಗ್ರಹ ಪೀಡಿತವಲ್ಲದ ಪ್ರೌಢತೆ ಮೆರೆದಿರುವ  ನಿರ್ದೇಶನ. ಪ್ಯಾರಿಸ್  ಮೂಲದ ಸುವರ್ಣ ಥಾಪರವರ ಚೊಚ್ಚಲ  ನಿರ್ದೇಶನದ ಈ ಚಿತ್ರ ನೇಪಾಳಿ ಭಾಷೆಯ ಮೊಟ್ಟ  ಮೊದಲ  ಸಲಿಂಗ   ಪ್ರೇಮ ಕಥೆಯಾಧರಿಸಿದ ಚಿತ್ರ. ಮೊನ್ನೆ ಅಂದರೆ ಜನವರಿ ನಾಲಕ್ಕನೇ ತಾರೀಖಿನಂದು ಬಿಡುಗಡೆಯಾದ  ಈ ಚಿತ್ರ ಈಗಾಗಲೇ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ  ಗಳಿಸಿ ಜನರ ಪ್ರತಿಕ್ರಿಯೆಗೆ ಕಾಯುತ್ತಿದೆ.
ಚಿತ್ರದ ಪ್ರಮುಖ ಪಾತ್ರಧಾರಿಗಳಾದ ದೀಯ ಮಸ್ಕೆ, ನಿಶಾ ಅಧಿಕಾರರವರ ಅಭಿನಯ ಮತ್ತು ಸೌಂದರ್ಯ ನಮ್ಮ ಕಣ್ಣುಗಳನ್ನು ಪರದೆಗೆ ಅಂಟಿಸಿ ಬಿಡುತ್ತದೆ.
ಚಿತ್ರದ ಕಥೆ ಇಂತಿದೆ. ದಿಯಾ ಮತ್ತು ಕಿರಣ್ ಜೀವದ ಗೆಳತಿಯರು.ಆದರೆ ದಿನ ಕಳೆದಂತೆ ಅವರ ಗೆಳೆತನ ಗೆಳೆತನದ ಎಲ್ಲೇ ಮೀರಿ ಇನ್ನೂ ಮುಂದುವರೆಯುತ್ತದೆ. ಅದರಲ್ಲೂ ಕಿರಣ್ ಳಿಗೆ ಗೆಳತಿ ದೀಯಾಳ ಬಗ್ಗೆ ಹುಚ್ಚು ಪ್ರೀತಿ. ಆಕೆ ಬೇರೆಯವರ ಜೊತೆ ಮಾತಾಡಿದರೆ ನೊಂದುಕೊಳ್ಳುವ ಕೋಪ ಮಾಡಿಕೊಳ್ಳುವ ಮಟ್ಟಕ್ಕೆ ಅವರ ಸಂಬಂಧ ಬೆಳೆದುನಿಲ್ಲುತ್ತದೆ. ದೀಯಳಿಗೆ ಅವರಿಬ್ಬರ ಸಂಬಂಧದ ಬಗ್ಗೆ ಇನ್ನೂ ಗೊಂದಲವಿರುತ್ತದೆ. ಮುಂದೆ ಇದಾವುದರ ಅರಿವಿಲ್ಲದ ದೀಯಾಳ ಮನೆಯವರು ದೀಯಾಳಿಗೆ ಮದುವೆ ನಿಶ್ಚಯ ಮಾಡುತ್ತಾರೆ. ವರ ಕೂಡ ದೀಯಾಳನ್ನು ಒಪ್ಪಿಕೊಳ್ಳುತ್ತಾನೆ. ಇಲ್ಯಾರೂ ದೀಯಾಳ ಅಭಿಪ್ರಾಯವನ್ನೂ ಕೇಳದೆ ನಿಶ್ಚಿತಾರ್ಥ ಮಾಡಿಬಿಡುತ್ತಾರೆ. ಇದನ್ನು ತಡೆಯಲಾಗದ ದೀಯ ವಿಷಯವನ್ನೂ ಕಿರಣ್ ಳಿಂದ ಮುಚ್ಚಿಡುತ್ತಾಳೆ. ಮುಂದೆ ವಿಷಯ ಗೊತ್ತಾದಾಗ ಇಬ್ಬರಿಗೂ ಮಾತಿನ ಸಂಘರ್ಷ ನಡೆದು ತಮ್ಮ ಸಂಬಂಧವನ್ನೂ ಗಟ್ಟಿ ಮಾಡಿಕೊಳ್ಳುವ  ಸಮಾಜವನ್ನು ಎದುರಿಸುವ ನಿರ್ಧಾರಕ್ಕೆ ಬಂದುಬಿಡುತ್ತಾರೆ. ವಿಷಯ ತಿಳಿದ ಸಂಪ್ರದಾಯಸ್ಥ ಮನೆಯವರು ಗೋಳಾಡುತ್ತಾರೆ. ಎರಡೂ ಮನೆಗಳಲ್ಲಿ ಪ್ರತಿರೋಧ ಏರ್ಪಡುತ್ತದೆ.ಮದುವೆಯಾಗ ಬೇಕಾದ ವರ ವಿಷ್ಯ ತಿಳಿದು ದೀಯಾಳ ಬಗ್ಗೆ ಅಸಹ್ಯ ವ್ಯಕ್ತಪಡಿಸಿ ದೂರಾಗುತ್ತಾನಾದರೂ ಅದೊಂದು ದಿನ ಮೊದಲೇ ಸೇರಿದ್ದರಿಂದ ದೀಯಾ, ಅವನ ಮಗುವಿಗೆ ತಾಯಿಯಾಗುವ ಸನ್ನಿವೇಶ ಬಂದುಬಿಟ್ಟಿರುತ್ತದೆ. 
ಇಬ್ಬರೂ ತಮ್ಮ ತಮ್ಮ ಮನೆ ತೊರೆದು ಬೇರೊಂದು ಮನೆ ಮಾಡಿಕೊಂಡು ಜೀವಿಸಲು ಪ್ರಾರಂಭಿಸುತ್ತಾರಲ್ಲದೆ ದೀಯಾಳ ಮಗುವನ್ನೂ ಸಾಕುವ ನಿರ್ಧಾರ ಕೈಗೊಳ್ಳುತ್ತಾರೆ.
ಆದರೆ ಸಮಾಜ ಅವರನ್ನು ತಮ್ಮಷ್ಟಕ್ಕೆ ತಾವೇ ಇರಲು ಬಿಡುವುದೇ..? ಸಂಪ್ರದಾಯ, ಜಾತಿಗಳಿಗೆ ಬೆಲೆ ಕೊಡುವ ಹಿರಿಯರು ಈ ನಿಷಿದ್ಧ ಪ್ರೀತಿಯನ್ನು ಹೇಗೆ ತೆಗೆದುಕೊಳ್ಳುತ್ತಾರೆ...
ಚಿತ್ರದಲ್ಲಿ ನಿರ್ದೇಶಕರ ಕೌಶಲ ಎದ್ದುಕಾಣುತ್ತದೆ. ಶೃಂಗಾರಮಯ ಸನ್ನಿವೇಶಗಳು, ಅಣ್ಣ-ತಂಗಿಯ ಭಾವನಾತ್ಮಕ ದೃಶ್ಯಗಳನ್ನು ಚಿತ್ರೀಕರಿಸಿರುವ ಪರಿ ನಿಜಕ್ಕೂ ಖುಷಿಕೊಡುತ್ತದೆ. ಇಡೀ ಚಿತ್ರದಲ್ಲಿ ದೀಯಾಳನ್ನು ಮದುವೆಯಾಗಲು ಬರುವ ವರ ಸುಮಾರು ದೃಶ್ಯಗಳಲ್ಲಿದ್ದರೂ ಆತನ ಮುಖವನ್ನೇ ತೋರಿಸದಿರುವುದು ನಿರ್ದೇಶಕರ ಜಾಣ್ಮೆಗೆ ಹಿಡಿದ ಕೈಗನ್ನಡಿ. ಒಟ್ಟಾರೆಯಾಗಿ ಹೇಳಬೇಕೆಂದರೆ ಅವಶ್ಯವಾಗಿ ನೋಡಲೇ ಬೇಕಾದ ಚಿತ್ರ ಸೂನ್ಗವಾ.

Thursday, February 7, 2013

ಹಣೆಬರಹ ತಿದ್ದಿದ ದೇವರನ್ನು ಸ್ಮರಿಸುತ್ತಾ...

ನನಗೆ ಕೊಟ್ಟಿದ್ದ ಜಾಗ ಮುಖ್ಯಮಂತ್ರಿ ಜಗಧೀಶ್ ಶೆಟ್ಟರ್ ರವರ ವಾಸಸ್ಥಾನವಾದ 'ಕೃಷ್ಣಾ' ದ ಮುಂದೆ. ಅಶೋಕ ಹೋಟೆಲ್ಲಿನ ಮುಂದಕ್ಕೆ ಹಾಸು ಹೊಕ್ಕಾಗಿರುವ ರಸ್ತೆಯಲ್ಲಿ ಜಾಗ ಸಿಕ್ಕಿದ್ದು ನಿಜಕ್ಕೂ ನನ್ನ ಅದೃಷ್ಟ ಎಂದೆನಿಸಿತ್ತು.ಬೆಳಿಗ್ಗೆ ಆರೂವರೆಗೆ ಅಲ್ಲಿ ಹಾಜರಾಗಿ ನನ್ನ ಪೇಂಟಿಂಗ್ ಗಳನ್ನ ಜೋಡಿಸಿದೆವು. ನಾನು ಸುಮ್ಮನೆ ಚಿತ್ರಗಳನ್ನೂ ಚಿತ್ರಿಸಿರಲಿಲ್ಲ. ಅದರಲ್ಲಿ ಮೂರ್ನಾಲ್ಕು ಸರಣಿಗಳನ್ನು ಮಾಡಿಕೊಂಡಿದ್ದೆ. 'ಛಾಯಾ' ಎನ್ನುವ ಸರಣಿಯಲ್ಲಿ ಬರೆ ನೆರಳಿನದ್ದೆ ಆಟ.ಏನೇ ಬಣ್ಣಗಳಿದ್ದರೂ ನೆರಳಿನ ಬಣ್ಣ ಮಾತ್ರ ಕಪ್ಪು ಬಿಳುಪೆ. ಆ ಒಂದು ಪರಿಕಲ್ಪನೆಯ ಮೇಲೆ ಒಂದಷ್ಟು ಪೇಂಟಿಂಗ್ ಮಾಡಿದ್ದೆ. ಹಾಗಾಗಿ ಜೋಡಿಸಿಡುವಾಗ ಆ ಪರಿಕಲ್ಪನೆಯ ಮೇಲೆಯೇ ಜೋಡಿಸಿದರೆ ಚೆನ್ನಾಗಿರುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿತ್ತು. ನಾವು ಎಲ್ಲವನ್ನೂ ಜೋಡಿಸಿಡುವಷ್ಟರಲ್ಲಿ ಒಂಭತ್ತು ಘಂಟೆ. ಆದರೆ ಜೋಡಿಸಿಟ್ಟ ಮೇಲೆ ಅಲ್ಲಿಗೆ ಬಂದ ಪೋಲಿಸ್ 'ಇದು ಮುಖ್ಯ ಮಂತ್ರಿಗಳ ಮನೆಯ ಕ೦ಪೌಂಡ್..ಹಾಗಾಗಿ ನೀವು ಇಲ್ಲಿನ ಫುಟ್ ಪಾತ ಮೇಲೆ ಇಡುವ ಹಾಗಿಲ್ಲ .' ಎಂದರು. 'ಎಲ್ಲವನ್ನೂ ತೆಗೆದು ರಸ್ತೆಗೆ ಜೋಡಿಸಿಬಿಡಿ..' ಎಂದು ಬಿಟ್ಟರು.ಸರಿ ಎಂದುಕೊಂಡ ನಾವು ರಸ್ತೆಗೆ ಬಿದ್ದೆವು. ಮತ್ತೆ ತೆಗೆದು ಜೋಡಿಸಿಡುವ ಕೆಲಸ ಪ್ರಾರಂಭವಾಯಿತು. ಹತ್ತು ಘಂಟೆಯ ಹೊತ್ತಿಗೆ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಮತ್ತೆ ಬಂದ ಪೋಲಿಸ್ 'ಇಲ್ಲಿ ಇಡುವ        ಹಾಗೆ ಇಲ್ಲ...ಚಿತ್ರಕಲಾ ಪರಿಷತ್ ನವರು ಅನುಮತಿ ತೆಗೆದುಕೊಂಡಿಲ್ಲ.ಹಾಗಾಗಿ ನೀವು ಇಲ್ಲಿಂದ ತೆಗೆದುಬಿಡಿ ಎಂದುಬಿಟ್ಟರು. .' ನಾವು ಸ್ವಲ್ಪ ಕೊಸರಾಡಿದ್ದಕ್ಕೆ 'ನೀವೇ ತೆಗೆದಿಡಿ..ಇಲ್ಲಾಂದ್ರೆ ನಮ್ಮವರು ಬಂದು ತೆಗೆದಿಡಬೇಕಾಗುತ್ತದೆ..' ಎಂದು ಸ್ವಲ್ಪ ಒರಟಾಗಿಯೇ ಹೇಳಿದರು. ಚಿತ್ರಕಲಾ ಪರಿಷತ್ ನವರೂ ಕೂಡ 'ಕಳೆದ ಬಾರಿ ಹೀಗಾಗಿರಲಿಲ್ಲ...ಏನೋ ಈ ಸಾರಿ ಅನುಮತಿ ಕೊಡುತ್ತಿಲ್ಲ..ಸಾರಿ..ನೀವು ಎಲ್ಲವನ್ನೂ ಕಟ್ಟಿಡಿ..ನಮ್ಮ ಸ್ವಯಂ ಸೇವಕರು ಬಂದು ಎಲ್ಲವನ್ನೂ ಜೋಡಿಸಿಡುತ್ತಾರೆ...ನಿಮಗೆ ಹೊಸ ಜಾಗ ಕೊಡುತ್ತೇವೆ...' ಎಂದು ಹೋಗಿಬಿಟ್ಟರು. ನಾವು ಎಲ್ಲವನ್ನೂ ಕಟ್ಟಿಕೊಂಡು ಸ್ವಯಂ ಸೇವಕರಿಗೆ ಕಾಯ್ದುಕುಳಿತೆವು. . ಹನ್ನೊಂದಾದರೂ ಯಾರೂ ಬರಲೇ ಇಲ್ಲ. ಹನ್ನೆರಡರ ಹೊತ್ತಿಗೆ ನಮಗೆ ಒಂತರಾ ಆಗಿಹೋಗಿತ್ತು. ನಾನು ಚಿತ್ರಪ್ರದರ್ಶನಕ್ಕೆ ಬಂದವನು ನನ್ನ ಚಿತ್ರವನ್ನೆಲ್ಲಾ ಕಟ್ಟಿಟ್ಟು ಅಲ್ಲಿನ ಚಿತ್ರಗಳನ್ನೂ ನೋಡತೊಡಗಿದೆ. ಗೆಳೆಯ ಪಿಲಿಪ್ ಜೊತೆಗಿದ್ದರಿಂದ ಅವರ ಜೊತೆ ಚಿತ್ರಗಳ ಬಗ್ಗೆ ಮಾತಾಡುತ್ತಿದ್ದೆವು. ಯಾಕೋ ಚಿತ್ರಕಲಾ ಪರಿಷತ್ ನವರು ನಮಗೆ ಹೊಸಜಾಗ ಮಾಡಿಕೊಡುವ ಯಾವ ಆಸಕ್ತಿಯನ್ನು ತೋರಿಸದೆ ತಮ್ಮ ತಮ್ಮ ಸಂಭ್ರಮದಲ್ಲಿ ಮುಳುಗಿಹೋಗಿದ್ದರು. ಯಾರನ್ನೂ ಕೇಳಿದರೂ ಇನ್ನೊಬ್ಬರೆಡೆಗೆ ಕೈತೊರಿಸುತ್ತಿದ್ದರು. ನಾನು ಮೂರ್ನಾಲ್ಕು ಸರಿ ಅಲ್ಲಲ್ಲಿ ಎಡಿತಾಕಿದೆ ..ಸಾರ್ ಅವರನ್ನು ಕೇಳಿ..ಇರಿ ವೈಟ್ ಮಾಡಿ...ಎಂದೆ ಹೇಳುತ್ತಿದ್ದರು.ಅಂತೂ ಇಂತೂ ಕ್ರೆಸೆಂಟ್ ರಸ್ತೆಯ ಕಾರು ಪಾರ್ಜಿಂಗ್ ಜಾಗದಲ್ಲಿ ಮೂಲೆಯಲ್ಲಿ ಒಂದು ಜಾಗ ನಮಗೆ ಸಿಕ್ಕಾಗ ಹೆಚ್ಚು ಕಡಿಮೆ ಅರ್ಧ ದಿವಸ ಕಳೆದುಹೋಗಿತ್ತು. ಅಷ್ಟರಲ್ಲಾಗಲೇ ನಮಗೆ ಮತ್ತೆ ಜೋಡಿಸಿಡುವ, ಪ್ರದರ್ಶಿಸುವ ಆಸಕ್ತಿ ಕಳೆದುಹೋಗಿತ್ತು. ಕೊಟ್ಟಿದ್ದ ಜಾಗವೂ ಹಾಗೆಯೇ ಇತ್ತು. ಅಲ್ಲಿ ಯಾರೂ ಬರಲು ಸಾಧ್ಯವೇ ಇರಲಿಲ್ಲ. ಸುಮ್ಮನೆ ಎಲ್ಲವನ್ನೂ ಕಟ್ಟಿ ಒಂದೆಡೆ ಇಟ್ಟು ಅಲ್ಲಿರುವ ಅದ್ಭುತ ಚಿತ್ರಗಳನ್ನೂ ಕಣ್ತುಂಬಿಕೊಳ್ಳೋಣ ಎನಿಸಿತು. ಆದರೆ ಇರಲಿ ಎಂದು ಜೋಡಿಸಿಟ್ಟೆದ್ದಾಯಿತು.
ನಾನು ಬೆಂಗಳೂರಿಗೆ ಬಂದಾಗಿನಿಂದ ಪ್ರತಿವರ್ಷ ಚಿತ್ರಸಂತೆಗೆ ಹಾಜರಾಗುತ್ತಿದ್ದರೂ ನಾನು ಚಿತ್ರಗಳನ್ನಿಟ್ಟಿದ್ದ ಈ ಜಾಗಕ್ಕೆ ಒಮ್ಮೆಯೂ ಇಣುಕಿರಲಿಲ್ಲ. ಆಮೇಲಿನದು ಎಲ್ಲವೂ ನೀರಸ. ನೋಡಲಿಕ್ಕೂ ಜನಬರದ ಜಾಗವಾಗಿತ್ತದು.
ಇದೆಲ್ಲದರ ನಡುವೆಯೂ ಚಿತ್ರಸಂತೆ ಕಣ್ಣಿಗೆ ಒಂದು ಹಬ್ಬ ಎನ್ನಬಹುದು.ಸಾವಿರಕ್ಕೂ ಹೆಚ್ಚು ಕಲಾವಿದರ ಅಸಂಖ್ಯ ಚಿತ್ರಗಳು ಒಂದೇ ಜಾಗದಲ್ಲಿ ನೋಡಲು ಸಿಗುವುದು ಕಷ್ಟ. ಚಿತ್ರಸಂತೆಯಿಂದ ಅದು ವರ್ಷ ವರ್ಷ ಸಾಧ್ಯವಾಗುತ್ತದೆ. ಅದರಲ್ಲೂ ಕೆಲವರ ವರ್ಣ ವಿನ್ಯಾಸ, ಶೈಲಿ ಹೊಸತನ ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋದದ್ದಂತೂ ಸತ್ಯ.
ಮುಂದಿನ ಚಿತ್ರಸಂತೆಗೆ ಭಾಗವಹಿಸಲು ಇನ್ನಷ್ಟು ಹುರುಪು ಬಂದಿದೆ. ಆದರೆ ಈ ಸಾರಿಯಂತೆ ಮುಂದಿನ ಸಾರಿ ದೇವರು ಹಣೆಬರಹ ತಿದ್ದದಿದರೆ ಸಾಕು..