Thursday, February 7, 2013

ಹಣೆಬರಹ ತಿದ್ದಿದ ದೇವರನ್ನು ಸ್ಮರಿಸುತ್ತಾ...

ನನಗೆ ಕೊಟ್ಟಿದ್ದ ಜಾಗ ಮುಖ್ಯಮಂತ್ರಿ ಜಗಧೀಶ್ ಶೆಟ್ಟರ್ ರವರ ವಾಸಸ್ಥಾನವಾದ 'ಕೃಷ್ಣಾ' ದ ಮುಂದೆ. ಅಶೋಕ ಹೋಟೆಲ್ಲಿನ ಮುಂದಕ್ಕೆ ಹಾಸು ಹೊಕ್ಕಾಗಿರುವ ರಸ್ತೆಯಲ್ಲಿ ಜಾಗ ಸಿಕ್ಕಿದ್ದು ನಿಜಕ್ಕೂ ನನ್ನ ಅದೃಷ್ಟ ಎಂದೆನಿಸಿತ್ತು.ಬೆಳಿಗ್ಗೆ ಆರೂವರೆಗೆ ಅಲ್ಲಿ ಹಾಜರಾಗಿ ನನ್ನ ಪೇಂಟಿಂಗ್ ಗಳನ್ನ ಜೋಡಿಸಿದೆವು. ನಾನು ಸುಮ್ಮನೆ ಚಿತ್ರಗಳನ್ನೂ ಚಿತ್ರಿಸಿರಲಿಲ್ಲ. ಅದರಲ್ಲಿ ಮೂರ್ನಾಲ್ಕು ಸರಣಿಗಳನ್ನು ಮಾಡಿಕೊಂಡಿದ್ದೆ. 'ಛಾಯಾ' ಎನ್ನುವ ಸರಣಿಯಲ್ಲಿ ಬರೆ ನೆರಳಿನದ್ದೆ ಆಟ.ಏನೇ ಬಣ್ಣಗಳಿದ್ದರೂ ನೆರಳಿನ ಬಣ್ಣ ಮಾತ್ರ ಕಪ್ಪು ಬಿಳುಪೆ. ಆ ಒಂದು ಪರಿಕಲ್ಪನೆಯ ಮೇಲೆ ಒಂದಷ್ಟು ಪೇಂಟಿಂಗ್ ಮಾಡಿದ್ದೆ. ಹಾಗಾಗಿ ಜೋಡಿಸಿಡುವಾಗ ಆ ಪರಿಕಲ್ಪನೆಯ ಮೇಲೆಯೇ ಜೋಡಿಸಿದರೆ ಚೆನ್ನಾಗಿರುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿತ್ತು. ನಾವು ಎಲ್ಲವನ್ನೂ ಜೋಡಿಸಿಡುವಷ್ಟರಲ್ಲಿ ಒಂಭತ್ತು ಘಂಟೆ. ಆದರೆ ಜೋಡಿಸಿಟ್ಟ ಮೇಲೆ ಅಲ್ಲಿಗೆ ಬಂದ ಪೋಲಿಸ್ 'ಇದು ಮುಖ್ಯ ಮಂತ್ರಿಗಳ ಮನೆಯ ಕ೦ಪೌಂಡ್..ಹಾಗಾಗಿ ನೀವು ಇಲ್ಲಿನ ಫುಟ್ ಪಾತ ಮೇಲೆ ಇಡುವ ಹಾಗಿಲ್ಲ .' ಎಂದರು. 'ಎಲ್ಲವನ್ನೂ ತೆಗೆದು ರಸ್ತೆಗೆ ಜೋಡಿಸಿಬಿಡಿ..' ಎಂದು ಬಿಟ್ಟರು.ಸರಿ ಎಂದುಕೊಂಡ ನಾವು ರಸ್ತೆಗೆ ಬಿದ್ದೆವು. ಮತ್ತೆ ತೆಗೆದು ಜೋಡಿಸಿಡುವ ಕೆಲಸ ಪ್ರಾರಂಭವಾಯಿತು. ಹತ್ತು ಘಂಟೆಯ ಹೊತ್ತಿಗೆ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಮತ್ತೆ ಬಂದ ಪೋಲಿಸ್ 'ಇಲ್ಲಿ ಇಡುವ        ಹಾಗೆ ಇಲ್ಲ...ಚಿತ್ರಕಲಾ ಪರಿಷತ್ ನವರು ಅನುಮತಿ ತೆಗೆದುಕೊಂಡಿಲ್ಲ.ಹಾಗಾಗಿ ನೀವು ಇಲ್ಲಿಂದ ತೆಗೆದುಬಿಡಿ ಎಂದುಬಿಟ್ಟರು. .' ನಾವು ಸ್ವಲ್ಪ ಕೊಸರಾಡಿದ್ದಕ್ಕೆ 'ನೀವೇ ತೆಗೆದಿಡಿ..ಇಲ್ಲಾಂದ್ರೆ ನಮ್ಮವರು ಬಂದು ತೆಗೆದಿಡಬೇಕಾಗುತ್ತದೆ..' ಎಂದು ಸ್ವಲ್ಪ ಒರಟಾಗಿಯೇ ಹೇಳಿದರು. ಚಿತ್ರಕಲಾ ಪರಿಷತ್ ನವರೂ ಕೂಡ 'ಕಳೆದ ಬಾರಿ ಹೀಗಾಗಿರಲಿಲ್ಲ...ಏನೋ ಈ ಸಾರಿ ಅನುಮತಿ ಕೊಡುತ್ತಿಲ್ಲ..ಸಾರಿ..ನೀವು ಎಲ್ಲವನ್ನೂ ಕಟ್ಟಿಡಿ..ನಮ್ಮ ಸ್ವಯಂ ಸೇವಕರು ಬಂದು ಎಲ್ಲವನ್ನೂ ಜೋಡಿಸಿಡುತ್ತಾರೆ...ನಿಮಗೆ ಹೊಸ ಜಾಗ ಕೊಡುತ್ತೇವೆ...' ಎಂದು ಹೋಗಿಬಿಟ್ಟರು. ನಾವು ಎಲ್ಲವನ್ನೂ ಕಟ್ಟಿಕೊಂಡು ಸ್ವಯಂ ಸೇವಕರಿಗೆ ಕಾಯ್ದುಕುಳಿತೆವು. . ಹನ್ನೊಂದಾದರೂ ಯಾರೂ ಬರಲೇ ಇಲ್ಲ. ಹನ್ನೆರಡರ ಹೊತ್ತಿಗೆ ನಮಗೆ ಒಂತರಾ ಆಗಿಹೋಗಿತ್ತು. ನಾನು ಚಿತ್ರಪ್ರದರ್ಶನಕ್ಕೆ ಬಂದವನು ನನ್ನ ಚಿತ್ರವನ್ನೆಲ್ಲಾ ಕಟ್ಟಿಟ್ಟು ಅಲ್ಲಿನ ಚಿತ್ರಗಳನ್ನೂ ನೋಡತೊಡಗಿದೆ. ಗೆಳೆಯ ಪಿಲಿಪ್ ಜೊತೆಗಿದ್ದರಿಂದ ಅವರ ಜೊತೆ ಚಿತ್ರಗಳ ಬಗ್ಗೆ ಮಾತಾಡುತ್ತಿದ್ದೆವು. ಯಾಕೋ ಚಿತ್ರಕಲಾ ಪರಿಷತ್ ನವರು ನಮಗೆ ಹೊಸಜಾಗ ಮಾಡಿಕೊಡುವ ಯಾವ ಆಸಕ್ತಿಯನ್ನು ತೋರಿಸದೆ ತಮ್ಮ ತಮ್ಮ ಸಂಭ್ರಮದಲ್ಲಿ ಮುಳುಗಿಹೋಗಿದ್ದರು. ಯಾರನ್ನೂ ಕೇಳಿದರೂ ಇನ್ನೊಬ್ಬರೆಡೆಗೆ ಕೈತೊರಿಸುತ್ತಿದ್ದರು. ನಾನು ಮೂರ್ನಾಲ್ಕು ಸರಿ ಅಲ್ಲಲ್ಲಿ ಎಡಿತಾಕಿದೆ ..ಸಾರ್ ಅವರನ್ನು ಕೇಳಿ..ಇರಿ ವೈಟ್ ಮಾಡಿ...ಎಂದೆ ಹೇಳುತ್ತಿದ್ದರು.ಅಂತೂ ಇಂತೂ ಕ್ರೆಸೆಂಟ್ ರಸ್ತೆಯ ಕಾರು ಪಾರ್ಜಿಂಗ್ ಜಾಗದಲ್ಲಿ ಮೂಲೆಯಲ್ಲಿ ಒಂದು ಜಾಗ ನಮಗೆ ಸಿಕ್ಕಾಗ ಹೆಚ್ಚು ಕಡಿಮೆ ಅರ್ಧ ದಿವಸ ಕಳೆದುಹೋಗಿತ್ತು. ಅಷ್ಟರಲ್ಲಾಗಲೇ ನಮಗೆ ಮತ್ತೆ ಜೋಡಿಸಿಡುವ, ಪ್ರದರ್ಶಿಸುವ ಆಸಕ್ತಿ ಕಳೆದುಹೋಗಿತ್ತು. ಕೊಟ್ಟಿದ್ದ ಜಾಗವೂ ಹಾಗೆಯೇ ಇತ್ತು. ಅಲ್ಲಿ ಯಾರೂ ಬರಲು ಸಾಧ್ಯವೇ ಇರಲಿಲ್ಲ. ಸುಮ್ಮನೆ ಎಲ್ಲವನ್ನೂ ಕಟ್ಟಿ ಒಂದೆಡೆ ಇಟ್ಟು ಅಲ್ಲಿರುವ ಅದ್ಭುತ ಚಿತ್ರಗಳನ್ನೂ ಕಣ್ತುಂಬಿಕೊಳ್ಳೋಣ ಎನಿಸಿತು. ಆದರೆ ಇರಲಿ ಎಂದು ಜೋಡಿಸಿಟ್ಟೆದ್ದಾಯಿತು.
ನಾನು ಬೆಂಗಳೂರಿಗೆ ಬಂದಾಗಿನಿಂದ ಪ್ರತಿವರ್ಷ ಚಿತ್ರಸಂತೆಗೆ ಹಾಜರಾಗುತ್ತಿದ್ದರೂ ನಾನು ಚಿತ್ರಗಳನ್ನಿಟ್ಟಿದ್ದ ಈ ಜಾಗಕ್ಕೆ ಒಮ್ಮೆಯೂ ಇಣುಕಿರಲಿಲ್ಲ. ಆಮೇಲಿನದು ಎಲ್ಲವೂ ನೀರಸ. ನೋಡಲಿಕ್ಕೂ ಜನಬರದ ಜಾಗವಾಗಿತ್ತದು.
ಇದೆಲ್ಲದರ ನಡುವೆಯೂ ಚಿತ್ರಸಂತೆ ಕಣ್ಣಿಗೆ ಒಂದು ಹಬ್ಬ ಎನ್ನಬಹುದು.ಸಾವಿರಕ್ಕೂ ಹೆಚ್ಚು ಕಲಾವಿದರ ಅಸಂಖ್ಯ ಚಿತ್ರಗಳು ಒಂದೇ ಜಾಗದಲ್ಲಿ ನೋಡಲು ಸಿಗುವುದು ಕಷ್ಟ. ಚಿತ್ರಸಂತೆಯಿಂದ ಅದು ವರ್ಷ ವರ್ಷ ಸಾಧ್ಯವಾಗುತ್ತದೆ. ಅದರಲ್ಲೂ ಕೆಲವರ ವರ್ಣ ವಿನ್ಯಾಸ, ಶೈಲಿ ಹೊಸತನ ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋದದ್ದಂತೂ ಸತ್ಯ.
ಮುಂದಿನ ಚಿತ್ರಸಂತೆಗೆ ಭಾಗವಹಿಸಲು ಇನ್ನಷ್ಟು ಹುರುಪು ಬಂದಿದೆ. ಆದರೆ ಈ ಸಾರಿಯಂತೆ ಮುಂದಿನ ಸಾರಿ ದೇವರು ಹಣೆಬರಹ ತಿದ್ದದಿದರೆ ಸಾಕು..

No comments:

Post a Comment