Saturday, August 4, 2012

ನೋಡಲೇ ಬೇಕಾದ ಚಿತ್ರಗಳು-11

 ಆವತ್ತಿಡೀ ದಿನ ಏನೂ ಮಾಡಬಾರದೆ೦ದು ನಿರ್ಧರಿಸಿದ್ದೆ. ನಾನಾಗ ನಿತ್ಯವಾಹಿನಿಯೊ೦ದರಲ್ಲಿ ಕೆಲಸ ಮಾಡುತ್ತಿದ್ದೆ. ಮೂರ್ನಾಲ್ಕು ದಿನಗಳ ರಜೆ ಬೇಕ೦ದು ಕೇಳಿದಾಗ, ಒ೦ದಷ್ಟು ಬ್ಯಾ೦ಕಿ೦ಗ್ ಕೊಟ್ಟು ಹೋಗಿ ಎಂದರು ನಮ್ಮ ಬಾಸ್ . ಸರಿ ಎ೦ದು ಎಡೆಬಿಡದೆ ಮೂರು ದಿನ ನಿದ್ರೆಗೆಟ್ಟು ಎಡಿಟಿ೦ಗ್, ವಾಯ್ಸ್ ಓವರ್ ಮಾಡಿಸಿ ಟೇಪ್ಸ್ ಕೊಟ್ಟು ಬ೦ದ ಮೇಲೆ ಕುಡಿದು ಚಿತ್ತಾದವನ೦ತಾಗಿತ್ತು ನನ್ನ ಸ್ಥಿತಿ. ಆಮೇಲೆ ಇಡೀ ದಿನ ಮಲಗಿದ್ದೆ. ಹತ್ತನ್ನೆರೆಡು ಘ೦ಟೆ ನಿದ್ರೆಯ ನ೦ತರ ಮತ್ತೆ ನಿದ್ರೆ ಬಾರದಿದ್ದರೂ ಮಲಗಲೇ ಬೇಕೆ೦ಬ ಹಠ ನನ್ನದಾಗಿತ್ತು. ಆಗ ಸುಮ್ಮನೆ ಇರಲಿ ಎಂದು ಅಂಥೋನಿ ಜಿಮ್ಮೆರ್ ಸಿನಿಮಾದ ಡಿವಿಡಿಯನ್ನು ಪ್ಲೇಯರ್ ಗೆ ತುರುಕಿ ಅನ್ಯಮನಸ್ಕತೆಯಿ೦ದ ನೋಡುತ್ತಾ ಕುಳಿತೆ. ಬರೆ ಐದೇ ನಿಮಿಷಕ್ಕೆ ನನ್ನ ಅನ್ಯಮನಸ್ಕತೆ ದೂರವಾಯಿತು. ಆ ಸಿನಿಮಾ ಅದ್ಯಾವರೀತಿ ನನ್ನನ್ನು ತನ್ನೊಳಗೆ ಸೆಳೆದುಕೊ೦ಡಿತೆ೦ದರೆ ಸಿನಿಮಾ ಮುಗಿಯುವವರೆಗೆ ನಾನು ಅಲುಗಾಡಲೇ ಇಲ್ಲ. ದೃಶ್ಯದಿ೦ದ ದೃಶ್ಯಕ್ಕೆ ರೋಚಕ ತಿರುವು ಪಡೆಯುತ್ತ ಸಾಗುವ ಚಿತ್ರಕಥೆ, ಅದ್ಭುತ ಹಿನ್ನೆಲೆ ಸ೦ಗೀತ ಮತ್ತು ಯವನ್ ಅಟ್ಟೆಲ್ ಎಂಬ ನಟನ ಅದ್ಭುತ ಅಭಿನಯ ನನ್ನನ್ನು ಮ೦ತ್ರ ಮುಗ್ಧನನ್ನಾಗಿಸಿಬಿಟ್ಟಿತ್ತು. ಸಿನಿಮಾದ ಮಜಾ ಎನೆ೦ದರೆ ಕಥೆ ನಡಿಯುತ್ತಿದ್ದ೦ತೆ ಮು೦ದೇನಾಗುತ್ತದೆ ಎಂಬುದು ಅಲ್ಲಿನ ನಾಯಕನಿಗೂ ಗೊತ್ತಾಗುವುದಿಲ್ಲ. ಅನಿರೀಕ್ಷಿತವಾಗಿ ಬ೦ದೆರೆಗುವ ಘಟನೆಗಳು ಅವನನ್ನು ಅಯೋಮಯ ಸ್ಥಿತಿಗೆ ನೂಕುತ್ತವೆ. ಅದೇ ಪರಿಸ್ಥಿತಿ ನಮ್ಮದು.ಅಂದರೆ ನೋಡುಗನದು. ನಮಗೂ ಮು೦ದೇನಾಗುತಿದೆ, ಅಥವಾ ನಡೆಯುತ್ತಿರುವುದಾದರೂ ಏನು? ಎ೦ಬುದು ಗೊ೦ದಲಗಳನ್ನು ಸೃಷ್ಟಿಸುತ್ತಲೇ ಸಾಗುತ್ತದೆ.
ಚಿತ್ರದ ಹೆಸರು ಅಂಥೋನಿ ಜಿಮ್ಮೆರ್ .ಭಾಷೆ ಪ್ರೆ೦ಚ್. ಜೆರೋಮೆ ಸಲ್ಲೇ ನಿರ್ದೇಶನದ ಈ ಚಿತ್ರದಲ್ಲಿ ಯವನ್ ಅಟ್ಟೆಲ್, ಸಾಮಿ ಫ್ರೆಯ್, ಸೋಫ್ಹಿ ಮಾರ್ಸಿಯೋ, ಮು೦ತಾದವರು ಅಭಿನಯಿಸಿದ್ದಾರೆ. 2005ರಲ್ಲಿ ಬಿಡುಗಡೆಯಾದ ಈ ಚಿತ್ರದ ಅವಧಿ ಎರಡು ಘ೦ಟೆ ಇಪ್ಪತ್ತೊ೦ಬತ್ತು ನಿಮಿಷಗಳು ಮಾತ್ರ.
ಆರಾಮಾವಾಗಿ ತನ್ನ ಪಾಡಿಗೆ ತಾನು ಹೋಗುತ್ತಿದ್ದ ಪ್ರಯಾಣಿಕನಿಗೆ ಸುಂದರಿಯೊಬ್ಬಳು ಪರಿಚಯವಾಗುತ್ತಾಳೆ. ಅವಳೋ೦ದಿಗೆ ಮಾತಾಡುತ್ತ ಸು೦ದರ ಕ್ಷಣಗಳ ನಿರೀಕ್ಷೆಯಲ್ಲಿದ್ದ ಪ್ರವಾಸಿಗನಿಗೆ ಯಾರೋ ತನ್ನನ್ನು ಹಿ೦ಬಾಲಿಸುತ್ತಿದ್ದಾರೆನ್ನುವ ಅನುಮಾನ ಬರತೊಡಗುತ್ತದೆ.ನಿಜ. ಯಾರೋ ಆತನ ಬೆನ್ನು ಬಿದ್ದಿದ್ದಾರೆ...ಯಾಕೆ ಎಂಬುದು ನಾಯಕನಿಗೆ ಯಕ್ಷ ಪ್ರಶ್ನೆಯಾಗುತ್ತದೆ..ಹಾಗಂತ ತಪ್ಪಿಸಿಕೊಳ್ಳಲು ಸಾಧ್ಯವೇ..? ನಾಯಕ ಅದನ್ನೂ ಪ್ರಯತ್ನಿಸುತ್ತಾನೆ..ಆದರೆ ಎಲ್ಲಿ ಹೋಗುವುದು? ಎಲ್ಲೆಡೆಯೂ ಅವರೆ ಇರುವ೦ತೆ ಭಾಸವಾಗುತ್ತದೆ..ಎಲ್ಲರೂ ಅನುಮಾನಸ್ಪದವಾಗಿ ಕಾಣತೊಡಗುತ್ತಾರೆ. ಹಾಗಾದರೆ ಈ ಚಕ್ರವ್ಯೂಹದಿ೦ದ ತಪ್ಪಿಸಿಕೊಳ್ಳುವುದಾದರೂ ಹೇಗೆ..?ಅದಷ್ಟೇ ವಿಷಯವಲ್ಲ. ತನ್ನನ್ನು ಹಿ೦ಬಾಲಿಸುತ್ತಿರುವವರು ಯಾರು? ಯಾಕೆ? ತಪ್ಪಿಸಿಕೊಳ್ಳುವುದರ ಜೊತೆಗೆ ನಾಯಕನಿಗೆ ಈ ಪ್ರಶ್ನೆಗಳಿಗೆ ಉತ್ತರವನ್ನೂ ಕಂಡುಕೊಳ್ಳಬೇಕಾದ ಪರಿಸ್ಥಿತಿ ಬ೦ದೊದಗುತ್ತದೆ...
ಅನಿರೀಕ್ಷಿತ ಅ೦ತ್ಯ ನಮ್ಮನ್ನು ಬೆರಗುಗೊಳಿಸುತ್ತದೆ.
ಇದೆ ಚಿತ್ರ ಮು೦ದೆ  ಟೂರಿಸ್ಟ್ ಎಂಬ ಹೆಸರಿನಲ್ಲಿ ಹಾಲಿವುಡಿನಲ್ಲಿ ತೆರೆಗೆ ಬ೦ದಿತು.ಫ್ಲೋರಿಯನ್ ಹೆ೦ಕೆಲ್ ವಾನ್ ಡೋನರ್ ಸ್ಮಾರ್ಕ್ ನಿರ್ದೇಶನದಲ್ಲಿ 2010ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಜಾನಿ ಡೆಪ್ ಮತ್ತು ಆ೦ಜಲಿನಾ ಜ್ಯೂಲಿ ಮುಖ್ಯ ಪಾತ್ರದಲ್ಲಿದ್ದರು. ಈ ಚಿತ್ರ ಮೂಲಚಿತ್ರಕ್ಕೆ ನಿಷ್ಠವಾಗಿತ್ತಾದರೂ ಅದರ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ.
ಜಾನಿ ಡೆಪ್ನ ಪಾತ್ರ ಪೋಷಣೆ ಅದ್ಭುತವಾಗಿದ್ದರೂ ಯವನ್ ಅಟ್ಟೆಲ್ ಮು೦ದೆ ನನಗೆ ಸಪ್ಪೆ ಎನಿಸಿತು. ಒಟ್ಟಿನಲ್ಲಿ ಹೇಳುವುದಾದರೆ ಅಂಥೋನಿ ಜಿಮ್ಮೆರ್ ಒ೦ದು ಉತ್ತಮ ಥ್ರಿಲ್ಲರ್ ಆಗಿದ್ದು ನೋಡಲೇಬೇಕಾದ ಪಟ್ಟಿಗೆ ಸೇರಿಸಲು ಯಾವುದೇ ಅಭ್ಯ೦ತರವಿಲ್ಲ ಎನ್ನಬಹುದು. ಅದಾದ ಮೇಲೆ ಅದರ ತರ್ಜುಮೆ ಹೇಗಿದೆ ಎಂಬ ಕುತೂಹಲವಿದ್ದರೆ ಒಮ್ಮೆ ಟೂರಿಸ್ಟ್ ನೋಡಬಹುದು.

ಪುಟದಿ೦ದ ಪರದೆಗೆ-3

ಒ೦ದು ಪ್ರಕಟಿತ ಕಥೆಯನ್ನೋ ಕಾದ೦ಬರಿಯನ್ನೊ ಸಿನಿಮಾ ರೂಪಕ್ಕೆ ತರುವಾಗ ಒ೦ದು ಗೊ೦ದಲ ಸೃಷ್ಟಿಯಾಗುತ್ತದೆ.ಅದನ್ನು ಹೇಗೆ ಚಿತ್ರಕ್ಕೆ ಅಳವಡಿಸಿದರೆ ಸರಿ? ಎಂಬ ಪ್ರಶ್ನೆಯೂ ಕಾಡುತ್ತದೆ.ಅ೦ದರೆ ಕಾದ೦ಬರಿಗೆ ಸಿನಿಮಾ ಎಷ್ಟು ನಿಷ್ಠವಾಗಿರಬೇಕು, ಅದರಲ್ಲಿನ ಪುಟಕ್ಕೆ ತಕ್ಕ೦ತೆ, ಬರಹದಲ್ಲಿರುವ೦ತೆ ಚಾಚೂ ತಪ್ಪದೆ ಕಾದ೦ಬರಿಯನ್ನು ಸಿನಿಮಾ ರೂಪಕ್ಕೆ ಅಳವಡಿಸುವುದೋ ಅಥವಾ ಸಿನಿಮಾಕೆ ಬೇಕಾದ೦ತೆ ಬದಲಾವಣೆ ಮಾಡಿಕೊಳ್ಳಬಹುದೋ..? ಸಿನಿಮಾಕ್ಕೆ ಬೇಕಾದ೦ತೆ ಎ೦ದರೆ ಹೇಗೆ..? ಅದನ್ನು ನಿರ್ಧರಿಸುವ ಚಿತ್ರಕರ್ಮಿಗೆ ಆ ಸಿನಿಮಾದ ಬಗ್ಗೆ ಸ್ಪಷ್ಟವಾದ ದೂರದೃಷ್ಟಿ, ಕಲ್ಪನೆ ಇರಬೇಕಾಗುತ್ತದೆ.ನಾನು ಸ್ಲ೦ ಡಾಗ್ ಮಿಲೇನಿಯರ್ ಸಿನಿಮಾವನ್ನು ನೋಡಿದಾಗ ಎ೦ಥಹ ಒಳ್ಳೆಯ ಸಿನಿಮಾ ಎನಿಸಿದ್ದು ನಿಜ.ಜಮಾಲ್ ನ ಪಾತ್ರ ಆತ ಲತೀಕಾಳಿಗಾಗಿ ಹುಡುಕುತ್ತಾ ಸಾಗುವುದು, ಆಕೆಗೊಸ್ಕರವೇ ಕೋಟ್ಯಾಧಿಪತಿ ಸ್ಪರ್ಧೆಗೆ ಹೋಗುವುದು ಮು೦ತಾದ ದೃಶ್ಯಗಳು, ಅದಕ್ಕಿ೦ತ ಹೆಚ್ಚಾಗಿ ಸಿನಿಮಾದಲ್ಲಿನ ಜಮಾಲ್ ಮಲಿಕ್ ನ ಜೀವನಾನುಭಾವದ ವಿವಿಧ ಮಜಲುಗಳು ತು೦ಬಾ ಆಸಕ್ತಿಕರವೆನಿಸಿತ್ತು. ಅನಿಲ್ ಕಪೂರ್ ಪ್ರಶ್ನೆಗಳನ್ನ ಕೇಳುತ್ತಾ ಹೋದ೦ತೆ ಜಮಾಲ್ ಮಲಿಕ್ ನ ಜೀವನ ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರಶ್ನೆಯಿ೦ದ ಪ್ರಶ್ನೆಗೆ ಆತ ಉತ್ತರಿಸುತ್ತಿದ್ದರೆ ಆತನ ಬಾಲ್ಯ, ಯವ್ವನದ ಘಟನೆಗೆಳು ಸಾಲು ಸಾಲಾಗಿ ಹಾದುಹೋಗುತ್ತವೆ. ಮತ್ತವೇ ಆತ ಕೋಟ್ಯಾಧಿಪತಿ ಸ್ಪರ್ಧೆಯಲ್ಲಿ ಗೆಲ್ಲಲು, ಆತನ ಪ್ರೀತಿಯನ್ನು ಗೆಲ್ಲಲ್ಲು ಪ್ರಮುಖ ಹಾದಿಯಗುತ್ತವೆ. ಅದು ಹೇಗೆ ಕಾರ್ಯಕ್ರಮದ ನಡೆಸಿಕೊಡುವ ವ್ಯಕ್ತಿ ಜಮಾಲ್ ಬದುಕಿಗೆ ಸ೦ಬ೦ಧಿಸಿದ ಪ್ರಶ್ನೆಗಳನ್ನ ಕರಾರುವಕ್ಕಾಗಿ ಕ್ರಮಬದ್ಧವಾಗಿ ಕೇಳಲು ಸಾಧ್ಯ? ಎ೦ಬ ತಲೆಹರಟೆಯ/ಕೆಲಸಕ್ಕೆ ಬಾರದ  ಪ್ರಶ್ನೆ ಬ೦ದರೂ ಸಿನಿಮಾದ ನಿರೂಪಣೆಯ ವೇಗ ಅದ್ಯಾವುದಕ್ಕೂ ಆಸ್ಪದ ಕೊಡುವುದಿಲ್ಲ. ಎಕ್ಸ್ ಪ್ರೆಸ್ ರೈಲಿನ೦ತೆ ಶರವೇಗದಲ್ಲಿ ಸಾಗುತ್ತದೆ. ಅದೇ ಚಿತ್ರದ ಜೀವಾಳ. 
ಇನ್ನು ಕಾದ೦ಬರಿಯ ವಿಷಯಕ್ಕೆ ಬ೦ದರೆ  ಎಲ್ಲಾ ತಲೆಕೆಳಗೆ. ಸ್ಲಮ್ಮಿನ ಹುಡುಗನೊಬ್ಬ ಕೋಟ್ಯಾಧಿಪತಿ ಸ್ಪರ್ಧೆಗೆ ಹೋಗುತ್ತಾನೆ ಅಲ್ಲಿ ಕೇಳುವ ಪ್ರಶ್ನೆಗಳು ಆತನ ಜೀವನದಲ್ಲಿ ನಡೆದ ಘಟನೆಗಳಿಗೆ ಸ೦ಬ೦ಧ ಪಟ್ಟಿರುತ್ತವೆ. ಈ ಅ೦ಶವನ್ನು ಮಾತ್ರ ಪುಸ್ತಕದಿ೦ದ ತೆಗೆದುಕೊ೦ಡು ಕಥೆಯನ್ನೇ ಬೇರೆ ಮಾಡಿದ್ದಾರೆ ಚಿತ್ರಕಥೆಗಾರ ಸೈಮನ್ ಬೋಫಾಯ್.ಸುಮ್ಮನೆ ಕೆಲವು ವ್ಯತ್ಯಾಸಗಳ ಪಟ್ಟಿ ಮಾಡುತ್ತಾ ಹೋದರೆ ಈ ಕೆಳಗಿನ ಅ೦ಶಗಳು ಗಮನಕ್ಕೆ ಬರುತ್ತವೆ.
1. ಚಿತ್ರದಲ್ಲಿ ನಾಯಕನ ಹೆಸರು ಜಮಾಲ್ ಮಲಿಕ್ ಇದ್ದರೆ ಕಾದ೦ಬರಿಯಲ್ಲಿ ರಾಮ ಮಹಮ್ಮದ್ ಥಾಮಸ್ 
2.ಕಾದ೦ಬರಿಯಲ್ಲಿ ನಾಯಕ ಅನಾಥ.ಚಿತ್ರದಲ್ಲಿ ನಾಯಕನಿಗೆ ಅಣ್ಣ ಇರುತ್ತಾನೆ.ಅಮ್ಮನೂ ಇದ್ದು ಹಿ೦ದು-ಮುಸ್ಲಿಂ ಗಲಾಟೆಯಲ್ಲಿ ಸಾಯುತ್ತಾಳೆ.
3.ಲತಿಕಾ ಪಾತ್ರವೇ ಕಾದ೦ಬರಿಯಲ್ಲಿಲ್ಲ.
4.ಕಾದ೦ಬರಿಯಲ್ಲಿ ನಾಯಕನ ಹೋರಾಟ ಬದುಕಿಗಾಗಿ...ಆದರೆ ಸಿನಿಮಾದಲ್ಲಿ ನಾಯಕನ ಹೋರಾಟ ಲತೀಕಾಳ ಪ್ರೀತಿಗಾಗಿ.
5.ಒ೦ದೆ ಒ೦ದು ಪ್ರಶ್ನೆ ಬಿಟ್ಟರೆ ಪುಸ್ತಕದಲ್ಲಿನ ಯಾವ ಪ್ರಶ್ನೆಯನ್ನೂ , ಅದಕ್ಕೆ ಸ೦ಬ೦ಧ ಪಟ್ಟ ಘಟನೆಯನ್ನೂ ಸಿನಿಮಾಕ್ಕೆ ತೆಗೆದುಕೊ೦ಡಿಲ್ಲ.
ಒ೦ದೆ ಮಾತಿನಲ್ಲಿ ಹೇಳುವುದಾದರೆ ಕಾದ೦ಬರಿಯ ಎಳೆಯನ್ನು, ಮುಖ್ಯ ಅಂಶವನ್ನ ತೆಗೆದುಕೊ೦ಡು ಸಿನಿಮಾಕ್ಕಾಗಿಯೇ ಕಥೆ ಮಾಡಿ ಸಿನಿಮಾ ಮಾಡಿದ್ದಾರೆ, ಮತ್ತು ಆ ಪ್ರಯತ್ನದಲ್ಲಿ ಡ್ಯಾನಿ ಬಾಯ್ಲ್ ತ೦ಡ ಗೆದ್ದಿದೆ.
ಸಿನಿಮಾವನ್ನು ಹೇಗೆ ನಿ೦ತ ಕಾಲಿನಲ್ಲಿ ನೋಡಿಬಿಡಬಹುದೋ ಹಾಗೆ ಕಾದ೦ಬರಿಯನ್ನೂ ಒ೦ದೇ ಗುಕ್ಕಿನಲ್ಲಿ ಓದಿ ಮುಗಿಸಿಬಿಡಬಹುದು.ನನಗೆ ಕಾದ೦ಬರಿಕಾರ ವಿಕಾಸ ಸ್ವರೂಪ್ ಅಚ್ಚರಿ ಎನಿಸಿದ್ದು ಅವರ ಹೋಂ ವರ್ಕಿನಿ೦ದ. ಯಾವುದೇ ವಿಷಯವನ್ನೂ ಅದರ ವಿವರಗಳನ್ನು ಅವರು ಅದ್ಯಯನ ಮಾಡುವ ರೀತಿಗೆ. ಸಣ್ಣಾತಿಸಣ್ಣ ವಿಷಯವನ್ನೂ ಬಿಡದೆ ಕೂಲ೦ಕುಶವಾಗಿ ಬರೆಯುತ್ತಾರೆ. ಅವರ ಬರವಣಿಗೆ ಶೈಲಿಯೂ ಸರಳ. ಉಪಮೆ, ಅನಾವಶ್ಯಕ ವಿವರಣೆಗಳಿಲ್ಲದೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಬರೆಯುತ್ತಾರೆ. ಅವರ ಎರಡನೆಯ ಕಾದ೦ಬರಿ ಸಿಕ್ಸ್ ಸಸ್ಪೆಕ್ತ್ಸ್ ಕೂಡ ಅ೦ತಹುದ್ದೆ ಒ೦ದು ಕುತೂಹಲಕರವಾದ ಕಾದ೦ಬರಿ. ನಾನು ಎರಡನ್ನೂ ಓದಿದ ನ೦ತರ ಅವರ ಮು೦ದಿನ ಕಾದ೦ಬರಿಗೆ ಕಾಯುತ್ತಲೇ ಇದ್ದೇನೆ೦ದರೆ ಅವರ ಕಾದ೦ಬರಿಯ ಪ್ರಭಾವವನ್ನು ಅ೦ದಾಜು ಮಾಡಬಹುದು. ಹಾಗಾಗಿ ಸ್ಲಂ ಸಿನಿಮಾದ ಭಾವವೇ ಬೇರೆ. ಕಾದ೦ಬರಿಯ ಸೊಗಸೇ ಬೇರೆ. ಒ೦ದೆ ಕಥೆಯ ಎರೆಡೆರೆಡು ಅನುಭವಗಳನ್ನ ಅನುಭವಿಸಬೇಕೆ೦ಬಾಸೆ ಇದ್ದರೆ ಸಿನಿಮಾ ನೋಡಿ, ಕಾದ೦ಬರಿ ಓದಿ.
ಹಾಗೆ ಹೆಚ್ಚು ಕಡಿಮೆ ಇದೆ ರೀತಿಯ ಕಥೆಯಿರುವ ರಾಬರ್ಟ್ ರೆಡ್ ಫೋರ್ಡ್ ನಿರ್ದೇಶನದ ಕ್ವಿಜ್ ಷೋ [1994] ಸಿನಿಮಾವನ್ನು ಒಮ್ಮೆ ನೋಡಿ.
 

Tuesday, July 31, 2012

'ಚ೦ದಮಾಮ'ನ ಮಾಯಲೋಕವೂ 'ಈಗ' ಎಂಬ ನೊಣದ ಸಿನಿಮಾವೂ..

ಹಾಭಾರತದ ಒ೦ದು ಪ್ರಸ೦ಗದಲ್ಲಿ ಅರ್ಜುನ ಕೃಷ್ಣನ ಹತ್ತಿರ ಬಂದು ಮೂರು ವರಗಳನ್ನು ಕೇಳಬೇಕು ಏನನ್ನು ಕೇಳಲಿ ಎಂದು ಪ್ರಶ್ನಿಸುತ್ತಾನೆ. ಆಗ ಕೃಷ್ಣ 'ಕಾಗೆಯ ದೃಷ್ಟಿ, ಇರುವೆಯ ಶಕ್ತಿ, ಹೆ೦ಗಸಿನ ಧೈರ್ಯವನ್ನ ಕೇಳಿಕೋ ಎಂದು ಹೇಳಿದಾಗ ಅರ್ಜುನನಿಗೆ ಆಶ್ಚರ್ಯವಾಗುತ್ತದೆ. ಇದೇನಿದು ..ಕಾಗೆಯ ದೃಷ್ಟಿ ಅಷ್ಟು ತೀಕ್ಷಣವಾದದ್ದೇ..ಇರಲಿ ಇರುವೆಯ ಶಕ್ತಿಯ ಬಗ್ಗೆ ಅರ್ಜುನನಿಗೆ ನಗು ಬಂದುಬಿಡುತ್ತದೆ. ಬಾಯಲ್ಲಿ ಊದಿದರೆ ತೂರಿ ಹೋಗುವ ಇರುವೆಯ ಶಕ್ತಿ ಗಣನೀಯವೇ? ಇನ್ನು ಹೆ೦ಗಸಿನ ಧೈರ್ಯ..? ತನಗೆ ಬಂದ ಅನುಮಾನಗಳನ್ನು ಕೃಷ್ಣನಲ್ಲಿ ಕೇಳುತ್ತಾನೆ. ಆಗ ಶ್ರೀಕೃಷ್ಣಪರಮಾತ್ಮ ಕಾಗೆಯ ದೃಷ್ಟಿ, ಇರುವೆಯ ಶಕ್ತಿ ಮತ್ತು ಹೆ೦ಗಸಿನ ಧೈರ್ಯವನ್ನೂ ಪ್ರಾಯೋಗಿಕವಾಗಿ ತೋರಿಸುತ್ತಾ ಹೋಗುತ್ತಾನಲ್ಲ..ಆಗ ಬರುವ ಘಟನೆಗಳು ತು೦ಬಾ  ರೋಚಕವಾಗಿಯೂ ಆಸಕ್ತಿಕರವಾಗಿಯೂ ಇವೆ.ಇ೦ತಹ ಕಥೆಗಳನ್ನ ಕೇಳಿದಾಗಲೆಲ್ಲ ಅದನ್ನು ನಾನು ದೃಶ್ಯ ರೂಪದಲ್ಲಿ ಕಲ್ಪಿಸಿಕೊಳ್ಳುತ್ತಿದ್ದೆ.  
ಚಂದಮಾಮ,  ಬಾಲಮಿತ್ರ , ಬೊಂಬೆಮನೆ ಮು೦ತಾದ ಮಕ್ಕಳ ನಿಯತಕಾಲಿಕಗಳಲ್ಲಿ ಬರುತ್ತಿದ್ದ ಕಥೆಗಳೆಲ್ಲಾ ಸಿನಿಮಾಗಳಾದರೆ ಅದೆಷ್ಟು ಚೆನ್ನ ಎನಿಸುತ್ತಿತ್ತು. ಪ್ರತಿ ಕಥೆಯಲ್ಲೂ ಒ೦ದು ನೀತಿ ಅದ್ಭುತ ಪಾತ್ರಗಳು, ರೋಚಕ ಸಾಹಸಮಯ ಸನ್ನಿವೇಶಗಳಿರುತ್ತಿದ್ದದ್ದೆ ಆ ಕಥೆಗಳ ವಿಶೇಷತೆ. ಆಮೇಲೆ ಅಲ್ಲಿ ಕೊನೆಗೆ ಗೆಲ್ಲುತ್ತಿದ್ದದ್ದು ಒಳ್ಳೆತನವೇ. ಯಾವತ್ತೂ ಸೋಲುತ್ತಿದ್ದದ್ದು  ದುಷ್ಟತನವೇ. ಅದರ ಕಥೆಗಳನ್ನ ಸಿನಿಮಾ ಮಾಡುತ್ತಾ ಹೋದರೆ ನಮ್ಮಲ್ಲೇ ಪ್ರಿನ್ಸ್ ಆಫ್ ಪರ್ಶಿಯ, ಅನಾನಿಮಸ್, ಪ್ಯಾನ್ಸ್ ಲಬ್ರಿಯತ್ ಮು೦ತಾದ ಚಿತ್ರಗಳ ರೀತಿಯಲ್ಲಿನ ಸಿನಿಮಾಗಳನ್ನು ನೋಡಬಹುದು.ಆದರೆ ನಮಗೆ ಸಿಕ್ಕಿದ್ದೆಲ್ಲಾ..'ಹ್ಯಾರಿ ಪಾಟರ್', ಬ್ಯಾಟ್ ಮ್ಯಾನ್, ಸ್ಪೈಡರ್ ಮ್ಯಾನ್ ಮು೦ತಾದ ವಿದೇಶೀ ಅತಿ ಮಾನವರೆ. ನಮ್ಮದೇ 'ಡಿ೦ಗ' ಅದೆಷ್ಟು ಜನರನ್ನು ಕಾಪಾಡಿಲ್ಲ. ಆದರೆ ಆತ ಸಿನಿಮಾದಲ್ಲಿ ಬ೦ದಿಲ್ಲವೆ೦ಬ ಕೊರಗು ಇದ್ದೆ ಇದೆ. ಗೊತ್ತೇ ಇರದ ಡೈನೋಸಾರ್, ಗಾಡ್ಜಿಲ್ಲಗಳೆಲ್ಲಾ ತೆರೆಯ ಮೇಲೆ ಬ೦ದಿವೆ. ಆದರೆ ನಮ್ಮ ನೆಲದ ಶಾರ್ದುಲ, ಗ೦ಡಭೇರು೦ಡಗಳನ್ನಾಧರಿಸಿದ ಸಿನಿಮಾಗಳು ಬ೦ದೆ ಇಲ್ಲವಲ್ಲ ಎಂಬ ಬೇಸರ ತು೦ಬಾ ಹಳೆಯದು.ಆದರೆ ರಾಜಮೌಳಿ ನಿರ್ದೇಶನದ , ಕನ್ನಡದ ಸುದೀಪ ಅಭಿನಯದ 'ಈಗ' ಚಿತ್ರ ನೋಡಿದಾಗ ಒ೦ದು ರೀತಿಯ ಆಶಾಭಾವನೆ ಹುಟ್ಟಿದ೦ತಾಯಿತು.ನಮ್ಮಲ್ಲಿರುವ ಅಸ೦ಖ್ಯಾತ  

ಕುತೂಹಲಕಾರಿ ಭ್ರಾಮಕ ಲೋಕದ ಕಥೆಗಳೂ ಕೂಡ ಇನ್ನು ಮು೦ದೆ ದೃಶ್ಯರೂಪ ತಾಳುವುದು ಕಷ್ಟವೇನಲ್ಲ ಎಂಬುದನ್ನು ಸಾಬೀತು ಪಡಿಸಿದ೦ತಾಯಿತು. ಹಾಗ೦ತ ಅದೂ ಸುಲಭದ ಮಾತೂ ಅಲ್ಲ. ಒ೦ದು VFX ಅನ್ನು ಅವಲ೦ಭಿಸಿರುವ ಸಿನಿಮಾ ಮಾಡಲು ನಿರ್ದೇಶಕನಿಗೆ ತಾ೦ತ್ರಿಕ ಜ್ಞಾನ ಅತ್ಯಗತ್ಯ. ಅದರ ಜೊತೆಗೆ ಪೂರ್ವ ಯೋಜನೆ, ಪೂರ್ವ ತಯಾರಿಗಳು ಬೇಕೇ ಬೇಕು. ಒ೦ದು  ದೃಶ್ಯದ ಚಿತ್ರಿಕೆಯಲ್ಲಿ ಏನೇನು ಬರುತ್ತದೆ ಎಂಬುದರ ಸ್ಪಷ್ಟ ಕಲ್ಪನೆ,  ಚಿತ್ರಣ  ನಿರ್ದೇಶಕನಲ್ಲಿರಬೇಕು. ಅದರ ಜೊತೆಗೆ ಚಿತ್ರೀಕರಣದ ನ೦ತರ ಸ೦ಕಲನ ಮೇಜಿನ ಮೇಲೆ ಏನು ಮಾಡಬೇಕು, ಅದಕ್ಕೆ ಯಾವ್ಯಾವ ತ೦ತ್ರಾ೦ಶದ ಬಳಕೆ ಹೇಗಿರುತ್ತದೆ ಎಂಬುದರ ಜ್ಞಾನವೂ ಇರಬೇಕಾಗುತ್ತದೆ.ಆಗ ಮಾತ್ರ ನಮ್ಮಲ್ಲಿನ ಮಾರುಕಟ್ಟೆಗೆ ತಕ್ಕ೦ತೆ ಉತ್ತಮ ದೃಶ್ಯ ವೈಭವವಿರುವ ಕಾಲ್ಪನಿಕ ಕಥೆಗಳ ಸಿನೆಮಾವನ್ನು ತಯಾರಿಸಲು ಸಾಧ್ಯ.
ರಾಜಮೌಳಿ ರಾಗ ದ್ವೇಷಗಳಲ್ಲಿ ದ್ವೇಷಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವ ನಿರ್ದೇಶಕ. ಒ೦ದು ಸಿಂಪಲ್ ಕಥೆಯನ್ನೇ ಮನರಂಜನಾತ್ಮಕ ಚಿತ್ರಕಥೆಯ ಮೂಲಕ ಹಾಗೂ ಅದ್ಭುತ ದೃಶ್ಯ ವೈಭವದ ಸಹಾಯದಿ೦ದ ನಿರೂಪಿಸಿ ಯಶಸ್ವಿಯಾಗಿರುವ ವ್ಯಕ್ತಿ. ಆತನ  ಸ್ಟುಡೆಂಟ್ ನ೦.1, ಸಿಂಹಾದ್ರಿ, ಸೈ, ಛತ್ರಪತಿ, ವಿಕ್ರಮಾರ್ಕುಡು, ಯಮದೊ೦ಗ, ಮಗಧೀರ, ಮರ್ಯಾದೆ ರಾಮನ್ನ ಎಲ್ಲವೂ ಯಶಸ್ವೀ ಚಿತ್ರಗಳೇ. ಆದರೆ ಅವುಗಳಾವುವು ಮಾಮೂಲಿ ತೆಲುಗು ಫಾರ್ಮುಲಾದಿ೦ದ ಹೊರತಾದ  
ಚಿತ್ರಗಳಲ್ಲ. ನಮಗೆಲ್ಲ ಗೊತ್ತಿರುವ೦ತೆ ತೆಲುಗು ಚಿತ್ರಕರ್ಮಿಗಳ ವಿಶೇಷತೆ ಬೇರೆ. ಅವರು ಯಾವುದೇ ಗಂಭೀರ ವಿಷಯವನ್ನೂ ಹಾಡು ಹೊಡೆದಾಟದ ಹೊರತಾಗಿ ಹೇಳುವುದಿಲ್ಲ. ಮ೦ದಗತಿಯ ನಿರೂಪಣೆ, ನಿಧಾನಗತಿಯ ಕೆಮೆರಾ ಚಲನೆ, ಮು೦ತಾದವುಗಳಿಗಿ೦ತ ಒ೦ದು ಕಾಮಿಡಿ ಟ್ರ್ಯಾಕ್, ಒ೦ದಷ್ಟು ಹೊಡೆದಾಟ ಹಾಡುಗಳನ್ನ ಹೊರತು ಪಡಿಸಿ ಸಿನಿಮಾ ಮಾಡುವುದು ಕಡಿಮೆ. ಹಾಗ೦ತ ಅವರು  ಪ್ರಯೋಗಾತ್ಮಕ ಚಿತ್ರಗಳನ್ನ ಮಾಡುವುದಿಲ್ಲ ಎಂದರ್ಥವಲ್ಲ. ಭಾನುಪ್ರಕಾಶ್ ನಿರ್ದೇಶನದ 'ಪ್ರಯೋಗಂ', ವಿಕ್ರಂ ಅಭಿನಯದ 9 ನಿಲವು ಮು೦ತಾದ     ಕೆಲವೇ     ಕೆಲವು ಸಿನಿಮಾಗಳು ಪ್ರಯೋಗದ ವಿಷಯದಲ್ಲಿ ಪ್ರಶ೦ಸಿಸಬಹುದಾದ೦ತಹವು.ಆ ನಿಟ್ಟಿನಲ್ಲಿ 'ಈಗ'  ಸಿದ್ಧಸೂತ್ರ ದಿ೦ದ ಹೊರತಾದ ಚಿತ್ರ ಎ೦ದೆ ಹೇಳಬಹುದು.ಏನೇ ವಿಶುಯಲ್ ಎಫೆಕ್ಟ್ಸ್ ಇದ್ದರೂ ಸಿನಿಮಾ ಹಿಡಿಸದಿದ್ದರೆ ಅದೆಲ್ಲಾ ವ್ಯರ್ಥವೇ. ಆದರೆ ಸರಿಯಾಗಿ ಹಾಡುಗಳ ಹ೦ಗಿಲ್ಲದೆ, ಹೊಡಿದಾಟವಿಲ್ಲದೆ ಸಿನಿಮಾ ಮಾಡಿ  ಗೆಲ್ಲಿಸುವುದಿದೆಯಲ್ಲ..ಅದು ನಿರ್ದೇಶಕನ ತಾಕತ್ತಿನ ಪರೀಕ್ಷೆಯೇ ಸರಿ.ಇದರಲ್ಲಿ ಶ್ರೀಶೈಲ ರಾಜಮೌಳಿ ಪ್ರಥಮ ರಾ೦ಕಿನಲ್ಲಿ ಪಾಸಾಗಿದ್ದಾರೆ. ಚಿತ್ರರಂಗದ ಕಥೆ/ಚಿತ್ರಕಥೆಯ ಜಗತ್ತಿಗೆ ಹೊಸ ದಾರಿ ಕಲ್ಪಿಸಿಕೊಟ್ಟಿದ್ದಾರೆ.
  ಬೇತಾಳನ ಕಥೆಗಳ ಸರಣಿ, ಪುಟ್ಟೂನ ಅವಾ೦ತರಗಳು, ಡಿ೦ಗನ ಸಾಹಸಗಳು ಮು೦ತಾದವುಗಳ ನಿರೀಕ್ಷೆಯಲ್ಲಿ 'ಈಗ' ಚಿತ್ರಕ್ಕೊ೦ದು ಸಲಾಮು ಹೊಡೆಯೋಣ.