Tuesday, May 7, 2013

ನಾಲ್ಕು ಸಣ್ಣ ಕಥೆ, ಒಂದು ದೊಡ್ಡ ಚಿತ್ರ..


 ಒಂದು ಸಿನಿಮಾ..ಅದರಲ್ಲಿ ನಾಲ್ಕು ಕಥೆಗಳು. ಈ ತರಹದ ಪ್ರಯೋಗ ಕನ್ನಡದ ಜೊತೆಗೆ ಬೇರೆಲ್ಲಾ ಭಾಷೆಯಲ್ಲೂ ಬಂದಿವೆ. ಬಾಲಿವುಡಿನಲ್ಲಿ ಇದಕ್ಕೂ ಮುನ್ನ ದಸ್ ಕಹಾನಿಯಾ ಎಂಬೊಂದು ಸಿನಿಮಾ ಬಂದಿತ್ತು. ಹಾಗೆ ಡರ್ನಾ ಮನಾ ಹೈ, ಡರ್ನಾ ಜರೂರಿ ಹೈ ಮೊನ್ನೆ ಮೊನ್ನೆ ಬಂದ ಡೇವಿಡ್ ಕೂಡ ಇದೇ ಪಟ್ಟಿಗೆ ಸೇರುವ ಚಿತ್ರಗಳು. ಬಾಂಬೆ ಟಾಕೀಸ್ ಚಿತ್ರದಲ್ಲಿ ನಾಲ್ಕು ಕಥೆಗಳಿವೆ. ಇಲ್ಲಿನ ವಿಶೇಷವೆಂದರೆ ನಾಲ್ಕು ಕಥೆಗಳ ನಿರ್ದೇಶಕರೂ ಬೇರೆ. ಹಾಗಾಗಿಯೇ ನಾಲ್ಕು ಭಿನ್ನರುಚಿಯ ನಿರ್ದೇಶಕರು ಒಂದೇ ಸಿನಿಮಾದಲ್ಲಿನ ನಾಲ್ಕು ಕಥೆಗಳನ್ನು ಕಟ್ಟಿಕೊಟ್ಟಿರುವುದು ಸಿನಿಮಾದ ಗುಣಮಟ್ಟವನ್ನು ಹೆಚ್ಚಿಸಿರುವುದರ ಜೊತೆಗೆ ಚಿತ್ರವನ್ನು ರಂಜನೀಯವಾಗಿಯೂ ಮಾಡುವಲ್ಲಿ ಯಶಸ್ವಿಯಾಗಿದೆ.
ಕರಣ್ ಜೋಹರ್ ತಮ್ಮ ವೈಭವಯುತ ಕೌಟುಂಬಿಕ ಚಿತ್ರಗಳಿಗೆ ಹೆಸರುವಾಸಿ. ಆದರೆ ಕರಣ್ ಇಲ್ಲಿ ತಮ್ಮ
ಎಂದಿನ ಶೈಲಿಯ ಚಿತ್ರೀಕರಣಕ್ಕೆ ಮೊರೆ ಹೋಗಿಲ್ಲ.ಅಜೀಬ್ ದಾಸ್ತಾನ್ ಹೈ ಯೆ ಹೆಸರಿನ ಕಥೆಯನ್ನು ಕರಣ್ ತುಂಬಾ ನೈಜವಾಗಿ ಚಿತ್ರೀಕರಿಸಿದ್ದಾರೆ. ನಗರದ ದಂಪತಿಗಳ ಸಹಬಾಳ್ವೆ ಅಥವಾ ಹಾಗೆ ನಟಿಸುವ ಹೊಂದಾಣಿಕೆ ಅನಿವಾರ್ಯತೆಗಳನ್ನು ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ಇಬ್ಬರ ನಡುವೆ ಮೂರನೆಯವರ ಪ್ರವೇಶವಾದಾಗ ಆಗುವ ವ್ಯತ್ಯಾಸಗಳನ್ನು ತುಂಬಾ ಚೆನ್ನಾಗಿ ತೆರೆದಿಟ್ಟಿದ್ದಾರೆ ನಿರ್ದೇಶಕರು. ರಾಣಿ ಮುಖರ್ಜಿ, ರಣದೀಪ್ ಹೂಡಾ ಮತ್ತು ಸಾಕಿಬ್ ಸಲೀಮ್ ರವರ ಪೈಪೋಟಿಯ ಅಭಿನಯ ಮತ್ತು ಸಂಭಾಷಣೆ ಈ. ಚಿತ್ರಣದ ಹೈಲೈಟ್.
ಗ್ಯಾಂಗ್ಸ್ ಆಫ್ ವಾಸ್ಸೇಪುರ್ ಚಿತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದ ನವಾಜುದ್ದಿನ್ ಸಿದ್ದಿಕಿ ಪ್ರತಿಭೆಯನ್ನು ನಿರ್ದೇಶಕ ದಿಬಾಕರ್ ಬ್ಯಾನರ್ಜಿ ಸ್ಟಾರ್ ಕಥೆಯಲ್ಲಿ ಪರಿಪೂರ್ಣವಾಗಿ ಬಳಸಿಕೊಂಡಿದ್ದಾರೆ ಎನ್ನಬಹುದು. ಇದು ಭಾರತೀಯ ಚಿತ್ರರಂಗ ಕಂಡ ಖ್ಯಾತ ನಿರ್ದೇಶಕ ಸತ್ಯಜಿತ್ ರೇ ರವರ ಕಥೆಯನ್ನಾಧರಿಸಿದ್ದು. ಒಬ್ಬ ಮಹತ್ವಾಕಾಂಕ್ಷಿ ಕಲಾವಿದನೊಬ್ಬ ತನ್ನ ಪ್ರತಿಭೆಯ ಅನಾವರಣದ ಅವಕಾಶಕ್ಕಾಗಿ ಪರಿತಪಿಸುವ ವಸ್ತುವನ್ನು ಹೊಂದಿರುವ ಈ ಕಥೆಯ ನಿರೂಪಣೆ, ಚಿತ್ರಕಥೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಂತ್ಯ ಶಕ್ತಿಯುತವಾಗಿದೆ.
ಇನ್ನು ಜೋಯಾ ಅಖ್ತರ್ ನಿರ್ದೇಶನದ ಶೀಲಾ ಕಿ ಜವಾನಿ, ಅನುರಾಗ್ ಕಶ್ಯಪ್ ನಿರ್ದೇಶನದ ಮುರಬ್ಬ ಹೆಚ್ಚು ಕಡಿಮೆ ಒಂದೇ ನೆಲಗಟ್ಟಿನ ಕಥೆಯನ್ನಾಧರಿಸಿದೆ ಎನ್ನಬಹುದು. ಎರಡೂ ಕಥೆಯಲ್ಲಿ ಚಲನಚಿತ್ರದ ಸೂಪರ್ ಸ್ಟಾರ್ ಗಳು ಬಹುಮುಖ್ಯ ಪಾತ್ರವಹಿಸುವ ಮೂಲಕ ಜನಸಾಮಾನ್ಯ ಮತ್ತು ಜನಪ್ರಿಯ ವ್ಯಕ್ತಿಗಳ ನಡುವಿನ ಬಾಂಧವ್ಯವನ್ನು ಎತ್ತಿತೋರಿಸುವ ಪ್ರಯತ್ನ ಮಾಡುತ್ತವೆ.
ಚಿತ್ರದಲ್ಲಿನ ನಾಲ್ಕು ಕಥೆಗಳು ಭಿನ್ನ ಭಿನ್ನ ಶೈಲಿಯವುದಾದರೂ ಕಥೆಯಲ್ಲಿನ ಭಾವ, ಭಾವುಕತೆ ಮಾತ್ರ ಒಂದೆ ಎನ್ನಬಹುದು. ಒಬ್ಬ ವ್ಯಕ್ತಿಯ ಮೂಲಕ ಇಡೀ ಕುಟುಂಬದ ಆಗುಹೋಗುಗಳನ್ನು ಸಮಾಜದ ವಿವಿಧ ಸ್ತರಗಳ ನಡುವಣ ಸಾಮ್ಯ ಮತ್ತು ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ತೆರೆದಿಡುವ ಪ್ರಯತ್ನವಂತೂ ನಾಲ್ಕು ಕಥೆಯಲ್ಲಿ ಎದ್ದುತೋರುತ್ತದೆ. ಒಂದೊಂದು ಕಥೆಯ ಹಿನ್ನೆಲೆಯೂ ಬೇರೆ ಬೇರೆ. ಆದರೆ ಕಥೆಯಲ್ಲಿನ ಸತ್ವ ಮತ್ತು ಅಭಿನಯ ನಮಗೆ ನಾಲ್ಕು ಕಥೆಗಳೂ ಒಂದಕ್ಕೊಂದು ಬಸೆದುಕೊಂಡಂತೆ ಭಾಸವಾಗುತ್ತದೆ. 
ಈ ಚಿತ್ರದಲ್ಲಿನ ಇನ್ನೊಂದು ಅಚ್ಚರಿಯಂದರೆ ನಿರ್ದೇಶಕರುಗಳು. ನಾಲ್ಕೂ ನಿರ್ದೇಶಕರೂ ಅವರದೇ ಆದ ಕಥಾ ನಿರೂಪಣೆ, ಶೈಲಿಗೆ ಹೆಸರುವಾಸಿಯಾದವರು. ಮತ್ತವರ ಅಭಿರುಚಿಯೂ ಭಿನ್ನವಾದದ್ದು. ಆದರೆ ಈ ಚಿತ್ರದಲ್ಲಿ ಅವರು ಆಯ್ದುಕೊಂಡಿರುವ ಕಥೆ ಅವರದೇ ಅಭಿರುಚಿಯದಾದರೂ ನಿರೂಪಣೆಯಲ್ಲಿ ಮಾತ್ರ ತಮ್ಮ ಜಾಡನ್ನು ಸ್ವಲ್ಪ ಸಡಿಲಗೊಳಿಸಿದ್ದಾರೆ ಎನ್ನಬಹುದು. ಹಾಗಾಗಿಯೇ ನಾವು ನೋಡಿದ್ದ ಕರಣ್ ಜೋಹರ್ ಇಲ್ಲಿ ನಮಗೆ ಭಿನ್ನವಾಗಿ ಕಾಣಿಸುತ್ತಾರೆ. ಅನುರಾಗ್ ಕಶ್ಯಪ್ ತಮ್ಮ ಎಂದಿನ ನಿರೂಪಣಾ ಶೈಲಿಯಲ್ಲೇ ಮುಂದುವರೆದಿದ್ದರೂ ಕಥೆಯಲ್ಲಿನ ಗಟ್ಟಿತನದಿಂದಾಗಿ ನಮ್ಮೊಳಗಿನ ಪ್ರೇಕ್ಷಕನನ್ನು ತಣಿಸುವಲ್ಲಿ ಯಶಸ್ವಿಯಾಗುತ್ತಾರೆ.
ಚಿತ್ರದ ಕೊನೆಯ ಹಾಡು ಬೋನಸ್ ಎಂದುಕೊಳ್ಳಬಹುದು. ಹಾಗೆ ಶತಮಾನೋತ್ಸವ ಆಚರಿಸುತ್ತಿರುವ ಭಾರತೀಯ ಚಿತ್ರರಂಗಕ್ಕೆ ಬಾಂಬೇ ಟಾಕೀಸ್ ಅದ್ಭುತ ಕೊಡುಗೆ ಎನ್ನಬಹುದು. ಸಿನಿಮಾಸಕ್ತರು ಒಮ್ಮೆ ನೋಡಲೇಬೇಕಾದ ಚಿತ್ರವಿದು. 

ಒಂದು ಚಲನ 'ಚಿತ್ರ'ಹಿಂಸೆ......

ಇತ್ತೀಚಿಗೆ ಒಂದಷ್ಟು  ಕನ್ನಡ ಚಿತ್ರಗಳು ಬಿಡುಗಡೆಯಾದವು. ಕೆಲವು ಸಿನಿಮಾಗಳು ಯಾವುದೇ ಕುತೂಹಲ ಹುಟ್ಟಿಸುವುದಿಲ್ಲ. ಹಾಗಂತ ಆ ಸಿನಿಮ ಕೆಟ್ಟ ಚಿತ್ರ ಎಂದು ಹೇಗೆ ಹೇಳುವುದು. ಬರೀ ಪೋಸ್ಟರ್ ನೋಡಿ , ಆ ಸಿನಿಮಾವನ್ನೇನು ನೋಡುವುದು ಎಂದು ಮೂಗು ಮುರಿಯುವುದು ಎಷ್ಟು ಸರಿ. ಒಂದೊಳ್ಳೆ ಬಜೆಟ್ ಇದ್ದಾಗ ಕೆಟ್ಟ ಚಿತ್ರವನ್ನೂ ಜನರಿಗೆ ತಲುಪಿಸಿ ಅವರು ಚಿತ್ರಮಂದಿರಕ್ಕೆ ಬರುವಂತೆ ಮಾಡಿ, ಆಮೇಲಿಂದ ಎಕ್ಕಾ ಮಕ್ಕಾ ಉಗಿಸಿಕೊಂಡು ಹೋದ ಅದೆಷ್ಟು ನಿರ್ದೇಶಕರಿಲ್ಲ...ಸಿನೆಮಾಗಳಿಲ್ಲ.
 ಆದರೆ ಕೆಲವು ಸಿನೆಮಾಗಳನ್ನು ಅದೆಷ್ಟು ಕೇವಲವಾಗಿ, ಬೇಜವಾಬ್ದಾರಿಯಿಂದ[ಬಹುಶ ಅವರು ತೀರಾ ಗಂಭೀರವಾಗಿಯೇ ತೆಗೆದುಕೊಂಡಿರುತ್ತಾರೇನೋ..?} ಮಾಡಿರುತ್ತಾರೆಂದರೆ ಅವರ ಮೇಲೆ ಬೇಸರ ಉಂಟಾಗುವುದಿಲ್ಲ. ಬದಲಿಗೆ ಹುಚ್ಚು ಕೋಪ ನೆತ್ತಿಗೇರಿ, ಸಿನಿಮಾದ ಮೇಲೆಯೇ ಜಿಗುಪ್ಸೆ ಬಂದುಬಿಡುತ್ತದೆ.
ಬರೀ ಒಳ್ಳೊಳ್ಳೆಯ, ನೋಡಲೇಬೇಕಾದ ಸಿನೆಮಾಗಳ ಪರಿಚಯವನ್ನೇ ಎಷ್ಟೂಂತ ಮಾಡೋದು ಎಂದು ನನಗೂ ಕೆಲವೊಮ್ಮೆ ಅನಿಸಿದ್ದಂತೂ ನಿಜ.ಹಾಗಾಗಿ ಎಷ್ಟೋ ಅಸಹನೀಯ ಚಿತ್ರಗಳನ್ನು ನೋಡಿದ್ದರು ಬರೆದು ಎಲ್ಲರಿಗೂ ಹಿಂಸೆ ಕೊಡಲು ಮನಸ್ಸು ಬಂದಿರಲಿಲ್ಲ. ಈಗ ಮೊನ್ನೆ ಮೊನ್ನೆ ಒಂದು ಸಿನೆಮಾ ನೋಡಿದೆ. ಮೊದಲೇ ಹೇಳಿದಂತೆ ನಾನು ಬಂದ ಸಾಧ್ಯವಾಗುವ ಎಲ್ಲಾ ಸಿನೆಮಾಗಳನ್ನೂ ನೋಡುತ್ತೇನೆ.
ಅದರ ಹೆಸರು ಬೆಂಕಿ ಬಿರುಗಾಳಿ. ಅದರ ಪೋಸ್ಟರ್ ಗಳನ್ನೂ ನೀವೀಗಾಗಲೇ ನೋಡಿರುತ್ತೀರಿ. ಅದರ ಬಗ್ಗೆ ಕೇಳುವ ಉತ್ಸಾಹ ಆಸಕ್ತಿ ನಿಮಗಿಲ್ಲ ಅನಿಸುತ್ತದೆ. ಆದರೆ ಅದನ್ನೇ ಏಕೆ ಗಂಭೀರವಾಗಿ ವಿಮರ್ಶೆ ಮಾಡಬಾರದು ಎನಿಸಿತು. ಅದೂ ಒಂದು ಈ ಹಾಳಾದ ಬದುಕಲ್ಲಿ ನಡೆದು ಹೋಗಲಿ ಎಂದು ಬರೆದ ಲೇಖನವಿದು.
ಇನ್ನುಮುಂದಿನದ್ದನ್ನು ನೀವು ಓದಬಹುದು..ಅಥವಾ ಓದದಿದ್ದರೂ..ನಿಮ್ಮಿಷ್ಟ.

ಬೆಂಕಿ ಬಿರುಗಾಳಿ.....ನೋಡುಗನ ನರಬಲಿ..!!
ಕೆಲವು ಚಿತ್ರಕರ್ಮಿಗಳು ಪ್ರಯೋಗ, ಹೊಸತನದ ನೆಪದಲ್ಲಿ ಸಿನಿಮಾವನ್ನು ಹೇಗೇಗೋ ತೆಗೆಯುವುದುಂಟು. ಹಾಗೆ ಕೆಲವು ಸಿನೆಮಾ ಜ್ಞಾನವಿರದ ಮಂದಿ ಅವಕಾಶವಿದೆಯೆಂದು ತಮ್ಮ ಅಡ್ಡಕಸುಬಿತನವನ್ನು ಸಿನಿಮಾದಲ್ಲಿ ತೋರಿಸುವುದೂ ಉಂಟು.ಇದು ಎರಡನೆಯ ವಿಭಾಗಕ್ಕೆ ಸೇರಿದ ಸಿನಿಮಾ. ಉದಾಹರಣೆಗೆ ಒಂದು ದೃಶ್ಯವಿದೆ ಚಿತ್ರದಲ್ಲಿ. ನಿರ್ದೇಶಕ ಚಿತ್ರದಲ್ಲಿ ನಿರ್ಮಾಪಕನಿಗೆ ಕಥೆ ಹೇಳುತ್ತಿದ್ದಾನೆ. ಅದನ್ನು ಅಲ್ಲೇ ಕೇಳಿಸಿಕೊಳ್ಳುತ್ತಿದ್ದ ಮಾಜಿ ನಿರ್ಮಾಪಕನೊಬ್ಬ ನಾಯಕ ಕಮ್ ನಿರ್ದೇಶಕನ ಹತ್ತಿರ ಬಂದು ’ಸಾರ್..ನಾನು ಒಂದು ಕಾಲದ ನಿರ್ಮಾಪಕ..ಆ ಸಂದರ್ಭದಲ್ಲಿ ಈಕೆಗೆ ಅವಕಾಶಕೊಡುತ್ತೇನೆ ಎಂದು ಪ್ರಮಾಣ ಮಾಡಿದ್ದೆ..ನಿಮ್ಮ ಚಿತ್ರದಲ್ಲಿ ಈಕೆಗೊಂದು ಅವಕಾಶಕೊಡಿ ..” ಎನ್ನುತ್ತಾನೆ. ಆಗ ನಿರ್ದೇಶಕ ಅದಕ್ಕೇನಂತೆ ಎಂದದ್ದೇ ಆಕೆಯ ಜೊತೆಗೊಂದು ಡುಯೆಟ್ ಹಾಡಿಬರುತ್ತಾನೆ. ನೆನಪಿರಲಿ
ಸಿನಿಮಾದಲ್ಲಿನ ಕಥೆಗೂ ಈ ಹಾಡಿಗೂ ಯಾವ ಸಂಬಂಧವೂ ಇಲ್ಲ. ಒಂದು ಸಿನಿಮಾವನ್ನು ಇಷ್ಟಬಂದಹಾಗೆ ಚಿತ್ರೀಕರಿಸುವುದೆಂದರೇ ಇದೇ ಇರಬೇಕು. ಹಾಗೆಯೇ ಇಡೀ ಸಿನಿಮಾದ ಕಥೆ, ನಿರೂಪಣೆ ನೋಡುಗನಲ್ಲಿ ಬರೇ ಬೇಸರವನ್ನ ತರುವುದಷ್ಟೇ ಅಲ್ಲ ಅದರ ಕರ್ತೃವಿನ ಮೇಲೆ ಅಸಾಧ್ಯ ಕೋಪವನ್ನ ಉಂಟುಮಾಡದೇ ಇರುವುದಿಲ್ಲ. ಬಹುಷ ಇಂತಹ ಇನ್ನೊಂದಷ್ಟು ಚಿತ್ರಗಳು ಬಂದುಬಿಟ್ಟರೇ ಸಾಕು ಪ್ರೇಕ್ಷಕನಿಗೆ ಕನ್ನಡ ಚಿತ್ರವೆಂದರೇ ಹೇವರಿಕೆ ಉಂಟಾಗಿಬಿಡುತ್ತದೆ.
ಚಿತ್ರ ಹೇಗೋ ಪ್ರಾರಂಭವಾಗುತ್ತದೆ. ಹಾಗೆಯೇ ಅರ್ಥಹೀನವಾಗಿ ಮುಗಿಯುತ್ತದೆ.ಇದರ ಮಧ್ಯ ಒಂದಷ್ಟು ಹಾಡುಗಳೂ ಹೊಡೇದಾಟಗಳೂ ಬಂದು ಹೋಗಿರುತ್ತವೆ. ನಾಯಕ ಒಬ್ಬನೇ ಆದರೂ ನಾಯಕಿಯರಿಗೇನೂ ಬರವಿಲ್ಲ. ರೇಖಾ,ನಮಿತ,ಸಂಧ್ಯಾ, ರಿಶಿಕಾ, ಶ್ವೇತಾ ಹೀಗೆ ಸುಂದರಿಯರ ದಂಡೇ ಇದೆ. ಕಾರಣವಿಲ್ಲದಿದ್ದರೂ ಎಲ್ಲರೂ ನಾಯಕನೊಂದಿಗೆ ಹಾಡಿ, ಕುಣಿಯುತ್ತಾರೆ. ಆದರೆ ಹಾಡಾಗಲಿ ಸಾಹಿತ್ಯವಾಗಲಿ ನಿಮಗೆ ಎಳ್ಳಷ್ಟೂ ಇಷ್ಟವಾಗುವುದಿಲ್ಲ. ಹಾಗೆ ಕೇಡಿಗಳೂ ಇದ್ದಾರೆ. ಮುಲಾಜಿಲ್ಲದೇ ನಾಯಕ ಹೊಡದಾಡುತ್ತಾನೆ. ಯಾಕೆ ಹೊಡೆದ, ಅವನ ಹೋರಾಟದ ಹಿಂದಿನ ಗುಟ್ಟೇನು ಎಂಬುದನ್ನು ನಿರ್ದೇಶಕ ಮಹಾಶಯರು ತಾವೇ ವಿವರಿಸಬೇಕು. ಇಷ್ಟಕ್ಕೂ ಚಿತ್ರದಲ್ಲಿನ ಕಥೆ ಏನು? ಎಂಬ
ಕುತೂಹಲ ನಿಮ್ಮನ್ನು ಕಾಡಬಹುದು. ಅನುರಾಗ್ ಬಸು ನಿರ್ದೇಶನದ ಗ್ಯಾಂಗ್ ಸ್ಟರ್ ಚಿತ್ರ ನಿಮಗೆ ನೆನಪಿರಬೇಕು. ಅತ್ಯುತ್ತಮ ಚಿತ್ರಕಥೆ,ಅದ್ಭುತ ಹಾಡುಗಳಿದ್ದ ಚಿತ್ರ ಅದು. ಬೆಂಕಿ ಬಿರುಗಾಳಿ ಆ ಚಿತ್ರದ ಕೆಟ್ಟ ರೀಮೇಕ್ ಎನ್ನಬಹುದು. ಅದೇ ಕಥೆಯ ಜೊತೆಗೆ ತಮ್ಮದೂ ಒಂದಷ್ಟು ಅಸಹನೀಯ ತಿರುವುಗಳನ್ನು ಸೇರಿಸಿ ಕಲಸುಮೇಲೋಗರ ಮಾಡಿದ್ದಾರೆ ನಿರ್ದೇಶಕರು.
ಚಿತ್ರದ ಯಾವ ವಿಭಾಗದ ಕೆಲಸದ ಬಗ್ಗೆಯೂ ಮಾತಾಡುವುದು ಹಾನಿಕಾರಕ. ಈ ಚಿತ್ರನೋಡಲು ಹೋದರೆ ಬರೀ ದುಡ್ಡು, ಸಮಯವಷ್ಟೇ ವ್ಯರ್ಥವಾಗುವುದಿಲ್ಲ. ಜೊತೆಗೆ ಮನಸ್ಥಿತಿಯೂ ಕುಲಗೆಟ್ಟುಹೋಗುವುದರಲ್ಲಿ ಸಂಶಯವಿಲ್ಲ. ನಿರ್ದೇಶಕ, ನಾಯಕ, ಕಥೆಗಾರ, ಸಂಭಾಷಣೆಗಾರ ಬಶೀದ್ ಯಾವ ವರ್ಗದ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟಕೊಂಡು ಈ ಚಿತ್ರವನ್ನ ಕಲ್ಪಿಸಿಕೊಂಡರೋ ಅವರಿಗೇ ಗೊತ್ತು. ಅಷ್ಟೆಲ್ಲಾ ತಂತ್ರಜ್ಞರು, ಕಲಾವಿದರು ಮತ್ತು ಹಣವನ್ನಿಟ್ಟುಕೊಂಡು ಎಲ್ಲಾ ರೀತಿಯಿಂದಲೂ ಇದಕ್ಕಿಂತ ಕೆಟ್ಟ ಚಿತ್ರ ನಿರ್ಮಿಸಲು ಸಾಧ್ಯವಿಲ್ಲ . ಹಾಗಾಗಿ ಬಶೀದ್ ಆ ವಿಷಯದಲ್ಲಿ ದಾಖಲೆ ಮಾಡಿದ್ದಾರೆ ಎನ್ನಬಹುದು.

ರಹಸ್ಯಮಯ ರೀಮೇಕುಗಳು...

ರೀಮೇಕ್ ಎಂಬುವುದು ಚಿತ್ರರಂಗದಲ್ಲಿ ಸರ್ವೇ ಸಾಮಾನ್ಯ. ಬಹುತೇಕ ಎಲ್ಲಾ  ದೇಶದ, ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ರೀಮೇಕ್ ಎನ್ನುವುದು ಇದ್ದಇದೆ. ಯಾವುದೋ ಕಥೆ ಸಿನೆಮಾಕ್ಕೆ ತಕ್ಕುದಾದರೆ ಅದನ್ನು ಸಿನೆಮಾರೂಪಕ್ಕೆ ತರಲು ಒಬ್ಬ ಚಿತ್ರಕರ್ಮಿ ಮುಂದಾಗುತ್ತಾನೆ. ಇಲ್ಲಿ ಕಥೆ ಯಾವುದೇ ಭಾಷೆಯದಾದರೂ ಅಭ್ಯಂತರವಿರುವುದಿಲ್ಲ. ಹಾಗೆಯೇ ರೀಮೇಕ್.  ಈಗಾಗಲೇ ಬೇರೆ ಭಾಷೆಯಲ್ಲಿ ಬಂದ ಚಿತ್ರವೂ ನಮ್ಮ ನಾಡಿಗೆ ಭಾಷೆಗೆ ಅಗತ್ಯ ಎನಿಸಿದಾಗ ಅದನ್ನು ಪುನರ್ನಿರ್ಮಾಣ ಮಾಡುವುದು ತಪ್ಪಲ್ಲ. ಆದರೆ ಕೇವಲ ಯಶಸ್ಸನ್ನಷ್ಟೇ ಮಾನದಂಡವನ್ನಾಗಿಟ್ಟುಕೊಂಡು ಸ್ವಂತ ಕಥೆ ಮಾಡುವ ರಿಸ್ಕು ತೆಗೆದುಕೊಳ್ಳದೆ ಸುಖಾ ಸುಮ್ಮನೆ ರೀಮೇಕ್ ಮಾಡುವುದು ಸೃಜನಶೀಲತೆಯ ದಾರಿದ್ರ್ಯ ಎನ್ನಬಹುದು.ಟೈಟಾನಿಕ್ ಚಿತ್ರ ಆರನೆಯ ಬಾರಿ ನಿರ್ಮಿತವಾದ ಚಿತ್ರ. ಹಾಗೆಯೇ ಬಹಳಷ್ಟು ಶ್ರೇಷ್ಠ ಚಿತ್ರಗಳು ಇನ್ನೊಂದು ಭಾಷೆಯಿಂದ ಬಂದವುಗಳೇ ಆಗಿವೆ. ಇನ್ನೂ ಒಂದಿದೆ. ಅದು ಸ್ಫೂರ್ತಿ.. ಒಂದು ಸಿನೆಮಾ ನೋಡುವಾಗ ಅದರಲ್ಲಿನ ಕೆಲವು ದೃಶ್ಯ, ಸನ್ನಿವೇಶಗಳಿಂದಾಗಿ ಬೇರೆಯದೇ ಆದ ಕಥೆಯೊಂದು ಹೊಳೆದುಬಿಡಬಹುದು.ಆಗ ಅದು ಸ್ಫೂತಿಯಾಗುತ್ತದೆ.ಕನ್ನಡದ ಓಂ ಚಿತ್ರ, ಹಿಂದಿಯ ಸತ್ಯ ಚಿತ್ರಕ್ಕೆ ಸ್ಫೂರ್ತಿ ಎಂದು ಸ್ವತಹ ರಾಮ್ ಗೋಪಾಲ್ ವರ್ಮರವರೆ ಹೇಳಿಕೊಂಡಿದ್ದಾರೆ. ಮೈನೆ ಪ್ಯಾರ್ ಕಿಯಾ ಚಿತ್ರಕ್ಕೆ ಪ್ರೇಮಲೋಕ ಸ್ಫೂರ್ತಿ..ಹೀಗೆ.
ಮೊನ್ನೆ ಶರಣ್ ಅಭಿನಯದ ಸುಂದರಿ ಗಂಡ ಸದಾನಂದ ಎನ್ನುವ ಸಿನೆಮಾ ವಾಹಿನಿಯೊಂದರಲ್ಲಿ ನೋಡುತ್ತಿದ್ದೆ. ನೋಡುತ್ತಾ ನೋಡುತ್ತಾ ನನಗೆ ಗೊತ್ತಾದ ವಿಷಯವೆಂದರೆ ಅದು ಹಾಲಿವುಡಿನ ಕಾಲಿನ್ ಫೆರೆಲ್ ಅಭಿನಯದ ಫೋನ್ ಬೂತ್ ಚಿತ್ರದ ಕನ್ನಡದ ಅವತರಣಿಕೆ ಎಂಬುದು. ನೋಡಿ ಒಂದು ಗಂಭೀರ, ಥ್ರಿಲ್ಲರ್ ಚಿತ್ರವನ್ನು ಹಾಸ್ಯ ಲೇಪನದ ಜೊತೆಗೆ ನಿರೂಪಿಸುವ ವಿಫಲ ಯತ್ನ ಎನ್ನಬಹುದು. ಬಹುಶ ಈ ಸಿನೆಮಾ ಫೋನ್ ಬೂತ್ ನಕಲು ಎಂಬುದು ಸುಮಾರು ಜನರಿಗೆ ಗೊತ್ತಿಲ್ಲ ಎನ್ನಬಹುದು. ಯಾಕೆಂದರೆ ಸಿನೆಮಾ ತಯಾರಕರೂ ಅದರ ಬಗ್ಗೆ ಮಾತಾಡಿಲ್ಲ, ಸಿನೆಮಾ ಜನರನ್ನೂ ತಲುಪಿಲ್ಲ. 
ಆಶಿಕಿ ಚಿತ್ರದ ಹಾಡುಗಳು ಈವತ್ತಿಗೂ ಮೈ ರೋಮಾಂಚನಗೊಳಿಸುತ್ತವೆ.ಹನ್ನೆರೆಡು ಹಾಡುಗಳೂ ಸೂಪರ್ ! ಅನು ಅಗರವಾಲ್, ರಾಹುಲ್ ರಾಯ್ ಅಭಿನಯವನ್ನು ಮರೆಯುವುದಾದರೂ ಹೇಗೆ..? ಕನ್ನಡದಲ್ಲಿ ಆಶಿಕಿ ರೋಜಾ ಎಂಬ ಹೆಸರಿನಲ್ಲಿ ಪುನರ್ನಿರ್ಮಾಣವಾಗಿದೆ ಮತ್ತು ನೀರಸವಾಗಿದೆ.
ಕೆಲವೇ ದಿನಗಳ ಹಿಂದೆ ಬೆಂಕಿ ಬಿರುಗಾಳಿ ಎಂಬೊಂದು ಸಿನಿಮಾ ಬಂದಿತ್ತು. ನನಗೋ ಆ ಸಿನೆಮಾದ ಬಗ್ಗೆ ಕೆಟ್ಟ ಕುತೂಹಲ. ಒಬ್ಬ ಅದೇಗೆ ಆ ತರಹದ ಸಿನೆಮಾ ಮಾಡಲು ಸಾಧ್ಯ..? ಮಾಡಿದ್ದರೂ ಕಥೆ ಹೇಗೆ ಹೆಣೆದಿರಬಹುದು ಎಂದು ತಲೆಕಡಿಸಿಕೊಂಡು ನೋಡಿಯೇ ಬಿಡೋಣ ಎಂದು ಚಿತ್ರಮಂದಿರಕ್ಕೆ ನುಗ್ಗಿಯೇ ಬಿಟ್ಟಿದ್ದೆ. ಅನಾಮತ್ತು ಎರಡು ಘಂಟೆಗಳ ಭರ್ಜರಿ ಮನರಂಜನೆ ಆ ಚಿತ್ರ. ತಲೆಬುಡವಿಲ್ಲದ , ಅರ್ಥಹೀನ ಸಿನೆಮಾ ಅದು. ಕನ್ನಡ ಚಿತ್ರರಂಗದ ಅಧೋಗತಿಗೆ ಅಂತಹ ನಾಲ್ಕಾರು ಚಿತ್ರಗಳು ಸಾಕು ಎಂದು ಹೇಳಬಹುದು. ಇರಲಿ. ಆದರೂ ಆ ಸಿನೆಮಾದಲ್ಲಿನ ಕಥೆ ಏನಿರಬಹುದು..? ಅದು ಯಾವುದಾದರೂ ಸಿನೆಮಾದ ಸ್ಫೂರ್ತಿಯೇ..?
ನಿಜಾಂಶ ಗೊತ್ತಾದರೆ ನೀವೇ ಬೆಚ್ಚಿ ಬೀಳುತ್ತೀರೀ..ಅನುರಾಗ್ ಬಸು ನಿರ್ದೇಶನದ ಅದ್ಭುತ ಚಿತ್ರಕಥೆಯ ಗ್ಯಾಂಗ್ ಸ್ಟರ್ ಸಿನೆಮಾ ನಿಮಗೆ ಗೊತ್ತಲ್ಲಾ..ಅದರಲ್ಲಿನ ನಿರೂಪಣೆ ಭಾವವನ್ನು ಮರೆಯಲಾದರೂ ಹೇಗೆ ಸಾಧ್ಯ..ಅದನ್ನೇ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಕನ್ನಡೀಕರಿಸಿದ್ದಾರೆ ಪುಣ್ಯಾತ್ಮರು. ಅಬ್ಬಾ ದೇವರೇ..? ಎನಿಸದಿರಲಿಲ್ಲ.
ಹೇರಾ ಪೆರಿ ಚಿತ್ರವೂ ಕನ್ನಡದಲ್ಲಿದೆ. ಆಪ್ತಮಿತ್ರಕ್ಕೂ ಮುನ್ನ ಮಣಿ ಚಿತ್ರತಾಲ್ ಚಿತ್ರವೂ ಸಾಗರಿ ಹೆಸರಲ್ಲಿ ಕನ್ನಡಕ್ಕೆ ಬಂದಿತ್ತು.ಹಾಗೆಯೇ ವರ್ಮಾ ಕಂಪನಿಯಿಂದ ಬಂದಂತಹ ಅತ್ಯುತ್ತಮ ಚಿತ್ರ ಏಕ್ ಹಸೀನಾ ತಿ ಕೂಡ ಕನ್ನಡದಲ್ಲಿ ಪ್ರೇಮ ಅಭಿನಯದಲ್ಲಿ ಬಂದಿದೆ.
ಕೆಲವು ಸಿನೆಮಾಗಳು ಮೂಲ ಭಾಷೆಯಲ್ಲಿ ಮಾಸ್ಟರ್ ಪೀಸ್ ಎನಿಸಿಕೊಳ್ಳುತ್ತವೆ.ಅವುಗಳನ್ನು ನಮ್ಮ ಭಾಷೆಗೆ ತರುವುದು ಸುಲಭದ ಕೆಲಸವಲ್ಲ. ಅಂತಹ ಸಿನೆಮಾಗಳಲ್ಲಿನ ಪಾತ್ರಧಾರಿಗಳ ಆಯ್ಕೆಯೇ ಸವಾಲಿನ ಕೆಲಸ. ಆದರೆ ಕನ್ನಡದ ಕೆಲವರು ಯಾವ ಯಗ್ಗು ಸಿಗ್ಗಿಲ್ಲದೆ ಅಂತಹ ಮಾಸ್ಟರ್ ಪೀಸ್ ಗಳನ್ನೇ ಕನ್ನಡಕ್ಕೆ ತಂದಿರುವುದು ಆಶ್ಚರ್ಯ ಎನಿಸುತ್ತದೆ.
ಇವು ನಾನು ಬಿಡುಗಡೆಯಾಗುವ ಬಹುತೇಕ ಚಿತ್ರಗಳನ್ನು ನೋಡುವುದರಿಂದ ಗೊತ್ತಾಗುತ್ತದೆ. ಆದರೆ ಗೊತ್ತಿಲ್ಲದೆಯೇ ಇನ್ನೂ ಯಾವ್ಯಾವ ಮಹಾನ್ ಚಿತ್ರಗಳು ಕನ್ನಡೀಕರಣಗೊಂಡಿವೆಯೋ..
ನಿಮ್ಮ ಅನುಭವಕ್ಕೆ ಬಂದಿರುವ ಅಂತಹ ಸಿನಿಮಾ ಯಾವುವು..?