Saturday, January 26, 2013

ಚಿತ್ರಸಂತೆಗೆ ಸ್ವಾಗತ ಕೋರುತ್ತಾ...

ಕಲಾವಿದ ವ್ಯಾನ್ ಗೋ ಒಬ್ಬ ವಿಕ್ಷಿಪ್ತನಾ..ಅಥವಾ ಹುಚ್ಚನಾ...ಎನ್ನುವ ಪ್ರಶ್ನೆ ಆತನ ಜೀವನಚರಿತ್ರೆ ಓದಿದವರನ್ನು ಕಾಡುವುದು ಸಹಜ. ಅತ್ಯಂತ ಹೀನಾಯವಾಗಿ[ಬಹುಶ ನಮ್ಮ ದೃಷ್ಟಿಯಲ್ಲಿ] ಬದುಕಿದ ಈ ಪ್ರತಿಭಾವಂತ ಕಲೆಯಲ್ಲಿ ಹೊಸದೇನನ್ನೋ ಹೇಳುವುದಕ್ಕೆ ಪ್ರಯತ್ನಿಸಿದ. ತನ್ನ ಪ್ರೇಯಸಿಗಾಗಿ ತನ್ನದೇ ಕಿವಿಯನ್ನು ಕತ್ತರಿಸಿಕೊಟ್ಟ. ಕೊಡಲಿಕ್ಕೆ ಅವನಲ್ಲಿದ್ದುದಾದರೂ ಏನು? ದಟ್ಟ ದಾರಿದ್ರ್ಯ ಅವನನ್ನು ಆವರಿಸಿತ್ತು. ಒಂದು ಹೊತ್ತಿನ ಕೂಳಿಗೂ ತತ್ವಾರ. ಆದರೂ ಸ್ವಲ್ಪ ತನ್ನ ಕಲೆಯನ್ನು ಕಮರ್ಶಿಯಲ್ ಪಥದತ್ತ ತಿರುಗಿಸಿದ್ದರೆ ವೈಭವದ ಜೀವನ ನಡೆಸಬಹುದಾಗಿತ್ತಾದರೂ ಆತನ ಚಿತ್ರಗಳಲ್ಲಿನ ವೈಭವ ಕಡಿಮೆಯಾಗುತ್ತಿತ್ತು.ಬಾಲ್ಯದಲ್ಲೇ ತನ್ನ ಚಿತ್ರಕೌಶಲ ತೋರಿಸಿದ ಗೋ ಆನಂತರ ತನ್ನ ದರಿದ್ರದ ನಡುವೆಯೂ ಮಾನಸಿಕ ವೇದನೆಗಳ ಮಧ್ಯಯೂ ಚಿತ್ರ ಬರೆಯುವುದನ್ನು ಮುಂದುವರೆಸಿದ. ಅವನ ಜೀವಿತಾವಧಿಯಲ್ಲಿ ಆಯಿಲ್ ಪೇಂಟಿಂಗ್, ವಾಟರ್ ಪೇಂಟಿಂಗ್, ಸ್ಕೆಚ್, ಡ್ರಾಯಿಂಗ್ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಚಿತ್ರ ಬಿಡಿಸಿದ ವಾನ್ ಗೋ ನೂರು ವರ್ಷವೇನೂ ಬದುಕಲಿಲ್ಲ. ಬರೀ ಮೂವತ್ತೇಳು ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡ. ಆತನ ಜೀವನವನ್ನಾಧರಿಸಿ ಬಂದ ಚಲನಚಿತ್ರಗಳೆಂದರೆ ವ್ಯಾನ್ ಗೋ [1991], ವಿನ್ಸೆಂಟ್ ಅಂಡ್ ಥಿಯೋ[1990] ಮತ್ತು ಲಸ್ಟ್ ಫಾರ್ ಲೈಫ್ [1956]. ಮೂರು ಚಿತ್ರಗಳಲ್ಲಿ ನನಗಿಷ್ಟವಾದದ್ದು ವಿನ್ಸೆಂಟ್ ಅಂಡ್ ಥಿಯೋ. ಕಾರಣ ಅದರಲ್ಲಿನ ನಾಯಕ ಟಿಮ್ ರೋತ್ ನಟನೆ.ವ್ಯಾನ್ ಗೋ ಚಿತ್ರವು ಗೊನ ಕೊನೆಯ ದಿನಗಳ ಬಗೆಗಿನ ಚಿತ್ರವಾದರೂ ಅದರ ಮಂದಗತಿಯ ನಿರೂಪಣೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ.
ನಮ್ಮಣ್ಣ ಚಿತ್ರ ಕಲಾವಿದ.ಶಾಸ್ತ್ರೋಕ್ತವಾಗಿ ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯಲ್ಲಿ ಚಿತ್ರಕಲೆ ತರಬೇತಿ ಪಡೆಯುತ್ತಿದ್ದಾಗ ಇಂತಹ ಮಹಾನ್ ಕಲಾವಿದರ ಜೀವನಚರಿತ್ರೆಯ ಪುಸ್ತಕಗಳನ್ನ ತರುತ್ತಿದ್ದ. ನನಗೋ ಓದುವ ಹುಚ್ಚು. ಆತನ ಪುಸ್ತಕಗಳನ್ನೂ ನಾನೂ ಓದುತ್ತಿದ್ದೆ. ಹಾಗೆ ನಾನು ಬಿಡುವಿನ ಸಮಯದಲ್ಲಿ ಚಿತ್ರಬಿಡಿಸುತ್ತಿದ್ದೆ. ನಮ್ಮಣ್ಣ ಒಂದೇ ದಿಕ್ಕಿನಲ್ಲಿ ತನ್ನ ಕಲಾಕೃಷಿಯನ್ನು ಮುಂದುವರೆಸಿದ್ದರೆ ನಾನು ಎಲ್ಲಾ ರೀತಿಯಲ್ಲೂ ಕೈಯಾಡಿಸುತಿದ್ದೆ. ಹಾಗಾಗಿ ಚಿತ್ರಕಲೆ ಒಂದು ಮಟ್ಟಿಗೆ ನನ್ನ ಕೈಹತ್ತಿತ್ತು ಎಂದೆ ಹೇಳಬಹುದಾಗಿತ್ತು. ಆದರೆ ಯಾವತ್ತೂ ಚಿತ್ರಕಲೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸುಮ್ಮನೆ ಅದನ್ನು ಹವ್ಯಾಸವನ್ನಾಗಿಯಷ್ಟೇ ಇಟ್ಟುಕೊಂಡಿದ್ದೆ. ಆದರೆ ನಮ್ಮಣ್ಣ ಈ ವಿಷಯದಲ್ಲಿ ತುಂಬಾ ಗಂಭೀರವಾಗಿದ್ದನಾದರೂ ಮನೆಯ ಪರಿಸ್ಥಿತಿಗಳು ಅವನನ್ನು ಸರ್ಕಾರಿ ನೌಕರಿಗೆ ತಳ್ಳಿದವು.
ಬೆಂಗಳೂರಿಗೆ  ಬಂದಾಗಿನಿಂದ ಚಿತ್ರಸಂತೆಗೆ ಹೋಗಿ ಬರುತ್ತಿದ್ದೆ. ಆಗ ಹೋದಾಗಲೆಲ್ಲಾ ನಾನೊಮ್ಮೆ ಒಂದಷ್ಟು ಚಿತ್ರಬರೆದು ಪ್ರದರ್ಶಿಸಿದರೆ ಹೇಗೆ ಎನಿಸುತ್ತಿತಾದರೂ ಅದಕ್ಕೆ ಅವಕಾಶ ದೊರೆತಿರಲಿಲ್ಲ. ಆದರೆ ಈ ಸಾರಿ ಆದದ್ದು ಆಗಲಿ ಎಂದು ಒಂದಷ್ಟು ಚಿತ್ರ ಬಿಡಿಸಿಯೇ ಬಿಟ್ಟೆ. ಈಗದನ್ನು ಭಾನುವಾರದ ಚಿತ್ರಸಂತೆಯಲ್ಲಿ ಪ್ರದರ್ಶನಕ್ಕೆ ಇಡುತ್ತಿದ್ದೇನೆ. ನನ್ನ ಮೊಟ್ಟೆಮೊದಲ ಚಿತ್ರಕಲಾ ಪ್ರದರ್ಶನ ಇದು ಎನ್ನಬಹುದು. ಅದ್ಭುತ ಅಥವಾ ಹೊಸ ಶೈಲಿಯ ಚಿತ್ರಗಳಾಗದೆ ಇದ್ದರೂ ಒಂದಷ್ಟು ಆ ನಿಟ್ಟಿನಲ್ಲಿ ಪ್ರಯತ್ನಿಸೋಣ ಎನಿಸಿದೆ.
ದಯವಿಟ್ಟು ನಾಳೆ ನೀವು ಬನ್ನಿ.ಅಲ್ಲಿ ಸಿಗಬಹುದು..

ವರ್ಣಮಯದ ನಂಜುಂಡಿ ಮತ್ತು ಕವಲೊಡೆದ ಪ್ರೀತಿ...

ವಸುಧೇಂದ್ರ ನನಗಿಷ್ಟವಾದ ಬರಹಗಾರರು. ನಾನು ಮೈಸೂರಿನಲ್ಲಿ ಓದುತ್ತಿದ್ದಾಗ ಅವರ ಕಥೆಗಳು ದಿನಪತ್ರಿಕೆಗಳ ಸಾಪ್ತಾಹಿಕದಲ್ಲಿ ಪ್ರಕಟವಾಗುತ್ತಿದ್ದವು. ಯಾಕೋ ಓದಿದ ಬಹಳ ದಿನಗಳವರೆಗೆ ಮನಸ್ಸಿನಲ್ಲಿ ಉಳಿಯುತ್ತಿದ್ದದ್ದಷ್ಟೇ ಅಲ್ಲ  ಆವಾಗಾವಾಗ ಆಯಾ ಕಥೆಗಳ ಪಾತ್ರಗಳು ಕಾಡುತ್ತಿದ್ದವು ಕೂಡ. ಅಪಸ್ವರದಲ್ಲೊಂದು ಆರ್ತನಾದ, ಯುಗಾದಿ, ಮನೀಷೆ ಮುಂತಾದ ಕಥೆಗಳನ್ನ ಮರೆಯುವುದಾದರೂ ಹೇಗೆ. 
ನಾನು ನನ್ನ ವಿದ್ಯಾಭ್ಯಾಸದ ನಂತರ ಬೆಂಗಳೂರಿಗೆ ಸಿನೆಮಾ ಹುಚ್ಚಿಡಿಸಿಕೊಂಡು ಬಂದ ನಂತರ ಹಲವಾರು ಪ್ರಯತ್ನಗಳ ನಂತರ ಟಿವಿ ಚಾನಲ್ಲಿನ ಧಾರಾವಾಹಿಯೊಂದರ ಸಂಚಿಕೆ ನಿರ್ದೇಶನ ಮಾಡುತ್ತಿದ್ದೆ. ಅದರ ಒಂದು ವಿಭಾಗದಲ್ಲಿ ಯಾರಾದರೂ ಕಥೆಗಾರರ, ಸಾಹಿತಿಗಳ ಪರಿಚಯ ಮಾಡಿಕೊಡುವುದಿತ್ತು. ನನಗೆ ನಮ್ಮ ಬಾಸ್ 'ವಸುಧೇಂದ್ರ ಅಂತ ಒಬ್ರು ರೈಟರ್ ಇದ್ದಾರೆ. ನೋಡಿ ಇಂಟರೆಸ್ಟಿಂಗ್ ಅನ್ಸಿದ್ರೆ ಒಂದು ಸೆಗ್ಮೆಂಟ್ ಮಾಡಿ..' ಎಂದರು. ನನಗೆ ಖುಷಿಯಾಗಿ ಹೋಯಿತು.ತಕ್ಷಣ ವಸುಧೆಂದ್ರರಿಗೆ ಫೋನ್ ಮಾಡಿ ಮಾತಾಡಿದೆ, ಭೇಟಿಗಾಗಿ ಸಮಯ ನಿಗದಿಪದಿಸಿಕೊಂಡೆ. ಅವರ ಮನೆಗೆ ಹೋದಾಗ ಅವರ ಕಥೆಗಳ ಬಗ್ಗೆ ಚರ್ಚಿಸಿದಾಗ ವಸುಧೇಂದ್ರರಿಗೆ ಆಶ್ಚರ್ಯವಾಯಿತು. ಅವರ ಕಥೆಗಳ ಸಾರಾಂಶದ ಜೊತೆಗೆ ಪಾತ್ರಗಳ ಹೆಸರನ್ನೂ ನಾನು ನೆನಪಿಸಿಕೊಂಡು ಹೇಳಿದಾಗ ವಸುಧೇಂದ್ರ ನನ್ನನ್ನು ಮೆಚ್ಚಿದ್ದಷ್ಟೇ ಅಲ್ಲ, ನೀನು ಏನಾದರೂ ಬರೆಯೋ ಎಂದು ಪ್ರೋತ್ಸಾಹಿಸಿದ್ದರು. ಆನಂತರ ಅವಾಗವಾಗ ಫೋನಿನಲ್ಲಿ ಮಾತಿಗೆ ಸಿಗುತ್ತಿದ್ದೆವು. ನನ್ನ ಬರಹಗಳನ್ನೂ ಅವರಿಗೆ ಕಳುಹಿಸಿ ಅವರ ಅಭಿಪ್ರಾಯ ತಿದ್ದುಪಡಿಗಳನ್ನು ಪಡೆಯುತ್ತಿದ್ದೆ. ಆದರೆ ಅದೊಂದು ದಿನ ವಸುಧೇಂದ್ರ ನಮ್ಮ ಮನೆಗೆ ಬಂದಿದ್ದರು. ಮನೆ ಎಂದರೆ ಸಿನಿಮಾದ ಕಥೆ ರಚನೆಗಾಗಿ ಮಾಡಿಕೊಂಡಿದ್ದ ವ್ಯವಸ್ಥೆ. ಊರಾಚೆಯಿತ್ತು. ನಾನು ಯಾವುದೇ ಸಿನೆಮಾ ನೋಡಿದ ತಕ್ಷಣ ಅದರ ಹೆಸರು ಇಸವಿ ಮತ್ತು ನನಗನಿಸಿದ ಹಾಗೆ ಸ್ಟಾರ್ ಕೊಟ್ಟುಬಿಡುತ್ತೇನೆ. ಮನೆಗೆ ಬಂದ ವಸುಧೇಂದ್ರರಿಗೆ ಸಿನೆಮಾಗಳ ಬಗ್ಗೆ ಹೇಳಿ ನೋಡಿದ ಸಿನೆಮಾಗಳ ಪಟ್ಟಿಕೊಟ್ಟೆ. ನನ್ನ ಅಭಿಪ್ರಾಯ ಮತ್ತು ಅವರ ಅಭಿಪ್ರಾಯ ಬಹಳಷ್ಟು ಚಿತ್ರಗಳ ವಿಷಯದಲ್ಲಿ ಒಂದೇ ಆಗಿತ್ತು.
ಅವರ ಹೊಸ ಪ್ರಬಂಧಗಳ ಸಂಕಲನ 'ವರ್ಣಮಯ' ಬಿಡುಗಡೆಯಾಗಿದೆ. ಸರಾಗವಾಗಿ ಓದಿಸಿಕೊಂಡು ಹೋಗುವ ಪ್ರಬಂಧಗಳು ಖುಷಿಕೊಡುತ್ತವೆ. ಅದರಲ್ಲೂ ಡ್ರೈವರ್ ನಂಜುಂಡಿಯಾ  ಕಥಾನಕವಂತೂ ಹೊಟ್ಟೆಹುಣ್ಣಾಗಿಸುವಂತೆ ನಗಿಸಿದರೂ ಕೆಲವೆಡೆ ನಮಗರಿವಿಲ್ಲದ[ಲೇಖಕರಿಗೂ ಆಗಷ್ಟೇ ಪರಿಚಯವಾದ] ಪ್ರಪಂಚವನ್ನು ತೆರೆದಿಡುತ್ತದೆ. ಒಬ್ಬ ವ್ಯಕ್ತಿಯ ಬದುಕು ಬೆಳವಣಿಗೆಯನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಲೇ ಅಷ್ಟೇ ಅದ್ಭುತವಾಗಿ ನಮಗೆ ಪರಿಚಯಿಸುತ್ತಾರೆ ವಸುಧೇಂದ್ರ. .ಗೌರಮ್ಮ ಎನ್ನುವ ಕೆಲಸದಾಕೆಯ ಮೇಲಿನ ಪ್ರಬಂಧವೂ ಅಷ್ಟೇ. ಮನೆಗೆಳದವರ ಬದುಕಿನ ವಿವಿಧ ಮಗ್ಗಲನ್ನು ಬಿಡಿಬಿಡಿಯಾಗಿ ತೆರೆದಿಡುತ್ತಾ ಸಾಗುತ್ತದೆ. ಇಲ್ಲೆಲ್ಲೂ ಯಾರೂ ನಮಗೆ ಕಥಾನಾಯಕರಂತೆ ಭಾಸವಾಗುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಕಾಲದ ಕೈಗೊಂಬೆಗಳಂತೆ ನಮಗೆ ಕಾಣಿಸುತ್ತಾರೆ. ಹಾಗೆ ಅಪಾರ್ಟ್ಮೆಂಟಿನ ಕಥಾನಕ, ಮನೆಗೆಲಸದವರ ಘಟನೆಗಳು ಮುಂತಾದವುಗಳನ್ನು ನಮಗೆ ಇನ್ನೊಂದು ಆತ್ಮೀಯವಾಗಿರದ ನಮ್ಮದೇ ಪ್ರಪಂಚವನ್ನು ತೆರೆದಿಡುತ್ತವೆ. ಒಮ್ಮೆ ಓದಲೇಬೇಕಾದ ಪುಸ್ತಕ ವರ್ಣಮಯ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಮಿಕಾ  ಕೌರಿಸ್ಮಾಕಿ ನಿರ್ದೇಶನದ ಫಿನಿಶ್ ಚಲನಚಿತ್ರ ಹೌಸ್ ಆಫ್ ಬ್ರಾಂಚಿಂಗ್ ಲವ್ 2009ರಲ್ಲಿ ತೆರೆಕಂಡ ಚಲನಚಿತ್ರ. ಚಿತ್ರದ ಕಥೆ ಸರಳ. ಗಂಡ ಹೆಂಡಿರಿಬ್ಬರಿಗೂ ಜಗಳವಾಗಿದೆ. ಹಾಗಾಗಿ ಡೈವೋರ್ಸ್ ಕೂಡ ಸಿಕ್ಕಿದೆ. ಆದರೆ ಎಲ್ಲಾ ಸೆಟಲ್ ಮೆಂಟ್ ಗಾಗಿ ಇನ್ನೊಂದಷ್ಟು ತಿಂಗಳುಗಳ ಸಮಯವಿದೆ. ಹಾಗಾಗಿ ಬೇರೆಬೇರೆ ಕಡೆ ಇರುವುದಕ್ಕೆ ಆ ಮನೆಯಲ್ಲೇ ಇದ್ದರೆ ಖರ್ಚು ಉಳಿಯುತ್ತದೆ ಎಂದು ಯೋಚಿಸಿ ಇಬ್ಬರೂ ಒಂದೇ ಮನೆಯಲ್ಲಿ ಉಳಿದುಕೊಳ್ಳಲು ಯೋಚಿಸುತ್ತಾರೆ. ಆದರೆ ಖರ್ಚುಗಳನ್ನು ಹಂಚಿಕೊಳ್ಳುತ್ತಾರೆ. ನಿನ್ನಿಷ್ಟಕ್ಕೆ ನೀನಿರು, ನನ್ನಿಷ್ಟಕ್ಕೆ ನಾನಿರುತ್ತೇನೆ ಎಂದು ಪರಸ್ಪರ ಮಾತಾಡಿಕೊಂಡರೂ ಯಾವುದಕ್ಕೂ ಇರಲಿ ಎಂದು ಬೇಕು-ಬೇಡಗಳ ಒಂದು ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಮುಂದೆ ನಡೆಯುವ ಘಟನಾವಳಿಗಳು ಪ್ರೇಕ್ಷಕರಿಗೆ ನಗೆ ತರಿಸುತ್ತವೆ ಅಲ್ಲದೆ ಅವರಿಬ್ಬರ ನಡುವೆ ಇದ್ದ ತಪ್ಪುಕಲ್ಪನೆಗಳು ದೂರಾಗುವಲ್ಲಿ ಸಹಾಯವಾಗುತ್ತವೆ. ಮುಂದೆ ಆ ಹಂತದಲ್ಲಿ ಪುನಃ ಪ್ರೀತಿಗೆ ಬೀಳುವ ದಂಪತಿಗಳು ಮತ್ತೆ ಒಂದಾಗುತ್ತಾರೆ.
ಚಿತ್ರದ ಕಥೆ ನಿರೂಪಣೆ ಚೆನ್ನಾಗಿದೆ. ನಾಯಕ /ನಾಯಕಿಯ ಅಭಿನಯ ಎಲ್ಲೂ ಕೃತಕವೆನಿಸುವುದಿಲ್ಲ. ಒಂದು ಉತ್ತಮ ಹಾಸ್ಯಮಯ ಟೈಂ ಪಾಸ್ ಚಲನಚಿತ್ರ ಇದು. ಸಮಯವಿದ್ದರೆ ಆರಾಮವಾಗಿ ನಗುನಗುತ್ತ ಟೈಂ ಪಾಸ್ ಮಾಡಲು ಒಮ್ಮೆ ನೋಡಿ.

Monday, January 21, 2013

ಷಾ ಬಹದ್ದೂರ್ ಎಂಬ ನರಹಂತಕನ ಕಥೆ

ಸರ್ಕಸ್ ಕಂಪನಿಯಲ್ಲಿದ್ದ ಹುಲಿ ಬಹದ್ದೂರ್ ಷಾ ಗೆ ಯಾವತ್ತೂ ಹೊಟ್ಟೆ ತುಂಬಾ ಊಟ ಕೊಡದಿರುವುದಕ್ಕೆ ಬಹು ಮುಖ್ಯ ಕಾರಣವೆಂದರೆ ತೀರಾ ಹೊಟ್ಟೆ ತುಂಬಾ ತಿಂದು ಹುಲಿ ಮೈಬಿಳೆಸಿಕೊಂಡರೆ ಸರ್ಕಸ್ಸಿನಲ್ಲಿನ  ಚಮತ್ಕಾರಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂಬುದು.. ಅದರಲ್ಲೂ ಹುಲಿಗಿರುವ ಚಮತ್ಕಾರವೆಂದರೆ ಬೆಂಕಿಯ ಉಂಗುರದಿಂದ ಆ ಕಡೆಯಿಂದ ಈ ಕಡೆಗೆ,ಈ ಕಡೆಯಿಂದ  ಆ ಕಡೆಗೆ ಹಾರುವುದು. ಅದು ಸರಾಗವಾಗಿ ಮತ್ತು ಚುರುಕಾಗಿ ಹಾರಬೇಕೆಂದರೆ ಅದು ಸಣ್ಣದಿದ್ದಾಗಷ್ಟೇ ಸಾಧ್ಯ.ಸರ್ಕಸಿನ ಆಟ ಮುಗಿದ ಮೇಲೆ ಇಡೀ ಸರ್ಕಸ್ ಕುಟುಂಬ ಒಂದೆಡೆ ಸೇರಿ ತಮಗೆ ಖುಷಿಕೊಡುವ ಕಾರ್ಯಗಳಲ್ಲಿ ತೊಡಗಿಕೊಂಡರೆ ಪ್ರಾಣಿ ಪಕ್ಷಿಗಳಿಗೆ ತೂಕಡಿಸುವುದಷ್ಟೇ  ಕೆಲಸ.
ಆವತ್ತು ಎಂದಿನಂತೆ ಸರ್ಕಸ್  ಇನ್ನೂ ಪ್ರಾರಂಭವಾಗಿರಲಿಲ್ಲ. ಮದ್ಯಾಹ್ನದ ಸಮಯ.ಎಲ್ಲರೂ ತಮ್ಮ ತಮ್ಮ ಗುಡಾರಗಳಲ್ಲಿ ತಮ್ಮ ಚಮತ್ಕಾರದ ತರಬೇತಿಗಳಲ್ಲಿದ್ದರು..ಎಲ್ಲಾ ಕಡೆ ಒಮ್ಮೆ ಇಣುಕಿ ಹಾಕಿದ ಮುದುಕ ಯಜಮಾನ, ಪ್ರಾಣಿಗಳಿದ್ದ ಕಡೆಗೊಂದು ಸುತ್ತು ಹಾಕಿ ತನ್ನ ಗುಡಾರದ ಕಡೆ ಹೊರಟಿದ್ದ. ದೂರದಲ್ಲಿ ಯಾವುದೋ ಪ್ರಾಣಿ ಕೂಗಿದ, ಒಂದಷ್ಟು ಗೂಬೆಗಳ ಸದ್ದು ಬಿಟ್ಟರೆ ಮತ್ಯಾವ ಸದ್ದೂ ಇರಲಿಲ್ಲ. ಸರ್ಕಸ್ ಆಟಕ್ಕೆ ಮಾಲೀಕನಿಗೆ ಕೊಟ್ಟಿದ್ದ ಜಾಗ ಊರಾಚಿನ, ಕಾಡಿಗೆ ಹತ್ತಿರವಾದ ಜಾಗವಾದ್ದರಿಂದ ಮೊಲ, ಹಾವುಗಳು ಎಗ್ಗಿಲ್ಲದೆ ನೋಡಲು ಸಿಗುತ್ತಿದ್ದವು.ಆದರೆ ಬಹದ್ದೂರ್ ಷಾ ಹುಲಿಯ ಬೋನಿನ ಬಾಗಿಲ ಚಿಲಕ ಸಡಿಲವಾದದ್ದನ್ನು ಮಾಲೀಕ ಆವತ್ತು ಗಮನಿಸಿರಲಿಲ್ಲ.
ಅದಾದ ಒಂದು ಘಂಟೆಯ ನಂತರ ಮಾಲೀಕನ ಹೆಂಡತಿಗೆ ಏನೋ ಸದ್ದಾಯಿತು. ಯಾವುದೋ ಗುರ್ರ್ ಗುರ್ರ್ ಎನುವ ಸದ್ದು ಕೇಳಿಬಂದಿತಾದರೋ ದಿನ ಪ್ರಾಣಿ ಪಕ್ಷಿಗಳ ಜೊತೆ ಇದ್ದದ್ದರಿಂದ ಅದೇನೂ ವಿಶೇಷ ಎನಿಸಿರಲಿಲ್ಲ. ಹಿಂದಿನಿಂದ ಗಂಡನ ಕೂಗಿನ ಶಬ್ದ ಕೇಳಿಸಿದಾಗ ಆಕೆಗೆ ಭಯವಾಗಿ ಎದು ಹೊರಗಡೆ ಓಡಿ ಬಂದವಳು ಅಲ್ಲಿನ ದೃಶ್ಯ ಕಂಡು ಕಿಟಾರನೆ ಕಿರುಚಿ ಮೂರ್ಛೆಹೋಗಿದ್ದಳು. ಅಲ್ಲಿತ್ತು ಮಾಲೀಕನ ಹೆಣ. ಓಡಿ ಬಂದು ಕಿರುಚಿ ಕುಸಿದು ಬೀಳುತ್ತಿದ್ದ ಮಾಲೀಕನ ಹೆಂಡತಿಯನ್ನೇ ನೋಡುತ್ತಾ ರಾಜ ಗಾಂಭೀರ್ಯದಿಂದ ಕಾಡಿನ ಕಡೆಗೆ ಹೊರಟು ಹೋಗಿತ್ತು ಷಾ ಬಹದ್ದೂರ್. ಮಾಲೀಕನ ಹೆಣ ಅದೆಷ್ಟು ವಿರೂಪವಾಗಿತ್ತೆಂದರೆ ಬರೀ ಮಾಂಸ, ರಕ್ತಗಳ ಮಿಶ್ರಣ ಮುದ್ದೆ ಬಿಟ್ಟರೆ ಅದು ಮಾಲೀಕನದೆ ಹೆಣ ಎಂಬುದಕ್ಕೆ ಬೇರ್ಯಾವ ಪುರಾವೆ ಇರಲಿಲ್ಲ.
ಅದಾದ ನಂತರ ಆ ಊರಿಗೆ ಅಂಟಿಕೊಂಡೇ ಇದ್ದ ಕಾಡಿನಲ್ಲಿ ಒಂದು ರೀತಿಯ ಭಯದ ವಾತಾವರಣ ಶುರುವಾಗಿತ್ತು. ಆ ಕಾಡಿನಲ್ಲಿ ಮರದ ದಿಮ್ಮಿಗಳನ್ನು ಕತ್ತರಿಸುವ, ಸಾಗಿಸುವ ಕೆಲಸ ನಡೆಯುತ್ತಿದ್ದರಿಂದ ಕೆಲಸಗಾರರು ಅಲ್ಲಲ್ಲಿ ಬೀಡು ಬಿಟ್ಟಿದ್ದರು. ಈ ಒಂದು ಘಟನೆ ಅವರನ್ನು ಅಧೀರರನ್ನಾಗಿ ಮಾಡಿತ್ತು.ಆದರೆ ಅಲ್ಲಿನ ಕೆಲಸಗಾರನನ್ನು ಅದೇ ರೀತಿ ಬೇಟೆಯಾಡಿದ ನಂತರ ನರಹಂತಕ ಬಹದ್ದೂರ್ ಷಾ ಬಗ್ಗೆ ಎಲ್ಲರಲ್ಲೂ ಭಯ ಮೂಡಿದ್ದಷ್ಟೇ ಅಲ್ಲ ಅದೆಷ್ಟು ಅಪಾಯಕಾರಿ ಎಂಬುದರ ಅರಿವೂ ಆಯಿತು. ಅದಲ್ಲದೆ ಆ ಕೆಲಸಗಾರನನ್ನು ಕೊಂದ ಹುಲಿ ಹೆಣವನ್ನು ಅಲ್ಲೇ ಬಿಟ್ಟುಹೋಗಿದ್ದದ್ದು ಅ ಹೆಣದ ಸ್ವರೂಪ ಇಡೀ ದೃಶ್ಯವನ್ನು ಭೀಭತ್ಸಕರವನ್ನಾಗಿಸಿತ್ತು. ಹೆಣವನ್ನ ಹೊತ್ತೊಯ್ಯುವಷ್ಟು ಹುಲಿ ಇನ್ನೂ ಶಕ್ತಿಯುತವಾಗಿರಲಿಲ್ಲ. ಆದರೆ ನರಮಾಂಸದ ರುಚಿ ಮಾತ್ರ ಷಾ ಬಹದೂರಿಗೆ ಹತ್ತಿತ್ತು.
ಈಗ ಅಲ್ಲಿನ ಕೆಲಸಗಾರರಿಗೆ ರಾತ್ರಿಗಳೆಂದರೆ ಯಮನ ಸಾನಿಧ್ಯದಂತೆ ಭಾಸವಾಗತೊಡಗಿತ್ತು. ಎಲ್ಲರೂ ಒಂದೆಡೆ ಸೇರಿ ತಮ್ಮ ಗುಡಿಸಲುಗಳ ಸುತ್ತ ಬೆಂಕಿ ಹಚ್ಚಲು ನಿರ್ಧರಿಸಿದರು. ಸಾಮಾನ್ಯವಾಗಿ ಯಾವುದೇ ಪ್ರಾಣಿಗಳು ಬೆಂಕಿಗೆ ಹೆದರುವುದು ಸಹಜ. ಆದರೆ ಬಹದ್ದೂರ್ ಷಾ ಉರಿಯುವ ಬೆಂಕಿಯ ಉಂಗುರದೊಳಗಿಂದ ಹಾರಿ ಅಭ್ಯಾಸವಿದ್ದದ್ದು ಅವರಿಗೇನು ಗೊತ್ತಿತ್ತು.  ಇದಾದ ಐದು ದಿನದ ನಂತರ ಬಹದ್ದೂರ್ ಷಾ ಉರಿಯುವ ಬೆಂಕಿಯ ನಡುವೆಯೇ ಹಾರಿ ಒಬ್ಬನನ್ನು ಕೊಂದು ಹೆಣ ಹೊತ್ತೊಯ್ಯುವ ವಿಫಲ ಪ್ರಯತ್ನ ನಡೆಸಿದಾಗ ಜನ ಹೌಹಾರಿದ್ದರು. ಬೆಂಕಿಗೂ ಹೆದರದ ನರಹಂತಕನನ್ನು ಹೆದರಿಸುವುದಾದರೂ ಹೇಗೆ?
ನಂತರ ನರಹಂತಕ ಬಹದ್ದೂರ್ ಷಾ ನದ್ದು ನರಮೇಧ ಎಂದೆ ಹೇಳಬಹುದು. ರಾತ್ರಿಯಾಯಿತೆಂದರೆ ಹೊರಗೋಗಿದ್ದವರು ಮನೆಗೆ ಬರಲಿಲ್ಲವೆಂದರೆ ಷಾ ಬಹದ್ದೂರ್ ಗೆ ಆಹುತಿಯಾಗಿದ್ದಾರೆಂದು ಜನ ನಿಸ್ಸಂದೇಹವಾಗಿ ಹೇಳುತ್ತಿದ್ದರು. ಹಗಲು, ರಾತ್ರಿ, ಸಂಜೆ ಹೀಗೆ ಎಲ್ಲೆಂದರಲ್ಲಿ ಷಾ ಬಹದ್ದೂರ್ ತನ್ನ ಬೇಟೆಯಾಡುತ್ತಿತ್ತು. ಈಗ ಷಾ ಬಹದ್ದೂರನನ್ನು ಬೇಟೆಯಾಡಲು ಶಕ್ತ ಶಿಕಾರಿವೀರಣ ಅವಶ್ಯಕತೆ ಬಂದೆ ಬಂದಿತು. ಶಿಕಾರಿಯಲ್ಲಿ ಧೈರ್ಯ, ತಾಳ್ಮೆ, ಸಾಹಸದ ಜೊತೆಗೆ ಅದೃಷ್ಟವೂ ಪಾತ್ರ ವಹಿಸುತ್ತದೆ. ದಿನಗಟ್ಟಲೆ ಮೈಯೆಲ್ಲಾ ಕಣ್ಣಾಗಿ ಕಾಯುತ್ತ ಕುಳಿತುಕೊಳ್ಳಬೇಕಾಗುತ್ತದೆ. ಅಂತಹ ಧೀರನೊಬ್ಬ ಬೇಕೇ ಬೇಕು. ಯಾಕೆಂದರೆ ಒಮ್ಮೆ ನರಮಾಂಸದ ರುಚಿ ನೋಡಿದ ಹುಲಿ ಮನುಷ್ಯರ ಪಾಲಿಗೆ ಅಪಾಯಕಾರಿ.
ಈ ವಿಷಯ ಶರವೇಗದಲ್ಲಿ ಊರಲ್ಲೆಲ್ಲಾ ಪಸರಿಸಿತು. ಕಾಡಲ್ಲಿ ನೆಲೆಸಿದ್ದ ಕೆಲಸಗಾರರು ಜಾಗ ಬಿಟ್ಟು ಬೇರೆಡೆಗೆ ವಲಸೆ ಹೋಗಲು ನಿರ್ಧಾರವನ್ನೂ ಮಾಡಿದರು.ಇದೆಲ್ಲದಕ್ಕೂ ಕಾರಣನಾಗಿದ್ದ ಷಾ ಬಹದ್ದೂರ್ ಮಾತ್ರ ತನ್ನ ನರಮೆಧವನ್ನು ಯಾವ ಎಗ್ಗಿಸಿಗ್ಗಿಲ್ಲದೆ ನಡೆಸಿಕೊಂಡೇ ಇತ್ತು.ಆದರೆ ಎಲ್ಲದಕ್ಕೂ ಎಲ್ಲರಿಗೂ ಒಂದು ಅಂತ್ಯ ಇರಲೇಬೇಕಲ್ಲವೇ. ಹಾಗೆ ಷಾ ಬಹದ್ದೂರನ ಅಟ್ಟಹಾಸಕ್ಕೆ ಅಂತ್ಯಕಾಲ ಕೂಡಿ ಬಂದದ್ದು ಒಬ್ಬ ಹೆಂಗಸಿನ ರೂಪದಲ್ಲಿ.
ಶಿಕಾರಿ ಕುರಿತಾದ ಕಥೆಗಳ ಪರಿಚಯವಾದದ್ದು ಮೊದಲು ನನಗೆ ಕೆ.ಪಿ.ಪೂರ್ಣ ಚಂದ್ರ ತೇಜಸ್ವಿಯವರಿಂದ.ಅವರ ಜಿಮ ಕಾರ್ಬೆಟ್, ಕೆನೆತ್ ಅಂಡರ್ಸನ್ರ ಕಥೆಗಳಿಂದಾಗಿ. ಬಯಲು ಸೀಮೆಯಲ್ಲಿ ಹುಟ್ಟಿದ ನನ್ನಂಥವರಿಗೆ ಶಿಕಾರಿ ಮುಂತಾದವುಗಳೆಲ್ಲಾ ಪುಸ್ತಕದ ಮೂಲಕವೇ ಪರಿಚಯವಾಗುವುದೇ ಹೊರತು ಸ್ವಾನುಭವದಿಂದ ಸಾಧ್ಯವಿಲ್ಲ. ಯಾರೋ ಮೊಲ ಹಿಡಿಯುವವರೇ ದೊಡ್ಡ ಬೇಟೆಗಾರರು ಎನಿಸಿತ್ತು. ಆದರೆ ರುದ್ರಪ್ರಯಾಗದ ನರಭಕ್ಷಕ, ಕೆನೆತ್ ಅಂಡರ್ಸನ್ ರವರ ಕಥೆಗಳನ್ನ ಓದಿದಾಗ ಆದ ರೋಮಾಂಚನ ಥ್ರಿಲ್ಲರ್ ಕಾದಂಬರಿ ಓದಿದಷ್ಟೇ ಆಗಿತ್ತು. ನಿನ್ನೆ ಹ್ಯೂ ಗಾಂಜರ್ ಬರೆದ ದಿ ಸ್ಕಾರ್ಲೆಟ್ ಟೈಗರ್ ಅಂದ ಅದರ್ ಸ್ಟೋರೀಸ್ ಓದಿದಾಗ ಮತ್ತೆ ಅದೇ ಅನುಭವವಾಯಿತು.ಹ್ಯೂ ಮೂಲತಹ ಪ್ರವಾಸಿಗ.ಅದಕ್ಕೂ ಮುನ್ನ ಭಾರತೀಯ ನೌಕಾಪಡೆಯಲ್ಲಿ ಕೆಲಸದಲ್ಲಿದ್ದ. ಆನಂತರ ವಕೀಲನಾಗಿ, ಶಿಪ್ಪಿಂಗ್ ಕಂಪನಿಯೊಂದರಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ನಿರ್ವಹಿಸಿದ್ದ.ವರ್ಷದಲ್ಲಿ ಆರು ತಿಂಗಳು ಪ್ರವಾಸದಲ್ಲಿ ಕಳೆಯುತ್ತಿದ್ದ ಗಾಂಜರ್,ಉಳಿದ ದಿನಗಳನ್ನ ಹಿಮಾಲಯದಲ್ಲಿ ಕಳೆಯುತ್ತಿದ್ದ. ಇಲ್ಲಿ ರುವ ಕಥೆಗಳು ಶಿಕಾರಿಗಳದ್ದೆ ಆದರೂ ಯಾವುದು ಸ್ವಾನುಭಾವವಲ್ಲ. ಹಾಗೆ ಇರುವ ಏಳು ಕಥೆಗಳೂ ಎಲ್ಲೋ ಒಂದು ಕಡೆ ಯಾರೋ ಒಂದು ನರಹಂತಕ ಹುಲಿಯನ್ನೂ ಚಿರತೆಯನ್ನೋ ಶಿಕಾರಿಯಾಡಿದ ಕಥೆಯೂ ಅಲ್ಲ. ಬದಲಿಗೆ ಶಿಕಾರಿಯ ಸ್ವರೂಪ, ಅದರ ಹಿನ್ನೆಲೆ ಮತ್ತು ಅದು ನಡೆದ ರೀತಿಗಳನ್ನು ವಿವರಿಸುವ ಆ ಮೂಲಕ ರೋಮಾಂಚಕ ನೈಜ ಘಟನೆಗಳನ್ನ ತೆರೆದಿಡುವ ಪ್ರಯತ್ನ. ಒಮ್ಮೆ ಓದಿ.