Saturday, June 23, 2012

ಸಿನಿಮಾ ..ಸಾಕ್ಷ್ಯ ಚಿತ್ರಗಳು..ವಿವಾದ..


1978 ರಲ್ಲಿ ಬಿಡುಗಡೆಯಾದ ಕ್ಯಾಪ್ರಿಕಾರ್ನ್ ಒನ್ ಸಿನಿಮಾದ ಕಥೆ ಹೀಗಿದೆ. ನಾಸಾದ ವಿಜ್ಞಾನಿಗಳು ಒಂದಷ್ಟು ಜನರನ್ನು ಮಂಗಳಗ್ರಹಕ್ಕೆ ಕಳುಹಿಸುವ ಸಂಭ್ರಮದಲ್ಲಿದ್ದಾರೆ.ಈಗಾಗಲೆ ಅದರ ತಯಾರಿಗಳು ನಡೆದಿವೆ. ಅದು ಜಗತ್ತಿನ ಮೊಟ್ಟಮೊದಲ ಮಂಗಳಯಾನವಾದ್ದರಿಂದ ಜಗತ್ತಿನೆಲ್ಲೆಡೆ ಕುತೂಹಲವಿದೆ.ಇಡೀ ದೇಶದ ಜನರು ಆ ಒಂದು ಸಂಭ್ರಮದ ಕ್ಷಣಕ್ಕಾಗಿ ಎದುರುನೋಡುತ್ತಿರುತ್ತಾರೆ.
ಸಾಧ್ಯವಿಲ್ಲ ಎಂಬುಗಗನಯಾತ್ರಿಗಳೂ ತಮ್ಮ ಮೊಟ್ಟಮೊದಲ ಯಾನದ ಖುಷಿಇತಿಹಾಸವಾಗುವ ಅದ್ಭುತ ಗಳಿಗೆಗೆ ಕಾಯುತ್ತಿರುವಾಗಲೇ ಅವರನ್ನೆಲ್ಲಾ ಆ ರಾಕೆಟಿನಿಂದ ಹೊರದಬ್ಬಲಾಗುತ್ತದೆ. ಆನಂತರ ಖಾಲಿಯಾದ ಆ ರಾಕೆಟ್ ಉಡಾವಣೆಯಾಗುತ್ತದೆ. ಆದರೆ ಯಾತ್ರಿಗಳನ್ನು ಮಾತ್ರ ರಹಸ್ಯತಾಣವೊಂದಕ್ಕೆ ಕರದೊಯ್ಯಲಾಗುತ್ತದೆ. ಏನಾಗುತ್ತಿದೆ ಎಂಬುದು ಯಾರಿಗೋ ಗೊತ್ತಾಗುವುದಿಲ್ಲ. ಆನಂತರ ಗೊತ್ತಾಗುವ ವಿಷಯವೆಂದರೆ ಆ ಅಂತರಿಕ್ಷದ ತಂತ್ರಜ್ಞಾನದಲ್ಲಿ ದೋಷವಿರುವುದರಿಂದ ಅದರಲ್ಲಿ ಪ್ರಯಾಣಿಸಲು ದು. ಹಾಗಂತ ಅದನ್ನು ಜಗಜ್ಜಾಹೀರು ಮಾಡಲುಸಾಧ್ಯವಿಲ್ಲ. ಹಾಗಾಗಿ ಅವರನ್ನು ಸ್ಟುಡಿಯೋ ಒಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮಂಗಳಗ್ರಹದಂತೆ ಸೆಟ್ ಹಾಕಲಾಗಿರುತ್ತದೆ. ಅದರಲ್ಲಿ ಚಿತ್ರೀಕರಣಮಾಡಿ ಜಗತ್ತಿಗೆ ನಿಜವಾಗಿಯೂ ಮಂಗಳಗ್ರಹದ ಚಿತ್ರಗಳು ಅವು, ತಾವು ಮಂಗಳಗ್ರಹ ಯಾನವನ್ನು ಯಶಸ್ವಿಯಾಗಿ ಮುಗಿಸಿದ ಮೊದಲಿಗರು ಎಂದು ಕೊಚ್ಚಿಕೊಳ್ಳುವ ಉಮ್ಮೇದು ಸರ್ಕಾರದ್ದು. ಆದರೆ ಒಬ್ಬ ಪತ್ರಕರ್ತನಿಂದಾಗಿ ಎಲ್ಲಾ ಬೆಳಕಿಗೆ ಬರುತ್ತದೆ.
ಪೀಟರ್ ಹ್ಯಾಮ್ಸ್ ನಿರ್ದೇಶನದ ಈ ರೋಮಾಂಚಕಾರಿ ಚಿತ್ರ ತುಂಬಾ ಕುತೂಹಲಕರವಾಗಿದೆ.
ಅದೇ ರೀತಿಯ ಇನ್ನೊಂದು ಪ್ರಶ್ನೆ ಇದೆ.
ಮೊಟ್ಟಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿರಿಸಿದ ವ್ಯಕ್ತಿ ಯಾರು? ಉತ್ತರ ಎಲ್ಲರಿಗೂ ಗೊತ್ತು. ನೀಲ್ ಆರ್ಮ್ ಸ್ಟ್ರಾಂಗ್. ಆದರೆ ಅದು ನಿಜವೇ ಎಂಬ ಪ್ರಶ್ನೆ ಕಾಡತೊಡಗಿದ್ದು ನನಗೆ ಕಾನ್ಸ್‌ಪಿರಸಿ ಥಿಯರಿ:ಡಿಡ್ ವಿ ಲ್ಯಾಂಡ್ ಆನ್ ದಿ ಮೂನ್ ಎಂಬ ಸಾಕ್ಶ್ಯಚಿತ್ರವನ್ನು ವೀಕ್ಷಿಸಿದಾಗ. ವರ್ಲ್ಡ್ಸ್ ಡೆಡ್ಲಿಯಸ್ಟ್ ಅರ್ಥ್‌ಕ್ವೇಕ್ಸ್ ಸಾಕ್ಷ್ಯಚಿತ್ರದ ನಿರ್ದೇಶಕ ಜಾನ್ ಮೊಫೆಟ್ ನಿರ್ದೇಶನ ಈ ಸಾಕ್ಷ್ಯಚಿತ್ರ 45 ನಿಮಿಷಗಳಷ್ಟು ಉದ್ದವಿದೆ. ಪ್ರಾರಂಭದಲ್ಲಿ ಚಂದ್ರನ ಮೇಲೆ ಕಾಲಿಟ್ಟ ಮಾನವನ ಹೆಜ್ಜೆ ಗುರುತು, ಆವಾಗ ತೆಗೆದೆ ಫೋಟೊಗಳು, ಆವತ್ತಿನ ಖ್ಯಾತರ ಹೇಳಿಕೆಗಳನ್ನು ತೋರಿಸುವ ನಿರ್ದೇಶಕ ಆನಂತರ ಒಂದೊಂದೆ ಅನುಮಾನಗಳನ್ನು ಸಾಕ್ಷಿ ಸಮೇತ ನಮ್ಮ ಮುಂದಿರಿಸುತ್ತಾ ಹೋಗುತ್ತಾನೆ. ಅವನು ಕೊಡುವ ಕಾರಣಗಳು, ಅದನ್ನು ಸಮರ್ಥಿಸುವ ಹೇಳಿಕೆಗಳು ಮುಂತಾದವುಗಳು ನಮ್ಮನ್ನೂ ಆ ನಿಟ್ಟಿನಲ್ಲಿ ಯೋಚಿಸುವಂತೆ ಮಾಡುತ್ತವೆ.ಜೆ ಎಫ್ ಕೆನೆಡಿ ಸಾಕ್ಷ್ಯಚಿತ್ರದ ನಿರ್ದೇಶಕ ವಿಲಿಯಮ್ ಕಾರೆಲ್ ನಿರ್ದೇಶನದ ಮತ್ತೊಂದು ಸಾಕ್ಷ್ಯಚಿತ್ರ ಆಪರೇಷನ್ ಲೂನ್ ಈ ನಿಟ್ಟಿನಲ್ಲಿ ಮತ್ತಷ್ಟು ಸಾಕ್ಷ್ಯಾಧಾರ ಕೊಟ್ಟು ಚಂದ್ರನ ಮೇಲೆ ಕಾಲಿಟ್ಟದ್ದು ಸುಳ್ಳು ಎಂಬುವ ಮಾತಿಗೆ ಪುಷ್ಠಿ ನೀಡುತ್ತದೆ. ಹಾಗೆ 2003ದಿ ಟ್ರೂತ್ ಬಿಹೈ೦ದ್ ಮೂನ್ ಲ್ಯಾ೦ಡಿ೦ಗ್ ಸಹ ಈ ವಾದವನ್ನು ಎತ್ತಿಹಿಡಿಯುತ್ತದೆ,.ಅಂದರೆ ಇತಿಹಾಸವನ್ನು ತಿರುಚಲಾಗಿದೆಯೇ..?
ಈ ಸಾಕ್ಷ್ಯಚಿತ್ರದಲ್ಲಿ ಕೆಲವು ಗಮನಿಸುವಂತಹ ಅಂಶಗಳಿವೆ. 
**ಚಂದ್ರನ ಮೇಲಿನ ಗುರುತ್ವಾಕರ್ಷಣೆ ಭೂಮಿಗಿಂತ ಆರು ಪಟ್ಟು ಕಡಿಮೆ! ಅಂತಹುದ್ದರಲ್ಲಿ ಅದು ಹೇಗೆ ಅಷ್ಟು ಕಡಿಮೆ ಅವಧಿಯಲ್ಲಿ ಅಸಾಧ್ಯವೆನ್ನಬಹುದಾದಷ್ಟು ಫೋಟೊ ಕ್ಲಿಕ್ಕಿಸಲು ಸಾಧ್ಯವಾಯಿತು..
**ಪಾದದ ಗುರುತಿನ ತಗ್ಗಿನಲ್ಲಿರುವ  ನೆರಳು-ಬೆಳಕಿನ ಅಸಮತೋಲನ.., ಮೂನ್ ಲ್ಯಾಂಡರ್ಸಿನ ತೂಕ ಟನ್ ಗಟ್ಟಲೇ ಇದ್ದರೂ ಅದರ ತಗ್ಗಿನ ಗುರುತಿಗಿಂತ ಕೆಜಿ ಗಟ್ಟಲೇ ತೂಕದ ಮನುಷ್ಯನ ಪಾದದ ತಗ್ಗು  ಅದಕ್ಕಿಂತಲೂ ಆಳವಾಗಿ ಮೂಡಿದ್ದು ಹೇಗೆ?
** ಈ ಚಂದ್ರಗ್ರಹಯಾನದಲ್ಲಿ ಭಾಗಿಯಾದ ಮುಖ್ಯ ವ್ಯಕ್ತಿಗಳು ಇದ್ದಿಕ್ಕಿದ್ದಂತೆ ಅಸಹಜವಾಗಿ, ಆಕಸ್ಮಿಕವಾಗಿ ಅಕಾಲಿಕ ಮರಣಕ್ಕೀಡಾದದ್ದೆಲ್ಲಾ ಕಾಕತಾಳೀಯವೇ..
ಇವೆಲ್ಲಾ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ.
ನನಗೆ ಎಸ್.ಎಲ್. ಭೈರಪ್ಪನವರ ಆವರಣ ಓದಿದಾಗಲೂ ಹೀಗೆ ಆಗಿತ್ತು. ಟಿಪ್ಪು ಸುಲ್ತಾನ್ ಮತಾಂಧನಾ ? ಎನ್ನುವ ಪ್ರಶ್ನೆಗೆ ನಿಖರ ಉತ್ತರ ಸಿಕ್ಕಿರಲಿಲ್ಲ.ಈಗಲೂ ಇಲ್ಲ. ನಂಜನಗೂಡಿನಲ್ಲಿ ಶ್ರೀನಂಜುಂಡೀಶ್ವರ ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ್ ನಂಜನಗೂಡಿಗೆ ಭೇಟಿ ಕೊಟ್ಟ, ದೇವಸ್ಥಾನಕ್ಕೆ ಕಾಣಿಕೆ ನೀಡಿದ ಕುರುಹುಗಳಿವೆ. ಆದರೆ ಎಸ ಎಲ್ ಭೈರಪ್ಪನವರ ಅಧ್ಯಯನ ಇವೆಲ್ಲಕ್ಕಿಂತ ಆಳವಾದುದರಿ೦ದ ಯಾವುದನ್ನೂ ಹೀಗೆ ಎಂದು ಹೇಳಲಾಗುವುದಿಲ್ಲ. ಏನೆ ಆಗಲಿ ಕೆಲವೊಂದು ಸಿನಿಮಾಗಳು, ಸಾಕ್ಷ್ಯಚಿತ್ರಗಳು, ಪುಸ್ತಕಗಳು  ಒಂದಷ್ಟು ಇತಿಹಾಸದ ಕಡೆಗೆ ತಿರುಗಿನೋಡುವಂತೆ, ಯೋಚಿಸುವಂತೆ ಮಾಡುತ್ತವಲ್ಲಾ..ಅದು ಖುಷಿಯ ಸಂಗತಿ. ಅಲ್ಲವೇ

Wednesday, June 20, 2012

ಆಸ್ಕರ್ ಕಣದ ಚಿತ್ರಗಳು-3


ಸಾರಿಯಾ ಆಸ್ಕರ್ ಕಣದಲ್ಲಿ  ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದುಕೊಂಡ ನಟಿ ಆಕ್ಟೇವಿಯಾ ಸ್ಪೆನ್ಸರ್. ಚಿತ್ರ ದಿ ಹೆಲ್ಪ್.  ಜಾತಿ, ಮತ ಅಂತಸ್ತಿನಂತೆಯೇ ವರ್ಣಬೇಧ ಕೂಡ ಒಂದು ಸಾಮಾಜಿಕ ಪಿಡುಗು. ತಮ್ಮದಲ್ಲದ ತಪ್ಪಿಗೆ ಮಾನಸಿಕ ಹಿಂಸೆ ಅನುಭವಿಸುವ ಕರಿಯರ ಬದುಕಿನ ಮಜಲುಗಳನ್ನು ತೆರೆದಿಟ್ಟ ಚಿತ್ರ ದಿ ಹೆಲ್ಪ್. ಕಾಥ್ರಿನ್ ಸ್ಟಾಕೆಟ್‌ರವರ ಕಾದಂಬರಿ ಆಧಾರಿತ ಈ ಚಿತ್ರದ ನಿರ್ದೇಶಕ ಟಾಟಾ ಟೇಲರ್.
ದಿ ಹೆಲ್ಪ್ ಇಷ್ಟವಾಗುವುದು ಅದರ ಸರಳತೆಯಿಂದಾಗಿ. ಯಾವುದನ್ನೂ ವೈಭವೀಕರಿಸದೇ, ಅಥವಾ ಓರೆಗಣ್ಣಿಂದ ನೋಡದೇ ವಾಸ್ತವತೆಯನ್ನು ತೆರೆದಿಡುತ್ತಾ ಹೋಗುವ ವಸ್ತು ನಿಷ್ಠತೆಗೆ. ಒಂದು ಸಾಮಾಜಿಕ ಪಿಡುಗು, ಒಂದು ಅವ್ಯವಸ್ಥೆ ಅಥವಾ ಒಂದು ಸಮಸ್ಯೆಯ ಕುರಿತಾದ ಸಿನಿಮಾ ಮಾಡುವಾಗ ಒಬ್ಬ ಚಿತ್ರಕರ್ಮಿ ಅಳವಡಿಸಿಕೊಳ್ಳಬೇಕಾದದ್ದು ಈ ಒಂದು ನಿಷ್ಪಕ್ಷಪಾತ ಭಾವನೆಯನ್ನು. ಯಾರನ್ನೂ ಕೆಟ್ಟವರನ್ನಾಗಿಸದೇ ಯಾರನ್ನೂ ಹೀರೋಗಳನ್ನಾಗಿ ಮಾಡದೇ ಪ್ರತಿ ಪಾತ್ರವನ್ನೂ ಅದರ ಗುಣಾವಗುಣಗಳಿಗೆ ತಕ್ಕಂತೆ ರೂಪಿಸುತ್ತಾ ಹೋಗುವ ಕುಶಲತೆ ಮೆಚ್ಚಬೇಕಾದುದೇ. ಇಲ್ಲಿ ಒಬ್ಬರ, ಒಂದು ಕುಟುಂಬದ ಕಥೆಯಿಲ್ಲ. ಒಂದು ಜನಾಂಗದ ಇತಿಹಾಸವಿದೆ. ನಮದಿಷ್ಟೇ, ನಾವಿಷ್ಟೇ ಎಂದು ಬದುಕಬೇಕಾದ ಜನ ಹಾಗೇ ಬದುಕಬೇಕಾ..? ಎಂಬ ಪ್ರಶ್ನೆಯಿದೆ. ಹಾಗೇ ಅದಕ್ಕೆ ಉತ್ತರವೂ ಇದೆ. ಮಕ್ಕಳನ್ನು ನೋಡಿಕೊಳ್ಳುವುದರಿಂದಾ ಹಿಡಿದು ಕಸಗುಡಿಸುವವರೆಗೇ ಎಲ್ಲ ಬಗೆಯ ಕೆಲಸಗಳಿಗೂ ಕರಿಜನಾಂಗದ ಮೇಲೆ ಅವಲಂಭಿತರಾಗಿರುವ ಬಿಳಿಯರು, ಎಲ್ಲಾ ರೀತಿಯಿಂದಲೂ ಸಮರ್ಥರಾಗಿದ್ದು, ಬಿಳಿಯರ ಎಲ್ಲಾ ಕೆಲಸಗಳನ್ನೂ ಮಾಡಿಕೊಟ್ಟು ಅವರ ಮೇಲೆಯೇ ಅವಲಂಭಿತರಾಗಿರುವ ಕರಿಯರು ಮತ್ತು ಅವರ ನಡುವಿನ ಭೇದಭಾವವನ್ನು ಚಿಕ್ಕ ಚಿಕ್ಕ ಘಟನೆಗಳ ಮೂಲಕ ತೆರೆದಿಡುತ್ತಾ ಸಾಗುವ ಈ ಚಿತ್ರ ಮನರಂಜನೆಯ ಜೊತೆಗೆ ಮನುಕುಲಕ್ಕೇ ಅಗತ್ಯವಾದ ಉತ್ತಮ ಸಂದೇಶವನ್ನೂ ಕೊಡುವಲ್ಲಿ ಯಶಸ್ವಿಯಾಗುತ್ತದೆ. ಕೆಲವು ದೃಶ್ಯಗಳಲ್ಲಿ ನಗುವಿದ್ದರೂ ಅದರ ಹಿಂದೆ ವಿಷಾದವಿದೆ. ಹಾಗೆ ಮನಕಲುಕುವ ದೃಶ್ಯದ ಹಿಂದೆ ತೆಳು ಹಾಸ್ಯದ ಲೇಪನವಿದೆ.
ಇಂಥ ಅತ್ಯುತ್ತಮ ಸಂದೇಶವಿರುವ, ಸಂವೇದನಾಶೀಲ, ಮನೋಜ್ಞ ಸಿನಿಮಾವನ್ನು ಟಾಟಾ ಟೇಲರ್ ತಂಡ ಮಾಡಿದೆ. ಒಮ್ಮೆ ನೋಡಿ.ಹಾಗೆಯೇ ನಿಮ್ಮ ಆತ್ಮೀಯರಿಗೆ, ಸ್ನೇಹಿತರಿಗೆ ಮತ್ತು ಮುಂದಿನ ಪೀಳಿಗೆಯ ಮಕ್ಕಳಿಗೆ ಈ ಸಿನಿಮಾ ನೋಡುವಂತೆ ಹೇಳಿ