Tuesday, July 16, 2013

ಲುಟೇರಾ:

ಇದು ಚಿತ್ತಚೋರನ ಹೃದಯಸ್ಪರ್ಶಿ ಕಥೆ ಎಂಬುದನ್ನು ಈ ಚಿತ್ರದ ಒಂದು ಸಾಲಿನ ವಿಮರ್ಶೆ ಎಂದುಬಿಡಬಹುದು. ಬಾಲಿವುಡ್ ಚಿತ್ರರಂಗದಲ್ಲಿ ಅನುರಾಗ್ ಕಶ್ಯಪ್ ಮತ್ತು ವಿಕ್ರಮಾದಿತ್ಯ ಮೊಟ್ವಾನಿಗೆ ಅವರದೇ ಆದ ಹೆಸರಿದೆ. ಅದರಲ್ಲೂ ಅನುರಾಗ್ ಕಶ್ಯಪ್ ಮಾಡದ ಹೊಸ ಪ್ರಯತ್ನಗಳಿಲ್ಲ. ಹಿಡಿಯದ ಕ್ರಾಂತಿಕಾರಿ ಮಾರ್ಗಗಳಿಲ್ಲ. ಆದರೂ ಪ್ರಾರಂಭದಲ್ಲಿ ಅವರು ಕೈಹಾಕಿದ ಚಿತ್ರಗಳು ಏನೇನೋ ಕಾರಣಗಳಿಂದ ಹೊರಬರದೆ ಒದ್ದಾಡಿದ ಪ್ರತಿಭಾವಂತ. ಆದರೆ ಸಮಯ ಕೈ ಹಿಡಿದಾಗ ತಾನಷ್ಟೇ ಮುಂದುವರೆಯಲು ಆಶಿಸದೆ ಹೊಸತನದ ತುಡಿತವಿರುವ ಪ್ರತಿಭಾವಂತರಿಗೆ ಅವಕಾಶಕೊಡುವಂತಹ ಒಳ್ಳೆಯ ಮನಸ್ಸಿನ ನಿರ್ದೇಶಕ ಅನುರಾಗ್ ಕಶ್ಯಪ್. ಏಕ್ತಾ ಕಪೂರ್ ಮತ್ತು ಅನುರಾಗ್ ಕಶ್ಯಪ್ ಜಂಟಿ ನಿರ್ಮಾಣದಲ್ಲಿ ಉಡಾನ್ ಖ್ಯಾತಿಯ ವಿಕ್ರಮಾದಿತ್ಯ ಮೋಟ್ವಾನಿ ನಿರ್ದೇಶನದಲ್ಲಿ ಹೊರ ಬಂದಿರುವ ಲುಟೇರಾ ಚಿತ್ರ ಅಂತಹದ್ದೇ ಒಂದು ಹೊಸ ವಿಭಿನ್ನ ಪ್ರಯತ್ನ ಎನ್ನಬಹುದು.
ಚಿತ್ರದ ಕಥೆ ನಡೆಯುವುದು ಹಳೆಯ ಕಾಲಘಟ್ಟದಲ್ಲಿ, ಪಶ್ಚಿಮ ಬಂಗಾಳದ ಚಿಕ್ಕ ಹಳ್ಳಿಯೊಂದರಲ್ಲಿ. ಅಲ್ಲಿಗೆ ಬರುವ ಪ್ರಾಚ್ಯವಸ್ತು ಸಂಶೋಧಕ ವರುಣ್ ಅಲ್ಪ ಸಮಯದಲ್ಲೇ ಊರವರ ಮನಗೆಲ್ಲುವುದಷ್ಟೇ ಅಲ್ಲ, ಅಲ್ಲಿನ ಜಮೀನುದಾರನ ವಿಶ್ವಾಸವನ್ನೂ ಗಳಿಸುತ್ತಾನೆ. ಪಾಖಿ ಅನುರೂಪ ಸುಂದರಿ. ಜಮೀನುದಾರನ ಮಗಳು. ಅವರಿಬ್ಬರಿಗೂ ಪ್ರೇಮಾಂಕುರವಾಗುತ್ತದೆ. ಮುಂದೆ..? ನಿಜಕ್ಕೂ ವರುಣ ಯಾರು..? ಮುಂತಾದ ಪ್ರಶ್ನೆಗಳಿಗೆ ತಣ್ಣನೆಯ ಶೈಲಿಯಲ್ಲೇ ಉತ್ತರ ನೀಡುತ್ತಾರೆ ನಿರ್ದೇಶಕರು.
ಚಿತ್ರದ ನಿರೂಪಣೆ ಮಂದಗತಿಯದು. ಯಾವುದೇ ತುರಾತುರಿಯಿಲ್ಲದ ಸುಂದರ ಪರಿಸರದಲ್ಲಿರುವ ನಡುವಣ ಕೊಳದಲ್ಲಿನ ನೀರಿನಂತಹದ್ದು. ಚಲಿಸದ ಸ್ಥಿರ ಚಿತ್ರದಂತಿದ್ದರೂ ಕಣ್ಣಿಗೆ ತಂಪು ತಂಪು. ಏನೂ ಘಟಿಸದಿದ್ದರೂ ನೋಡುತ್ತಾ ನಿಂತರೆ ಹೇಗೆ ಬೇಸರವಾಗುವುದಿಲ್ಲವೋ ಹಾಗೆಯೇ ಈ ಚಿತ್ರವೂ. ಆದರೆ ಅದಕ್ಕೆ ಹೇಗೆ ನಿಸರ್ಗವನ್ನಾರಾಧಿಸುವ ಮನಸ್ಸು ಇರಬೇಕೋ ಹಾಗೆಯೇ ಲುಟೇರಾ ಚಿತ್ರವನ್ನು ವೀಕ್ಷಿಸಲು ಆಸ್ವಾಧಿಸಲು ಒಂದು ಮನಸ್ಥಿತಿಯೂ ಅತ್ಯಗತ್ಯ. ಯಾಕೆಂದರೆ ಸಿಂಘಂ, ದಬಾಂಗ್ ಭರಾಟೆಯ ಚಿತ್ರಗಳನ್ನು ನೋಡಿದವರು ಅದೇ ವೇಗವನ್ನು ಚಿತ್ರವಿಚಿತ್ರ ತಿರುವುಗಳನ್ನು ನಿರೀಕ್ಷಿಸುತ್ತಾ ಚಿತ್ರಮಂದಿರದಲ್ಲಿ ಕುಳಿತಿರಾದರೆ ಯಾಕೋ ಲುಟೇರಾ ಚಿತ್ರ ನಿಧಾನವೆನಿಸಿ ಬೋರ್ ಎನಿಸಲೂ ಬಹುದು.
 ಅಂದರೆ ಲುಟೇರಾ ಚಿತ್ರವನ್ನು ಸರ್ವಶ್ರೇಷ್ಠ ಚಿತ್ರವೆನ್ನಬಹುದೇ..? ಖಂಡಿತ ಇಲ್ಲ. ಚಿತ್ರದ ಗತಿ ನಿಧಾನವಾದರೂ ಅಗತ್ಯವಿರುವೆಡೆ ಚಿತ್ರವನ್ನು ಸ್ವಲ್ಪವಾದರೂ ವೇಗವಾಗಿ ನಿರೂಪಿಸಬಹುದಿತ್ತು. ಚಿತ್ರದಲ್ಲಿ ಬರುವ ಭಾವನಾತ್ಮಕ ಸನ್ನಿವೇಶದ ಚಿತ್ರಣದಂತೆಯೇ ನಾಯಕ ನಾಯಕಿ ಪ್ರೇಮಾಂಕುರದ ದೃಶ್ಯಗಳನ್ನಾದರೂ ಲವಲವಿಕೆಯಿಂದ ಅಂದಗಾನಿಸಬಹುದಿತ್ತು. ಸಂಭಾಷಣೆ ಚುರುಕಾಗಿದ್ದರೆ ಚಿತ್ರಕ್ಕೊಂದು ವೇಗ ದಕ್ಕುತ್ತಿತ್ತೇನೋ?
ಚಿತ್ರದ ಕಥೆ ಖ್ಯಾತ ಕಥೆಗಾರ ಒ ಹೆನ್ರಿಯವರದ್ದು. ದಿ ಲಾಸ್ಟ ಲೀಫ್ ಒಂದು ಸಣ್ಣ ಕಥೆ. ಅದನ್ನು ಭಾರತೀಯ ಸೊಗಡಿಗೆ ಬದಲಾಯಿಸಿ ಚಿತ್ರ ರೂಪಕ್ಕೆ ರೂಪಾಂತರಿಸಲು ಕಥೆಯನ್ನು ಹಿಗ್ಗಿಸಿರುವ ಪರಿಯನ್ನು ನಾವು ಮೆಚ್ಚಿಕೊಳ್ಳಲೇ ಬೇಕು. ಇನ್ನು ಸಂಗೀತ,ಛಾಯಾಗ್ರಹಣ, ಕಲಾ ನಿರ್ದೇಶನಗಳು ಚಿತ್ರದ ಆಶಯಕ್ಕೆ ತಕ್ಕಂತೆ ತಮ್ಮ ಸಂಪೂರ್ಣವಾದ ಬೆಂಬಲ ನೀಡಿರುವುದು ಆಯಾ ತಂತ್ರಜ್ಞರನ್ನು ಮೆಚ್ಚುಗೆಗೆ ಪಾತ್ರವಾಗಿಸುವ ಅಂಶ ಎನ್ನಬಹುದು. ನಿರ್ದೇಶಕ ಮೊತ್ವಾನಿಯವರ ಪ್ರಯತ್ನಕ್ಕೆ ಬೆಂಬಲ ಸೂಚಿಸುವುದಕ್ಕಾದರೂ ಚಿತ್ರವನ್ನೊಮ್ಮೆ ನೋಡಬಹುದು.ಅಮಿತ್ ತ್ರಿವೆದಿಯವರ ಸಂಗೀತ, ಅನುರಾಗ್ ಕಶ್ಯಪ್ ರ ಸಂಭಾಷಣೆಯಿರುವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿರುವುದು ರಣವೀರ್ ಸಿಂಗ್ ಮತ್ತು ಸೋನಾಕ್ಷಿ ಸಿನ್ಹಾ.

ಓಡುವ ಮಿಲ್ಕಾ ನನ್ನು ತಡೆಯುವವರುಂಟೆ?

ಭಾಗ್ ಮಿಲ್ಕಾ ಭಾಗ್ ಚಿತ್ರದ ಅವಧಿ ಅನಾಮತ್ತು ಮೂರು ಗಂಟೆ ಎಂಟು ನಿಮಿಷಗಳು. ಆದರೂ  ಇಡೀ ಚಿತ್ರ ನಿಮಗೆಲ್ಲೂ ಸಮಯದ ಅರಿವಾಗದಂತೆ ನೋಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರೆ ಅದರ ಸಂಪೂರ್ಣ ಮೆಚ್ಚುಗೆ ಇಡೀ ಚಿತ್ರಕ್ಕೆ ಸಲ್ಲುತ್ತದೆ. ಒಂದು ಐತಿಹಾಸಿಕ ಸಾಧಕನ ಕಥಾಲೋಕವನ್ನು ಜೀವನಚರಿತ್ರೆಯನ್ನು ಕಾಲಮಿತಿಯಲ್ಲಿ ಸಮರ್ಥವಾಗಿ ನಮ್ಮ ಮುಂದಿಡುವುದು ಕಷ್ಟವೇ. ಆದರೆ ರಂಗ್ ದೇ ಬಸಂತಿಯಲ್ಲಿ ಭಗತ್ ಸಿಂಗ್ ರ ಮಹತ್ವಾಕಕಾಂಕ್ಷೆಯನು ಮೂರು ಜನ ಯುವಕರ ಮೂಲಕ ಸಮರ್ಥವಾಗಿ ನಮ್ಮ ಮುಂದಿಟ್ಟ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಮತ್ತೆ ಅಂತಹದ್ದೇ ಭಿನ್ನ ರಂಜನೀಯ ಮತ್ತು ಅವಶ್ಯಕವಾದ ಪ್ರಯತ್ನ ಮಾಡಿದ್ದಾರೆ.
 ಈಗ ಚಿತ್ರದ ಕಥೆಯ ವಿವರ ಹೇಳುವುದಕ್ಕಿಂತ ಇದು ಭಾರತ ಕಂಡ ಅತ್ಯುತ್ತಮ ಕ್ರೀಡಾಪಟು ಮಿಲ್ಕಾ ಸಿಂಗ್ ರವರ ಜೀವನ ಚರಿತ್ರೆಯ ದೃಶ್ಯ ರೂಪ ಎನ್ನಬಹುದು. ಹಾಗಂತ ಬೋರ್ ಹೊಡೆಸುವ ಸಾಕ್ಷ್ಯಚಿತ್ರವಲ್ಲ. ಇದು ಒಬ್ಬ ವ್ಯಕ್ತಿಯ ಸಾಧನೆಯ ಹಾದಿಯ ಕಥನ. ಹಾಗಾಗಿಯೇ ಇಡೀ ಚಿತ್ರ ಒಂದು ಪಕ್ಕಾ ಮನರಂಜನೀಯ ಚಿತ್ರವಾಗಿ ನಮ್ಮ ಕಣ್ಣ ಮುಂದಿದೆ.ಚಿತ್ರದಲ್ಲಿ ಹಾಡುಗಳಿವೆ. ಅವುಗಳು ನಮಗೆ ಎದ್ದು ಹೊರಹೋಗಲು ಇರುವ ಏಕೈಕ ಮಾರ್ಗವೆನಿಸುವುದಿಲ್ಲ. ಬದಲಿಗೆ ಕಥೆಯ ಓಘಕ್ಕೆ ಮತ್ತು ಕಥೆಯಲ್ಲಿನ ಸತ್ವಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುವ ಅವಿಭಾಜ್ಯ ಅಂಗಗಳಾಗಿವೆ.
ಚಿತ್ರದ ಬೆನ್ನೆಲುಬು ಬರವಣಿಗೆ ಮತ್ತು ನಿರ್ದೇಶನ. ಒಬ್ಬ ವ್ಯಕ್ತಿಯ ಕಥೆಯನ್ನು ಚಿತ್ರರೂಪಕ್ಕೆ ಯಾರು ಬೇಕಾದರೂ ತರಬಹುದು. ಆದರೆ ದೃಶ್ಯ ಮಾಧ್ಯಮವೆಂದಾಗ ಅದಕ್ಕೆ ಅದರದೇ ಆದ ಇತಿಮಿತಿಗಳಿರುತ್ತವೆ. ವ್ಯಕ್ತಿಯ ಅಷ್ಟೂ ಇತಿಹಾಸವನ್ನು ಏಳುಬೀಳುಗಳನ್ನು ಒಂದು ಸಮಯದ ಮಿತಿಯಲ್ಲಿ ಪ್ರೇಕ್ಷಕನನ್ನು ತಣಿಸುವಂತೆ ಕಟ್ಟಿಕೊಡುವುದು ಕಷ್ಟದ ಕೆಲಸ. ಹಾಗಂತ ಪ್ರೇಕ್ಷಕರನ್ನು ಮೆಚ್ಚಿಸಲು ಹೋದಾಗ ಮನರಂಜನೆಯ ಅಂಶಗಳನ್ನು ಅಗತ್ಯಕ್ಕಿಂತ ಸೇರಿಸಿದರೆ ಇಡೀ ಚಿತ್ರದ ಆಶಯವೇ ಏರುಪೇರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿಯೇ ಇತಿಹಾಸದ ಅಷ್ಟೂ ಪುಟಗಳನ್ನ ಮನಸ್ಸಿಗೆ ತಂದುಕೊಂಡು ಅದರಲ್ಲಿನ ವಿಶೇಷವಾದ ಮತ್ತು ಅಗತ್ಯವಾದ ಅಂಶಗಳನ್ನು ಚಿತ್ರಕಥೆಯನ್ನಾಗಿಸಿದಾಗ ಭಾಗ್ ಮಿಲ್ಕಾ ಚಿತ್ರ ತಯಾರಾಗುತ್ತದೆ. ಚಿತ್ರಕಥೆಗಾರ, ಬರಹಗಾರ ಪ್ರಸೂನ್ ಜೋಶಿಗೆ ಶಹಬ್ಬಾಸ್ ಹೇಳಿ ಹಾಗೆಯೇ  ಅವರ ಕೆಲಸಕ್ಕೆ ನಿಷ್ಥೆಗೆ ತಲೆ ಬಾಗಲೇ ಬೇಕಾಗುತ್ತದೆ. ಇನ್ನು ರಾಕೇಶ್ ಓಂ ಪ್ರಕಾಶ್ ಮೆಹ್ರಾ, ಮಿಲ್ಕಾ ಸಿಂಗ್ ನ ಮಾನಸಿಕ ತಲ್ಲಣಗಳು ಮತ್ತು ಆವತ್ತಿನ ಕಾಲದ ಪರಿಸರ ಮುಂತಾದವುಗಳನ್ನು ಚಿತ್ರರೂಪಕ್ಕೆ ಕಟ್ಟಿಕೊಡುವಲ್ಲಿ ಯಶಸ್ಸು ಕಂಡಿದ್ದಾರೆ. ಪ್ರತಿಯೊಂದು ಅಂಶವನ್ನೂ ತುಂಬಾ ವಿವರವಾಗಿ ಅದ್ಯಯನ ಮಾಡಿದ್ದರೂ ಚಿತ್ರರೂಪಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಉಣಬಡಿಸಿರುವ ರಾಕೇಶ್ ರವರಿಗೆ ದೊಡ್ಡ ಸಲಾಮ್.
ಚಿತ್ರಕ್ಕೆ ದೊಡ್ಡ ಮೆರುಗು ಕೊಟ್ಟಿರುವುದು ತಾರಾಗಣ. ಮುಖ್ಯ ಪಾತ್ರವಾಗಲಿ ಅಥವಾ ಪೋಷಕ ಪಾತ್ರವಾಗಲಿ ಇಲ್ಲಿ ಎಲ್ಲರೂ ಮುಖ್ಯವಾಗುತ್ತಾರೆ. ಅಷ್ಟೇ ಅಲ್ಲ ಮಿಲ್ಕಾ ಎಂಬ ಶಿಲ್ಪದ ಕೆತ್ತನೆಯಲ್ಲಿ ಒಂದೊಂದು ಗಾತ್ರದ ಹರಿತದ ಉಳಿಯಾಗುತ್ತಾರೆ. ಪ್ರಕಾಶ್ ರಾಜ್, ನಾಯಕಿ ಸೋನಂ ಕಪೂರ್, ಮೇಷಾ ಶಾಪಿ, ದಿವ್ಯಾ ದತ್ತ್, ಯೋಗರಾಜ್ ಸಿಂಗ್ ಮುಂತಾದವರ ದೃಶ್ಯಗಳು ಲೆಕ್ಕಕ್ಕೆ ಸಿಗುವಂತಿವೆ. ಆದರೆ ಪಾತ್ರದ ತೂಕ ಮಾತ್ರ ತುಂಬಾ ಭಾರವಾದದ್ದು.  ನಾಯಕಿ ಸೋನಂ ಕಪೂರ್ ಎರಡು ಹಾಡು ಮತ್ತು ಒಂದು ನಾಲ್ಕು ದೃಶ್ಯಗಳಲ್ಲಿ ಬಂದರೂ ಕೊನೆಯವರೆಗೂ ನಮ್ಮ ನೆನಪಲ್ಲಿರುತ್ತಾರೆ. ಇನ್ನು ಇಡೀ ಮೈದಾನವೇ ಪರ್ಹಾನ್ ಅಖ್ತರ್ ರವರದು. ಪ್ರಾರಂಭದಿಂದ ಅಂತ್ಯದವೆರೆಗೂ ಒಂದೇ ಓಟ. ಅವರ ಮಿಲ್ಕಾ ಸಿಂಗ್ ಜೀವನದ ಪ್ರತಿ ಮಜಲುಗಳನ್ನು ನಿರ್ದೇಶಕರ ಕಣ್ಣಲ್ಲಿದ್ದ ಚಿತ್ರಕ್ಕೆ ಒಂದು ಚೂರು ಚ್ಯುತಿ ಬರದಹಾಗೆ ನಿರ್ವಹಿಸಿರುವ ಅಖ್ತರ್ ಮಿಲ್ಕಾ ಆಗಿ ಅದ್ಭುತವಾಗಿ ನಟಿಸಿ ನಮ್ಮ ಮನಗೆಲ್ಲುತ್ತಾರೆ.
ತಾಂತ್ರಿಕ ಅಂಶಗಳು ಕಥೆಗೆ ಪ್ರೇರಕವಾಗಿವೆ.ಶಂಕರ್ ಎಹಸಾನ್ ಲಾಯ್ ಸಂಗೀತವನ್ನು ಮೆಚ್ಚಲಾರ್ಹ ಅಂಶಗಳ ಪಟ್ಟಿಗೆ ಸೇರಿಸಬಹುದು.

ಇದು ಸಮಾಜಮುಖಿ ಚಿತ್ರ. ಇಲ್ಲಿ ಜಾತಿ ಮತ ಮುಂತಾದವುಗಳಿಗಿಂತ ಸಾಧನೆ ದೇಶ ಪ್ರೇಮವಿದೆ. ಇಂತಹ ಚಿತ್ರಗಳೂ ಯಾವತ್ತಿಗೂ ಸಲ್ಲುವಂತಹದ್ದು. ಪ್ರತಿ ದೇಶಪ್ರೇಮಿಯೂ, ಭಾರತೀಯನೂ, ಕ್ರೀಡಾಪ್ರೇಮಿಯೂ ಚಿತ್ರರಸಿಕನೂ ನೋಡಲೇಬೇಕಾದ ಚಿತ್ರವಿದು.