Saturday, February 2, 2013

ಮುತ್ತಾಗದ ಮಣಿ, ಮೊರೆಯದ ಕಡಲು.

ಚಿತ್ರ ಬಿಡುಗಡೆಯಾಗಿದೆ. ಮೊದಲ ಆಟದ ಸಮಯ. ಜನರಿಲ್ಲ. ಟಿಕೆಟ್ ಗಳಿಗೆ ಸಂಖ್ಯೆಯ ಹಂಗಿಲ್ಲ. ಸರತಿಯ ಸಾಲಿಲ್ಲ. ಟಿಕೇಟು ಕೊಂಡುಕೊಂಡು ಒಳಬಂದಾಯ್ತು. ಸಿನಿಮಾವೂ ಶುರುವಾಯಿತು. ಜನರಲ್ಲಿ ಅಸಹನೆ. ಆವಾಗಾವಾಗ ಎದ್ದು ಹೊರಗಡೆ ಹೋಗುತ್ತಾರೆ. ಸಿಗರೇಟು ಸೇದುತ್ತಾರೆ. ಮೊಬೈಲ್ ಹಿಡಿದುಕೊಂಡು ಒಂದಷ್ಟು ಜನ ಹೊರಗೆ ಹೋಗಿ ಮಾತಾಡಿಕೊಂಡು ಬರುತ್ತಾರೆ. ಆದರೆ ಕೆಲವೊಬ್ಬರು ಅಲ್ಲೇ ಸೀಟಿಗೆ ಒರಗಿ ಮೊಬೈಲಿನಲ್ಲಿ ಮಾತಾಡಲು ಪ್ರಯತ್ನಿಸುತ್ತಾರೆ. ಸಿನಿಮಾದ ದೃಶ್ಯದಲ್ಲಿ ಶಬ್ದ ಜೋರಾದದ್ದಕ್ಕೆ ಶಪಿಸುತ್ತಾರೆ. ಮಧ್ಯಂತರ ಬರುತ್ತದೆ. ಅದಾದ ನಂತರ ಎಷ್ಟೋ ಜನ ಮತ್ತೆ ಒಳಬರುವುದೋ ಏನೋ  ಎಂಬ ಚಿಂತೆಗೆ ಬೀಳುತ್ತಾರೆ. ಶುರುವಾಗಿ ಸ್ವಲ್ಪ ಹೊತ್ತಾದ ಮೇಲೆ ಬೇಕೋ ಬೇಡವೋ ಎಂಬಂತೆ ಒಳಬರುತ್ತಾರೆ. ಆನಂತರ ಮುಗಿಯಲು ಇನ್ನೂ ಸಮಯವಿರುವಾಗಲೇ  ಎದ್ದು ಹೊರಬರುತ್ತಾರೆ.
ಇದು ಈವತ್ತು ಕಡಲ ಚಿತ್ರ ಪ್ರದರ್ಶನವಿದ್ದ ಚಿತ್ರಮಂದಿರದಲ್ಲಿ ಕಂಡುಬಂದಂತಹ ದೃಶ್ಯ. ಹಾಗಂತ ಚಿತ್ರ ಅಷ್ಟು ಕೆಟ್ಟದಾಗಿದೆಯಾ..?
ಚಿತ್ರದ  ನಾಯಕ ಅನಾಥ. ನಾಯಕಿ ವಿಲನ್ ಮಗಳು. ಇವರಿಬ್ಬರ ಪ್ರೀತಿ.ಅನಾಥನಿಗೆ ಆಸರೆಯಾಗುವವನು ಅಲ್ಲಿನ ಚರ್ಚಿನ ಪಾದ್ರಿ. ಇವರಿಗೆ ಎದುರಾಗಿ ನಿಲ್ಲುವವನು ವಿಲನ್. ಮೊದಲು ವಿಲನ್ ಮತ್ತು ಪಾದ್ರಿಗೂ ಪರಿಚಯ ಮತ್ತು ಸಂಘರ್ಷವಿರುತ್ತದೆ. ಪಾದ್ರಿಯ ತತ್ವ ಯಾವತ್ತಿಗೂ ಒಳ್ಳೆತನಕ್ಕೆ ಬೆಲೆಯಿದೇ ಮತ್ತು ಅದೇ ಗೆಲ್ಲುತದೆ ಎಂಬುದು.ಇಷ್ಟು ಹೇಳಿದ ಮೇಲೆ ಮುಂದೇನಾಗುತ್ತದೆ ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು. ಆದರೆ ಚಿತ್ರ ನಮ್ಮನ್ನು ಕಾಡುವುದು, ಕಾಡಿ ಕಾಡಿ ಕಂಗೆಡಿಸುವುದು, ಸುಸ್ತು ಮಾಡುವುದು, ಅದರ ಏಕತಾನತೆಯಿಂದ. ಇಡೀ ಚಿತ್ರದಲ್ಲಿ ಎಲ್ಲೂ ನಗುವಿಲ್ಲ. ಒಂದಷ್ಟು ರೋಮಾನ್ಸ್ ಬಿಟ್ಟರೆ ಬೇರೆಲ್ಲಾ ಬರೀ ಮಾತುಕತೆಯೇ.ನಿಧಾನಕ್ಕೆ ನಡೆಯುವ ಅನಪೇಕ್ಷಿತ ದೃಶ್ಯಾವಳಿಗಳೇ.
ಮಣಿರತ್ನಂ ಚಿತ್ರಗಳೆಂದರೆ ತಂತ್ರಜ್ಞಾನದ ಬಗ್ಗೆ ಮಾತನಾಡುವ ಹಾಗಿಲ್ಲ. ಅದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಛಾಯಾಗ್ರಹಣ, ಸಂಗೀತ ಮುಂತಾದವುಗಳನ್ನೆಲ್ಲಾ ದಿಗ್ಗಜರೆ ಮಾಡಿರುವುದರಿಂದ ಅವೆಲ್ಲಾ ಪರಿಣಾಮಕಾರಿಯಾಗಿಯೇ ಇವೆ. ಆದರೆ ಚಿತ್ರದ ಕಥೆ ನಿರೂಪಣೆ ಮಾತ್ರ ನಿಂತ ನೀರು.ವಿಲನ್ ಆಗಿ ಅರ್ಜುನ ಸರ್ಜಾ ಪಾದ್ರಿಯಾಗಿ ಅರವಿಂದ್ ಸ್ವಾಮೀ ಉತ್ತಮ ಅಭಿನಯ ನೀಡಿದ್ದಾರೆ. ಆದರೆ ನಾಯಕ ಗೌತಂ ಕಾರ್ತಿಕ್ ಅಭಿನಯ ಸಾದಾರಣ.
ಚಿತ್ರದ  ಉದ್ದೇಶ ಮನರಂಜನೆಯೇ ಆಗಿರಬೇಕು ಎಂಬುದೆನಿಲ್ಲ. ಒಂದು ಗಂಭೀರವಾದ ವಿಚಾರವನ್ನೂ ಪ್ರೇಕ್ಷಕರ ಮುಂದಿಡುವುದೂ ಆಗಿರಬಹುದು. ಅಥವಾ ಒಬ್ಬ ವ್ಯಕ್ತಿಯ ಜೀವನ ಚರಿತ್ರೆ, ಒಂದು ಘಟನೆಯ ವರದಿಯೂ ಆಗಿರಬಹುದು. ಅಥವಾ ಒಂದು ಕಾಲ್ಪನಿಕ ವಿಷಯದ ವಿವರಣೆಯೂ ಇರಬಹುದು. ಆದರೆ ಮಣಿರತ್ನಂ ಅದ್ಯಾವುದೂ ಅಲ್ಲದ  ಸರ್ವೆ ಸಾದಾರಣವಾದ   ಚಿತ್ರವೊಂದನ್ನು ಬಹಳಷ್ಟು ವೆಚ್ಚಮಾಡಿ ಅತ್ಯುತಮ ತಂತ್ರಜ್ಞರನ್ನು ಕಲೆಹಾಕಿ  ಹೊರತಂದಿದ್ದಾರೆ. ಕಡಲ ಅಲೆ, ಮೊರೆತ, ಸುತ್ತ ಮುತ್ತಲ ಕಣ್ತಣಿಸುವ ಪ್ರದೇಶಗಳು ಮುಂತಾದವುಗಳು ಚೆಂದಕ್ಕೆ ಕಾಣಿಸಿದರೂ ಸಿನಿಮಾಕ್ಕೆ ಕಥೆಗೆ ಏನೂ ಸಹಾಯ ಮಾಡಿಲ್ಲ.
ಚಿತ್ರ ನೋಡಿ ಹೊರಬಂದ ಮೇಲೆ ನಮಗೆ ಉಳಿಯುವುದು ಕಡಲಿನ ಮೊರೆತದ ಸದ್ದು , ಬೇಸರ ಮತ್ತು ಅರ್ಧ ಟಿಕೇಟಿನ ತುಂಡು ಮಾತ್ರ.

Friday, February 1, 2013

ಲಿಂಕನ್:ಆಸ್ಕರ ಕಣದ ಚಿತ್ರಗಳು

ಸ್ಟೀವನ್ ಸ್ಪೀಲ್ ಬರ್ಗ್ ಎಂದರೆ ನಮ್ಮಂಥ ಚಿತ್ರರಸಿಕರಲ್ಲಿ ಒಂದು ಮಿಂಚಿನ ಸಂಚಲನವಾಗುವುದು ಸತ್ಯದ ಸಂಗತಿ. ಅದ್ದೂರಿತನ ಮತ್ತು ವಸ್ತು ವಿಷಯದಲ್ಲಿ ಸ್ಪೀಲ್ ಬರ್ಗ್ ಚಿತ್ರಗಳು ಎಂದಿಗೂ ಮುಂಚೂಣಿಯಲ್ಲೇ ಇರುತ್ತವೆ. ಅವರ ಕಡಿಮೆ ವೆಚ್ಚದ ಡುಯೇಲ್ ನಿಂದ ಹಿಡಿದು ಜುರಾಸ್ಸಿಕ್ ಪಾರ್ಕ, ಶಿಂಡ್ಲರ್ಸ್ ಲಿಸ್ಟ್, ಎ,ಐ. ಮುಂತಾದ ಚಿತ್ರಗಳನ್ನು ಮರೆಯಲು ಹೇಗೆ ಸಾಧ್ಯ.ಇಲ್ಲಿಯವರೆಗೆ ನಿರ್ದೇಶನದಲ್ಲಿ ಅರ್ಧ ಶತಕ ಭಾರಿಸಿರುವ ಸ್ಪೀಲ್ ಬರ್ಗ್ ಮೂರು ಆಸ್ಕರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಅಪರೂಪದ ನಿರ್ದೇಶಕ.
 ಈ ವರ್ಷದ ಆಸ್ಕರ್ ಪಟ್ಟಿಯಲ್ಲಿ ಅತಿ ಹೆಚ್ಚು ವಿಭಾಗಕ್ಕೆ ಅಂದರೆ 12 ವಿಭಾಗಗಳಿಗೆ ನಾಮಾಂಕಿತಗೊಂಡಿರುವ ಚಿತ್ರ ಇದೆ ಸ್ಪೀಲ್ ಬರ್ಗ್ ನಿರ್ದೇಶನದ ಲಿಂಕನ್. ಭಾರತೀಯ ಸಂಸ್ಥೆ ರಿಲಾಯನ್ಸ್ ನ ಸಹ ನಿರ್ಮಾಣದೊಂದಿಗೆ ತಯಾರಾಗಿರುವ ಚಿತ್ರ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ವಿಜೇತೆ  ಡೋರಿಸ್ ಕೆಅರ್ನ್ಸ್ ಗುಡ್ ವಿನ್ ಳ ಕಾದಂಬರಿ ಆಧರಿಸಿದೆ.
ಚಿತ್ರದ ಕಥೆ ಅಬ್ರಾಹಾಂ ಲಿಂಕನ್ ರ ರಾಜಕೀಯ ಜೀವನ ಮತ್ತು ಗುಲಾಮಗಿರಿ ವಿರುದ್ಧದ 13 ನೆಯ ತಿದ್ದುಪಡಿಯನ್ನು ಅನುಷ್ಠಾನಕ್ಕೆ ತರುವುದರ ಕುರಿತದ್ದಾಗಿದೆ. ವರ್ಣಬೇಧ ನೀತಿಯಿಂದಾಗಿ ದೇಶದಲ್ಲಿ ಕರಿಯರ ಮೇಲಿನ ದೌರ್ಜನ್ಯ ಅತಿಯಾದ ಸಂದರ್ಭದಲ್ಲಿ ಲಿಂಕನ್ ಅದರ ವಿರುದ್ಧ ಹೋರಾಡುವ ಕಥೆ ಚಿತ್ರದ್ದು.
ಚಿತ್ರದ ಪ್ರಾರಂಭದಲ್ಲೇ ಸ್ಪೀಲ್ ಬರ್ಗ್ ಹಿಡಿದು ಕೂರಿಸಿಬಿಡುತ್ತಾರೆ ಕರಿಯರನ್ನು ಬಿಳಿಯ ಸೈನಿಕರು ತುಳಿದು ಸಾಯಿಸುವ ದೃಶ್ಯ ಮನಕಲಕುತ್ತದೆ . ಸಂವಿಧಾನದ 13 ನೆಯ ತಿದ್ದುಪಡಿಯನ್ನೂ ಜಾರಿಗೆ ತರಲೆಬೇಕೆಂಬುದು ಲಿಂಕನ್ ಧೇಯೋದ್ದೇಶ. ಆದರೆ ಇನ್ನು ಸಿವಿಲ್ ವಾರ್ ಮುಗಿದಿಲ್ಲದ ಕಾರಣ ಅದರ ಜಾರಿಗೆ ನಿಲ್ಲುವುದು ರಾಜಕೀಯ ಸ್ಥಿತಿಗತಿಯಲ್ಲಿ ಏರುಪೇರು ತರುವುದು ಲಿಂಕನ್ನರಿಗೂ ಗೊತ್ತಿದ್ದ ಸಂಗತಿ. ಅದೂ ಅಲ್ಲದೆ ಆ ಒಂದು ತಿದ್ದುಪಡಿಯ ಪರವಾಗಿ ನಿಂತರೆ ತುಂಬಾ ಜನ ರಾಜಕೀಯ ಹಿತೈಶಿಗಳನ್ನು ಕಳೆದುಕೊಳ್ಳಬೇಕಾಗಿ ಬರುತ್ತದೆನ್ನುವುದು ಸತ್ಯ. ಹಾಗಾಗಿಯೇ ಲಿಂಕನ್ ರಿಪಬ್ಲಿಕನ್ ಪಕ್ಷದ ಸ್ಥಾಪಕ ಫ್ರಾನ್ಸಿಸ್ ಮೇಲೆ ನಂಬಿಕೆಯಿರಿಸುತ್ತಾರೆ. ಪ್ರಾನ್ಸಿಸ್ ಇದಕ್ಕೆ ಒಪ್ಪಿದರೂ ತನ್ನದೇ ಆದ ಶರತ್ತನ್ನು ಒಡ್ಡುತ್ತಾನೆ. ಯಾವುದೇ ಇತ್ಯರ್ಥವಾಗದೆ ಯುದ್ಧ  ನಿಲ್ಲಿಸಲು ಸಾಧ್ಯವಿಲ್ಲವಾದರೂ ಪ್ರಾನ್ಸಿಸ್ನ ಬೆಂಬಲದ ಅವಶ್ಯಕತೆ ಬೇಕೆಬೇಕಾದ್ದರಿಂದ ಲಿಂಕನ್ ಬೇರೆ ದಾರಿ ಕಾಣದೆ ಪ್ರಾನ್ಸಿಸ್ ಷರತ್ತಿಗೆ ಅಸ್ತು ಎನ್ನುತ್ತಾನೆ. ಇದರ ಮಧ್ಯ ತಿದ್ದುಪಡಿಗಾಗಿ ಎಲ್ಲರ ಬೆಂಬಲ ತೆಗೆದುಕೊಳ್ಳಲು ಪ್ರಯತ್ನಿಸುವ ಲಿಂಕನ್ ಮತ್ತು ವಿಲಿಯಂ ಅದಕ್ಕಾಗಿ ಹರಸಾಹಸ ಪಡಬೇಕಾಗುತ್ತದೆ. ಅಂತೂ ಇಂತೂ 13ನೆ ವಿಧಿಯ ಜಾರಿಯಾಗುವಲ್ಲಿಗೆ ಚಿತ್ರ ಕೊನೆಯ ಘಟ್ಟಕ್ಕೆ ಬಂದು ನಿಲ್ಲುತ್ತದೆ.  ಆನಂತರ ಲಿಂಕನ್ ಯುದ್ಧ ಭೂಮಿಗೆ ಭೇಟಿ ನೀಡುವುದು, ಆನಂತರ ಆತನ ಹತ್ಯೆ ಮುಂತಾದವುಗಳನ್ನು ನಿರ್ದೇಶಕರು ತ್ವರಿತಗತಿಯಲ್ಲಿ ತೋರಿಸಿಬಿಡುತ್ತಾರೆ. ಚಿತ್ರದ ಗತಿ ನಿದಾನವಾಗಿ ಸಾಗುತ್ತದೆಯಾದರೂ ಎಲ್ಲೂ ತನ್ನ ಹಿಡಿತವನ್ನು ಕಳೆದುಕೊಳ್ಳುವುದಿಲ್ಲ ಆದರೆ ಸುಮಾರು ಎರಡೂವರೆ ಘಂಟೆಗಳ ಅವಧಿಯ ಚಿತ್ರದಲ್ಲಿ ರೋಚಕತೆಯಿಲ್ಲ . ಚಿತ್ರವನ್ನೂ  ನೋಡುವುದಕ್ಕೂ ಮೊದಲು ಚಿತ್ರದ ಹಿನ್ನೆಲೆ, ಅಮೆರಿಕಾದ ಸಂವಿಧಾನ, ಲಿಂಕನ್ ಮತ್ತು ವರ್ಣಬೇಧ ನೀತಿಯ ಬಗ್ಗೆ ಸ್ವಲ್ಪ ಅರಿವಿದ್ದರೆ ಚಿತ್ರ ಸಹನೀಯವಾಗುತ್ತದೆ.  ಸರಿಯಾಗಿ ಮಗ್ನನಾಗಿ ನೋಡಿದರೆ ಪ್ರಾರಂಭದಿಂದ ಕೊನೆಯವರೆಗೂ ಕುತೂಹಲದಿಂದ ನೋಡಿಸಿಕೊಳ್ಳುತ್ತಾ ಸಾಗುತ್ತದೆ.
ಇದು  ಲಿಂಕನ್ ಜೀವನ ಚರಿತ್ರೆಯಲ್ಲ. ಬದಲಿಗೆ ಲಿಂಕನ್ ವರ್ಣಬೇಧ ನೀತಿಯನ್ನು ಜಾರಿಗೊಳಿಸುವುದಕ್ಕಾಗಿ ಮಾಡಿದ ಹೋರಾಟದ ಕಥೆ ಎನ್ನಬಹುದು. ಹಾಗಾಗಿಯೇ ಚಿತ್ರ ಅಲ್ಲಿಂದಲೇ ಪ್ರಾರಂಭವಾಗಿ ಅಲ್ಲಿಗೆ ಮುಗಿಯುತ್ತದೆ. ಚಿತ್ರದ ಕೊನೆಯಲ್ಲೂ ಕೂಡ ಲಿಂಕನ್ ರ ಸಾವನ್ನು ನಿರ್ದೇಶಕ ಹೈಲೈಟ್ ಮಾಡುವುದಿಲ್ಲ. ಚಿತ್ರದ ಅಂತ್ಯ ಕೂಡ ಲಿಂಕನ್ ರ ಭಾಷಣದ ಮೂಲಕ ಕೊನೆಯಾಗುತ್ತದೆ. ಬಹುಶ ಸ್ಪೀಲ್ ಬರ್ಗ್ ಉದ್ದೇಶ ಲಿಂಕನ್ ಅವರ ಸಾಧನೆಯ ಹಾದಿಯನ್ನು ವಿಷದಪದಿಸುವುದಷ್ಟೇ ಆಗಿರಬಹುದು. ಹಾಗಾಗಿಯೇ ಇಲ್ಲಿ ಲಿಂಕನ್ ರ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು ವಿವರಗಳಿಲ್ಲ. ಅವರ ಹಿನ್ನೆಲೆ , ಬಾಲ್ಯ ಕೂಡ ಚಿತ್ರದ ನಿರೂಪಣೆಯಲ್ಲಿ ಬರುವುದಿಲ್ಲ. ಹಾಗೆ ಅವರ ಹತ್ಯೆಯ ವಿವರಗಳು, ಹತ್ಯೆಯ ಘಟನೆಯನ್ನು ನೇರವಾಗಿ ತೋರಿಸಿಲ್ಲ. ಬರೇ ಲಿಂಕನ್ ರನ್ನು ಶೂಟ್ ಮಾಡಿದ್ದಾರೆ ಎಂಬ ಸುದ್ದಿ ಬರುವಲ್ಲಿಗೆ ಅದನ್ನು ಮೊಟಕುಗೊಳಿಸಲಾಗಿದೆ.
ಚಿತ್ರದ  ಪಾತ್ರಧಾರಿಗಳಲ್ಲಿ ಲಿಂಕನ್ ಪಾತ್ರ ನಿರ್ವಹಿಸಿರುವ ಡೆನಿಯಲ್ ಲೇ ಡೇವಿಸ್ ನಮಗೆ ಅಬ್ರಾಹಂ ಲಿಂಕನ್ ರ ಪ್ರತಿರೂಪದಂತೆಯೇ ಕಾಣಿಸುತ್ತಾರೆ. ನಾನು ಲಿಂಕನ್ ಫೋಟೂಗಳನ್ನು ನೋಡಿದ್ದು ಪುಸ್ತಕಗಳಲ್ಲಿ . ಅದೇ ಪ್ರತಿರೂಪದ ಲಿಂಕನ್ ನಮಗೆ ಈ ಚಿತ್ರದಲ್ಲಿ ಕಾಣಸಿಗುವುದನ್ನು ಕಂಡಾಗ ಅಮೆರಿಕಾದ ಚಿತ್ರಕರ್ಮಿಗಳ ಪ್ರಸಾದನ ಸಾಮರ್ಥ್ಯ ಮತ್ತು ಕಲಾವಿದರ ಪಾತ್ರದೆಡಿಗಿನ ತನ್ಮಯತೆಯ ಬಗ್ಗೆ ಮೆಚ್ಚುಗೆ ಮೂಡದಿರದು.

Monday, January 28, 2013

ವಿಶ್ವರೂಪಂ.ವಿ-ರೂಪಂ.....?

ಶಾರುಕ್ ಖಾನ್ ನಿರ್ಮಿಸಿ ನಟಿಸಿದ ರಾ.ಒನ್ ಚಿತ್ರ ಎಲ್ಲರಿಗೂ ಗೊತ್ತಿರಬಹುದು.ಭಾರತದ ಅತ್ಯಂತ ಹೆಚ್ಚು ವೆಚ್ಚದ ಚಿತ್ರ ಎಂದು ಖ್ಯಾತಿಗಳಿಸಿದ ಚಿತ್ರ ತಾಂತ್ರಿಕವಾಗಿ ತುಂಬಾ ಮುಂದೆ ಇತ್ತು. ಚಿತ್ರದ ಗ್ರಾಫಿಕ್ಸ್ ಹಾಲಿವುಡ್ ಚಿತ್ರಗಳಲ್ಲಿನ ದೃಶ್ಯ ವೈಭವಕ್ಕೆ ಸಮವಾಗಿತ್ತು. ಅದರಲ್ಲೂ ಕೆಲವು ದೃಶ್ಯಗಳನ್ನು ಹಾಲಿವುಡ್ಡಿನ ಸೂಪರ್ ಹಿಟ್ ಚಿತ್ರಗಳಿಂದ ನೇರವಾಗಿ ಎತ್ತಿದ್ದರೂ ಗುಣಮಟ್ಟದಲ್ಲಿ ಯಾವುದೇ ಕುಂದು ಕೊರತೆಗಳಿರಲಿಲ್ಲ. ಆದರೆ ಕೊರತೆಯಿದ್ದದ್ದು ಮಾತ್ರ ಕಥೆಯಲ್ಲಿ. ತೀರಾ ಅಸಂಗತವಾದ ಅತ್ತ ಮಜವನ್ನೂ  ಕೊಡದ ವಾಹ್ ಎನಿಸದ ಜೀ ಒನ್ ಪಾತ್ರ ಚಿತ್ರದ ಸೋಲಿಗೆ ಪ್ರಮುಖ ಕಾರಣವಾಗಿತ್ತು ಎನ್ನಬಹುದು.
ಕಮಲಹಾಸನ್ ನಿರ್ದೇಶನದ, ಅಭಿನಯದ ವಿಶ್ವರೂಪಂ ಚಿತ್ರ ನೋಡುವಾಗ ರಾ.ಒನ್ ಚಿತ್ರ ನೆನಪಾಗುವುದು ಸ್ವಾಭಾವಿಕ. ಯಾಕೆಂದರೆ ಇಲ್ಲೂ ಆ ಚಿತ್ರದಂತೆಯೇ ಅದ್ಭುತ ತಂತ್ರಜ್ಞಾನವಿದೆ. ಮೈ ನವಿರೇಳಿಸುವ ಸಾಹಸ ದೃಶ್ಯಗಳಿವೆ.ಆದರೆ ಇಲ್ಲದೆ ಇರುವುದು ಅಥವಾ ಇದ್ದೂ ಇಷ್ಟವಾಗದಂತಿರುವುದು  ಕಥೆ ಮಾತ್ರ. ಹೌದು! ವಿಶ್ವರೂಪಮ್ ತಾಂತ್ರಿಕವಾಗಿ ಶ್ರೇಷ್ಠತೆ ಮೆರೆದಿರುವ ಚಿತ್ರ. ಹಾಗೆ ಚಿತ್ರದ ಹಿನ್ನೆಲೆಯಲ್ಲಿ  ಕೂಡ ಭಯೋತ್ಪಾದನೆಯ ಎಳೆ ಇರುವುದರಿಂದ  ಪ್ರಚಲಿತ ವಿದ್ಯಮಾನಕ್ಕೆ ಸಂಬಂಧಿಸಿದ ಚಿತ್ರ ಎನ್ನಬಹುದಾದರೂ ಕಥೆ/ಚಿತ್ರಕಥೆಯ ಹೆಣಿಗೆ ಮಾತ್ರ ತೀರಾ ನೀರಸವಾದದ್ದು. ತುಂಬಾ ವೆಚ್ಚದ, ನಿರೀಕ್ಷೆಗಳ ಚಿತ್ರಗಳನ್ನೂ ಕಾತುರನಾಗಿ ನೋಡಿದಾಗ ಈ ಒಂದು ಭಾವ ಹುಟ್ಟಿಬಿಟ್ಟಾಗ ನಮ್ಮ ಮೇಲೆಯೇ ಅನುಮಾನ ಮೂಡುವುದು ಸಹಜ. ನಾವೇ ಅತಿಯಾದ ನಿರೀಕ್ಷೆ ಮಾಡಿಬಿಟ್ಟೆವಾ  ಅಥವಾ ತುಂಬಾ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ಏನೂ ಇಲ್ಲ ಎನ್ನುವುದು ನಮ್ಮ ಸ್ವಾಭಾವಿಕ ಹಿಂಸಾ ವಿನೋದದ ಗುಣವಾ ಎಂಬ ಗೊಂದಲ ನನಗಂತೂ ಮೂಡುತ್ತದೆ. ಆದರೆ ಚಿತ್ರ ನೋಡಿಬಂದ ಪ್ರೇಕ್ಷಕರ ಮುಖಗಳಲ್ಲಿ ಅಸಂತೃಪ್ತಿ ಕಂಡು ಬಂದಾಗ ಏನೋ ಊನವಿರುವುದು ನಿಜ ಎನಿಸುತ್ತದೆ.
ಖಳನಾಯಕ/ಉಗ್ರವಾದಿ ನ್ಯೂ ಯಾರ್ಕ್ ನಗರದಲ್ಲಿ ಬಾಂಬ್ ಸ್ಫೋಟಿಸಿ ಹಾನಿ ಮಾಡಬೇಕೆಂಬ ದುಷ್ಕೃತ್ಯಕ್ಕೆ ಕೈಹಾಕಿದಾಗ ನಾಯಕ ಬಿಡಲಾಗುತ್ತದೆಯೇ...ಸುಮ್ಮನಿರುವುದು ಸಾಧ್ಯವೇ...ಅಮೆರಿಕಾದ ಪೋಲಿಸ್ ಬೆಂಬಲ ತೆಗೆದುಕೊಂಡು ಅವರನ್ನು ಸಂಹರಿಸುವ ಕಾರ್ಯಕ್ಕೆ ಕೈಹಾಕುವುದರಿಂದ ಇದೊಂದು ಸಾಹಸಮಯ ಚಿತ್ರ ಎನ್ನಬಹುದು. ಹೆಲಿಕಾಪ್ಟರ್ ಗಳ ಹಾರಾಟ, ಗುಂಡಿನ ಮೊರೆತ ಬಾಂಬ್ ಸ್ಫೋಟದ ಸದ್ದು ಚಿತ್ರನೋಡಿ ಚಿತ್ರಮಂದಿರದಿಂದ ಹೊರಬಂದ ಮೇಲೂ ಕಿವಿಯಲ್ಲಿ ಮೊರೆಯುತ್ತಿರುತ್ತದೆ.
ಕಥಕ್ ನಾಟ್ಯ ಕಲಿಸುವ ಗುರುವಾಗಿರುವ ನಾಯಕನ ಹೆಂಡತಿಗೆ ನಾಯಕನ ಮೇಲೆ ಎಂಥದೋ ಅನುಮಾನ. ಹೆಣ್ಣಿಗನಂತಿರುವ ಗಂಡ ಬೇರೊಂದು ಸಂಬಂಧವಿರಿಸಿಕೊಂಡಿರಬಹುದಾ..? ಈ ಎಳೆಯ ಮೂಲಕ ಸಿನೆಮಾವನ್ನು ಒಂದು ಕೌಟುಂಬಿಕ ಕಥಾಹಂದರದ ಚಿತ್ರ ಎನ್ನಬಹುದು. ಅಥವಾ ಒಂದು ಸಾಂಸಾರಿಕ ವಸ್ತು ಕೂಡ ಚಿತ್ರದಲ್ಲಿದೆ ಎನ್ನಬಹುದೇನೋ...ಹಾಗೆ ನಾಯಕ ಮುಸ್ಲಿಂ, ಹಿಂದೆ ಉಗ್ರಗಾಮಿಗಳ ಗುಂಪಿಗೆ ಸೇರಿರುತ್ತಾನೆ  ಎಂಬುದು   ಚಿತ್ರದಲ್ಲಿ ಬಯಲಾಗುವ ನಿಗೂಢ ರಹಸ್ಯ..
ಈ ಎಲ್ಲ ಅಂಶಗಳನ್ನು ಜೋಡಿಸಿರುವ ಆ ಮೂಲಕ ಒಂದು ಒಟ್ಟಾರೆ ಕಥೆಯನ್ನಾಗಿ ಹೆಣೆದಿರುವ ಪ್ರಯತ್ನ ಮಾತ್ರ ಪರಿಣಾಮಕಾರಿಯಾಗಿಲ್ಲ ಎನ್ನಬಹುದು. ಕಮಲಹಾಸನ್ ಎಲ್ಲಾ ರೀತಿಯಲ್ಲೂ, ಎಲ್ಲಾ ದೃಶ್ಯಗಳಲ್ಲೂ ಅಷ್ಟೇನೂ ಭಿನ್ನವಾಗಿ ಕಾಣುವುದಿಲ್ಲ. ಹಾಗಂತ ಅವರು ಅಭಿನಯಿಸಿಲ್ಲ ಎಂಬರ್ಥವಲ್ಲ. ಪ್ರತಿಯೊಂದು ದೃಶ್ಯವೂ ಭಿನ್ನವಾಗಿರಬೇಕು, ಶ್ರೀಮಂತವಾಗಿರಬೇಕು ಎಂಬುದನ್ನು ಹಠತೊಟ್ಟು ಸಾಕಾರಗೊಳಿಸಿರುವ ಕಮಲ್ ಎಲ್ಲಿ ಎಡವಿದ್ದಾರೆ ಎಂಬುದನ್ನು ಮತ್ತೊಮ್ಮೆ ಮಗದೊಮ್ಮೆ ಪರೀಕ್ಷಿಸಿದರೆ ಬಾಣ ಕಥೆ  ಎಂಬಲ್ಲೇ ಹೋಗಿ ಚುಚ್ಚಿಕೊಳ್ಳುತ್ತದೆ.
ಕೆಲವುಕಡೆ  ಹಿನ್ನೆಲೆ ಸಂಗೀತದ ಆಬ್ಬರ ಮಾತುಗಳನ್ನೇ ನುಂಗಿಹಾಕಿದೆಯಾದರೂ ಒಟ್ಟಾರೆಯಾಗಿ ಪರಿಣಾಮಕಾರಿಯಾಗಿದೆ.ಸಾಹಸ, ಅತ್ಯುತ್ತಮ ಛಾಯಾಗ್ರಹಣ ಅದ್ಭುತ ಲೊಕೇಶನ್ ಗಳನ್ನು ನೋಡಿ ಮಾರುಹೋಗುವುದಾದರೆ ಒಮ್ಮೆ ನೋಡಲೇಬೇಕಾದ ಚಿತ್ರ ವಿಶ್ವರೂಪಂ.