Saturday, February 2, 2013

ಮುತ್ತಾಗದ ಮಣಿ, ಮೊರೆಯದ ಕಡಲು.

ಚಿತ್ರ ಬಿಡುಗಡೆಯಾಗಿದೆ. ಮೊದಲ ಆಟದ ಸಮಯ. ಜನರಿಲ್ಲ. ಟಿಕೆಟ್ ಗಳಿಗೆ ಸಂಖ್ಯೆಯ ಹಂಗಿಲ್ಲ. ಸರತಿಯ ಸಾಲಿಲ್ಲ. ಟಿಕೇಟು ಕೊಂಡುಕೊಂಡು ಒಳಬಂದಾಯ್ತು. ಸಿನಿಮಾವೂ ಶುರುವಾಯಿತು. ಜನರಲ್ಲಿ ಅಸಹನೆ. ಆವಾಗಾವಾಗ ಎದ್ದು ಹೊರಗಡೆ ಹೋಗುತ್ತಾರೆ. ಸಿಗರೇಟು ಸೇದುತ್ತಾರೆ. ಮೊಬೈಲ್ ಹಿಡಿದುಕೊಂಡು ಒಂದಷ್ಟು ಜನ ಹೊರಗೆ ಹೋಗಿ ಮಾತಾಡಿಕೊಂಡು ಬರುತ್ತಾರೆ. ಆದರೆ ಕೆಲವೊಬ್ಬರು ಅಲ್ಲೇ ಸೀಟಿಗೆ ಒರಗಿ ಮೊಬೈಲಿನಲ್ಲಿ ಮಾತಾಡಲು ಪ್ರಯತ್ನಿಸುತ್ತಾರೆ. ಸಿನಿಮಾದ ದೃಶ್ಯದಲ್ಲಿ ಶಬ್ದ ಜೋರಾದದ್ದಕ್ಕೆ ಶಪಿಸುತ್ತಾರೆ. ಮಧ್ಯಂತರ ಬರುತ್ತದೆ. ಅದಾದ ನಂತರ ಎಷ್ಟೋ ಜನ ಮತ್ತೆ ಒಳಬರುವುದೋ ಏನೋ  ಎಂಬ ಚಿಂತೆಗೆ ಬೀಳುತ್ತಾರೆ. ಶುರುವಾಗಿ ಸ್ವಲ್ಪ ಹೊತ್ತಾದ ಮೇಲೆ ಬೇಕೋ ಬೇಡವೋ ಎಂಬಂತೆ ಒಳಬರುತ್ತಾರೆ. ಆನಂತರ ಮುಗಿಯಲು ಇನ್ನೂ ಸಮಯವಿರುವಾಗಲೇ  ಎದ್ದು ಹೊರಬರುತ್ತಾರೆ.
ಇದು ಈವತ್ತು ಕಡಲ ಚಿತ್ರ ಪ್ರದರ್ಶನವಿದ್ದ ಚಿತ್ರಮಂದಿರದಲ್ಲಿ ಕಂಡುಬಂದಂತಹ ದೃಶ್ಯ. ಹಾಗಂತ ಚಿತ್ರ ಅಷ್ಟು ಕೆಟ್ಟದಾಗಿದೆಯಾ..?
ಚಿತ್ರದ  ನಾಯಕ ಅನಾಥ. ನಾಯಕಿ ವಿಲನ್ ಮಗಳು. ಇವರಿಬ್ಬರ ಪ್ರೀತಿ.ಅನಾಥನಿಗೆ ಆಸರೆಯಾಗುವವನು ಅಲ್ಲಿನ ಚರ್ಚಿನ ಪಾದ್ರಿ. ಇವರಿಗೆ ಎದುರಾಗಿ ನಿಲ್ಲುವವನು ವಿಲನ್. ಮೊದಲು ವಿಲನ್ ಮತ್ತು ಪಾದ್ರಿಗೂ ಪರಿಚಯ ಮತ್ತು ಸಂಘರ್ಷವಿರುತ್ತದೆ. ಪಾದ್ರಿಯ ತತ್ವ ಯಾವತ್ತಿಗೂ ಒಳ್ಳೆತನಕ್ಕೆ ಬೆಲೆಯಿದೇ ಮತ್ತು ಅದೇ ಗೆಲ್ಲುತದೆ ಎಂಬುದು.ಇಷ್ಟು ಹೇಳಿದ ಮೇಲೆ ಮುಂದೇನಾಗುತ್ತದೆ ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು. ಆದರೆ ಚಿತ್ರ ನಮ್ಮನ್ನು ಕಾಡುವುದು, ಕಾಡಿ ಕಾಡಿ ಕಂಗೆಡಿಸುವುದು, ಸುಸ್ತು ಮಾಡುವುದು, ಅದರ ಏಕತಾನತೆಯಿಂದ. ಇಡೀ ಚಿತ್ರದಲ್ಲಿ ಎಲ್ಲೂ ನಗುವಿಲ್ಲ. ಒಂದಷ್ಟು ರೋಮಾನ್ಸ್ ಬಿಟ್ಟರೆ ಬೇರೆಲ್ಲಾ ಬರೀ ಮಾತುಕತೆಯೇ.ನಿಧಾನಕ್ಕೆ ನಡೆಯುವ ಅನಪೇಕ್ಷಿತ ದೃಶ್ಯಾವಳಿಗಳೇ.
ಮಣಿರತ್ನಂ ಚಿತ್ರಗಳೆಂದರೆ ತಂತ್ರಜ್ಞಾನದ ಬಗ್ಗೆ ಮಾತನಾಡುವ ಹಾಗಿಲ್ಲ. ಅದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಛಾಯಾಗ್ರಹಣ, ಸಂಗೀತ ಮುಂತಾದವುಗಳನ್ನೆಲ್ಲಾ ದಿಗ್ಗಜರೆ ಮಾಡಿರುವುದರಿಂದ ಅವೆಲ್ಲಾ ಪರಿಣಾಮಕಾರಿಯಾಗಿಯೇ ಇವೆ. ಆದರೆ ಚಿತ್ರದ ಕಥೆ ನಿರೂಪಣೆ ಮಾತ್ರ ನಿಂತ ನೀರು.ವಿಲನ್ ಆಗಿ ಅರ್ಜುನ ಸರ್ಜಾ ಪಾದ್ರಿಯಾಗಿ ಅರವಿಂದ್ ಸ್ವಾಮೀ ಉತ್ತಮ ಅಭಿನಯ ನೀಡಿದ್ದಾರೆ. ಆದರೆ ನಾಯಕ ಗೌತಂ ಕಾರ್ತಿಕ್ ಅಭಿನಯ ಸಾದಾರಣ.
ಚಿತ್ರದ  ಉದ್ದೇಶ ಮನರಂಜನೆಯೇ ಆಗಿರಬೇಕು ಎಂಬುದೆನಿಲ್ಲ. ಒಂದು ಗಂಭೀರವಾದ ವಿಚಾರವನ್ನೂ ಪ್ರೇಕ್ಷಕರ ಮುಂದಿಡುವುದೂ ಆಗಿರಬಹುದು. ಅಥವಾ ಒಬ್ಬ ವ್ಯಕ್ತಿಯ ಜೀವನ ಚರಿತ್ರೆ, ಒಂದು ಘಟನೆಯ ವರದಿಯೂ ಆಗಿರಬಹುದು. ಅಥವಾ ಒಂದು ಕಾಲ್ಪನಿಕ ವಿಷಯದ ವಿವರಣೆಯೂ ಇರಬಹುದು. ಆದರೆ ಮಣಿರತ್ನಂ ಅದ್ಯಾವುದೂ ಅಲ್ಲದ  ಸರ್ವೆ ಸಾದಾರಣವಾದ   ಚಿತ್ರವೊಂದನ್ನು ಬಹಳಷ್ಟು ವೆಚ್ಚಮಾಡಿ ಅತ್ಯುತಮ ತಂತ್ರಜ್ಞರನ್ನು ಕಲೆಹಾಕಿ  ಹೊರತಂದಿದ್ದಾರೆ. ಕಡಲ ಅಲೆ, ಮೊರೆತ, ಸುತ್ತ ಮುತ್ತಲ ಕಣ್ತಣಿಸುವ ಪ್ರದೇಶಗಳು ಮುಂತಾದವುಗಳು ಚೆಂದಕ್ಕೆ ಕಾಣಿಸಿದರೂ ಸಿನಿಮಾಕ್ಕೆ ಕಥೆಗೆ ಏನೂ ಸಹಾಯ ಮಾಡಿಲ್ಲ.
ಚಿತ್ರ ನೋಡಿ ಹೊರಬಂದ ಮೇಲೆ ನಮಗೆ ಉಳಿಯುವುದು ಕಡಲಿನ ಮೊರೆತದ ಸದ್ದು , ಬೇಸರ ಮತ್ತು ಅರ್ಧ ಟಿಕೇಟಿನ ತುಂಡು ಮಾತ್ರ.

No comments:

Post a Comment