Sunday, April 10, 2016

ಅವರು ಅದೇ ಮಾಡುತ್ತಾರೆ, ನಾವು ಅದೇ ನೋಡುತ್ತೇವಾ?

ಒಂದೇ ಕತೆಯನ್ನು ಅಥವಾ ಒಂದೇ ಜಾನ್ರ್ ಯಲ್ಲಿ ಸಿನಿಮಾ ಮಾಡುವ ನಿರ್ದೇಶಕರು ನಮ್ಮಲ್ಲಿ ಬಹುತೇಕರಿದ್ದಾರೆ. ಆದರೆ ಅಂತಹ ವಿಷಯ ಬಂದಾಗ ಚಿತ್ರಕತೆ ಮಹತ್ವದ ಪಾತ್ರವನ್ನು ವಹಿಸಿಕೊಳ್ಳುತ್ತದೆ. ಹಿಂದಿಯ ರಾಕೇಶ್ ರೋಶನ್ ಈ ನಿಟ್ಟಿನಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಮಧ್ಯಂತರದ ವರೆಗೆ ನಾಯಕ ಹಾಡಿಕೊಂಡು ಸುಮ್ಮನಿದ್ದರೆ ಮಧ್ಯಂತರದ ನಂತರ ಅವನು ಸೇಡು ತೀರಿಸಿಕೊಳ್ಳುವುದು ಅವರ ಬಹುತೇಕ ಸಿನೆಮಾಗಳ ಕತೆಯ ಸಾರ. ಕರಣ್ ಅರ್ಜುನ್, ಕೊಯ್ಲಾ, ಕಹೋನಾ ಪ್ಯಾರ್ ಹೈ, ಕೋಯಿ ಮಿಲ್ ಗಯಾ, ಕ್ರಿಶ್ ಹೀಗೆ ಸಾಗುತ್ತದೆ ಪಟ್ಟಿ. ಕರಣ್ ಅರ್ಜುನ್ ನಲ್ಲಿ ಪಾಪದ ಸಹೋದರರು ಹಿಂಸೆ ಅನುಭವಿಸಿ ಸತ್ತು ಪುನರ್ಜನ್ಮ ಪಡೆದು ಖಳನನ್ನು ಹೊಡೆದು ಉರುಳಿಸಿದರೆ, ಕೊಯ್ಲಾದಲ್ಲಿ ಮೂಕ ನಾಯಕ ಜೀತ ಮಾಡಿಕೊಂಡು ಮಧ್ಯಂತರದವರೆಗೆ ಕಾಲ ತಳ್ಳಿ, ಆನಂತರ ರೊಚ್ಚಿಗೆದ್ದು ಖಳನನ್ನು ಹೊಡೆದು ಸಾಯಿಸುತ್ತಾನೆ, ಇನ್ನು ಕಹೋನ ಪ್ಯಾರ್ ನಲ್ಲಿ ನಾಯಕ ಸಾಧುವಾಗಿ ಮಧ್ಯಂತರದವರೆಗೆ ಹಾಡಿಕೊಂಡು ಕಾಲ ತಳ್ಳಿ, ಆನಂತರ ಸತ್ತು, ಅವನ ರೀತಿಯಲ್ಲಿರುವ ಮತ್ತೊಬ್ಬ ಬಂದು ಖಳನಾಯಕನನ್ನು.... ಹೀಗೆ ಸಾಗುತ್ತದೆ ಕತೆ. ಹಾಗೆಯೇ ನೀವು ಕೋರಿಯನ್ ನಿರ್ದೇಶಕ ಕಿಂ ಕಿ ಡಕ್, ಜಪಾನಿ ನಿರ್ದೇಶಕ ಶಿಯಾನ್ ಸೋನು, ತಮಿಳಿನ ನಿರ್ದೇಶಕರಾದ ಮಿಸ್ಕಿನ್, ಬಾಲಾ, ಮುಂತಾದವರಿದ್ದಾರೆ. ಅವರ ಚಿತ್ರಗಳಲ್ಲಿ ಕತೆ ಬದಲಾಗಬಹುದು ಆದರೆ ಸಾಮ್ಯತೆಯಂತೂ ಇದ್ದೇ ಇರುತ್ತದೆ. ಇದು ಅವರದೇ ಸಿನಿಮಾ ಎಂದು ಹೇಳಿಬಿಡುವಷ್ಟು. ಕಿಂ ಕೀ ಚಿತ್ರಗಳಲ್ಲಿ ಮಾತುಕಡಿಮೆ, ಆದರೆ ಅದೊಂದು ವಿಕ್ಷಿಪ್ತ ಲೋಕ, ಆತನ ಸಿನೆಮಾಗಳಲ್ಲಿ ಹಿಂಸೆಗಿಂತಲೂ ಭೀಭತ್ಸ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಶಿಯಾನ್ ಸೋನೊ ಹಾಗಲ್ಲ. ಅವನ ನಿರೂಪನೆಯಲ್ಲಿಯೇ ಕಸುವಿದೆ. ಬಾಲ ಬಿಡಿ. ಹಾಸ್ಯ ಎಂದರೂ ನಾಯಕರುಗಳು ನೀಟಾಗಿದ್ದರೆ ಅವರಿಗೆ ಸೇರುವುದಿಲ್ಲ. ಮತ್ತು ಅಲ್ಲೊಬ್ಬ ಅತ್ಯಂತ ಕೆಟ್ಟ ಖಳನಾಯಕನಿಲ್ಲದಿದ್ದರೆ ಅವರ ಸಿನಿಮಾ ಆಗುವುದಿಲ್ಲ. ಮತ್ತು ನಾಯಕ ಅವನನ್ನು ಬರ್ಬರವಾಗಿ ಸಾಯಿಸದಿದ್ದರೆ ಸಿನಿಮಾ ಮುಗಿಯುವುದಿಲ್ಲ.. ಇನ್ನು ಫ್ರೆಂಚ್ ನಿರ್ದೇಶಕ ಫ್ರಾನ್ಸಿಸ್ ವೆಬೇರ್ ಭಾಷೆ ಮರೆತು ನಗಿಸುತ್ತಾನೆ, ಅವನ ಚಿತ್ರಗಳು ನಗುವಿಲ್ಲದೆ ಇಲ್ಲ. ತೆಲುಗಿನ ಸುಕುಮಾರ್ ಚಿತ್ರಗಳ ಕತೆ ಒಂದೇ ಸಾಲಿನಲ್ಲಿರುತ್ತದೆ. ಆದರೆ ಅದಕ್ಕೆ ಹಿಡ್ನೆ ಮುಂದೆ ಬಾಲ ಜೋಡಿಸುತ್ತಾ ಸಾಗುತ್ತಾರೆ ಅವರು. ಇನ್ನು ವಿಕ್ರಮ್ ಭಟ್ ಜಗತ್ತಿನ ಯಾವುದೇ ಭಾಷೆಯಿಂದಾದರೂ ರಿಮೇಕ್, ರಿಮಿಕ್ಸ್ ಮಾಡಿರಲಿ ಅಥವಾ ತಾವೇ ಕುಳಿತು ಕತೆ ಬರೆಯಲಿ, ಸೆಕ್ಸ್ ಕ್ರೈಂ ಇಲ್ಲದೆ ಸಿನಿಮಾ ಮಾಡಿದರೆ ಅವರಿಗೆ ಉಂಡದ್ದು ಜೀರ್ಣ ಆಗುವುದಿಲ್ಲ. ಸೂರಜ್ ಆರ್ ಬಾರ್ಜಾತ್ಯಾ ಚಿತ್ರದಲ್ಲಿ ಬಡವರು ಕಡಿಮೆ, ಮನೆಯೆಂದರೆ ಅರಮನೆ, ವಾಹನ ಎಂದರೆ ಹೆಲಿಕ್ಯಾಪ್ಟರ್ ಎನ್ನುವವರು ಕರಣ್ ಜೋಹರ್ ,ಅನುರಾಗ್ ಕಶ್ಯಪ್ ಮದುವೆ ಮನೆ ಮಕ್ಕಳು ಎಂದು ಸಿನಿಮಾ ಮಾಡುವುದಿಲ್ಲ, ರಾಮ್ ಗೋಪಾಲ್ ವರ್ಮ ಏನು ಬೇಕಾದರೂ ಮಾಡಬಹುದು, ಆದರೆ ಎಲ್ಲದಕ್ಕೂ ಕ್ಯಾಮೆರಾ ಮಾತ್ರ ಮೂಲೆ ಮೂಲೆ ಸಂಧಿ ಗೊಂದಿಯಲ್ಲಿಡಲೇಬೇಕು, ಇಲ್ಲವಾದಲ್ಲಿ ಅವರದ್ದು ಸಿನಿಮಾ ಆಗುವುದಿಲ್ಲ. ರಾಜಮೌಳಿ ಹಳೆಯದ್ದೋ ಹೊಸದೊ ಕತೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಮನರಂಜಿಸಬೇಕಷ್ಟೇ, ಮಧ್ಯಮವರ್ಗದ ಕನಲಿಕೆ, ಜೀವನ ಶೈಲಿಯಾ ಕತೆ ಮಾನವೀಯ ತೊಳಲಾಟ ಕೆ ಬಾಲಚಂದರ್ ಅದ್ಭುತವಾಗಿ ನಿರೂಪಿಸುತ್ತಾರೆ. ಏನನ್ನಾದರೂ ಅದ್ಭುತ ಮಾಡಬೇಕು ಎಂದು ಒಮ್ಮೆ, ಹೇಗಾದರೂ ಹಿಟ್ ಕೊಡಲೇಬೇಕು ಎಂದೊಮ್ಮೆ ಕಮಲ್ ಹಾಸನ್ ಎದ್ದು ನಿಲ್ಲುತ್ತಾರೆ. ಆದರೆ ಫಲಿತಾಂಶ ಮಾತ್ರ ಅದೇ ಆಗಿರುತ್ತದೆ. ದಟ್ಟವಾದ ಕತೆಯಿಟ್ಟುಕೊಂಡು ಸಿನಿಮಾ ಮಾಡುವವನು ಇಟಾಲಿಯನ್ ನಿರ್ದೇಶಕ ಗಿಸಿಪಿ ಟಾರ್ನೇಟಾರ್. ಅವನ ಸಿನಿಮಾ ಪರಡಿಸೋ, ಮಲೀನಾ ಗಳಿಂದ ಹಿಡಿದು ಇತ್ತೀಚಿನ ದಿ ಬೆಸ್ಟ್ ಆಫರ್   ವರೆಗೆ ಅವನ ಯಾವುದೇ ಸಿನಿಮಾ ತೆಗೆದುಕೊಂಡರೂ ಅದರಲ್ಲಿ ತುಂಬಿರುವುದು ಭಾವುಕತೆ. ಹಾಗೆಯೇ ನಿರ್ದೇಶಕ ಜೇಮ್ಸ್ ವಾನ್, ಎಲಿ ರೋಥ್ ಕ್ರೌರ್ಯ ಬಿಟ್ಟು ಹೊರಬರಲು ಸಾಧ್ಯವೇ..? ಎಲ್ಲಾ ಮುಗಿದು ಅವರು ಚೆನ್ನಾಗಿ ನೂರ್ಕಾಲ ಬಾಳಿದರು ಎಂದು ಕ್ವೆಂಟನ್ ಟರಂಟನೋ ಚಿತ್ರಗಳ ಕ್ಲೈಮಾಕ್ಸ್ ಹೇಳಲು ಸಾಧ್ಯವೇ..? ಪಟ್ಟಿ ಮಾಡುತ್ತಾ ಸಾಗಿದರೆ ಅದು ಮುಗಿಯುವುದಿಲ್ಲ
ಆದರೆ ಕನ್ನಡದಲ್ಲಿ ಗಮನಿಸಿದರೆ ಅದದ್ದನ್ನೇ ಮಾಡಿದವರು ಬೇಸರ ತರಿಸಿದ್ದುಂಟು. ರವಿಚಂದ್ರನ್ ರಿಮೇಕ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮೂಲಕ್ಕಿಂತ ಇದೇ ಚೆನ್ನಾಗಿದೆಯಲ್ಲ  ಎನಿಸಿದ್ದು ಅವರ ಕೆಲವು ಚಿತ್ರಗಳ ಸಾಧನೆ. ಆದರೆ ಸುದೀಪ್ ಹಾಗಲ್ಲ. ಅಲ್ಲೇನಿದೆ, ಅಲ್ಯಾವ ಬಣ್ಣವಿದೆ, ಎಂಬುದನ್ನು ಸರಿಯಾಗಿ ಗಮನಿಸಿಯೇ ರಿಮೇಕ್ ಮಾಡುತ್ತಾರೆ. ಸಾಯಿಪ್ರಕಾಶ್ ಅವರಿಗೆ ಯಾವುದೇ ಜಾನ್ರ್ ಇಲ್ಲ. ಸಿನಿಮಾಗಳು ಮನರಂಜನೆ ಕೊಟ್ಟರೆ ಸಾಕು ಎಂದು ಅದು ಕೊಟ್ಟಾದ ಮೇಲೆ ಅದರ ಗುಣಮಟ್ಟ ಇನ್ನೂ ಚೆನ್ನಾಗಿರಬೇಕಿತ್ತು ಎಂದು.. ಹೀಗೆ ಪ್ರೇಕ್ಷಕ್ಟಿರಾದ ನಮ್ಮ ಪಟ್ಟಿ ಬೆಳೆಯುತ್ತದೆ. ಆದರೆ ಅದವರ ಶೈಲಿ ಎಂದುಕೊಂಡು ಸಿನಿಮಾ ನೋಡುವುದು, ಒಹ್ ಈ ನಿರ್ದೇಶಕ ಎಂದರೆ ಈ ರೀತಿಯ ಸಿನಿಮಾ ಇರುತ್ತದೆ ಎಂದು ನಂಬಿಕೊಂಡು, ಇವರ ಚಿತ್ರಗಳಲ್ಲಿ ಹಾಡುಗಳು ಸೂಪರ್, ಇವರ ಚಿತ್ರಗಳಲ್ಲಿ ಮಾತುಗಳು ಮಜಾ ಕೊಡುತ್ತವೆ ಎಂದು, ಇವರು ನಿರ್ದೇಶನ ಮಾಡಿದರೆ ಭರ್ಜರಿ ಫೈಟ್ ಇರುತ್ತದೆ ಎಂದೂ ಸಿನಿಮಾ ನೋಡುವವರಿದ್ದೇವೆ.

ಹನುಮಂತನ ನಾಮಧೇಯ, ಊರಿನಲ್ಲಿ ದುರುಳ ಮುಖಂಡ, ಅದನ್ನು ಸರಿ ಮಾಡಲು ಬರುವ ನಾಯಕ, ನಾಯಕಿ, ಹಾಡು ಹೊಡೆದಾಟ, ನಾಯಕನಿಗೆ ಹೊಟ್ಟೆಗೆ ಆರು ಮಡತೆಗಳು ಇತ್ತೀಚಿನ ಚಿತ್ರಗಳಲ್ಲಿನ ನಿರ್ದೇಶಕ ಹರ್ಷ ಅವರ ಫಿಕ್ಸೆಡ್ ಪಾಯಿಂಟ್ಸ್ ಗಳು. ನೋಡುವ ಪ್ರೇಕ್ಷಕನಿಗೆ ಇದೇನಪ್ಪಾ ಅದೇ ಕತೆ ಎಣಿಸುವಾಗ ನಿರ್ದೇಶಕರ್ಯಾಕೆ ಬದಲಾಗುವುದಿಲ್ಲ ಎನಿಸುವುದು ಅತಿರೇಕದ ವಿಷಯವಲ್ಲ..

ಒಂದೇ ಜಾನ್ರ್ ನಲ್ಲಿ ಅಥ್ವಾ ಒಂದೇ ಕತೆಯನ್ನು ತಿರುಚಿ ಮುರುಚಿ ಸಿನಿಮಾ ಮಾಡಿದವರಿದ್ದಾರೆ. ಅದು ಅವರಿಗಿರುವ ಪ್ಯಾಶನ್. ಆದರೆ ಇದೆ ಯಶಸ್ಸಿನ ಮಾನದಂಡ ಇರಬೇಕು, ಅಥವಾ ಇದು ಇದ್ದರೆ ಸಿನಿಮಾ ಗೆಲ್ಲುತ್ತದೆ ಎನ್ನುವ ಮನಸ್ಥಿತಿ ಇಂತಹ ಸಿನಿಮಾ ಮಾಡಿಸುತ್ತದಾ..? ಏಕೆಂದರೆ ಸುಮ್ಮನೆ ಗಮನಿಸಿದರೆಎಷ್ಟೋ ನಿರ್ದೇಶಕರುಿಗಳು ಿಾಇಂತಹದ್ದೇಂ ು .  ಸಿನಿಮಾ ಮಾಡಬೇಕು ಎಂದು ಬಂದಿರುವುದಿಲ್ಲ. ಅವರು ಬಂದ ದಾರಿಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಯಶಸ್ಸು ಸಿಗುವವರಗೆ ಅವರು ಅಂದುಕೊಂಡ ಚಿತ್ರಗಳನ್ನು ಮಾಡುತ್ತಾ ಸಾಗುತ್ತಾರೆ. ಆದರೆ ಒಂದು ಚಿತ್ರದಲ್ಲಿ ಯಶಸ್ಸು ಸಿಕ್ಕಿತು ಎಂದುಕೊಳ್ಳಿ ಅವರು ಅದನ್ನು ಬಿಟ್ಟು ಅತ್ತಿತ್ತ ನೋಡುವುದೂ ಇಲ್ಲ. ಸಂತೋಷ, ಮಿಂಚಿನ ಓಟ ಚಿತ್ರಗಳು ಸೋತ ನಂತರ ಎ ಎಂ ಆರ್ ರಮೇಶ್ ಸಯನೈಡು ಮಾಡಿ ಗೆದ್ದದ್ದೆ ನೈಜ ಘಟನೆಗಳನ್ನು ಸಿನಿಮಾಗಳಿಗೆ ಆರಿಸಿಕೊಂಡರು.. ಹಾಗಾಗಿಯೇ ಪೋಲಿಸ್ ಕ್ವಾರ್ಟರ್ಸ್ , ಅಟ್ಟಹಾಸ ಸಿನಿಮಾಗಳು ಬಂದದ್ದು. ನಿರ್ದೇಶಕ ಹರ್ಷ ಬಿರುಗಾಳಿ, ಗೆಳೆಯ, ಚಿಂಗಾರಿ ಎಂದೆಲ್ಲಾ ಮಾಡಿ ಸೋತಾಗ ಭಜರಂಗಿ ಮಾಡಿದರು ನೋಡಿ, ಇನ್ನೂ ಅಲ್ಲೇ ಇದ್ದಾರೆ. ಭಟ್ಟರು ಉಡಾಫೆ ಮಾತುಗಳಿಂದ, ದೇಸಾಯಿ ಗೊಂದಲದಿಂದ, ಓಂ ಪ್ರಕಾಶ್ ರಾವ್ ರಿಮಿಕ್ಸ್ ನಿಂದ, ........ ರವರು ...............ರಿಂದ ಹೊರಬಂದರೆ ನೋಡುಗನಿಗೆ ಅದಕ್ಕಿಂತ ಹಬ್ಬವಿಲ್ಲ ಎನ್ನುವುದು ನನ್ನ ಅನಿಸಿಕೆ.