Thursday, May 24, 2012

ಮೂರು ಸಣ್ಣ ಕಥೆಗಳು..


ಬ್ರೇಕಿಂಗ್ ನ್ಯೂಸ್:
ಆವತ್ತು ಎಂದಿನಂತೆ ಸುದ್ಧಿವಾಹಿನಿಯ ಕೆಲಸ ಮಾಡುತ್ತಿದ್ದ ರಮಣನ ಕ್ಯಾಮೆರಾ ಕಣ್ಣಿಗೆ ರಾಜಕಾರಣಿಯೊಬ್ಬನ ಅಸಹ್ಯವೊಂದು ಸಿಕ್ಕಿತ್ತು. ತಡಮಾಡದೆ ಅಷ್ಟನ್ನೂ ಚಿತ್ರೀಕರಿಸಿದ್ದು ದೇಶದಲ್ಲೇ ದೊಡ್ಡ ಸಂಚಲನವನ್ನುಂಟುಮಾಡಿ ಆ ವ್ಯಕ್ತಿ ರಾಜಿನಾಮೆ ಕೊಡುವಂತೆ ಮಾಡಿತ್ತು. ಮೊದಲಿಂದಲೂ ಕ್ರಾಂತಿಕಾರಿ ಧೋರಣೆ ಹೊಂದಿದ್ದ ರಮಣನಿಗೆ ಆವತ್ತು ಎಲ್ಲರಿಂದಲೂ ಪ್ರಶಂಸೆಗಳ ಸುರಿಮಳೆ.ಇದೇ ರೀತಿ ಮುಂದುವರೆದರೆ ದೇಶವನ್ನು ಸುಧಾರಿಸಬಹುದು ಎಂದು ಎಲ್ಲರೂ ಹೊಗಳಿದ್ದೇ ಹೊಗಳಿದ್ದು.
ಇದೆಲ್ಲಾ ನಡೆದು ಸುಮಾರು ತಿಂಗಳುಗಳೇ ನಡೆದುಹೋಗಿವೆ.ಈಗ ರಾಜಕಾರಣಿ ಮತ್ತೆ ಅಧಿಕಾರಕ್ಕೆ ಬಂದಿದ್ದಾನೆ. ಮಾಧ್ಯಮದವರಿದ್ದಾರೆ ಎಂದರೆ ಎಲ್ಲರೂ ಎಚ್ಚರಿಕೆಯಿಂದಿರುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಜನರೂ ಅದನ್ನು ಮರೆತುಬಿಟ್ಟಿದ್ದಾರೆ.
ಈಗ ಜನರು ಮನರಂಜನೆಗಾಗಿ, ಥ್ರಿಲ್ಲಿಗಾಗಿ, ಸುದ್ಧಿವಾಹಿನಿಯವರು ಟಿಆರ್‌ಪಿಗಾಗಿ ಮತ್ತೊಂದು  ಬ್ರೇಕಿಂಗ್‌ನ್ಯೂಸ್‌ಗೆ ಕಾಯುತ್ತಿದ್ದಾರೆ.
ಆಟ:
ನೋಡ್ರೀ..ಎಷ್ಟು ಕೂಗಿದ್ರು ಊಟಕ್ಕೇ ಬರ್ತಿಲ್ಲಾ.. ಮನೆಗೆ ಬಂದ ತಕ್ಷಣ ಸುಷ್ಮಾ ಗಂಡ ರಘುಗೆ ಮಗನ ಮೇಲೆ ದೂರು ಹೇಳಿದಳು. ರಿತೇಶ್ ಏನ್ ಮಾಡ್ತಿದ್ದೀಯ..  ಎಂದು ಬೂಟು ಕಳಚುತ್ತಲೇ ರಘು ಕೂಗು ಹಾಕಿದ. ಡ್ಯಾಡಿ ಇನ್ನು ಎರಡು ಓವರ್ರಿದೆ..೧೮ ರನ್ ಬೇಕಿರೋದು.. ಎಂದವನು ತನ್ನ ಆಟದಲ್ಲಿ ಮಗ್ನನಾದ ಮಗ ರಿತೇಶ್ ಕ್ರಿಕೆಟ್, ುಟ್‌ಬಾಲ್ ವಾಲಿಬಾಲ್ ,ಶೂಟಿಂಗ್, ಸಿಕ್ಸರ್, ೋರ್, ಸೆಂಚ್ಯುರಿ ಮನೆಯಲ್ಲೇ ಕಂಪ್ಯೂಟರಿನಲ್ಲೇ ಆಡಿಬಿಡುತ್ತಾನೆ. ಆಟ ಮುಗಿಸಿ ಕನ್ನಡಕ ತೆಗೆದು ಕಣ್ಣುಜ್ಜಿಕೊಳ್ಳುತ್ತ ಕೆಳಗೆ ಬಂದ ಮಗನನ್ನು ಒಮ್ಮೆ ನೋಡಿದ ರಘು. ಶಾಲೆಯ ಬಸ್ ಮನೆ ಹತ್ತಿರಕ್ಕೆ ಬರುತ್ತದೆ, ಮನೆ ಪಾಠ ಬೇರೆ ಇದೆ, ಎನರ್ಜಿ ಡ್ರಿಂಕ್ ಕುಡಿಯುತ್ತಾನೆ..ಆದರೂ ಮಗ ಈಗಲೆ ಕನ್ನಡಕ ಹಾಕಿದ್ದಾನೆ, ಹೊಟ್ಟೆ ಡೊಳ್ಳಾಗಿದೆ.. ಸೌಲಭಗಳೇ ಇಲ್ಲದ ಊರಲ್ಲಿ ಬೆಳೆದ ರಘು ಚಿಕ್ಕವನಿದ್ದಾಗ ಶಾಲೆಯಿಂದ ಬಂದನೆಂದರೆ ಪುಸ್ತಕದ ಚೀಲ ಬೀಸಾಕಿ ಆಟವಾಡಲು ಹೋದರೆ ಬರುತ್ತಿದ್ದದ್ದು ರಾತ್ರಿಗೆ. ಇಡೀ ಮೈಯೆಲ್ಲಾ ಬೆವರುಬೆವರಾದರೂ ದೇಹ ಗಟ್ಟಿಯಾಗುತ್ತಿತ್ತು..ಸೌಲಭ್ಯ ಗಳೇ ಶಾಪವಾಯಿತಾ? ಎಂಬ ಪ್ರಶ್ನೆ ಕಾಡತೊಡಗಿತು ರಘುವಿಗೆ.
ನಾಣ್ಯ:
ದೇವಸ್ಥಾನದಲ್ಲಿ ಹುಂಡಿಗೆ ಹಾಕಲು ಹೆಂಡತಿಯಿಂದ ಚಿಲ್ಲರೆ ಕೈಗೆ ತೆಗೆದುಕೊಂಡ ಸತೀಶನಿಗೆ ಆ ಹೊಸ ನಾಣ್ಯ ನೋಡಿ ಅಚ್ಚರಿಯಾಯಿತು. ತನ್ನ ಬಾಲ್ಯದಲ್ಲಿ ಅಪ್ಪ, ಮಾವ ಕೊಡುತ್ತಿದ್ದ ಹತ್ತು ಪೈಸೆ, ಇಪ್ಪತ್ತು ಪೈಸೆಯ ನಾಣ್ಯಗಳನ್ನು ಜತನದಿಂದ ಕೂಡಿಡುತ್ತಿದ್ದದ್ದು ಅದರ ಇಸವಿಯ ಪ್ರಕಾರ ಸಂಗ್ರಹಿಸುತ್ತಿದ್ದದ್ದು , ಆವಾಗಾವಾಗ ನೋಡಿಕೊಂಡು ಪುಳಕಿತನಾಗುತ್ತಿದ್ದದ್ದು ನೆನೆಪಾಯಿತು. ನಾಣ್ಯವನ್ನೇ ತಿರುಗಿಸಿಮುರುಗಿಸಿ ನೋಡಿದ ರಾಘವ ಹೆಂಡತಿಯಿಂದ ಒಂದಷ್ಟು ನೋಟುಗಳನ್ನು ತೆಗೆದುಕೊಂಡು ತಿರುಗಿಸಿಮುರುಗಿಸಿ ನೋಡತೊಡಗಿದ. ತಿಂಗಳಿಗೆ ಲಕ್ಷದಷ್ಟೂ ಸಂಬಳ ತೆಗೆದುಕೊಂಡರೂ ಅಷ್ಟು ದುಡ್ಡನ್ನು ಕಣ್ಣಾರೆ ನೋಡಿ ಕೈಯ್ಯಾರೆ ಸ್ಪರ್ಷಿಸಿರಲಿಲ್ಲ. ಒಂದನೆಯ ತಾರೀಖು ಮೊಬೈಲಿಗೆ ಸಂಬಳದ ಹಣ ಜಮೆಯಾದ ಸಂದೇಶ ಬರುತ್ತಿತ್ತು. ಆನಂತರ ಐದನೇ ತಾರೀಖಿನ ನಂತರ ವಿದ್ಯುತ್ ಶುಲ್ಕ ಕಟ್ಟಾದದ್ದು, ಮನೆ ಸಾಲದ ಬಾಬತ್ತು, ಕಾರಿನ ಸಾಲದ ಬಾಬತ್ತು, ಮಧ್ಯಮಧ್ಯ ಇವನೋ ಹೆಂಡತಿಯೋ ಕಾರ್ಡ್ ಉಜ್ಜಿದ್ದರೆ ಅದು ಕಡಿತಗೊಂಡಿದ್ದ ಸಂದೇಶಗಳು ಬಂದು ಮೊಬೈಲಿಗೆ ಬೀಳುತ್ತಿದ್ದವು. ಸಂಬಳ ಬಂದದ್ದರಿಂದ ಹಿಡಿದು ಎಲ್ಲಾ ವ್ಯವಹಾರಗಳು ಮೊಬೈಲಿನಲ್ಲೇ ಮುಗಿದುಹೋಗುತ್ತಿದ್ದವು. ಹಣದ ಹಿಂದೆ ಬಿದ್ದು ಹಣ ಸಂಪಾದಿಸಿ ಹಣವನ್ನೇ ಸರಿಯಾಗಿ ನೋಡದ ನಾನು ಬದುಕಿನಲ್ಲಿ ಇನ್ನು ಏನೇನು ಕಳೆದುಕೊಂಡಿದ್ದೇನೋ ಎನ್ನುವ ಯೋಚನೆ ಸತೀಶನಿಗೆ ಕಾಡತೊಡಗಿತು.                                

ನೋಡಲೇ ಬೇಕಾದ ಚಿತ್ರಗಳು-7


ದಿ ಪ್ರೊಫೆಸರ್::-
ಒಂದು ಮಾಫಿಯಾದ ಬಗೆಗಿನ, ಭೂಗತಜಗತ್ತಿನ  ಬಗೆಗಿನ ಚಿತ್ರ ಹೇಗಿರಬೇಕೆಂಬುದಕ್ಕೆ ನಮ್ಮಲ್ಲಿ ಹಲವಾರು ಯಶಸ್ವಿ ಉದಾಹರಣೆಗಳನ್ನ ಕಾಣಬಹುದು. ಹಾಗೆ ಥಟ್ಟೆಂದು ಹೆಸರಿಸಬೇಕಾದರೆ ಅದು ಹಾಲಿವುಡ್ ನ ದಿ ಗಾಡ್ ಫಾದರ್. ಮೂರು ಭಾಗಗಳಾಗಿ ಬಂದು ಪ್ರಶಸ್ತಿ , ಪ್ರಶಂಸೆಗಳಿಸಿದ ಯಸಸ್ವಿ  ಚಿತ್ರ ಗಾಡ್ ಫಾದರ್, ಭೂಗತಲೋಕದ ತಣ್ಣಗಿನ ಕ್ರೂರತನಗಳು, ಒಳದ್ವಂದ್ವಗಳು, ಕೌಟುಂಬಿಕ ಕಲಹಗಳು, ದ್ವೇಷಾಸೂಯೆ, ಮತ್ಸರಗಳು, ಬರ್ಬರತೆಗಳನ್ನು ಸಾವಧಾನದಿಂದ, ಅಷ್ಟೇ ತಣ್ಣಗೆ ನಿರೂಪಿಸಿದವನು ಪ್ರಾನ್ಸಿಸ್ ಫೋರ್ಡ್ ಕಪೋಲಾ. ಚಿತ್ರದ ಓಘ ಕ್ಕೆ ಮಂದಗತಿಯ ನಿರೂಪಣೆ ಎಲ್ಲೂ ಅಡ್ಡಗಾಲು ಹಾಕುವುದಿಲ್ಲ. ಪ್ರತಿಯೊಂದು ದೃಶ್ಯವೂ ನಿಧಾನಕ್ಕೆ ನೋಡುಗನ ಮನದಾಳಕ್ಕಿಳಿಯುತ್ತಾ ಸಾಗಿದಂತೆ ಗಾಡ್ ಫಾದರ್ ಒಂದು ರೌಡಿಗಳ, ಭೂಗತನಾಯಕರ ಚಿತ್ರವೇ ಆದರೂ ಯಾವುದೂ ಒಂದು ಘನೋದ್ದೇಶದ ಹೋರಾಟದ ಕತೆ ಎನಿಸುವುದು ಈ ಕಾರಣದಿಂದಲೇ.!
ನಿರ್ದೇಶಕ ಗಿಸಿಪ್ಪೆ
ದಿ ಗಾಡ್ ಫಾದರ್, ಸತ್ಯಾ, ಕಂಪನಿ, ಒನ್ಸ್ ಅಪ್ ಆನ್ ಎ ಟೈಮ್ ಇನ್ ಅಮೇರಿಕಾ, ಮೀನ್ ಸ್ಟ್ರೀಟ್ಸ್, ಮುಂತಾದ ಚಿತ್ರಗಳು ಭೂಗತಲೋಕದ ಕಥೆಯನ್ನಾಧರಿಸಿ ತೆರೆಯಲಂಕರಿಸಿ ಯಶಸ್ವಿಗೊಂಡಿವೆ. ಹಾಗೆ ಈ ಭೂಗತಲೋಕದ ಚಿತ್ರಕಲ್ಲಿ ವಿಶೇಷವೆನಿಸಿದ ಚಿತ್ರ ಕೆಮರಿಸ್ಟಾ ಅಥವ ದಿ ಪ್ರೊಫೆಸರ್ !. 1986 ರಲ್ಲಿ ತೆರೆಗೆ ಬಂದ ಈ ಇಟಾಲಿಯನ್ ಚಿತ್ರದ ನಿರ್ದೇಶಕ ಗಿಸೆಪೆ  ಟಾರ್ನ್ ಟರ್. ಗಿಸೆಪೆ ಮರಾಜೋ ನ ಕಾದಂಬರಿ ಆಧರಿಸಿದ ಈ ಚಿತ್ರ ಗಿಸಿಪೆಯೆ ಮೊದಲ ಚಿತ್ರ.
ಪ್ರೊಫೆಸರ್ ಮೊದಲೇ ಹೇಳಿದಂತೆ ಭೂಗತಜಗತ್ತಿನ ಕಥೆಯಾಧಾರಿತ ಚಲನಚಿತ್ರ. ಯಾವುದೇ ಸ್ಟಾರ್ ಗಳಿಲ್ಲದಿರುವುದು ಈ ಚಿತ್ರದ ವಿಶೇಷ.ಹಾಗೇ ಚಿತ್ರದ ಕಥೆ ಹೂರಣ ದಟ್ಟವಾದದ್ದು. ತಂಗಿಯನ್ನು ರೇಗಿಸಿದರೆಂದು ಕೊಲೆ ಮಾಡಿಬಿಡುವ ಚಿತ್ರದ ಮುಖ್ಯಪಾತ್ರಧಾರಿ, ಅದರ ನಿಮಿತ್ತ ಜೈಲು ಪಾಲಾಗುತ್ತಾನೆ. 10 ವರ್ಷಗಳ ಜೈಲುವಾಸ ಯಾವುದೇ ಏರುಪೇರಿಲ್ಲದೆ ನೆಡೆದು ಹೋಗುತ್ತದೆ. ಜೈಲಿನಲ್ಲಿ ಇವನ ಮಾತು-ಕತೆ ಕೇಳಿದವರು ಅವನನ್ನು ಪ್ರೊಫೆಸರ್ ಎಂದೇ ಗೌರವದಿಂದ ಕರೆಯುತ್ತಿರುತ್ತಾರೆ. ಅವನಿಗೇನೊ ಹೊರಬಂದು ಭೂಗತಜಗತ್ತಿನ ಒಡೆಯನಾಗಬೇಕೆನ್ನುವ ಯಾವುದೇ ಆಮಿಷವಿರುವುದಿಲ್ಲ. ಆದರೆ ಬಿಡುಗಡೆಯಾದ ಮೇಲೆ ಹೊರಪ್ರಪಂಚಕ್ಕೆ ಕಾಲಿರಿಸಿದ ಮೇಲೆ ಮಾಡುವುದಾದರೂ ಏನು ? ಕೆಲಸ- ಉದ್ಯೋಗ-ವಿಧ್ಯಾಭ್ಯಾಸ.. ಉಹೂಂ ! ಯಾಕೆಂದರೆ ಜೈಲಿನಲ್ಲಿ ಕಳೆದ ಸಮಯ ಅಮೂಲ್ಯವಾದ ವಯಸನ್ನೇ ತಿಂದು ಹಾಕಿಬಿಟ್ಟಿರುತ್ತದೆ. ಆಗ ಯೋಚಿಸುತ್ತಾನೆ.... ಕೆಲವೊಂದು ಪ್ಲಾನ್ ಹಾಕುತ್ತಾನೆ.....
ಅದು ಪ್ರೊಫೆಸರ್ ಚಿತ್ರದ ಹೂರಣ! 1961ರಿಂದ 1986 ರವರೆಗೆ ಇಟಲಿಯಲ್ಲಿ ನಡೆದ ನೈಜ ಸಂಗತಿಗಳನ್ನು ಚಿತ್ರದುದ್ದಕ್ಕೂ ಸಾಂದರ್ಭಿಕವಾಗಿ,ಬಹುಚೆನ್ನಾಗಿ ಉಪಯೋಗಿಸಿಕೊಂಡಿದ್ದಾನೆ. ನಿರ್ದೇಶಕ. ಅಷ್ಟೇ ಅಲ್ಲ.ಮೊದಲನೇ ಚಿತ್ರಕ್ಕೆ ಬಹು ಆಸಕ್ತಿಕರ ಕಥೆ ಆರಿಸಿಕೊಂಡಿರುವ ಗಿಸೆಪೆ ನಿರೂಪಣೆಯನ್ನು ಮಾತ್ರ ಅನುಭವಿ ನಿರ್ದೇಶಕನಂತೆ ನೀಟಾಗಿ, ತಣ್ಣಗೆ ಮಂದಗತಿಯಲ್ಲಿ ಮತ್ತು ಆಸಕ್ತಿಕರವಾಗಿ ಜನರ ಮುಂದಿಡುತ್ತಾ ಹೋಗುತ್ತಾನೆ. ಹಾಗೆ ಚಿತ್ರದ ಕೆಲವೆಡೆ ವಿಷುವಲ್ ಮೆಟಾಫರ್ ಗಳನ್ನು ಬಹುಚೆನ್ನಾಗಿ ಬಳಸಿಕೊಂಡು ಅಗಾಧವಾದ ಕಥೆಯನ್ನು ಮೊಟಕುಗಳಿಸಿದರೂ ಭಾವಕ್ಕೆಲ್ಲೂ ಚ್ಯುತಿ ಬರದಂತೆ ಬುದ್ಧಿವಂತಿಕೆ ಉಪಯೋಗಿಸಿದ್ದಾನೆ.
ಒಟ್ಟಿನಲ್ಲಿ ಸಿನಿಪ್ರಿಯರಾಗಲಿ, ಸಿನಿಮಾ ಕರ್ಮಿಗಳಾಗಲಿ ಒಂದಷ್ಟು ಆಸಕ್ತಿಕರ ವಿಶೇಷವಾದ ಚಲನಚಿತ್ರಗಳನ್ನು ನೋಡಬೇಕೆಂದುಕೊಂಡ ಪಕ್ಷದಲ್ಲಿ ಗಿಸೆಪೆಯಾ ಪ್ರೊಫೆಸರ್ ಸಿನೆಮಾ ಪ್ಯಾರಡಿಸೋ ಮತ್ತು ದಿ ಲೆಜೆ೦ಡ ಆಫ್ 1900 ಚಿತ್ರಗಳನ್ನ ಮೊದಲು ಪಟ್ಟಿಯಲ್ಲಿರಿಸಿಕೊಂಡರೆ ಒಳ್ಳೆಯದು. ಈ ಚಿತ್ರಗಳು ಸಿನಿಮಾ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಾಗ್ರಿಯ ಜೊತೆ ಮನರಂಜನೆ ಮತ್ತು ಸಿನಿಮಾ ವ್ಯಾಕರಣವನ್ನು ಯಶಸ್ವಿಯಾಗಿ ಹೇಳಿಕೊಡುತ್ತವೆಂದರೆ ತಪ್ಪಾಗಲಾರದು. 

Tuesday, May 22, 2012

ಓದಿದ್ದು-1

ಸಿನಿಮಾದ ಕೆಲಸಗಳಿಂದಾಗಿ ಕೆಲವು ದಿನ ಪುಸ್ತಕಗಳನ್ನು ಓದುವುದೇ ಸಾಧ್ಯವಾಗಿರಲಿಲ್ಲ..ಬರೇ ಪುಸ್ತಕಗಳನ್ನು ಓದಬೇಕೆಂದು ಸಂಗ್ರಹಿಸಿ ಇಟ್ಟುಕೊಳ್ಳುವುದೇ ಆಗಿತ್ತು. ಆದರೆ ಕಳೆ ತಿಂಗಳು ಸುಳ್ಯದಲ್ಲಿರುವ ನಮ್ಮ ಮಾವನಮನೆಯಲ್ಲಿ ನಾಲ್ಕೈದು ದಿನ ಇರುವ ಸೌಭಾಗ್ಯ ಒದಗಿಬಂದದ್ದೇ ಮತ್ತೆ  ಓದಿಗೆ ತೆರೆದುಕೊಳ್ಳಲು ಸಾಧ್ಯವಾಯಿತು. ಸುಳ್ಯದ ಹತ್ತಿರವಿರುವ ನಮ್ಮ ಮಾವನ ಮನೆ ತೋಟದ ನಡುವಿದೆ. ಅಲ್ಲಿ ಯಾವ ಮೊಬೈಲ್ ಕಂಪನಿಯ ನೆಟ್‌ವರ್ಕ್ ಸಿಗುವುದೇ ಇಲ್ಲ.ಹಾಗಾಗಿ ಮೊಬೈಲ್ ರಗಳೆ ಇರುವುದಿಲ್ಲ.ಆಗ ಓದಲು ಪ್ರಾರಂಭಿಸಿದವನು ಬೆಂಗಳೂರಿಗೆ ಬಂದಾಗಲೂ ಓದನ್ನು ಮುಂದುವರೆಸಿದೆ. ಈ ಒಂದು ತಿಂಗಳಲ್ಲಿ  ವಿಲಿಯಮ್ ಡಾಲ್ರಿಂಪಲ್ ರವರ ನೈನ್ ಲಿವ್ಸ್, ಪ್ಯಾಪಿಲಾನ್‌ನ ಮುಂದುವರೆದ ಭಾಗವಾದ ಬ್ಯಾಂಕೋ, ನಾಗರಾಜ ವಸ್ತಾರೆಯವರ ನಿರವಯವ ಗಳನ್ನು ಓದಿ ಮುಗಿಸಿದೆ.
ಪ್ಯಾಪಿಲಾನ್ ಓದಿ ಸುಮಾರು ವರ್ಷಗಳೇ ಕಳೆದಿದ್ದರೂ ಬ್ಯಾಂಕೋ ಓದಲು ಆಗಿರಲಿಲ್ಲ. ಆದರೆ ಓದಲೇ ಬೇಕೆಂಬ ಉತ್ಕಟಾಸೆಯಂತೂ ಇದ್ದೇ ಇತ್ತು.ಹದಿನಾಲ್ಕು ವರ್ಷ ಬರೀ ಸ್ವಾತಂತ್ರ್ಯಕ್ಕಾಗಿ ತಪಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ, ಕ್ರೂರಾತಿಕ್ರೂರವಾದ ಶಿಕ್ಷೆಗಳನ್ನು ಅನುಭವಿಸಿ ಕಣ್ಣೆದುರು ಹಲವಾರು ಸಾವು ನೋವು, ಚಿತ್ರಹಿಂಸೆಯನ್ನು ಕಂಡ ಪ್ಯಾಪಿಲಾನನಿಗೆ ಕೊನೆಗೊಂದು ದಿನ ಬಿಡುಗಡೆಯಾಗುತ್ತದೆ. ಮುಂದೇನು?
ಈ ಹದಿನಾಲ್ಕು ವರ್ಷದಲ್ಲಿ ಬರೀ ತಪ್ಪಿಸಿಕೊಳ್ಳುವ ಪ್ರಯತ್ನ ಹೊರತುಪಡಿಸಿ ಬೇರೇನನ್ನೂ ಮಾಡಿರದ ಪ್ಯಾಪಿಲಾನನಿಗೆ ಮುಂದಿನ ಗುರಿ ಯಾವುದು?
ಇರುತ್ತದೆ.
ಅದು ದ್ವೇಷ. ನಿರಪರಾಧಿಯಾದ ತನ್ನನ್ನು ತನ್ನ ಕುಟುಂಬದಿಂದ ಬೇರ್ಪಡಿಸಿ ಇಷ್ಟಕ್ಕೆಲ್ಲಾ ಕಾರಣರಾದ ಆ ಮೂವರು ಅವರನ್ನು ಮಾತ್ರ ಸುಮ್ಮನೇ ಬಿಡಬಾರದು..ಮತ್ತೆ ತನ್ನೂರಿಗೆ ಹೋಗಬೇಕು, ಒಬ್ಬೊಬ್ಬರನ್ನೂ ಚಿತ್ರಹಿಂಸೆ ಕೊಟ್ಟು ಸಾಯಿಸಬೇಕು..ಅದೇ ಅವನ ಗುರಿಯಾಗುತ್ತದೆ. ಅದಕ್ಕಾಗಿ ಪ್ಯಾಪಿಲಾನ್ ಮತ್ತೆ ತನ್ನ ಪಯಣ ಆರಂಭಿಸುತ್ತಾನೆ.ಅದಕ್ಕಾಗಿ ಮತ್ತಷ್ಟು ಘನಘೋರವಾದ ತೊಂದರೆಗಳಲ್ಲಿ ಸಿಕ್ಕಿಕೊಳ್ಳುತ್ತಾನೆ..ಕೊನೆಗೆ ತನ್ನ ಸೇಡು ತೀರಿಸಿಕೊಳ್ಳುತ್ತಾನಾ..?
ಇಲ್ಲ.
ಲೇಖಕ ವಿಲಿಯಂ ಡಾಲ್ ರಿ೦ಪಲ್
ಸ್ನೇಹ -ಪ್ರೀತಿ-ಬದುಕಿನ ಮುಂದೆ ದ್ವೇಷ ದೊಡ್ಡದ್ದಲ್ಲ ಎನ್ನುವುದು ಅರಿವಾಗುತ್ತದೆ. ಹಾಗಂತ ಸಾಕ್ಷಾತ್ಕಾರವಾಗುವ ಸಂದರ್ಭವಿದೆಯಲ್ಲ ಅದನ್ನು ನೀವು ಓದಿಯೇ ಸವಿಯಬೇಕು..
**** ದಯವಿಟ್ಟು ಓದಿ.
ಬ್ಯಾ೦ಕೊ ಲೇಖಕ ಹೆನ್ರಿ ಚಾರಿಯೇರ್
ಇನ್ನು ವಿಲಿಯಮ್ ಡಾಲ್ರಿಂಪ್ಲ್ ನ ಪ್ರವಾಸ ಕಥನಗಳಲ್ಲಿ ನೈನ್ ಲಿವ್ಸ್ ತುಂಬಾ ಒಳ್ಳೆಯ ಕೃತಿ ಎನ್ನಬಹುದು. ಇಲ್ಲಿ ಬರುವ ಒಂಬತ್ತು ಜನರ ವೈವಿಧ್ಯಮಯವಾದ ಬದುಕಿನ ಚಿತ್ರಗಳು ಇಡೀ ಭಾರತದ ಜೀವನ ವೈಖರಿಯನ್ನು ಒಂದು ಮಟ್ಟಗಿನ ಇತಿಹಾಸವನ್ನು, ಸಂಸ್ಕೃತಿಯನ್ನು ತೆರೆದಿಡುವ ಪ್ರಯತ್ನ ಮಾಡುತ್ತದೆ. ತುಂಬಾ ಸರಳವಾಗಿ ತನಗೆ ಕಂಡದ್ದನ್ನು ಕಂಡ ಹಾಗೆ ಬರೆದುಕೊಂಡು ಹೋಗುವ ವಿಲಿಯಮ್ ಅದರ ಜೊತೆಗೆ ತಾನೂ ಭಾರತದ ಬಗ್ಗೆ ಮಾಡಿದ ಅಧ್ಯಯನವನ್ನೂ ಬಿಡಿಸುವುದರಿಂದ ಓದಲು ಪ್ರಾರಂಭಿಸಿದಾಗ ಇದೆಲ್ಲಾ ನಮಗೆ ಗೊತ್ತಿರುವುದೇ ಅಲ್ಲವೇ ಎನ್ನಿಸುತ್ತಾದರೂ ಇಡೀ ಪುಸ್ತಕ ಮುಗಿದ ಮೇಲೆ ನಮಗೆ ಗೊತ್ತಿಲ್ಲದ ಎಷ್ಟೋ ವಿಷಯಗಳು ನಮ್ಮರಿವಿಗೆ ಬಂದಿರುವುದು ಗೊತ್ತಾಗುತ್ತದೆ. ವಿಲಿಯಮ್ ಇಲ್ಲಿ ತಾನು ಕಂಡದ್ದನ್ನೇ ಯಥಾವತ್ತಾಗಿ ಭಟ್ಟಿ ಇಳಿಸುವುದಿಲ್ಲ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವಂತೆ ತಾನು ಕಂಡದ್ದನು ಮೊದಲಿಗೆ ಬರೆದು, ಆನಂತರ ಅದರ ಹಿನ್ನೆಲೆಯನ್ನು ಕೆದಕುತ್ತಾ ಸಾಗುತ್ತಾನೆ. ಮೊದಲಿಗೆ ಆ ಸಂಗತಿ, ಘಟನೆಯಲ್ಲಿರುವ ಜನರಿಂದ ಅದರ ಹಿನ್ನೆಲೆ ತಿಳಿಯುವ ವಿಲಿಯಮ್ ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಮತ್ತೆ ಆ ವಿಷಯಕ್ಕೆ ಸಂಬಂಧಪಟ್ಟಂತೆ ಮಾಹಿತಿ ಕಲೆಹಾಕುತ್ತಾನೆ, ಪುಸ್ತಕಗಳನ್ನು ಓದುತ್ತಾನೆ. ಈ ಎಲ್ಲಾ ಅಧ್ಯಯನದ ಮೂಲಕ ಆ ಕಥನವನ್ನು ಮುಂದುವರೆಸಿ ಒಂದು ಪರಿಪೂರ್ಣ ಚಿತ್ರ ಕಟ್ಟಿಕೊಡುತ್ತಾನೆ.
ಇನ್ನು ನಾಗರಾಜ ವಸ್ತಾರೆಯ ಕಥೆಯೊಳಗಿನ ಪ್ರಪಂಚವೇ ಬೇರೆ. ಓದುತ್ತಿದ್ದಂತೆಯೇ ಪಾತ್ರಗಳ ಹೆಸರೇ ನಮಗೆ ವಿಭಿನ್ನವೆನಿಸಲು ಪ್ರಾರಂಭಿಸುತ್ತದೆ. ಆನಂತರ ಅವರ ಭಾಷೆಯ ಶೈಲಿಗೆ ನೀವು ಮಾರುಹೋಗದಿದ್ದರೆ ಕೇಳಿ.
ಈಗ ಸಧ್ಯಕ್ಕೆ ನನ್ನ ಮುಂದೆ ರವಿಬೆಳೆಗೆರೆಯವರ ಹಿಮಾಗ್ನಿ,  ಪ್ರಶಾಂತ ಅಡೂರಕುಟ್ಟವಲಕ್ಕಿ, ಬಸವಣ್ಣೆಪ್ಪ ಕಂಬಾರಅಟಿಕೆ, ianMcEvan enduring love  ಪುಸ್ತಕಗಳಿವೆ. ಈ ತಿಂಗಳಲ್ಲಿ ಇಷ್ಟನ್ನೂ ಓದಲೇ ಬೇಕೆಂಬ ಹಠವಿದೆ.
ಅ೦ದಹಾಗೆ  ಈ ಎ೦ಡ್ಯುರಿ೦ಗ್ ಲವ್, ಡೆನಿಯಲ್ ಕ್ರೆಗ್ ಅಭಿನಯದಲ್ಲಿ ಸಿನಿಮಾ ರೂಪವನ್ನೂ ತಾಳಿದೆ.