Saturday, January 7, 2017

ಅವರು ತರುವ ಮುಂಚೆ ಇವರು ಮಾಡಿಯಾಗಿತ್ತು?



ಮಲಯಾಳಂ ನ ದೃಶ್ಯಂ ಅತ್ಯುತ್ತಮ ಕೌಟುಂಬಿಕ ಥ್ರಿಲ್ಲರ್ ಚಿತ್ರ. ಅದು ಜಪಾನಿ ಲೇಖಕ ಕಿಎಗೋ ಹಿಗಶಿನೋ ಬರೆದ ಕಾದಂಬರಿಯಲ್ಲಿದ್ದ ಕೆಲವು ಅಂಶಗಳನ್ನು ಹೊಂದಿತ್ತು. ಒಂದು ಕೊಲೆಯನ್ನು ಮುಚ್ಚಿಡುವುದಕ್ಕಾಗಿ ಒಂದಿಡೀ ದಿನವನ್ನು ಪುನರ್ಸೃಷ್ಟಿಸುವ ಕತೆ ಕಾದಂಬರಿಯದ್ದು. ಅದನ್ನು ಕೋರಿಯನ್ ಮತ್ತು ಜಪಾನಿ ಎರಡೂ ಭಾಷೆಯಲ್ಲಿ ಸಿನಿಮಾ ಮಾಡಲಾಗಿತ್ತು. ಸಸ್ಪೆಕ್ಟ್ ಎಕ್ಸ್ ಎಂದು ಜಪಾನಿ ಭಾಷೆಯಲ್ಲಿಯೂ, ಪ್ರೈವೇಟ್ ನಂಬರ್ ಎಂಬುದಾಗಿ ಕೋರಿಯನ್ ಭಾಷೆಯಲ್ಲಿಯೂ ಸಿನಿಮಾ ಆಗಿ ಯಶಸ್ಸು ಕಂಡಿದೆ. ಸಿನಿಮಾ ನೋಡಿ, ಕತೆಗೆ ಮಾರುಹೋದ ಬಾಲಿವುಡ್ ನ ಹೆಸರಾಂತ ನಿರ್ಮಾಪಕಿ, ಅದರ ಮೂಲ ಹುಡುಕಿ. ಅದರ ಹಕ್ಕುಗಳನ್ನು ಅಧಿಕೃತವಾಗಿಯೇ ಹಣ ಕೊಟ್ಟು ತಂದೇ ಬಿಟ್ಟರು. ಅಷ್ಟರಲ್ಲಿ, ಮಲಯಾಳಂ ನ ದೃಶ್ಯಂ ಸೂಪರ್ ಹಿಟ್. ಅದನ್ನೇ ಹಿಂದಿಗೂ ರಿಮೇಕ್ ಮಾಡುವ ಸಮಯದಲ್ಲಿ ಆ ನಿರ್ಮಾಪಕಿ ತಲೆ ತಲೆ ಚಚ್ಚಿಕೊಂಡು, ನ್ಯಾಯಾಲಯ ಎಂದೆಲ್ಲಾ ಹೋರಾಡಿದ್ದು, ಓಡಾಡಿದ್ದೂ ಆಯಿತು, ಆದರೆ ಹಿಂದಿಯಲ್ಲಿಯೂ ಸಿನಿಮಾ ಹಿಟ್ ಆಗಿತ್ತು.
ಹಾಗೆಯೇ ಸಧ್ಯಕ್ಕೆ ಪುಷ್ಪಕವಿಮಾನ ಕೋರಿಯನ್ ಭಾಷೆಯ ಮಿರಾಕಲ್ ಇನ್ ಸೆಲ್ ನಂಬರ್ 7 ನ ನೇರ ನಕಲು. ಪ್ರತಿ ದೃಶ್ಯವನ್ನೂ ಚಾಚೂ ತಪ್ಪದೆ ಕನ್ನಡೀಕರಿಸಿರುವ ನಿರ್ದೇಶಕರು ಅದನ್ನು ಸ್ಫೂರ್ತಿ ಎನ್ನಲು ಶುರು ಮಾಡಿದ್ದು ಇತ್ತೀಚಿಗೆ. ಮೂಲಗಳ ಪ್ರಕಾರ ಕನ್ನಡದ ಶ್ರೀನಗರ ಕಿಟ್ಟಿ, ತಮ್ಮ ಪುತ್ರಿಯ ಜೊತೆ ಅಭಿನಯಿಸಿ, ನಿರ್ಮಿಸುವ ಇರಾದೆಯಿಂದ ಕೋರಿಯನ್ ಸಿನಿಮಾದ ಹಕ್ಕುಗಳನ್ನು ಅಧಿಕೃತವಾಗಿಯೇ ತಂದಿದ್ದರಂತೆ. ಅವರು ಅದನ್ನು ತಂದು ನೋಡುವಷ್ಟರಲ್ಲಿ ಇಲ್ಲಿ ಸಿನೆಮಾವೆ ಮುಗಿದುಹೋಗಿತ್ತಲ್ಲ..
ಸುಮ್ಮನೆ ಚಿತ್ರರಂಗದಲ್ಲಿ ಒಳಹೊಕ್ಕು ನೋಡಿದರೆ ಈ ತರಹದ್ದು ನಡೆದಿವೆ. ನಡೆಯುತ್ತಲೇ ಇರುತ್ತವೆ. ಉದಾಹರಣೆಗೆ ಇಂದ್ರಜಿತ್ ಲಂಕೇಶ್ ನಿರ್ದೇಶನದ ಐಶ್ವರ್ಯ ಚಿತ್ರದಲ್ಲಿ ಘಜಿನಿಯ ಪೂರ್ವಾರ್ಧವನ್ನು ಭಟ್ಟಿ ಇಳಿಸಲಾಗಿತ್ತು. ಈವಾಗೆನಾದರೂ ಘಜಿನಿ ರಿಮೇಕ್ ಮಾಡಬೇಕೆಂದರೆ ಹೊಸ ಕತೆ ಬರೆಯಲೇ ಬೇಕಾಗುತ್ತದೆ ..ಹಾಗೆಯೇ ಫೋನ್ ಭೂತ ಚಿತ್ರವನ್ನು ಬಾಲಿವುಡ್ ನಲ್ಲಿ ಕದ್ದು ಸಿನಿಮಾ ಮಾಡಿದ್ದರು, ಗೊತ್ತಾದ ಮೂಲ ಚಿತ್ರದ ನಿರ್ಮಾಪಕರು ಬಿಡುಗಡೆ ತಡೆ ಹಿಡಿದು ಕೋಟ್ಯಾಂತರ ರೂಪಾಯಿ ಪೀಕಿಸಿದ್ದರು, ಆದರೆ ಅಧಿಕೃತ ಹಕ್ಕು ಪಡೆದಿದ್ದ ಅಸಲಿ ನಿರ್ಮಾಪಕರು ಆ ಸಿನೆಮಾವನ್ನು ನಿರ್ಮಾಣ ಮಾಡಲೇ ಇಲ್ಲ. ಹಾಗೆಯೇ ಗೊತ್ತೇ ಇರದ ಸಂಗತಿಯೆಂದರೆ ಅದನ್ನು ಕನ್ನಡದಲ್ಲಿಯೂ ಶರಣ್ ಅಭಿನಯದಲ್ಲಿ ಸುಂದರಿ ಗಂಡ ಸದಾನಂದ ಎಂದು  ಪುನರ್ನಿರ್ಮಾಣ ಮಾಡಲಾಗಿತ್ತು. ಆದರೆ ಕನ್ನಡದ ಸುದ್ದಿ ಹಾಲಿವುಡ್ ತಲುಪಲೇ ಇಲ್ಲ, ಹಾಗಾಗಿ ಕನ್ನಡವರು ಸೇಫ್.ಹಾಗೆಯೇ ಆಪ್ತಮಿತ್ರಕ್ಕೂ ಮುನ್ನ ಸಾಗರಿ ಬಿಡುಗಡೆಯಾಗಿತ್ತು. ಅದನ್ನು ಅಧಿಕೃತ ಹಕ್ಕಿನ ಜೊತೆಯಲ್ಲಿ ಮತ್ತೆ ನಿರ್ಮಿಸಿದ್ದು ಇತಿಹಾಸ.
ಜಗತ್ತಿನ ಎಲ್ಲಾ ಕಡೆಯಲ್ಲಿಯೂ ಇದೆ ನಡದೇ ಇದೆ. ಹಾಗೆಯೇ ದೃಶ್ಯಗಳು ಅನಾಮತ್ತಾಗಿ ಲಿಫ್ಟ್ ಆಗಿ ಬೇರೆ ಚಿತ್ರಗಳಲ್ಲಿ ಕಾಣಸಿಗುತ್ತವೆ. ಅದಕ್ಕೆ ಯಾರು ರೈಟ್ ಸ್ ತೆಗೆದುಕೊಳ್ಳುತ್ತಾರೆ ಹೇಳಿ. ನಾನೊಂದು ರಿಮೇಕ್ ಸಿನಿಮಾಕ್ಕೆ ಸಂಭಾಷಣೆ ಬರೆಯುತ್ತಿದ್ದೆ, ಹಕ್ಕುಗಳನ್ನು ತಂದಿದ್ದ ನಿರ್ಮಾಪಕರು, ನಿರ್ದೇಶಕರು,, ಅದರ ಡಿವಿಡಿ ಕೊಟ್ಟು ಸಿನಿಮಾ ನೋಡಿ, ಚರ್ಚಿಸಿ ಬರೆಯಲು ಕುಳಿತುಕೊಂಡಾಗ ಗೊತ್ತಾದದ್ದು ಆ ಚಿತ್ರದ ಎಲ್ಲಾ ಹಾಸ್ಯ ದೃಶ್ಯಗಳೂ ಈಗಾಗಲೇ ಕನ್ನಡದಲ್ಲಿ ಬಂದಿದೆ ಎಂಬುದಾಗಿ. ಅದೂ ನಾಲ್ಕಾರು ಸಿನೆಮಾಗಳಲ್ಲಿ. ಕೇಸ್ ಹಾಕಿಕೊಂಡು ಓಡಾಡಲು ಸಾಧ್ಯವಾಗುತ್ತದೆಯೇ..? ಹಾಗಾಗಿ ಬೇರೆ ಹಾಸ್ಯ ದೃಶ್ಯಗಳನ್ನ ರಚಿಸೋಣ ಎಂದುಕೊಂಡೆವು. ಅಷ್ಟರಲ್ಲಿ ನಿರ್ದೇಶಕರು ಬೇರೆ ಸಿನಿಮಾದ ಹಾಸ್ಯ ದೃಶ್ಯಗಳನ್ನು ಎತ್ತಿಬಿಡೋಣ ಎನ್ನುವ ಅದ್ಭುತ ಐಡಿಯಾ ಕೊಟ್ಟರು. ನಾವು ಸುಮ್ಮನಿದ್ದೆವು.

Tuesday, January 3, 2017

ನಾಟ್ ಸೇಫ್ ಟು ಬಿ ಫ್ರೀ

ಹಾಗೆ ನೋಡಿದರೆ ಅಂತರರಾಷ್ಟ್ರೀಯ ಚಿತ್ರೋತ್ಸವಗಳು ಚಿತ್ರಕರ್ಮಿಗಳಿಗೆ ಸಂಭ್ರಮ ತರದೇ ಇರವು. ಆದರೆ ಸಿನೆಮರಂಗದಲ್ಲಿ ಇಷ್ಟು ವರ್ಷ ಸಕ್ರಿಯನಾಗಿದ್ದರೋ ಅದೇಕೋ ಏನೋ ನನಗೆ ಚಿತ್ರೋತ್ಸವ ಎಂದರೆ ಕಿಂಚಿತ್ತೂ ಇಷ್ಟವಿಲ್ಲ. ಯಾವು ಯಾವುದೋ ತಲೆಬುಡ ಅರ್ಥವಾಗದೆ, ಮೇಲಾಗಿ ಮನರಂಜನೆ ಇರದ ಸಿನಿಮಾಗಳು, ಅದನ್ನೇ ತೀರಾ ಗಂಭೀರವಾಗಿ ಬೋರಾದರೂ ಅಕ್ಕಪಕ್ಕದವರು ಏನಾದರೂ ಅಂದುಕೊಳ್ಳುತ್ತಾರೆ ಎನ್ನುವ ಭಯದಿಂದ ನೋಡುವ ಕ್ಲಾಸ್ ಪ್ರೇಕ್ಷಕರು,..ನನಗೆ ನಗುತರಿಸುತ್ತಾರೆ. ಇರಲಿ. ಆದರೂ ಒತ್ತಾಯದ ಮೇರೆಗೆ ನಾನು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸುತ್ತೇನೆ. ಸುಮ್ಮನೆ ಅನ್ಯಮನಸ್ಕನಾಗಿ ಸಿನಿಮಾ ನೋಡುತ್ತೇನೆ.
ಈ ಸಾರಿ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅದ್ಯಾವುದೋ ಭಾಷೆಯೇ ಅರ್ಥವಾಗದ ಸಿನಿಮಾ ನೋಡಿ, ಅದೂ ಸಾಯುವಷ್ಟು ಬೋರಾದಾಗ ಯಾರು ಏನಾದರೂ ಅಂದುಕೊಳ್ಳಲಿ ಎಂದು ಎದ್ದು ಹೊರಬಂದಿದ್ದೆ. ಆಗ ನನ್ನ ಕಣ್ಣಿಗೆ ಬಿದ್ದದ್ದು ಅವಳು. ಒಂದೆರೆಡು ಸಿನೆಮಾಗಳಲ್ಲಿ ನಟಿಸಿದ್ದ ನಟಿ. ಒಂದು ಬಿಡುಗಡೆಯಾಗಿತ್ತು. ಮತ್ತೊಂದು ಬಿಡುಗಡೆಯಾಗಿರಲಿಲ್ಲ. ಅಗತ್ಯಕ್ಕಿಂತ ಹೆಚ್ಚಾಗಿ ತುಂಡುಡುಗೆ ಹಾಕಿಕೊಂಡಿದ್ದಳು. ಹಾಗಾಗಿ ಅಲ್ಲಿ ಓಡಾಡುವರು ಒಮ್ಮೆ ಅವಳ ಕಡೆಗೆ ನೋಡಿಯೇ ಹೋಗುತ್ತಿದ್ದರು. ಅಷ್ಟರಲ್ಲಿ ಅಲ್ಲಿದ್ದ ಕೆಲವು ಸಿನಿಮಾ ಪೋಸ್ಟರ್ಗಳ ಮುಂದೆ, ನಿರ್ದೇಶಕರ ಜೊತೆಯಲ್ಲಿ ಫೋಟೋ ತೆಗೆಸಿಕೊಳ್ಳುತ್ತಿದ್ದಳು. ಆ ತಕ್ಷಣಕ್ಕೆ ಅವಳ ಅಂದ ಚಂದ ನನ್ನನ್ನು ಸೆಳೆದುಬಿಟ್ಟಿತ್ತು. ಹೋಗಿ ಅವಳನ್ನು ಪರಿಚಯ ಮಾಡಿಕೊಳ್ಳುವುದು ಕಷ್ಟವಿರಲಿಲ್ಲ ಬಿಡಿ. ನಾನೂ ಸಿನಿಮಾರಂಗದಲ್ಲಿಯೇ ಇರುವವನು ತಾನೇ. ಅದರಲ್ಲೂ ನಿರ್ದೇಶಕ ಎಂದರೆ ಆಕೆ ಆತ್ಮೀಯಳಾಗದೆ ಇರುತ್ತಾಳೆಯೆ..? ನೀವೇನೆಂದು ಅಂದುಕೊಳ್ಳುತ್ತೀರೋ ಆ ಕ್ಷಣಕ್ಕೆ ಅವಳ ಸಂಭ್ರಮ ನೋಡಿ, ಅವಳ ಸುತ್ತಮುತ್ತಲಿನ ಜನರನ್ನು ನೋಡಿ, ಅಕಸ್ಮಾತ್ ಆಕೆ ತಟ್ಟನೆ ಬಿದ್ದುಬಿಟ್ಟರೆ ಈ ಜನ ಹೇಗೆ ಪ್ರತಿಕ್ರಿಯಿಸಬಹುದು ಎನ್ನುವ ಆಲೋಚನೆ ಬಂದೆ ಬಿಟ್ಟಿತು. ಅಕಸ್ಮಾತ್ ಸತ್ತು ಹೋದರೆ.. ಮನಸ್ಸು ಇನ್ನೂ ಮುಂದಕ್ಕೆ ಯೋಚಿಸಿತು. ಅವಳು ಕೊಲೆಯಾಗಿ ಬಿಟ್ಟರೆ...ಇಲ್ಲೆಲ್ಲಾ ಅಲ್ಲೋಲಕಲ್ಲೋಲ ಆಗಿಬಿಡಬಹುದಲ್ಲ ಎನಿಸಿತು. ಸುಮ್ಮನೆ ಅಡ್ಡಾಡುವುದಕ್ಕಿಂತ ನಾನೇ ಕೊಲೆ ಮಾಡಿಬಿಟ್ಟರೆ ಹೇಗೆ.? ಅದೊಂತರ ಥ್ರಿಲ್, ಜೊತೆಗೆ ಪೊಲೀಸರಿಗೆ ಚಾಲೆಂಜ್.. ಏಕೆಂದರೆ ಅವಳ ಮೊಬೈಲ್, ಗೆಳೆಯರು, ಏನೇ ಹುಡುಕಿದರೂ ನಾನು ಸಿಗುವ ಅವಕಾಶ ಇಲ್ಲವೇ ಇಲ್ಲ. ಏಕೆಂದರೆ ಆಕೆ ಪರಿಚಯವೇ ಇಲ್ಲವಲ್ಲ. ಅದರ ಜೊತೆಗೆ ಪೊಲೀಸರು ಮೊದಲಿಗೆ ಕೊಲೆಗೆ ಮೋಟಿವ್ ಏನು ಎಂಬುದಾಗಿ ತಲೆ ಕೆಡಿಸಿಕೊಳ್ಳುತ್ತಾರೆ. ಅಥವಾ ಆಕೆಯ ಮೇಲೆ ಅತ್ಯಾಚಾರ ಪ್ರಯತ್ನ ನಡೆದಿದೆಯೇ ಎಂದೂ ಯೋಚಿಸುತ್ತಾರೆ, ಆದರೆ ಅದ್ಯಾವುದೂ ಸಿಕ್ಕದೆ ಇದ್ದಾಗ ಅವರ ತಲೆ ಮೊಸರುಗಡಿಗೆಯಾಗದೆ ಇರದಲ್ಲವೇ..?
ಅದೇಕೋ ಏನೋ ಇಷ್ಟು ಆಲೋಚನೆ ಬಂದದ್ದೆ ಕೊಂದೇ ಬಿಡುವ ಎನಿಸಿತು. ಕೊಂದು ಪೊಲೀಸರ ಪ್ರತಿಯೊಂದು ಚಲನೆಯನ್ನು ಗಮನಿಸಿ, ಅದಕ್ಕೆ ಪ್ರತಿತಂತ್ರರೂಪಿಸುತ್ತಾ ಹೋದರೆ ಅದೆಷ್ಟು ಥ್ರಿಲ್ಲಿಂಗ್ ಆಗಿರುತ್ತದಲ್ಲವೇ..? ಆದರೆ ಎಲ್ಲೂ ಒಂದು ಸಣ್ಣ ಸುಳಿವನ್ನೂ ಬಿಟ್ಟುಕೊಡಬಾರದು.
ಅಷ್ಟೇ. ಹಾಗನ್ನಿಸಿದ ಎರಡೇ ಘಂಟೆಗಳಲ್ಲಿ ಆಕೆಯನ್ನು ನನ್ನ ಕೋಣೆಗೆ ಬರುವಂತೆ ಮಾಡಿ, ಕೊರಳಿಗೆ ವೈರ್ ಬಿಗಿದು ಕೊಲೆ ಮಾಡಿಯೇ ಬಿಟ್ಟಿದ್ದೆ. ಆಕೆ ಅರಳುಕಣ್ಣುಗಳಿಂದ ಕೋಣೆಯೊಳಗೆ ಬಂದದ್ದೆ ನಿಮಿಷಗಳಲ್ಲಿ ಹೆಣವಾಗಿದ್ದಳು. ಆದರೆ ಸಣ್ಣಕ್ಕೆ ಬಳ್ಳಿಯಂತಿದ್ದ ಆಕೆಯ ಶಕ್ತಿ ನನಗೆ ಅಚ್ಚರಿ ತರಿಸಿತ್ತು. ಕೊಲೆ ಮಾಡಿದ್ದಾಯಿತು. ಇಲ್ಲಿಂದ ಗೇಮ್ ಶುರುಮಾಡಬೇಕು ಎನಿಸಿತು. ಅಷ್ಟರಲ್ಲಿ ಕಾಲಿಂಗ್ ಬೆಲ್ ರಿಂಗಣಿಸಿತು.
ಬೆಂಗಳೂರಿನ ಆಚೆಗೆ ಹೋದಾಗಲೆಲ್ಲಾ ನನ್ನ ಕೈಹಿಡಿಯುವುದು ಪುಸ್ತಕಗಳೇ. ಅದರಲ್ಲೂ ಜೇಮ್ಸ್ ಹಾಡ್ಲಿ ಚೇಸ್. ಆತನ “ನಾಟ್ ಸೇಫ್ ಟು ಬಿ ಫ್ರೀ” ಕಾದಂಬರಿ ಶುರುವಾಗುವುದು ಹೀಗೆ. ಮಾನಸಿಕವಾಗಿ ಆರೋಗ್ಯಕರವಾಗಿಲ್ಲದ ದೊಡ್ಡ ಸಿನಿಮಾ ನಿರ್ಮಾಪಕರ ಮಗ, ವಿನಾಕಾರಣ ಕೊಲೆಯೊಂದನ್ನು ಮಾಡಿಬಿಡುತ್ತಾನೆ. ಮುಂದೆ ...?