Saturday, February 23, 2013

ಒಂದು ಬೆಳ್ಳಿ ಕಿರಣ-ಸಿಲ್ವರ್ ಲೈನಿಂಗ್ ಪ್ಲೇ ಬುಕ್

ಈ ವರ್ಷದಲ್ಲಿ ಎಂಟು ಆಸ್ಕರ್ ಪ್ರಶಸ್ತಿಗಳಿಗೆ ನಾಮಾಂಕಿತವಾಗಿರುವ ಚಿತ್ರ ಸಿಲ್ವರ್ ಲೈನಿಂಗ್ ಪ್ಲೇ ಬುಕ್ .ಚಿತ್ರದ ನಿರ್ದೇಶಕರು ಡೇವಿಡ್.ಓ.ರಸಲ್. ರಸಲ್ ನಿರ್ದೇಶನದ ತ್ರೀ ಕಿಂಗ್ಸ್ ಮತ್ತು ಫೈಟರ್ ಚಿತ್ರಗಳನ್ನ ನೀವು ಈಗಾಗಲೇ ನೋಡಿರಬಹುದು.ಒಂದು ಗಟ್ಟಿಯಾದ ಕಥೆ ಮತ್ತು ಆಸಕ್ತಿಕರವಾದ ನಿರೂಪಣೆ ರಸಲ್ ಚಿತ್ರಗಳ ಆಸ್ತಿ ಎನ್ನಬಹುದು. ಆದರೆ ಆ ವಿಷಯದಲ್ಲಿ ಈ ಚಿತ್ರ ಅಷ್ಟೇನೂ ಗಟ್ಟಿಯಾದ ಕಥೆ ಹೊಂದಿಲ್ಲ ಎನ್ನಬಹುದು. ಮ್ಯಾಥ್ಯೂ ಕ್ವಿಕ್ ಬರೆದ ಇದೆ ಹೆಸರಿನ ಕಾದಂಬರಿ ಆಧರಿಸಿದ ಸಿಲ್ವರ್ ಲೈನಿಂಗ್ ಪ್ಲೇ ಬುಕ್ ಚಿತ್ರ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಸಂಕಲನ ಹೀಗೆ ಎಂಟು ಪ್ರಮುಖ ವಿಭಾಗಗಳಲ್ಲಿ ನಾಮಾಂಕಿತಗೊಂಡಿರುವ ಈ ಚಿತ್ರದಲ್ಲಿ ಬಾಲಿವುದಿನ ನಟ ಅನುಪಮ್ ಖೇರ್ ವೈದ್ಯರ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕೆಲಸ ಮುಗಿಸಿ ಮನೆಗೆ ಬಂದರೆ ಹೆಂಡತಿ ಬೇರೆಯೊಬ್ಬನ ಜೊತೆಗಿದ್ದರೆ ಯಾರಿಗೆ ತಾನೇ ಕೋಪ ಬರದಿರುತ್ತದೆ ಹೇಳಿ. ಇಲ್ಲಿ ಪ್ಯಾಟ್ ಗೆ ಆಗುವುದೂ ಅದೇ. ರೊಚ್ಚಿಗೆದ್ದ ಪ್ಯಾಟ್ ಹಿಂದೆ ಮುಂದೆ ನೋಡದೆ ತನ್ನ ಹೆಂಡತಿ ನಿಕ್ಕಿಯ ಜೊತೆಗಿದ್ದ ಅಯೋಗ್ಯನನ್ನು ಹಿಡಿದು ಹಿಗ್ಗಾ ಮುಗ್ಗಾ ಭಾರಿಸುತ್ತಾನೆ. ಆನಂತರ ಆತನ ಮಾನಸಿಕ ಸ್ಥಿತಿ ಕೆಡುತ್ತದೆ. ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಬಂದುಬಿಡುತ್ತದೆ. ಸುಮಾರು ಎಂಟು ತಿಂಗಳುಗಳ  ಚಿಕಿತ್ಸೆ ಪಡೆದು ಹೊರಬರುವ ಪ್ಯಾಟ್ ಮತ್ತೆ ತನ್ನ ಹೆಂಡತಿಯನ್ನ ಸೇರಲು ಆಸೆಪಡುತ್ತಾನೆ. ಆದರೆ ಆಕೆಯೊಂದಿಗೆ ಮಾತನಾಡುವುದಾದರೂ ಹೇಗೆ? ಆಗ ಪರಿಚಯವಾಗುವವಳು ಟಿಪಾನಿ. ಮುಂಬರುವ ನೃತ್ಯ ಸ್ಪರ್ಧೆಯಲ್ಲಿ ಟಿಫಾನಿಯ ಜೋಡಿಯಾಗಿ ಪ್ಯಾಟ್ ನರ್ತಿಸಲು ಒಪ್ಪಿಕೊಂಡರೆ ಪ್ಯಾಟ್ ಪರವಾಗಿ ನಿಕ್ಕಿ ಯ ಜೊತೆ  ಮಾತನಾಡಲು ಟಿಫಾನಿ ಒಪ್ಪಿಕೊಳ್ಳುತ್ತಾಳೆ .
 ಮುಂದೆ ಒಂದಷ್ಟು ಘಟನೆಗಳು ನಡೆಯುತ್ತವೆ. ಅನಿವಾರ್ಯವಾಗಿ ಟಿಫಾನಿ ಮತ್ತು ಪ್ಯಾಟ್ ಜೊತೆಯಾಗಿರಬೇಕಾಗುತ್ತದೆ. ಆ ಸಾಂಗತ್ಯ ಅವರಿಬ್ಬರ ನಡುವಣ ಪ್ರೀತಿಗೆ ಕಾರಣವಾಗುತ್ತದೆ.ಕೊನೆಯಲ್ಲಿ ಅವರಿಬ್ಬರೂ ಒಂದಾಗುತ್ತಾರೆ.ಚಿತ್ರ ಸುಖಾಂತ್ಯವಾಗುತ್ತದೆ.
ಚಿತ್ರದ ಕಥೆ ಅಷ್ಟೇನೂ ವಿಶೇಷವಾದದ್ದಲ್ಲ. ಹಾಗೆಯೇ ಅದರ ನಿರೂಪಣೆಯೂ. ಅಬ್ಬಬ್ಬಾ ಎನಿಸುವ ತಿರುವುಗಳಿಲ್ಲ ಚಿತ್ರದಲ್ಲಿ. ಹೆಚ್ಚು ಕಡಿಮೆ ಎಲ್ಲಾ ನಿರೀಕ್ಷಿತವೇ.ಆದರೆ ಚಿತ್ರ ಇಷ್ಟವಾಗುತ್ತದೆ. ಅಲ್ಲಲ್ಲಿ ಕಚಗುಳಿಯಿಡುತ್ತಾ ಸಾಗುವ ಚಿತ್ರಕಥೆ ಎಲ್ಲೂ ಬೇಸರವನ್ನುಂಟು ಮಾಡುವುದಿಲ್ಲ. 
ನಾಯಕನ ಪಾತ್ರದಲ್ಲಿ ಬ್ರಾಡ್ಲಿ ಕೂಪರ್ ಉತ್ತಮ ನಟನೆ ಮಾಡಿದ್ದಾರೆ. ಮತ್ತು ನೋಡಲು ಚಂದಗೆ ಕಾಣಿಸುತ್ತಾರೆ. ನಾಯಕಿಯ ಪಾತ್ರದಲ್ಲಿ ಜೆನಿಫರ್ ಲಾರೆನ್ಸ್ , ಪೋಷಕ ಪಾತ್ರದಲ್ಲಿ ರಾಬರ್ಟ್ ಡಿ ನೇರೋ, ಕ್ರಿಸ್ ಟಕ್ಕರ್ ಅಭಿನಯಿಸಿದ್ದಾರೆ.

ತ್ರಿವಳಿ ಪ್ರತಿಕಾರಗಳು.

ಚಾನ್ ವೂಕ್ ಪಾರ್ಕ್ ಸೌತ್ ಕೊರಿಯಾದ ಹೆಸರಾಂತ ನಿರ್ದೇಶಕ . ತನ್ನ ವಿಭಿನ್ನ ಶೈಲಿಯಿಂದ ಮತ್ತು ಮಂದಗತಿಯಾದರೂ ಕುತೂಹಲಕಾರಿ ನಿರೂಪಣೆಯಿಂದ ಗಮನ ಸೆಳೆಯುವ ಈತನ ಚಿತ್ರಗಳು ನೋಡುಗರಿಗೆ ರಸದೌತಣ ಎಂದೆ ಹೇಳಬಹುದು. ಪಾರ್ಕ್ ನ ಚಿತ್ರಗಳು ಸಾಹಸಮಯ ಅಥವಾ ದ್ವೇಷಸಾಧನೆಯ ಕಥಾವಸ್ತುವನ್ನು ಹೊಂದಿವೆ.ಆತನ ಪ್ರತೀಕಾರದ ಸರಣಿ ಚಿತ್ರಗಳಾದ ಸಿಂಪಥಿ ಫಾರ್ ಮಿಸ್ಟರ್  ವೆಂಜೆಯಾನ್ಸ್, ಓಲ್ಡ್ ಬಾಯ್ ಮತ್ತು ಸಿಂಪಥಿ ಫಾರ್ ಲೇಡಿ ವೆಂಜೆಯಾನ್ಸ್ ಚಿತ್ರಗಳು ವೆಂಜೆಯಾನ್ಸ್ ಟ್ರೈಲಜಿ ಎಂದೆ ಹೆಸರುವಾಸಿಯಾಗಿವೆ. 
ಮೂರೂ ಚಿತ್ರಗಳ ಮೂಲ ವಸ್ತು ದ್ವೇಷ, ಪ್ರತೀಕಾರ. ಆದರೂ ಕಥೆಯಲ್ಲಿನ ವೈವಿಧ್ಯತೆಯಿಂದಾಗಿ ಅವು ಗಮನಸೆಳೆಯುತ್ತವೆ. ಮುಂದೇನಾಗುತ್ತದೆ ಹೇಗಾಗುತ್ತದೆ ಎಂಬ ಚಿಕ್ಕ ಸುಳಿವನ್ನೂ ಬಿಟ್ಟುಕೊಡದೆ ಕೊನೆಯವರೆಗೂ ಪ್ರೇಕ್ಷಕನನ್ನು ಸತಾಯಿಸುವ ಪಾರ್ಕ್ ನ ಈ ಚಿತ್ರಗಳು ಆಷ್ಟೇ  ಚೆನ್ನಾಗಿ ಕ್ರೌರ್ಯವನ್ನೂ ಬಿಂಬಿಸುತ್ತವೆ. ಈ ಚಿತ್ರಗಳು ಕಥೆಯಲ್ಲಿನ ಮೂಲಭಾವದಿಂದಾಗಿ ಸರಣಿ ಎನಿಸಿಕೊಳ್ಳುತ್ತವೆ. ಆದರೆ ಚಿತ್ರದ ಕಥೆಗಳು ಬೇರೆ ಬೇರೆ. ಒಂದಕ್ಕೊಂದು ಸಂಬಂಧವೇ ಇಲ್ಲ. ಪ್ರತೀಕಾರದ ಬೆಂಕಿ ಎಲ್ಲರನ್ನೂ ಸುಡುತ್ತದೆ ಮತ್ತು ಆ ಕಿಚ್ಚನ್ನು ಒಮ್ಮೆ ಹಚ್ಚಿದರೆ ನಾವು ಬೇಕೆಂದರೂ ಆರಿಸಲಾಗುವುದಿಲ್ಲ ಎನ್ನುವ ಸತ್ಯವನ್ನು ಮೂರು ಚಿತ್ರಗಳೂ ತೆರೆದಿಡುತ್ತವೆ. ಈ ಸರಣಿಯ ಮೊದಲನೆಯ ಚಿತ್ರವಾಗಿ ಬಂದದ್ದು ಸಿಂಪಥಿ ಫಾರ್ ಮಿಸ್ಟರ್  ವೆಂಜೆಯಾನ್ಸ್. 2002 ರಲ್ಲಿ ತೆರೆಗೆ ಬಂದ ಈ ಚಿತ್ರ ಗಲ್ಲಾಪೆಟ್ಟಿಗೆ ಲೂಟಿ ಮಾಡಿತಲ್ಲದೆ, ವಿಮರ್ಶಕರಿಂದಲೂ ಭಾರಿ ಮೆಚ್ಚುಗೆ ಗಳಿಸಿತು. ಕಿವುಡ ಮೂಗನೊಬ್ಬ ತನ್ನ ತಂಗಿಯ ಆಸ್ಪತ್ರೆಯ ಖರ್ಚುವೆಚ್ಚ ಭರಿಸಲು ತನ್ನ ಗೆಳತಿಯ ಜೊತೆ ಸೇರಿ ಒಬ್ಬ ಶ್ರೀಮಂತನ ಒಬ್ಬಳೇ ಮಗಳನ್ನ ಅಪಹರಿಸುತ್ತಾನೆ. ಆಕೆಯನ್ನು ಬಿಡಿಸಿಕೊಳ್ಳಲು ಹಣದ ಬೇಡಿಕೆ ಇಡುತ್ತಾನೆ. ಹೆಂಡತಿಯಿಂದ ದೂರಾಗಿದ್ದ ಆ ಮಗುವಿನ ತಂದೆ ಬೇರೇನೂ ಯೋಚಿಸದೆ ಹಣ ಕೊಡಲು ನಿರ್ಧರಿಸಿ ಹಣವನ್ನೂ ನಾಯಕ ಹೇಳಿದ ಜಾಗಕ್ಕೆ ತಲುಪಿಸುತ್ತಾನೆ. ಆದರೆ ಅದು ಆ ಮೂಗನ ತಂಗಿಗೆ ತಿಳಿದು ಆಕೆ ಸಾಯುತ್ತಾಳೆ. ಆಕೆಯನ್ನು ಮಣ್ಣು ಮಾಡುವ ಕಾರ್ಯದಲ್ಲಿ ನಿರತನಾಗುವ ಮೂಗನ ಅತಾಚುರ್ಯದಿಂದ ಅಪಹೃತ ಬಾಲಕಿ ಕೂಡ ಸಾಯುತ್ತಾಳೆ. ಇದರಿಂದ ರೊಚ್ಚಿಗೇಳುವ ಬಾಲಕಿಯ ತಂದೆ ಅಪಹರಣಕಾರರ ಹಿಂದೆ ಬೀಳುತ್ತಾನೆ. ಮೊದಲಿಗೆ ಮೂಗನ ಗೆಳತಿಯನ್ನು ಚಿತ್ರಹಿಂಸೆ ಕೊಟ್ಟು ಸಾಯಿಸುತ್ತಾನೆ, ಆನಂತರ ಮೂಗನನ್ನೂ ಸಾಯಿಸುತ್ತಾನೆ,..ಆಗ ಮೂಗನ ಗೆಳತಿಯ ಸಹಚರರು ಬಾಲಕಿಯ ತಂದೆಯನ್ನು ಸಾಯಿಸುತ್ತಾರೆ. ಹೀಗೆ ಯಾವುದೋ ಒಂದು ಅತಾಚುರ್ಯದಿಂದಾಗಿ ವಿನಾಕಾರಣದ ಪ್ರತಿಕಾರದ ಬೆಂಕಿ ಎಲ್ಲರನ್ನೂ ಸುಟ್ಟುಬಿಡುತ್ತದೆ.
 ಇದಾದ  ನಂತರ ಬಂದ ಓಲ್ಡ್ ಬಾಯ್ ಕಥೆ ಕೂಡ ಭಿನ್ನವಾದದ್ದಾದರೂ ವಿಷಯ ಮಾತ್ರ ಪ್ರತಿಕಾರಕ್ಕೆ ಸಂಬಂಧಿಸಿದ್ದು. 2003ರಲ್ಲಿ ತೆರೆಗೆ ಬಂದ ಈ ಚಿತ್ರದ ಕಥೆ ತುಂಬಾ ಸರಳವಾದದ್ದು. ವ್ಯಕ್ತಿಯೊಬ್ಬನನ್ನು ಒಂದು ಕೋಣೆಯೊಳಗೆ 15 ವರ್ಷಗಳ ವರೆಗೆ ಕೂಡಿ ಹಾಕಲಾಗುತ್ತದೆ. ಅವನಿಗೆ ತಾನೇಕೆ ಇಲ್ಲಿದ್ದೇನೆ, ತನ್ನನ್ಯಾರು ಇಲ್ಲಿ ಕಟ್ಟಿಹಾಕಿರುವವರು, ಅವರ ಉದ್ದೇಶವೇನು ಎಂಬುದೂ ಗೊತ್ತಾಗುವುದಿಲ್ಲ. ಅವನು ಮಾಡಿದ ತಪ್ಪೇನು ಎಂಬುದು ಗೊತ್ತಾಗುವುದಿಲ್ಲ. ಹದಿನೈದು ವರ್ಷದ ನಂತರ ಒಂದು ಬಟಾಬಯಲಿನಲ್ಲಿ ಅವನನ್ನು ಬಿಟ್ಟುಬಿಡುತ್ತಾರೆ. ಈಗ ನಾಯಕನಿಗಿರುವ ಏಕೈಕ ಗುರಿಯೆಂದರೆ ತನಗೆ ಏನೊಂದು ಹೇಳದೆ ಹದಿನೈದು ವರ್ಷ ಕೊನೆಯಲ್ಲಿಟ್ಟು ಶಿಕ್ಷಿಸಿದವನನ್ನು ಹುಡುಕುವುದು, ತನ್ನ ಹಗೆ ತೀರ್ಸಿಕೊಳ್ಳುವುದು. ಆದರೆ ಅವನಿಗೆ ಗೊತ್ತಿರದ ವಿಷಯವೆಂದರೆ ಆ ವ್ಯಕ್ತಿಯ ಶಿಕ್ಷೆ ಬರೀ ಬಂಧನಕ್ಕೆ ಮುಗಿದಿರುವುದಿಲ್ಲ. ಬದಲಿಗೆ ಆತನ ಸ್ವತಂತ್ರ ಕೂಡ ಶಿಕ್ಷೆಯ ಇನ್ನೊಂದು ಮಜಲಾಗಿದೆ ಎಂಬುದು.
2005ರಲ್ಲಿ ತೆರೆಗೆ ಬಂದ ಸಿಂಪಥಿ ಫಾರ್ ಲೇಡಿ ವೆಂಜೆಯಾನ್ಸ್ ಚಿತ್ರ ಕೂಡ ಇದೆ ವಿಷಯವನ್ನ ಒಳಗೊಂಡಿದ್ದರೂ ಕ್ರೌರ್ಯದ ಚಿತ್ರೀಕರಣ ಈ ಚಿತ್ರದಲ್ಲಿ ಸ್ವಲ್ಪ ಕಡಿಮೆ ಎಂದೆ ಹೇಳಬಹುದು.ತಾನು ಮಾಡಿರದ ತಪ್ಪಿಗಾಗಿ ಜೈಲು ಶಿಕ್ಷೆ ಅನುಭವಿಸುವ ನಾಯಕಿ ಜೈಲಿನಿಂದ ಹೊರಬಂದ ಮೇಲೆ ತನ್ನ ಪರಿಸ್ಥಿತಿಗೆ ಕಾರಣನಾದವನನ್ನು ಹುಡುಕಿ ಕೊಳ್ಳುವ ಕಥೆ ಈ ಚಿತ್ರದ್ದು. ಇದು ಕೂಡ ಗಲ್ಲಾಪೆಟ್ಟಿಗೆ ಸೂರೆಗೊಂಡಿತಲ್ಲದೆ ಹಲವಾರು ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಂಸೆಗಳಿಸಿತು.
ಮೂರು ಚಿತ್ರಗಳ ನಿರ್ದೇಶನ ಮಾತ್ರ ಎಲ್ಲರೂ ಮೆಚ್ಚುವ ಹಾಗಿದೆ. ಪ್ರತಿಯೊಂದು ದೃಷ್ಯವನ್ನು ತುಂಬಾ ವಿವರವಾಗಿ ಬಿಚ್ಚಿಡುವ ನಿರ್ದೇಶಕನಲ್ಲಿ ಯಾವುದೇ ಅವಸರವಿಲ್ಲ. ನಿಧಾನಕ್ಕೆ ಚಲಿಸುವ ಕೆಮೆರಾ ಚಲನೆ ನಮ್ಮ ಕಣ್ಣಮುಂದೆಯೇ ಕಥೆ ನಡೆಯುತ್ತಿದೆಯೇನೋ ಎನ್ನುವ ಭಾವ ತರಿಸುತ್ತದೆ. ಅದರಲ್ಲೂ ಕೊಲೆಯ ದೃಶ್ಯಗಳ ಮೇಕಿಂಗ್ ಸೂಪರ್. ಅಂದರೆ ಎಲ್ಲವೂ ಕಣ್ಣಿಗೆ ಕಟ್ಟುವಂತಿದೆ ಅಥವಾ ನೋಡಲಾಗದೆ ಕಣ್ಣು ಮುಚ್ಚಿಕೊಳ್ಳುವ ಹಾಗಿದೆ.ಮನುಷ್ಯನಲ್ಲಿರುವ ತಣ್ಣನೆಯ ರಾಕ್ಷಸ ಜಾಗೃತನಾದಾಗ ಕೊಲೆಯಂತಹ ಅಸಹ್ಯಕರವಾದ ಕೆಲಸ ಕೂಡ ಹೇಗೆ ಆರಾಮವಾಗಿ ದೈನಂದಿನ ನಿತ್ಯಕ್ರಮದಂತೆ ನಡೆದುಹೋಗುತ್ತದೆ ಎಂಬುದನ್ನು ನಿರ್ದೇಶಕ ತನ್ನ ಕೌಶಲದಿಂದ ಅದ್ಭುತವಾಗಿ ತೋರಿಸಿದ್ದಾನೆ. 
ಮೂರೂ ಚಿತ್ರಗಳಲ್ಲಿನ ಪಾತ್ರಧಾರಿಗಳ ಅಭಿನಯ, ಹಿನ್ನೆಲೆ ಸಂಗೀತ ಚಿತ್ರೋಚಿತವಾಗಿವೆ.
ಥ್ರಿಲ್ಲರ್ ಪ್ರಿಯರು, ಕ್ರೈಂ ಚಿತ್ರಗಳ ಪ್ರಿಯರು ನೋಡಬಹುದಾದಂತಹ ಚಿತ್ರಗಳು ಇವು.

 

Monday, February 18, 2013

ನೋಡಲೇಬೇಕಾದ ಕನ್ನಡಚಿತ್ರ -ಪ್ರಪಾತ.

ಭಾರದ್ವಾಜ ಮುನಿಯ ವೈಮಾನಿಕ ಶಾಸ್ತ್ರ ಸುಮಾರು ಜನರಿಗೆ ಗೊತ್ತಿಲ್ಲ. ವೈಮಾನಿಕ ಶಾಸ್ತ್ರದಲ್ಲಿ ವಿಮಾನ ತಯಾರಿಕೆ ಹಾರಾಟ ಮುಂತಾದವುಗಳನ್ನು ವಿವರವಾಗಿ ಬರೆದಿಡಲಾಗಿದೆ. ವಿಮಾನ ಹಾರಾಟಕ್ಕೆ ಬೇಕಾದ ತಂತ್ರಜ್ಞಾನ, ಬಳಸಬೇಕಾದ ಲೋಹ, ಅದರ ಬಿಡಿಭಾಗಗಳು ಮತ್ತವುಗಳ ಜೋಡಣೆ ಮುಂತಾದವುಗಳ ಬಗ್ಗೆ ತುಂಬಾ ವಿವರವಾಗಿ ಬರೆದಿರುವ ಶಾಸ್ತ್ರ ಇದು. ೧೮೯೫ ರಲ್ಲಿ ಆನೇಕಲ್ ಸುಬ್ಬರಾಯ ಶಾಸ್ತ್ರಿಗಳು ಮುಂಬೈ ನಲ್ಲಿ ಪ್ರಥಮ ವಿಮಾನ ಹಾರಾಟ ನಡೆಸಿದರು ಎಂಬುದಕ್ಕೆ ಅದು ಆವತ್ತಿನ ಕೇಸರಿ ಪತ್ರಿಕೆಯಲ್ಲಿ ಪ್ರಕಟವಾಗಿರುವುದೇ ಸಾಕ್ಷಿ. ಅದಾದ ನಂತರ ೧೯೦೩ರಲ್ಲಿ ರೈಟ್ ಸಹೋದರರು ವಿಮಾನಯಾನದ ಪಿತಾಮಹರಾದರು ಎಂಬುದು ಸಧ್ಯದ ಇತಿಹಾಸ.
ನಾವು ಯಾರಿಗೂ ಕಮ್ಮಿ ಇರಲಿಲ್ಲ, ನಮ್ಮಲ್ಲಿ ಎಲ್ಲವೂ ಇತ್ತು ಎನ್ನುವ ಮನಸ್ಥಿತಿ ಭಾರತೀಯರಿಗೆ ಮೊದಲಿನಿಂದಲೂ ಬಂದಿದೆ. ಹಾಗಾದರೆ ಈವತ್ಯಾಕಿಲ್ಲ ಎನ್ನುವ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿಲ್ಲ. ಎಲ್ಲವೂ ನಮ್ಮ ಪುರಾಣದಲ್ಲಿ ಉಲ್ಲೇಖವಾಗಿದ್ದರೂ ಪ್ರಾಯೋಗಿಕವಾಗಿ ಹೇಗೆ, ಯಾವುದನ್ನು ಬಳಸಬೇಕೆನ್ನುವುದಕ್ಕೆ ವಿವರಗಳಿಲ್ಲ. ಅಥವಾ  ಬಳಸಿದ್ದರೆನ್ನುವುದಕ್ಕೆ ಸಾಕ್ಷಿಗಳಿಲ್ಲ. ಈ ಬಗ್ಗೆ ಮಾತಾಡಲು ನಿಂತರೆ ದೊಡ್ಡ ವಾಗ್ವಾದವೇ ನಡೆದುಹೋಗಬಹುದು.
ಇರಲಿ.ಆದರೆ ವಿಮಾನಯಾನ ನಮ್ಮದೇ ಎನ್ನುವುದಕ್ಕೆ ನಮಗೆ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಹಾಗೆ ಅದರ ಕಾಲಘಟ್ಟವೂ ಕೂಡ ತೀರ ಹಳೆಯದಲ್ಲ. ಬ್ರಿಟಿಶ್ ಆಳ್ವಿಕೆಯ ಕಾಲದ್ದು. ಹಾಗೆ ವಿಮಾನಯಾನವನ್ನೂ ಸಾಕ್ಷಾತ್ಕರಿಸಲು ಶ್ರಮಿಸಿದ ಆನೇಕಲ್ ಸುಬ್ಬರಾಯ ಶಾಸ್ತ್ರಿಯನ್ನ ಜಗಧೀಷ ಚಂದ್ರ ಬೋಸ್ ಭೇಟಿಯಾಗಿದ್ದರು. ಪಟೇಲರು  ಭೇಟಿಯಾಗಿದ್ದರು ಎಂಬುದಕ್ಕೆ ಸ್ಪಷ್ಟ ದಾಖಲೆಗಳಿವೆ.
ಮೊನ್ನೆ ನಾನು ನಟ/ನಿರ್ದೇಶಕ ಸುಚೇಂದ್ರ ಪ್ರಸಾದರನ್ನು ಭೇಟಿಯಾಗಿದ್ದೆ. ಅವರದೇ ಸ್ಟುಡಿಯೋದಲ್ಲಿ ಅವರ ಚಿತ್ರ 'ಪ್ರಪಾತ' ನೋಡಿದೆ.ಹತ್ತು ವರ್ಷಗಳು ಈ ವಿಷಯದಲ್ಲಿ ಸಂಶೋಧನೆ ನಡೆಸಿರುವ ಸುಚೇಂದ್ರ ಪ್ರಸಾದರು ಆನೇಕಲ್ ಸುಬ್ಬರಾಯ ಶಾಸ್ತ್ರಿಗಳ ವಿಮಾನಯಾನದ ಬಗ್ಗೆ ಚಿತ್ರಿಸಿರುವ ಏಕೈಕ ಅಪರೂಪದ ಚಿತ್ರವಿದು. ಸುಚೇಂದ್ರಪ್ರಸಾದರ ಕನ್ನಡ ಪಂಡಿತನ ಪಾತ್ರವನ್ನ ನಾವು ಡ್ರಾಮ ಚಿತ್ರದಲ್ಲಿ ನೋಡಿದ್ದೇವೆ. ಖುಷಿಯ ಪ್ರಶಂಸಾರ್ಹ ವಿಷಯವೆಂದರೆ ಅವರು ನಿಜವಾಗಲೂ ಹಾಗೆಯೇ ಇದ್ದಾರೆ. ತುಂಬಾ ಸ್ಪಷ್ಟವಾದ ಸುಲಲಿತವಾದ ಕನ್ನಡ ಮಾತಾಡುತ್ತಾರಾದರೂ ಅದೆಲ್ಲೂ ಕೃತಕವೆನಿಸುವುದಿಲ್ಲ. ಅವರೊಂದಿಗಿನ ಮಾತುಕತೆಯ ಪ್ರಾರಂಭದಲ್ಲಿ ನಾನು ತಬ್ಬಿಬ್ಬಾಗಿದ್ದೆ. ತೀರಾ ಕುಶಲೋಪರಿಗಳನ್ನೂ ಪಕ್ಕಾ ಕನ್ನಡದಲ್ಲಿ ವಿಚಾರಿಸಿದಾಗ ನಾವೆಷ್ಟು ಹದಗೆಟ್ಟಿದ್ದೇವೆ ಎನಿಸಿತು.ಮಾತಾಡುತ್ತಾ ಮಾತಾಡುತ್ತಾ ನನಗೂ ಕನ್ನಡ ಬಳಕೆ ಸುಲಭ ಎನಿಸಿತು. ಅದನ್ನು ಅವರಿಗೆ ಹೇಳಿದಾಗ "ಪ್ರಯತ್ನಸಿ ಅಷ್ಟೇ...ಮತ್ತೆಲ್ಲಾ ಸರಾಗ.." ಎಂದರು.
ಚಿತ್ರದ  ಬಗ್ಗೆ ವಿವರವಾಗಿ ಬರೆಯುವುದಾಗಲಿ ಅಥವಾ ವಿಮರ್ಶೆ ಮಾಡುವುದಾಗಲಿ ಈ ಲೇಖನದ ಉದ್ದೇಶವಲ್ಲ. ಹಾಗೆ ಅದೆಷ್ಟೇ ಚಿತ್ರದ ಬಗ್ಗೆ ಬರೆಯಲು ಪ್ರಯತ್ನಿಸಿದರೂ ಅದು ಪೂರ್ಣ ಎನಿಸುವುದಿಲ್ಲ. ಹಾಗಾಗಿ ಒಮ್ಮೆ ಚಿತ್ರವನ್ನ ನೋಡಿ ಎನ್ನುವುದೇ ಸೂಕ್ತ ಎನಿಸುತ್ತದೆ.ಚಿತ್ರದಲ್ಲಿ ಬರುವ ಬಹಳಷ್ಟು ಪಾತ್ರಗಳು ಅವುಗಳ ವರ್ತನೆಗಳು ನೈಜವಾಗಿವೆ ಅಷ್ಟೇ ಅಲ್ಲ ಮಜಾ ಕೊಡುತ್ತವೆ.
ಆನೇಕಲ್ ಸುಬ್ಬಾರಾಯ ಶಾಸ್ತ್ರಿಗಳ ಬಗ್ಗೆ ಅದ್ಯಯನ ನಡೆಸಿ, ಅವರ ಸಾಧನೆಯನ್ನು ಬೆಳಕಿಗೆ ತರಬೇಕೆನ್ನುವ ಉತ್ಸಾಹ, ಉದ್ದೇಶ ಪ್ರಪಾತ ಚಿತ್ರದ ನಾಯಕನದ್ದು. ಅದನ್ನು ಸಾಧಿಸುವ ಹಾದಿಯಲ್ಲಿ ಆತನಿಗೆ ಎದುರಾಗುವ ತೊಡಕುಗಳು ಅಡೆತಡೆಗಳು ಮುಂತಾದವುಗಳೇ ಚಿತ್ರದ ತಿರುಳು. ಸೂಕ್ಷ್ಮ ವಿಷಯವನ್ನೂ ಚೆನ್ನಾಗಿ, ವಿವರವಾಗಿ ತೆರೆದಿಡುವ, ಹಾಗೆ ಇತಿಮಿತಿಯ ಬಜೆಟ್ಟಿನ ನಡುವೆಯೂ ಕಾಲಘಟ್ಟವನ್ನು ಕಟ್ಟಿಕೊಡುವ ಪ್ರಸಾದರ ಪ್ರಯತ್ನ ನಿಜಕ್ಕೂ ಸ್ತುತ್ಯಾರ್ಹ.ವಸ್ತುವಿನ ವಿಚಾರದಲ್ಲೂ ನಿರೂಪಣೆಯ ವಿಚಾರದಲ್ಲೂ ಗೆದ್ದಿರುವ ಸುಚೇಂದ್ರ ಪ್ರಸಾದರ ಈ ಚಿತ್ರ ಅಷ್ಟೇನೂ ಗಮನ ಸೆಳೆಯದಿದ್ದದ್ದು, ಜೊತೆಗೆ ಚಿತ್ರವನ್ನ ನಮ್ಮ ಪ್ರಶಸ್ತಿ ಮಂಡಳಿಯವರೂ ಗುರುತಿಸದಿದ್ದದ್ದು ಇನ್ನೂ ಬೇಸರದ ಸಂಗತಿ. ಯಾವ ಯಾವದೂ ಚಿತ್ರಗಳಿಗೆ ಒಂದೊಂದು ಪ್ರಶಸ್ತಿಯನ್ನು ಹಂಚಿಬಿಡುವ ನಮ್ಮವರು 'ಪ್ರಪಾತ' ಚಿತ್ರದಲ್ಲಿ ಕೊಡತಕ್ಕ, ಪರಿಗಣಿಸತಕ್ಕ ಹಲವಾರು ವಿಷಯಗಳಿದ್ದರೂ 'ಕಣ್ಣು' ಮುಚ್ಚಿಕೊಂಡದ್ದರ ಹಿಂದಿನ ರಹಸ್ಯವನ್ನು ದೇವರೇ ಕಂಡುಹಿಡಿಯಬೇಕೇನೋ.
ಇರಲಿ. ಕನ್ನಡಿಗರೆಲ್ಲರೂ ಅವಶ್ಯವಾಗಿ ನೋಡಲೇಬೇಕಾದ ಚಿತ್ರ ಪ್ರಪಾತ ಒಮ್ಮೆ ನೋಡಿ..