Wednesday, April 18, 2012

ಕನಸಿನ ಬೆನ್ನು ಬಿದ್ದು ...ಭಾಗ-೨

ಅದ್ಯಾವ ಮಾಯೆಯಲ್ಲಿ ಅದ್ಯಾವ ಘಳಿಗೆಯಲ್ಲಿ ನಾನು ನಿರ್ದೇಶಕನಾಗಬೇಕೆ೦ದುಕೊ೦ಡೆ ಎಂಬುದು ಈವತ್ತಿಗೂ ನೆನಪಾಗುತ್ತಿಲ್ಲ. ಅದೆಂತಹ ಆಕರ್ಷಣೆ ಸಿನಿಮಾದೆಡೆಗೆ ..ಅದೆ೦ತಹ ಹುಚ್ಚು..ನೆನಪಿಸಿಕೊಂಡರೆ ಇಂದಿಗೂ ಆಶ್ಚರ್ಯವಾಗುತ್ತದೆ.ಸಿನಿಮಾ ಹುಚ್ಚಿರುವ ಹಲವಾರು ಗೆಳೆಯರನ್ನು ನಾನು ನೋಡಿದ್ದೇನೆ..ಆದರೆ ಅವರ್ಯಾರು ಸಿನೆಮಾ ಮಾಡಬೇಕೆಂದು ನಿ೦ತವರಲ್ಲ.ನನ್ನಂತೆ ಕನಸು ಕವಲೊಡೆದ ಕ್ಷಣದಿಂದ ಅದರೆಡೆಗೆ ಧೇನಿಸಿದವರೂ ಅಲ್ಲ. 

ನನ್ನ ವಯಸ್ಸಿನ ನೆನಪಿಲ್ಲ. ನನ್ನ ತ೦ಗಿಯರಿಬ್ಬರನ್ನು ಬನ್ನಿ ಆಟ ಆಡೋಣ ಎಂದು ರಜಾದಿನ ಕರೆದುಕೊಳ್ಳುತ್ತಿದ್ದೆ. ಆಟವೆಂದರೆ ಸಿನೆಮಾ ಆಟ. ನಮ್ಮ ಮನೆಯ ಕಿಟಕಿಯಿಂದ ನಾನು ಸಿನೆಮಾ ತೋರಿಸುತ್ತೇನೆ..ಅವರದನ್ನು ಕುಳಿತುನೋಡಬೇಕು..ಇಷ್ಟೇ ಆಟ..ಒ೦ದು ಫಳಫಳ ಹೊಳೆಯುವ ಸ್ಟೀಲಿನ ತಟ್ಟೆಯನ್ನು ಚೆನ್ನಾಗಿ ತೊಳೆದು ಒರೆಸಿ, ಬಿಸಲಿಗೆ ಹಿಡಿದು ಅದರ ಪ್ರತಿಫಲನವನ್ನು ಸರಿಯಾಗಿ ಕಿಟಕಿಯಿಂದ ಮನೆಯೊಳಗೇ ಹಾಯಿಸಿದರೆ ಅದೇ ಪ್ರೋಜೆಕ್ಟರ್. ಕಿಟಕಿಯಲ್ಲಿ ಒಂದಷ್ಟು ಗಿಡಮರದ ಎಲೆಗಳನ್ನು ಇಟ್ಟು ಅದರ ನೆರಳು ಗೋಡೆಯ ಮೇಲೆ ಬೀಳುವಂತೆ ಮಾಡುತ್ತಿದ್ದೆ. ಅದೇ ರೀತಿ ಕೈಗೆ ಸಿಕ್ಕಿದ ಬೊಂಬೆಗಳು ಡಬ್ಬಿಗಳು ಎಲ್ಲವನ್ನು ತೆರೆಯ ಮೇಲೆ ನೆರಳಾಗಿ ಮೂಡಿಸುತ್ತಿದ್ದೆ. ಆದರೆ ಅ ನೆರಳನ್ನೇ ಅದೆಷ್ಟು ಹೊತ್ತು ನೋಡಲು ಸಾಧ್ಯ ? ನನ್ನ ತ೦ಗಿಯರಿಬ್ಬರು ಬೋರಾಗುತ್ತದೆ ಎಂದು ಎದ್ದು ಹೋಗಿಬಿಡುತ್ತಿದ್ದರು. 
ಆನಂತರ ನನಗೆ ಜತೆಯಾದವನು ನನ್ನದೇ ತರಗತಿಯ .ಮಾದಪ್ಪ.ಅವನು ದಲಿತರ ಹುಡುಗ. ನನ್ನಂತೆಯೇ ಚಿತ್ರ ಬಿಡಿಸುತ್ತಿದ್ದ. ಅವನಿಗೂ ಸಿನೆಮಾ ಎಂದರೆ ಏನೋ ಹುಚ್ಚು. ನಾನೊಂದು ದಿನ ಸಿನಿಮಾದ ಬಗ್ಗೆ ಅದೂ ಇದೂ ಹೇಳಿ  ನಾವು ಸಿನೆಮಾ ಬಿಡೋಣ ಎಂದಾಗ ಆಯ್ತು ಎಂದು ನನ್ನೊಡನೆ ಅದರ ಬಗ್ಗೆ ಮಾತಾಡುತ್ತಿದ್ದ. ಆಗೆಲ್ಲ ಅಂಗಡಿಯಲ್ಲಿ ಸಿನಿಮಾದ ರೀಲುಗಳ ಫ್ರೇಮುಗಳನ್ನು ಕತ್ತರಿಸಿ ಮಾರುತ್ತಿದ್ದರು.ಅದನ್ನು ತಂದವನು ಇದರಲ್ಲಿ ಸಿನಿಮಾ ಬಿಡಲು ಸಾಧ್ಯವಾ? ಎಂದು ಅದೊಂದು ದಿನ ಕೇಳಿದ. ಸರಿ ಟ್ರೈ ಮಾಡೋಣ ಎಂದು ಅದರ ಪಾರದರ್ಶಕ ಚಿತ್ರಣದ ಮೂಲಕ ಬಿಸಿಲು ಹಾಯಿಸಿ ಗೋಡೆಯ ಮೇಲೆ ಅದರ ಪ್ರತಿಬಿಂಬ ಮೂಡಿಸಲು ಅದೆಷ್ಟು ಕಷ್ಟ ಪಟ್ಟರೂ ಸಾಧ್ಯವಾಗಲಿಲ್ಲ. ಆನ೦ತರ ಅವನೇ ಇನ್ನೊಂದು ಐಡಿಯ ಕೊಟ್ಟಿದ್ದ . ಬರ್ನ್ ಆದ ಬಲ್ಬೋ೦ದನ್ನು ತೆಗೆದುಕೊಂಡು ಅದರ ಹಿ೦ದುಗಡೆಯ ಭಾಗವನ್ನು ಹುಷಾರಾಗಿ ತೆಗೆದುಬಿಡುವುದು, ಆನಂತರ ಅದರ ತುಂಬಾ ನೀರುತುಂಬಿ ರಟ್ಟಿನ ಡಬ್ಬಿಯ ತಳದಲ್ಲಿ ಮರಳು ಹಾಕಿ ಬಲ್ಬನ್ನು ಒಳಗೆ ಕೂರಿಸಿ, ರಟ್ಟಿನ ಡಬ್ಬದ ಇಕ್ಕೆಲಗಳಲ್ಲಿ ಎರಡು ತೂತು ಕೊರೆಯುವುದು. ಆನಂತರ ಅದರ ಮೂಲಕ ಬಿಸಿಲಿನ ಕಿರಣ ಹಾಯಿಸಿದರೆ ಅದೊಂತರ ಪ್ರೋಜೆಕಟರ ತರಹವೇ ಕೆಲಸ ಮಾಡುತ್ತದೆ. ನಾವು ಆ ಬಲ್ಬಿನ ಹಿಂದೆ ರೀಲಿನ ಫ್ರೇಮು ಇಟ್ಟು, ಅದರ ಮೂಲಕ ಬಿಸಿಲು ಹಾಯಿಸಿದರೆ ಅದು ಗೋಡೆಯ ಮೇಲೆ ಫ್ರೇಮಿನಲ್ಲಿದ್ದ ಚಿತ್ರವನ್ನು ಯಥವಥಾಗಿ ಮೂಡಿಸುತ್ತದೆ ಎಂದು.ಅದಕ್ಕಾಗಿ ಎಲ್ಲಿ ಬಲ್ಬು ಕಂಡರೂ ಹೆಕ್ಕುವುದೇ ನಮ್ಮ ಕೆಲಸವಾಯಿತು. ಅದಕ್ಕಿಂತ ಚಿತ್ರಹಿಂಸೆಯ ಕೆಲಸವೆಂದರೆ ಅದರ ಹಿಂದುಗಡೆಯ ಹೋಲ್ಡರ್ ನ್ನು ಹುಷಾರಾಗಿ ತೆಗೆಯುವುದು. ಅದನ್ನು ತೆಗೆಯುವಾಗಲೇ ಬಲ್ಬು ಫಳ್ ಎಂದು ಹೊಡಿದುಹೋಗುತ್ತಿದ್ದವು. ಕೈಗೆಲ್ಲ ಗಾಜಿನ ಚೂರು ಚುಚ್ಚಿ ಗಾಯವಾಗುತ್ತಿತ್ತು. ಆದರೂ ನಮ್ಮ ಪ್ರಯತ್ನ ನಿಲ್ಲಿಸದೆ ಎಡಬಿಡದೆ ತಿಂಗಳುಗಟ್ಟಲೆ ಪ್ರಯತ್ನಿಸಿ ಕೊನೆಗೂ ಒಂದು ಬಲ್ಬಿನ ಪ್ರೊಜೆಕ್ಟರ್ ತಯಾರಿಸಿಯೇ ಬಿಟ್ಟಿದ್ದೆವು. ಆದರೆ ಫಲಿತಾಂಶ ಮಾತ್ರ ಆಶಾದಾಯಕವಾಗಿರಲಿಲ್ಲ. ಗೋಡೆಯ ಮೇಲೆ ಚಿತ್ರವೇನೋ ಮೂಡುತ್ತಿತ್ತು..ಆದರೆ ಅದರ ಆಕಾರವೇ ಬದಲಾಗಿ  ಬಿಡುತ್ತಿತ್ತು. ಇದಾದ ನಂತರ ಭೂತಗಾಜನ್ನು ನಾವು ಈ ಕೆಲಸಕ್ಕಾಗಿ ಬಳಸಬಹುದೆಂಬ ಐಡಿಯ ಹೊಳೆಯಿತು. ಅದು ಬಾಲ ವಿಜ್ಞಾನ ಎಂಬ ಮಕ್ಕಳ ಪತ್ರಿಕೆಯಿ೦ದಾಗಿ  ತಿಳಿದುಬಂತು. ಆದರೆ ಭೂತಗಾಜು ಹುಡುಕುವುದಾದರೂ ಎಲ್ಲಿ . ಅದಕ್ಕಾಗಿ ಜಾತ್ರೆಯವರೆಗೆ ಕಾಯಬೇಕಾಯಿತು. ವರ್ಷಕ್ಕೊಮ್ಮೆ ಬರುವ ಜಾತ್ರೆಯವರೆಗೆ ಕಾಯ್ದು ಅಲ್ಲಿ ಭೂತಗಾಜಿನ ಜೊತೆಗೆ ಬೈನಾಕುಲರಿನ೦ತ  ಸಾಧನವನ್ನು ಕೊಂಡದ್ದಾಯಿತು. ಅದರಲ್ಲಿ ಸಿನಿಮಾದ ಫ್ರೇಮಿಟ್ಟು ನೋಡಿದರೆ ದೊಡ್ಡದಾಗಿ ಕಾಣುತ್ತಿತ್ತು. ಅದನ್ನು ಹೊಡೆದುಹಾಕಿ ಆ ಭೂತಗಾಜನ್ನು ತೆಗೆದುಕೊಂಡು ಅದೇನೇನೋ ಸರ್ಕಸ್ಸು ಮಾಡಿದ್ದಾಯಿತು...ಆದರೆ ಫಲಿತಾಂಶ ಮಾತ್ರ ನಿರಾಶದಾಯಕವೇ ಆಗಿತ್ತು..
ಈಗ ಮಾದಪ್ಪ ಎಲ್ಲಿದ್ದಾನೋ ಗೊತ್ತಿಲ್ಲ.ನನ್ನ ಸಿನಿಮಾದೆಡಿಗಿನ ಹಾದಿಯಲ್ಲಿ ಅದೆಷ್ಟು ಗೆಳೆಯರು ಸಾಥ್ ಕೊಡುತ್ತೆವೆ೦ದು ಬಂದರೋ..ಅವರ್ಯಾರು ಈಗ ನನ್ನ ಸಂಪರ್ಕದಲ್ಲಿಲ್ಲ.ಅವರರವ ಬದುಕಿನ ಮಾರ್ಗ ಹಿಡಿದು ತಮ್ಮ ಬದುಕಿನ ಪುಸ್ತಕದಲ್ಲಿನ ಅರ್ಧದಷ್ಟು ಪುಟಗಳನ್ನು ಯಶಸ್ವಿಯಾಗಿ ತೃಪ್ತಿದಾಯಕವಾಗಿ ಮುಗಿಸಿಯೇ ಬಿಟ್ಟಿದ್ದಾರೆ, .ಆದರೆ ನಾನು ಮಾತ್ರ ಇನ್ನೂ ಕನಸಿನ ಚು೦ಗು ಹಿಡಿದು ಹೋಗುತ್ತಲೇ ಇದ್ದೇನೆ. ನನ್ನ ಬದುಕಿನ, ಕನಸಿನ ಪುಸ್ತಕದ ಮೊದಲಪುಟವನ್ನೂ ಯಶಸ್ವಿಯಾಗಿ ಮುಗಿಸಲಾಗದೆ..?
ಮೊನ್ನೆ ಮೊನ್ನೆ ಜೋಗಿಯವರನ್ನು ಯಾವುದೋ ಚಿಕ್ಕ ಸಂದರ್ಶನ ಮಾಡಬೇಕಾಯಿತು. ಆಗ ಅದು ಇದು ಮಾತಾಡುತ್ತಾ ಅವರು ತಾವು ಓದಿರುವ ಪುಸ್ತಕಗಳ ಬಗ್ಗೆ ಮಾತನಾಡಿದರು. ನನಗೆ ಆಶ್ಚರ್ಯವಾದದ್ದೆ ಆವಾಗ. ಅಷ್ಟೆಲ್ಲಾ ಬರೆಯುವ ಜೋಗಿ ಅದ್ಯಾವಾಗ ಓದುತ್ತಾರೋ ಎನಿಸಿತು.ಮೊನ್ನೆ ಮೊನ್ನೆ ಪತ್ತೆದಾರರ ಬಗ್ಗೆ ಬರೆದಿದ್ದರು. ತುಂಬಾ ವಿಸ್ತೃತವಾದ ಲೇಖನವದು.ಮೊನ್ನೆ ಒಂದು ಪುಸ್ತಕ ತೋರಿಸಿ ಇದನ್ನು ಓದುತ್ತಿದ್ದೇನೆ ತುಂಬಾ ಚೆನ್ನಾಗಿದೆ ಎಂದರು .ಪುಸ್ತಕದ ಹೆಸರು spandau ಎಂದು. ಜೈಲ್ ಬ್ರೇಕ್ ಕಥೆಯಿರುವ ಆತ್ಮ ಚರಿತ್ರೆ. ಜೈಲ್ ಬ್ರೇಕ್ ಎಂದಾಗಲೆಲ್ಲ ನನಗೆ ನೆನಪಿಗೆ ಬರುವುದು ಪಾಪಿಲ್ಯಾನ್. ಅದರ ಮುಂದುವರೆದ ಭಾಗವಾದ ಬಾಂಕೋ ಕೂಡ ಚೆನ್ನಾಗಿದೆ. ಪಾಪಿಲಾನ್ ಓದಿದವರಿಗೆ ಅದೇ ಕಾದಂಬರಿ ಆಧಾರಿತ ಚಿತ್ರವಾದ ಪಾಪಿಲಾನ್ ಇಷ್ಟವಾಗುವುದಿಲ್ಲ. ಯಾಕೆಂದರೆ ಕಾದಂಬರಿಯಲ್ಲಿನ ವಿವರಗಳ ಪ್ರತಿಶತ 25 ರಷ್ಟು ಸಿನೆಮಾದಲ್ಲಿಲ್ಲ.ಹಾಗಾಗಿ ಅಷ್ಟೊಂದು ವಿಸ್ತೃತವಾದ ಕಥನವನ್ನು ಮೊಟಕುಗೊಳಿಸಿದರೇನೋ ಎನ್ನಿಸುವುದು ಸಹಜ. ಹಾಗಂತ ಇಡೀ ಕಾದಂಬರಿಯನ್ನು ಸಿನೆಮಾ ಮಾಡಿದರೆ ಕನಿಷ್ಠ ಎಂಟು-ಹತ್ತು  ಗಂಟೆ ಬೇಕಾಗಬಹುದೇನೋ.ಹಾಗೆ ಮೊನ್ನೆ ಮೊನ್ನೆ way back ಎನ್ನುವ ಸಿನೆಮಾ ಬಂತು. ಅದು ಲಾಂಗ್ ವಾಕ್ ಕಾದ೦ಬರಿಯನ್ನಾಧರಿಸಿದ್ದು. ಅದನ್ನು ಕನ್ನಡದಲ್ಲಿ ತೇಜಸ್ವಿಯವರು ಮಹಾ ಪಲಾಯನ ಎಂಬ ಹೆಸರಿನಲ್ಲಿ ಅನುವಾಧಿಸಿದ್ದರು.ತುಂಬಾ ರೋಚಕ ಕಾದಂಬರಿ ಅದು.
 ಸಿನಿಮಾದ ವಿಷಯಕ್ಕೆ ಬಂದರೆ ಏನೇ ಆದರೂ ನಾವು ಹಾಲಿವುಡ್ಡಿನವರ೦ತೆ ತೀರ ವಸ್ತುನಿಷ್ಟವಾಗಿ ಚಿತ್ರೀಕರಿಸಲು ಕಷ್ಟವೆನಿಸುತ್ತದೆ.ಅದಕ್ಕೆ  ಬಜೆಟು ಕೂಡ ಕಾರಣವಿರಬಹುದು.ಒಂದು ಕಥಾನಕವನ್ನು ,ಜೀವನಚರಿತ್ರೆಯನ್ನು ಅದೆಷ್ಟು ನಿಜವಾಗಿ ಚಿತ್ರೀಕರಿಸುತಾರೆ..?ಮೊನ್ನೆ ಇನ್ನೊಂದು ಸಿನೆಮಾ ನೋಡಿದೆ. ಸದ್ದಾಂ ಹುಸೇನ್ ಮಗನಾದ ಉದಯ್ ಸದಾಂ ಹುಸೇನ್ ಬಗೆಗಿನ ಚಿತ್ರ ಅದು.ಇಡೀ ಸಿನೆಮಾ ನೋಡಿದರೆ ಬರೆ ಸದ್ದಾಮ್ ಹುಸೇನ್ ಮಗ ಮಾತ್ರ ಗೊತ್ತಾಗುವುದಿಲ್ಲ. ಜೊತೆಗೆ ಅಲ್ಲಿನ ರಾಜಕೀಯ ಸ್ಥಿತಿಗತಿ ಮನುಷ್ಯರ ಕ್ರೌರ್ಯ , ಅಮಾನವೀಯತೆ ಮುಖವೂ ಪರಿಚಯವಾಗುತ್ತದೆ. ದೊಮಿನಿಕ್ ಕೂಪರ್ ಎಂಬ ಅದ್ಭುತ ನಟ ಸದ್ದಾಮ್ ಹುಸೇನ್ ಮಗನ ಪಾತ್ರ ಮಾಡಿದ್ದಾನೆ.
ಸಿನಿಮಾ ಒ೦ದು ದೊಡ್ಡ ಮನರಂಜನಾ ಮಾಧ್ಯಮವಾದರೂ ಇಂಥ ಪ್ರಯತ್ನಗಳಿಂದಾಗಿ ಮುಂದಿನ ಪೀಳಿಗೆಗೆ ಸಿನಿಮಾಗಳೇ ಸಂಸ್ಕೃತಿ, ಘಟನೆ, ಇತಿಹಾಸವನ್ನು ತೆರೆದಿಡುವ ಶಾಸನಗಳಾಗಿ ಉಳಿದುಕೊಳ್ಳುತ್ತವೆ. ನಮ್ಮಲ್ಲೂ ಈ ರೀತಿಯ ಐತಿಹಾಸಿಕ, ಸತ್ಯ ಘಟನೆಗಲಾಧಾರಿತ ವಸ್ತುನಿಷ್ಠ ಸಿನಿಮಾಗಳು ಬಂದರೆ ಅವು ಮುಂದಿನ ಪೀಳಿಗೆಗೆ ಬರೀ ಸಿನಿಮಾವಷ್ಟೇ ಆಗದೆ ಅದ್ಭುತ documentಗಳಾಗುತ್ತವೆ ಅಲ್ಲವೇ?

Tuesday, April 17, 2012

ಮಾರ್ಚ್ 23 ಆದದ್ದು..
ಹುತಾತ್ಮ  ಭಗತ್ ಸಿಂಗ್ ರನ್ನು ಮಾರ್ಚ್ 23ರಂದು ಬ್ರಿಟಿಷರು ಗಲ್ಲಿಗೇರಿಸಿದರು.ಸ್ವಾತಂತ್ರ್ಯ ದ ಹೋರಾಟದಲ್ಲಿ ಹುತಾತ್ಮರಾದ ಭಗತ ಸಿ೦ಗ್ ಇಂದಿಗೂ ಅಜರಾಮರ.ಅವರು ಸತ್ತಾಗ ಅವರಿಗೆ ಕೇವಲ 23 ವರ್ಷಗಳ ಆಸುಪಾಸು.ಅವರ ಸತ್ತ ದಿನದ ನೆನಪನ್ನು ನಮ್ಮ ಸಿನೆಮಾದ ಶೀರ್ಷಿಕೆ ಮಾಡಿದ ಕಾರಣವೆಂದರೆ ನಮ್ಮ ಸಿನೆಮಾದ ಕಥೆಯೂ ಭ್ರಷ್ಟಾಚಾರದ ವಿರುದ್ಧ ಹೋರಾಡುವುದೇ ಆಗಿರುವುದು.
ಚಿತ್ರದ ನಾಯಕ ರಾಘವ. ದೊಡ್ಡ ಶ್ರೀಮಂತರ ಏಕೈಕ ಪುತ್ರ. ಬೇಕಾದಷ್ಟು ಆಸ್ತಿ ಇದೆ.ನೋಡಲು ಸುಂದರ. ಅವನಿಗೊಬ್ಬಳು ಚಂದನೆಯ ಗೆಳತಿಯಿದ್ದಾಳೆ..ಇಲ್ಲಿ ಅವರ ಪ್ರೀತಿಗೆ ಯಾವ ರೀತಿಯ ಅಡೆತಡೆಯೂ ಇಲ್ಲ.ಒಂದು ಸುಖಾಂತವಾಗಬೇಕಿದ್ದ ಬದುಕಿನಲ್ಲಿ ಇದ್ದಕ್ಕಿದ್ದಂತೆ ಬಿರುಗಾಳಿ ಬೀಸಿದಾಗ ನಾಯಕ ಮೊದಮೊದಲಿಗೆ ಮಾನಸಿಕವಾಗಿ ಕುಸಿದುಹೋಗುತ್ತಾನೆ.ತನ್ನ ಜೀವನದಲ್ಲಿ ಸಾವಿನ ಹೊರತಾಗಿ ಬೇರೇನಿಲ್ಲ ಎಂದುಕೊಳ್ಳುತ್ತಾನೆ.. ಆದರೆ ಆ ಒ೦ದು ಪರಿಸ್ಥಿತಿ ಅವನ ಜೀವನದ ದಿಕ್ಕನ್ನೇ ಬದಲಿಸುವುದಲ್ಲದೆ ಅವನು ಇಡೀ ಸಮಾಜಕ್ಕೆ ಪಾಠ ಕಲಿಸಲು ಹೋಗಿಬಿಡುತ್ತಾನೆ.
ಮತ್ತು ಅವನದೇ ರೀತಿಯ ವಿಶಿಷ್ಠ ಶೈಲಿಯಲ್ಲಿ ಪ್ರತಿಯೊಬ್ಬರೂ ಅವರ ತಪ್ಪುಗಳನ್ನೂ ಅವರೆ ಒಪ್ಪಿಕೊಳ್ಳುವಂತೆ ಮಾಡುತ್ತಾನೆ.ಇದು ಒಂದು ನಮ್ಮ ಸಿನೆಮಾದ ಒ೦ದು ಎಳೆ ಎನ್ನಬಹುದು.
ಮೊನ್ನೆ  ರವಿ ಬೆಳೆಗೆರೆಯವರ ಹಿಮಾಗ್ನಿ ಓದುತ್ತಿದ್ದಾಗ ಅಚಾನಕ್ಕಾಗಿ ಅಲ್ಲಿ ಉಗಾಂಡ ದೇಶದ ರಾಜಕೀಯ ಅಸ್ಥಿರತೆಯ ಬಗ್ಗೆ ವಿವರಣೆ ಬಂತು. ಯಾಕೋ ಯಾವತ್ತು ತೆಗೆದಿಟ್ಟಿದ್ದ ನಾಯಕ ಜೆರಾರ್ಡ್ ಬಟ್ಲರ್   ಅಭಿನಯದ ಮಷಿನ್ ಗನ  ಪ್ರೀಚೆರ್ ಚಿತ್ರ ನೆನಪಾಗಿ ಆ ತಕ್ಷಣ ಪುಸ್ತಕ ಬದಿಗಿಟ್ಟು ಸಿನಿಮಾ ನೋಡಲು ತೊಡಗಿದೆ. ಸ್ಯಾಮ್ ಚೈಲ್ದೆರ್ ಎಂಬುವವನ ಜೀವನ ವೃತ್ತಾಂತ ವದು. ನೋಡುತ್ತಾ ನೋಡುತ್ತಾ  ಕಣ್ಣು ತುಂಬಿಬಂದಿತು. ಸಿನೆಮಾ ನೋಡಿದ ಮೇಲೂ ಸುಮಾರು ಹೊತ್ತು ಹಾಗೆ ಕುಳಿತ್ತಿದ್ದೆ.ಜಗತ್ತಿನ ಬೇರೆಬೇರೆ ಭಾಗದಲ್ಲಿ ಇಂದಿಗೂ ನಡೆಯುತ್ತಿರುವ ಅಮಾನವೀಯ ಶೋಷಣೆ ದಬ್ಬಾಳಿಕೆ ಕಂಡು ಬದುಕಿನ ಬಗೆಗೆ ಮನುಷ್ಯನ ಸ್ವಾರ್ಥದ ಬಗೆಗೆ ಹೇವರಿಕೆಯಾಯಿತು. ಮೂರೊತ್ತು ತಿಂದುಂಡು ಐವತ್ತು ಅರವತ್ತು ವರುಷ ಬದುಕಲು ಇಷ್ಟೆಲ್ಲಾ ಮಾಡಬೇಕಾ ಎನಿಸಿತು. 
ಸಿನಿಮಾದ ಮೊದಲ ದೃಶ್ಯದಲ್ಲಿ ಒಂದು ಹಳ್ಳಿಗೆ ನುಗ್ಗುವ ಬಂಡುಕೋರರು ಎಲ್ಲರಿಗೂ ಹೊಡೆದು ಒ೦ದು ಹುಡುಗನ ಕೈಗೆ ಆಯುಧವೊ೦ದನ್ನು ಕೊಟ್ಟು ನೀನೀಗ ನಿನ್ನಮ್ಮನನ್ನು ಕೊಲ್ಲದಿದ್ದರೆ ನಿನ್ನನ್ನು ನಿನ್ನ  ತಮ್ಮನನ್ನು ನಾವು ಕೊಳ್ಳುತ್ತೇವೆ ಎಂದಾಗ  ಆ ಅಸಹಾಯಕ ತಾಯಿ ತನ್ನನ್ನೇ ಕೊಲ್ಲುವಂತೆ ಮಗನಿಗೆ ಕಣ್ಣಲ್ಲೇ ಸನ್ನೆ ಮಾಡುವ ದೃಶ್ಯ ಹೃದಯ ಕಲಕಿಬಿಟ್ಟಿತು.
ಎಲ್ಲಾದರೂ ಸಿಕ್ಕರೆ ನೀವು ಒಮ್ಮೆ ನೋಡಿ ..

ಕನಸಿನ ಬೆನ್ನು ಬಿದ್ದು..


ನಾನಾಗ್ಗ ದ್ವಿತೀಯ ಪಿ.ಯು.ಸಿ.ಯಲ್ಲಿದ್ದೆ. ಅದೊಮ್ಮೆ ನಮ್ಮ ಮಾವನ ಮನೆಗೆ ಹೋಗಿದ್ದು ಬಸ್ಸಿನಲ್ಲಿ ಬರುತ್ತಿರುವಾಗ ನಾನು ಸಿನಿಮಾ ನಿರ್ದೇಶಕನಾದರೆ ಹೇಗೆ ಎಂಬ ಆಲೋಚನೆ ಬಂದಿತ್ತು. ಯಾವ ಯಾವ ಸಿನಿಮಾ ಮಾಡಬೇಕು ಹೇಗೆಲ್ಲ ಸಿನಿಮಾ ಇರಬೇಕು ಎಂದೆಲ್ಲ ಯೋಚಿಸುತ್ತ ಯೋಚಿಸುತ್ತ ಬಂದೆ. ನಮ್ಮೂರು ತಲುಪುವಷ್ಟರಲ್ಲಿ ನನ್ನ ನಿರ್ಧಾರ ಅಚಲ ವಾಗಿತ್ತು. 'ಎಸ್ ನಾನು ನಿರ್ದೇಶಕ ಆಗಲೇಬೇಕು..' ನಾನು ನಿರ್ಧರಿಸಿ ಬಿಟ್ಟಿದ್ದೆ. ಆದರೆ ಅದನ್ನು ಯಾರೊಂದಿಗಾದರೂ ಹೇಳುವಂತಿರಲಿಲ್ಲ. ನಂಜನಗೂಡಿನಿಂದ ೯ ಕಿ.ಮೀ/ ದೂರದ ಊರು ನಮ್ಮದು.ಅಲ್ಲಿಂದ ಬೆಂಗಳೂರಿಗೆ ಸರಿ ಸುಮಾರು 180 ಕಿ.ಮೀ.ಗಳ ದೂರದ ಊರು. ಅಲ್ಲಿಂದ ಮೈಸೂರಿಗೆ ಬಂದು ಆನಂತರ ಬೆಂಗಳೂರಿಗೆ ಬಂದು ಬಂಧು ಬಳಗ ಇಲ್ಲದ ಊರಿನಲ್ಲಿ ಸಿನಿಮಾ ಮಾಡುತ್ತೇನೆ ಎಂದರೆ ಯಾರಾದರೂ ನಗುತ್ತಿದ್ದರು..ಹಾಗಂತ ಕನಸನ್ನು ಬಿಟ್ಟು ಬಿಡಲು ಸಾಧ್ಯವೇ..? ಪಿ.ಯು.ಸಿ.ಯಿಂದ ನನ್ನ ಮಾಸ್ತರ್ ಡಿಗ್ರೀವರೆಗೂ ಬರೆ ಕಾಟಾಚಾರಕ್ಕೆ ಓದಿದನೆ ಹೊರೆತು ಕನಸು ಮನಸಿನಲ್ಲೆಲ್ಲ ಸಿನಿಮಾವೇ ತುಂಬಿತ್ತು.
ಆನಂತರ ಬೆಂಗಳೂರಿಗೆ ಬಂದದ್ದು..ಸಿನೆಮಾ ಮಾಡಲು ಓಡಾಡಿದ್ದು ಈವತ್ತು ಮಾರ್ಚ್ ೨೩ ಮಾಡಿದ್ದೆಲ್ಲದರ ಹಿಂದಿನ ಪಯಣವಿದೆಯಲ್ಲ ಅದು ಯಾತನಮಾಯ, ರೋಮಾ೦ಚಕ, ಹಿಂಸಾತ್ಮಕ.