Friday, October 9, 2015

ಮಹಾಭಾರತ ನಡೆದದ್ದು ನಿಜವೇ? ಭಾಗ-1

ಕಿ.ಪೂ. ಅಕ್ಟೋಬರ್ 16, 5561.
ಅನಾಮತ್ತು ಎರಡು ವರ್ಷಗಳ ನನ್ನ ರಜೆ ಮುಗಿದಿದೆ. ಚಿತ್ರರಂಗದಿಂದ ಸ್ವಲ್ಪ ಬೇರೆಕಡೆ ಜೀವನೋಪಾಯಕ್ಕಾಗಿ ಹೊರಳಿಕೊಂಡಿದ್ದ ನಾನು ಮತ್ತೆ ಚಿತ್ರರಂಗಕ್ಕೆ ಧಾವಿಸಿದ್ದೇನೆ. ಈ ಸಾರಿ ಮೊದಲಿನ ತಪ್ಪುಗಳ ಬಗೆಗಿನ ಅರಿವಿದೆ. ಮೂರ್ಖತನದ ಸ್ಪಷ್ಟ ಚಿತ್ರಣವಿದೆ. ಸಾಧ್ಯವಾದಷ್ಟು ಕಡಿಮೆ ತಪ್ಪುಗಳನ್ನು ಮಾಡುತ್ತಾ ಈ ಸಾರಿ
ಸಿನಿಮಾ ಮಾಡಬೇಕೆಂದು ನಿರ್ಧರಿಸಿದ್ದೇನೆ.
ಅದಕ್ಕೆ ಸಂಬಂಧಿಸಿದಂತೆ ನಾನು ಆಯ್ದುಕೊಂಡ ಕತೆಗೆ ಸ್ವಲ್ಪ ಮಹಾಭಾರತ ಹೋಲುತ್ತದೆ. ಪ್ರತಿ ಕತೆಯಲ್ಲಿಯೂ ಮಹಾಭಾರತದ ತುಣುಕು ಒಂದು ನನಗಂತೂ ಕಾಣಸಿಗುತ್ತದೆ. ಆದರೆ ನನ್ನದೇ ಚಿತ್ರದಲ್ಲಿ ಅದರ ಅಂಶ ಸ್ವಲ್ಪ ಜಾಸ್ತಿಯೇ ಇದೆ ಎನ್ನಬಹುದು. ಇದೊಂದು ಪ್ರೇಮಕತೆ, ದುಷ್ಟ ಸಂಹಾರದ ಕತೆ, ಧರ್ಮ ಯುದ್ಧದ ಕತೆ ಹೀಗೆ ನೀವು ಏನು ಬೇಕಾದರೂ ಹೇಳಬಹುದು. ನಾನು ಯಾವುದೇ ಶೈಲಿಯ ಕತೆ ಮಾಡಿದರೂ ಒಮ್ಮೆ ಕತೆ ಮಾಡಿದ ಮೇಲೆ ಅಥವಾ ಅದಕ್ಕೂ ಮುನ್ನ ಆ ಸಂಬಂಧಿ ಒಂದಷ್ಟು ಚರ್ಚೆ ಅಧ್ಯಯನ ಮಾಡುತ್ತೇನೆ. ಇನ್ನು ಮಹಾಭಾರತ ಎಂದಾಗ ಅದರ ಬಗ್ಗೆ ಅಧ್ಯಯನ ಮಾಡಲು ನನಗಂತೂ ಈ ಜನ್ಮ ಸಾಲುವುದಿಲ್ಲ ಎನಿಸಿಬಿಡುತ್ತದೆ.
ಮೊದಲೆಲ್ಲಾ ಮಹಾಭಾರತ ಎಂದರೆ ಅದೊಂದು ರೋಚಕ ಕಥಾನಕದ ಸಂಕಲನ ಎನಿಸುತ್ತಿತ್ತು. ಅದರಲ್ಲಿರುವ ಮಸಾಲೆ ಅಂಶಕ್ಕೆ ಲೆಕ್ಕವೆಲ್ಲಿದೆ? ಒಬ್ಬಳು ಐವರನ್ನು ಪತಿ ಎಂದು ಒಪ್ಪಿಕೊಳ್ಳುತ್ತಾಳೆ, ನಟ್ಟ ನಡುವಣ ಸಭೆಯಲ್ಲಿ ಹೆಂಗಸಿನ ಸೀರೆ ಸೆಳೆಯಲಾಗುತ್ತದೆ, ಅಣ್ಣ ತಮ್ಮಂದಿರು ಜೂಜಾಡಿ ಸೋಲುತ್ತಾರೆ,  ಅರಗಿನ ಮನೆಗೆ ಬೆಂಕಿ ಬೀಳುತ್ತದೆ.. ಒಂದೇ ಎರಡೇ ತಂತ್ರ, ಕುತಂತ್ರ, ಮಂತ್ರ, ರೋಚಕತೆ, ಪ್ರೀತಿ ,ಪ್ರಣಯ, ಸಾಹಸ, ಅನ್ಯಾಯ, ನ್ಯಾಯ, ಧರ್ಮ, ಅಧರ್ಮ.. ಹಿಂಸೆ, ಅಹಿಂಸೆ, .. ಸದಾಚಾರ, ಅನಾಚಾರ, ಅತ್ಯಾಚಾರ.. ಅಬ್ಬಬ್ಬಾ ಏನೇನಿದೆ ಅದರಲ್ಲಿ. ಮೊದಲೆಲ್ಲಾ ನಮ್ಮಪ್ಪ ನಮ್ಮನ್ನು ಕೂರಿಸಿಕೊಂಡು ದಿನಾ ರಾತ್ರಿ ಊಟದ ನಂತರ ವಿದ್ಯುತ ಇಲ್ಲದಾದಾಗ ಮಹಾಭಾರತದ ಒಂದೊಂದೇ ಅಧ್ಯಾಯವನ್ನು ಹೇಳುತ್ತಿದ್ದಾಗ ಮೈಯೆಲ್ಲಾ ರೋಮಾಂಚನ ಉಂಟಾಗುತ್ತಿತ್ತು. ಆನಂತರ ನಾನೇ ಒಂದಷ್ಟು ಓದತೊಡಗಿದೆ. ಹೊಸ ಹಳೆಯ ವಿಮರ್ಶಾತ್ಮಕ, ವಿಡಂಬನಾತ್ಮಕ, ವಿಶ್ಲೇಷಣಾತ್ಮಕ ಬರಹ ಕಾದಂಬರಿ ಪುಸ್ತಕಗಳನ್ನು ಆಗಾಗ ಸಿಕ್ಕ ಸಿಕ್ಕಲ್ಲಿ ಓದುತ್ತಿದ್ದೆ. ಹಿರಿಯರು ಸಿಕ್ಕರೆ ಕೇಳುತ್ತಿದ್ದೆ.
ನನಗೆ ಆವಾಗಲೆಲ್ಲಾ ಏಳುತ್ತಿದ್ದ ಪ್ರಶ್ನೆ ಒಂದೇ..
ಮಹಾಭಾರತ ನಿಜವಾಗಿಯೂ ನಡೆದ ಕತೆಯೇ? ಅಥವಾ ಕಪೋಲ ಕಲ್ಪಿತವೆ?
ಕತೆಯ ಹೂರಣ ನೋಡಿದರೆ ಅದು ಕಲ್ಪನೆ ಎನ್ನಲೂಬಹುದು, ಹಾಗೆಯೇ ವಾಸ್ತವ ಎನ್ನಲೂ ಬಹುದು. ಹಾಗಾದರೆ ಬಕಾಸುರ ಇದ್ದಾನೆ? ಕೃಷ್ಣನ ಚಕ್ರ ತಿರುಗುತ್ತಿತ್ತೆ..? ಹೀಗೆ ಸುಮ್ಮನ್ನೇ ನನ್ನನ್ನೇ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದೆ. ಆದರೆ ಅದರ ಬಗ್ಗೆ ಹೆಚ್ಚು ಅಧ್ಯಯನ ಮಾಡಲು ಹೋಗಿರಲಿಲ್ಲ. 
ಮೊನ್ನೆ ಮೊನ್ನೆ ನಮ್ಮ ಸಿನಿಮಾಕ್ಕಾಗಿ ಮಹಾಭಾರತದ ಕುರಿತಾದ ಒಂದಷ್ಟು ಅಧ್ಯಯನ ಕೈಗೊಂಡೆ. ಕೆಲವು ಅಚ್ಚರಿಗಳು ನನಗೆ ಎದುರಾದವು.ಹಾಗಂತ ನಾನೇನೋ ಸಂಶೋಧನೆ ಮಾಡಲಿಲ್ಲ, ಯಾರ್ಯಾರೋ ಬರೆದಿದ್ದ ಪುಸ್ತಕಗಳನ್ನು ಓದುತ್ತಾ ಓದುತ್ತಾ ಟಿಪ್ಪಣಿ ಹಾಕಿಕೊಂಡೆ ನೋಡಿ.
ಮಹಾಭಾರತ ನಡೆದದ್ದು ನಿಜವೇ ಎನಿಸುವ ಅಂಶ ಒಂದು ಪುಸ್ತಕದಲ್ಲಿ ದೊರಕಿತು.
ಕಿ.ಪೂ. ಅಕ್ಟೋಬರ್ 16, 5561 ರಂದು ಮಹಾಭಾರತದ ಕುರುಕ್ಷೇತ್ರ ಯುದ್ಧ ನಡೆದಿದೆ. ಅಂದರೆ ಸರಿ ಸುಮಾರು ಮಹಾಭಾರತ ಯುದ್ಧ ಜರುಗಿ ಈವತ್ತಿಗೆ 7575 ವರ್ಷಗಳಾಗಿವೆ. 
ಅಷ್ಟು ಕರಾರುವಕ್ಕಾಗಿ ಅದೇಗೆ ಅದ್ಯಾವ ಆಧಾರದ ಮೇಲೆ ಹೇಳಲು ಸಾಧ್ಯ ಎನ್ನುವುದು ಮೊದಲ ಪ್ರಶ್ನೆ. ಪುರಾಣ ಪುಸ್ತಕ ಅಥವಾ ಏನೋ.. ಅವುಗಳ ಪ್ರಕಾರ ನಮ್ಮದು ಕಲಿಯುಗದ ಮೊದಲ ಪಾದ. ಮಹಾಭಾರತ ಜರುಗಿದ್ದು ದ್ವಾಪರಯುಗದಲ್ಲಿ. ಅಂದರೆ ಕಲಿಯುಗ ಶುರುವಾದದ್ದು ಯಾವಾಗ ಎನ್ನುವುದು ಪ್ರಶ್ನೆ. ನಮ್ಮ ಪುರಾಣ ಪುಸ್ತಕಗಳ ಪ್ರಕಾರ ನಾಲ್ಕು ಲಕ್ಷ ಮೂವತ್ತೆರೆಡು ವರ್ಷಗಳಿರುವ ಕಲಿಯುಗದಲ್ಲಿ ಈಗ ಜರುಗಿರುವುದು ಕೇವಲ ಐದು ವರ್ಷಗಳು ಅಂದುಕೊಳ್ಳೋಣ. ಅಂದರೆ ಊಹಿಸಿ.. 
ಇರಲಿ.
ಮೊದಲಿಗೆ ಈ ಮಹಾಭಾರತ ಯುದ್ಧದ ದಿನಾಂಕವನ್ನು ಪತ್ತೆ ಮಾಡಿದ್ದು ಯಾವುದರ ಆಧಾರದ ಮೇಲೆ ಎಂಬುದು ಪ್ರಶ್ನೆ. ಈ ವೈಜ್ಞಾನಿಕ ಮಾರ್ಗದ ಮೂಲಕ ಕರಾರುವಕ್ಕಾದ ಮಹಾಭಾರತ ಯುದ್ಧದ ದಿನಾಂಕವನ್ನು ಸಂಶೋಧಕರು ಮೇಧಾವಿಗಳು ಪಡೆಯಲು ಹಲವಾರು ಮಾರ್ಗದ ಮೊರೆ ಹೋಗಿದ್ದಾರೆ. ಜ್ಯೋತಿಷ್ಯ ಶಾಸ್ತ್ರ, ಜೀನಿಯಾಲಜಿ, ಆ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡಿದ ವಿದೇಶಿ ಯಾತ್ರಿಕರ ಬರಹಗಳು, ಖಗೋಳ ವಿಜ್ಞಾನ, ಶಾಸನಗಳು, ಭಾಷಾಶಾಸ್ತ್ರ, ಪುರಾತತ್ವ ಶಾಸ್ತ್ರ, ಪುರಾಣ ಕತೆಗಳು, ವೇದಗಳು ಹೀಗೆ ಹತ್ತು ಹಲವು ವಿಷಯಗಳನ್ನು ಅಧ್ಯಯನ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ವ್ಯಾಸ ರಚಿಸಿದ ಮಹಾಭಾರತ ಮುಖ್ಯವಾದದ್ದು .
ಇರಲಿ ಓದುತ್ತಾ ಓದುತ್ತಾ ನಾನೂ ಲೆಕ್ಕ ಹಾಕಲು ಕುಳಿತುಕೊಂಡೆ. ಹಾಗೆಯೇ ಗೊತ್ತಿರದ ವಿಷಯಗಳನ್ನು ಗೂಗಲ್ ಮಾಡುತ್ತಾ ಸಾಗಿದೆ. ಯಾಕೋ ಒಂದು ಜನ್ಮಕ್ಕೆ ಮುಗಿಯದ ಕೆಲಸವಲ್ಲ ಎನಿಸಿತು. ಎನಿವೇ ನಾನು ಓದಿದ್ದನ್ನು ನನಗನಿಸಿದ್ದನ್ನು ಬರೆದಿಡೋಣ ಎನಿಸಿ ಬರೆದದ್ದು ಇದು.
ದಿ ಸೈಂಟಿಫಿಕ್ ಡೇಟಿಂಗ್ ಆಫ್ ಮಹಾಭಾರತ ವಾರ್ ಎನ್ನುವ ಪುಸ್ತಕವದು. ಒಮ್ಮೆ ಸಿಕ್ಕರೆ ನೀವು ಓದಿ.
ಈಗ ಸಿನಿಮಾದ ಬರವಣಿಗೆ ಕೆಲಸ ಮುಕ್ಕಾಲು ಪಾಲು ಮುಗಿದಿದೆ. ಇನ್ನೇನಿದ್ದರೂ ಚಿತ್ರೀಕರಣಕ್ಕೆ ಬೇಕಾದ ಜಾಗಗಳ ಹುಡುಕಾಟ, ಕಲಾವಿದರ ಹುಡುಕಾಟ. ಈ ಸಿನಿಮಾದಂತೆಯೇ ಈ ಪುಸ್ತಕವೂ ನನ್ನನ್ನು ಕಾಡುತ್ತಿರುವುದು ವಿಪರ್ಯಾಸ.
[ಮುಂದುವರೆಯುತ್ತದೆ]

Thursday, October 8, 2015

ಮೋನಿಕಾ ಮಿಸ್ಸಿಂಗ್ ಗೆ ಜಾಗವಿದೆ..?

ಇದು ಈವತ್ತಿನ ವಿಷಯವಲ್ಲ... ವರ್ಷಗಟ್ಟಲೆ ಹಳೆಯದು. ಜಾಗತಿಕ ಚಿತ್ರಗಳನ್ನು ಅದ್ಯಯನ ಮಾಡಿ ಅವುಗಳಲ್ಲಿನ ನೋಡಲೇಬೇಕಾದ ಚಿತ್ರಗಳನ್ನು ಪಟ್ಟಿ ಮಾಡಿ ಪುಸ್ತಕವೊಂದನ್ನು ರಚಿಸಿದ್ದೆ. ಅದನ್ನು ಪ್ರಕಟಿಸುವ ಉದ್ದೇಶ ಆವಾಗ ಇರಲಿಲ್ಲವಾದರೂ ಒಂದು ಸಿನಿಮಾ ನಿಂತು ಹೋಗಿ ಹಣಕಾಸಿನ ತೊಂದರೆಯಿಂದಾಗಿ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಸಮಯವದು. ಕೆಲಸ ಮುಗಿದ ನಂತರ ಸಿನಿಮಾ ನೋಡುವುದು ಮತ್ತದರ ಬಗ್ಗೆ ನನ್ನದೇ ಗೆಳೆಯರ ಜೊತೆಗೆ ಚರ್ಚಿಸುವುದು ಇದಿಷ್ಟೇ ಕೆಲಸವಿತ್ತು ಆವಾಗ. ಸಿನಿಮಾ ಗೆಳೆಯರನ್ನು ಮೀಟ್ ಮಾಡುತ್ತಿರಲಿಲ್ಲ. ಮತ್ತೆಲ್ಲಿ ಸಿನಿಮಾದ ಕಡೆಗೆ ಮನಸ್ಸು ಹೊರಳಿಬಿಡುತ್ತದೋ ಎರಡು ವರ್ಷ ಸಿನಿಮಾ ಜಗತ್ತು ಬೇಡ ಎಂದು ಕರಾರುವಕ್ಕಾಗಿ ನಿರ್ಧರಿಸಿದ್ದ ದಿನಗಳಾಗಿತ್ತು ಅವು. ಆ ಸಂದರ್ಭದಲ್ಲಿ ಗೆಳೆಯ ಕೃಷ್ಣನ ಜೊತೆಗೆ ಮಾತನಾಡುತ್ತಿದ್ದಾಗ ಆತ ಆಗಲೇ ಒಂದು ಪುಸ್ತಕವನ್ನು ಪ್ರಕಟಿಸಿದ್ದ. ಸರಿ ನಿನ್ನ ಪುಸ್ತಕ ನಾನೇ ಪ್ರಕಟಿಸುತ್ತೇನೆ ಕೊಡು ಎಂದ. ಸಧ್ಯಕ್ಕೆ ಬೇಡ ಬಿಡು ಮಾರಾಯ ಎಂದೇ. ಹಾಗಾದರೆ ಒಂದು ಕೆಲಸ ಮಾಡು, ಕನ್ನಡದಲ್ಲಿ ನೋಡಲೇಬೇಕಾದ  ನೂರೊಂದು ಕನ್ನಡ ಚಿತ್ರಗಳು ಎನ್ನುವ ಪುಸ್ತಕ ಇಲ್ಲ, ಪರಭಾಷೆಯ ಅದರಲ್ಲೋಒ ಜಾಗತಿಕ ಮಟ್ಟದಲ್ಲಿ ಆಯಾ ಭಾಷೆಯಲ್ಲಿ ಸುಮಾರಷ್ಟು ಪುಸ್ತಕಗಳಿವೆ, ಕನ್ನಡದಲ್ಲಿ ಆ ಪ್ರಯತ್ನ ಯಾರೂ ಮಾಡಿಲ್ಲ, ಹೇಗೋ ಸಿನೆಮಾದಿಂದ ಸ್ವಲ್ಪ ದೂರ ಇದ್ದೀಯ, ಯಾಕೆ ಆ ಪುಸ್ತಕ ಬರೆಯಬಾರದು ಎಂದ. ನಾನು ಹೂಂ ಎಂದೆ.
ಅಷ್ಟೇ. ಆ ಪುಸ್ತಕ ನನಗೆ ಸರಿ ಸುಮಾರು ಒಂಭತ್ತು ತಿಂಗಳುಗಳ ಸಮಯವನ್ನು ಎಡೆಬಿಡದೆ ತೆಗೆದುಕೊಂಡು ಬಿಟ್ಟಿತ್ತು. ಸಿನಿಮಾ ನೋಡುವ ಚರ್ಚಿಸುವ ಮತ್ತದರ ತುಲನೆ ಮಾಡುವ ನಮ್ಮದೇ ಮಾನದಂಡಗಳಲ್ಲಿ ಅದನ್ನು ವಿಂಗಡಿಸುವ ಹೀಗೆ ಅದರ ಕೆಲಸಗಳನ್ನು ನನ್ನ ನಿದ್ರೆ ಕಸಿದಿದ್ದವು. ಎಲ್ಲಾ ಮುಗಿಸಿ ಪುಸ್ತಕ ಬರೆದು ಮುಗಿಸಿದಾಗ ದೊಡ್ಡ ನಿಟ್ಟುಸಿರು ಬಿಟ್ಟಿದ್ದಾಗಿತ್ತು.
ಆಮೇಲೆ ಅದನ್ನು ಪ್ರಕಟಿಸಲಾಯಿತು. ಓದಿದವರು ಚೆನ್ನಾಗಿದೆ ಎಂದರು. ಒಂದಷ್ಟು ಪತ್ರಿಕೆಗಳಲ್ಲೂ ಅದರ ಬಗ್ಗೆ ಬರೆಯಲಾಯಿತು. ಹಾಗೆಯೇ ಅದೊಂದು ದಿನ ನಿಮ್ಮ ಪುಸ್ತಕ ಹಿಡಿದುಕೊಂಡು ನಮ್ಮ ಕಚೇರಿಗೆ ಬನ್ನಿ ಎಂದರು ಸುದ್ದಿ ವಾಹಿನಿಯವರು. ನಾನು ಖುಷಿಯಾಗಿ ಹೋದೆ. ಪುಸ್ತಕದ ಬಗ್ಗೆ ಮಾತನಾಡಿಸಿ, ಎಂಥ ಅದ್ಭುತವಾದ ಪುಸ್ತಕ ಬರೆದಿದ್ದೀರಿ, ಕನ್ನಡದಲ್ಲಿ ಈ ಸಾಧನೆಯನ್ನು ಬೇರೆ ಯಾರೂ ಮಾಡಿಲ್ಲ, ಒಂದು ಚಿಕ್ಕ ಬೈಟ್ ಕೊಡಿ ಎಂದರು, ಕೊಟ್ಟೆ. ಸಾರ್ ಇದನ್ನು ಪ್ರಸರಿಸುವ ದಿನ ಸಮಯ ನನಗೆ ಹೇಳಿ, ನಾನು ಒಂದಷ್ಟು ಜನರಿಗೆ ಹೇಳುತ್ತೇನೆ, ಪುಸ್ತಕದ ಮಾರಾಟಕ್ಕೆ ಸಹಾಯವಾಗುತ್ತದೆ ಎಂದೆ, ಹೇಯ್ ಖಂಡಿತ ಸಾರ್, ನೀವು ಇಷ್ಟು ಕೆಲಸ ಮಾಡಿದ್ದೀರಿ.. ನಾವು ಇಷ್ಟು ಮಾಡಲಾರೆವಾ? ಸರಿಯಾದ ಸಮಯದಲ್ಲಿ ಹಾಕುತ್ತೇವೆ.. ಎಂದರು. ಖುಷಿಯಾಗಿ ಪ್ರಕಾಶಕರಿಗೆ ಅಲ್ಲೇ ಕರೆ ಮಾಡಿ ವಿಷಯ ತಿಳಿಸಿ, ಮನೆಗೂ ಬಂದು ಹೇಳಿ ಮತ್ತೆ ಕೆಲಸದಲ್ಲಿ ತೊಡಗಿಸಿಕೊಂಡೆ.
ಒಂದು ವಾರವಾಯಿತು. ಏಕೋ ಪ್ರಸಾರವಾಗಲಿಲ್ಲ. ಫೋನ್ ಮಾಡಿ ಕೇಳುವುದಾದರೂ ಏಕೆ ಎಂದುಕೊಂಡೆ. ಇರಲಿ ಎಂದು ಒಂದು ಫೋನ್ ಒಗಾಯಿಸಿದೆ. ತಕ್ಷಣ ಪ್ರತಿಕ್ರಿಯಿಸಿದ ಆ ಮಂದಿ ಈ ವಾರದಲ್ಲಿ ಪ್ರಸಾರ ಮಾಡುತ್ತೇವೆ ಎಂದರು. ಸಿನಿಮಾ ಕಾರ್ಯಕ್ರಮದಲ್ಲಿಯೇ ಪ್ರಕಟಿಸುತ್ತೇವೆ, ಅಷ್ಟು ಮಾಡಿರೋಅವರಿಗೆ ನಾವಿಷ್ಟು ಮಾಡಲು ಸಾಧ್ಯವಿಲ್ಲವೇ ಎಂದರು. 
ಮತ್ತೆ ಹತ್ತು ಹದಿನೈದು ದಿನ ಕಳೆದವು. ಪ್ರಸಾರವಾಗಲಿಲ್ಲ. ಮತ್ತೆ ಮತ್ತೆ ಕೇಳಿದರೆ ಚನ್ನವೆ? ಇರಲಿ ಎಂದು ಫೋನ್ ಹಾಕಿದೆ. ಸಾರ್.. ಅದನ್ನು ಪ್ರಸಾರಮಾಡಬೇಕು, ಆದರೆ ಸರಿಯಾದ ಸ್ಲಾಟ್ ಸಿಗುತ್ತಿಲ್ಲ, ಸಿಕ್ಕ ತಕ್ಷಣ ಖಂಡಿತ ಪ್ರಸಾರ ಮಾಡುತ್ತೇವೆ, ಆ ಸಮಯದಲ್ಲಿ ನಾವೇ ನಿಮಗೆ ಕರೆ ಮಾಡಿ ಹೇಳುತ್ತೇವೆ ಎಂದರು. ನಾನು ಆಯಿತು ಎಂದೆ.
ವರ್ಷಗಳೇ ಕಳೆದುಹೋಯಿತು.
ಅವರಿಗೆ ಸಮಯ ಸಿಗಲಿಲ್ಲ, ಹಾಗಾಗಿ ಪ್ರಸಾರ ಮಾಡಲು ಆಗಲಿಲ್ಲ.
ನಾನು ಮಾಧ್ಯಮದಲ್ಲಿ ಒಂದಷ್ಟು ದಿನ ಕೆಲಸ ಮಾಡಿದವನೇ/. ಟಿಆರ್ಪಿ ಬೆನ್ನು ಬಿದ್ದಾಗ ಯಾವುದು ಹೆಚ್ಚು ವಿವಾದ ಹುಟ್ಟಿಸುತ್ತದೆ ಎಂಬುದರ ಮೇಲಷ್ಟೇ ಗಮನ ಇರುತ್ತದೆ. ಅದಾದ ನಂತರ ಹುಚ್ಚ ವೆಂಕಟ್ ಥೂ ಕನ್ನಡ ನನ್ನ ಎಕ್ಕಡ ಎಂದರು, ತಕ್ಷಣಕ್ಕೆ ಅತನದೂ ಟಿವಿಯಲ್ಲಿ ನೇರ ಪ್ರಸಾರದ ಜೊತೆಗೆ ವಿಧವಿಧವಾಗಿ ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ಆಯಾಮ ಪಡೆದು ದಿನಗಟ್ಟಲೆ ವಾರಗಟ್ಟಲೆ  ಪ್ರಸಾರವಾಯಿತು, ಆ ದಿನದಿಂದ ಕಾರ್ಯಕ್ರಮಗಳನ್ನು ಗಮನಿಸುತ್ತ ಬಂದಾಗ ಚಪ್ಪಲಿಯಲ್ಲಿ ಹೊಡೆದವರು ಹೊಡೆಸಿಕೊಂಡವರು ಸೆಲೆಬ್ರಿಟಿ ಆದದ್ದು ಸಿನಿಮಾ ಜಗತ್ತಿನಲ್ಲಿ ಸಾಧನೆ ಎನಿಸಿಕೊಂಡದ್ದು ನೋಡಿ ಇದೆಂತಹ ವಿಪರ್ಯಾಸ ಎನಿಸಲಿಲ್ಲ. ವರ್ಷಗಟ್ಟಲೆ ಕಷ್ಟಪಟ್ಟು ಕನ್ನಡ ಸಿನಿಮಾದ ಬಗೆಗೆ ಪುಸ್ತಕ ಬರೆದರೆ ಒಂದು ಚಿಕ್ಕ ಬೈಟ್ ಹಾಕಲು, ಪುಸ್ತಕದ ಬಗ್ಗೆ ಚಿಕ್ಕ ವಿವರ ನೀಡಲೂ ಜಾಗವಿಲ್ಲ ಎನ್ನುವವರಿಗೆ ಇದಕ್ಕೆಲ್ಲಾ ಗಂಟೆಗಟ್ಟಲೆ ಸಮಯ ಹೇಗೆ ಸಿಗುತ್ತದೆ ಎನಿಸದಿರಲಿಲ್ಲ. ಆತ ನಾನು ಗಂಡಸಲ್ಲ ಎಂದರೆ ಅದು ದಿನಗಟ್ಟಲೆ ಸುದ್ದಿ, ಸಿನಿಮಾ ಜಗತ್ತಿನಲ್ಲಿ ಯಾರೋ ಹುಡುಗಿಯನ್ನು ಕರೆದರೆ ದಿನಗಟ್ಟಲೆ ಸುದ್ದಿ, ನನ್ನನ್ನು ಆತ ಲೆಕ್ಕವಿಡುವಷ್ಟು ಸಾರಿ ಅತ್ಯಾಚಾರ ಮಾಡಿದ್ದಾನೆ ಎಂದರೆ ಅದಕ್ಕೂ ದಿನವೆಲ್ಲಾ ಸಮಯವಿದೆ..ಅದೆಲ್ಲಾ ಓಕೆ. ಮಧ್ಯ ಮಧ್ಯ ಇಂತಹದ್ದಕ್ಕೂ ಮೂರ್ನಾಲ್ಕು ನಿಮಿಷ ಎತ್ತಿಟ್ಟರೆ ಖುಷಿಯಾಗುತ್ತದೆ ಅಲ್ಲವೇ?
ಇದೆಲ್ಲಾ ನೆನಪಿಗೆ ಬಂದದ್ದು ನಿನ್ನೆ ಮೋನಿಕಾ ಮಿಸ್ಸಿಂಗ್ ವಿವಾದ ಸುದ್ದಿ ವಾಹಿನಿಯಲ್ಲಿ ನೇರಪ್ರಸಾರವಾದಾಗ. ಆಸ್ಕರ್ ಕೃಷ್ಣ ಮೋನಿಕಾ ಮಿಸ್ಸಿಂಗ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಷ್ಟೇ ಗಂಟೆಗಟ್ಟಲೆ ಟಿವಿಯಲ್ಲಿ ಕುಳಿತು ಮಾತನಾಡಬೇಕಾಯಿತು. ಆದರೆ ಇದೇ ವ್ಯಕ್ತಿ ಹಣ ಖರ್ಚು ಮಾಡಿ ನೋಡಲೇ ಬೇಕಾದ ಕನ್ನಡದ ನೂರೊಂದು ಚಿತ್ರಗಳು ಪುಸ್ತಕ ಪ್ರಕಟಿಸಿದಾಗ ಯಾರೂ ಮಾತು ಆಡಿಸಲಿಲ್ಲ. ಇದೇನು ಈ ತರಹದ್ದೊಂದು ಒಳ್ಳೆಯ ಪುಸ್ತಕ ಪ್ರಕಟಿಸಿದ್ದೀರಾ ಬನ್ನಿ ಕಾರ್ಯಕ್ರಮ ಮಾಡೋಣ ಎನ್ನಲಿಲ್ಲ.. 
ಇದಲ್ಲವೇ ವಿಪರ್ಯಾಸ...

Monday, September 28, 2015

ನಾನು ಅವನಲ್ಲ ಮತ್ತು ಬ್ಯೂಟಿಫುಲ್ ಬಾಕ್ಸರ್...

ಪ್ರಕಾಶ್ ರಾಜ್ ಅಭಿನಯದ ಒಗ್ಗರಣೆ ಚಿತ್ರದ ಬಿಡುಗಡೆಯ ದಿನ ಮೊದಲ ಪ್ರದರ್ಶನ ನೋಡಲು ಹೋಗಿದ್ದಾಗ ಅಲ್ಲಿದ್ದ ಕಲಾವಿದರೊಬ್ಬರು ಪರಿಚಯ ಮಾಡಿಕೊಂಡಿದ್ದರು, ಅಲ್ಲದೆ ಚಿತ್ರಮಂದಿರದ ಒಳಗಡೆವರೆಗೂ ನನ್ನ ಜೊತೆಯಲ್ಲಿಯೇ ಬಂದು ಸಿನಿಮಾ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೆಯೇ ನಾನೂ ಕೂಡ ಒಂದು ಪಾತ್ರವನ್ನು ಮಾಡಿದ್ದೇನೆ ಎಂದಿದ್ದರು. ನಾನು ಆಗಲಿ ಎಂದು ಸಿನಿಮಾ ನೋಡುವ ಕಾತುರತೆಯಿಂದ ಚಿತ್ರಮಂದಿರ ಹೊಕ್ಕಿದ್ದೆ. ಆದರೆ ಸಿನಿಮಾ ನೋಡಿದ ಮೇಲೆ ಎಲ್ಲಿ, ಯಾವ ಪಾತ್ರ ಮಾಡಿದ್ದು ಆತ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿದ್ದೆ. ಆಮೇಲೆ ಗೊತ್ತಾಯಿತು ಅಲ್ಲಿದ್ದ ಲೈಂಗಿಕ ಅಲ್ಪಸಂಖ್ಯಾತ ಹೆಣ್ಣಿನ ಪಾತ್ರವನ್ನು ನಿರ್ವಹಿಸಿದ್ದಾರೆ ಎಂಬುದಾಗಿ. ನಾನು ಅವನಲ್ಲ ಅವಳು ಒಳ್ಳೆಯ ಸಾಕ್ಷ್ಯಚಿತ್ರ ಮಾದರಿಯ ಜೀವನಚರಿತ್ರೆಯ ಚಿತ್ರ. ಮಾದೇಶನ ವಿದ್ಯಾ ಆಗುವಲ್ಲಿನ ಜೀವನದ ಪಯಣವನ್ನು ಸಾರುತ್ತಾ ಸಾಗುವ ಚಿತ್ರ. ಯಾವುದೇ ಪರಿಸ್ಥಿತಿಯಲ್ಲಿಯೂ ಸಿನಿಮೀಯ ಪಾತ್ರಗಳನ್ನೂ ಸೃಷ್ಟಿಸದೇ, ಅತಿರೇಕಕ್ಕೆ ಎಡೆ ಮಾಡದೆ ಇದ್ದುದ್ದನ್ನು ಇದ್ದ ಹಾಗೆ ತೋರಿಸುತ್ತಾ ಹೋಗಿರುವುದು ಚಿತ್ರದ ಹೈ ಲೈಟ್. ನಿಜಕ್ಕೂ ಸಂಚಾರಿ ವಿಜಯ್ ಅಭಿನಯ ಅತ್ಯುತ್ತಮ ಮತ್ತು ರಾಷ್ಟ್ರ ಪ್ರಶಸ್ತಿಗೆ ಅರ್ಹ.ಮಾದೇಶ, ವಿದ್ಯಾಳಾಗುವ ಕಥಾನಕ, ಆ ಪಯಣದಲ್ಲಿನ ಯಾತನೆ, ಖುಷಿಯನ್ನು ಅವರೆಡೆಗೆ ಸಮಾಜಕ್ಕಿರುವ ಅನಾದರವನ್ನು ಅಲ್ಲಲ್ಲಿ ಸೂಕ್ಷ್ಮವಾಗಿ ವಿಶದ ಪಡಿಸಿರುವ ಪರಿ ಮೆಚ್ಚುಗೆಗೆ ಅರ್ಹ. ನೋಡಲೇಬೇಕಾದ ಸಿನಿಮಾದ ಪಟ್ಟಿಗೆ ಸೇರಿಸಬಹುದಾದ ಚಿತ್ರವಿದು. ಹಾಗೆಯೇ ಹಿಜಡಾ ಜಗತ್ತಿನ ಒಳಹೊರಗುಗಳನ್ನು ಅವುಗಳ ಪ್ರಕ್ರಿಯೆಯನ್ನು ಎಷ್ಟೋ ಅವಶ್ಯಕವೋ ಅಷ್ಟೇ ತೋರಿಸುತ್ತಾ ಸಾಗುವುದು ನಿಜಕ್ಕೂ ಅಭಿನಂದನಾರ್ಹ.
ನಂಗೆ ಈ ಲಿಂಗಪರಿವರ್ತಿತರ ಸಿನಿಮಾ ಎಂದಾಗ ನನ್ನನ್ನು ಹೆಚ್ಚು ಕಾಡುವುದು  ಬ್ಯೂಟಿಫುಲ್ ಬಾಕ್ಸರ್. ಚಿತ್ರದ ಶೀರ್ಷಿಕೆ ಇಷ್ಟವಾಗಿತ್ತು. ಸಿಂಗಪೂರ್ ಮೂಲದ ಚಿತ್ರವನ್ನು ಏಕಚೈ ಉಕ್ರೋಗಾತಂ ಎನ್ನುವ ಹೆಸರಿನ ನಿರ್ದೇಶಕರು ನಿರ್ದೇಶನ ಮಾಡಿದ್ದರು. ಗಂಡಾಗಿ ಹುಟ್ಟಿದ ಪರಿನ್ಯಾ ತನ್ನೊಳಗಿನ ಹೆಣ್ತನವನ್ನು ಸಾಕಾರಗೊಳಿಸಿಕೊಳ್ಳಲು ಗಂಡಸ್ತನವಿಲ್ಲದ ಗಂಡಸ್ತನವನ್ನು ಹೆಣ್ಣಾಗಿ ಮಾಡಿಕೊಳ್ಳಲು ಪಡುವ ಪಾಡಿನ ಕತೆಯದು. ಬಾಲ್ಯದಿಂದಲೇ ಹೆಣ್ತನದ ಸೆಳೆತದಿಂದಾಗಿ ಲಿಪ್ ಸ್ಟಿಕ್ ಹಾಕಿಕೊಳ್ಳುವುದು ಹೆಣ್ಣಂತೆ ಸಿಂಗರಿಸಿಕೊಳ್ಳುವುದು ಮಾಡುವ ಪರಿನ್ಯಾ ಆ ಕಾರಣದಿಂದಲೇ ಅದ್ಭುತವಾಗಿ ವಾಲಿಬಾಲ್ ಆಡುತ್ತಿದ್ದರೂ ರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾಗುವುದಿಲ್ಲ. ಹಾಗಾಗಿ ಬಾಕ್ಸಿಂಗ್ ಗೆ ಇಳಿಯುವ ಪರಿನ್ಯಾಳ ಗುರಿ ಹಣ ಸಂಪಾದಿಸುವುದು ಮತ್ತು ಆ ಹಣದಿಂದ ಹೆಣ್ಣಾಗುವುದು. ಗುದ್ದಾಡಿ ಗುದ್ದಾಡಿ ಗಂಡಸರನ್ನು ಮಣ್ಣು ಮುಕ್ಕಿಸುವ ಪರಿನ್ಯಾ ಹಣ ಸಂಪಾದನೆ ಮಾಡಿ ಅದನ್ನು ತನ್ನ ಲಿಂಗ ಬದಲಾವಣೆಯಾ ಕನಸು ನನಸು ಮಾಡಿಕೊಳ್ಳುತ್ತಾನೆ, ಆ ಮೂಲಕ ಅವನು ಅವಳಾಗುತ್ತಾನೆ.ಚಿತ್ರದ್ದು ನೈಜಕತೆ ಎಂದು ತಿಳಿದಾಗ ಅದನ್ನು ಮತ್ತೆ ಮತ್ತೆ ನೋಡಿದ್ದೆ. 
ಈ ನಿಟ್ಟಿನಲ್ಲಿ ನನಗೆ ಹಲವಾರು ಸಿನಿಮಾಗಳು ಕಾಡಿವೆ. ಹಾಗೆಯೇ ವಸುಧೇಂದ್ರ ಬರೆದ ಮೋಹನಸ್ವಾಮೀ ಕಥಾ ಸಂಕಲನದಲ್ಲಿನ ಒಂದು ಕತೆ ತುಂಬಾ ಕನಲುವಂತೆ ಮಾಡಿತ್ತು. ಊರಲ್ಲಿ ಹೆಣ್ಣಿಗನಾಗಿದ್ದ ಶಂಕರಗೌಡ ಅದೊಂದು ದಿನ ಊರು ಬಿಟ್ಟು ಮರೆಯಾಗುತ್ತಾನೆ. ಆದರೆ ಒಂದಷ್ಟು ದಿನದ ನಂತರ ವಾಪಸ್ಸು ಊರಿಗೆ ಬರುವ ಶಂಕರ ಹೆಣ್ಣಾಗಿರುತ್ತಾನೆ. ಊರ ಜನ ಅವನನ್ನು ಅಚ್ಚರಿಯಿಂದ ನೋಡುವಂತೆ ಮಾಡಿಬಿಡುತ್ತಾನೆ. ತನ್ನದೇ ಮನೆಗೆ ಹೋಗಿ ನಾನೀಗ ಹೆಣ್ಣು ಎಂದು ಘೋಷಣೆ ಮಾಡುತ್ತಾನೆ, ನನಗೆ ಆಸ್ತಿಯಲ್ಲಿ ಪಾಲು ಬೇಕು ಎನ್ನುತ್ತಾನೆ. ಊರ ಗಂಡಸರ ಸಹವಾಸ ಮಾಡುತ್ತಾನೆ. ತನಗಿಷ್ಟ ಬಂದ ಹಾಗೆ ಬದುಕುವ ಶಂಕರನನ್ನು ಅವನೇ ಮನೆಯವರೇ ಸಾಯಿಸಿ ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಿಬಿಡುತ್ತಾರೆ. ಕತೆ ಓದಿ ತುಂಬಾ ದಿನ ಯೋಚಿಸಿದ್ದೆ. ಇಲ್ಲಿ ಯಾರ ತಪ್ಪು, ಯಾರು ಸರಿ ಎಂಬುದಕ್ಕಿಂತ ಹೀಗೆ ನಡೆಯಿತಲ್ಲಾ ಎನ್ನುವ ವಿಷಾದ ನನ್ನನ್ನು ಬಹುದಿನಗಳವರೆಗೆ ಕಾಡಿತ್ತು.

Wednesday, September 16, 2015

ಕಾದಂಬರಿ ಮತ್ತು ಪುಟ್ಟಕ್ಕ...

ಗಡಸು ನೀರು ಅಂದ್ರೆ ನಿಮಗೆ ಗೊತ್ತಿರಬಹುದು.. ಅದನ್ನು ಒಟ್ಟು ಕ್ಯಾಲ್ಸಿಯಂ ಅಯಾನ್ಸ್ ಮತ್ತು ಮೆಗ್ನೀಷಿಯಂ ಅಯಾನ್ಸ್ ಜೊತೆಗೆ ನೀರಿನಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್ ಅಂಶದ ಜೊತೆಗೆ ಲೆಕ್ಕ ಹಾಕಿ ತಾಳೆ ಮಾಡಿ ನೀರಿನ ಗಡಸುತನವನ್ನು ನಿರ್ಣಯ ಮಾಡಬಹುದು. ಅವರೆಡರ ಅನುಪಾತ ಕಡಿಮೆ ಇದ್ದರೆ ನೀರಿನ ಗಡಸುತನ ಕಡಿಮೆ ಇರುತ್ತೆ.. ಇಲ್ಲಾಂದ್ರೆ ಗಡಸುತನ ಜಾಸ್ತಿ ಇರುತ್ತೆ.. ಕಡಿಮೆ ಆದರೇನು, ಜಾಸ್ತಿ ಆದರೇನು ಸ್ವಾಮೀ.. ಕುಡಿಯೋದ್ ತಾನೇ ಅನ್ನಬಹುದು ನೀವು.. ಆದರೆ ಅಡುಗೆ ಮಾಡುವಲ್ಲಿಗೆ ಇದು ಮುಖ್ಯ ಆಗುತ್ತೆ ನೋಡಿ.. ನಿಮಗೆ ಅನ್ನ ಉದುರುದರಾಗಿ ಬೇಕು ಅಂದ್ರೆ ಕ್ಯಾಲ್ಸಿಯಂ ಜಾಸ್ತಿ ಇರೋ ನೀರಲ್ಲಿ ಅಡುಗೆ ಮಾಡಬೇಕು..ಅದು ಅಕ್ಕಿಯ ನಾರಿನ ಜೊತೆಗೆ ಮಿಳಿತವಾಗಿ ಅನ್ನ ಉದುರುದರಾಗಿ ಆಗುತ್ತೆ,  ಚಿತ್ರಾನ್ನ, ಪುಳಿಯೋಗರೆ ಮುಂತಾದವಕ್ಕೆ ಈ ಗಡಸುತನ ಕಡಿಮೆ ಇರಬೇಕಾಗುತ್ತೆ. ಆದರೆ ಮಾಂಸದ ಸಾರಿಗೆ ಗಡಸು ನೀರು ಬೆಸ್ಟ್..ಏಕೆಂದರೆ ಈ ಕ್ಯಾಲ್ಸಿಯಂ ಮಾಂಸದ ನಾರಿನಲ್ಲಿನ ಹೆಚ್ಚಿನ ದ್ರವಾಂಶದ ಜೊತೆಗೆ ಸೇರಿ,  ಮಾಂಸ ಬೇಯುವಲ್ಲಿಗೆ ಸಹಾಯ ಮಾಡುತ್ತೆ.. ಹಾಗಾಗಿ ಬೆಂದ ಮೇಲೆ ತಿನ್ನೋಕೆ ಸುಲಭ..
ಅದ್ಸರಿ ಇದೇನು ನೀರಿನ ಬಗೆಗಿನ ವಿವರ ಎನ್ನುವ ಮೊದಲು ಒಂದು ಘಟನೆ ನಡೆದಿದೆ. ಅದನ್ನು ಅವಲೋಕಿಸೋಣ. ಒಂದು ಕೊಲೆ. ಹೆಂಡತಿ ಹಿಂದಿನ ದಿನ ಊರಿಗೆ ಹೋಗಿದ್ದಾಳೆ. ಅವಳು ಮನೆಯಲ್ಲಿ ಇಲ್ಲ ಎಂದು ಗೊತ್ತಾದ ತಕ್ಷಣ ನಮ್ಮ ಹೀರೋ ತನ್ನ ಗೆಳತಿಯನ್ನು ಮನೆಗೆ ಕರೆಸಿಕೊಂಡಿದ್ದಾನೆ. ರಾತ್ರಿ ಕಳೆದು ಇಬ್ಬರೂ ಬೆಳಿಗ್ಗೆ ಕಾಫಿ ಕುಡಿದಿದ್ದಾರೆ. ಗೆಳತಿಯೇ ಸ್ವತಃ ಕಾಫಿ ಮಾಡಿದ್ದಾಳೆ. ಆನಂತರ ಸಂಜೆ ಸಿಗೋಣ ಎಂದು ಮಾತನಾಡಿಕೊಂಡಿದ್ದಾರೆ. ಸಂಜೆ ಹೋಟೆಲ್ಲಿಗೆ ಊಟಕ್ಕೆ ಹೋಗೋಣ ಎಂದವನು ತುಂಬಾ ಹೊತ್ತಾದರೂ ಕರೆ ಮಾಡದೆ ಇದ್ದಾಗ, ಕರೆ ಸ್ವೀಕರಿಸದೆ ಇದ್ದಾಗ ಗಾಬರಿಯಾದ ಆಕೆ ಮನೆಗೆ ಬಂದಿದ್ದಾಳೆ. ಅಲ್ಲವನ್ನು ಸತ್ತು ಬಿದ್ದಿದ್ದಾನೆ. ಕಾಫಿ ಕುಡಿದ ಲೋಟ, ಒಂದು ವಾಟರ್ ಬಾಟಲು ಪಕ್ಕದಲ್ಲಿದೆ. 
ಆಕೆಗೆ ಗಾಬರಿಯಾಗಿ ತಕ್ಷಣ ಪೋಲಿಸ್ ಗೆ ಫೋನ್ ಮಾಡಿದ್ದಾಳೆ.
ಅದು ಕೊಲೆಯಾ?
ಪೋಸ್ಟ್ ಮಾರ್ಟಂ ರಿಪೋರ್ಟ್ ಪ್ರಕಾರ ವಿಷ ಪ್ರಾಶನದಿಂದ ಆತ ಸತ್ತಿದ್ದಾನೆ. ಆತ ಸತ್ತ ಸಮಯದಲ್ಲಿ ಹೆಂಡತಿ ದೂರದ ಊರಿನಲ್ಲಿದ್ದಾಳೆ, ಗೆಳತಿ ಬಂದ ತಕ್ಷಣ ಫೋನ್ ಮಾಡಿದ್ದಾಳೆ. ಬೇರೆ ಯಾವ ನರಪಿಳ್ಳೆಯೂ ಬಂದಿರುವ ಸುಳಿವಿಲ್ಲ. ಹೆಂಡತಿ ಮೇಲೆ ಸಂಶಯ ಪಡಲು ಸಾಧ್ಯವೇ ಇಲ್ಲ, ಏಕೆಂದರೆ ಆಕೆ ದೂರದಲ್ಲಿದ್ದಾಳೆ. ವಿಷ ಬಂದಿರುವುದು ಕಾಫಿ ಲೋಟದಲ್ಲಿ ಆದ್ದರಿಂದ ಮೊದಲೇ ಕಾಫಿ ಲೋಟಕ್ಕೋ ನೀರಿಗೋ ಬೆರೆಸಿ ಆಕೆ ಹೋಗಿದ್ದರೆ, ಗೆಳತಿಯೂ ಸಾಯಬೇಕಾಗಿತ್ತು.  ಬೆಳಿಗ್ಗೆ ಕುಡಿದ ಕಾಫಿ ಲೋಟಗಳು ಸಿಂಕ್ ನಲ್ಲಿ ಹಾಗೆಯೇ ಇವೆ..ಅದರಲ್ಲಿ ವಿಷದ ಅಂಶವಿಲ್ಲ..
ಹೋಗಲಿ ಗೆಳತಿಯ ಮೇಲೆ ಸಂಶಯ ಪಡೋಣ ಎಂದರೆ ಅವಳೇ ಫೋನ್ ಮಾಡಿದ್ದಾಳೆ.. ಮತ್ತು ಯಾವ ರೀತಿಯಲ್ಲಿಯೂ ಯಾವುದೇ ಸಾಕ್ಷ್ಯವನ್ನು ಅಳಿಸುವ ಪ್ರಯತ್ನವನ್ನು ಆಕೆ ಮಾಡಿಲ್ಲ..
ಅಥವಾ ಆತ್ಮಹತ್ಯೆ ಇರಬಹುದಾ..? ಏಕೆಂದರೆ ಲೋಟದ ಮೇಲಿನ, ಬಾಟಲು ಮೇಲಿನ ಬೆರಳ ಗುರುತು ಸತ್ತವನದೆ ಆದ್ದರಿಂದ ಅವನೇ ಆತ್ಮಹತ್ಯೆ ಮಾಡಿಕೊಂಡಿರಬಹುದಾ? ಉಹೂ.. ಗೆಳತಿ ಸಂಜೆ ಹೊರಗೆ ಹೋಟೆಲ್ಲಿಗೆ ಊಟಕ್ಕೆ ಹೋಗೋಣ ಎಂದವನು, ಅಷ್ಟೇ ಅಲ್ಲ ಹೋಟೆಲ್ಲಿಗೆ ಸಂಜೆ 6.30ಕ್ಕೆ ಕರೆ ಮಾಡಿ ಎರಡು ಸೀಟ್ ರೆಸೆರ್ವ್ ಮಾಡಿದವನು ಅದೇಕೆ 7 ಕ್ಕೆ ಆತ್ಮಹತ್ಯೆ ಮಾಡಿಕೊಂಡಾನು?
ಸರಿ.. ವಿಷ ಬಂದಿದ್ದಾದರೂ ಎಲ್ಲಿಂದ?
ನೀರಿನ ಬಾಟಲು ಪರೀಕ್ಷೆ ಮಾಡಲಾಯಿತು.. ಫಲಿತಾಂಶ ಶೂನ್ಯ..
ಕಾಫಿ ಪುಡಿ, ಕಾಫೀ ಲೋಟದಲ್ಲಿನ ಉಳಿದ ದ್ರವದಲ್ಲಿ ವಿಷವಿದೆ ನಿಜ.. ಅದು ಬಂದದ್ದಾದರೂ ಎಲ್ಲಿಂದ..
ಫಿಲ್ಟರ್ ವಾಟರ್ ನಿಂದ ಎನ್ನುವುದಾದರೆ ವಾಟರ್ ಫಿಲ್ಟರ್ ಪೈಪಿನಲ್ಲಿ ವಿಷದ ಅಂಶವಿರಬೇಕಲ್ಲವೇ?
ವಿಷಯವಂತೂ ಸ್ಪಷ್ಟ.. ವಿಷ ಪ್ರಾಶನ.. ಅದೂ ವಿಷವನ್ನು ನೀರಿಗೆ ಹಾಕಲಾಗಿದೆ, ಆ ನೀರನ್ನು ಕಾಫೀ ಮಾಡಲು ಬಳಸಲಾಗಿದೆ..
ಸರಿ.. ಇಡೀ ನೀರಿನ ಸಂಪು, ಪೈಪ್, ಹಿಡಿ, ನಟ್ ಬೋಲ್ಟ್, ನಳ, ಫಿಲ್ಟರ್ ಎಲ್ಲವನ್ನು ಪರೀಕ್ಷೆ ಮಾಡಿದರೆ..?
ಅದೂ ಆಯಿತು.. ಉಹೂ..
ಹೋಗಲಿ..ಸರಿ.. ನೀರಿನ ಪೈಪ್ ಬದಲಿಸಿ ಎಷ್ಟು ದಿನವಾಯಿತು ಪರೀಕ್ಷೆ ಮಾಡೋಣ. ಕೊಲೆಗಾರ ನೀರಿನ ಪೈಪ್ ಲೈನ್ ನಲ್ಲಿಯೇ ವಿಷ ಸೇರಿಸಿದ್ದರೆ ಅವನು ಇತ್ತೀಚಿಗೆ ಅದನ್ನು ಬದಲಿಸಿ ವಿಷ ಹಾಕಿ ಮತ್ತೆ ಫಿಕ್ಸ್ ಮಾಡಬೇಕಲ್ಲವೇ?
ಆದರೆ ಆ ಪೈಪ್ ಹಾಕಿಸಿ ವರ್ಷಗಟ್ಟಲೆ ಆಗಿದೆ ಮತ್ತು ಅದನ್ನು ಬದಲಿಸಿಯೇ ಇಲ್ಲ...
ಹೇಗೆ..?
ಯಾರು?
ಪ್ರಾರಂಭದಲ್ಲಿಯೇ ಕಾದಂಬರಿಗಾರ ನಾಯಕನ ಪತ್ನಿಯೇ ಕೊಲೆಗಾರ್ತಿ ಎನ್ನುವ ಸುಳಿವನ್ನು ನೀಡುತ್ತಾನೆ. ಆದರೆ ಕಾದಂಬರಿ ಮುಂದುವರೆಯುತ್ತಿದ್ದಂತೆಯೇ ಅಲ್ಲಿನ ಪತ್ತೆದಾರರ ಜೊತೆಗೆ ಓದುಗನೂ ಹುಡುಕುವಂತೆ ಮಾಡುತ್ತಾನೆ. ಗೊತ್ತಿದ್ದೂ ಯಾವುದನ್ನು ನಿಖರವಾಗಿ ಸಾಕ್ಷಿ ಸಮೇತ ನಿರೂಪಿಸಲಾಗದ ಪತ್ತೆದಾರನ ಸ್ಥಿತಿ ಓದುಗನದೂ ಆಗುತ್ತದೆ. ಕಾದಂಬರಿಯಕೊನೆಯ ಪುಟದವರೆಗೂ ಕುತೂಹಲ ಕಾಯ್ದುಕೊಳ್ಳುವ ಕಾದಂಬರಿಕಾರ ಕೊನೆಗೆ ನೀಡುವ ವಿವರಣೆ ಅಚ್ಚರಿ ಎನಿಸುತ್ತದೆ.
ಇದು ದೃಷ್ಯಂ ಚಿತ್ರದ ಮೂಲ ಲೇಖಕ ಬರೆದ ಕಾದಂಬರಿ ಸಾಲ್ವೇಶನ್ ಆಫ್ ಎ ಸೈಂಟ್ ನ ಕತೆ. ಪ್ರಾರಂಭದಿಂದಲೂ ಕೊನೆಯವರೆಗೆ ಕುತೂಹಲ ಕೆರಳಿಸುತ್ತಾ ಸಾಗುವ ಕತೆ ಇದು. ಮೊದಲಿಗೆ ಜಪಾನಿ ಹೆಸರುಗಳು ಸ್ವಲ್ಪ ನೆನಪಲ್ಲಿಟ್ಟುಕೊಳ್ಳುವ ಕಷ್ಟ ಎನಿಸಿದರೂ ಆನಂತರ ಕಾದಂಬರಿ ನಿಮ್ಮನ್ನು ತನ್ನೊಳಗೆ ಸೆಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ.
ಒಮ್ಮೆ ಓದಿ.
ಅಂದ ಹಾಗೆ ಬಿಡುವಾದಾಗ ಈ ಕಿರುಚಿತ್ರ ನೋಡಿ.. ನಿಮ್ಮ ಅಭಿಪ್ರಾಯ ತಿಳಿಸಿ...



Sunday, September 13, 2015

ಕಳೆದುಹೋಗಿದ್ದ ಸೂರಿ ಸಿಕ್ಕಿದ ಖುಷಿಯಲ್ಲಿ..

ರಂಗ ಎಸ್ ಎಸ್ ಎಲ್ ಸಿ ಸಮಯದಲ್ಲಿ ನಾನು ಕಾಲೇಜಿನಲ್ಲಿದ್ದೆ. ಬಿಡುಗಡೆಯಾದಾಗ ಸಿನಿಮಾಕ್ಕೆ ಎದ್ದು ಬಿದ್ದು ಓಡಿದ್ದೆ. ಸಿನಿಮಾ ಬಿಡಿ, ಆ ವಟವಟ ಎಂದು ಮಾತನಾಡುವ ರಂಗ, ಆತನ ಸೈಡ್ ಕಿಕ್ ಜಪಾನ್ ನನಗೆ ತುಂಬಾ ಇಷ್ಟವಾಗಿದ್ದರೂ ಇದೇ ಮಾತನ್ನು ಇಡೀ ಚಿತ್ರಕ್ಕೆ ಹೇಳುವ ಹಾಗಿರಲಿಲ್ಲ. ಆದರೆ ದುನಿಯಾ ಚಿತ್ರ ನೋಡಿ, ಅದರಲ್ಲಿನ ಕಸುಬುದಾರಿಕೆಗೆ ಮರುಳಾಗಿದ್ದೆ. ಹಾಡು, ಹೊಡೆದಾಟ, ಬದುಕಿನ ವಿಪರ್ಯಾಸಗಳನ್ನು ಸೂರಿ ತುಂಬಾ ಚೆನ್ನಾಗಿ ಚಿತ್ರಿಸಿದ್ದರು. ಆದರೆ ಆನಂತರದ ಅವರದೇ ಚಿತ್ರಗಳು ಇಷ್ಟವಾಗಲಿಲ್ಲ. ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿನ ಕತೆ, ನಿರೂಪಣೆ ಒಳಗೆ ಸೇರಲೇ ಇಲ್ಲ, ಜಾಕಿ ಓಕೇ ಎನಿಸಿದರೆ ಅಣ್ಣಾಬಾಂಡ್ ಇಷ್ಟವಾಗಲಿಲ್ಲ. ಅದೇಕೆ ಇಷ್ಟವಾಗಬೇಕು, ಇಷ್ಟಕ್ಕೂ ಒಬ್ಬ ನಿರ್ದೇಶಕ ತನ್ನೆದುರಿನ ಪ್ರಪಂಚವನ್ನು, ತನ್ನೊಳಗಿನ ಕಲ್ಪನೆಯನ್ನು ಪರದೆಯ ಎ ಬಿಡಿಸುತ್ತಾನೆ, ನೋಡುವ ಧರ್ಮ, ನೋಡುವ ಕರ್ಮ ನಮ್ಮದು. ಇಷ್ಟವಾಗುವುದು, ಬಿಡುವುದು ಸಿನಿಮಾಕ್ಕೆ ಸೇರಿದ್ದು. ನಾವು ತಿರಸ್ಕರಿಸಿದ ಚಿತ್ರ ಸೂಪರ್ ಹಿಟ್ ಆಗಿರಬಹುದು, ನಾವು ತುಂಬಾ ಇಷ್ಟಪಟ್ಟ ಚಿತ್ರಗಳು ಡಬ್ಬಾ ಸೇರಿರಬಹುದು. ಆದರೆ ಒಬ್ಬ ನಿರ್ದೇಶಕ ಹೀಗೆಯೇ ಚಿತ್ರ ನಿರ್ದೇಶನ ಮಾಡಬೇಕು ಎಂಬುದಾಗಿ ನಾವು ಅಂದಾಜು ಊಹೆ ಕಲ್ಪನೆ ನಿರ್ಧಾರ ಮಾಡಿಕೊಂಡು ಬಿಡುವುದು ನಮ್ಮದೇ ತಪ್ಪು. ಆತ ನಿರ್ದೇಶನ ಮಾಡುತ್ತಾನೆ, ಹೋಗಿ ನೋಡು, ಇಷ್ಟವಾಯಿತಾ ಆಯಿತು, ಆಗಲಿಲ್ಲವಾ ಬೈದೆದ್ದು ಬಾ ಅಷ್ಟೇ ಕತೆ. ಹೋಟೆಲ್ಲಿನಲ್ಲಿ ಆರ್ಡರ್ ಮಾಡಿದ ಮೇಲೆ ಚೆನ್ನಾಗಿಲ್ಲವೆಂದರೂ ಗೊಣಗಿಕೊಂಡೆ ತಿನ್ನುವುದಿಲ್ಲವೇ? ಹಾಗೆಯೇ ಇದು ನನ್ನ ಪಾಲಿಗೆ.
ಹಾಗೆ ನೋಡಿದರೆ ಕೆಂಡಸಂಪಿಗೆ ಚಿಕ್ಕ ಚೊಕ್ಕ ಚಿತ್ರ. ವಿಮರ್ಶೆ ಪಕ್ಕಕ್ಕಿಡಿ. ನೋಡಿ, ನೋಡುವಾಗ ಏನನ್ನಿಸಿತು, ಅಷ್ಟೇ ಮುಖ್ಯ ಅಲ್ಲವೇ? ಅವರು ಆಕಾಶದ ಮೇಲಾದರೂ ಕ್ಯಾಮೆರಾ ಇಟ್ಟಿರಲಿ, ಪಾತಾಳದಲ್ಲಾದರೂ ಕ್ಯಾಮೆರಾ ಹುದುಗಿಸಿರಲಿ, ನಮಗೆ ಮಾಡುವುದು ಏನಿದೆ.? ನೋಡುವಾಗ ಪರದೆಯ ಮೇಲಿನದ್ದು ಒಳ ಹೋದರೆ ಸಾಕು. ಹಾಗಂತ ತೀರಾ ಕಾವ್ಯಾತ್ಮಕವಾಗಿ ಅಥವಾ ಭಾವನಾತ್ಮಕವಾಗಿ ಹೇಳಲು ಹೋಗಿದ್ದಾರಾ ನಿರ್ದೇಶಕರು ಎಂದರೆ ಇಲ್ಲ ಎನ್ನುವುದು ಚಿತ್ರದಲ್ಲಿ ಕಾಣಸಿಗುತ್ತದೆ. ಭಗ್ನಹೃದಯಿ ನಾಯಕ ವಾಸ್ತವ ಒಪ್ಪಿಕೊಂಡು ಮುಂಬೈನಲ್ಲಿ ಕೆಲಸ ಮಾಡುವ ಒಂದು ಚಿತ್ರಣವೇ ಸಾಕು ಬಿಡಿ ಚಿತ್ರದಲ್ಲಿನ ವಾಸ್ತವತೆಯ ಅರುಹಲು.
ಸೂರಿ ಕೆಂಡ ಸಂಪಿಗೆ ಎಲ್ಲೂ ಸಿನಿಮೀಯವಾಗಿಲ್ಲ, ಅಥವಾ ನ್ಯಾಯಸಮ್ಮತ ಕತೆಯೂ ಆಗಿಲ್ಲ. ಅದು ನಿರ್ದೇಶಕರಿಗೂ ಬೇಕಿಲ್ಲ. ಚಿತ್ರದಲ್ಲಿನ ವಾಸ್ತವ, ಅವ್ಯವಸ್ತೆ ಹಾಗೆಯೇ ಇರುತ್ತದೆ, ಅದಕ್ಕೆ ಅಂತ್ಯವಿಲ್ಲ ಎನ್ನುವುದು ಕೆಂಡಸಂಪಿಗೆ ಹೂರಣ. ಅದು ನಿಜವೂ ಹೌದು. ಹೀಗೂ ಮಾಡಬಹುದು ಎಂಬುದು ಇಲ್ಲಿಲ್ಲ, ಹೀಗೆಯೇ ಇರುತ್ತದೆ ಎಂಬುದು ಇಲ್ಲಿದೆ ಅಷ್ಟೇ. ಹಾಗಂತ ತೀರಾ ಅನ್ಯಾಯವವನ್ನು ವೈಭವೀಕರಿಸಿಲ್ಲ ನಿರ್ದೇಶಕರು, ಬದಲಿಗೆ ಅಷ್ಟೆಲ್ಲಾ ಕಷ್ಟ ಪಡುವ ನಾಯಕ ನಾಯಕಿ ಬೇರಾಗಿ ಬೇಸರ ಹುಟ್ಟಿಸಿದರೆ, ತೀರಾ ಹೆಣಗಳನ್ನೇ ಉದುರಿಸಿ ಗಳಿಸಿದ ಹಣ ದಕ್ಕದೇ ಒದ್ದಾಡುವ ಪೋಲಿಸ್ ಅಧಿಕಾರಿ ಸ್ಥಿತಿ ನಗು ತೃಪ್ತಿ ತರುತ್ತದೆ. ಆ ಮೂಲಕ ಸೂರಿ ಸೂಚ್ಯವಾಗಿ ವಾಸ್ತವದ ನೆಲಗಟ್ಟಿನಲ್ಲಿಯೇ ಒಳ್ಳೆಯದಕ್ಕೆ ಜಯ ಇದೆ ಎನ್ನುವುದನ್ನು ತೋರಿಸಿದ್ದಾರೆ ಅಥವಾ ಆಟವಾಡಿಸುವವ ಮೇಲೊಬ್ಬನಿದ್ದಾನೆ ಎನ್ನುವ ಸೂಚನೆ ನೀಡಿದ್ದಾರೆ. ನಾಯಕನಾಗಿ ವಿಕ್ಕಿ, ನಾಯಕಿಯಾಗಿ ಮಾನ್ವಿತಾ ಸೂಪರ್.
ಯಾಕೋ ಸೂರಿ ಕಳೆದುಹೋದರಾ... ಎಂದು ಯೋಚಿಸುವನ್ತಾಗಿದ್ದಾಗ ಮತ್ತೆ ಸೂರಿ ಅವರ ದುನಿಯಾ ತೆರೆದುಕೊಂಡಿದೆ.  



Saturday, September 12, 2015

ಕರ್ನಾಟಕದಲ್ಲಿ ಕನ್ನಡ ಸಿನಿಮಾಕ್ಕೆ ಬೇಕೇ ಇಂಗ್ಲೀಷ್ ಅಡಿಬರಹ?

ಸರ್ಕಾರದ ಘೋಷಣೆ/ಆದೇಶದಂತೆ ಧೂಮಪಾನ/ಮದ್ಯಪಾನ ಇರುವ ಕಡೆಗೆ ಆ ಚಿತ್ರಣದ ಮೇಲೆ ಧೂಮಪಾನ ವಿರೋಧದ ಸಂದೇಶ ಹಾಕಬೇಕು ಎನ್ನುವುದಕ್ಕೆ ನಾವೇ ಚಿತ್ರಕರ್ಮಿಗಳು ಗೊಣಗಿಕೊಂಡಿದ್ದೇವೆ. ಅಲ್ಲಾ, ಸಿನಿಮಾವನ್ನು ತುಂಬಾ ತನ್ಮಯನಾಗಿ ನೋಡುವ ಪ್ರೇಕ್ಷಕನ ಮನಸ್ಸನ್ನು ಕ್ಷಣಾರ್ಧವಾದರೂ ಆಚೀಚೆ ಸರಿಸಿಬಿಡುವ ಸಾಧ್ಯತೆ ಇರುವುದರಿಂದ ನಾವೇಕೆ ಅದನ್ನು ಆ ಸಮಯದಲ್ಲಿ ಹಾಕಬೇಕು ಎನ್ನುವ ಪ್ರಶ್ನೆಯನ್ನು ಎತ್ತಿದ್ದೇವೆ, ಅದರಲ್ಲೂ ಅನುರಾಗ್ ಕಶ್ಯಪ್ ಈ ವಿಷಯ ಕುರಿತು ವರ್ಷಗಟ್ಟಲೆ ಹೋರಾಡಿದ್ದಾರೆ. ನಮ್ಮ ಹಣ ಖರ್ಚು ಮಾಡಿ ನಾವು ತೆರಿಗೆ ಕಟ್ಟಿ ಮಾಡುವ ಸಿನಿಮಾದಲ್ಲಿ ಸುಖಾಸುಮ್ಮನೆ ನಾವೇಕೆ ಬಿಟ್ಟಿ ಜಾಹಿರಾತು ನೀಡಬೇಕು.. ನಿಮಗೆ ಅವಶ್ಯವಿದ್ದರೆ ನಿಮ್ಮದೇ ಅದಕ್ಕೆಂದೇ ಮೀಸಲಾದ ಹಣದಲ್ಲಿ ಜಾಹಿರಾತು ನೀಡಿ ಎನ್ನುವ ವಾದ ಅವರದು. ಹಾಗೆಯೇ ಮಧುರ ಭಂಡಾರ್ಕರ್ ತಮ್ಮ ಹೀರೋಯಿನ್ ಚಿತ್ರದಲ್ಲಿ ಆ ರೀತಿ ಹಾಕಬಾರದೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಅದಿರಲಿ. ಕನ್ನಡದ ಚಿತ್ರಗಳಿಗೆ ಇಂಗ್ಲೀಷ್ ಅಡಿಬರಹ ಹಾಕುವ ಸಂಸ್ಕೃತಿ ಇತ್ತೀಚಿನದು. ಲೂಸಿಯ ಚಿತ್ರದಲ್ಲಿ ಅಡಿಬರಹ ಹಾಕಲಾಗಿತ್ತು. ಮೊನ್ನೆ ಉಪ್ಪಿ-2 ಚಿತ್ರಕ್ಕೆ ಹಾಕಲಾಗಿತ್ತು, ಈಗ ಕೆಂಡಸಂಪಿಗೆ ಚಿತ್ರದಲ್ಲಿದೆ.
ಇದರಿಂದ ಲಾಭಗಳಿವೆಯೇ?
ಖಂಡಿತ ಇವೆ ಎನ್ನಲು ಒಂದಷ್ಟು ಕಾರಣಗಳನ್ನು ನೀಡಬಹುದೇನೋ? 
ನಮ್ಮ ಕನ್ನಡ ಚಿತ್ರಗಳನ್ನು ಭಾಷೆಯ ಕಾರಣದಿಂದ ನೋಡಲಾಗದ ಪರಭಾಷಿಗನಿಗೆ ಸಿನಿಮಾ ಅರ್ಥವಾಗುತ್ತದೆ, ಹಾಗಾಗಿ ಕನ್ನಡ ಚಿತ್ರಗಳನ್ನು ನೋಡುವವರ ಸಂಖ್ಯೆ ಹೆಚ್ಚುತ್ತದೆ. ಚಿತ್ರವನ್ನು ಕರ್ನಾಟಕದ ಹೊರಗೂ ಏಕಕಾಲದಲ್ಲಿ ಬಿಡುಗಡೆ ಮಾಡಬಹುದು ಇತ್ಯಾದಿ ಇತ್ಯಾದಿ...
ಅದು ನಿಜ ಕೂಡ ಹೌದು.
ಆದರೆ ನನ್ನ ವಾದ ಏನೆಂದರೆ ಕನ್ನಡ ಭಾಷೆ ಉಳಿಸಿ, ಡಬ್ಬಿಂಗ್ ಬೇಡ ಎನ್ನುವ ನಾವೇ ಇಲ್ಲಿನ ಭಾಷೆ ಕಲಿಯದವನಿಗೆ ಸಿನಿಮಾವನ್ನು ಸುಲಭೀಕರಿಸಿದರೆ ಹೇಗೆ? ಸಿನಿಮಾ ನೋಡಿ, ಕನ್ನಡ ಕಲಿತವರಿದ್ದಾರೆ. ನಮ್ಮಲ್ಲಿಯೇ ನಿಮಗೆ ತೆಲುಗು ಹೇಗೆ ಗೊತ್ತು, ತಮಿಳು ಹೇಗೆ ಅರ್ಥವಾಗುತ್ತದೆ ಎನ್ನುವ ಪ್ರಶ್ನೆಗೆ ಸಿನಿಮಾ ನೋಡಿ ನೋಡಿ ಕಲಿತೆ ಎನ್ನುವ ಉತ್ತರವನ್ನು ನಾನು ಸುಮಾರು ಜನರಿಂದ ಕಲಿತಿದ್ದೇನೆ. ಅಷ್ಟೇ ಏಕೆ? ಹೆಚ್ಚು ಓದಿರದ, ಕುಗ್ರಾಮದಲ್ಲಿದ್ದ  ನನ್ನ ತಂಗಿಯೇ ಬರೀ ಟಿವಿ ನೋಡಿ ಹಿಂದಿ ಅರ್ಥ ಮಾಡಿಕೊಳ್ಳುತ್ತಿದ್ದಳು. ಈವತ್ತಿಗೂ ನಾಲ್ಕನೆಯ ತರಗತಿ ಓದಿರುವ ನಮ್ಮಮ್ಮ ತಮಿಳು ತೆಲುಗು ಹಿಂದಿ ಚಿತ್ರಗಳನ್ನು ನೋಡಿ ಅರ್ಥ ಮಾಡಿಕೊಳ್ಳುತ್ತಾರೆ. ಅಡಿಬರಹವಿಲ್ಲದೆ ಚಿತ್ರದ ಕತೆ ಹೇಳುತ್ತಾರೆ. ಹಾಗೆಯೇ ವರ್ಷಗಟ್ಟಲೆ ಇಲ್ಲೇ ಬೀಡು ಬಿಟ್ಟಿರುವ ನಮ್ಮಲ್ಲಿನ ಪರಭಾಷಿಗರಿಗೆ ನಾವು ಅವರದೇ ವಾಹಿನಿಗಳು, ಪತ್ರಿಕೆಗಳು, ಅವರದೇ ಭಾಷೆಯಲ್ಲಿ ಚಿತ್ರಗಳನ್ನು ನೀಡಿದ್ದೇವೆ. ಅವರದೆ ಭಾಷೆಯಲ್ಲಿಯೇ ನಾವು ಕಷ್ಟಪಟ್ಟು ಮಾತನಾಡಿದ್ದೇವೆ. ಈಗ ಕನ್ನಡ ಚಿತ್ರದ ಅಡಿಬರಹವನ್ನು ಇಂಗ್ಲೀಷ್ ನಲ್ಲಿ ಕೊಟ್ಟರೆ ಅವರಿಗಿದ್ದ ಕೊನೆಯ ಅನಿವಾರ್ಯತೆಯನ್ನು ನಾವೇ ಅಂದರೆ ಚಿತ್ರಕರ್ಮಿಗಳೇ ಕೊಂದುಹಾಕಿದಂತಾಗುತ್ತದೆಯೇ ಎನ್ನುವ ಪ್ರಶ್ನೆ ನನ್ನದು...
ಕೆಲಸದ ನಿಮಿತ್ತ ಬಾಂಬೆನಲ್ಲಿ ಒಂದಷ್ಟು ದಿನ ಬೀಡು ಬಿಟ್ಟಿದ್ದಾಗ ಸಿಕ್ಕಿದ್ದ ಗೆಳೆಯನೊಬ್ಬ ಉಪೇಂದ್ರ ಅವರ ದೊಡ್ಡ ಅಭಿಮಾನಿಯಾಗಿದ್ದ. ಸುಮಾರು ಹದಿನಾರಕ್ಕೂ ಹೆಚ್ಚು ಬಾರಿ ಅವರ ಎ ಚಿತ್ರವನ್ನು ಲೆಕ್ಕವಿಲ್ಲದಷ್ಟು ಬಾರಿ ಉಪೇಂದ್ರ ಚಿತ್ರವನ್ನು ನೋಡಿದ್ದ ಆತ ಸ್ವಲ್ಪ ಸ್ವಲ್ಪ ಕನ್ನಡ ಉಪೇಂದ್ರ ಅವರ ಚಿತ್ರಗಳನ್ನು ನೋಡಿಯೇ ಕಲಿತೆ ಎಂದಿದ್ದ. ಆಮೇಲೆ ನಾನೇ ಒಂದಷ್ಟು ಒಳ್ಳೊಳ್ಳೆಯ ಕನ್ನಡ ಚಿತ್ರಗಳ ಸಿಡಿ ಕೊಟ್ಟಿದ್ದೆ. ತೆಲುಗಿನ ಆರ್ಯ ಚಿತ್ರಕ್ಕೆ ಮರುಳಾಗಿದ್ದ ನಾನು ತೆಲುಗು ಕಲಿಯಲು ಪ್ರಯತ್ನಿಸಿದ್ದೆ. ಆದರೆ ನಮ್ಮಲ್ಲೇ ಇಂಗ್ಲೀಷ್ ಅಡಿಬರಹ ಹಾಕಿ, ನೋಡುವ ಸಿನೆಮಾವನ್ನು ಓದುವಂತೆ ಮಾಡುವುದು ಇಲ್ಲಿ ಅಂದರೆ ನಮ್ಮದೇ ಕನ್ನಡದ ನೆಲದಲ್ಲಿ ಎಷ್ಟರ ಮಟ್ಟಿಗೆ ಸರಿ ಎಂಬುದು ಪ್ರಶ್ನೆ.
ಹಾಗೆ ನೋಡಿದರೆ ಇಂಗ್ಲೀಷ್ ಅಡಿಬರಹ ಹಾಕುವುದರಿಂದ ಬೇರೆ ಭಾಷೆಯ ನೋಡುಗರನ್ನು ಕನ್ನಡ ಚಿತ್ರಕ್ಕೆ ಎಳೆದು ತರುವುದು ಸುಲಭ ಎನ್ನುವುದು ನಿಜವಾದರೂ ಚಿತ್ರಮಂದಿರಕ್ಕೆ ಕರೆತರುವ ಭರದಲ್ಲಿ ಅವರು ಭಾಷೆ ಕಲಿಯುವ/ಅರ್ಥೈಸಿಕೊಳ್ಳುವ ಪರಿಚಯಿಸಿಕೊಳ್ಳುವ ಅನಿವಾರ್ಯತೆ/ಅವಕಾಶವನ್ನು  ದೂರ ತಳ್ಳಿದಂತಾಗುವುದಿಲ್ಲವೇ?
ಹೊರರಾಜ್ಯದಲ್ಲಿ ಸಬ್ ಟೈಟಲ್ ಜೊತೆಗೆ, ನಮ್ಮಲ್ಲಿ ಸಬ್ ಟೈಟಲ್ ಇಲ್ಲದೆ ಬಿಡುಗಡೆ ಮಾಡಲು ತಾಂತ್ರಿಕವಾಗಿ ಒಂದಷ್ಟು ಕಾರಣಗಳಿವೆ. ಚಿತ್ರದ ಎರಡು ಆವೃತ್ತಿಯನ್ನು ಉಪಗ್ರಹ ವಿತರಣೆಗಾಗಿ ಅಪ್ಲೋಡ್ ಮಾಡಿಸಬೇಕಾಗುತ್ತದೆ. ಇಲ್ಲಿ ಎರೆಡೆರೆಡು ಖರ್ಚುಗಳಿವೆ. ಹಾಗೆಯೇ ಕ್ಯೂಬ್ ಅಥವಾ ಯು ಎಫ್ ಓ ಗಳಿಗೆ ಎರಡು ಸಿನಿಮಾದ ಖರ್ಚು ನೀಡಬೇಕಾಗಬಹುದು. ಆದರೆ ಕೋಟಿಗಟ್ಟಲೆ ಸಿನಿಮಾದಲ್ಲಿ ಲಕ್ಷದ ಖರ್ಚಿವು. 
ಏನೋ ಒಟ್ಟಿನಲ್ಲಿ ಕೆಲವು ನಮ್ಮಲ್ಲಿಯೇ ಪ್ರಾರಂಭವಾಗುತ್ತದೆ. ಒಳ್ಳೆಯದಕ್ಕೂ ಕೆಟ್ಟದ್ದಕ್ಕೋ ಎಂಬುದು ಗೊತ್ತಾಗದ ಸ್ಥಿತಿ. ನಮ್ಮ ಭಾಷೆಯ ಮೂಲಕವೇ, ನಮ್ಮ ಸಿನಿಮಾದ ಗುಣಮಟ್ಟ ವಿಶೇಷದ ಮೂಲಕವೇ ಬೇರೆ ಭಾಷಿಗರನ್ನು ತಲುಪೋಣ ಎನ್ನುವುದು ಸರಿ ಅಲ್ಲವೇ?
ಚರ್ಚಿಸಲು ಆಹ್ವಾನವಿದೆ.. ಏನಂತೀರಿ..?
ಬೇರೆ ಭಾಷೆಯ ಚಿತ್ರಗಳಿಗೆ ಕರ್ನಾಟಕದಲ್ಲಿ  ಕನ್ನಡ ಅಡಿಬರಹ ಬಳಸಿದರೆ ಎಲ್ಲರಿಗೂ ಅರ್ಥವಾಗುತ್ತದೆ ಎಂದು ನಾನು ಜಗತ್ತಿನ ಚಿತ್ರಗಳಿಗೆ ಕನ್ನಡ ಅಡಿಬರಹ ಬರೆಯುವ ಪ್ರಯತ್ನ ಮಾಡಿದ್ದೆ. ಇರಾನಿ, ಪರ್ಷಿಯನ್ ಚಿತ್ರಗಳಿಗೆ ಇಂಗ್ಲೀಷ್ ಅಡಿಬರಹವನ್ನು ಕನ್ನಡದಲ್ಲಿ ಬರೆದು ಅದನ್ನು ನೋಡಲು ಸಾಧ್ಯವಾದಾಗ ಖುಷಿಯಾಗಿದ್ದೆ. ಆದರೆ ಅದನ್ನು ಎಲ್ಲರಿಗೂ ಸಿಗುವಂತಾಗಲಿ ಎನ್ನುವ ಆಶಯದಿಂದ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಲು ನೋಡಿದಾಗ ಬೇಸರವಾಗಿತ್ತು. ಸಬ್ ಟೈಟಲ್ ಅಂತರ್ಜಾಲ ತಾಣದಲ್ಲಿ ತೆಲುಗು ತಮಿಳು ಬೆಂಗಾಲಿ ಭಾಷೆಯ ಆಯ್ಕೆ ಇತ್ತೇ ಹೊರತು ಕನ್ನಡ ಆಯ್ಕೆಗೆ ಅವಕಾಶವೇ ಇರಲಿಲ್ಲ. ಈ ಕುರಿತು ಆ ಸೈಟ್ ಗಳಿಗೆ ಇಮೇಲ್ ಮಾಡಿದ್ದೆ. ಆನಂತರ ಬೇರೆ ದಾರಿಕಾಣದೆ ಭಾರತೀಯ ಭಾಷೆಗಳ ಅಡಿಯಲ್ಲಿ ತೆಲುಗು ಭಾಷೆಯ ಅಡಿಯಲ್ಲಿ ಕನ್ನಡ ಸಬ್ ಟೈಟಲ್ ಅಪ್ಲೋಡ್ ಮಾಡಿದ್ದೆ.
ಈಗ ಕನ್ನಡ ಚಿತ್ರಗಳಿಗೆ ಇಂಗ್ಲೀಷ್ ಅಡಿಬರಹವಿದೆ.. ಬಹುಶ: ಕನ್ನಡ ಬಾರದ ಪ್ರೇಕ್ಷಕ ಧ್ವನಿ ಕೇಳಿಸಿಕೊಂಡು ಇಂಗ್ಲೀಷ್ ಓದಿಕೊಂಡು ಕನ್ನಡ ಪರಿಚಯಿಸಿಕೊಳ್ಳುವ ಉಲ್ಟಾ ಕಲಿಕೆ ನಡೆಯಬಹುದಾ? ಕಾದುನೋಡಬೇಕಾಗಿದೆ.
ಅಂದ ಹಾಗೆ ಜಪಾನಿ ಭಾಷೆಯ ಕಾದಂಬರಿ ಸಾಲ್ವೇಶನ್ ಆಫ್ ಎ ಸೈಂಟ್ ಕಾದಂಬರಿ ಓದುತ್ತಿದ್ದೇನೆ. ಇನ್ನು ಕೆಲವೇ ಪುಟಗಳಿರುವ ಕಾದಂಬರಿ ಬರೆದದ್ದು ಕಇಗೋ ಹಿಗಶಿನೋ. ಓಡಿಸಿಕೊಂಡು ಹೋಗುವ ಕಾದಂಬರಿಯ ಕಥಾವಸ್ತು ಕುತೂಹಲಕರವಾಗಿದೆ. ಆದರೆ ಹೆಸರುಗಳನ್ನೂ ನೆನಪಿಟ್ಟುಕೊಂಡು ಓದುವ ಸಾಹಸ ಮಾತ್ರ ಫಜೀತಿ. ಅಂದ ಹಾಗೆ ಹಿಗಶಿನೋ ಪರಿಚಯವಾದದ್ದು ದೃಶ್ಯಂ ಚಿತ್ರದಿಂದ. ಅದರ ಮೂಲ ಸಿನಿಮಾದ ಕಾದಂಬರಿಗಾರ ಈತ. ಆ ಕಾದಂಬರಿ ಓದಿದ ನಂತರ ಪುಣ್ಯಾತ್ಮ ಇನ್ನೇನು ಬರೆದಿರಬಹುದು ಎಂದು ಹುಡುಕಾಡಿದಾಗ ಸಿಕ್ಕಿದ್ದು ಇದು.
ಸಿಕ್ಕರೆ ಓದಿ.

Saturday, September 5, 2015

ರಿಮೇಕ್? ನನಗೆ ಗೊತ್ತಿಲ್ಲ..

ಅದನ್ನು ಧೈರ್ಯ ಎನ್ನಬೇಕೆ ಎಂಬುದು ಪ್ರಶ್ನೆ. ನಮಗೆಲ್ಲಾ ಗೊತ್ತಿರುವಂತೆ ಕೇಸ್ ನಂಬರ್ 18/9 ಚಿತ್ರದ ಮೂಲ ತಮಿಳು. ನಿರ್ದೇಶಕ ಬಾಲಾಜಿ ಶಕ್ತಿವೇಲು ಸುಮಾರು ಒಂದೂವರೆ ವರ್ಷ ಸಮಯ ತೆಗೆದುಕೊಂಡು ರಚಿಸಿದ ಸ್ಕ್ರಿಪ್ಟ್ ಅದು. ಬಿಡುಗಡೆಯಾಗಿ ಸೂಪರ್ ಹಿಟ್ ಆದ ಚಿತ್ರ ಆಸ್ಕರ್ ವರೆಗೂ ಸಾಗಿತ್ತು. ಅದನ್ನೇ ಕನ್ನಡದಲ್ಲಿ ಮಾಡಿದರು. ವಿಷಯ ಏನೆಂದರೆ ಆ ಚಿತ್ರದ್ದು ನಿಜವಾದ ಕತೆ, ಆ ಕತೆಯಲ್ಲಿರುವ ಪಾತ್ರಧಾರಿಗಳು ಈವತ್ತಿಗೂ ಬೆಂಗಳೂರಿನಲ್ಲಿದ್ದಾರೆ, ಜೆಪಿ ನಗರದಲ್ಲೋ ಎಲ್ಲೋ ಇದ್ದಾರೆ ಎಂದಿದ್ದರು ನಿರ್ದೇಶಕರು. ಅಷ್ಟೇ ಅಲ್ಲ, ವಾಹಿನಿಯೊಂದರಲ್ಲಿ ನೇರ ಪ್ರಸಾರದಲ್ಲಿ ದಿನಪೂರ್ತಿ ಅದರ ಬಗ್ಗೆ ಮಾತನಾಡಿದ್ದರು.
ಹಾಗಾದರೆ ಅದು ಧೈರ್ಯವಾ? ಕಣ್ಮುಂದೆ ಅದು ರಿಮೇಕ್ ಎಂಬುದು ಗೊತ್ತಿದ್ದರೂ ಒಬ್ಬ ನಿರ್ದೇಶಕ ಪ್ರಜ್ಞಾಪೂರ್ವಕವಾಗಿ ಅದೇಗೆ ಹಾಗೆ ಹೇಳಲು ಸಾಧ್ಯ. ಅದಕ್ಕಾಗಿ ಪುರಾವೆ ಸೃಷ್ಟಿಸಾಲು ಸಾಧ್ಯ. ಹಾಗೆಯೇ ಮತ್ತೊಂದು ಚಿತ್ರದ ಕನ್ನಡ ಅವತರಣಿಕೆಯಲ್ಲಿ ಇದು ಮಂಡ್ಯ ಬಳಿ ನಡೆದ ಸತ್ಯ ಘಟನೆ ಅದರ ನಿಜವಾದ ವ್ಯಕ್ತಿಗಳು ಇವರು ಎಂದು ಸಿನಿಮಾದಲ್ಲಿಯೇ ತೋರಿಸಲಾಗಿತ್ತು.
ಈಗ ಸಧ್ಯಕ್ಕೆ ಆಟಗಾರ ಚಿತ್ರದ ನಿರ್ದೇಶಕರು ನಾನು ರಿಮೇಕ್ ಮಾಡುವುದಿಲ್ಲ, ಅಡುಥದು ಚಿತ್ರದ ರಿಮೇಕ್ ಆಟಗಾರ ಎಂಬುದು ಸುಳ್ಳು ಎಂದಿದ್ದಾರೆ. ನನ್ನದು ಅಗಾಥಕ್ರಿಸ್ಟಿ ಕಾದಂಬರಿ ಪ್ರೇರಿತ ಸ್ವಮೇಕ್ ಎನ್ನುವ ಮಾತನಾಡಿದ್ದಾರೆ. ಹಾಗಾದರೆ ಇದು ಧೈರ್ಯವೇ?
ಕಣ್ಮುಂದೆ ಪುರಾವೆ ಇಟ್ಟು ತೋರಿಸಿದರೂ ಅದಲ್ಲ ಎಂದರೆ ಅದನ್ನು ಏನನ್ನೋದು ಅಲ್ಲವೇ? ಇಷ್ಟಕ್ಕೂ ರಿಮೇಕ್ ಸ್ವಮೇಕ್ ನಡುವೆ ರಿಮೇಕ್ ಮಾಡಲೇಬಾರದು ಎಂದು ಕಾನೂನು ಇಲ್ಲವಲ್ಲ. ಆಪ್ತಮಿತ್ರ ನೋಡಿದ ಸೂಪರ್ ಸ್ಟಾರ್ ರಜನಿ ಚಂದ್ರಮುಖಿಯನ್ನು ಭಟ್ಟಿ ಇಳಿಸಲಿಲ್ಲವೇ? ಘಜನಿ ಚಿತ್ರದಲ್ಲಿನ ಅಷ್ಟೂ ಪ್ರೀತಿಯ ದೃಶ್ಯಗಳು ಇಂಗ್ಲಿಷ್ ಚಿತ್ರದ ನಕಲಲ್ಲವೇ? ಲೈಫ್ ಇನ್ ಎ ಮೆಟ್ರೋ ಚಿತ್ರದ ನಾಲ್ಕು ಕತೆಗಳು ನಾಲ್ಕು ಚಿತ್ರಗಳಿಂದ ಯಥಾವತ್ತಾಗಿ ಕಾಪಿ ಮಾಡಿದ್ದಲ್ಲವೇ? ಎಷ್ಟು ಬಾರಿ ನೋಡಿದರೂ ಬೋರ್ ಆಗದ ಬರ್ಫಿ ಚಿತ್ರದ ಪ್ರತಿ ದೃಶ್ಯವೂ ಎರವಲು ಅಲ್ಲವೇ?
ರವಿಚಂದ್ರನ್ ಯಶಸ್ವಿ ಚಿತ್ರಗಳೆಲ್ಲಿ  ರಿಮೇಕ್ ಸಿಂಹಪಾಲಿದೆ. ಆದರೆ ಅವರ ರಿಮೇಕ್ ಗೆ ನಾವು ಅಂದರೆ ಪ್ರೇಕ್ಷಕರು ಮನಸೋತಿದ್ದೇವೆ. ಎಷ್ಟು ಚೆನ್ನಾಗಿ ರಿಮೇಕ್ ಮಾಡಿದ್ದಾರೆ ಎಂದು ಖುಷಿ ಪಟ್ಟಿದ್ದೇವೆ ಅಲ್ಲವೇ. ಅನುರಾಗ್ ಬಸು ಬರ್ಫಿ ಚಿತ್ರದಲ್ಲಿನ ಎಲ್ಲಾ ದೃಶ್ಯಗಳು ಕಾಪಿ ಆದರೂ ಅದನ್ನೆಲ್ಲಾ ಸೇರಿಸಿ ಹೆಣೆದ ಕತೆಗೆ ನಾವು ಮಾರುಹೊಗಿದ್ದೇವೆ. ಇಲ್ಲಿ ರಿಮೇಕ್ ಸ್ವಮೇಕ್ ಮುಖ್ಯವಾಗಿಲ್ಲ. ಬದಲಿಗೆ ಅದನ್ನು ಹೆಣೆದ ಪರಿಗೆ ಅನುವಾದಿಸಿದ ರೀತಿಗೆ ಮಾರುಹೋಗುವುದು ನಮ್ಮ ಜಾಯಮಾನ. ಚಿತ್ರ ಚೆನ್ನಾಗಿದೆ ಎಂದರೆ ಮತ್ತದನ್ನು ಚೆನ್ನಾಗಿ ಮಾಡಿದ್ದಾರೆ ಎಂದರೆ ಅದರ ಇತರೆ ವಿಷಯಗಳು ಗೌಣ. ಹಾಗಂತ ಶಾಟ್ ಗಳಿಂದ ಹಿಡಿದು, ಪಾತ್ರಧಾರಿಗಳ ಬಟ್ಟೆಗಳನ್ನು ಅನುಕರಿಸಿ ಪಕ್ಕಾ ಜೆರಾಕ್ಸ್ ಮಾಡುವುದು ಅಷ್ಟು ಸಮಂಜಸವಲ್ಲ. ಆ ಕತೆಯ ಭಾವವನ್ನು ಇಲ್ಲಿಯ ಸೊಗಡಿನ ಕತೆಗೆ ಅಳವಡಿಸಿದರೆ ಅದಕ್ಕಿಂತ ಚಂದವಾಗುವುದರಲ್ಲಿ ಸಂದೇಹವಿಲ್ಲ.
ಬಾಜಿಗರ್ ಚಿತ್ರವನ್ನು ತೆಗೆದುಕೊಳ್ಳಿ. ಎ ಕಿಸ್ ಬಿಫೋರ್ ಡೈಯಿಂಗ್ ಸಿನಿಮಾಕ್ಕೆ ಹಿನ್ನೆಲೆಕೊಟ್ಟು ನಾಯಕನ ಪ್ರತಿಕಾರಕ್ಕೆ ಕಾರಣ ಹೆಣೆದದ್ದರಿಂದ ಮ್ಯಾಟ್ ದಿಲ್ಲೊನ್ ಗಿಂತ ಶಾರುಖ್ ಇಷ್ಟ ಆಗುತ್ತಾರೆ. ಅಣ್ಣಯ್ಯ, ರಾಮಾಚಾರಿ ಮೂಲಕ್ಕಿಂತ ನಮ್ಮಲ್ಲೇ ಖುಷಿ ಕೊಟ್ಟಿವೆ. ಕೋರಿಯನ್ ಸಸ್ಪೆಕ್ಟ್ ಎಕ್ಷ್ ನ ಮೂಲ ತಿರುಳನ್ನು ತೆಗೆದುಕೊಂಡು ಇಲ್ಲಿಯ ಕತೆ ಹೆಣೆದ ದೃಷ್ಯಂ ಮೂಲಕ್ಕಿಂತ ಸಾವಿರಪಾಲು ಥ್ರಿಲ್ ಕೊಡುತ್ತದೆ. ಹೀಗೆ ರಿಮೇಕ್ ನಲ್ಲಿಯೂ ಸೂಪರ್ ಎನಿಸುವ ಚಿತ್ರಗಳನ್ನು ನಾವು ನೋಡಿದ್ದೇವೆ. ಆರನೆಯ ರಿಮೇಕ್ ಆದ ಟೈಟಾನಿಕ್ ಎಲ್ಲಾ ಟೈಟಾನಿಕ್ ಚಿತ್ರಗಳಿಗಿಂತ ಮುದ ನೀಡಿದೆ ಅಲ್ಲವೇ?
ಹಾಗಾಗಿ ಎಲ್ಲ ಕಡೆ ರಿಮೇಕ್ ಇದೆ. ಆದರೆ ಅದನ್ನು ಸಮರ್ಥವಾಗಿ ನಿರೂಪಿಸದೇ ಇದ್ದಾಗ ಮೂಲವೇ ಎಷ್ಟು ಚೆನ್ನಾಗಿತ್ತು ಎನಿಸಿಕೊಳ್ಳುತ್ತದೆ.  ಜಾನಿ ಡೆಪ್ ಅಂಜೆಲಿನಾ ಜೂಲಿ ಇದ್ದೂ ನಮಗೆ ಟೂರಿಸ್ಟ್ ಗಿಂತ ಫ್ರೆಂಚ್ ಚಿತ್ರ ಅಂತೋನಿ ಜಿಮ್ಮರ್ ಇಷ್ಟವಾಗುತ್ತದೆ, ಹಾಗೆಯೇ ದಿ ಗರ್ಲ್ ವಿಥ್ ಡ್ರ್ಯಾಗನ್ ಟಾಟೂ, ಓಲ್ಡ್ ಬಾಯ್ ಮುಂತಾದ ಚಿತ್ರಗಳ ರಿಮೇಕ್ ಪೇಲವ ಎನಿಸುತ್ತದೆ. ಕನ್ನಡದಲ್ಲಿಯೂ ಅಂತಹ ಪಟ್ಟಿ ಮಾಡಬಹುದಾಗಿದೆ. ಆದರೆ ಅದಲ್ಲವೇ ಅಲ್ಲಾ ಎನ್ನುವ ಧೈರ್ಯಕ್ಕೆ ಮಾತ್ರ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಸಧ್ಯದ ಚರ್ಚೆಯ ಸಂಗತಿ.
ಪ್ರೇಮಾಭಿಷೇಕ ಎನ್ನುವ ಕನ್ನಡ ಚಿತ್ರವೊಂದರ ಪತ್ರಿಕಾಗೋಷ್ಠಿ. ಅದರಲ್ಲಿ ನಿರ್ದೇಶಕರು ನಾನು ಶಿಕ್ಷಕ, ಒಂದೊಳ್ಳೆ ಕತೆ ಮಾಡಿ ಚಿತ್ರ ನಿರ್ದೇಶನ ಅಮಡಿ ನಾನೇ ನಾಯಕನಾಗಿದ್ದೇನೆ ಎಂದು ತಮ್ಮನ್ನೇ ಪರಿಚಯಿಸಿಕೊಂಡಿದ್ದರು. ಅದಾದ ಮೇಲೆ ತಮ್ಮ ಬಗ್ಗೆ ಹೇಳುತ್ತಾ ನಾನು ಆಗಾಗ ಸಣ್ಣಕವಿತೆಗಳನ್ನು ಬರೆಯುತ್ತೇನೆ, 
ಉದಾಹರಣೆಗೆ ಎಂದು ಒಂದು ಕವನವನ್ನು ಓದಿದರು.
ಅವಳು ಎದುರಿಗೆ ಸಿಕ್ಕಳು
ನನ್ನನ್ನು ನೋಡಿ ನಕ್ಕಳು
ನಮಗೀಗ ಎರಡು ಮಕ್ಕಳು 
ಎಂದರು. ಆಶ್ಚರ್ಯಚಕಿತರಾದ ಮಾಧ್ಯಮದವರು ಇದು ಡುಂಡಿರಾಜ್ ಅವರ ಕವನ ಅಲ್ಲವೇ ಎನ್ನುವ ಪ್ರಶ್ನೆಗೆ ಅವರ ಉತ್ತರ ಹೀಗಿತ್ತು.
"ಏನೋಪ್ಪಾ.. ಅವರೂ ಬರೆದಿರಬಹುದು.. ನನಗೆ ಗೊತ್ತಿಲ್ಲ..."

Friday, September 4, 2015

ಆಟ ಅಡ್ಸೋನು ಎಲ್ಲೋ ಕುಂತವ್ನೆ...

ಮೃತ್ಯು ಭಯ ಕಾಡಿದಾಗ ಮನುಷ್ಯ ಸತ್ಯವನ್ನು ಬಾಯಿಬಿಟ್ಟೆ ಬಿಡುತ್ತಾನೆ, ಸಾವು ಕಣ್ಣೆದುರಿಗೆ ಕಂಡಾಗ ಆತನಿಗೆ ತನ್ನ ತಪ್ಪಿನ ಅರಿವಾಗುತ್ತದೆ..ಇದು ನನ್ನ ಮೊದಲ ಚಿತ್ರದ ಒಂದು ಸಾಲಿನ ಎಳೆ. ಹಾಗೆ ನೋಡಿದರೆ ಮಾರ್ಚ್ 23 ಚಿತ್ರವನ್ನು ಒಂದು ಕತೆ ಬರೆದು ಅದಕ್ಕೆ ಚಿತ್ರಕತೆ ಹೆಣೆದು ಆನಂತರ ಮಾಡಿದ ಚಿತ್ರವಲ್ಲ. ಒಂದು ಸಿನಿಮಾ ಆಫೀಸ್ ನಲ್ಲಿ ಕುಳಿತಿದ್ದಾಗ ತಿಂಗಳು ಗಟ್ಟಲೆ ಆ ಸಿನಿಮಾ ಸೆಟ್ಟೇರದೇ ಇದ್ದಾಗ ಗೆಳೆಯರೆಲ್ಲಾ ಸೇರಿ ನಮ್ಮೆಲ್ಲರ ಬಳಿ ಇಷ್ಟು ಹಣವಿದೆ, ಇದಕ್ಕೆ ತಕ್ಕ ಹಾಗೆ ಒಂದು ಥ್ರಿಲ್ಲರ್ ಚಿತ್ರವನ್ಯಾಕೆ ಮಾಡಬಾರದು ಎಂದಿದ್ದರು. ಸರಿ. ಥ್ರಿಲ್ಲರ್ ಹೇಗೆ ಮಾಡಬಹುದು, ಯಾವ ಕತೆ ಆಯ್ಕೆ ಮಾಡಿಕೊಳ್ಳಬಹುದು  ಎಂದೆಲ್ಲಾ ತಲೆ ಕೆಡಿಸಿಕೊಂಡಿದ್ದ ನನಗೆ ಮಾಮೂಲಿ ಒಂದು ಕೊಲೆ ನಡೆಯುತ್ತದೆ, ಅದನ್ನು ಹುಡುಕುತ್ತಾರೆ ಎಂದೋ, ಅಥವಾ ಒಂದು ಪ್ರದೇಶದಲ್ಲಿ ಅಥವಾ ಒಂದು ನಿರ್ಧಿಷ್ಟ ಜಾಗದಲ್ಲಿ ಒಂದಷ್ಟು ಜನ ಟ್ರ್ಯಾಪ್ ಆಗುತ್ತಾರೆ, ಬಿಡಿಸಿಕೊಂದು ಬರಲು ಒದ್ದಾಡುತ್ತಾರೆ.. ಎಂದೋ ಕತೆ ಮಾಡುವುದು ಅಷ್ಟು ಸೇರಲಿಲ್ಲ. ಈ ನಡುವೆ ನಾನು ಸಾಕಷ್ಟು ತಲೆ ಕೆಡಿಸಿಕೊಂಡಿದ್ದು ಬ್ಲೇರ್ ವಿಚ್ ಪ್ರಾಜೆಕ್ಟ್ ಬಗ್ಗೆ. ಅಷ್ಟರಲ್ಲಾಗಲೇ ಟಿವಿ ವಾಹಿನಿಯೊಂದರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧೀ ಹಂತಕ  ಶಿವರಾಸನ್ ಮತ್ತವನ ತಂಡ ಸತ್ತ ಕೋಣನಕುಂಟೆ ಒಂಟಿ ಮನೆಯ ಸುತ್ತಾ ಈಗಲೂ ನರಳುವ, ಯಾರೋ ಓಡಾಡುವ ಸಪ್ಪಳ ಕೇಳಿ ಬರುತ್ತಿದೆ, ಜನ ಅಲ್ಲಿಗೆ ಹೋಗಲು ಹೆದರುತ್ತಿದ್ದಾರೆ ಎನ್ನುವ ಸುದ್ದಿ ಪ್ರಸಾರವಾಗಿತ್ತು. ನಾನು ಅದನ್ನೇ ಸಿನಿಮಾ ಮಾಡಿದರೆ ಹೇಗೆ ಎಂದು ಯೋಚಿಸಿದೆ. ಕತೆ ಇಷ್ಟೇ. ಸುದ್ದಿ ವಾಹಿನಿಯ ಸುದ್ದಿ ನೋಡಿದ ಐದಾರು ಯುವ ಸಿನಿಮಾಮಂದಿ ಅಥ್ವಾ ಸಿನಿಮಾ ವಿದ್ಯಾರ್ಥಿಗಳು ಅದನ್ನು ಲೈವ್ ಚಿತ್ರೀಕರಿಸಲು ಅದೊಂದು ದಿನ ಕೋಣನ ಕುಂಟೆ ಮನೆಗೆ ಹೋಗುತ್ತಾರೆ. ಆದರೆ ಯಾರೂ ವಾಪಸ್ಸು ಬರುವುದಿಲ್ಲ. ಮೂರುದಿನದ ನಂತರ ಅವರ ಕ್ಯಾಮೆರಾ ಮತ್ತು ಟೇಪ್ ಸಿಗುತ್ತದೆ. ಅದರಲ್ಲಿನ ವೀಡಿಯೊದ ಸಂಕಲಿತ ಚಿತ್ರಣವೇ ನಮ್ಮ ಸಿನಿಮಾ ಎಂದೇ. ಆದರೆ ಗೆಳೆಯರು ಅಯ್ಯೋ ಅದನ್ನೇ ಹೇಗೋ ಮಾರಾಯ ಎರಡು ಘಂಟೆ ಎಳೀತೀಯಾ ಜನ ಎದ್ದು ಹೋಗ್ತಾರೆ ಎಂದಿದ್ದರು.
ಈ ನಡುವೆ ನನಗೆ ಎ ವೆಡ್ನೆಸ್ ಡೇ ಇಷ್ಟವಾಗಿತ್ತು, ಸಾಮಾನ್ಯನೊಬ್ಬ ದೊಡ್ಡ ಮಟ್ಟದ ಮಾಸ್ಟರ್ ಪ್ಲಾನ್ ಮಾಡುವ ಕತೆ ಹಿಡಿಸಿತ್ತು. ನಮ್ಮಲ್ಲೂ ಒಬ್ಬ ಅತೀ ಸಾಮಾನ್ಯನನ್ನು ನಾಯಕನನ್ನಾಗಿ ಮಾಡಿ, ಒಂದು ಮಾಸ್ಟರ್ ಪ್ಲಾನ್, ಒಂದು ದಿನದ ಕತೆ ಆಯ್ಕೆ ಮಾಡಿಕೊಂಡೆವು. ಆವತ್ತಿನ ಜ್ವಲಂತ ವಿವಾದಗಳು ಯಾವುದು ಎಂದಾಗ, ನಿತ್ಯಾನಂದ ರಂಜಿತ ಪ್ರಕರಣ, ರಾಜಕಾರಣಿ ಅನೈತಿಕ ಪ್ರಕರಣ, ಸರಣಿ ಹಂತಕ ಮೋಹನ್ ಪ್ರಕರಣ ಹೀಗೆ .. ಒಂದಷ್ಟು ಘಟನೆಗಳನ್ನೂ ಆಯ್ಕೆ ಮಾಡಿಕೊಂಡು ಅದಕ್ಕೆ ಚಿತ್ರಕತೆ ಹೆಣೆದು ಸಿನಿಮಾ ಮಾಡಿದ್ದಾಯಿತು.
ಆನಂತರದ್ದು ಏನೇನೋ ಆಯಿತು ಬಿಡಿ. ಮೊನ್ನೆ ಯಾರೋ ಗೆಳೆಯರು ಆಟಗಾರ ಸಿನಿಮಾ ನೋಡಿ, ಗುರು ನೀನು ಹೇಳಿದ್ಯಲ್ಲಾ ನಿನ್ನ ಸಿನಿಮಾದ ಬಗ್ಗೆ ಅದೇ ಕತೆ ನೋಡು, ಅವರು ಸಿನಿಮಾ ಮಾಡಿ ಬಿಡುಗಡೆ ಮಾಡಿದ್ದಾರೆ, ನೀನು ಡಬ್ಬದಲ್ಲೇ ಇಟ್ಟುಕೊಂಡಿದ್ದೀಯ ಎಂದರು. ಇದ್ದರೂ ಇರಬಹುದು ಎಂದುಕೊಂಡೆ. ಒಂದು ಆಲೋಚನೆ ಮತ್ತೊಬ್ಬರಿಗೆ ಬರದಿರಲು ಅದೇನೋ ಅಂತಹ ಗ್ರೇಟ್ ಥಾಟ್ ಅಲ್ಲ ಬಿಡಪ್ಪ.. ಸಿನಿಮಾ ಇಷ್ಟವಾಯ್ತಾ ಖುಷಿ ಪಡು ಎಂದು ಅವನಿಗೆ ದಬಾಯಿಸಿದೆ.
ಆನಂತರ ಆಟಗಾರ ನೋಡಿದೆ. ಅದರ ವಿಮರ್ಶೆ ಬಿಡಿ. ನಮ್ಮ ಸಿನೆಮಾಕ್ಕೂ ಅದಕ್ಕೂ ಯಾವುದೇ ಸಾಮ್ಯತೆಯಿಲ್ಲದಿದ್ದದ್ದು ಖುಷಿಯ ಸಂಗತಿಯೇ. ಅದನ್ನೇ ಕರೆ ಮಾಡಿ ಹೇಳಿದೆ ಆತನಿಗೆ. ಆಟಗಾರ ಚಿತ್ರದ ಕತೆ ಅಗಾಥಕ್ರಿಷ್ಟಿ ಕಾದಂಬರಿಯ ಮೂಲದ ಕತೆಯೋ, ಅದನ್ನು ಆಧರಿಸಿ ತಯಾರಾದ ನಾಲ್ಕೈದು ಚಿತ್ರಗಳ ಅವತರಣಿಕೆಯೋ ಎನ್ನುವುದು ವಿಷಯವಲ್ಲ. ಹಾಗೆ ನೋಡಿದರೆ ಆಟಗಾರ ರಿಮೇಕ್ ಚಿತ್ರ. ತಮಿಳಿನಲ್ಲಿ ಅಷ್ಟಾಗಿ ಸದ್ದೇ ಮಾಡದ ಅಡುಥದು ಚಿತ್ರದ ಕನ್ನಡ ಅವತರಣಿಕೆ. 2011 ರಾಲಿ ತೆರೆಕಂಡ ಈ ಚಿತ್ರವನ್ನು ಥಕ್ಕಳಿ ಶ್ರೀನಿವಾಸನ್ ನಿರ್ದೇಶನ ಮಾಡಿದ್ದರು. ಬಹುತೇಕ ಹೊಸಬರೇ ನಟಿಸಿದ್ದ ಈ ಚಿತ್ರದಲ್ಲಿ ಅನಂತನಾಗ್ ಪಾತ್ರವನ್ನು ನಾಸರ್ ನಿರ್ವಹಿಸಿದ್ದರು. ಅಡುಥದು ಚಿತ್ರದ ಮಕ್ಕಿಕಾಮಕ್ಕಿ ಕನ್ನಡ ಅವತರಣಿಕೆಯಾದ ಆಟಗಾರ ಅಧಿಕೃತ ರಿಮೇಕೋ ಅನಧಿಕೃತ ರಿಮೇಕೋ ಗೊತ್ತಿಲ್ಲ.  
ಒಂದಷ್ಟು ವಿರಾಮವೋ, ಏನೋ ಚಿತ್ರರಂಗದಿಂದ ಅನಾಮತ್ತು ಎರಡು ವರ್ಷ ದೂರ ಇದ್ದದ್ದು ಆಯಿತು. ಆಕ್ಷನ್ ಕಟ್ ಪ್ರಪಂಚದಿಂದ ಬೇರೆ ಪ್ರಪಂಚಕ್ಕೆ ತೆರೆದುಕೊಂಡಿದ್ದೂ ಆಯಿತು. ಈಗ ಮತ್ತೆ ಹಳೆಯ ಕಡತಗಳಿಗೆ ಮನಸ್ಸು ಹೊರಳಿದೆ. ಹೊಸ ಚಿತ್ರಕ್ಕೆ ತಯಾರಿ ನಡೆದು, ಸ್ಕ್ರಿಪ್ಟ್ ಮುಗಿದಿದೆ. ಮೊನ್ನೆ ಲೊಕೇಶನ್ ಹಂಟಿಂಗ್ ಕೂಡ ಮಾಡಿದ್ದಾಗಿದೆ. ಇನ್ನೂ ಕಾಸ್ಟಿಂಗ್ ಅಥವಾ ತಾರಾಗಣದ ಆಯ್ಕೆಯ ದೊಡ್ಡ ಕೆಲಸ ಬಾಕಿಯಿದೆ.
ಕಲಾವಿದ ಆಕಾಂಕ್ಷಿಗಳು ಫೋಟೋ ಡೀಟೇಲ್ಸ್ ಅನ್ನು ಇಮೇಲ್ ಮಾಡಿದರೆ ಒಮ್ಮೆ ಪರಿಗಣನೆಗೆ ತೆಗೆದುಕೊಳ್ಳಬಹುದು.
ನಮಸ್ಕಾರ.

Thursday, April 2, 2015

ಸೇವ್ ದಿ ಕ್ಯಾಟ್ ಪುಸ್ತಕ ಮತ್ತು ಕೃಷ್ಣಲೀಲಾ ಸಿನಿಮಾ:

ಸೇವ್ ದಿ ಕ್ಯಾಟ್ ಪುಸ್ತಕವನ್ನು ಓದಿರಬಹುದು. ಚಿತ್ರಕತೆ, ಸಿನಿಮಾ ಜಾನ್ರ್ ಬಗ್ಗೆ ಚಿತ್ರಕರ್ಮಿ ಓದಲೇಬೇಕಾದ ಪುಸ್ತಕವದು. ಹಾಗಂತ ಆ ಪುಸ್ತಕದಲ್ಲಿ ಅದ್ಭುತವಾದದ್ದೇನೂ ಹೇಳಿಲ್ಲ. ಸರಳವಾಗಿ ಸಿನಿಮಾ ಹೀಗೆ ಮತ್ತು ಇಷ್ಟೇ ಎಂಬುದನ್ನು ಹೇಳಲಾಗಿದೆ.
ಏಕೆಂದರೆ ಚಿತ್ರದ ಕತೆ ಚಿತ್ರಕತೆಯಲ್ಲಿ ಹಲವಾರು ಗೊಂದಲಗಳಿವೆ. ಹಾಗೆಯೇ ಸ್ಟಾರ್ ಸಿನಿಮಾ, ಇಮೇಜ್, ವಾಸ್ತವ ಕತೆ, ಮಸಾಲೆ, ಮನರಂಜನೆ, ಹಾಸ್ಯ ಹೀಗೆ ಎಲ್ಲವನ್ನೂ ಬೇರೆಯದೇ ಆದ ನಿಟ್ಟಿನಲ್ಲಿ ನೋಡಲಾಗುತ್ತದೆ. ಅದು ಹಾಗಲ್ಲ. ಎಲ್ಲಾ ಒಂದೇ ಎಂಬುದನ್ನು ಪ್ರತಿಪಾದಿಸುವ ಪುಸ್ತಕವದು. ಸಂಪೂರ್ಣವಾಗಿ ಕಥೆ ಮಾಡಿಕೊಳ್ಳಿ, ಚಿತ್ರಕತೆಯ ಅವಶ್ಯವಿಲ್ಲ. ಕತೆ ಚಿಕ್ಕ ಎಳೆಯಾಗಿದ್ದಾಗ ಮಾತ್ರ  ಚಿತ್ರಕತೆ ಬಗ್ಗೆ ತಲೆಕೆಡಿಸಿಕೊಳ್ಳಿ ಎನ್ನುತ್ತಾನೆ ಲೇಖಕ, ಸಿನಿಮಾ ಸಂಶೋಧಕ ಬ್ಲೇಕ್ ಸ್ನೈಡರ್. ಅದು ನಿಜವೂ ಹೌದು. ಕತೆ ವಿಸ್ತೃತ ಮತ್ತು ವಿವರವಾಗಿದ್ದಾಗ ಸ್ಪಷ್ಟವಾಗಿದ್ದಾಗ ಚಿತ್ರಕತೆ ಅಲ್ಲಿಯೇ ಇರುತ್ತದೆ. ಅದಕ್ಕಾಗಿ ವಿಶೇಷವಾಗಿ ಬರೆಯುವ ಅವಶ್ಯಕತೆ ಇಲ್ಲ. ಉದಾಹರಣೆಗೆ ಮಣಿರತ್ನಂ ಅವರ ತಿರುಡಾ ತಿರುಡಾ ಚಿತ್ರದ ಉದಾಹರಣೆ ತೆಗೆದುಕೊಂಡರೆ ಇಲ್ಲಿ ಚಿತ್ರಕತೆಯೇ ಜೀವಾಳ. ಕತೆ ನೆಪಮಾತ್ರವಷ್ಟೇ. ಇತ್ತೀಚಿಗೆ ವಿಸ್ತೃತವಾದ ಕತೆ ಚಿತ್ರಕತೆ ಸರಿಯಾದ ಫಾರ್ಮ್ಯಾಟ್ ನಲ್ಲಿ ಕನ್ನಡದಲ್ಲಿ ಬಂದದ್ದು ಕಡಿಮೆಯೇ. ಸಿನಿಮಾ ಹಿಟ್ ಅಥವಾ ಫ್ಲಾಪ್ ಅದು ವಿಷಯವೇ ಬೇರೆ. ಆದರೆ ಕಸುಬುದಾರಿಕೆ ಮತ್ತು ಕುಸುರಿ ವಿಷಯದಲ್ಲಿ ಅದರ ಕೊರತೆ ಕಂಡದ್ದು ಸತ್ಯ.
ಹಾಗೆಯೇ ನಿರ್ದೇಶಕ ಶಶಾಂಕ್ ಅವರ ಕೃಷ್ಣಲೀಲಾ ಚಿತ್ರವನ್ನು ತೆಗೆದುಕೊಳ್ಳಿ. ಇತ್ತೀಚಿಗಿನ ವಿಸ್ತೃತವಾದ ಮತ್ತು ಸರಿಯಾದ ಫಾರ್ಮ್ಯಾಟ್ ಚಿತ್ರಕತೆಯ ಚಿತ್ರವದು. ಚಿತ್ರದ ದೃಶ್ಯದ ಭಾವ ಮತ್ತು ನಿರ್ದೇಶಕರ ಆಶಯ ಇಲ್ಲಿ ಭಿನ್ನ. ಅದು ನಿರೀಕ್ಷಿತ ಪರಿಣಾಮವನ್ನಂತೂ ಬೀರಿರುವುದು ಸತ್ಯ. ಏಕೆಂದರೆ ಚಿತ್ರದ ದೃಶ್ಯದ ಭಾವ ಗಂಭೀರವಾದದ್ದು, ನಿರ್ದೇಶಕರ ಆಶಯ ಪ್ರೇಕ್ಷಕರಿಗೆ ಮನ ಮುಟ್ಟಿಸುವುದು ಎರಡೂ ಇಲ್ಲಿ ವರ್ಕ್ ಔಟ್ ಆಗಿದೆ. ಅಕಸ್ಮಾತ್ ಏರುಪೇರಾಗಿದ್ದರೆ ನಿರ್ದೇಶಕ ಶಶಾಂಕ್ ಇಲ್ಲಿ ಸೋಲುತ್ತಿದ್ದರು. ಆದರೆ ಅವರ ಅನುಭವ ಮತ್ತು ವಿಶನ್ ಪಕ್ಕಾ ಇದೆ. ನಾವು ಎಷ್ಟೋ ಚಿತ್ರಗಳಲ್ಲಿ ನೋಡಿದ್ದೇವೆ. ಅಲ್ಲಿ ಹಾಸ್ಯ ದೃಶ್ಯವಿದ್ದರೆ ನಾವು ಅಳುತ್ತಿರುತ್ತೇವೆ, ತೆರೆಯ ಮೇಲೆ ಅಳುತ್ತಿದ್ದರೆ ನಾವು ನಗುತ್ತಿರುತ್ತೇವೆ. ಅಂದರೆ ದೃಶ್ಯದ ಭಾವ, ನಿರ್ದೇಶಕರ ಆಶಯ ಒಂದೇ ಇದ್ದರೂ ಅದು ಪ್ರೇಕ್ಷಕನ ಮನಮುಟ್ಟುವಲ್ಲಿ ಸೋತಿರುತ್ತದೆ. ಆದರೆ ಕೃಷ್ಣಲೀಲಾ ಚಿತ್ರದಲ್ಲಿನ ದೃಶ್ಯಗಳನ್ನು ಆಶಯಗಳನ್ನು ಸುಮ್ಮನೆ ಗಮನಿಸಿ.  
ತೆರೆಯ ಮೇಲೆ ಗಂಭೀರವಾಗಿ ಕತೆ ನಡೆಯುತ್ತಿದ್ದರೆ ಪಾತ್ರಧಾರಿಗಳು ಹಿಂಸೆ ಅನುಭವಿಸುತ್ತಿದ್ದರೆ, ಪ್ರೇಕ್ಷಕ ಇಷ್ಟ ಪಡುತ್ತಲೇ ಮರುಗುತ್ತಲೇ ಮನರಂಜನೆ ಪಡೆದುಕೊಳ್ಳುತ್ತಿರುತ್ತಾನೆ. ಹಾಗಾಗಿಯೇ ಇತ್ತೀಚಿನ ಚಿತ್ರಗಳಲ್ಲಿ ವಿಸ್ತೃತವಾದ ಕತೆಯ ಮತ್ತು ಅದಕ್ಕೆ ಅನುರೂಪವಾದ ಚಿತ್ರಕತೆಯ ಚಿತ್ರ ಎಂದರೆ ಕೃಷ್ಣಲೀಲಾ ಎನ್ನಬಹುದು. ಸಿನಿಮಾದ ಬಗೆಗೆ ಅದ್ಯಯನ ಮಾಡಬೇಕು ಎಂದಾಕ್ಷಣ ನಮ್ಮ ಕಣ್ಣು ಹಾರುವುದು ಹಾಲಿವುಡ್ ಬಾಲಿವುಡ್ ಮತ್ತು ವಿಮರ್ಶಾತ್ಮಕವಾಗಿ ಹೆಸರು ಮಾಡಿದ ಚಿತ್ರಗಳ ಮೇಲೆ. ಆದರೆ ಅದಲ್ಲ ಅದ್ಯಯನ. ನಮ್ಮಲ್ಲಿನ ಚಿತ್ರಗಳನ್ನು ಸೂಕ್ಷ್ಮವಾಗಿ ನೋಡಬೇಕು ಎನ್ನುತ್ತಾನೆ ಬ್ಲೇಕ್. ಹಾಗಾಗಿಯೇ ಕೃಷ್ಣಲೀಲಾ ಚಿತ್ರದ ಸ್ಕ್ರಿಪ್ಟ್ ಮತ್ತು ಸಿನಿಮಾ ಉತ್ತಮ ಎನ್ನಬಹುದು. ಭಿನ್ನ ವಿಭಿನ್ನ ವಿಶಿಷ್ಟ ಎಂದೆಲ್ಲಾ ವರ್ಗೀಕರಣ ಮಾಡುವ ಮೊದಲು ಸಿನಿಮಾ ಮಾಡಿ, ನೋಡಿಸಿ, ಅವರ ಅಭಿಪ್ರಾಯ ಪಡೆದುಕೊಳ್ಳಿ ಎನ್ನುವುದು ಅವನ ವಾದ ಕೂಡ. 

Saturday, February 28, 2015

ಅದು ಬೆಸ್ಟ್ ಆಫರ್....

ಅವನೊಬ್ಬ ಕಲಾಕೃತಿಗಳ ಮೌಲ್ಯ ಮಾಪಕ. ವಯಸ್ಸು ಇಳಿವಯಸ್ಸು. ಈ ರಿಸರ್ವಡ್ ಅಂತಾರಲ್ಲ ಅಂತಹ ವ್ಯಕ್ತಿತ್ವದವನು. ಯಾರನ್ನೂ ನಂಬುವುದಿಲ್ಲ.. ತನ್ನ ಮನೆಗೆ ಇದುವರೆವಿಗೂ ಯಾರನ್ನೂ ಕರೆದುಕೊಂಡು ಬಂದಿಲ್ಲ ಎಂದರೆ ಸುಮ್ಮನೆ ಊಹಿಸಿ...ಅವನ ಗುಣ ಎಂತಹದ್ದು ಎಂಬುದನ್ನು. ಜಗತ್ತಿನ ಮೂಳೆ ಮೂಲೆಯಿಂದ ಅವನಿಗೆ ಹರಾಜು ಪ್ರಕ್ರಿಯೆಗೆ ಕರೆ ಬರುತ್ತದೆ. ತುಂಬಾ ಸಲೀಸಾಗಿ ಹರಾಜು ಪ್ರಕ್ರಿಯೆ ನಡೆಸಿ ಕೊಡುವ ಆತ ಒಬ್ಬ ಪುರಾತನ ಅಮೂಲ್ಯ ಕಲಾಕೃತಿಗಳ ಸಂಗ್ರಾಹಕ ಕೂಡ ಹೌದು. ಅವನದೊಂದು ಉಪಾಯವಿದೆ. ಅವನ ಗೆಳೆಯ ಬಿಲ್ಲಿಯನ್ನು ಹರಾಜಿನ ಜಾಗದಲ್ಲಿ ಗಿರಾಕಿಯಾಗಿ ಕೂರಿಸುತ್ತಾನೆ. ಹಾಗೆಯೇ ತಾನೇ ಮೌಲ್ಯ ಮಾಪನ ಮಾಡುವ ಕಲಾಕೃತಿಯನ್ನು ಅದು ಒರಿಜಿನಲ್ ಆಗಿದ್ದರೂ ಅದು ಫೋರ್ಜರಿ ಎಂದು ಪ್ರಮಾಣೀಕರಿಸುತ್ತಾನೆ. ಅದರ ಮೂಲ ಬೆಲೆಗಿಂತ ತೀರಾ ಕಡಿಮೆ ಬೆಲೆಗೆ ಹರಾಜಾಗುವಂತೆ ಮಾಡಿ ತನ್ನ ಗೆಳೆಯ ಬಿಲ್ಲಿಯ ಕೈಯಲ್ಲಿ ಕೊಳ್ಳುವಂತೆ ಮಾಡುತ್ತಾನೆ. ಆನಂತರ ಬಿಲ್ಲಿಗೆ ಒಂದಷ್ಟು ಹಣ ಬೀಸಾಕುತ್ತಾನೆ. ವರ್ಷಗಳ ಈ ಕೆಲಸದಿಂದ ಅವನಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಅತ್ಯಮೂಲ್ಯ ಕಲಾಕೃತಿಗಳ ಸಂಗ್ರಹವಿದೆ. ಆದರೆ ಅದೆಲ್ಲವೂ ಅವನ ಮನೆಯ ರಹಸ್ಯಕೋಣೆಯಲ್ಲಿ ಬಂಧಿಯಾಗಿವೆ. ಅಲ್ಲಿಗೆ ಅವನನ್ನು ಬಿಟ್ಟರೆ ಬೇರೆಯವರ ಪ್ರವೇಶವೇ ಇಲ್ಲ. ಇಂತಿಪ್ಪವನಿಗೆ ಅದೊಂದು ದಿನ ಫೋನ್ ಬರುತ್ತದೆ. ಆ ಕಡೆಯಿಂದ  ನೋವಿನಿಂದ ಕೂಡಿದಂತೆ ಭಾಸವಾಗುವ ಹೆಣ್ಣು ಧ್ವನಿ ಮಾತನಾಡುತ್ತದೆ. ನಮ್ಮ ಬಂಗಲೆಯನ್ನು ನಾನು ಮಾರಾಟಮಾಡಬೇಕಾಗಿರುವುದರಿಂದಾಗಿ ಇಲ್ಲಿನ ಅತ್ಯಮೂಲ್ಯ ಕಲಾಕೃತಿಗಳನ್ನು ಮಾರಲು ನಂಗೆ ನಿಮ್ಮ ಸಹಾಯಬೇಕು, ಅದರ ಮೌಲ್ಯ ಮಾಪನ ಮಾಡಿಕೊಡಬೇಕು ಎಂಬುದು ಅದರ ಸಾರಾಂಶ. ನಮ್ಮ ನಾಯಕ ಮೊದಲಿಗೆ ಒಪ್ಪುವುದಿಲ್ಲ. ಆದರೆ ಹಿಂದೆ ಬೀಳುವ ಆಕೆ ಮತ್ತು ಆಕೆಯ ಸುಮಧುರವಾದ ಕಂಠ ಆತನನ್ನು ಆ ಕೆಲಸಕ್ಕೆ ಪ್ರೇರೇಪಿಸಿ ಅವನು ಮೌಲ್ಯ ಮಾಪನ ಮಾಡಲು ಒಪ್ಪಿಕೊಳ್ಳುತ್ತಾನೆ. ಆದರೆ ಆತ ಮೌಲ್ಯ ಮಾಪನ ಶುರು ಮಾಡಿದರೂ ಆಕೆ ಅವನಿಗೆ ಕಾಣಿಸಿಕೊಳ್ಳುವುದೇ ಇಲ್ಲ. ಬದಲಿಗೆ ಬರೀ ಆಕೆಯ ಕರೆ ಮಾತ್ರದ ಮೂಲಕ ಸಂವಹನ ನಡೆಯುತ್ತದೆ. ಇದರಿಂದ ಬೇಸತ್ತ ನಾಯಕ ಆಕೆಯನ್ನು ನೋಡಲೇಬೇಕೆಂದು ಒತ್ತಾಯಿಸಿದಾಗ ತಿಳಿಯುವ ನಿಜ ವಿಷಯ ಎಂದರೆ ಆಕೆಗೆ ಗುಂಪಿನಲ್ಲಿ ಸೇರಲು ಭಯ ಇದೆ ಎಂಬುದು. ಆಕೆ ತನ್ನ ಬಾಲ್ಯದಲ್ಲಿ ಪೋಷಕರನ್ನು ಕಳೆದುಕೊಂಡ ನಂತರ ಇಲ್ಲಿಯವರೆಗೆ ಮನೆಯಿಂದ ಹೊಸ ಬಂದೆ ಇಲ್ಲ ಎಂದಾಗ ಆಕೆಯನ್ನು ಹೇಗಾದರೂ ಮಾಡಿ ಆ ಪಂಜರದಿಂದ ಹೊರತರಲು ನಾಯಕ ನಿರ್ಧರಿಸುತ್ತಾನೆ ಅಷ್ಟೇ ಅಲ್ಲ, ಜೊತೆಗೆ ಅವನಿಗರಿವಿಲ್ಲದೆ ಪ್ರೀತಿಯಲ್ಲಿ ಬೀಳುತ್ತಾನೆ. ಆಕೆಯನ್ನು ಹೊರ ತರುತ್ತಾನೆ, ಬೆರೆಯುವಂತೆ ಮಾಡುತ್ತಾನೆ. ತನ್ನ ನೀರಸ ಏಕಮುಖವಾಗಿದ್ದ ಬದುಕಿಗೆ ಅರ್ಥ ಸಿಕ್ಕಿತು ಎಂದು ಕೊಳ್ಳುತ್ತಾನೆ. ಮುಂದೆ..
ಕೆಲವು ಚಿತ್ರಗಳ ಕತೆ ಹೇಳಲು ಖುಷಿ ಕೊಡುತ್ತದೆ. ಹಾಗೆಯೇ ಕೆಲವು ಚಿತ್ರಗಳು ನೋಡಿದರೆ ಮಜಾ ಕೊಡುತ್ತವೆ. ಆದ್ರೆ ಗಿಸಿಪಿ ತಾರ್ನೆತೊರ್ ನಿರ್ದೇಶನದ ಈ ಚಿತ್ರ ಮಾತ್ರ ನೋಡಲೂ ನೋಡಿದ ನಂತರ ಬೇರೆಯವರಿಗೆ ಆ ಚಿತ್ರದ ಕತೆ ಹೇಳಲು ಕುತೂಹಲ ಎನಿಸುತ್ತದೆ. ನಿಧಾನಕ್ಕೆ ಮಂದಗತಿಯಲ್ಲಿ ಚಿತ್ರ ಪ್ರಾರಂಭವಾಗುತ್ತದೆ. ನನಗೆ ಗಿಸಿಪಿಯ ಸಿನಿಮಾಗಳೆಂದರೆ ಹುಚ್ಚು. ಚಿತ್ರಕತೆ, ಕ್ಲೈಮಾಕ್ಸ್ ಮತ್ತು ನಿರ್ದೇಶನದಲ್ಲಿ ಆತ ನನ್ನ ಪಾಲಿಗೆ ಮಾಸ್ಟರ್. ಅವನ ಸ್ಟಾರ್ ಮೇಕರ್, ಸಿನಿಮಾ ಪ್ಯಾರಾಡಿಸೋ, ದಿ ಪ್ರೊಫೆಸರ್, ಬಾರಿಯಾ, ಮಲೀನಾ , ದಿ ಲೆಜೆಂಡ್ ಆಫ್ 1900 ಚಿತ್ರಗಳನ್ನು ಪದೇ ಪದೇ ನೋಡಿದ್ದೇನೆ. ಅದರಲ್ಲೂ ಬೆಸ್ಟ್ ಆಫರ್ ಚಿತ್ರದ ಕ್ಲೈಮಾಕ್ಸ್ ಅಂತೂ ಅದೆಷ್ಟು ಸಾರಿ ನೋಡಿದ್ದೇನೋ ನನಗೆ ಗೊತ್ತಿಲ್ಲ. ಚಿತ್ರ ನೋಡುತ್ತಾ ಸಾಗಿದಂತೆ ಅದು ನಮ್ಮನ್ನು ತನ್ನೊಳಗೆ ಸೆಳೆದುಕೊಳ್ಳುವ ಪರಿ ಇದೆಯಲ್ಲ ಅದು ಅನನ್ಯ. ಅದರಲ್ಲೂ ಹಿನ್ನೆಲೆ ಸಂಗೀತ ಕ್ಲೈಮಾಕ್ಸ್ ನಲ್ಲಿನ ದೃಶ್ಯದ ಹಿನ್ನೆಲೆಯಲ್ಲಿ ಬರುವ ಸಂಗೀತವಂತೂ ನನಗೆ ಹುಚ್ಚೆ ಹಿಡಿಸಿಬಿಟ್ಟಿದೆ. ಇನ್ನು ಅಭಿನಯದಲ್ಲಿರುವ ಪ್ರಮುಖ ನಾಲ್ಕು ಪಾತ್ರಗಳು ಮನಸ್ಸಿನಲ್ಲಿ ನಿಲ್ಲುತ್ತದೆ.
ಚಿತ್ರ ನೋಡಿದ ನಂತರ ನನಗನ್ನಿಸಿದ್ದು ಇದು ಗಿಸಿಪಿಯ ಬೆಸ್ಟ್ ಆಫರ್ ಗಳಲ್ಲೊಂದು ಎಂದು. ಒಮ್ಮೆ ನೋಡಲೇ ಬೇಕಾದ ಚಿತ್ರ.

Sunday, February 22, 2015

ಬರೆದದ್ದು ನೋಡಿದ್ದು...


ಏಕಾಏಕಿ ಬ್ಯುಸಿಯಾಗಿಬಿಟ್ಟೆ ನೀನು ಎನ್ನುವವರೆಗೆ ನನಗೆ ಮನವರಿಕೆಯಾಗಿರಲೇ ಇಲ್ಲ ನೋಡಿ. ಹೌದು. ಸಿನಿಮಾ ನೋಡುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಕನ್ನಡ ಸೇರಿದಂತೆ ವಾರಕ್ಕೆ ಸರಾಸರಿ ಎಂಟು ಚಿತ್ರಗಳನ್ನು ನೋಡುತ್ತೇನೆ. ನೋಡಿದ ಚಿತ್ರಗಳ ಬಗ್ಗೆ ಸ್ವಲ್ಪ ಟಿಪ್ಪಣಿ, ಒಂದು ಬರಹ, ಗೆಳೆಯರ ಜೊತೆ ಒಂದು ಚರ್ಚೆ ಮಾಡುತ್ತೇನೆ. ಹಾಗೆಯೇ ಓದಿದ ಪುಸ್ತಕಗಳ ಸಂಖ್ಯೆಯೂ ಸಮಾಧಾನಕರವಾಗಿದೆ. ಆದರೇಕೋ ಬರೆಯುವುದು. ನಿಲ್ ...
 ಅದೇ ಬೇಸರದ ಸಂಗತಿ ಎನಿಸಿದ್ದು. ಈ ವರ್ಷದ ಆರಂಭದಲ್ಲಿ ಮತ್ತೆ ನಿಗದಿತವಾಗಿ ಬರೆಯಲೇ ಬೇಕು ಎಂದುಕೊಂಡೆನಾದರೂ ಅದೇಕೋ ಏನೋ ಬರೆಯಲು ಸಾಧ್ಯವಾಗಲೇ ಇಲ್ಲ. ನನ್ನ ಸಿನಿಮಾದ ಸ್ಕ್ರಿಪ್ಟ್, ಬೇರೆ ಸಿನೆಮಾಗಳ ತಂಡದ ಜೊತೆ ಚರ್ಚೆ, ಓಡಾಟ ಹೀಗೆ ಇದರಲ್ಲಿಯೇ ಸಮಯ ಹೋಗಿ ಬಿಡುತ್ತಿದೆ ಎನಿಸುತ್ತಿತ್ತು. ಆದರೆ ಮೊನ್ನೆ ಸಿಕ್ಕ ಗೆಳೆಯ ಹಾಗಂದದ್ದೇ ಸುಮ್ಮನೆ ಕುಳಿತು ಯೋಚಿಸಿದೆ. ನನಗೆ ಆಗ ಮನವರಿಕೆಯಾದದ್ದು ಏನೆಂದರೆ ನಾನೆಂತಹ ಭ್ರಾಮಕ ಲೋಕದಲ್ಲಿ ಬದುಕುತ್ತಿದ್ದೆ ಎಂದು.
ಹೌದು. ಸುಮ್ಮನೆ ಗಮನಿಸಿದರೆ ಅಥವಾ ನನ್ನದೇ ಬದುಕಿನ ಮಜಲುಗಳನ್ನು ಲೆಕ್ಕ ಹಾಕಿ ನೋಡಿದರೆ ಫಲಿತಾಂಶ ಏನೂ ಇಲ್ಲ. ಇಷ್ಟಕ್ಕೂ ಬ್ಯುಸಿಯಾಗಿರುವ ನಾನು ಮಾಡಿರುವ ಕೆಲಸವಾಗಲಿ, ಅದರ ಸಂಪಾದನೆಯಾಗಲಿ ಶೂನ್ಯ. ಹಾಗಾದರೆ ನಾನು ಯಾವುದಕ್ಕೆ ಬ್ಯುಸಿಯಾಗಿದ್ದೆ ಎಂದು ನನ್ನನ್ನೇ ಪ್ರಶ್ನಿಸಿಕೊಂಡೆ. ನನ್ನ ಎದುರಿನ ನನ್ನನ್ನು ಆವರಿಸಿದ್ದ ಸೋಮಾರಿತನದ ಪರದೆ ಹರಿದುಬಿತ್ತು. ಇರಲಿ ಬಿಡಿ.
ನೋಡಿದ ಸಿನೆಮಕ್ಕಿಂತ ಓದಿದ್ದು ತುಂಬಾ ನೆನಪಿಗೆ ಬಂದು ಬಿಟ್ಟಿತು. ತುಂಬಾ ಜನ ಮೆಸೇಜ್ ಮಾಡಿದಾಗಲೂ ಅದಕ್ಕೆ ಪ್ರತಿಕ್ರಿಯಿಸಬೇಕು ಎಂದುಕೊಂಡರೂ ಅದೆಲ್ಲೋ ಕಾಡುಹರಟೆಯಲ್ಲಿ ಸಮಯ ಹೋಗಿಬಿಡುತ್ತಿತ್ತು. ಈಗ ತಹಬದಿಗೆ ತಂದುಕೊಂಡೆ.
ವರ್ಷಾರಂಭದಿಂದ ಇಲ್ಲಿಯವರೆಗೆ ನಾನು ನೋಡಿದ ಚಿತ್ರಗಳು ಪಟ್ಟಿ ನನಗೆ ಗೊತ್ತಿದೆ. ಅದರಲ್ಲೂ ಕನ್ನಡ ಚಿತ್ರಗಳ ಬಗ್ಗೆ ಒಂದು ಬರವಣಿಗೆ ಬರೆದುಬಿಟ್ಟಿದ್ದೇನೆ. ಆದರೆ ಇತರ ಚಿತ್ರಗಳ ಬಗ್ಗೆ ನಾನು ಏನೂ ಬರೆಯಲೇ ಇಲ್ಲ. 
ವರ್ಷದ ಆರಂಭದಲ್ಲಿ ನಾನು ಮೊದಲು ನೋಡಿದ ಹಾಲಿವುಡ್ ಚಿತ್ರ ಟೇಕನ್-3. ಅದೇಕೋ ಏನೋ ಅದರಲ್ಲಿ ಹೊಸದೇನೂ ಇರುವುದಿಲ್ಲ ಎನಿಸಿದರೂ ಸಿನಿಮಾವನ್ನು ಒಮ್ಮೆ ನೋಡಲೇ ಬೇಕು ಎನಿಸಿಬಿಡುತ್ತದೆ. ನನಗೆ ಫೈಟಿಂಗ್ ಇಷ್ಟ. ದುಷ್ಟ ಸಂಹಾರ ಯಾವತ್ತಿಗೂ ಇಷ್ಟ. ಹಾಗಾಗಿಯೇ ಟೇಕನ್ ನಂತಹ ಚಿತ್ರಗಳನ್ನು ಮುಗಿಬಿದ್ದು ನೋಡುತ್ತೇನೆ. ಸುಮ್ಮನೆ ಕುಳಿತು ಪರದೆಗೆ ಕಣ್ಣನ್ನೇ ಪೇಸ್ಟ್ ಮಾಡುವಂತಹ ಚಿತ್ರವನ್ನು ನೋಡಿ ತುಂಬಾ ಸಮಯವೇ ಅಗಿಹೋಗಿದೆಯೇನೋ? ಟೇಕನ್ -3 ಮತ್ತೊಂದು ಹೊಡಿಬಡಿ ಚಿತ್ರ. ಮೊದಲ ಭಾಗದಲ್ಲಿ ಮಗಳನ್ನು ಹೊತ್ತೊಯ್ದರು, ಬಿಡಿಸಿಕೊಂಡು ಬಂದ ನೀಸನ್,. ಎರಡನೆಯ ಭಾಗದಲ್ಲೂ ಹೊತ್ತೊಯ್ದರು ಮತ್ತೆ ಬಿಡಿಸಿಕೊಂಡು ಬಂದದ್ದಾಯ್ತು.. ಹಾಗಂತ ಮೂರನೆಯ ಭಾಗದಲ್ಲೂ ಮಗಳನ್ನು ಹೊತ್ತೊಯ್ಯುವರಾ? ಇಲ್ಲ. ಈ ಸಾರಿ ಹೆಂಡತಿಯನ್ನು ಕೊಂದು ಅದನ್ನು ಇವನ ತಲೆಯ ಮೇಲೆಯೇ ಹಾಕಿ ಮಜಾ ತೆಗೆದುಕೊಳ್ಳುತ್ತಾರೆ. ಈಗ ನೀಸನ್ ಗೆ ಎರೆಡೆರಡು ಕೆಲಸ. ಕೊಲೆಪಾತಕಿಯನ್ನು ಹಿಡಿಯುವುದು, ಪೋಲಿಸರಿಂದ ತಪ್ಪಿಸಿಕೊಳ್ಳುವುದು.... ಮಾಡದೆ ಬಿಡುತ್ತಾನಾ?
ಸಿನಿಮಾ ನಮ್ಮನ್ನು  ನೋಡಿಸಿಕೊಂಡು ನೀಸನ್ ನನ್ನು ಓಡಿಸಿಕೊಂಡು ಹೋಗುತ್ತದೆ. ಪ್ರಾರಂಭವಾದರೆ ಬೋರ್ ಎನಿಸುವ ಮೊಮೆಂಟ್ ಇಲ್ಲ. ಅಲ್ಲಿ ಹೋದ , ಇಲ್ಲಿ ಸಿಕ್ಕಿದ ಹೊಡಿ ಬಡಿ.. ಕಡೆಯವರೆಗೂ .. ಬೋರ್ ಆದರೆ ಒಮ್ಮೆ ನೋಡಿ..
ಜಾಸನ್ ಸ್ಟಾತಂ ಅಭಿನಯದ ವೈಲ್ಡ್ ಕಾರ್ಡ್ ಚಿತ್ರದಲ್ಲಿ ಎರಡೇ ಎರಡು ಹೊಡೆದಾಟ ಬಿಟ್ಟರೆ ಏನೂ ಮೆಚ್ಚತಕ್ಕಂತಹ ಅಂಶವಿಲ್ಲ. ಅದೇನೋ. ಇತ್ತೀಚಿಗೆ ಎಲ್ಲಾ ಹೊಡೆದಾಟ ಚಾಕ್ಯಚಕ್ಯತೆ ಇದ್ದರೂ ವ್ಯರ್ಥವಾಗುತ್ತಿರುವ ನಟ ಎಂದರೆ ಈ ಜಾಸನ್. ಜೆಟ್ ಲಿ, ಸ್ಟಾಲನ್, ಅರ್ನಾಲ್ಡ್  ಮುಂತಾದ ಸಾಹಸಿ ನಟರುಗಳಷ್ಟೇ ಸಮರ್ಥನಾದ ಈ ನಟನನ್ನು ಸರಿಯಾಗಿ ಬಳಸಿಕೊಳ್ಳದೆ ಇರುವುದು ಅದೂ ಹಾಲಿವುಡ್ ನಲ್ಲಿ ವಿಪರ್ಯಾಸ. ಚಿರತೆಯಂತೆ ಜಿಗಿಯುವ ತೀಕ್ಷಣ ಕಣ್ಣುಗಳು ಈ ನಟಬ್ನ ಚಿತ್ರ ಬರುತ್ತವೆ, ಆದರೆ ಹಿಡಿತವಿಲ್ಲದ ಕತೆ ಚಿತ್ರಕತೆಯಿಂದಾಗಿ ನೀರಸ ಎನಿಸುತ್ತವೆ.
ಈ ಸಾರಿಯ ಆಸ್ಕರ್ ಕಣದಲ್ಲಿನ ಚಿತ್ರಗಳಲ್ಲಿ ಗ್ರಾಂಡ್ ಬುಡಾಫೆಸ್ಟ್ ಹೋಟೆಲ್, ಬರ್ಡ್ ಮ್ಯಾನ್, ಬಾಯ್ ಹುಡ್ ಮುಂತಾದ ಸುಮಾರಷ್ಟು ಚಿತ್ರಗಳನ್ನು ನೋಡಿದೆ. ಅವುಗಳಲ್ಲಿ ಯಾವ್ಯಾವುದು ಆಸ್ಕರ್ ಪಡೆಯಬಹುದು ಎನ್ನುವ ಕುತೂಹಲವಿದೆ.

Friday, January 16, 2015

ಶಂಕರ್ ಐ

ಶಂಕರ್ ಅವರ ಬಹು ನಿರೀಕ್ಷಿತ ಚಿತ್ರವಾದ ಐ ಬಿಡುಗಡೆಯಾಗಿದೆ. ಬಹುಕೋಟಿ ವೆಚ್ಚದ ಈ ಚಿತ್ರ ತನ್ನ ನಿರೀಕ್ಷೆಯನ್ನು ಉಳಿಸಿಕೊಂಡಿದೆಯೇ ಎಂಬುದು ಪ್ರಶ್ನೆ.
ಅದಕ್ಕೆ ಉತ್ತರ ಹೌದು ಎಂದರೆ ಹೌದು ಇಲ್ಲ ಎಂದರೆ ಇಲ್ಲ.
ಶಂಕರ್ ಏನೇ ಮಾಡಿದರೂ ಮನರಂಜನೆಯ ಚೌಕಟ್ಟಿನಲ್ಲಿಯೇ ಮಾಡುತ್ತಾರೆ. ಅದವರ ಶಕ್ತಿ  ಮತ್ತದೇ ಅದೇ ಅವರ ದೌರ್ಬಲ್ಯ. ಹಾಗಾಗಿಯೇ ಶಂಕರ್ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ಕೊಡಬಲ್ಲರು. ವರ್ಷಗಟ್ಟಲೆ ಪ್ರೇಕ್ಷಕರನ್ನು ಕಾಯಿಸಿ ಅಬ್ಬಾ ಕಾಯ್ದದ್ದು ಸಾರ್ಥಕ ಎನ್ನುವಂತೆ ಮಾಡಬಲ್ಲರು. ಸ್ಟಾರ್ ನಟನನ್ನು ಚಿತ್ರಕ್ಕೆ ನಾಯಕನನ್ನಾಗಿಸಿ ಆತನ ಅಭಿಮಾನಿಗಳನ್ನು ಖುಷಿ ಪಡಿಸಬಲ್ಲರು.
ಐ ಚಿತ್ರ ಅದೇ ವಿಭಾಗದ ಚಿತ್ರ. ಕತೆ ಚಿತ್ರಕತೆಯ ವಿಷಯಕ್ಕೆ ಹೋದರೆ ಹೆಚ್ಚು ತಲೆ ಕೆಡಿಸುವ ಕತೆಯೂ ಇಲ್ಲ, ಬುದ್ದಿವಂತಿಕೆ ಎನಿಸುವ ಚಿತ್ರಕತೆಯೂ ಇಲ್ಲ. ಸಾದಾರಣದಲ್ಲಿ ಅತೀ ಸಾದಾರಣ ಕತೆ, ನೀವು ಘಜಿನಿ ಎಂದುಕೊಳ್ಳಬಹುದು, ಚಿತ್ರಕತೆಯೂ ಅಷ್ಟೇ ಫ್ಲಾಶ್ ಬ್ಯಾಕ್ ಮಗ್ಗಲಲ್ಲಿ ಕತೆ ತೆರೆಯುವ ಶಂಕರ್ ಅದರಲ್ಲೂ ಯಾವುದೇ ಹೆಚ್ಚುಗಾರಿಕೆ ತೋರಿಲ್ಲ. ಹಾಗಾದರೆ ಇದೊಂದು ಸೀದಾ ಸಾದಾ ಚಿತ್ರವೇ?
ಖಂಡಿತ ಇಲ್ಲ. ಶಂಕರ್ ಗೆಲ್ಲುವುದು ಇರುವ ಸಾದಾರಣ ಕತೆಯನ್ನು ಅಸಾದಾರಣ ದೃಶ್ಯವೈಭವದ ಜೊತೆ ಕಟ್ಟಿಕೊಡುವಲ್ಲಿ. ಇಲ್ಲಿ ಅವರದ್ದು ಎಲ್ಲವೂ ಬಿಗ್ ಸ್ಕೇಲ್. ದೊಡ್ಡ ಕ್ಯಾನ್ವಾಸ್. ಒಂದು ಗಲ್ಲಿ ಎಂದರೂ ಅಲಂಕೃತವಾಗಿ ಉದ್ದಕ್ಕೆ ಕಾಣಿಸುತ್ತದೆ, ಒಂದು ಮನೆ ಎಂದರೆ ಅದರಲ್ಲಿ ಹಲವಾರು ಮಜಲುಗಳಿವೆ, ಹೊಡೆದಾಟ ಎಂದರೆ ಸಂಖ್ಯೆ ಮೀರಿದ ಎದುರಾಳಿಗಳಿದ್ದಾರೆ, ಹಾಡು ಎಂದಾಗ ಅದರಲ್ಲೇ ಲೋ ಬಜೆಟ್ ಸಿನಿಮಾ ಮಾಡಬಹುದಾದ ವೆಚ್ಚ ಎದ್ದು ಕಾಣುತ್ತದೆ.
ಒಂದು ರೂಪದರ್ಶಿಗಳ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಕತೆ. ಆನಂತರ ತಿರುಗುವುದು ಮಸಾಲೆ ಮನರಂಜನೆಯತ್ತ. ಇಲ್ಲಿನ ಪ್ರೀತಿ ಪ್ರೇಮ ದ್ವೇಷ ಎಲ್ಲದಕ್ಕೂ ಸಿನಿಮೀಯ ತಿರುವುಗಳನ್ನೇ ನಿರ್ದೇಶಕರು ನೆಚ್ಚಿಕೊಂಡಿದ್ದಾರೆ. ಹಾಗೆಯೇ ಪ್ರತಿಕಾರಕ್ಕೂ ತಮ್ಮದೇ ಶೈಲಿಯನ್ನು ಪುನರಾವರ್ತನೆ ಮಾಡಿದ್ದಾರೆ. ನಾಯಕ ಲಿಂಗೇಶನ್ ಮಿಸ್ಟರ್ ತಮಿಳುನಾಡು ಆದರೆ ನಾಯಕಿ ಅಂತರರಾಷ್ಟ್ರೀಯ ಮಟ್ಟದ ರೂಪದರ್ಶಿ. ಆಕೆಯನ್ನು ಹೇಗಾದರೂ ಮಾಡಿ ಅನುಭವಿಸಲು ಮತ್ತೊಬ್ಬ ಕಾಯ್ದುನಿಂತಿದ್ದಾನೆ. ತನ್ನ ತೆಕ್ಕೆಗೆ ಸಿಕ್ಕುವುದಿಲ್ಲ ಎಂದು ಗೊತ್ತಾದಾಗ ಆಕೆಯ ಜಾಗಕ್ಕೆ ಬೇರೆಯವರನ್ನು ತಂದುಕೂರಿಸುತ್ತಾನೆ. ಇದರಿಂದ ಹತಾಶೆಗೊಳಗಾದ ನಾಯಕಿ ಸಿಡಿದು ನಿಂತು ಅವನ ಜಾಗಕ್ಕೆ ನಾಯಕನನ್ನು ಆಯ್ಕೆ ಮಾಡುತ್ತಾಳೆ. ನಾಯಕ ರೂಪದರ್ಶಿಯಾಗುತ್ತಾನೆ. ಮುಂದೆ..? ನಾಯಕ ಸ್ಟಾರ್ ಆದಂತೆ ಖಳನಾಯಕ ಕೆಲಸವನ್ನೂ ಕಳೆದುಕೊಳ್ಳುತ್ತಾನೆ, ಮೊದಲೇ ಹುಡುಗಿ ಸಿಕ್ಕಿರುವುದಿಲ್ಲ. ಅದರ ಜೊತೆಗೆ ಮತ್ತೊಂದು ಪ್ರೇಮಕತೆಯನ್ನು ನಿರ್ದೇಶಕರು ತಂದಿದ್ದಾರೆ. ಅದರಲ್ಲೂ ಆತ/ಆಕೆಗೆ ನಾಯಕ ತಿರಸ್ಕರಿಸಿರುತ್ತಾನೆ. ಎಲ್ಲರೂ ಒಂದಾಗುತ್ತಾರೆ. ನಾಯಕನ ಮೇಲೆ ಹಗೆ ಸಾಧಿಸುತ್ತಾರೆ... ಮುಂದೇನಾಗುತ್ತದೆ ಎಂಬುದು ಒಂದು ಸಾಲಿನ ಕತೆ. ಆದರೆ ಅದನ್ನು ನಿರ್ದೇಶಕರು ಶ್ರೀಮಂತವಾಗಿ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಅದನ್ನು ಚಿತ್ರಮಂದಿರದಲ್ಲೇ ನೋಡುವುದು ಸೊಗಸು.
ಮೂರು ಘಂಟೆ ಎಂಟು ನಿಮಿಷಗಳ ಚಿತ್ರವನ್ನು ನಿರ್ದೇಶಕರು ಬೋರ್ ಆಗದಂತೆ ನಿರೂಪಿಸಿದ್ದಾರೆ. ಇಲ್ಲಿ ಎಲ್ಲವೂ ನಿರೀಕ್ಷಿತ. ಏನಾಗುತ್ತದೆ ಎಂಬುದನ್ನು ಪ್ರೇಕ್ಷಕ ಮೊದಲೇ ಅಂದಾಜು ಮಾಡಿಬಿಡಬಲ್ಲ. ಆದರೆ ಅದು ಹೇಗೆ ಆಗುತ್ತದೆ ಎಂಬುದು ಶಂಕರ್ ಗೆ ಬಿಟ್ಟು ಬಿಡಬೇಕಾಗುತ್ತದೆ.
ನಾಯಕನಾಗಿ ವಿಕ್ರಂ ತನ್ನ ಖದರ್ ತೋರಿಸಿದ್ದಾರೆ. ಅಭಿನಯವಷ್ಟೇ ತನ್ನ ದೇಹವನ್ನು ಪಾತ್ರಕ್ಕೆ ತಕ್ಕಂತೆ ಏರುಪೇರು ಮಾಡಿಕೊಂಡಿದ್ದಾರೆ. ನಾಯಕಿಯಾಗಿ ಅಮಿ ಜಾಕ್ಸನ್ ಗ್ಲಾಮರ್ ಬೊಂಬೆ. ಇನ್ನುಳಿದಂತೆ ಉಪೇನ್ ಪಟೇಲ್, ಸುರೇಶ ಗೋಪಿ ಅವರ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ.
ಹಿನ್ನೆಲೆ ಸಂಗೀತ ಮತ್ತು ಸಂಗೀತ ಸ್ವಲ್ಪ ಮಟ್ಟಿಗೆ ನಿರಾಸೆ ಉಂಟು ಮಾಡುತ್ತದೆ. ಛಾಯಾಗ್ರಹಣ ಮತ್ತು ಪ್ರಸಾದನ ಚಿತ್ರದ ಜೀವಾಳ ಆಗಿದೆ.
ಕೊನೆ ಮಾತು: ಶಂಕರ್ ಇಷ್ಟನ್ನು ನೀಡಬಲ್ಲರು. ಆದರೆ ಚಿತ್ರ ಗ್ರೇಟ್ ಎನಿಸುವುದಿಲ್ಲ. ಅದೇಕೆ ಎನಿಸಬೇಕು ಎಂಬ ಪ್ರಶ್ನೆ ಹಠಾತ್ತನೆ ಹುಟ್ಟಬಹುದು. ಒಬ್ಬ ನಿರ್ದೇಶಕ ಒಂದಷ್ಟು ಹಣ ವೆಚ್ಚ ಮಾಡಿ  ಹೇಗೇಗೋ ಚಿತ್ರ ಮಾಡಿದಾಗ ಇಷ್ಟು ಮಾಡಿದರೆ ಸಾಕು ಎನಿಸುವುದು ಸಹಜ. ಆದರೆ ಇಷ್ಟನ್ನು ಹಲವಾರು ಬಾರಿ ಮಾಡಿರುವ ಶಂಕರ್ ಅವರಿಂದ ಮತ್ತಷ್ಟನ್ನು ನಿರೀಕ್ಷೆ ಮಾಡುವುದು ತಪ್ಪೇನಿಲ್ಲ. ಮೂರು ಗಂಟೆಗಳ ದೃಶ್ಯ ವೈಭವದಲ್ಲಿ ಬೋರ್ ಆಗದಂತೆ ಚಿತ್ರ ನಿರೂಪಿಸುವುದು ಸುಲಭದ ಕೆಲಸವಲ್ಲವಾದರೂ ಅದನ್ನು ಶಂಕರ್ ಮಾಡಬಲ್ಲರು ಎನ್ನುವುದಾದರೆ ಶಂಕರ್ ಇನ್ನು ಒಂದು ಹೆಜ್ಜೆ ಮುಂದೆ ಹೋದರೆ ಸೂಪರ್ ಹಿಟ್ ಚಿತ್ರದ ಜೊತೆಗೆ ಗ್ರೇಟ್ ಚಿತ್ರವನ್ನೂ ಕೊಡಬಹುದು.