Friday, October 9, 2015

ಮಹಾಭಾರತ ನಡೆದದ್ದು ನಿಜವೇ? ಭಾಗ-1

ಕಿ.ಪೂ. ಅಕ್ಟೋಬರ್ 16, 5561.
ಅನಾಮತ್ತು ಎರಡು ವರ್ಷಗಳ ನನ್ನ ರಜೆ ಮುಗಿದಿದೆ. ಚಿತ್ರರಂಗದಿಂದ ಸ್ವಲ್ಪ ಬೇರೆಕಡೆ ಜೀವನೋಪಾಯಕ್ಕಾಗಿ ಹೊರಳಿಕೊಂಡಿದ್ದ ನಾನು ಮತ್ತೆ ಚಿತ್ರರಂಗಕ್ಕೆ ಧಾವಿಸಿದ್ದೇನೆ. ಈ ಸಾರಿ ಮೊದಲಿನ ತಪ್ಪುಗಳ ಬಗೆಗಿನ ಅರಿವಿದೆ. ಮೂರ್ಖತನದ ಸ್ಪಷ್ಟ ಚಿತ್ರಣವಿದೆ. ಸಾಧ್ಯವಾದಷ್ಟು ಕಡಿಮೆ ತಪ್ಪುಗಳನ್ನು ಮಾಡುತ್ತಾ ಈ ಸಾರಿ
ಸಿನಿಮಾ ಮಾಡಬೇಕೆಂದು ನಿರ್ಧರಿಸಿದ್ದೇನೆ.
ಅದಕ್ಕೆ ಸಂಬಂಧಿಸಿದಂತೆ ನಾನು ಆಯ್ದುಕೊಂಡ ಕತೆಗೆ ಸ್ವಲ್ಪ ಮಹಾಭಾರತ ಹೋಲುತ್ತದೆ. ಪ್ರತಿ ಕತೆಯಲ್ಲಿಯೂ ಮಹಾಭಾರತದ ತುಣುಕು ಒಂದು ನನಗಂತೂ ಕಾಣಸಿಗುತ್ತದೆ. ಆದರೆ ನನ್ನದೇ ಚಿತ್ರದಲ್ಲಿ ಅದರ ಅಂಶ ಸ್ವಲ್ಪ ಜಾಸ್ತಿಯೇ ಇದೆ ಎನ್ನಬಹುದು. ಇದೊಂದು ಪ್ರೇಮಕತೆ, ದುಷ್ಟ ಸಂಹಾರದ ಕತೆ, ಧರ್ಮ ಯುದ್ಧದ ಕತೆ ಹೀಗೆ ನೀವು ಏನು ಬೇಕಾದರೂ ಹೇಳಬಹುದು. ನಾನು ಯಾವುದೇ ಶೈಲಿಯ ಕತೆ ಮಾಡಿದರೂ ಒಮ್ಮೆ ಕತೆ ಮಾಡಿದ ಮೇಲೆ ಅಥವಾ ಅದಕ್ಕೂ ಮುನ್ನ ಆ ಸಂಬಂಧಿ ಒಂದಷ್ಟು ಚರ್ಚೆ ಅಧ್ಯಯನ ಮಾಡುತ್ತೇನೆ. ಇನ್ನು ಮಹಾಭಾರತ ಎಂದಾಗ ಅದರ ಬಗ್ಗೆ ಅಧ್ಯಯನ ಮಾಡಲು ನನಗಂತೂ ಈ ಜನ್ಮ ಸಾಲುವುದಿಲ್ಲ ಎನಿಸಿಬಿಡುತ್ತದೆ.
ಮೊದಲೆಲ್ಲಾ ಮಹಾಭಾರತ ಎಂದರೆ ಅದೊಂದು ರೋಚಕ ಕಥಾನಕದ ಸಂಕಲನ ಎನಿಸುತ್ತಿತ್ತು. ಅದರಲ್ಲಿರುವ ಮಸಾಲೆ ಅಂಶಕ್ಕೆ ಲೆಕ್ಕವೆಲ್ಲಿದೆ? ಒಬ್ಬಳು ಐವರನ್ನು ಪತಿ ಎಂದು ಒಪ್ಪಿಕೊಳ್ಳುತ್ತಾಳೆ, ನಟ್ಟ ನಡುವಣ ಸಭೆಯಲ್ಲಿ ಹೆಂಗಸಿನ ಸೀರೆ ಸೆಳೆಯಲಾಗುತ್ತದೆ, ಅಣ್ಣ ತಮ್ಮಂದಿರು ಜೂಜಾಡಿ ಸೋಲುತ್ತಾರೆ,  ಅರಗಿನ ಮನೆಗೆ ಬೆಂಕಿ ಬೀಳುತ್ತದೆ.. ಒಂದೇ ಎರಡೇ ತಂತ್ರ, ಕುತಂತ್ರ, ಮಂತ್ರ, ರೋಚಕತೆ, ಪ್ರೀತಿ ,ಪ್ರಣಯ, ಸಾಹಸ, ಅನ್ಯಾಯ, ನ್ಯಾಯ, ಧರ್ಮ, ಅಧರ್ಮ.. ಹಿಂಸೆ, ಅಹಿಂಸೆ, .. ಸದಾಚಾರ, ಅನಾಚಾರ, ಅತ್ಯಾಚಾರ.. ಅಬ್ಬಬ್ಬಾ ಏನೇನಿದೆ ಅದರಲ್ಲಿ. ಮೊದಲೆಲ್ಲಾ ನಮ್ಮಪ್ಪ ನಮ್ಮನ್ನು ಕೂರಿಸಿಕೊಂಡು ದಿನಾ ರಾತ್ರಿ ಊಟದ ನಂತರ ವಿದ್ಯುತ ಇಲ್ಲದಾದಾಗ ಮಹಾಭಾರತದ ಒಂದೊಂದೇ ಅಧ್ಯಾಯವನ್ನು ಹೇಳುತ್ತಿದ್ದಾಗ ಮೈಯೆಲ್ಲಾ ರೋಮಾಂಚನ ಉಂಟಾಗುತ್ತಿತ್ತು. ಆನಂತರ ನಾನೇ ಒಂದಷ್ಟು ಓದತೊಡಗಿದೆ. ಹೊಸ ಹಳೆಯ ವಿಮರ್ಶಾತ್ಮಕ, ವಿಡಂಬನಾತ್ಮಕ, ವಿಶ್ಲೇಷಣಾತ್ಮಕ ಬರಹ ಕಾದಂಬರಿ ಪುಸ್ತಕಗಳನ್ನು ಆಗಾಗ ಸಿಕ್ಕ ಸಿಕ್ಕಲ್ಲಿ ಓದುತ್ತಿದ್ದೆ. ಹಿರಿಯರು ಸಿಕ್ಕರೆ ಕೇಳುತ್ತಿದ್ದೆ.
ನನಗೆ ಆವಾಗಲೆಲ್ಲಾ ಏಳುತ್ತಿದ್ದ ಪ್ರಶ್ನೆ ಒಂದೇ..
ಮಹಾಭಾರತ ನಿಜವಾಗಿಯೂ ನಡೆದ ಕತೆಯೇ? ಅಥವಾ ಕಪೋಲ ಕಲ್ಪಿತವೆ?
ಕತೆಯ ಹೂರಣ ನೋಡಿದರೆ ಅದು ಕಲ್ಪನೆ ಎನ್ನಲೂಬಹುದು, ಹಾಗೆಯೇ ವಾಸ್ತವ ಎನ್ನಲೂ ಬಹುದು. ಹಾಗಾದರೆ ಬಕಾಸುರ ಇದ್ದಾನೆ? ಕೃಷ್ಣನ ಚಕ್ರ ತಿರುಗುತ್ತಿತ್ತೆ..? ಹೀಗೆ ಸುಮ್ಮನ್ನೇ ನನ್ನನ್ನೇ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದೆ. ಆದರೆ ಅದರ ಬಗ್ಗೆ ಹೆಚ್ಚು ಅಧ್ಯಯನ ಮಾಡಲು ಹೋಗಿರಲಿಲ್ಲ. 
ಮೊನ್ನೆ ಮೊನ್ನೆ ನಮ್ಮ ಸಿನಿಮಾಕ್ಕಾಗಿ ಮಹಾಭಾರತದ ಕುರಿತಾದ ಒಂದಷ್ಟು ಅಧ್ಯಯನ ಕೈಗೊಂಡೆ. ಕೆಲವು ಅಚ್ಚರಿಗಳು ನನಗೆ ಎದುರಾದವು.ಹಾಗಂತ ನಾನೇನೋ ಸಂಶೋಧನೆ ಮಾಡಲಿಲ್ಲ, ಯಾರ್ಯಾರೋ ಬರೆದಿದ್ದ ಪುಸ್ತಕಗಳನ್ನು ಓದುತ್ತಾ ಓದುತ್ತಾ ಟಿಪ್ಪಣಿ ಹಾಕಿಕೊಂಡೆ ನೋಡಿ.
ಮಹಾಭಾರತ ನಡೆದದ್ದು ನಿಜವೇ ಎನಿಸುವ ಅಂಶ ಒಂದು ಪುಸ್ತಕದಲ್ಲಿ ದೊರಕಿತು.
ಕಿ.ಪೂ. ಅಕ್ಟೋಬರ್ 16, 5561 ರಂದು ಮಹಾಭಾರತದ ಕುರುಕ್ಷೇತ್ರ ಯುದ್ಧ ನಡೆದಿದೆ. ಅಂದರೆ ಸರಿ ಸುಮಾರು ಮಹಾಭಾರತ ಯುದ್ಧ ಜರುಗಿ ಈವತ್ತಿಗೆ 7575 ವರ್ಷಗಳಾಗಿವೆ. 
ಅಷ್ಟು ಕರಾರುವಕ್ಕಾಗಿ ಅದೇಗೆ ಅದ್ಯಾವ ಆಧಾರದ ಮೇಲೆ ಹೇಳಲು ಸಾಧ್ಯ ಎನ್ನುವುದು ಮೊದಲ ಪ್ರಶ್ನೆ. ಪುರಾಣ ಪುಸ್ತಕ ಅಥವಾ ಏನೋ.. ಅವುಗಳ ಪ್ರಕಾರ ನಮ್ಮದು ಕಲಿಯುಗದ ಮೊದಲ ಪಾದ. ಮಹಾಭಾರತ ಜರುಗಿದ್ದು ದ್ವಾಪರಯುಗದಲ್ಲಿ. ಅಂದರೆ ಕಲಿಯುಗ ಶುರುವಾದದ್ದು ಯಾವಾಗ ಎನ್ನುವುದು ಪ್ರಶ್ನೆ. ನಮ್ಮ ಪುರಾಣ ಪುಸ್ತಕಗಳ ಪ್ರಕಾರ ನಾಲ್ಕು ಲಕ್ಷ ಮೂವತ್ತೆರೆಡು ವರ್ಷಗಳಿರುವ ಕಲಿಯುಗದಲ್ಲಿ ಈಗ ಜರುಗಿರುವುದು ಕೇವಲ ಐದು ವರ್ಷಗಳು ಅಂದುಕೊಳ್ಳೋಣ. ಅಂದರೆ ಊಹಿಸಿ.. 
ಇರಲಿ.
ಮೊದಲಿಗೆ ಈ ಮಹಾಭಾರತ ಯುದ್ಧದ ದಿನಾಂಕವನ್ನು ಪತ್ತೆ ಮಾಡಿದ್ದು ಯಾವುದರ ಆಧಾರದ ಮೇಲೆ ಎಂಬುದು ಪ್ರಶ್ನೆ. ಈ ವೈಜ್ಞಾನಿಕ ಮಾರ್ಗದ ಮೂಲಕ ಕರಾರುವಕ್ಕಾದ ಮಹಾಭಾರತ ಯುದ್ಧದ ದಿನಾಂಕವನ್ನು ಸಂಶೋಧಕರು ಮೇಧಾವಿಗಳು ಪಡೆಯಲು ಹಲವಾರು ಮಾರ್ಗದ ಮೊರೆ ಹೋಗಿದ್ದಾರೆ. ಜ್ಯೋತಿಷ್ಯ ಶಾಸ್ತ್ರ, ಜೀನಿಯಾಲಜಿ, ಆ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡಿದ ವಿದೇಶಿ ಯಾತ್ರಿಕರ ಬರಹಗಳು, ಖಗೋಳ ವಿಜ್ಞಾನ, ಶಾಸನಗಳು, ಭಾಷಾಶಾಸ್ತ್ರ, ಪುರಾತತ್ವ ಶಾಸ್ತ್ರ, ಪುರಾಣ ಕತೆಗಳು, ವೇದಗಳು ಹೀಗೆ ಹತ್ತು ಹಲವು ವಿಷಯಗಳನ್ನು ಅಧ್ಯಯನ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ವ್ಯಾಸ ರಚಿಸಿದ ಮಹಾಭಾರತ ಮುಖ್ಯವಾದದ್ದು .
ಇರಲಿ ಓದುತ್ತಾ ಓದುತ್ತಾ ನಾನೂ ಲೆಕ್ಕ ಹಾಕಲು ಕುಳಿತುಕೊಂಡೆ. ಹಾಗೆಯೇ ಗೊತ್ತಿರದ ವಿಷಯಗಳನ್ನು ಗೂಗಲ್ ಮಾಡುತ್ತಾ ಸಾಗಿದೆ. ಯಾಕೋ ಒಂದು ಜನ್ಮಕ್ಕೆ ಮುಗಿಯದ ಕೆಲಸವಲ್ಲ ಎನಿಸಿತು. ಎನಿವೇ ನಾನು ಓದಿದ್ದನ್ನು ನನಗನಿಸಿದ್ದನ್ನು ಬರೆದಿಡೋಣ ಎನಿಸಿ ಬರೆದದ್ದು ಇದು.
ದಿ ಸೈಂಟಿಫಿಕ್ ಡೇಟಿಂಗ್ ಆಫ್ ಮಹಾಭಾರತ ವಾರ್ ಎನ್ನುವ ಪುಸ್ತಕವದು. ಒಮ್ಮೆ ಸಿಕ್ಕರೆ ನೀವು ಓದಿ.
ಈಗ ಸಿನಿಮಾದ ಬರವಣಿಗೆ ಕೆಲಸ ಮುಕ್ಕಾಲು ಪಾಲು ಮುಗಿದಿದೆ. ಇನ್ನೇನಿದ್ದರೂ ಚಿತ್ರೀಕರಣಕ್ಕೆ ಬೇಕಾದ ಜಾಗಗಳ ಹುಡುಕಾಟ, ಕಲಾವಿದರ ಹುಡುಕಾಟ. ಈ ಸಿನಿಮಾದಂತೆಯೇ ಈ ಪುಸ್ತಕವೂ ನನ್ನನ್ನು ಕಾಡುತ್ತಿರುವುದು ವಿಪರ್ಯಾಸ.
[ಮುಂದುವರೆಯುತ್ತದೆ]

1 comment:

  1. ಈ ಸರಣಿ ಕುತೂಹಲ ಹುಟ್ಟಿಸಿದೆ.

    ReplyDelete