Tuesday, December 31, 2013

2013 ಕ್ಕೆ ವಿದಾಯ ಹೇಳುತ್ತಾ..?

ಸುಮ್ಮನೆ ಕಳೆದ ಸಾರಿಯ ಇದೇ ದಿನವನ್ನು ಗಮನಿಸಿದರೇ ನನ್ನ ಬದುಕಿನಲ್ಲಿ ಅಂತಹ ಅದ್ಭುತ ಎನಿಸಿದ್ದು ಏನು ನಡೆದಿಲ್ಲ ಎನ್ನಬಹುದು. ಹೋದ ಸಾರಿ ಇದೇ ದಿನಗಳಲ್ಲಿ 5 ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿನಿಮಾ ನೋಡುತ್ತಾ ಕಾಲ ಕಳೆದಿತ್ತು. ಆದರೆ ಈ ಸಾರಿ ಅದು ಸಾಧ್ಯವಾಗಲೇ ಇಲ್ಲ. ಹಾಗಾದರೆ ಏನು ಮಾಡಿದೆ ಅಂತಹ ಸಾಧನೆ ಎಂಬ ಪ್ರಶ್ನೆಗೆ ಹೇಳಿಕೊಳ್ಳುವಂತಹ ಉತ್ತರವೂ ಇಲ್ಲ. ಬಿಡುಗಡೆಯಾಗಬೇಕಿದ್ದ ನನ್ನ ಸಿನಿಮಾ ಮತ್ತಷ್ಟು ಸಮಸ್ಯೆಯಲ್ಲಿ ಸಿಕ್ಕಿಕೊಂಡಿತ್ತು. ಆದರೆ ಅದೇಗೋ ಏನೋ 2013 ರ ವರ್ಷಾಂತ್ಯದ ಹೊತ್ತಿಗೆ ಎಲ್ಲಾ ಸಮಸ್ಯೆಗಳು ವಿವಾದಗಳು ಒಂದು ಮಟ್ಟಿಗೆ ಬಗೆ ಹರಿದಿದೆ. ನನ್ನ ಪುಸ್ತಕ ನೋಡಲೇಬೇಕಾದ ನೂರೊಂದು ಕನ್ನಡ ಚಿತ್ರಗಳು ಈ ವರ್ಷ ಬಿಡುಗಡೆಯಾಯಿತು. ಇಷ್ಟು ಬಿಟ್ಟರೆ ಒಂದಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ನನ್ನನ್ನು ತೊಡಗಿಸಿಕೊಂಡದ್ದು ಬಿಟ್ಟರೆ ಬೇರೆ ಯಾವ ಸಾಧನೆಯೂ ಆಗಲಿಲ್ಲ.
ಆದರೆ ಈ ಸಾರಿಯೂ ನಾನು ನೋಡಿದ ಸಿನಿಮಾಗಳು ದಾಖಲೆಯ ಸಂಖ್ಯೆ ದಾಟಿವೆ ಎನ್ನಬಹುದು. ಮೊದಲಿಗೆ ಜನವರಿಯಿಂದ ಡಿಸೆಂಬರ್ ವರೆಗೆ ಕನ್ನಡದಲ್ಲೇ ಸರಿ ಸುಮಾರು ನೂರಾ ಹದಿನಾರು ಸಿನೆಮಾಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಮನಸಿನ ಪುಟದಲಿ, ನೀನಂದ್ರೆ ಇಷ್ಟಕಣೋ, ಮಾನಸ, ಬ್ಲೂ ಮೂನ್ ಮುಂತಾದ ಒಂದಷ್ಟು ಚಿತ್ರಗಳನ್ನು ಹೊರತು ಪಡಿಸಿದರೇ, ನೂರಾ ಒಂಭತ್ತು ಸಿನಿಮಾಗಳನ್ನ ನೋಡಿಬಿಟ್ಟಿದ್ದೇನೆ. ಹಾಗೆಯೇ ಬಾಲಿವುಡ್ ಚಿತ್ರಗಳಲ್ಲೂ ಸುಮಾರಷ್ಟು ನೋಡಿದ್ದೇನೆ. ಹಾಲಿವುಡ್ ನ ಜಗತ್ತಿನ ಸಿನಿಮಾಗಳು ನೂರ ಐವತ್ತಕ್ಕೂ ಹೆಚ್ಚು ನೋಡಿದ್ದೇನೆ. ಆ ಲೆಕ್ಕದಲ್ಲಿ ಸುಮಾರು ಎರಡು ನೂರ ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನೋಡಿದ ಸಂತಸ ನನ್ನದು. ಅವುಗಳಲ್ಲಿ ಸುಮಾರಷ್ಟು ಖುಷಿ ಕೊಟ್ಟಿವೆ. ಬೇಸರ ಕಳೆದಿವೆ, ಬೇಸರ ತರಿಸಿವೆ. ಅದು ಬೇರೆ ಮಾತು.
ಇನ್ನು ಈ ಸಾರಿಯ ಓದು ಸ್ವಲ್ಪ ಕಡಿಮೆ ಎನ್ನಬಹುದು. ಸುಮ್ಮನೆ ಲೆಕ್ಕ ಇಟ್ಟರೆ ಮೂವತ್ತು ಪುಸ್ತಕಗಳನ್ನು ಓದಿರಬಹುದಷ್ಟೇ.ಅದು ಬಿಟ್ಟರೆ ದಿನಪತ್ರಿಕೆ, ವಾರ ಪತ್ರಿಕೆಗಳು ಒಂದಷ್ಟು ಧಾರಾವಾಹಿಗಳನ್ನು ಅಲ್ಲಲ್ಲಿ ನೋಡಲಷ್ಟೇ ಸಾಧ್ಯವಾಯಿತು. ಮಿತ್ರರ ಬ್ಲಾಗ್ ನಲ್ಲಿದ್ದ ಒಂದಷ್ಟು ಬರಹಗಳನ್ನು ಓದಲೂ ಸಮಯ ಸಾಲದೇ ಅಲ್ಲಲ್ಲಿ ಓದಿದ್ದಾಯಿತು. ಬರವಣಿಗೆಯೂ ಅಷ್ಟಾಗಿಲ್ಲ. ಮಾರ್ಚ್ ತಿಂಗಳ ನಂತರ ಓಡಾಟ, ಕೆಲಸದ ಒತ್ತಡಗಳು ಜಾಸ್ತಿಯಾದ್ದರಿಂದ ಓದಲು ಸಮಯ, ಆಸಕ್ತಿ ಎರಡೂ ಕೊರತೆಯಾಗಿತ್ತು.ಹಾಗೆಯೇ ಇಡೀ ವರ್ಷದಲ್ಲಿ ಎರಡು ಪ್ರಬಂಧಗಳು, ಒಂದು ಕಥೆ ಮಾತ್ರ ಬರೆಯಲು ಸಾಧ್ಯವಾಯಿತಷ್ಟೇ.ನನ್ನ ಬ್ಲಾಗ್ ನಲ್ಲೂ ಕೂಡ ನಿಯಮಿತವಾಗಿ ಬರೆಯಲು ಸಮಯ ಮತ್ತು ಅದಕ್ಕೆ ಅನುಗುಣವಾದ ಪರಿಸ್ಥಿತಿ ಎರಡೂ ಸಿಗಲಿಲ್ಲ ಎಂದೇ ಹೇಳಬಹುದು.
ಹಾಗೆಯೇ ನನ್ನ ಸುಮಾರಷ್ಟು ಯೋಜನೆಗಳು ಇನ್ನೇನು ಪ್ರಾರಂಭವಾಯಿತು ಎನ್ನುವ ಹಂತಕ್ಕೆ ಬಂದು ನಿಂತು ಹೋದವು. ಕೆಲವು ಮುಂದಿನವರ್ಶಕ್ಕೆ ಮುಂದೂಡಲ್ಪಟ್ಟವು.
ಈ ವರ್ಷದಲ್ಲಿ ಒಂದಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಯಾವುದು ಫಲ ಕೊಡುತ್ತದೋ?

ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

Wednesday, December 25, 2013

ಚಿತ್ರೋತ್ಸವದ ಜಾಲತಾಣದ ಬೇಸರದ ಸಂಗತಿಯನ್ನು ಕುರಿತು...

ಹಬ್ಬದ ರೂಪದಲ್ಲಿ 75 ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿ ಪ್ರದರ್ಶಿಸಲು ಆಯೋಜಿಸಲಾಗಿದೆ ಬಟ್ಟಿಗಳಲ್ಲಿ ಮತ್ತು ಛಾಯಾಚಿತ್ರಗಳನ್ನು ಅತ್ಯಂತ ಎಬ್ಬಿಸುವ ಪ್ರದರ್ಶನ ಸ್ನೇಹ ಹೆಚ್ಚು ವೀಕ್ಷಕ. ಸಿನಿಮಾ ಸೃಜನಶೀಲ ಮತ್ತು ಶೈಕ್ಷಣಿಕ ಅಂಶಗಳನ್ನು ಮೇಲೆ ............................
ಉತ್ಸವ ಸಮಿತಿ ಶ್ರೇಷ್ಠತೆ ಉನ್ನತ ಮಟ್ಟದ ಖಚಿತಪಡಿಸಿಕೊಳ್ಳಲು, ಗಿರೀಶ್ ಕಾಸರವಳ್ಳಿ, ವಿಶ್ವದ ಪ್ರಮುಖ ನಿರ್ಮಾಪಕರು ಒಂದು ವಹಿಸಿದ್ದರು. 
ಜೀವನದ ವಿವಿಧ ರಂಗಗಳ ಶ್ರೇಷ್ಠ ಸಲಹೆಗಾರರ ​​ಉನ್ನತ ಸಮಿತಿ ಹಬ್ಬದ ಹಿಂದೆ ಸ್ಪೂರ್ತಿಯಾಗಬಹುದು 
ಆಗಿತ್ತುಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರ ಸಂಸ್ಕೃತಿಯ ಪ್ರಮುಖ ಸೆಂಟರ್ ಆಗಲು ಕರ್ನಾಟಕ ಖ್ಯಾತಿವೆತ್ತ ಪರಂಪರೆ ಮತ್ತು ಸಾಹಿತ್ಯ, ಲಲಿತಕಲೆ ಮತ್ತು ಸಿನಿಮಾ ಜಾಗ ರಾಜ್ಯದ ಸಾಧನೆಗಳು ಅನುಗುಣವಾಗಿ. ...................
ಅಕಾಡೆಮಿ 4 BIFFES ಕಲಾತ್ಮಕ ನಿರ್ದೇಶಕ, ಭಾರತ, ಶ್ರೀ HN ನರಹರಿ ರಾವ್ ಫಿಲ್ಮ್ ಸೊಸೈಟಿ ಚಳುವಳಿಯ ಚಿತ್ರ ತಜ್ಞ ಮತ್ತು ಅನುಭವಿ ನೇಮಕ ಮಾಡಿದೆ... 

ಸಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಳ್ಳೆಯ ಚಿತ್ರಗಳಿವೆ. ಅದು ಬೇರೆ ಮಾತು. ಅದರ ಬಗ್ಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳೋಣ ಎಂದು ಅದರ ಜಾಲತಾಣಕ್ಕೆ ಬೇಟಿ ಕೊಟ್ಟೆ. ಅಲ್ಲಿನ ಭಾಷೆಯ ಆಯ್ಕೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಇದ್ದುದರಿಂದ ನಾನು ಎರಡನೇ ಯೋಚನೆ ಮಾಡದೆ ಕನ್ನಡ ಆಯ್ಕೆ ಮಾಡಿಕೊಂಡು ಅಲ್ಲಿನ ವಿವರಗಳನ್ನು ಓದಲು ಪ್ರಾರಂಭಿಸಿದೆ. ಆಗ ಕಂಡ ಅವಸ್ಥೆ ಇದು. ಅದೆಂತಹ ಅಧ್ವಾನ ಎಂದರೆ ಈ ಸುಖಕ್ಕೆ ಯಾಕಾದರೂ ಕನ್ನಡದ ಭಾಷೆಯ ಆಯ್ಕೆ ಕೊಡುತ್ತಾರೋ ಎನಿಸದಿರಲಿಲ್ಲ. ಒಂದು ಚಿತ್ರೋತ್ಸವಕ್ಕೆ ಕಡಿಮೆ ಖರ್ಚು ಆಗುವುದಿಲ್ಲ. ಎಲ್ಲವನ್ನೂ ತಕ್ಕ ಮಟ್ಟಿಗೆ ಯೋಜಿಸಿ ಭಾಷೆಯ ವಿಷಯದಲ್ಲಿ ಅದರಲ್ಲೂ ನಮ್ಮದೇ ಭಾಷೆಯ ವಿಷಯದಲ್ಲಿ ಇಂತಹ ದಿವ್ಯ ನಿರ್ಲಕ್ಷ್ಯ ಕಂಡು ನನಗೆ ಅಚ್ಚರಿ, ಬೇಸರವಾಗದಿರಲಿಲ್ಲ.ಯಾಕೆ ಇಷ್ಟು ತಾತ್ಸಾರ. ಅಲ್ಲೇನೂ ಪುಟಗಟ್ಟಲೆಯ ಲೇಖನಗಳಿಲ್ಲ. ಇರುವ ಕೆಲವೇ ಕೆಲವು ಬರಹಗಳನ್ನೂ ಇಷ್ಟು ಅಧ್ವಾನವಾಗಿ ಬರೆಯುವುದಕ್ಕೆ ಅದೇಗೆ ಸಾಧ್ಯ ಮತ್ತು ಆ ಆಯೋಜಕರುಗಳು ಇದನ್ನು ಗಮನಿಸದಿರಲು ಹೇಗೆ ಸಾಧ್ಯ? ಹೀಗೆ ಮುಂದುವರೆದರೆ , ದೊಡ್ಡ ದೊಡ್ದವರೇ, ಹಿರಿಯರೇ. ಸಂಘ ಸಂಸ್ಥೆಗಳೇ ಹೀಗೆ ಮಾಡಿದರೆ ಅದೇಗೆ ನಮ್ಮ ಭಾಷೆ ಬೆಳೆಯಲು ಸಾಧ್ಯ ಎನಿಸದಿರಲಿಲ್ಲ. ಶ್ರೀ NR ವಿಷು ಕುಮಾರ್ ಶ್ರೀ HN ನರಹರಿ ರಾವ್ ಶ್ರೀ ಆರ್.ಕೆ. ಶಿವರಾಂ,ಶ್ರೀ ಚೆನ್ನಪ್ಪ ಪ್ರಕಾಶ್ ..ಹೀಗೆ ಸುಮಾರಷ್ಟು ದಿಗ್ಗಜರಿರುವಾಗ ಇಂತಹದ್ದು ಹೇಗೆ ಸಾಧ್ಯವಾಯಿತು ಎಂಬುದನ್ನು ಅವರೇ ಉತ್ತರಿಸಬೇಕೇನೋ?

ಈ ಕೆಳಗಿನ ಬರಹವನ್ನು ಓದಿ ಏನೆಂದು ಕಂಡು ಹಿಡಿದವರಿಗೆ ಚಿತ್ರೋತ್ಸವಕ್ಕೆ ಉಚಿತ ಪಾಸ್ ಕೊಡುವ ಬಹುಮಾನವಿದೆಯೇನೋ?
ಎಲ್ಲೋ, ಅಫ್ಘಾನಿಸ್ಥಾನ ಅಥವಾ ಬೇರೆಡೆ, ಯುದ್ಧ ಚೂರಾಗುತ್ತವೆ ದೇಶದಲ್ಲಿ ... ತನ್ನ ಮೂವತ್ತರ ಹರೆಯದ ಯುವತಿ ಕುಸಿದ ಕೋಣೆಯಲ್ಲಿ ತನ್ನ ಹಳೆಯ ಪತಿ ಮೇಲೆ ವೀಕ್ಷಿಸಿದಾಗ. ಅವರು ಏಕೆಂದರೆ ಕುತ್ತಿಗೆ ಗುಂಡಿನ ತರಕಾರಿ ರಾಜ್ಯದ ಕಡಿಮೆ ಇದೆ. ಅವರು ಆದರೆ ಸಹೋದರರು, ಜಿಹಾದ್ ತನ್ನ ಸಹಚರರು ತೊರೆಯಿತು ಕೇವಲ. ಒಂದು ದಿನ, ಮಹಿಳೆ ತನ್ನ ಮೂಕ ಪತಿ ತಮ್ಮ ಸಂಬಂಧದ ಬಗ್ಗೆ ತನ್ನ ಭಾವನೆಗಳನ್ನು ಬಗ್ಗೆ ಅವರಿಗೆ ಸತ್ಯವನ್ನು ಹೇಳಲು ನಿರ್ಧರಿಸುತ್ತಾಳೆ. ತನ್ನ ಬಾಲ್ಯದ, ತನ್ನ ನೋವನ್ನು ತನ್ನ ನಿರಾಶೆಯನ್ನು, ತನ್ನ ಒಂಟಿತನ, ತನ್ನ ಕನಸುಗಳ, ತನ್ನ ಆಸೆಗಳನ್ನು ಬಗ್ಗೆ ಮಾತಾಡುತ್ತಾನೆ ... ಅವರು ಕಳೆದ 10 ವರ್ಷಗಳ ಮದುವೆಯಾಗಿದ್ದಾರೆ ಸಹ, ಅವರು ಮೊದಲು ಮಾಡಿದ ಎಂದಿಗೂ ವಿಷಯಗಳನ್ನು ಹೇಳುತ್ತಾರೆ.

ಇದು ಅಫ್ಘಾನಿಸ್ತಾನ್ ದೇಶದ ಆಫ್ಘನಿಸ್ತಾನಿ ಭಾಷೆಯ ಚಲನಚಿತ್ರದ ಕನ್ನಡ ಲಿಪಿಯ ಸಾರಾಂಶವಂತೆ. ಬಹುಶ ಇದನ್ನು ಅಫ್ಘಾನಿಸ್ತಾನ್ ಭಾಷೆಯಲ್ಲಿ ಕೊಟ್ಟಿದ್ದರೂ ಅಲ್ಪಸ್ವಲ್ಪ ಅರ್ಥವಾಗುತ್ತಿತ್ತೇನೋ?

Saturday, December 14, 2013

ಹಾಡಿನ ಹಿನ್ನೆಲೆಯಲ್ಲಿ...

ಬಟ್ಟಲು ಗನ್ನಿನ ಚಲುವೆ ಲೇಖನವನ್ನೂ ಮೆಚ್ಚಿ ಹಲವಾರು ಗೆಳೆಯರು ಫೋನ್ ಮಾಡಿದ್ದರು. ನನಗೆ ಪರಿಚಯವಿರುವ ಹಿರಿಯ ವ್ಯಕ್ತಿಯಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿದ್ದು ಈಗ ಅದನ್ನು ಮುಂದುವರೆಸದೆ ಆರಾಮವಾಗಿ ಮನೆಯಲ್ಲಿದ್ದಾರೆ. ಆದರೆ ಸಾಹಿತ್ಯದ ಬಗ್ಗೆ ಸಿನೆಮಾದ ಬಗ್ಗೆ ನಿರರ್ಗಳವಾಗಿ ಆಸಕ್ತಿಯಿಂದ ಗಂಟೆಗಟ್ಟಲೆ ಬೇಕಾದರೆ ಮಾತನಾಡುತ್ತಾರೆ. ನನಗವರ ಪರಿಚಯವಾದದ್ದು ಪಾರ್ಕಿನಲ್ಲಿ. ದಿನ ನಾನು ಒಂದಷ್ಟು ಕಸರತ್ತು[?] ಮಾಡಿ ಅಲ್ಲಿನ ಕಲ್ಲು ಬೆಂಚಿನ ಮೇಲೆ ಕುಳಿತುಕೊಳ್ಳುತ್ತಿದ್ದೆ. ಆಗ ಅದೊಂದು ದಿನ ಅವರೆ ನನ್ನ ಹಿನ್ನೆಲೆ ವಿಚಾರಿಸಿದರು. ನಾನು ಸಿನೆಮಾದವನು, ಜೊತೆಗೊಂದಿಷ್ಟು ಸಾಹಿತ್ಯದ ಜ್ಞಾನವಿದೆ ಎಂಬುದನ್ನು ತಿಳಿದ ಮೇಲಂತೂ ನನ್ನೊಡನೆ ಗೆಳೆತನ ಬೆಳೆಸಿಯೇಬಿಟ್ಟರು. ಅವರ ಕಾಲದ ಸಿನೆಮಾಗಳು ಅದು ಬಿಡುಗಡೆಯಾದ ದಿನಗಳಲ್ಲಿ ನಡೆದ ಆಸಕ್ತಿಕರವಾದ ಘಟನೆಗಳನ್ನೂ ಅಷ್ಟೇ ಆಸಕ್ತಿದಾಯಕವಾಗಿ ಹೇಳುತ್ತಾರೆ. ಆಗಾಗ ನನ್ನ ಬ್ಲಾಗ್ ಕೂಡ ಓದುತ್ತಾರೆ. ನನ್ನ ಲೇಖನ ಓದಿದ್ದ ಅವರು ಆವತ್ತು ಮಾತನಾಡಲು ಸಿದ್ಧರಾಗಿಯೇ ಬಂದಿದ್ದರೆಂದು ಕಾಣಿಸುತ್ತದೆ. ನನ್ನ ಲೇಖನದ ಬಗ್ಗೆ ಮಾತನಾಡಲು ಶುರು ಮಾಡಿದ ಅವರು ಸಿನಿಮಾದ ಹಾಡುಗಳ ಬಗ್ಗೆ ಹೊಸ ಲೋಕವೊಂದನ್ನೇ ತೆರೆದಿಟ್ಟರು.
ಒಂದು ಸಿನೆಮಾವನ್ನು, ಸಿನೆಮಾದ ಹಾಡುಗಳನ್ನ ಪ್ರತಿನಿಧಿಸುವುದಾದರೂ ಏನು? ನಮಗೆ ಇಷ್ಟವಾದದ್ದು ನಮ್ಮ ಹಿರಿಯರಿಗೆ ಏಕೆ ಇಷ್ಟವಾಗುವುದಿಲ್ಲ...ಈವತ್ತಿನ ನಮ್ಮ ಮೆಚ್ಚಿನ ಚಿತ್ರಗಳನ್ನ ಹಿರಿಯರು ಏಕೆ ಇಷ್ಟ ಪಡುವುದಿಲ್ಲ. ನಮ್ಮ ತಲೆಮಾರಿನ ನಾಯಕರುಗಳನ್ನು ಹಳಬರು ಯಾಕೆ ಇಷ್ಟ ಪಡುವುದಿಲ್ಲ ಎನ್ನುವ ಪ್ರಶ್ನೆ ನನ್ನನ್ನು ಆವಾಗಾವಾಗ ಕಾಡುತ್ತಿರುತ್ತದೆ. ಉತ್ತರವೇನೋ ಸುಲಭ. ಅವರವರ ತಲೆಮಾರಿನ ಘಟನೆಗಳು ಚಿತ್ರಗಳು ಅವರವರಿಗೆ ಇಷ್ಟವಾಗುತ್ತವೆ ಎನ್ನುವುದಂತೂ ಖಚಿತ.ಆದರೆ ಅದಷ್ಟೇ ಅಲ್ಲ. ಅಲ್ಲಿ ನೆನಪುಗಳಿರುತ್ತವೆ.
'ಏನಪ್ಪಾ ಈಗ ಯಾಕೆ ಅಂತ ಸಿನೆಮಾಗಳನ್ನೂ ತೆಗೀತೀರಾ...ನಮ್ಮ ಕಾಲದಲ್ಲಿ ಎಷ್ಟೊಳ್ಳೆ ಸಿನೆಮಾಗಳು ಬರ್ತಿದ್ವು ಗೊತ್ತಾ..' ಎಂದರು. ನಾನು 'ಅಜ್ಜ..ನೀವು ಇತ್ತೀಚಿಗೆ ಯಾವ ಸಿನೆಮಾ ನೋಡಿದ್ದೀರಿ...ಎಂಬ ಪ್ರಶ್ನೆಗೆ ಅವರಿಂದ ಯಾವುದೂ ಇಲ್ಲಾ ಯಾಕೆಂದರೆ ಯಾವುದೂ ಚೆನ್ನಾಗಿರಲಿಲ್ಲ ಎನ್ನುವ ಉತ್ತರ ಬಂತು. ಯಾವ ಸಿನೆಮಾವನ್ನೂ ನೋಡದೆ ಚೆನ್ನಾಗಿಲ್ಲ ಎನ್ನುವುದಾದರೂ ಹೇಗೆ. ಹಾಗಾದರೆ ಅವರ ಕಾಲದಲ್ಲಿ ಬಂದ ಎಲ್ಲಾ ಸಿನೆಮಾಗಳೂ ಒಳ್ಳೆಯದಿತ್ತಾ?ಸುಮ್ಮನೆ  ಅವರ ಜೊತೆ ಮಾತಿಗಿಳಿದು ಅವರ ಕಾಲದ ಸಿನೆಮಾಗಳ ಬಗ್ಗೆ ಮಾತನಾಡಿದೆ. ಅವರು ಪ್ರತಿ ಸಿನೆಮಾದ ಹಿಂದೆ ಅವರ ಜೀವನದ ಘಟನೆಗಳನ್ನೂ ನೆನಪು ಮಾಡಿಕೊಂಡು ಹೇಳುತ್ತಿದ್ದರು. ಆ ಸಿನೆಮಾ ಬಂದಾಗ ನಾನು ಕಾಲೆಜಿನಲ್ಲಿದ್ದೆ, ಈ ಸಿನೆಮಾ ಬಂದಾಗ ನನ್ನ ಮದುವೆಯಾಗಿತ್ತು ಹೀಗೆ...ಆಗ ನನಗರ್ಥವಾದದ್ದು ಅವರ ಬದುಕಿನ ಮಜಳುಗಳಲ್ಲಿ ಸಿನೆಮಾಗಳೂ ಹಾಡು ಹೋಗಿದ್ದವು ಎಂಬುದು. ಹೌದು. ಒಂದು ಹಾಡು, ಸಿನಿಮಾದ ಹಿನ್ನೆಲೆಯಲ್ಲಿ ಜೀವನದ ಒಂದೊಂದು ಮಜಲುಗಳಿರುತ್ತವೆ. ಹಾಗಾಗಿ ಅದನ್ನು ಕೇಳಿದಾಗ ಅದ್ಯಾವುದೋ ಅವ್ಯಕ್ತ ಆತ್ಮೀಯ ಭಾವ ನಮ್ಮನ್ನು ಆವರಿಸಿ ಅದನ್ನು ಇಷ್ಟಪಡಿಸಬಹುದು. ಆದರೆ ಆವತ್ತಿನ ಹಿರಿಯರಿಗೆ ಈವತ್ತಿನ ಸಿನೆಮಾಗಳಲ್ಲಿ ಅಂತಹ ನೆನಪುಗಳು ಇರುವ ಸಾಧ್ಯತೆ ಕಡಿಮೆ. 

Sunday, December 8, 2013

ಹೀಗೊಂದು ವಿಮರ್ಶೆಯ ವಿಮರ್ಶೆ:

ನಾನು ನನಗೆ ಸಿನೆಮಾ ಆಸಕ್ತಿ ಬಂದ ದಿನದಿಂದಲೂ ಚಿತ್ರ ವಿಮರ್ಶೆಗಳನ್ನು ಪತ್ರಿಕೆಗಳಲ್ಲಿ ಓದುತ್ತಲೇ ಬಂದವನು. ಭಾನುವಾರ ಅದಕ್ಕಾಗಿಯೇ ನಾಲ್ಕಾರು ಪತ್ರಿಕೆಗಳನ್ನು ಕೊಂಡು, ಒಂದಷ್ಟನ್ನು ಗ್ರಂಥಾಲಯಗಳಲ್ಲಿ ಓದುತ್ತಿದ್ದೆ. ಹಾಗೆ ಚಿತ್ರ ವಿಮರ್ಶೆಯನ್ನು ಓದಿ ಆನಂತರ ಸಿನಿಮಾ ನೋಡಿದಾಗ ಅಥವಾ ಸಿನೆಮಾ ನೋಡಿ ಚಿತ್ರ ವಿಮರ್ಶೆ ಓದಿದಾಗ ನನ್ನ ಅನಿಸಿಕೆಗೂ ಸಿನೆಮಾಕ್ಕೂ ಮತ್ತು ಬರಹಕ್ಕೂ ತಾಳೆಯಾದಾಗ ಖುಷಿಯಾಗುತ್ತಿದ್ದೆ. ಆ ವಿಮರ್ಶಕರ ಹೆಸರುಗಳನ್ನೂ ನೆನಪಲ್ಲಿಟ್ಟುಕೊಂದು ಅವರ ಚಿತ್ರವಿಮರ್ಶಾ ಬರಹಗಳನ್ನು ತಪ್ಪದೆ ಓದುತ್ತಿದ್ದೆ. ಆದರೂ ಕೆಲವೊಮ್ಮೆ ಅದು ಏರು ಪೇರಾಗುತ್ತಿತ್ತು.
ನಾನು ಸಿನಿಮಾವನ್ನು ಖಾಲಿ ತಲೆಯಲ್ಲಿ ನೋಡುತ್ತೇನೆ. ನಿರ್ದೇಶಕ ನಟ ನಾಯಕ ನಾಯಕಿ ಕಥೆಗಾರ ಯಾರೇ ಆದರೂ ಸುಮ್ಮನೆ ಚಿತ್ರಮಂದಿರದ ಒಳಗೆ ಕುಳಿತು ನೋಡುತ್ತೇನೆ. ನೋಡುವ ಸಮಯದಲ್ಲಿ ನನ್ನ ತಲೆಗೆ ವಿಮರ್ಶೆಯ ಆಯುಧ ಕೊಡುವುದಿಲ್ಲ. ಅಲ್ಲಿನ ಪ್ರತಿಯೊಂದು ಅಂಶವನ್ನು ಘಟನೆಯನ್ನು ನನ್ನೊಳಗೆ ತುಂಬಿಕೊಳ್ಳುತ್ತೇನೆ ಸಿನಿಮಾ ನೋಡುವಾಗ ನನ್ನಲ್ಲಿ ಇರುವವನು ಸಾಮಾನ್ಯ ಪ್ರೇಕ್ಷಕನೇ ಹೊರತು ಚಿತ್ರಕರ್ಮಿಯಲ್ಲ. ಹಾಗಾಗಿ ನಾನು ಸಿನಿಮಾವನ್ನು ಎಂಜಾಯ್ ಮಾಡುತ್ತೇನೆ. ಬೋರ್ ಹೊಡೆಸಿಕೊಂಡು ತಲೆ ತಲೆ ಚಚ್ಚಿಕೊಳ್ಳುತ್ತೇನೆ. ಎಷ್ಟೇ ಬೋರ್ ಆದರೂ ಕೊನೆಯವರೆಗೂ ನೋಡಿ ಬೈದು ಎದ್ದು ಬರುತ್ತೇನೆ.
ಆದರೆ ನನಗೆ ವಿಮರ್ಶೆಗಳನ್ನು ಪತ್ರಿಕೆ ಇನ್ನಿತರ ಮಾಧ್ಯಮಗಳಲ್ಲಿ ಓದಿದಾಗ ಅವರು ಕೊಟ್ಟು ರೇಟಿಂಗ್ ನೋಡಿದಾಗ ಇವರು ಯಾವ ಆಧಾರದ ಮೇಲೆ ರೇಟಿಂಗ್ ಕೊಟ್ಟಿದ್ದಾರೆ ಎನಿಸುತ್ತದೆ.ಬೆಂಗಳೂರು ವಿಷಯದಲ್ಲಿ ಎಲ್ಲರ ವಿಮರ್ಶೆಯನ್ನೂ ತಪ್ಪದೆ ಓದುತ್ತೇನೆ. ಆಗೆಲ್ಲಾ ನನಗೆ ಕೆಲವೊಮ್ಮೆ ಗೊಂದಲವಾಗುತ್ತದೆ. ಒಂದು ಚಿತ್ರಕ್ಕೆ 5 ಕ್ಕೆ ನಾಲ್ಕು ಸ್ಟಾರ್ ಕೊಡುವ ವಿಮರ್ಶಕ ಅದ್ಯಾವ ದೃಷ್ಟಿಯಿಂದ ಚಿತ್ರ ನೋಡಿರುತತಾನೆ ಎನ್ನುವ ಗೊಂದಲ ಶುರುವಾಗುತ್ತದೆ. ನಾಲ್ಕು ಸ್ಟಾರ್ ಪಡೆದ ಆ ಚಿತ್ರ ಚಿತ್ರಮಂದಿರದಲ್ಲಿ ಒಂದೂ ವಾರವೂ ಓಡಿರುವುದಿಲ್ಲ. ಹಾಗೆಯೇ ನೋಡಿದ ಸಾಮಾನ್ಯ ಪ್ರೇಕ್ಷಕನಿಗೆ ಖುಷಿ ಕೊಟ್ಟಿರುವುದಿಲ್ಲ. ಹಾಗಾದರೆ ಒಬ್ಬ ವಿಮರ್ಶಕ ಯಾರಿಗಾಗಿ ವಿಮರ್ಶೆ ಬರೆಯುತ್ತಾನೆ. ಅವನು ವಿಮರ್ಶಕ, ಅವನಿಗನಿಸಿದ್ದನ್ನು ಕೂಡಿ ಕಳೆದು ಗುಣಿಸಿ ಭಾಗಿಸಿ ವಿಮರ್ಶೆ ಮಾಡಿದ್ದರೆ, ಅದೂ ಪ್ರೇಕ್ಷಕನ ಮಟ್ಟದಲ್ಲಿ ಇಲ್ಲವಾಗಿದ್ದರೆ ಅದನ್ನು ಸಾರ್ವಜನಿಕವಾಗಿ ಯಾಕಾದರೂ ಪ್ರಕಟಿಸಬೇಕು ಎಂಬ ಪ್ರಶ್ನೆ ಕಾಡುತ್ತದೆ. ತನ್ನ ದಿನಚರಿ ಪುಸ್ತಕದಲ್ಲೋ ಬ್ಲಾಗ್ ನಲ್ಲೂ ಅದನ್ನು ಬರೆದಿಟ್ಟುಕೊಂಡರೆ ಮುಗಿಯಿತಲ್ಲ ಎನಿಸುತ್ತದೆ.
ಹಾಗಂತ ಗುಣಮಟ್ಟದ ದೃಷ್ಟಿಯಿಂದ ವಿಮರ್ಶಕ ಅಳೆದಿರುತ್ತಾನೆ ಹಾಗಂತ ಯಾವ ಯಾವ ಚಿತ್ರಕ್ಕೋ ರೇಟಿಂಗ್ ಕೊಡಲಾಗುವುದಿಲ್ಲ, ಎನ್ನಬಹುದೇನೋ..ಅಂದರೆ ಗುಣಮಟ್ಟ ಎಂದರೇನು? ಉದಾಹರಣೆಗೆ ಒಂದು ವಯಸ್ಕರ ಚಿತ್ರ ಬಿಡುಗಡೆಯಾಗಿ ನೂರಾರು ದಿನ ಓಡಿ ಹಣಗಳಿಕೆ ಮಾಡಿದಾಗ ಅದರ ವಿಮರ್ಶೆ ಮಾಡುವಾಗ ಅದನ್ನು ಉತ್ತಮ ಚಿತ್ರ ಎನ್ನಲು ಸಾಧ್ಯವಾಗುತ್ತದೆಯೇ? ಎಂಬ ಪ್ರಶ್ನೆಯೂ ಬರುತ್ತದೆ. ಆದರೆ ನಾನಿಲ್ಲಿ ಮಾತನಾಡುತ್ತಿರುವುದು ಒಂದು ಮನರಂಜನಾತ್ಮಕ ಚಿತ್ರದ ಬಗ್ಗೆ. ಹಾಗಾದರೆ ಕಾಸರವಳ್ಳಿ ಚಿತ್ರಗಳಾವುವು ನೂರು ದಿನ ಓಡಿದ ಉದಾಹರಣೆ ಇಲ್ಲ.ಹಾಗಂತ ಅವರ ಚಿತ್ರಕ್ಕೆ ಒಂದು ಸ್ಟಾರ್ ಕೊಡಲಾಗುತ್ತದೆಯೇ ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ. ಆದರೆ ನನ್ನ ಪ್ರಕಾರ ಕಾಸರವಳ್ಳಿ ಚಿತ್ರದ ಗುಣಮಟ್ಟ ಹೆಚ್ಚಿಸಿದರೆ ಹೊರತು ಪ್ರೇಕ್ಷಕರನ್ನು ಬೆಳಸಲಿಲ್ಲ. ಚಿತ್ರ ಮಾಡಿ ಕೊಟ್ಟು ಸುಮ್ಮನಿದ್ದು ಬಿಟ್ಟರಾ? ಅದನ್ನು ಹೋರಾಡಿ ಹೊಡೆದಾಡಿ ಚಿತ್ರಮಂದಿರಕ್ಕೆ ಬಿಡುಗಡೆ ಮಾಡಲು ಪ್ರಯತ್ನಿಸಲಿಲ್ಲವಾ..? ಅಥವಾ ನನ್ನ ಸಿನೆಮಾಕ್ಕೆ ಇಷ್ಟೇ ಸಾಕು ಎಂಬ ನಿರ್ಧಾರಕ್ಕೆ ಬಂದು ಬಿಟ್ಟರಾ?
ಸುಮ್ಮನೆ ಗಮನಿಸಿ ಪ್ರೇಕ್ಷಕ ಕೇಳುವುದು ಗಟ್ಟಿ ಕಥೆಯನ್ನು. ನಾಯಿ ನೆರಳು ಕೂರ್ಮಾವತಾರ ಚಿತ್ರಗಳನ್ನು ನೋಡಿದವನು ಅರ್ಧಕ್ಕೆ ಎದ್ದು ಹೋಗಲು ಸಾಧ್ಯವೇ ಇಲ್ಲ. ನಮ್ಮಲ್ಲಿ ಮೈಸೂರು ಮಲ್ಲಿಗೆ, ಚಿನ್ನಾರಿ ಮುತ್ತ ಚಿತ್ರಗಳು ನೂರಾರು ದಿನ ಓಡಿ ದಾಖಲೆ ಗಳಿಸಿವೆ. 
ಹಾಗಾಗಿ ಒಂದು ಚಿತ್ರವನ್ನು ಅದರ ಗತಿಗೆ ತಕ್ಕಂತೆ ನೋಡಿ ಪ್ರೇಕ್ಷಕರಲ್ಲಿ ಪ್ರೇಕ್ಷಕನಾಗಿ ವಿಮರ್ಶಕ ಚಿತ್ರ ನೋಡಿ ಬರೆದರೇ ಆಗ ವಸ್ತು ನಿಷ್ಠತೆ ಸಾಧ್ಯವೇನೋ? ಆದರೆ ನಮ್ಮ ಮಾಧ್ಯಮದವರು ಹಾಗೆ ಮಾಡುವುದಿಲ್ಲ. ಉದಾಹರಣೆಗೆ ಕಳೆದವಾರ ಬಿಡುಗಡೆಯಾದ 6-5=2 ಚಿತ್ರದ ಜೊತೆಗೆ ಇನ್ನೂ ಎರಡೂ ಚಿತ್ರಗಳು ಬಿಡುಗಡೆಯಾದವು. ಈ ಚಿತ್ರ ಯಾವ ಪ್ರಚಾರವಿಲ್ಲದೆ ತಾರಾಮೌಲ್ಯವಿಲ್ಲದೆ ಬಿಡುಗಡೆಯಾದರೆ ಇನ್ನೆರಡು ಅದ್ದೂರಿ ಪ್ರಚಾರದ ಜೊತೆಗೆ ಬಿಡುಗಡೆಯಾಯಿತು. ನಮ್ಮ ಬಹುತೇಕ ಮಾಧ್ಯಮಗಳು ಅವೆರಡನ್ನೂ ವಿಮರ್ಶೆ ಮಾಡಿದವು. ಈ ಚಿತ್ರವನ್ನು ನಿರ್ಲಕ್ಷಿಸಿದರು. ಆದರೆ ಕಥೆಯ ಸತ್ವ ಮತ್ತು ಭಿನ್ನತೆ, ನಿರೂಪಣೆಯಿಂದ ಆ ಚಿತ್ರ ಗೆದ್ದಿತು. ಈಗ ಆ ಚಿತ್ರದ ಬಗ್ಗೆ ಎಲ್ಲಾ ಮಾತಾಡುತ್ತಾರೆ. ಅಂದರೆ ನಮ್ಮ ಮಾಧ್ಯಮಗಳು ಒಂದು ಸತ್ವಯುತ ಚಿತ್ರವನ್ನು ತಾವೇ ನೋಡಿ ವೀಕ್ಷಿಸಿ ಪರಾಮರ್ಶಿಸಿ ವಿಮರ್ಶೆ ನೀಡುವುದಿಲ್ಲ ಅಂದ ಹಾಗಾಯಿತಲ್ಲ. ಅವೂ ಕೂಡ ಎದ್ದೆತ್ತಿನ ಬಾಲ ಹಿಡಿಯುವವು ಎಂದರೆ ಬೇಸರದ ಸಂಗತಿ ತಾನೇ.
ಹಾಗೆಯೇ ನಮ್ಮವರು ಒಂದು ಚಿತ್ರಕ್ಕೆ ಒಂದಷ್ಟು ಸ್ಟಾರ್ ಕೊಟ್ಟು ಹೊಗಳಿದಾಗ ಚಿತ್ರ ನೋಡಿದಾಗ ಬೋರ್ ಹೊಡೆದರೆ ಏನನ್ನುವುದು. ವಿಮರ್ಶೆ ನಂಬಿ ಚಿತ್ರಕ್ಕೆ ಹೋಗುವುದಾ..? ಹಿಂದಿ ಚಿತ್ರ ಸಿಂಘಂಗೆ ಬೈಯ್ದಿದ್ದರು ವಿಮರ್ಶಕರು.ಆದಕ್ಕೆ ಕಾರಣ ಅದೊಂದು ಮಸಾಲೆ, ರೀಮೇಕ್ ಎನ್ನುವುದಾಗಿತ್ತು. ಆದರೆ ಚಿತ್ರ ಯಶಸ್ವೀಯಾಯಿತು.ಆದರೆ ಚಿತ್ರ ನೋಡಿದರೆ ಅದು ರೀಮೇಕ್ ಆದರೂ ಚಿತ್ರಕತೆ ಗಟ್ಟಿಯಾಗಿತ್ತು. ಕಥೆಯ ತಿರುಳನ್ನಷ್ಟೇ ತೆಗೆದುಕೊಂಡಿದ್ದ ರೋಹಿತ್ ಶೆಟ್ಟಿ ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದರು. ವಿಮರ್ಶಕರು ಅದನ್ಯಾಕೆ ಗಮನಿಸಲಿಲ್ಲ. 
ನನ್ನ ಪ್ರಕಾರ ವಿಮರ್ಶಕ ನೋಡುಗನಾಗಬೇಕು. ಆ ಚಿತ್ರದ ಲಯಕ್ಕೆ ತಕ್ಕಂತೆ ಚಿತ್ರವನ್ನು ನೋಡಬೇಕು. ಅದು ಮಸಾಲೆ ಚಿತ್ರವಾಗಿದ್ದರೆ ಆ ನಿಟ್ಟಿನಲ್ಲಿ, ಕಲಾತ್ಮಕ ಚಿತ್ರವಾಗಿದ್ದರೆ ಆ ನಿಟ್ಟಿನಲ್ಲಿ, ಮನರಂಜನೀಯ ಚಿತ್ರವಾಗಿದ್ದರೆ ಆ ನಿಟ್ಟಿನಲ್ಲಿ ನೋಡಬೇಕು. ಹಾಗಾದಾಗ ಮಾತ್ರ ಆಯಾ ಚಿತ್ರಕ್ಕೆ ತಕ್ಕಂತೆ ಬಹುಪಾಲು ವಸ್ತು ನಿಷ್ಠ ವರದಿ ಮಾಡಲು ಸಾಧ್ಯವೇನೋ? ನಾನು ಎಲ್ಲಾ ಪತ್ರಿಕೆಗಳ ಎಲ್ಲರ ವಿಮರ್ಶೆ ಓದುತ್ತೇನೆ. ಹಲವರು ನನಗೆ ನಿಜಕ್ಕೂ ಇಷ್ಟವಾಗುತ್ತಾರೆ. ಅವರ ಬರಹದ ಶೈಲಿ , ವಸ್ತುನಿಷ್ಠತೆ ಖುಷಿ ಕೊಡುತ್ತದೆ. ಹೆಸರಿಸಬೇಕೆಂದರೆ ಬೆಂಗಳೂರು ಮಿರ್ರರ್ ನ ಶ್ಯಾಮ್ ಪ್ರಸಾದ್ ಚಿತ್ರ ವಿಮರ್ಶೆ ನನಗೆ ಇಷ್ಟವಾಗುತ್ತವೆ. ಅದಕ್ಕೆ ಕಾರಣ ಆ ವ್ಯಕ್ತಿಗಿರುವ ಚಿತ್ರಮಾಹಿತಿ ಮತ್ತು ದೃಷ್ಟಿಕೋನ ಎನ್ನಬಹುದು. ಹಾಗೆಯೇ ಅವರ ಬಹುತೇಕ ಚಿತ್ರಗಳ ಬಿಡುಗಡೆಯಾದ ಎರಡನೆಯ ದಿನದ ವಿಮರ್ಶೆಗೂ ವಾರದ ಫಲಿತಾಂಶಕ್ಕೂ ಹೆಚ್ಚು ಕಡಿಮೆ ತಾಳೆಯಾಗುತ್ತದೆ..ಒಬ್ಬ ವಿಮರ್ಶಕ ಗೆಲ್ಲುವುದು ನನ್ನ ಪ್ರಕಾರ ಅಲ್ಲಿಯೇ. ಓದಿದ್ದೇ ಒಂದು ಬರೆದಿದ್ದು ಒಂದು ಫಲಿತಾಂಶವೇ ಒಂದು ಎಂದಾದಲ್ಲಿ ಅದನ್ನು ನಂಬುವುದಾದರೂ ಹೇಗೆ?
ಹಾಗೆಯೆ ಕೆಲವು ವಿಮರ್ಶಕರಂತೂ ಸಿನಿಮಾ ಹೇಗಿದೆ ಎಂಬುದನ್ನೂ ತಮ್ಮ ಬರಹದ ಮೂಲಕ ತೋರಿಸುವುದಕ್ಕಿಂತ ತಮ್ಮ ಬರಹದ ಶೈಲಿ ತೋರಿಸುವುದಕ್ಕೆ ಕಷ್ಟ ಪಡುತ್ತಾರೆ. ಸುಮ್ಮನೆ ಅಂತರ್ಜಾಲದಲ್ಲಿ ಒಂದಷ್ಟು ವಿಮರ್ಶೆ ಓದಿದಾಗ ನನಗನಿಸಿದ್ದು ಇದು. ದೊಡ್ಡ ದೊಡ್ಡ ಪದಗಳ ಬಳಕೆ, ಕಾವ್ಯಾತ್ಮಕ ವಾಕ್ಯ ರಚನೆ ಮತ್ತು ಉಪಮೆ ಮೂಲಕ ನಾವು ಓದುತ್ತಿರುವುದು ಸಿನಿಮಾ ವಿಮರ್ಶೆಯ ಅಥವಾ ಸಾಹಿತ್ಯವಾ? ಎಂಬ ಅನುಮಾನ ಬರುವಂತೆ ಮಾಡುತ್ತಾರೆ..
ಹಾಗಂತ ಪರಿಪೂರ್ಣವಾಗಿ ಒಂದು ಚಿತ್ರಕ್ಕೆ ವಿಮರ್ಶೆಯ ಮೂಲಕ, ಅದರ ಫಲಿತಾಂಶಕ್ಕೆ ನ್ಯಾಯ ಒದಗಿಸುವುದು ಸಾಧ್ಯವೇ ಇಲ್ಲ. ಬರೆದದ್ದು ಸತ್ಯವಾಗಿದ್ದರೂ ಅದರ ಫಲಿತಾಂಶ ಏರುಪೇರಾಗಬಹುದು. ಆದರೆ ಒಬ್ಬ ನಿರ್ದೇಶಕನನನ್ನು ನೋಡಿ, ಆತನ ಹಿನ್ನೆಲೆ ತಿಳಿದುಕೊಂಡು ವಿಮರ್ಶೆ ಮಾಡುವುದಕ್ಕೆ ನನ್ನ ವಿರೋಧವಿದೆ.ಸುಮ್ಮನೆ ಚಿತ್ರ ನೋಡಿ ಅನಿಸಿದ್ದನ್ನು ಬರೆಯಬೇಕಾದರೂ ಅದಕ್ಕೂ ಒಂದು ದೂರದೃಷ್ಟಿ ಸಿನಿಮಾ ಜ್ಞಾನ, ನೋಡುಗನಿಗೆ ಇರಬೇಕಾದ ಆಸಕ್ತಿ ಕುತೂಹಲ ಇರಬೇಕು. ಮತ್ತದನ್ನು ಕೆಲಸ ಎಂದು ಮಾಡದೆ ಪ್ರವೃತ್ತಿಯ ತರಹ ಮಾಡಿದಾಗ ಸಾಧ್ಯವಾದಷ್ಟು ನ್ಯಾಯ ಒದಗಿಸಬಹುದೇನೋ?
ಈ ವಿಷಯದ ಬಗ್ಗೆ ಒಂದಷ್ಟು ಚರ್ಚಿಸಬಹುದಾ?  

Saturday, December 7, 2013

ಕೆರಂಡಿರು-ಒಂದು ಬಂಧಿಖಾನೆಯ ಕಥೆ.

ನಿನ್ನೆ ದ್ಯಾವ್ರು ಚಿತ್ರ ನೋಡುತ್ತಿದ್ದಾಗ ತಟ್ಟನೆ ನೆನೆಪಾದದ್ದು ಈ ಕೆರಂಡಿರು ಚಿತ್ರ. 2003 ರಲ್ಲಿ ಬಿಡುಗಡೆಯಾದ ಈ ಚಿತ್ರ ನೈಜ ಕಥೆಯಾಧಾರಿತ ಚಿತ್ರ. ಅದೊಂದು ದೊಡ್ಡ ಬಂಧಿಖಾನೆ.ಲ್ಯಾಟಿನ್ ಅಮೆರಿಕಾದಲ್ಲಿರುವ ಆ ಬಂಧಿಖಾನೆಯಲ್ಲಿ ನಡೆಯುವ ಕಥೆಯಾಧಾರಿಸಿದ ಕೆರಂಡಿರು ಬ್ರೆಜಿಲ್ ದೇಶದ ಚಲನಚಿತ್ರ.
1992 ರಲ್ಲಿ ನಡೆದ ಕೆರಂಡಿರು ಮಾರಣ ಹೋಮವನ್ನು ಚಿತ್ರದ ಅಂತ್ಯಕ್ಕೆ ಬುದ್ದಿವಂತಿಕೆಯಿಂದ ಬಳಸಿಕೊಂಡಿರುವ ಈ ಚಿತ್ರದ
ಕಥೆಯ ನಿರೂಪಣೆ ಒಬ್ಬ ವೈದ್ಯನದು. ವೈದ್ಯನೊಬ್ಬ ಬಂಧಿಗಳ ವೈದ್ಯಕೀಯ ತಪಾಸಣೆಗೆ ಬರುತ್ತಾನೆ. ಅಲ್ಲಿನ ಖೈದಿಗಳಲ್ಲಿ ಏಡ್ಸ್ ರೋಗವಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿ ಇದ್ದವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಬರುವ ವೈದ್ಯ ಅಲ್ಲಿನ ವಿದ್ಯಮಾನಗಳನ್ನು ಗಮನಿಸಿತ್ತಾ ಹೋಗುತ್ತಾನೆ. ಪ್ರಾಣಿಗಳಿಗಿಂತಲೂ ಹೀನಾಯವಾಗಿ ಬಂಧಿಗಳನ್ನು ನಡೆಸಿಕೊಳ್ಳಲಾಗುತ್ತಿರುತ್ತದೆ ಅಲ್ಲಿ.  ಹಾಗಾಗಿ ಖೈದಿಗಳೆಲ್ಲಾ ಮಾನವತ್ವವನ್ನೇ ಮರೆತ ಮೃಗಗಳಂತೆ ಆಗಿರುತ್ತಾರೆ.ಅವರುಗಳನ್ನು ಮೋಡ ಮೊದಲಿಗೆ ಪರೀಕ್ಷಿಸಲು ವೈದ್ಯ ಬಹಳಷ್ಟು ತರಾಸು ಪಡಬೇಕಾಗುತ್ತದೆ. ಅದರಲ್ಲೂ ಕೆಲವರಂತೂ ನರರೂಪಿ ರಾಕ್ಷಸರಂತೆ ವರ್ತಿಸುತ್ತಾರೆ. ಮನೆ ಬಿಟ್ಟು , ಕುಟುಂಬದವರನ್ನು ಬಿಟ್ಟು ವರ್ಷಗಟ್ಟಲೆ ಕಳೆದದ್ದರಿಂದ ಅವರಲ್ಲಿ ನೋವು ಮತ್ತು ಹತಾಶೆ ಹೆಪ್ಪು ಗಟ್ಟಿರುವುದನ್ನು ವೈದ್ಯ ಮನಗಾಣುತ್ತಾನೆ.ಅವರಲ್ಲಿನ ಮನುಷ್ಯತ್ವವನ್ನು ಹೊರತಂದು ಅವರನ್ನೂ ಮನುಷ್ಯರನ್ನಾಗಿ ಮಾಡುವ ಕೆಲಸಕ್ಕೆ ಕೈ ಹಾಕುತ್ತಾನೆ. ಆತನ ಪ್ರಯತ್ನ ಯಶಸ್ವಿಯಾಗುತ್ತದಾ..?
1992 ರಲ್ಲಿ ಜೈಲಿನೊಳಗೆ ದಂಗೆಯೆದ್ದಾಗ ಪೋಲಿಸರು ಸಿಕ್ಕ ಸಿಕ್ಕವರನ್ನು ಗುಂಡಿಟ್ಟು ಕೊಂದು ಹಾಕಿದ್ದರು.ಸುಮಾರು ನೂರಾ ಹನ್ನೊಂದು ಜನರ ಮಾರಣ ಹೋಮ ನಡೆದ ಘಟನೆ ಅದು. ಇಡೀ ಬ್ರೆಜಿಲ್ ಇತಿಹಾಸದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅಮಾನವೀಯ ಸರ್ಕಾರಿ ಕಾರ್ಯ ಎಂದೇ ಕುಖ್ಯಾತಿ ಪಡೆದ ಘಟನೆಯನ್ನು ಯಥಾವತ್ತಾಗಿ ಚಿತ್ರೀಸಿರುವ ಪರಿ ಅನನ್ಯ.
ಮನೆಯವರನ್ನೇ ಕಾಣದ ಖೈದಿಗಳಿಗೆ ಅವರ ಕುಟುಂಬದವರನ್ನು ಬೇಟಿ ಮಾಡುವ ಅವಕಾಶ ಕೊಟ್ಟಾಗ ಅವರ ಭಾವನೆಗಳನ್ನೂ ನಿರ್ದೇಶಕ ಹಿಡಿದಿಟ್ಟಿರುವ ಪರಿ ಮಾತ್ರ ಅದ್ಭುತ. ಕಣ್ಣಂಚಲ್ಲಿ ಒಂದು ಹನಿ ನೀರು ತರಿಸುವ ದೃಶ್ಯವದು. ಇಡೀ ಚಿತ್ರದ ತುಂಬಾ ಬರೀ ಗಂಡಸರೇ. ಅವರ ಚಿತ್ರ ವಿಚಿತ್ರ ದುರಂತ ಕಥೆಗಳನ್ನು ಎಲ್ಲಿಯೂ ವೈಭವೀಕರಿಸದೆ ಎಳೆಯದೆ ಚುಟುಕಾಗಿ ಹೇಳಿ ಬಿಡುವ ನಿರ್ದೇಶಕ ಆನಂತರ ಜೈಲಿನಲ್ಲಿನ ಅವರ ಬದುಕನ್ನು ಕಟ್ಟಿ ಕೊಟ್ಟ ಪರಿ ಪ್ರಶಂಸೆಗೆ ಅರ್ಹವಾದದ್ದು. ಒಮ್ಮೆ ನೋಡಲೇ ಬೇಕಾದ ಚಿತ್ರಗಳ ಪಟ್ಟಿಗೆ ಸೇರಿದ ಕೆರಂಡಿರು  ಚಿತ್ರದ ನಿರ್ದೇಶಕ ಹೆಕ್ಟರ್ ಬೆಬೇನ್ಕೋ.
ದ್ಯಾವ್ರೆ ಚಿತ್ರದ ವಿಮರ್ಶೆ: click here

Thursday, December 5, 2013

ಟ್ರೆಂಡ್ ಸೆಟ್ಟರ್ ಗಳು ಮತ್ತು ಆನಂತರದ ಪರಿಣಾಮಗಳು..

ಯಾವುದೇ ಭಾಷೆಯಲ್ಲಿಯೇ ಆಗಲಿ ಟ್ರೆಂಡ್ ಸೆಟ್ಟರ್ ಚಿತ್ರಗಳು ಚಿತ್ರರಂಗದ ದಿಕ್ಕನ್ನು ಬದಲಾಯಿಸುತ್ತವೆ. ಅಲ್ಲದೆ ಮಾರುಕಟ್ಟೆಯನ್ನು ಪ್ರೇಕ್ಷಕರನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುತ್ತವೆ. ಅಲ್ಲದೆ ಒಂದು ರೀತಿಯಲ್ಲಿ ಮಂದಗತಿಯಲ್ಲಿ ಸಾಗುತ್ತಿದ್ದ ಚಿತ್ರರಂಗವನ್ನು ಇದ್ದಕ್ಕಿದ್ದಂತೆ ಶರವೇಗದಲ್ಲಿ ಸಾಗುವಂತೆ ಮಾಡುವ ಚೈತನ್ಯ ತುಂಬುತ್ತವೆ. ಹಾಗಾಗಿಯೇ ಟ್ರೆಂಡ್ ಸೆಟ್ಟರ್ ಗಳು ಚಿತ್ರರಂಗಕ್ಕೆ ಬೇಕೇ ಬೇಕು.
ಓಂ ಚಿತ್ರ ಬರುವವರೆಗೆ ಭೂಗತ ಲೋಕದ ಚಿತ್ರಣದ ರೀತಿಯೇ ಬೇರೆಯಾಗಿತ್ತು. ಹಾಗೆ ಹೊಡೆದಾಡಲು ಬಳಸುವ ಆಯುಧಗಳೂ ಕೂಡ. ಆದರೆ ಓಂ ಬಂದಿತು ನೋಡಿ, ಆನಂತರ ಚಿತ್ರರಂಗದಲ್ಲಿ ಸ್ವಲ್ಪ ದಿನಗಳ ಉದ್ದನೆಯ ಲಾಂಗಿನದ್ದೆ ಕಾರುಬಾರು.ಅದರಲ್ಲೂ ಹೊಸದಾಗಿ ಚಿತ್ರರಂಗಕ್ಕೆ ಬರಬೇಕು ಎಂದುಕೊಳ್ಳುವ ಕಲಾಸಕ್ತರಂತೂ ಥೇಟು ಶಿವಣ್ಣನಂತೆ ಕೈಯಲ್ಲಿ ಲಾಂಗು ಹಿಡಿಡು ತಲೆಯನ್ನು ಒಂದು ಕಡೆಗೆ ವಾಲಿಸಿ ಅಮಲಿನಲ್ಲಿ ನಿಂತುಕೊಳ್ಳುವಂತೆ ನಿಂತು ಕೊಳ್ಳುವ ಪೋಸು ಕೊಡತೊಡಗಿದರು. ಚಿತ್ರದಲ್ಲೂ ಅಷ್ಟೇ ಎಲ್ಲಿಂದಲೂ ಬೆಂಗಳೂರಿಗೆ ಬಂದರೆ, ಅವನು ರೌಡಿಯಾಗುತ್ತಿದ್ದ, ಮಾತೆತ್ತಿದರೆ ಲಾಂಗು ಎತ್ತುತ್ತಿದ್ದ. ಕನ್ನಡದ ಮಟ್ಟಿಗಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೆ ಒಂದು ಹೊಸತನವನ್ನ ಕೊಟ್ಟ ಓಂ, ಹಿಂದಿಯ ವರ್ಮಾರ ಸತ್ಯ ಚಿತ್ರಕ್ಕೆ ಸ್ಫೂರ್ತಿಯಾದ ಓಂ, ಆನಂತರ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಕಳಪೆ ಚಿತ್ರಗಳಿಗೂ ಪ್ರೇರಕವಾದದ್ದು  ವಿಷಾದನೀಯ ಸಂಗತಿ ಎನ್ನಬಹುದು.
ಹಾಗೆ ನೋಡಿದರೆ ಮುಂಗಾರು ಮಳೆ ಚಿತ್ರದ್ದು ಅದೇ ಕಥೆ. ಮೊದಲೆಲ್ಲಾ ಸಂಭಾಷಣೆ ಎಂದರೆ ಅದರ ಲಯವೇ ಬೇರೆ ಇರುತ್ತಿತ್ತು. ಹಾಸ್ಯಮಯವಾಗಿದ್ದರೆ ಚಿತ್ರದಲ್ಲಿನ ಹಾಸ್ಯನಟ ಮಾತ್ರವೇ ಹೇಳುತಿದ್ದ, ನಗಿಸುತ್ತಿದ್ದ. ಆದರೆ ಮುಂಗಾರುಮಳೆಯಲ್ಲಿನ ಪ್ರೇಮಿ ಪ್ರೀತಂ ಪಾತ್ರ ದ ಹಾಗೆ ಚಿನಕುರುಳಿ ಮಾತುಗಳು, ಉಡಾಫೆಯ ಮಾತುಗಳು ಬಂದಿರಲಿಲ್ಲ. ಮುಂಗಾರು ಮಳೆ ಬಂದದ್ದೆ ಜನರಲ್ಲಿ ಹೊಸತನ ಕಂಡಂತಾಯಿತು. ನಿಲ್ಲಿಸದೆ ಪುಂಖಾನುಪುಂಖವಾಗಿ ಮಾತನಾಡುವ ಪ್ರೀತಂ ಮಾತುಗಳೂ ಇಷ್ಟವಾದವಷ್ಟೇ ಅಲ್ಲ, ಅದನೆಲ್ಲಾ ಬಾಯಿಪಾಠ ಮಾಡುವಷ್ಟು ಪ್ರಭಾವ ಬೀರಿತು.ಚಿತ್ರರಂಗದ ದೆಸೆ ಬದಲಿಸಿದ ಮಳೆ, ಬೇರೆ ಭಾಷೆಯವರು ನಮ್ಮ ಕಡೆಗೆ ನೋಡುವಂತೆ ಮಾಡಿತು. ವಿದೇಶದಲ್ಲಿನ ನಮ್ಮವರೂ ಎದ್ದು ಬಿದ್ದು ಸಿನಿಮಾ ನೋಡುವಂತೆ ಮಾಡಿತು. ಒಟ್ಟಿನಲ್ಲಿ ಒಂದು ಸಂಚಲನವನ್ನು ಮುಂಗಾರುಮಳೆ ಹುಟ್ಟಿ ಹಾಕಿತ್ತು ಕೂಡ. ಆದರೆ ಅದಾದ ನಂತರ ಕನ್ನಡ ಚಿತ್ರರಂಗದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪ್ರೇಮಕಥೆಯ ಚಿತ್ರಗಳು ನಿರ್ಮಾಣವಾದವು. ಹಾಗೆ ಹೊಸಬರು ನಾ ಮುಂದು ತಾ ಮುಂದು ಎನ್ನುವಂತೆ ಪಾದಾರ್ಪಣೆ ಮಾಡಿದರು. ಅವುಗಳಲ್ಲಿ ಇದ್ದ ಸಾಮಾನ್ಯ ಅಂಶವೆಂದರೆ ನಾಯಕ ಉಡಾಫೆಯಾಗಿ ತಮಾಷೆಯಾಗಿ ಮಾತನಾಡುತ್ತಿದ್ದ, ಹಾಗೆ ಪ್ರೀತಿಸುತ್ತಿದ್ದ.ಒಂದು ಸರಳವಾದ ಪ್ರೇಮಕಥೆ ಹಿಡಿದು ಅದಕ್ಕೆ ಮಾತುಗಳನ್ನು ಪೋಣಿಸಿ ಚಿತ್ರ ಮಾಡಲು ಎಲ್ಲಾ ಹೊಸಬರೂ ಮುಂದಾದರು.
ದಂಡುಪಾಳ್ಯದ್ದು ಅದೇ ಕಥೆ. ಒಂದು ಸರಣಿ ಕೊಲೆಗಾರರ ಗುಂಪು ಅಸಹ್ಯವಾಗಿ ಅತ್ಯಾಚಾರ ಮಾಡುತ್ತಾ ಕೊಲೆ ಮಾಡುತ್ತಾ ಸಾಗಿದ್ದು ಅದನ್ನು ಚಿತ್ರೀಕರಣ ಮಾಡಿದ್ದು ಅದು ಗೆದ್ದದ್ದು ಬೇರೆ ಮಾತು. ಆನಂತರ ಅದೇ ತೆರೆನಾದ ಒಂದಷ್ಟು ಚಿತ್ರಗಳು ಬಂದವು.
ಅದಾದ ನಂತರ ಬಂದದ್ದು ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ. ಚಿತ್ರರಂಗದ ಮಟ್ಟಿಗೆ ಅತೀ ದೀರ್ಘವಾದ ಪ್ರೊಮೊ ವನ್ನು ಹೊರತಂದಿದ್ದು ಸಿಂಪಲ್ ಚಿತ್ರತಂಡ ಎನ್ನಬಹುದು. ಆದರೆ ಪ್ರೋಮೋದ ಎಂಟುನಿಮಿಷಗಳಲ್ಲಿ ಪೋಲಿತನವಿತ್ತು, ಪ್ರೀತಿಯಿತ್ತು, ಕಚಗುಳಿಯಿಕ್ಕುವ ಮಾತುಗಳಿದ್ದವು, ಸ್ವಲ್ಪ ವೆ ಸ್ವಲ್ಪ ದ್ವಂದ್ವಾರ್ಥದ ಸಂಭಾಷನೆಯಿತ್ತು. ನಿಜಕ್ಕೂ ಈವತ್ತಿಗೂ ಆ ಪ್ರೋಮೊದಲ್ಲಿ ದ್ವಂದ್ವಾರ್ಥದ ಸಂಭಾಷಣೆಯೇ ಹೈ ಲೈಟ್ ಆದರೂ ಅದರಲ್ಲಿನ ಲಯ ಸೂಪರ್. ಹಾಗಾಗಿಯೇ ಅದು ಎಲ್ಲರನ್ನೂ ಸೆಳೆದಿತ್ತು.
ಆಮೇಲೆ ಶುರುವಾಯಿತು ನೋಡಿ ಪ್ರೋಮೊಗಳ ಅಬ್ಬರ. ಮೊನ್ನೆ ಹೀಗೆ ಯುಟ್ಯೂಬ್ನಲ್ಲಿ ಕನ್ನಡದ ಹಲವಾರು ಹೊಸಬರ ಪ್ರೊಮೊ ನೋಡಿ ಬೇಸರವಾಯಿತು. ಸುಮಾರು ಹತ್ತು ನಿಮಿಷಗಳ ಪ್ರೊಮೊ , ಒಂಭತ್ತು ನಿಮಿಷಗಳ , ಮೂರು ನಿಮಿಷಗಳ ಪ್ರೊಮೊ ಐದು ನಿಮಿಶದ್ದು ಪ್ರೋಮೋಗಳನ್ನು ನೋಡಿದೆ. ಆನಂತರ ನೋಡಲು ಹೋಗಲಿಲ್ಲ. ಕೆಲವು ಪ್ರೋಮೋಗಳಂತೂ ಅಸಹ್ಯದ ಪರಮಾವಧಿ ಎನ್ನಬಹುದು. ಪ್ರತಿ ಸಂಭಾಷಣೆಯೂ ಸೊಂಟದ ಕೆಳಗೆ ಸುತ್ತುತ್ತದೆ. ಸೆಕ್ಸ್ ಅದರ ಮುಖ್ಯ ಅಂಶವಾಗಿದೆ. ಹೆಣ್ಣು ಮಕ್ಕಳಿಗೆ ಕೇಳಲಾಗದ ಮಾತುಗಳನ್ನು ಅವರ ಕೈಯಲ್ಲೇ ಹೇಳಿಸಿದ್ದಾರೆ ನಿರ್ದೇಶಕ ಮಹಾಶಯರು. ಪೋಲಿ, ನಿಷಿದ್ಧ ಪುಸ್ತಕಗಳಲ್ಲಿ ಇರುವ, ಎಸ ಎಂ ಎಸ್ ನಲ್ಲಿ ಹರಿದಾಡುವ  ಪೋಲಿ ಜೋಕುಗಳೆಲ್ಲಾ ದೃಶ್ಯ ರೂಪ ತಾಳಿವೆ. 
ಆಗ ಅನಿಸಿದ್ದು ನನಗೆ ಸಿಂಪಲ್ ಪರಿಣಾಮ ದುಷ್ಪರಿಣಾಮವಾಯಿತಾ? ಎಂದು. ಹೌದಲ್ಲ.ಎಲ್ಲರೂ ಅದನ್ನೇ ಅನುಕರಿಸುತ್ತಿದ್ದಾರೆ. ಅದರ ಹಿಂದಿರುವ ಸೊಗಸನ್ನು ತಲೆ ಕೆಡಿಸಿಕೊಳ್ಳದೆ ಬರೀ ದ್ವಂದ್ವಾರ್ಥವೆ ಮುಖ್ಯ ಎನಿಸಿದ್ದು ಯಾಕೆ..? ಯಾರಾದ್ರೂ ಕನ್ನಡದ ಯುವ ನಿರ್ದೇಶಕರ ಪ್ರೋಮೋಗಳನ್ನು ನೋಡಲು ಸುಮ್ಮನೆ ಯು ಟ್ಯೂಬ್ ತೆರೆದರೆ ಕಿವಿ ಮುಚ್ಚಿಕೊಳ್ಳ ಬೇಕಾಗುತ್ತದೆ. ಒಬ್ಬರೇ ಕುಳಿತು ಕೇಳಲಿಕ್ಕೂ  ಅಸಹ್ಯವಾಗುವ ಅಂತಹದ್ದನ್ನು ಕಲ್ಪಿಸಿಕೊಳ್ಳುವ ಯುವ ನಿರ್ದೇಶಕರ ಆಶಯ ಅಭಿರುಚಿಗಳ ಬಗ್ಗೆ ಅನುಮಾನ ಮೂಡಿಸುತ್ತದೆ ಅಷ್ಟೇ ಅಲ್ಲ, ಚಿತ್ರರಂಗದ ಮುಂದಿನ ದೆಸೆಯ ಬಗ್ಗೆ ಬೇಸರ ಉಂಟು ಮಾಡುತ್ತದೆ. ಒಂದು ಚಿತ್ರ, ಅದರ ಶೈಲಿಯನ್ನು ಸ್ಫೂರ್ತಿಯಾಗಿಟ್ಟು ಕೊಳ್ಳುವುದು ಒಳ್ಳೆಯದೇ. ಆದರೆ ಅದರ ಹಿಂದಿನ ಆತ್ಮವನ್ನು ಅದ್ಯಯನ ಮಾಡಬೇಕಾಗುತ್ತದೆ. ಸಿಂಪಲ್, ಓಂ, ಎ,ಮುಂಗಾರು ಮಳೆ ಚಿತ್ರಗಳಲ್ಲಿ ಅದುವರೆಗೂ ಇರದಿದ್ದ ಹೊಸತನವಿದ್ದದ್ದರಿಂದ ಅವುಗಳು ವಿಶೇಷವಾದದ್ದು ಎನಿಸಿದ್ದು ಮತ್ತು ಹೆಸರು ಗಳಿಸಿದ್ದು. ಮತ್ತೆ ಅದನ್ನೇ ಪುನರಾವರ್ತನೆ ಮಾಡಿದರೆ ಅದು ಕಾಪಿಯಾಗುತ್ತದೆಯೇ ಹೊರತು ಹೊಸತಾಗುವುದಿಲ್ಲ ಎಂಬುದನ್ನು ಅನುಕರಿಸುವವರು ಅರ್ಥ ಮಾಡಿಕೊಳ್ಳಬೇಕು. 
ಒಂದು ಸಿನೆಮಾಕ್ಕೆ ಕಥೆ-ಚಿತ್ರಕಥೆ ಮುಖ್ಯ ಅಂಶಗಳು. ಸಂಭಾಷಣೆ ಮುಂತಾದವುಗಳು ಪೂರಕ ಅಂಶಗಳು. ಇನ್ನೂ ನಿರೂಪಣ ಶೈಲಿ ಮುಂತಾದವುಗಳು ಹೊಸತನ ತರುವ ಆಲೋಚನೆಗಳು. ಎಲ್ಲದಕ್ಕೂ ಅನುಸರಿಸುವಿಕೆಯೇ ಮಾರ್ಗವಲ್ಲ ಎಂಬುದನ್ನು ನಮ್ಮ ಚಿತ್ರಕರ್ಮಿಗಳು ಅರ್ಥ ಮಾಡಿಕೊಳ್ಳಬೇಕು.
ಇಲ್ಲವಾದಲ್ಲಿ ಇನ್ನೂ ಅದೆಷ್ಟು ಅಸಹ್ಯಗಳ ಪದಗಳನ್ನು ಗಂಡು ಹೆಣ್ಣು ದೊಡ್ಡವರು ಚಿಕ್ಕವರು ಎನ್ನದೆ ಅವರ ಬಾಯಿಗಳಿಂದ ಕೇಳಬೇಕಾಗುತ್ತದೋ..ಯಾಕೆಂದರೆ ಯೂ ಟ್ಯೂಬ್ ಎನ್ನುವ ತೊಟ್ಟಿಗೆ ಯಾರು ಏನು ಬೇಕಾದರೂ ಹಾಕಬಹುದಲ್ಲ ಅದಕ್ಕೆ. ಮೊನ್ನೆ ಲೇಖಕ ಜೋಗಿಯವರು ಒಂದು ಮಾತು ಹೇಳಿದ್ದರು. ಯೂ ಟ್ಯೂಬ್ ಎನ್ನುವುದು ಒಂದು ಕಸದ ತೊಟ್ಟಿಯ ಹಾಗೆ...ಅದರಲ್ಲಿ ಒಳ್ಳೆಯದಕ್ಕಿಂತ ಅಸಹ್ಯಗಳೇ ಜಾಸ್ತಿ. ಮುಂದೊಂದು ದಿನ ಅದರಲ್ಲಿ ಏನಾದರೂ ಒಳ್ಳೆಯ ವಿಷಯ ಟೈಪ್ ಮಾಡಿದರೆ ಕಸವೇ ಮೊದಲು ಬರುತ್ತದೆ ಎಂದು.ಆ ಮಾತು ಅಕ್ಷರಃ ಸತ್ಯ.

Monday, November 25, 2013

ಜಟ್ಟ ಚಿತ್ರ ಸಂವಾದ...

ನಿನ್ನೆ ಸಂವಾದ ಡಾಟ್ ಕಾಂ ಆಯೋಜಿಸಿದ್ದ ಜಟ್ಟ ಚಿತ್ರದ ಪ್ರದರ್ಶನ ಮತ್ತು ಸಂವಾದಕ್ಕೆ ಹೋಗಿದ್ದೆ. ನಾನು ಅಷ್ಟಾಗಿ ಸಂವಾದಗಳಿಗೆ ಹೋಗುವುದಿಲ್ಲ. ಹೋಗುವುದಿಲ್ಲ ಎನ್ನುವುದಕ್ಕಿಂತ ಹೋಗುವುದಕ್ಕೆ ಅವಕಾಶಗಳು ಅಷ್ಟಾಗಿ ಕೂಡಿ ಬರುವುದಿಲ್ಲ. ಆದರೂ ಈ ಭಾನುವಾರ ಆ ತರಹ ಮಾಡುವುದಕ್ಕೆ ಕೆಲಸಗಳೇನೂ ಇಲ್ಲದ್ದರಿಂದ ಜಟ್ಟ ಸಂವಾದಕ್ಕೆ ಹೋಗಿದ್ದೆ. ಮೊದಲಿಗೆ ಜಟ್ಟ ಚಿತ್ರದ ಪ್ರದರ್ಶನವಿತ್ತು. ನಾನು ಜಟ್ಟ ಚಿತ್ರವನ್ನು ಬಿಡುಗಡೆಯ ದಿನವೇ ನೋಡಿದ್ದೆನಾದರೂ ಮತ್ತೊಮ್ಮೆ ನೋಡಲು ಕುಳಿತುಕೊಂಡೆ. ತುಂಬಾ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ಇಷ್ಟವಾಯಿತು.
ಜಟ್ಟ ಒಂದು ಒಳ್ಳೆಯ ಕಥೆಯಿರುವ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೇವಲ ಮೂರೇ ಪಾತ್ರಗಳಲ್ಲಿ ಒಂದಿಡೀ ಸಮಾಜದ ಮುಖಗಳನ್ನು ತೋರಿಸಲು ಪ್ರಯತ್ನಿಸಿರುವ ಗಿರಿರಾಜ್ ನಿಜಕ್ಕೂ ಅಭಿನಂದನಾರ್ಹರು. ಹಾಗಂತ ಚಿತ್ರದಲ್ಲಿ ಋಣಾತ್ಮಕ ಅಂಶಗಳು ಇಲ್ಲವೇ ಇಲ್ಲ ಅಂತಲ್ಲ. ಋಣಾತ್ಮಕ ಅಂಶಗಳಿರದ ಸಿನೆಮಾ ಇಡೀ ಚಿತ್ರಜಗತ್ತಿನಲ್ಲಿಯೇ ಇನ್ನೂ ಬಂದಿಲ್ಲವೇನೋ...ಸಂವಾದದಲ್ಲಿ ಕೆಲವು ಪ್ರಶ್ನೆಗಳು ಉದ್ಭವವಾದವು.ಸ್ತ್ರೀವಾದ ಎಂಬುದು ಬರೀ ಪುರುಷದ್ವೇಷವಾ...ಅದನ್ಯಾಕೆ ಹಾಗೆ ಬಿಂಬಿಸಿದ್ದೀರಿ..ಚಿತ್ರವನ್ನು ಇನ್ನೂ ಪರಿಣಾಮಕಾರಿಯಾಗಿ ತೆಗೆಯಬಹುದಿತ್ತು..ಮಾತುಗಳು, ಭಾಷಣಗಳು ಜಾಸ್ತಿಯಾಯಿತು..ಸಿನಿಮಾ ಒಂದು ದೃಶ್ಯ ಮಾಧ್ಯಮ ಹಾಗಾಗಿ ವಾಚ್ಯ ಮಾಡಿದ್ದು ಸರಿ ಕಾಣಲಿಲ್ಲ...ಹೀಗೆ.
ಪುರುಷ ದ್ವೇಷ, ಸ್ತ್ರೀ ವಾದ , ರಾಜಕೀಯ ..ಹೀಗೆ ಮುಂತಾದವುಗಳನ್ನು ಅಷ್ಟು ಸುಲಭವಾಗಿ ಒಂದು ಸಿನೆಮಾದಲ್ಲಿ ಸಂಪೂರ್ಣವಾಗಿ ಅಳವಡಿಸಿ ಅದನ್ನು ತೋರಿಸಿ ಎಲ್ಲರಿಂದಲೂ ಸೈ ಎನಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಥವಾ ತುಂಬಾ ಆಳವಾಗಿ ಇಂತಹ ವಿಷಯಗಳನ್ನು ಅದ್ಯಯನ ಮಾಡಿ ಅದನ್ನು ಕಥಾ ಚಿತ್ರವನ್ನಾಗಿ ಮಾಡಲು ಸಾಧ್ಯವಿಲ್ಲ ಅಥವಾ ಕಷ್ಟ ಸಾಧ್ಯ.ಹಾಗೂ ಹೀಗೂ ಮಾಡಿದರೆ ಅದೊಂದು ಸಾಕ್ಷ್ಯ ಚಿತ್ರವಾಗಬಹುದೇನೋ?ಅಥವಾ ಬೋರಿಂಗ್ ಅನಿಸಬಹುದಾ..? ಮತ್ತು ಅದೆಲ್ಲವನ್ನೂ ಒಂದು ಪಾತ್ರದ ಮೂಲಕ ವ್ಯಕ್ತ ಪಡಿಸುವುದು ಕಷ್ಟ ಸಾಧ್ಯ. ಹಾಗಾಗಿ ಒಂದಂಶವನ್ನು ರೂಪಿಸಬಹುದೇನೋ? ಹಾಗೆಯೇ ಸಿನೆಮಾ ದೃಶ್ಯ ಮಾಧ್ಯಮವೇ. ನಾವೆಲ್ಲಾ ಮುಂಗಾರು ಮಳೆ ಬಂದಾಗ ವಾಚ್ಯ ಎಂದುಕೊಳ್ಳಲಿಲ್ಲ. ಅಲ್ಲಿನ ಪ್ರತಿ ಮಾತುಗಳನ್ನೂ ಕೇಳಿ ಮಜಾ ಮಾಡಿದೆವು. ಅನುಕರಿಸಿದೆವು. ಹಾಗೆಯೇ ಕೆಲವು ಸಿನಿಮಾಗಳನ್ನು ನೋಡುವಾಗ ಮಾತಾಡದೆ ತಡಕಾಡುತ್ತಿದ್ದಾಗ[ಭಾವ ವ್ಯಕ್ತ ಪಡಿಸುತ್ತಿದ್ದಾಗ] ಗುರು ಅದೇನು ಹೇಳಬೇಕೆಂದುಕೊಂಡಿದ್ದೀಯೋ ಹೇಳಪ್ಪಾ ಮಾರಾಯ ಅಂತ ಕೂಗಿದ್ದೂ ಇದೆ. ಹಾಗಾಗಿ ಕೇಳುವಷ್ಟು ಚೆನ್ನಾಗಿದ್ದಾಗ ಹೇಳುವ ಮಾತುಗಳು ನಮ್ಮದೂ ಮಾತುಗಳಾದಾಗ ಬಹುಶಃ ವಾಚ್ಯ ಎನಿಸುವುದಿಲ್ಲವೇನೋ..ಎದ್ದೇಳು ಮಂಜುನಾಥನನ್ನು ಇಷ್ಟಪಟ್ಟರೂ ಡೈರೆಕ್ಟರ್'ಸ್ ಸ್ಪೆಷಲ್ ಬೋರಾದದ್ದು, ಮಾತೆ ಆಡದ ಬರ್ಫೀ ಕಥೆ ಇಷ್ಟವಾದದ್ದು ಆರ್ಟಿಸ್ಟ್ ಸಿನೆಮಾ ಖುಷಿ ಕೊಟ್ಟದ್ದು .. ರಾಜಕುಮಾರ್ ಅವರ ಸುಲಲಿತ ಕನ್ನಡ ಮಾತುಗಳು, ಉಪೇಂದ್ರರ ಒರಟು ಮಾತುಗಳು, ರವಿಚಂದ್ರನ್ ಉಡಾಫೆ ಮಾತುಗಳು, ಗಣೇಶ್ ರ ಉದ್ದುದ್ದನೆಯ ಮಾತುಗಳು, ಸಾಯಿಕುಮಾರ್ ಅವರ ಬೈಗುಳದಂತಹ ಭಾಷಣಗಳು..ಹೀಗೆ. ಮಾತುಗಳು ಸಿನಿಮಾದ ಒಂದು ಪ್ರಮುಖ ಭಾಗವೇ..ಹೀಗೆ. ಸಿನಿಮಾದಲ್ಲಿ ಎಲ್ಲವೂ ಬೇಕು. ಹಾಡೇ ಇಲ್ಲದೆ ನೋಡಿಸಿಕೊಳ್ಳುವ ನಿಷ್ಕರ್ಷ, ಪೋಲಿಸ್ ಸ್ಟೋರಿ, ನಾಯಿನೆರಳು, ಹಾಡುಗಳಿಲ್ಲದ ಹಾಗೆ ಕಲ್ಪಿಸಿಕೊಳ್ಳಲಾಗದ ಮೈನೆ ಪ್ಯಾರ್ ಕಿಯಾ, ಹಂ ಆಪ್ಕೆ ಹಾಯ್ ಕೌನ್, ಡಿಡಿಎಲ್ ಜೆ, ಮುಂಗಾರುಮಳೆ,...ಹೀಗೆ. ಇಷ್ಟೆಲ್ಲಾ ಮಾತಾಡಿದ ಮೇಲೂ ನಮಗನಿಸುವುದು ಸಿನೆಮಾದ ಅಂಶಗಳಲ್ಲಿ ಎಲ್ಲವೂ ಬೇಕು. ಅದೆಲ್ಲವೂ ಕಥೆಗೆ ಕಥೆಯಲ್ಲಿನ ಪಾತ್ರಕ್ಕೆ ಪೂರಕವಾಗಿರಬೇಕು ಎನ್ನುವುದು.
ಜಟ್ಟ ಚಿತ್ರದಲ್ಲಿನ ಪಾತ್ರಗಳು ಅವುಗಳ ಹಿನ್ನೆಲೆಗೆ ತಕ್ಕಂತೆ ವರ್ತಿಸುತ್ತವೆ. ಮತ್ತದು ಸರಿಯಾಗಿದೆಯಾ..? ಪರಿಪೂರ್ಣವಾ..ಅಂತಹ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ ಒಟ್ಟಾರೆ ಸಿನಿಮಾದ ಆಶಯ ಪೂರ್ಣವಾಗಿದೆಯಾ..? ಕಥೆಗೆ ತಕ್ಕಂತಹ ಗತಿ ಇದೆಯಾ...ಎನ್ನುವ ಅಂಶಗಳನ್ನು ಗಮನಿಸಬೇಕೆನೋ? ಆ ನಿಟ್ಟಿನಲ್ಲಿ ಗಿರಿರಾಜ್ ಅಭಿನಂದನಾರ್ಹರು.
ನಾನು ಎಲ್ಲಾ ಸಿನಿಮಾಕ್ಕೂ ಖಾಲಿ ತಲೆಯಲ್ಲಿಯೇ ಹೋಗುತ್ತೇನೆ. ನಿರ್ದೇಶಕ ಯಾರಾದರೆ ನನಗೇನು..ನನಗೇನು ದುಡ್ಡು ಕೊಟ್ಟಿದ್ದಾನಾ ಸಿನೆಮಾ ನೋಡಲಿಕ್ಕೆ ನನ್ನ ಸಮಯ ನನ್ನ ದುಡ್ಡು..ಅವನ ಬಗ್ಗೆ ನಾನ್ಯಾಕೆ ಯೋಚನೆ ಮಾಡಲಿ.. ಎನ್ನುವ ಜಾಯಮಾನದಿಂದ ಪೂರ್ವಗ್ರಹಪೀಡಿತನಾಗದೆ ಸಿನಿಮಾ ನೋಡುತ್ತೇನೆ. ಚೆನ್ನಾಗಿದ್ದರೆ ಖುಷಿ.
ಮೊನ್ನೆ ಕಲರ್ಸ್ ಇನ್ ಬ್ಯಾಂಗಲೋರ್ ಎನ್ನುವ ಸಿನಿಮಾಕೆ ಸಪ್ನಾ ಚಿತ್ರ ಮಂದಿರಕ್ಕೆ ಹೋಗಿದ್ದೆ. ನಿಜಕ್ಕೂ ಆ ನಿರ್ದೇಶಕನನ್ನು ಕಂಡು ಒಮ್ಮೆ ಮಾತಾಡಿಸಬೇಕು ಎನಿಸಿತು. ಅಥವಾ ಈ ತರಹದ ಒಂದು ಸಂವಾದ ಇಟ್ಟುಕೊಂಡು ಆ ಸಿನಿಮಾ ಹಾಕಿ ಅವರ ಜೊತೆ ಚರ್ಚಿಸಬೇಕು ಎನಿಸಿತು. ಅದೇಗೆ ಈ ರೀತಿ ಸಿನಿಮಾ ಮಾಡಲು ಸಾಧ್ಯ ಎಂದು ಕೇಳಬೇಕು. ಅದೇಗೆ ಕಥೆ ಬರೆದಿರಿ, ಅದ್ಯಾಕೆ ಹಾಗೆ ನಟಿಸಲು ಬಿಟ್ಟಿರಿ, ಅದ್ಯಾರು ನಿಮ್ಮನ್ನು ಸಿನಿಮಾ ಮಾಡಲು ಪ್ರೇರೇಪಿಸಿದವರು ಮತ್ತು ಆ ಕಥೆ[?]ಯನ್ನು ಯಾಕೆ ನಮ್ಮೆಲ್ಲರ ಮುಂದಿಡಬೇಕು ಎಂದು ಕೇಳಬೇಕು ಎನಿಸಿಬಿಟ್ಟಿದೆ.
ಚಿತ್ರದಲ್ಲಿ ಒಂದು ಪಾತ್ರವನ್ನು ಪರಿಚಯಿಸುತ್ತಾ ನಿರೂಪಕ ಇವನನ್ನು ಸಾಮಾನ್ಯ ಅಂದುಕೊಳ್ಳಬೇಡಿ ..ನಮ್ಮ ಕಥೆಗೆ ತಿರುವು ಕೊಡುವವನು ಇವನೇ ಅನ್ನುತ್ತಾನೆ..ಆನಂತರ ಆ ಚಿತ್ರದಲ್ಲಿ ತಿರುವೂ ಬರುವುದಿಲ್ಲ, ಆ ಪಾತ್ರವೂ ಬರುವುದಿಲ್ಲ.. ಈ ತರಹದ್ದೇ ದೃಶ್ಯಗಳು ಇಡೀ ಸಿನೆಮಾದ ತುಂಬ ತು೦ಬಿವೆ. ಒಂದು ಒಳ್ಳೆಯ ಸಿನಿಮಾ ಅಲ್ಲ..ಎಂದು ಬಿಟ್ಟುಬಿಡಬಹುದೇನೋ..ಒಳ್ಳೆಯದೋ ಕೆಟ್ಟದ್ದೋ ಸಿನಿಮಾ ಮಾಡಲು ಲಕ್ಷಾಂತರ ಹಣವಂತೂ ಖರ್ಚಾಗಿರುತ್ತದೆ. ಸ್ವಲ್ಪ ತಲೆ ಓಡಿಸಿದರೆ ಕೊನೆಗೆ ಒಂದುವಿಭಾಗದ ಜನರಾದರೂ ನೋಡುವಂತೆ ಮಾಡಬಹುದಲ್ಲಾ ಎನಿಸಿತು.ಅದನ್ನು ಸುಮ್ಮನೆ ಕುಳಿತು ಹೀಗೆಯೇ ಮಾಡೋಣ..ಹುಚ್ಚುಚ್ಚಾಗಿ ಮಾಡೋಣ ಎಂದರೂ ಮಾಡಲು ಸಾಧ್ಯವೇ ಇಲ್ಲ..ಅದೇಗೆ ಸಾಧ್ಯವಾಯಿತು ಎನ್ನುವ ಮಾತನ್ನು ಒಮ್ಮೆ ನಿರ್ದೇಶಕರಿಗೆ ಕೇಳಬೇಕು..ಅಲ್ಲವೇ?
ಸುಮ್ಮನೆ ಆ ಚಿತ್ರದ ವಿಮರ್ಶೆ ಓದಬೇಕೆನಿಸಿದರೆ ಇಲ್ಲಿದೆ ನೋಡಿ: ಕಲರ್ಸ್ ಇನ್ ಬೆಂಗಳೂರು ಚಿತ್ರ ವಿಮರ್ಶೆ
 

Sunday, November 24, 2013

ಬನ್ಸಾಲಿಯ ಲೋಕಕ್ಕೆ ಮಾರುಹೋಗುತ್ತಾ...?

ಸಂಜಯ ಲೀಲಾ ಬನ್ಸಾಲಿಯವರ ರೋಮಿಯೋ ಜೂಲಿಯೆಟ್ ನಾಟಕ ಆಧಾರಿತ ರಾಮ್ ಲೀಲಾ ಕಥೆಯ ವಿಷಯದಲ್ಲಿ ಬರಹದ ವಿಷಯದಲ್ಲಿ ಅದ್ಭುತ ಚಿತ್ರವಲ್ಲ. ಆದರೆ ದೃಶ್ಯ ರಚನೆಯ ವಿಷಯದಲ್ಲಿ ಒಂದೇ ಮಾತು 'ಅದ್ಭುತ.
ರಾಮ್ ಲೀಲಾ ಚಿತ್ರವನ್ನು ವಿಮರ್ಶೆ ಮಾಡುವುದಾಗುವುದಿಲ್ಲ.ಅಥವಾ ಆ ಪದ ಸರಿಯಾದ ಬಳಕೆ ಎನಿಸುವುದಿಲ್ಲ. ಬದಲಿಕೆ ವರ್ಣನೆ ಮಾಡಬಹುದು.ಅಂತಹ ಊರು, ಅಂತಹ ಜನರು ಅಂತಹ ಸಂಸ್ಕೃತಿ ..ನಮ್ಮದೇ ಸ್ಲಮ್ ಅಥವಾ ಚಿಕ್ಕದಾದ ಊರು ಅಂದುಕೊಳ್ಳಿ.ಬಂದೂಕುಗಳನ್ನು ಮಾರುವ ಊರದು.ಬಂದೂಕುಗಳನ್ನು ಮಾರಲು ಅಲ್ಲಿನ ಜನರಿಗೆ ಮುಕ್ತ ಅವಕಾಶವಿದೆ. ಅಲ್ಲಿಯ ಜನರಿಗೆ ಬಂದೂಕು ಎಂದರೆ ಆಟದ ಸಾಮಾನು. ಗುಂಡುಗಳು ಎಂದರೇ ಹುಣಸೇ ಬೀಜಕ್ಕಿಂತ ಕಡೆ.ಮಾತೆತ್ತಿದರೆ ಆಕಾಶಕ್ಕೆ ಗುಂಡು ಹಾರಿಸಿ ಮಜಾ ತೆಗೆದುಕೊಳ್ಳುವ ಜನರವರು.ಅವನು ರಾಮ್. ಸರಸಿ, ಶೋಕಿಲಾಲ..ರಸಿಕ ಸಾಹಸಿ. ನೋಡಲು ಸ್ಫುರದ್ರೂಪಿ. ಅವಳು ಲೀಲಾ. ತ್ರಿಪುರ ಸುಂದರಿ. ಅವರಿಬ್ಬರ ಪ್ರೀತಿಗೆ ತಡೆಗೋಡೆ ಎಂದರೆ ಜಾತಿ. ಆ ಜಾತಿಯವರದೊಂದು ಕೋಮು..ಇವರದೊಂದು ಕೋಮು.. ಮುಂದೆ ಗೋಲಿಯೋಂಕ ರಾಸಲೀಲೆ..
ಚಿತ್ರದ ಪ್ರಾರಂಭದಲ್ಲೇ ಇದು ರೋಮಿಯೋ ಜೂಲಿಯೆಟ್ ಕಥೆಯಾಧಾರಿತ ಎನ್ನುವುದನ್ನು ಬನ್ಸಾಲಿ ಅನಾವರಣ ಮಾಡಿಬಿಡುವುದರಿಂದ ಚಿತ್ರದ ಅಂತ್ಯದ ಬಗ್ಗೆ ನೋಡುಗನಿಗೆ ಕುತೂಹಲವೇನೂ ಉಳಿಯದು.ಹಾಗಾಗಿಯೇ ಕಥೆಯ ವಿಷಯದಲ್ಲಿ ವಿಶೇಷ, ಅಚ್ಚರಿ ಹೊಸತನ ಯಾವುದೂ ಇಲ್ಲ. ಆದರೆ ಚಿತ್ರೀಕರಣದ ಶ್ರೀಮಂತಿಕೆಯ ವಿಷಯದಲ್ಲಿ ನಿರೂಪಣೆಯ ಸೊಗಸಿನಲ್ಲಿ ಬನ್ಸಾಲಿಯನ್ನು ಮೆಚ್ಚದೇ ಬೇರೆ ದಾರಿಯೇ ಇಲ್ಲ.ಕಲಾವಿದನ ಕಲಾಕೃತಿಯ ರೀತಿಯಲ್ಲಿ ಪ್ರತಿಯೊಂದು ದೃಶಿಕೆಯನ್ನು ಸಂಯೋಜಿಸಿರುವ ಶೈಲಿ ನೋಡಲು ಖುಷಿ ಕೊಡುತ್ತದೆ.
ನೂರಾರು ಕೋಟಿ ವೆಚ್ಚಗಳನ್ನು ವಿದೇಶದಲ್ಲಿನ ಚಿತ್ರೀಕರಣಕ್ಕೆ ಹೆಲಿಕ್ಯಾಪ್ಟರ್ , ಕಾರುಗಳನ್ನು ಉಡಾಯಿಸುವುದಕ್ಕೆ ವೆಚ್ಚ ಮಾಡಿ ಶ್ರೀಮಂತಿಕೆ ಸಿನಿಮಾ ಎನ್ನಬಹುದು. ಹಾಗೆಯೇ ವಿ ಎಫ್ ಎಕ್ಸ್ ಅಥವಾ ಕಲ್ಪಿತ ದೃಶ್ಯ ವೈಭವಕ್ಕೆ ಖರ್ಚು ಮಾಡಿಬಿಡಬಹುದು. ಆದರೆ ಅದ್ಯಾವುದಕ್ಕೂ ಅಲ್ಲದೆ ಬೇರೆಯ ಲೋಕಕ್ಕೆ ಕರೆದೊಯ್ಯುವ ರೀತಿಗೆ ಖರ್ಚು ಮಾಡುವುದನ್ನು ಬನ್ಸಾಲಿ ನೋಡಿಯೇ ಕಲಿಯಬೇಕು.
ಸಿನಿಪ್ರಿಯರು, ಚಿತ್ರಕರ್ಮಿಗಳು ಮತ್ತು ಪ್ರೇಕ್ಷಕರು ಚಿತ್ರಣದ ಸೊಗಸಿಗೆ ನೋಡಲೇ ಬೇಕಾದ ಚಿತ್ರ ರಾಮ್ ಲೀಲಾ.

Monday, November 18, 2013

ನಾಯಕನ್ಯಾಕೆ ಬದಲಾದ....

ಏಕೆ ನಮ್ಮ ಚಿತ್ರಗಳ ನಾಯಕ ಬದಲಾಗಿ ಬಿಟ್ಟ..? ಎಂಬ ಪ್ರಶ್ನೆ ನನ್ನನ್ನು ಆವಾಗಾವಾಗ ಕಾಡುತ್ತಲೇ ಇರುತ್ತದೆ. ಏನಾಗಿದೆ ಅವನಿಗೆ ಎನ್ನಬಹುದು.ಅದರಲ್ಲೂ ಕನ್ನಡದ ಚಿತ್ರಗಳ ನಾಯಕನಂತೂ ತುಂಬಾ ಬದಲಾಗಿದ್ದಾನೆ. ಸುಮ್ಮನೆ ಗಮನಿಸಿದರೆ ಮೊದಲೆಲ್ಲಾ ನಾಯಕ ಎಂದರೆ ಅವನ ಗುಣಗಳನ್ನು ದೊಡ್ಡವರು ಮಕ್ಕಳಿಗೆ ಉದಾಹರಣೆಯಾಗಿ ಕೊಡುತ್ತಿದ್ದರು. ತುಂಬಾ ಕರುಣೆ, ಒಳ್ಳೆಯವನಾದರೆ ಇವನ್ನು ನೋಡು ಮುಂದೆ ರಾಜಕುಮಾರ್ ತರಾ ಆಗತಾನೆ ಅನ್ನುತ್ತಿದ್ದರು. ನಿಜವಾಗಲೂ ಅಲ್ಲಿ ರಾಜಕುಮಾರ್ ಇರುತ್ತಿರಲಿಲ್ಲ. ಬದಲಿಗೆ ಅಲ್ಲಿರುತ್ತಿದ್ದದ್ದು ಸಂಪತ್ತಿಗೆ ಸವಾಲ್ ಚಿತ್ರದ ರಾಜೀವನೋ, ಕಸ್ತೂರಿ ನಿವಾಸದ ರವಿಯೋ ...ಆದರೆ ಚಿತ್ರದಲ್ಲಿನ ನಾಯಕರ ಉದಾತ್ತ ಗುಣ ಮಾತ್ರ ನಾಯಕ ಎಂದರೆ ಹೀಗೆ ಇರಬೇಕು ಎಂಬಂತೆ ಇರುತ್ತಿತ್ತು. ಅವನು ಒಳ್ಳೆಯದನ್ನೇ ಮಾಡುತ್ತಿದ್ದ. ಅದರಲ್ಲೂ ಅವನು ರೌಡಿಯೇ ಆಗಿರಲಿ, ಕೊಲೆಗಾರನೆ ಆಗಿರಲಿ ಅದೆಲ್ಲ ದುಷ್ಟರ ಪಾಲಿಗೆ. ಶಿಷ್ಟರಿಗಂತೂ ಆತ ಯಾವತ್ತಿಗೂ ಅನ್ಯಾಯ ಮಾಡುತ್ತಿರಲಿಲ್ಲ. ಹಾಗೆಯೇ ಆಡುವ ಮಾತಿನಲ್ಲಿ ತೂಕವಿರುತ್ತಿತ್ತು. ಆತನ ಮಾತುಗಳಿಗೆ ಚಿತ್ರದೊಳಗಿನ ಮಂದಿಯಲ್ಲ, ಹೊರಗಿನ ಪ್ರೇಕ್ಷಕ ಕೂಡ ತಲೆ ದೂಗುತಿದ್ದರು.
ರಾಜಕುಮಾರ್ ಅವರ ಕಸ್ತೂರಿನಿವಾಸ ನೋಡುತ್ತಾ ನೋಡುತ್ತಾ ನಮ್ಮ ಮನೆಯಲ್ಲಿ ಕುಳಿತ ಹೆಂಗಸರೆಲ್ಲಾ ಕಣ್ಣೀರಾಗಿದ್ದರು. ಅದನ್ನೆಲ್ಲಾ ಕಣ್ಣಂಚಿನಲ್ಲೇ ನೋಡುತ್ತಾ ನಾವುಗಳು ಹುಡುಗರು ಮುಸಿ ಮುಸಿ ನಗುತ್ತಿದ್ದರು. ಅದರಲ್ಲೂ ನಮೂರಿನ ರಂಗಜ್ಜಿ ಅಂತೂ ರಾಜಕುಮಾರ್ ಚಿತ್ರವೆಂದರೆ ಆವತ್ತು ನಮ್ಮ ಮನೆಯ ಟಿವಿಯ ಮುಂದೆ ಅರ್ಧ ಗಂಟೆ ಮುಂಚಿತವಾಗಿಯೇ ಕುಳಿತು ಬಿಟ್ಟಿರುತ್ತಿದ್ದಳು. ಅವಳು ಅಳುವುದನ್ನು ಚಿತ್ರದಲ್ಲಿನ ಕೇಡಿಗಳನ್ನ ಶಾಪ ಹಾಕುವುದನ್ನು ನೋಡಲಾಗದೆ ಮುಸಿ ಮುಸಿ ನಕ್ಕು ನಾಲ್ಕಾರು ಜನಕ್ಕೂ ತೋರಿಸಿ ಅದೂ ಬೇಸರವಾದಾಗ 'ಅಮ್ಮೋ..ಅದು ಸುಮ್ನೆ..ನಾಟಕ ಕಣಮ್ಮೋ..' ಎಂದು ಯಾವುದಾದರೂ ಕಿಲಾಡಿ ಹೇಳಲು ಹೋಗಿ ಎಕ್ಕಾ ಮಕ್ಕಾ ಉಗಿಸಿಕೊಳ್ಳುತ್ತಿದ್ದ.
ಆದರೆ ಉಪೇಂದ್ರರ ಎ ಬಂದಾಗ ನಾಯಕನ ಪರಿಕಲ್ಪನೆ ಹೀಗಿರಬೇಕು ಎಂಬ ಕಲ್ಪನೆ ಬೇರೆಯಾಯಿತು ಎನ್ನಬಹುದು. ಅಲ್ಲಿಯವರೆಗೆ ಆ ತರಹದ ಋಣಾತ್ಮಕ ಖಳ ಛಾಯೆಯ ಪಾತ್ರ ಬಂದಿರಲಿಲ್ಲ ಎಂದಲ್ಲ. ಆದರೆ ಖಳ ಛಾಯೆಯ ಹಿಂದುಗಡೆ ನಾಯಕನ ಮುಖ ಇದ್ದೇ ಇರುತ್ತಿತ್ತು.
ಆದರೆ ಎ, ಉಪೇಂದ್ರದಲ್ಲಿ ನಾಯಕನ ಪರಿಕಲ್ಪನೆ ತೀರಾ ಬದಲಾಯಿತು. ಕಣ್ಣೆತ್ತಿಯೂ ಪರಸ್ತ್ರೀ ಕಡೆ ನೋಡದ ನಾಯಕ ಸ್ಲೀವ್ ಲೆಸ್ ಹಾಕಿಕೊಂಡು ಬಂದ ಹೆಂಗಸನ್ನು ಅಸಹ್ಯವಾಗಿ ಅಟ್ಟಾಡಿಸಿ ಅದಕ್ಕೆ ಸಮರ್ಥನೆಯನ್ನು ಕೊಟ್ಟ. ಗಾಳಿ ಬೆಳಕು ವಿಶಾಲವಾಗಿದೆ ಎಂದು ಕರೆವೆಣ್ಣನ್ನು ಬಟಾಬಯಲಿನಲ್ಲಿ ಮಲಗಿಸಿ ಅಸಹ್ಯಕರ ಸದ್ದು ಹೊರಡಿಸಿದ. ಆದರೆ ಅದೆಲ್ಲದಕ್ಕೂ ಚಿತ್ರದ ಅಂತ್ಯದಲ್ಲಿ ಒಂದು ಒಳ್ಳೆಯಾ ಅಲೌಕಿಕ ಸಮರ್ಥನೆ ಅರ್ಥ ಕೊಡಲು ಉಪೇಂದ್ರ ಪ್ರಯತ್ನಿಸಿದ್ದರು. ಆದರೆ ಅದನ್ನು ಹೆಚ್ಚು ಜನ ಪ್ರೇಕ್ಷಕರು ತೆಗೆದುಕೊಳ್ಳಲಿಲ್ಲ.
ಚಿತ್ರ ಬಂದ ಹೊಸದರಲ್ಲಿ ನಮ್ಮ ಊರಿನ ಬಸ್ ಸ್ಟಾಂಡ್ ನಲ್ಲಿ ದಿನಕ್ಕೊಂದು ಜಗಳ ಹುಡುಗಿಯ ಕಾರಣಕ್ಕೆ ನಡೆಯುತ್ತಿದ್ದವು.ಮೊದಲೆಲ್ಲಾ ರಕ್ತದಲ್ಲಿ ಹೆಸರು ಬರೆದುಕೊಂಡು, ಪ್ರೇಮ ಪತ್ರ ಬರೆದು ಹಿಂದೆ ಬಿದ್ದು ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದವರಲ್ಲಿ ಈಗ ಬದಲಾವಣೆಯಾಗಿತ್ತು.' ಯಾಕೆ ಲವ್ ಮಾಡಲ್ಲ ನೀನು..ನನಗೇನು ಕಡಿಮೆಯಿದೆ ಹೇಳು..ನೋಡ್ತೀನಿ ಅದನ್ಯಾರನ್ನೂ ನೀನು ಲವ್ ಮಾಡ್ತೀಯಾಂತ ..' ಎನ್ನುವ ಉದ್ದನೆಯ ಮಾತುಗಳನ್ನು ಆಡುತ್ತ ಪುಂಡ ಪ್ರೇಮಿಗಳು ಉಪೇಂದ್ರ ತರದಲ್ಲಿ ಹುಡುಗಿಯರನ್ನು ಕಿಚಾಯಿಸಿ ಜಗಳ ಹುಟ್ಟಿಹಾಕುತ್ತಿದ್ದರು.
ಆದರೆ ಉಪೇಂದ್ರರ ನಾಯಕನನ್ನು ಚಿತ್ರ ಮಂದಿ ಅಷ್ಟಾಗಿ ಅನುಸರಿಸಲಿಲ್ಲ. ಯಾಕೆಂದರೆ ಆ ತರಹದ ಪಾತ್ರ ಪೋಷಣೆ ತುಂಬಾ ಕಷ್ಟದ್ದಿತ್ತು.
ನಾಯಕ ಮತ್ತೆ ತನ್ನ ಪಾಡಿಗೆ ತಾನಿರುತ್ತಿದ್ದ. ಪ್ರೀತಿಸಿ ತ್ಯಾಗ ಮಾಡುತ್ತಿದ್ದ. ಅವಳನ್ನು ಚೆನ್ನಾಗಿರಲಿ ಎಂದು ಹರಸಿ ತಾನು ಮಾತ್ರ ಒಬ್ಬನೇ ಕಣ್ಣೀರು ಹಾಕುತ್ತಿದ್ದ.
ಒಮ್ಮೆಲೇ ಮುಂಗಾರು ಮಳೆ ಬಂದಿತು ನೋಡಿ. ಮಾತು ಮಾತಿಗೂ ನಗಿಸುವ ಪ್ರೀತಂ ಇಷ್ಟವಾಗಿ ಬಿಟ್ಟ. ಉಡಾಫೆಯ ಮಾತನ್ನಾಡುತ್ತಾ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದ ನಾಯಕ ಅಮ್ಮನ ಮಾತನ್ನು, ಮರ್ಯಾದೆಯನ್ನು ಉಳಿಸಲು ಪ್ರೀತಿಯನ್ನು ತ್ಯಾಗ ಮಾಡಿದ್ದನಾದರೂ ಆತನ ಆ ಗುಣಕ್ಕಿಂತ ನಮ್ಮ  ಚಿತ್ರಕರ್ಮಿಗಳಿಗೆ ಉಡಾಫೆ ಮಾತಿನ ನಾಯಕನೇ ಇಷ್ಟವಾದ. ಅದಕ್ಕೆ ಹೆಚ್ಚು ಗಮನಕೊಟ್ಟ ನಮ್ಮವರು ಆ ನಂತರ ಪುಂಖಾನುಪುಂಖ ಮಾತನ್ನಾಡುವ ನಾಯಕನನ್ನು ಹುಟ್ಟುಹಾಕಿಬಿಟ್ಟರು. ನಮ್ಮ ನಾಯಕ ಏನೂ ಮಾಡುತ್ತಿರಲಿಲ್ಲ. ಮಾಡುವವರನ್ನೇ ಗೇಲಿ ಮಾಡುತ್ತಿದ್ದ. ಹುಡುಗಿಯ ಮುಂದೆ ಸಭ್ಯನ ಹಾಗೆ ನಡೆದು ಕೊಳ್ಳದೆ ತೀರಾ ಉಡಾಫೆಯಿಂದಲೇ ನಡೆದುಕೊಳ್ಳುತ್ತಿದ್ದ. ಯಾವುದೇ ಗಂಭೀರ ವಿಷಯವನ್ನು ಹಗುರಕ್ಕೆ ತೆಗೆದುಕೊಂಡು ನಗುತ್ತಿದ್ದ. ಪ್ರೀತಿಯ ವಿಷಯದಲ್ಲೂ ಅಷ್ಟೇ..ಆ ತೀವ್ರತೆ ಅಷ್ಟಕಷ್ಟೇ. ನೀನಿಲ್ಲ ಅಂದ್ರೆ ದೇಶ ಮುಳುಗಲ್ಲಾ ಕಣೆ...ನೀವು ಹುಡುಗೀರು ಇಷ್ಟೇ ಎಂದೆಲ್ಲಾ ಅವರೆದುರು ಕೂಗಾಡಿ ಅವಮಾನ ಮಾಡಿ ಕಪಾಳಕ್ಕೆ ಒಂದು ಹೊಡೆದೂ ಹೋಗುತ್ತಿದ್ದ.
ಆನಂತರ ಮತ್ತೆ ಸಿಂಪಲ್ ಲವ್ ಸ್ಟೋರಿ ಬಂತು ನೋಡಿ ನಾಯಕನಾಯಕಿ ಇಬ್ಬರೂ ತುಂಟತನದ ಪರಿಧಿಯ ತೀರಾ ಹತ್ತಿರಕ್ಕೆ ಬಂದು ಬಿಟ್ಟರು. ಹೆಣ್ಣು ಮಕ್ಕಳು ಹೀಗೆಲ್ಲಾ ಮಾತನಾಡುತ್ತಾರಾ ಎಂಬ ಪರದೆ ಸರಿಸಿ ಸಲೀಸಾಗಿ ಮಾತಾಡತೊಡಗಿದರಾದರೂ ತೀರಾ ಅಸಹ್ಯ ಮಾಡಲಿಲ್ಲ. ಆದರೆ ಆನಂತರದ ನಾಯಕನ್ನು ನೀವು ನೋಡಬೇಕು. ಅದರಲ್ಲೂ ಹೊಸಬರ ಚಿತ್ರಗಳ ನಾಯಕರನ್ನು. ತೀರಾ ಸಭ್ಯತೆ ಮೀರಿದ ಮಾತುಗಳೇ ಅವರ ಬ್ರಹ್ಮಾಸ್ತ್ರ. ಸೊಂಟದ ಕೆಳಗೆ ಕೇಂದ್ರೀಕರಿಸುವ ಮಾತುಗಳೇ ಅವರ ಬಂಡವಾಳ. ಅದರಲ್ಲೂ ಹೆಣ್ಣು ಗಂಡು ಅನ್ನದೆ ನಮ್ಮ ಯುವ ನಿರ್ದೇಶಕರು ಪೋಲಿತನದ ಮಾತುಗಳನ್ನು ಕಿವಿ ಮುಚ್ಚುಕೊಳ್ಳುವಂತೆ ಆಡಿಸ ತೊಡಗಿದ್ದಾರೆ. ಉಡಾಫೆಯ ಮಾತಿನ ನಾಯಕ ಈಗ ಪೋಲಿಯಾಗಿ ಅದಕ್ಕೂ ಕಡೆಯಾಗಿ ಬದಲಾಗಿದ್ದಾನೆ. 
ಸುಮ್ಮನೆ ಯೂ ಟ್ಯೂಬ್ ನಲ್ಲಿನ ಕನ್ನಡದ ಹೊಸ ಹುಡುಗರ ಒಂದಷ್ಟು ಟ್ರೈಲರ್ ಗಳಿವೆ. ನಾಲ್ಕು ನಿಮಿಷ ಎಂಟು ನಿಮಿಷ ಹೀಗೆ ..ಅವುಗಳನ್ನು ನೋಡುತ್ತಿದ್ದರೆ ಹೇಗಪ್ಪಾ ಇವರ ಇಡೀ ಸಿನೆಮಾವನ್ನು ಸಹಿಸಿಕೊಳ್ಳುವುದು ಎನಿಸುತ್ತದೆ. ಪೋಲಿ ಮಾತಿನ ಅಸಹ್ಯಕರ ಮಾತಿನ ಸರಪಳಿಯನ್ನೇ ಜೋಡಿಸಿ ಎಲ್ಲರೂ ಭಟ್ಟ ರಂತೆ ಆಗಲು ಹೊರಟುಬಿಟ್ಟಿದ್ದಾರೆ. ಭಟ್ಟರ ಹಿಂದಿನ ಶ್ರಮ, ಮಾತಿನ ಮರ್ಮಗಳ ಬಗ್ಗೆ ಅರಿತುಕೊಳ್ಳದೆ ಮೇಲ್ನೋಟದ ಅರ್ಥಕ್ಕಷ್ಟೇ ಮತ್ತು ಅದು ಕೊಡುವ ಪಂಚಿಗಷ್ಟೇ ತಲೆ ಕೆಡಿಸಿಕೊಂಡು ಪುಂಖಾನುಪುಂಖ ಮಾತುಗಳನ್ನು ಜೋಡಿಸಿದ್ದಾರೆ.
ಬದಲಾದ ನಾಯಕನನ್ನು ನೋಡಿ ಬೇಸರವಾಗುತ್ತದೆ. ಹೀರೋ ತರ ನಮ್ಮ ಹುಡುಗ ಆಗಬೇಕು, ಹುಡುಗ ಸಿಗಬೇಕು. ಅಣ್ಣ ಅಂದ್ರೆ ಹೀಗಿರಬೇಕು ಎನ್ನುವ ಮಾತುಗಳೆಲ್ಲಾ ಅರ್ಥ ಕಳೆದುಕೊಂಡಿವೆ. ಬದಲಿಗೆ ನಾಯಕ ಕೆಲಸ ಮಾಡದೆ ಹುಡುಗಿಯ ಹಿಂದೆ ಬಿದ್ದು ಕೆಟ್ಟದಾಗಿ ಮಾತಾಡುತ್ತ ಅದರಲ್ಲೇ ಅತಿ ಬುದ್ದಿವಂತಿಕೆ ಪ್ರದರ್ಶಿಸುತ್ತಿದ್ದಾನೆ...
ಬದಲಾದ ನಾಯಕ ಬೇಸರ ತರಿಸುತ್ತಿದ್ದಾನೆ..ನಿಮಗೇನನ್ನಿಸುತ್ತದೆ..?