Wednesday, April 27, 2016

ವರ್ಮಾ ಬಂದಿದ್ದಾರೆ...

ಭಾರತೀಯ ಚಿತ್ರರಂಗ ಕಂಡ ಚುರುಕಾದ ಪಾದರಸದಂತಹ ನಿರ್ದೇಶಕ ರಾಮ್ ಗೋಪಾಲ್ ವರ್ಮ. ನನ್ನಂತಹ ಸಿನಿಮಾ ಪ್ರೇಮಿಗಳಿಗೂ ಯಾವತ್ತಿಗೂ ಸ್ಫೂರ್ತಿಯಾಗಿದ್ದವರು ವರ್ಮ. ಒಬ್ಬ ಚಿತ್ರಕರ್ಮಿ ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟವರು. ತಾನೂ ಬೆಳೆಯುವುದರ ಜೊತೆ ಜೊತೆಯಲ್ಲಿಯೇ ಪ್ರತಿಭಾವಂತರಿಗೂ ಅವಕಾಶ ಕೊಡುವ ವಿಶಾಲ ಮನೋಭಾವದ ವರ್ಮಾ ಗರಡಿಯಿಂದ ಅದೆಷ್ಟು ಪ್ರತಿಭಾವಂತರು ಅನಾವರಣಗೊಂಡಿಲ್ಲ ಹೇಳಿ. ಮೊದಲ ನಿರ್ದೇಶನದ ಶಿವ ದ ಬೆನ್ನಲ್ಲೇ ಗೋವಿಂದ ಗೋವಿಂದ ಎನ್ನುವ ಸಿನಿಮಾ ನಿರ್ಮಿಸಿದ್ದು ವರ್ಮ ಅವರ ಹೆಗ್ಗಳಿಕೆ. ಬಾಲಿವುಡ್ ಗೆ ಮಣಿರತ್ನಂ ಅವರನ್ನು ಪರಿಚಯಿಸಿದ್ದು, ಎ.ಆರ್ ರಹಮಾನ್ ಅವರನ್ನು  ಆ ತಕ್ಷಣಕ್ಕೆ ಹಿಂದಿಗೆ ಎಳೆದುಕೊಂಡದ್ದು, ಇಡೀ ಬಾಲಿವುಡ್ ಚಿತ್ರರಂಗವೇ ಒಂದು ದಿಕ್ಕಿನಲ್ಲಿ ಸಾಗುತ್ತಿದ್ದರೆ, ವರ್ಮಾ ಅವರದ್ದೇ ಬೇರೆ ದಾರಿ ಎಂಬಂತೆ ತನ್ನದೇ ಆದ ಶೈಲಿ ನಿರ್ಮಿಸಿಕೊಂಡದ್ದು, ಸಿನಿಮಾ ಫ್ಯಾಕ್ಟರಿ ತರದಲ್ಲಿ ಒಂದರ ಹಿಂದೆ ಒಂದೊಂದು ಸಿನಿಮಾ ನಿರ್ಮಿಸಿದ್ದು, ಪ್ರತಿಭೆ ಇಟ್ಟುಕೊಂಡು ಬಂದವರಿಗೆ ಕರೆದು ಅವಕಾಶ ಕೊಟ್ಟದ್ದು, ಸ್ಟಾರ್ ನಟರನ್ನು ಪಕ್ಕಕ್ಕಿಟ್ಟಿದ್ದು ಸಾಮಾನ್ಯ ಕೆಲಸಗಳೇ...? ಇವೆಲ್ಲವನ್ನೂ ಮೆಚ್ಚದಿರಲು ಹೇಗೆ ಸಾಧ್ಯ..? ಸತ್ಯ, ರಂಗೀಲಾ, ಸರ್ಕಾರ್, ಸರ್ಕಾರ್ ರಾಜ್  ಕಂಪನಿ ಸೂಪರ್ ಹಿಟ್ ಸಿನೆಮಗಳಷ್ಟೇ ಅಲ್ಲದೆ, ಟ್ರೆಂಡ್ ಸೆಟ್ಟರ್ ಕೂಡ. ವಿಮರ್ಶೆ, ಕಟು ವಿಮರ್ಶೆ, ಹೊಗಳಿಕೆ ತೆಗಳಿಕೆ ಯಾವುದಕ್ಕೂ ಸೊಪ್ಪು ಹಾಕದೆ ಸಿನಿಮ ಸಿನಿಮಾ ಎಂದು ಅದರಲ್ಲಿಯೇ ತನ್ನನ್ನು ತೊಡಗಿಸಿಕೊಂಡದ್ದು ಹೆಗ್ಗಳಿಕೆಯಲ್ಲದೆ ಮತ್ತೇನು..?
ಇಂತಿಪ್ಪ ವರ್ಮಾ ಆನಂತರ ತಮ್ಮ ಏಕತಾನತೆಯಿಂದ ಸೋಲುತ್ತಾ ಬಂದರು. ಬರೀ ಸೋತದ್ದಷ್ಟೇ ಅಲ್ಲ, ಪಾತಾಳಕ್ಕಿಳಿದುಬಿಟ್ಟರು. ಹಾಗೆ ನೋಡಿದರೆ ಮಣಿರತ್ನಂ ವೃತ್ತಿಜೀವನದಲ್ಲೂ ಯಶಸ್ಸಿನಷ್ಟೇ  ಸೋಲೂ ಇದೆ. ಆದರೆ ಮಣಿರತ್ನಂ ತಮ್ಮ ತೂಕ ಕಳೆದುಕೊಂಡಿಲ್ಲ. ಆದರೆ ಒಂದು ಹಂತದ ನಂತರ ವರ್ಮಾ ತಮಗಿಷ್ಟ ಬಂದ ಹಾಗೆ ಸಿನಿಮಾ ಮಾಡಲು ತೊಡಗಿದರು. ತೀರಾ ಕಳಪೆ ಎನ್ನುವಂತಹ ಸಿನಿಮಾ ನೀಡಿದರು. ಒಬ್ಬ  ನಿರ್ದೇಶಕ ಹೇಗಿರಬೇಕು ಎನ್ನುವುದಕ್ಕೆ
ಉದಾಹರಣೆಯಾಗಿದ್ದ ವರ್ಮಾ ಆನಂತರ ಒಬ್ಬ ಸಿನೆಮಕರ್ಮಿ ಹೇಗಿರಬಾರದು ಎನ್ನುವುದಕ್ಕೂ ಮಾದರಿಯಾದದ್ದು ವಿಪರ್ಯಾಸ. ಆಮೇಲೆ  ಬಾಲಿವುಡ್ ನಲ್ಲಿ ವರ್ಮಾ ಏನೇ ಸಿನಿಮಾ ಮಾಡಿದರೂ "ಥೂ" ಎನ್ನುವ ಹಾಗೆ ಅವರ ಇಮೇಜ್ ಬೆಳೆದದ್ದು ತೀರಾ ಶೋಚನೀಯ. ತಕ್ಷಣ ಗಂಟು ಮೂಟೆ ಕಟ್ಟಿದ ವರ್ಮಾ ಮತ್ತೆ ತಮ್ಮ ತವರು ನೆಲಕ್ಕೆ ಬಂದವರು ಐದು ದಿನದಲ್ಲಿ ಸಿನಿಮಾ ಮಾಡಿದರು, ಸಿಕ್ಕ ಸಿಕ್ಕ ಕ್ಯಾಮೆರಾಗಳಲ್ಲಿ ಶೂಟ್ ಮಾಡಿದರು, ವಿತರಕರು ಸಿಗದೇ ಇದ್ದಾಗ ಆನ್ಲೈನ್ ವಿತರಣೆ ಮಾಡಿದರು... ಹೀಗೆ ಅದೇಕೋ ಏನೋ ಅವರು ಮಾಡಿದ್ದ ಒಂದೂ ಸಿನೆಮಾವು ಗಮನ ಸೆಳೆಯಲಿಲ್ಲ. ತೆಲುಗಿಗೆ ಮತ್ತೆ ಬಂದ ವರ್ಮಾ, ಎರಡೇ ವರ್ಷದಲ್ಲಿ ಎಂಟೋ೦ಭತ್ತು  ಸಿನಿಮಾ ಮಾಡಿದರು ಎಂದರೆ ಅದರ ಗುಣಮಟ್ಟವನ್ನು  ಕಲ್ಪಿಸಿಕೊಳ್ಳಬಹುದು. ಅದೇನೇ ಇರಲಿ ಸಿನಿಮಾ ಪ್ರೇಮಿಗಳು, ಖುದ್ದು ನಾವೇ ಅವರ ಅಭಿಮಾನಿಗಳು ವರ್ಮ ಬಗ್ಗೆ ಆಸಕ್ತಿ ಕಳೆದುಕೊಂಡದ್ದು ಸತ್ಯ. ಈಗ ಕನ್ನಡಕ್ಕೆ ಬಂದಿದ್ದಾರೆ. ಅವರ ಉತ್ತುಂಗದ ಸಮಯದಲ್ಲಿ ಕನ್ನಡಕ್ಕೆ ವರ್ಮಾ ಬಂದರೆ ಸಾಕು ಎಂದೆಲ್ಲಾ ಕಾತುರದಿಂದ ಕಾಯುತ್ತಿದ್ದ ನಾವುಗಳು ಈಗ ಬಂದಿದ್ದಾರೆ ಏನು ಮಾಡಲು ಸಾಧ್ಯ ಎನ್ನುವ ಪ್ರಶ್ನೆ ಕೇಳಿಕೊಳ್ಳುವಂತಾಗಿದೆ. ಅವರ ಮೊದಲ ಕನ್ನಡ ನಿರ್ದೇಶನದ ಚಿತ್ರ ಕಿಲ್ಲಿಂಗ್ ವೀರಪ್ಪನ್ ಓಕೆ ಎನ್ನುವಂತಹ ಚಿತ್ರವೇ ಹೊರತು ಆಹಾಒಹೋ  ಎನ್ನುವ ಪ್ರಯತ್ನವಲ್ಲ. ಈಗ ಒಂದಷ್ಟು ಸಿನಿಮಾಗಳನ್ನು ಕನ್ನಡದಲ್ಲಿ ಘೋಷಣೆ ಮಾಡಿದ್ದಾರೆ,  ಒಳ್ಳೆಯದೇ. ಆದರೆ ತೆಲುಗಿನಲ್ಲಿ ಮಾಡಿದಂತೆ ಇಲ್ಲಿಯೂ ಮಾಡಿದರೆ ..? ಎನ್ನುವ ಭಯವಂತೂ ಕಾಡುತ್ತದೆ. ವರ್ಮಾ ಹಾಗಾದಿರಲಿ ಮತ್ತೆ ಮೈಕೊಡವಿಕೊಂಡು ನಮ್ಮ ಮುಂದೆ ಅದೇ "ವರ್ಮಾ" ಆಗಿ ಕನ್ನಡದಲ್ಲಿ ರಾರಾಜಿಸಲಿ ಎಂಬುದು ಆಶಯ. ಹಾಗಾಗುತ್ತದೆಯೇ ಎನ್ನುವ ಪ್ರಶ್ನೆ ವಾಸ್ತವಕ್ಕೆ ಸಂಬಂಧ ಪಟ್ಟದ್ದು.