Friday, June 17, 2016

ಸೆನ್ಸಿಬಲ್ ನಿರ್ಮಾಪಕರು ಬೇಕಿದ್ದಾರೆ..

ಈವತ್ತಿನ ಮಟ್ಟಿಗೆ ಕನ್ನಡದಲ್ಲಿ ಒಂದಷ್ಟು ಒಳ್ಳೆಯ ಚಿತ್ರಗಳು ಬಿಡುಗಡೆಯಾಗಿದೆ ಎನ್ನುವುದು ಖುಷಿಯ ಸಂಗತಿಯೇ. ಹಾಗಾಗಿಯೇ ಅಂತಹ ಒಳ್ಳೆಯ ಚಿತ್ರಗಳನ್ನು ನಮಗೆ ನೀಡಿದ ನಿರ್ದೇಶಕರನ್ನು ಪ್ರಶಂಸೆ ಮಾಡುವುದು ಚಿತ್ರಪ್ರೇಕ್ಷಕರಾದ ನಮ್ಮ ಕರ್ತವ್ಯ. ಆದರೆ ಈ ಒಂದು ವಿಷಯದಲ್ಲಿ ನಾವು ನಿಜಕ್ಕೂ ಪ್ರಶಂಸಿಸಬೇಕಾದದ್ದು ನಿರ್ಮಾಪಕರನ್ನು. ನಿರ್ದೇಶಕ ಹೊಸತನವನ್ನು ಹೊಸಕತೆಯನ್ನು ಕೊಂಡೊಯ್ದಾಗ ವ್ಯಾವಹಾರಿಕವಾಗಿ ನಿರ್ಮಾಪಕ ಯೋಚನೆ ಮಾಡುವುದು ತಪ್ಪಲ್ಲ, ಆದರೆ ಕತೆಯ ಬಗ್ಗೆ ಗ್ರಹಿಸದೆ ಇರುವುದು ಸರಿಯಲ್ಲ. ನಮ್ಮಲ್ಲಿ ಅಂತಹ ಸೂಕ್ಷ್ಮಗ್ರಾಹಿ ನಿರ್ಮಾಪಕರ ಸಂಖ್ಯೆ ಕಡಿಮೆಯೇ.
ನಾನು ಒಬ್ಬ ನಿರ್ಮಾಪಕರಿಗೆ ಕತೆ ಹೇಳಲು ಹೋದಾಗ ಅವರು ಅರ್ಧ ಘಂಟೆ ಅದೂ ಇದೂ ಮಾತಾಡಿ ಕೊನೆಗೆ "ನೋಡಪ್ಪ..ಒಂದ್ ಕೆಲಸ ಮಾಡು.. ಅವರಿಗೆ ಸ್ಟೋರಿ ಹೇಳಿ ಒಪ್ಪಿಸಿಬಿಡು..ಅವರದ್ದು ಕಾಲ್ ಶೀಟ್ ತಂದ್ಬಿಡು..ಸಿನಿಮಾ ಮಾಡೋಣ .." ಅಂದರು. ನಾನು ಆಯ್ತು ಸಾರ್, ಆದರೂ ಒಮ್ಮೆ ಕತೆ ಕೇಳಿ ಎಂದದ್ದಕ್ಕೆ "ನಮಗೆ ಅದೆಲ್ಲಾ ಅರ್ಥ ಆಗಲ್ಲ ಗುರು.." ಎಂದು ಸಾರಾಸಗಟಾಗಿ ತಿರಸ್ಕರಿಸಿಬಿಟ್ಟರು. ಆಮೇಲೆ ಅದೂ ಇದೂ ಮಾತಾಡುತ್ತಾ ಅಲ್ಲೇ ಟಿವಿಯಲ್ಲಿ ಬರುತ್ತಿದ್ದ ತಮಿಳು ಸಿನಿಮಾ ಹೊಗಳುತ್ತಾ ಏನ್ ಸಿನಿಮಾ ಮಾಡ್ತಾರೆ ಇವ್ರು ಎಂದು ಲೋಚ್ಚಿಕ್ಕಿದರು. ನಾನು ಅಲ್ಲೇ ಹೇಳಿದೆ, ಸಾರ್ ಅಲ್ಲಿನ ನಿರ್ಮಾಪಕರು ಸ್ವಲ್ಪನಾದ್ರೂ ಕತೆ ಕೇಳ್ತಾರೆ, ಆದ್ರೆ ನೀವು ಕತೆಗಿಂತ ಸ್ಟಾರ್ ಗೆ ಹೆಚ್ಚು ಮಹತ್ವ ಕೊಡ್ತೀರಲ್ವಾ? ಹಾಗಾಗಿ ಸ್ಟಾರ್ ನಟನನ್ನು ಒಪ್ಪಿಸದಿದ್ದರೆ ಸಿನಿಮಾ ಆಗಲ್ಲ ಎನ್ನುವುದಾದರೆ ಸ್ಟಾರ್ ಗಳ ಹಿತಾಸಕ್ತಿಗೆ ತಕ್ಕಂತೆ ಕತೆ ಬದಲಾವಣೆ ಮಾಡಬೇಕಾಗುತ್ತದೆ.. ಎಂದೆ. ಹೇಳೋದ್ ಸುಲಭ ಕಣ್ರೀ ಸಿನಿಮಾಕ್ಕೆ ಹಣ ಹಾಕುವಾಗ ಗೊತ್ತಾಗುತ್ತೆ , ನಿಮಗೇನು ಗೊತ್ತು.. ನಿರ್ಮಾಪಕ  ಪೈಸೆ ಪೈಸೆ ಗೆ ಎಷ್ಟು ಒದ್ದಾಡ್ತಾನೆ ಅಂತ ಎಂದವರು ಆ ನಿಟ್ಟಿನಲ್ಲಿ  ನಷ್ಟ ಅನುಭವಿಸಿದವರ  ಹೆಸರುಗಳ ಪಟ್ಟಿಯನ್ನೇ ನನ್ನ ಮುಂದಿಟ್ಟರು. ನಾನು ಅವರು ನಿರ್ಮಿಸಿದ  ಚಿತ್ರಗಳ ಪಟ್ಟಿಯನ್ನು ಅವರ ಮುಂದಿಟ್ಟು ಅದರ ಬಗ್ಗೆ ಮಾತಾಡಿದೆ..ಇದೆಲ್ಲಾ ಸ್ವಯಂಕೃತ ಸರ್..ಅದೇಕೆ ಈ ಕತೆಯನ್ನು  ಸಿನಿಮಾ ಮಾಡಿದ್ದು, ಅದ್ಯಾಕೆ ಅದನ್ನು  ಹಾಗೆ ತೆಗೆದದ್ದು ..ನಿರ್ಮಿಸುವ ಇದರ ಬಗ್ಗೆ ಯಾಕೆ ಯೋಚಿಸಲಿಲ್ಲ, ಸೋಲೂ ಗೆಲುವುಗಳನ್ನೂ ಬ್ರಹ್ಮನೂ ಯೋಜಿಸಲಾರನೇನೋ.. ಆದರೆ ಒಂದು  ಅಂದಾಜಂತೂ ಮಾಡಬಹುದು..ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎನ್ನುವುದನ್ನು ಗ್ರಹಿಸಿಕೊಳ್ಳಬಹುದು. ಇಷ್ಟೆಲ್ಲದರ ನಂತರದ್ದು ದೈವೇಚ್ಛೆ ಎನ್ನಬಹುದೇನೋ..? ಆದರೆ  ಅದಾವುದನ್ನು  ಮಾಡದೆ  ಒಂಟಿ ಕಣ್ಣಲ್ಲಿ ಸಿನಿಮಾ ಮಾಡಿ ಕಳೆದುಕೊಂಡು ಚಿತ್ರಜಗತ್ತೆ ಸರಿಯಿಲ್ಲ ಎನ್ನುವ ನಿರ್ಣಯದಿಂದ ಮೊದಲ್ಗೊಂಡು  ನಾನಾಕಾರಣಗಳನ್ನೂ ಪಟ್ಟಿ ಮಾಡುತ್ತಾ ಹೋದರೆ ಹೇಗೆ?
ಇದನ್ನು ಯಾಕೆ ಹೇಳಿದೆ ಎಂದರೆ ಒಬ್ಬ ನಿರ್ಮಾಪಕ ಕತೆಯನ್ನು ಕೇಳಿ, ಚರ್ಚಿಸಿ ಸಿನಿಮಾ ಮಾಡಿದರೆ ಅದು ಸಂತಸದ ಸಂಗತಿ. ಅಥವಾ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಅದಕ್ಕೊಬ್ಬ ಸಾಹಿತ್ಯ, ಸಿನಿಮಾ ಪರಿಣತರನ್ನು ಕೂರಿಸಿ ಆತನಿಂದ ಬರುವ ಕತೆಗಳನ್ನು ಪರಾಮರ್ಷಣೆ ಮಾಡಿಸಿದರೆ ಒಳ್ಳೆಯದು. ಹಾಲಿವುಡ್ ನಲ್ಲಿ ಇದಾಗುತ್ತದೆ. ಮಾರುಕಟ್ಟೆಗೆ ಬಂದ ಹೊಸ ಹೊಸ ಕಾದಂಬರಿಗಳನ್ನು  ಆ ಚಿತ್ರಸಂಸ್ಥೆ ಬರಹಗಾರರಿಂದ ನೂರಾರು ಪುಟಗಳ  ಬರಹವನ್ನು ಹತ್ತಾರು  ಪುಟಕ್ಕೆ  ಸಂಕ್ಷಿಪ್ತಗೊಳಿಸುತ್ತದೆ. ಆನಂತರ ಅದು ಸಿನಿಮಾಕ್ಕೆ  ಯೋಗ್ಯವೇ ಎನ್ನುವುದನ್ನು  ಕಂಪನಿಯ ಸೃಜನಶೀಲರು ಚರ್ಚಿಸುತ್ತಾರೆ. ಹಾಗಾಗಿಯೇ ಬಹುತೇಕ ಬೆಸ್ಟ್ ಸೆಲ್ಲರ್ ಎನಿಸಿಕೊಳ್ಳುವ ಪುಸ್ತಕಗಳು ಅಲ್ಲಿ ಸಿನಿಮಾ ರೂಪ ತಾಳುತ್ತವೆ. ಆದರೆ ನಮ್ಮಲ್ಲಿ ಚಿತ್ರನಿರ್ಮಾಣ ಸಂಸ್ಥೆಯಲ್ಲಿ ಅವರನ್ನು ಹೊರತುಪಡಿಸಿ ಬೇರೆಯವರೆಲ್ಲಾ ಇದ್ದಾರೆ, ಕಾದಂಬರಿ  ಕಮರ್ಷಿಯಲ್ ಗೆ ಆಗ್ಬರಲ್ಲ ಬಿಡಪ್ಪ  ಎಂದು ಸುರುವಿನಲ್ಲಿಯೇ ರಾಗ ಎಳೆದುಬಿಡುತ್ತಾರೆ. ಹಾಗೆಯೇ ಅಂತಹ ಕ್ರಿಯೇಟಿವ್  ಹೆಡ್ ಕುರ್ಚಿ ಸೃಷ್ಟಿಸಿ ಅದಕ್ಕೊಬ್ಬ ಸೂಕ್ತ ವ್ಯಕ್ತಿಯನ್ನು  ಕೂರಿಸೋಣ ಎಂದುಕೊಂಡರೆ ನಮ್ಮಲ್ಲಿ ಸಿಗುವವರು ತೀರಾ ಕಡಿಮೆಯೇ. ಈವತ್ತು  ನಮ್ಮಲ್ಲಿ ಚಿತ್ರಸಾಹಿತಿ,  ಛಾಯಾಗ್ರಹಾಕ, ನೃತ್ಯ ನಿರ್ದೇಶಕ, ನಿರ್ಮಾಪಕ, ಸಂಕಲನಕಾರ, ಸಾಹಸ ನಿರ್ದೇಶಕ .. ಹೀಗೆ  ಯಾರೂ  ಅವರು ಅವರಾಗಿಯೇ ಉಳಿದಿಲ್ಲ..ಅವರು ಒಂದಲ್ಲ ಒಂದು ದಿನ ನಿರ್ದೇಶಕನ ಕುರ್ಚಿ ಏರಿ ಸುಮ್ಮನಾಗಿಬಿಡುತ್ತಾರೆ. ಹಾಗಾಗಿಯೇ ನಮ್ಮಲ್ಲಿ ಒಂದೊಳ್ಳೆ ತಂತ್ರಜ್ಞ ತಂತ್ರಜ್ಞನಾಗಿಯಷ್ಟೇ ಉಳಿಯದೆ  ನಿರ್ದೇಶಕನ ಟೊಪ್ಪಿಗೆ ಧರಿಸುವ ಹಪಾಹಪಿ ತೋರಿಸಿ ಅವರ ನೈಪುಣ್ಯತೆಯಿದ್ದ  ವಿಭಾಗದಿಂದ  ಜಾರಿ ಹೋಗಿರುವ ಉದಾಹರಣೆಗಳಿವೆ. ಹಾಗಾಗಿಯೇ ನಮ್ಮಲ್ಲೀಗ  ಚಿ.ಉದಯಶಂಕರ್, ವರದಪ್ಪ  ಅಂತಹ ಮಹಾನ್ ಕಥೆಯ ತೀರ್ಪುಗಾರರು ಕಡಿಮೆ ಅಥವಾ ಇಲ್ಲವೇ ಇಲ್ಲ. ಹಾಗಾಗಿಯೇ  ಈ ಸಾಧ್ಯತೆಗಳೆಲ್ಲಾ ಕನ್ನಡದ ಮಟ್ಟಿಗೆ ಕಡಿಮೆಯೇ. ಅದರಲ್ಲೂ ಈವತ್ತು ನಿರ್ಮಾಪಕರ ಸಾಲಿನ ಬಹುತೇಕರು ಕತೆ ಕೇಳಿ ಸಿನಿಮಾ ಮಾಡುವ ಗೋಜಿಗೆ ಹೋಗುವುದಿಲ್ಲ. ಬದಲಿಗೆ ಸ್ಟಾರ್ ನಟನ ಕಾಲ್ ಶೀಟ್ ಅಥವಾ ರಿಮೇಕ್ ಹಕ್ಕುಗಳ ಮೇಲೆಯೇ ಸಿನಿಮಾ ಮಾಡುವುದಕ್ಕೆ ಮುನ್ನುಗ್ಗುತ್ತಾರೆ. ನಿರಂತರವಾಗಿ ಸಿನಿಮಾ  ಮಾಡುವ, ಅದರ ಹೊರಾತಾಗಿ  ಬೇರೇನೂ ಮಾಡದ  ಚಿತ್ರ  ನಿರ್ಮಾಪಕರುಗಳು  ಹೊಸತನ, ಹೊಸ ಅಲೆಯತ್ತ  ತಲೆ ಕೆಡಿಸಿಕೊಳ್ಳದೆ ತಮ್ಮ  ಎಂದಿನ  ಹಾದಿಯಲ್ಲಿ  ಮುನ್ನುಗ್ಗುತ್ತಿರುವುದು ಮತ್ತು ಹೊಸ ಪ್ರಯೋಗಗಳನ್ನು ಹೊಸಬರಷ್ಟೇ[ಬಹುತೇಕ] ಮಾಡುತ್ತಿರುವುದು ಕಣ್ಮುಂದಿರುವ ಸಂಗತಿ.
ಉದಾಹರಣೆಗೆ ತಿಥಿಯಂತಹ ಕತೆಯನ್ನು ಮಾಮೂಲಿ ನಿರ್ಮಾಪಕರ ಮುಂದೆ ಹರವಿದ್ದರೆ ಅವರು ಹೌಹಾರದೆ ಇರುತ್ತಿದ್ದರೆ..? ಅಯ್ಯೋ ಗುರುವೇ ಇದು ನೆಗೆಟಿವ್ ಟೈಟಲ್...ಎಲ್ಲಿ ಹೋಗುತ್ತೆ ಗುರುವೇ ಅನ್ನುವುದರಿಂದಲೇ ಪ್ರಾರಂಭಿಸುತ್ತಿದ್ದರು. ಅವರ ಲೆಕ್ಕಾಚಾರಗಳೇ  ಬೇರೆ ಇರುತ್ತವೆ. ಮುಂದಿನವಾರದಿಂದ  ನಿಮ್ಮ ಮೆಚ್ಚಿನ ಚಿತ್ರಮಂದಿರದಲ್ಲಿ  ತಿಥಿ ಅಂತಲೋ, ಪ್ರೇಕ್ಷಕ ಬಾರೋ  ತಿಥಿಗೆ ಹೋಗೋಣ ಅಂತಲೂ ಹೇಗೆ ಮಾತನಾಡಿಕೊಳ್ಳುತ್ತಾನೆ ಎನ್ನುವ ಅನಿಸಿಕೆ ಅವರದ್ದು. ಹಾಗೆಯೇ ಇನ್ನು ಈವತ್ತಿನ ವಿಶೇಷ ಎನಿಸಿದ ಚಿತ್ರವಾದ ಗೋದಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಕತೆಯನ್ನು ನಿರ್ಮಾಪಕರ ಎದುರಿಗೆ ಕುಳಿತು ಸಾವಧಾನವಾಗಿ ನಿರೂಪಿಸಲು ಸಾಧ್ಯವಿತ್ತೆ..ತಪ್ಪಿಸಿಕೊಂಡ ಅಪ್ಪ, ಹುಡುಕುವ ಮಗ, ಓಪನಿಂಗ್ ಸಾಂಗ್ ಇಲ್ಲ, ಕೇಡಿಗಳಿದ್ದರೂ ಫೈಟ್ ಇಲ್ಲ, ಕಾಮಿಡಿ ಇಲ್ಲವೇ ಇಲ್ಲ.. ನಮ್ಮ ಕೈಲಿ ಆಗಲ್ಲಪ್ಪ ಎಂದು ಬುದ್ದಿವಾದ ಹೇಳಿ ಕಳುಹಿಸಿಬಿಡುತ್ತಿದ್ದರೇನೋ? ಅಥವಾ  ಅದನ್ನು  ಹೀಗೆ ಮಾಡಿದರೆ ಹೇಗೆ, ಹಾಗೆ ಮಾಡಿದರೆ ಹೇಗೆ, ಕೇಡಿಗಳು  ಈಗಾಗಲೇ ಇರುವುದರಿಂದ  ಫೈಟ್ ಇಡಬಹುದಲ್ಲಾ, ವಸಿಷ್ಠ  ಅಚ್ಯುತ್ ಅವರನ್ನು  ಕುಡಿಯಲು ಕರೆದುಕೊಂಡು ಹೋಗಿದ್ದನ್ನೇ ನೆಪ  ಮಾಡಿಕೊಂಡು ಒಂದು ಐಟಂ ಡಾನ್ಸ್ ಹಾಕಿಬಿಡೋಣ ಎನ್ನುವ ಸಲಹೆಯಂತೂ  ದೇವರಾಣೆ ಬರುತ್ತಿತ್ತೇನೋ? ಆದರೆ  ನಿರ್ಮಾಪಕರು ನಿರ್ದೇಶಕರ ಕತೆ, ಅದರಲ್ಲಿರುವ ಸೂಕ್ಷ್ಮತೆಯನ್ನು ಗ್ರಹಿಸಿದ್ದಾರೆ, ಹಾಗಾಗಿಯೇ  ಚಿತ್ರ ಹಾಗೆಯೇ ಮೂಡಿ ಬಂದಿದೆ, ಗಾಂಧಿನಗರದಲ್ಲಿನ ಸಿದ್ಧಸೂತ್ರಗಳನ್ನು ಪಕ್ಕಕ್ಕೆ ತೂರಿ ಗಂಭೀರ ಕತೆಯ  ಚಿತ್ರ ಮೂಡಿದೆ, ಮತ್ತದು ಪ್ರೇಕ್ಷಕರಿಗೆ ಇಷ್ಟವಾಗಿದೆ.
ಅದಕ್ಕೆ ಹೇಳಿದ್ದು ಒಂದು ಹೊಸತನದ  ಸಿನಿಮಾದ ಹಿಂದೆ ನಿರ್ದೇಶಕನ ವಿಷನ್ ಎಷ್ಟಿರುತ್ತದೋ ಅಷ್ಟೇ ಟ್ರಸ್ಟ್ ನಿರ್ಮಾಪಕರದ್ದಿರುತ್ತದೆ. ನಿರ್ಮಾಪಕರ ಸೂಕ್ಷ್ಮಗ್ರಹಿಕೆ ಮತ್ತು ಅವರ ಬುದ್ದಿವಂತಿಕೆಯೇ ಹೊಸತನಕ್ಕೆ ದಾರಿಯಾಗುತ್ತದೆ. ಸುಮ್ಮನೆ  ಗಮನಿಸಿ, ಆವತ್ತಿನಿಂದ ಈವತ್ತಿನವರೆಗೆ ಯಾವುದಾದರೂ ಹೊಸ ಪ್ರಯತ್ನ, ಹುಬ್ಬೇರಿಸುವ ಸಿನಿಮಾಗಳೆಲ್ಲಾ ಬಂದಾಗ ನಿರ್ಮಾಪಕರು ಬಹುತೇಕ  ಹೊಸಬರೇ ಆಗಿರುತ್ತಾರೆ. ಆನಂತರ ಅವರು ಅದನ್ನು  ಕಾಯ್ದುಕೊಳ್ಳದೆ ಹೋಗುವುದು ಬಿಡುವುದು ಅವರಿಗೆ ಬಿಟ್ಟದ್ದು.
ಹಾಗಾಗಿ ನಮಗೆ ಸೂಕ್ಷ್ಮಗ್ರಾಹಿ, ಅಭಿರುಚಿಯುಳ್ಳ ಹಾಗೆಯೇ ಒಂದು ವಿಷನ್ ಇರುವ ನಿರ್ಮಾಪಕರು ಸಿಕ್ಕಿದ್ದಾರೆ. ಅವರನ್ನು ಉಳಿಸಿಕೊಳ್ಳುವುದು ನಿರ್ದೇಶಕರ ಬಹುದೊಡ್ಡ ಜವಾಬ್ದಾರಿಯಾಗಿದೆ..

Tuesday, June 14, 2016

ಸೈರಾಟ್ ಕನ್ನಡಕ್ಕೆ...

ನಮ್ಮ  ಕನ್ನಡದಲ್ಲಿ  ದಕ್ಷಿಣ ಭಾರತದ ಇತರೆ ಭಾಷೆಗಳಾದ ತೆಲುಗು ತಮಿಳು  ರಿಮೇಕ್  ಆಗುತ್ತಿದ್ದದ್ದೆ  ಹೆಚ್ಚು. ಒಂದಷ್ಟು ಹಿಂದಿ ಚಿತ್ರಗಳನ್ನು  ಹೊರತು ಪಡಿಸಿದರೆ  ಬೆಂಗಾಲಿ, ಒರಿಸ್ಸಾ, ಮರಾಠಿ  ಚಿತ್ರಗಳು ಕನ್ನಡ ರೂಪ ತಳೆದದ್ದು ಅಪರೂಪ. ಈಗ  ಮರಾಠಿ ಚಿತ್ರ  ಸೈರಾಟ್  ಕನ್ನಡಕ್ಕೆ  ರಿಮೇಕ್  ಆಗುತ್ತಿದೆ. ನಮ್ಮ ಹೆಸರಾಂತ  ನಿರ್ಮಾಪಕರಾದ ರಾಕಲೈನ್  ವೆಂಕಟೇಶ್  ಕನ್ನಡಕ್ಕೆ ತರುತ್ತಿದ್ದಾರೆ. ಆ ಮೂಲಕ  ಸೂಪರ್ ಹಿಟ್ ಚಿತ್ರಗಳು  ಯಾವುದೇ ಭಾಷೆಯಲ್ಲಿ ಬಂದರೂ ನಾವು ಕನ್ನಡಿಗರು  ರಿಮೇಕ್  ಮಾಡಲು ಸಿದ್ಧ  ಎಂಬುದು  ಸಾಬೀತಾದಂತಾಗಿದೆ.
ಸೈರಾಟ್  ಸರಿ ಸುಮಾರು  ಮೂರು  ಘಂಟೆ  ಅವಧಿಯ ಚಿತ್ರ. ಚಿತ್ರದ ಕತೆಯಾಗಲಿ, ಚಿತ್ರಕತೆಯಾಗಲಿ  ಯಾವುದೂ ಹೊಸತಲ್ಲ. ಅಥವಾ ಸಿನಿಮಾದಲ್ಲಿ ಸಮಾಜಕ್ಕೆ ಬೇಕಾದಂತಹ  ಸಂದೇಶವೂ ಇಲ್ಲ. ಮರ್ಯಾದೆ ಹತ್ಯೆಯನ್ನು ವೈಭವೀಕರಿಸಿರುವ  ಚಿತ್ರದಲ್ಲಿನ ಕತೆ ಚಿತ್ರಕತೆ ನಮ್ಮಲ್ಲಿಯೇ ತೆರೆಕಂಡ ಚಲುವಿನ ಚಿತ್ತಾರವನ್ನು ಆಲ್ಮೋಸ್ಟ್ ನೆನಪಿಸುತ್ತದೆ.ಮೊದಲಾರ್ಧ  ದೀರ್ಘವಾದರೂ ನೋಡಿಸಿಕೊಂಡು ಹೋಗುತ್ತದೆ. ಆಮೇಲೆ ಸ್ವಲ್ಪ ಮಟ್ಟಿಗೆ ಬೋರ್ ಎನಿಸಿದರೂ ಅಂತ್ಯ ಮಾತ್ರ ಮನಸ್ಸನ್ನು ಕಲಕುತ್ತದೆ. ಆ ಒಂದು ವಿಷಯದಲ್ಲಿ  ನಿರ್ದೇಶಕ ನಾಗರಾಜ್ ಮಂಗಳೆ ಅವರನ್ನು ಮೆಚ್ಚಲೇಬೇಕಾಗುತ್ತದೆ. ಅಂತ್ಯದಲ್ಲಿ ಯಾವುದೇ ಅಬ್ಬರವಿಲ್ಲದೆ, ಬರ್ಬರತೆಯಿಲ್ಲದೆ ಅದನ್ನು ನೋಡುಗನ ಕಣ್ಣಲ್ಲಿ ನೀರು ಬರುವ ಹಾಗೆ ಹತ್ತಿಕ್ಕಲಾಗದ ವಿಷಾದ ಆವರಿಸುವ ಹಾಗೆ ನಿರ್ದೆಶಿಸಿರುವುದು ಅವರ ಪ್ರತಿಭೆಯನ್ನು ಎತ್ತಿ ಹಿಡಿಯುತ್ತದೆ.ಆದರೂ ಬರೀ ಯಶಸ್ಸಿನ ಮಾನದಂಡದಿಂದಷ್ಟೇ ಅದನ್ನು ಕನ್ನಡಕ್ಕೆ ತರುತ್ತಿರುವುದು ಎಂಬುದು ಅರಗಿಸಿಕೊಳ್ಳಬೇಕಾದ ವಿಷಯ.
ಇದು ಕನ್ನಡಕ್ಕೆ ಹೊಸದೇನಲ್ಲ.. ಈ ಹಿಂದೆ "ಅವರ್ ಹಾಸ್ಪಿಟಾಲಿಟಿ" ಚಿತ್ರವನ್ನು ದಿನೇಶ್ ಬಾಬು ಬಲಗಾಲಿಟ್ಟು ಒಳಗೆ  ಬಾ ಎನ್ನುವ ಹೆಸರಿನಲ್ಲಿ ಕನ್ನಡದಲ್ಲಿ ತೆರೆಗೆ ತಂದಿದ್ದರು. ಆನಂತರ ರಾಜಮೌಳಿ ಅದನ್ನೇ ತೆಲುಗಿನಲ್ಲಿ "ಮರ್ಯಾದಾ ರಾಮಣ್ಣ" ಎಂಬ ಹೆಸರಿನಲ್ಲಿ ರಿಮೇಕ್ ಮಾಡಿದರೆ ಮತ್ತದು ಇದೆ ಹೆಸರಿನಲ್ಲಿಯೇ ಕನ್ನಡಕ್ಕೆ ಕೋಮಲ್ ನಾಯಕತ್ವದಲ್ಲಿ ಅಧಿಕೃತವಾಗಿ ರಿಮೇಕ್ ಆಗಿತ್ತು.  ಹಾಗೆಯೇ  "ಮಣಿಚಿತ್ರತಾಳ್" ಕನ್ನಡದಲ್ಲಿ ಆಪ್ತಮಿತ್ರ  ಆಗುವ ಮುನ್ನವೇ "ಸಾಗರಿ" ಹೆಸರಿನಲ್ಲಿ ತೆರೆಕಂಡಿತ್ತು. ಹಾಗಾಗಿ ಕತೆ ಹೇಗೋ ಏನೋ ಅಲ್ಲಿ ಯಶಸ್ಸಾದರೆ ಇಲ್ಲಿ ತರೋಣ ಎನ್ನುವ ಮನೋಭಾವವೇ ಕನ್ನಡದಲ್ಲಿ ರಿಮೇಕ್ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಿದೆ.
ಇನ್ನು ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್ ಕನ್ನಡದಲ್ಲಿ ಯಶಸ್ವೀ ಚಿತ್ರಗಳನ್ನು ಕೊಟ್ಟಿದ್ದಾರೆ. ಆದರೆ ಅವರ ಸಂಸ್ಥೆಯಿಂದ ಹೆಚ್ಚು ರಿಮೇಕ್ ಚಿತ್ರಗಳು ನಿರ್ಮಾಣವಾಗಿರುವುದು ಸ್ವಲ್ಪ ಬೇಸರದ ಸಂಗತಿ. ಈವತ್ತು ರಾಷ್ಟ್ರಮಟ್ಟದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಪಕನೆಂದು ಗುರುತಿಸಿಕೊಂಡಿರುವ ರಾಕಲೈನ್ ಸ್ವಮೇಕ್ ಚಿತ್ರಗಳತ್ತ ಗಮನ ಹರಿಸದೆ ಇರುವುದು, ಕನ್ನಡದ ಕಥೆಗಳನ್ನು ಹೆಚ್ಚು ಸಿನಿಮಾ ಮಾಡದೆ ಇರುವುದು ಬೇಸರ ತರಿಸದೇ ಇರದು. ಪರಭಾಷೆಯಲ್ಲಿ ಅದ್ದೂರಿಯಾಗಿ ಸಿನಿಮಾ  ನಿರ್ಮಿಸುವ ಅವರು ಆಯಾರಂಗದಲ್ಲಿ ಸ್ವಮೇಕ್ ಚಿತ್ರಗಳನ್ನು ಹೆಚ್ಚು ನಿರ್ಮಿಸಿದ್ದಾರೆ. ಆದರೆ ಅದೇಕೋ ಏನೋ ಕನ್ನಡಕ್ಕೆ ಬಂದರೆ ಹೊಸ ಕತೆಯೂ ಇಲ್ಲ, ಸ್ವಮೇಕೂ ಇಲ್ಲ ಎನ್ನುತ್ತಾರೆ. ಈವತ್ತು ನಾವೆಲ್ಲಾ ಹೆಮ್ಮೆ ಪಡುವಂತಹ ಸಂಸ್ಥೆಯಾದ ರಾಕ್ ಲೈನ್  ಪ್ರೊಡಕ್ಷನ್ ನಲ್ಲಿ ಅದ್ಭುತ ಕತೆಯ ಸ್ಮರಣೀಯ ಎನಿಸುವ ಸ್ವಮೇಕ್ ಚಿತ್ರದ ಕೊರತೆಯಿದೆ. ಹಾಗಂತ ರಾಕ್ ಲೈನ್ ಸ್ವಮೇಕ್ ಮಾಡೇ ಇಲ್ಲ ಅಂತಲ್ಲ. ಆದರೆ ಅವರು ಜಾಸ್ತಿ ಮೊರೆ ಹೋಗಿರುವುದು ರಿಮೇಕ್ ಚಿತ್ರಗಳತ್ತ ಎನ್ನುವುದು ಸತ್ಯ. ಒಂದು ಲಾಲಿ, ಸೂಪರ್ ಅಂತಹ ಸ್ವಮೇಕ್ ಚಿತ್ರಗಳನ್ನೂ ನೀಡಿದೆ ಅವರ ಸಂಸ್ಥೆ. ಆದರೆ ಯಾವುದೇ ರೀತಿಯಲ್ಲಿಯೂ ಹೊಸತನದ ಹೊಸ ಅಲೆಯ ಚಿತ್ರಗಳ ಕಡೆಗೆ ಗಮನ ಹರಿಸದೆ ಇರುವುದು, ಪಕ್ಕಾ ಮಸಾಲೆ ಮನರಂಜನೆ -ರಿಮೇಕ್ ಚಿತ್ರಗಳಿಗಷ್ಟೇ ಪ್ರಾಮುಖ್ಯತೆ ಕೊಟ್ಟಿರುವುದು ಹೆಚ್ಚಾಗಿ ಕಂಡುಬರುತ್ತದೆ. ಸಿನಿಮಾ ವ್ಯವಹಾರವನ್ನು ತುಂಬಾ ಚೆನ್ನಾಗಿ ಅರಿತಿರುವ ಮತ್ತು ನಿರ್ಮಾಣದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿರುವ ರಾಕ್ ಲೈನ್ ಕನ್ನಡ ಚಿತ್ರರಂಗದ ಆಸ್ತಿ. ಅವರು ಸ್ವಮೇಕ್ ಚಿತ್ರಗಳತ್ತ, ಹೊಸ ಪ್ರತಿಭೆಗಳ ಅನಾವರಣದತ್ತ ಸ್ವಲ್ಪ ಆಸಕ್ತಿ ತೋರಿಸಿದರೆ ಕನ್ನಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸುವ ಎಲ್ಲಾ ಸಾಧ್ಯತೆಗಳಿವೆ. ಅವರು ಮನಸ್ಸು ಮಾಡಬೇಕಷ್ಟೆ...