Friday, July 15, 2016

ದೆವ್ವದ ಪ್ರಶಸ್ತಿ ಕೊಡೋಣ ಬನ್ನಿ...

ಕಾಲಕ್ಕೆ ತಕ್ಕಂತೆ  ದೆವ್ವಗಳು  ಬದಲಾಗಿವೆ. ಅವುಗಳಲ್ಲೂ ಕೆಟ್ಟ ದೆವ್ವಗಳು, ಒಳ್ಳೆಯ  ದೆವ್ವಗಳು  ಹುಟ್ಟಿಕೊಂಡಿವೆ, ಹಾ  ಇಲ್ಲಿ ಸತ್ತು. ! ದೇವರು  ಎಂದರೆ  ಕಿಲೋಮೀಟರ್ ದೂರ ಓಡುತ್ತಿದ್ದ  ದೆವ್ವಗಳು  ಈಗ  ದೇವರ ವಿಗ್ರಹದ ಮುಂದೆ ಕುಣಿದು ಕುಪ್ಪಳಿಸಿ  ದೇವರನ್ನೇ  ಹೊಗಳಿ ಪಟಾಯಿಸಿಕೊಳ್ಳುತ್ತಿವೆ. ದೇವರಿಂದ ಶಕ್ತಿಯನ್ನು  ಎರವಲು  ಪಡೆದುಕೊಳ್ಳುತ್ತಿವೆ. ಅದಿರಲಿ. ಸಧ್ಯಕ್ಕೆ  ಕನ್ನಡ  ಚಿತ್ರರಂಗದಲ್ಲಿ  ದೆವ್ವದ ಕಾಲ. ಅಥವಾ ದೆವ್ವಗಳ ಪರ್ವ ಕಾಲ. ತರಾವರಿ ದೆವ್ವಗಳ  ಆಟಾಟೋಪ ಖುಷಿ ಕೊಡುವಂತಹದ್ದೆ ಬಿಡಿ.
ವರ್ಷದ  ಪ್ರಾರಂಭದಲ್ಲಿ  ಬಂದ  ದೆವ್ವದ ಮೂಲ ಉದ್ದೇಶ  ಹಗೆತನವಾದರೂ ನಗಿಸಿದ್ದಂತೂ ನಿಜ. ನಮ್ಮ  ಪ್ರಿಯಾಮಣಿಯಂತಹ ಸುಂದರಿ ದೆವ್ವವಾಗಿಯೂ ಕಾಡಬಹುದು ಎಂಬುದನ್ನು ತೋರಿಸಿಕೊಟ್ಟ ಚಿತ್ರವದು. ಬಂದದ್ದೆ ದೆವ್ವ ಕಾಡಲಿಲ್ಲ. ಬದಲಿಗೆ ನಿರ್ದೇಶಕನನ್ನೇ ಬಳಸಿಕೊಂಡು ಸಿನಿಮಾದ ಒಳಗೊಂದು ಸಿನಿಮಾ ತೆಗೆಯುವ ನಾಟಕವಾಡಿ ವಿಲನ್ ನನ್ನು ಬಗ್ಗು  ಬಡಿದ ದೆವ್ವವದು. ಆಮೇಲೆ  ಕಾಣಿಸಿಕೊಂಡದ್ದು ಗಂಡು ದೆವ್ವ. ಆವರಿಸಿದ್ದು ಮಾತ್ರ ಹೆಣ್ಣನ್ನು. ಪಾಪ ಮದುವೆಯಾಗಿ ಹನಿಮೂನ್ ಮತ್ತು  ಡ್ಯೂಟಿ ಎರಡನ್ನೂ ಒಂದೇ ಕಡೆ ಮಾಡುವ ಮೂಲಕ ಸ್ವಾಮೀ ಕಾರ್ಯ ಸ್ವಕಾರ್ಯ  ಮಾಡಿಕೊಳ್ಳೋಣ ಎಂದು ನಮ್ಮ ಶಿವಣ್ಣ ಪ್ಲಾನ್ ಮಾಡಿದರೆ ಅವರ ಪತ್ನಿಗೆ ಆವರಿಸಿಕೊಳ್ಳುವುದೇ..? ಅದರಲ್ಲೂ ಮೇಲಧಿಕಾರಿಗಿಂತ ಹೆಚ್ಚಾಗಿ ಕೊಂದವನನ್ನು ಹಿಡಿಯದಿದ್ದರೆ ಅಷ್ಟೇ ಎನ್ನುವ ಧಮಕಿ ಬ್ಲಾಕ್ ಮೇಲ್ ಬೇರೆ. ತನ್ನನ್ನು ಕೊಲೆಮಾಡಿದವರು ಯಾರು ಎಂಬುದನ್ನು ತಿಳಿದುಕೊಳ್ಳಲು ಆ ದೆವ್ವ ಕಡಿಮೆ ಅಬ್ಬರಿಸಲಿಲ್ಲ ಬಿಡ್ರೀ...
ಆಮೇಲೆ ಅನಂತ್ ನಾಗ್ ಸತ್ತು ದೆವ್ವವಾಗಿ ಮತ್ತೊಂದು ಆತ್ಮಕ್ಕೆ ಕತೆ ಹೇಳಿದ್ದು ಹೊಸಬರ ಪ್ರಯತ್ನದಲ್ಲಿ. ಇಲ್ಲಿ ದೆವ್ವಕ್ಕೆ maturity ಇತ್ತು, ಹಾಗೆಯೇ ದೆವ್ವದ ಮನೆ ಆಳಾಗಿದ್ದ ಆಫ್ ಕೋರ್ಸ್ ಮತ್ತೊಂದು ದೆವ್ವ ರಾಜು ತಾಳಿಕೋಟೆ ಸಹ ಯಾವುದೇ ಕಾಟ ಕೊಡಲಿಲ್ಲ. ಆಮೇಲೆ ಒಟ್ಟೊಟ್ಟಿಗೆ ಆವರಿಸಿಕೊಂಡದ್ದು ಐದೈದು ದೆವ್ವಗಳು. ನಮಗೆ ಸರಿಯಾದ ಶ್ರಾಧ ಮಾಡಿಲ್ಲ , ನಮಗೆ ಮೋಕ್ಷ ಸಿಕ್ಕಿಲ್ಲ, ಅದಕ್ಕಾಗಿ ಮದುವೆ ಮಾಡಿಕೊ ಎಂದು ರಮೇಶ್ ಅರವಿಂದ್ ಗೆ ಕಾಡಿದ್ದು ದೆವ್ವಗಳು.  ಆಮೇಲೆ ಒಂದು ಮನೆಯೊಳಗೇ ಒಂದು ದೆವ್ವ ಕಾಡಿತ್ತಾದರೂ ಮತ್ತೊಂದು ದೆವ್ವ ತಂತ್ರ ಮಾಡಿ ಸೇಡು ತೀರಿಸಿಕೊಂಡಿತು. ಆದರೆ ಸಾಯುವ ಕಡೆಗಳಿಗೆಯಲ್ಲಿ ಸುಂದರಿ ನೋಡಿ ಪ್ರೀತಿಸಲೇ ಬೇಕೆಂಬಾಸೆಯನ್ನು ಮನಸ್ಸಿನಲ್ಲಿಟ್ಟು ಕೊಂಡು ಅತೃಪ್ತ ಆತ್ಮವಾಗಿ ಕಾಡಿದ ದೆವ್ವ ಮುಟ್ಟದೆ ಲವ್ ಮಾಡೋಣ ಅನ್ನೋದೇ. ಪಾಪ ಸುಂದರಿಗೇನು ಗೊತ್ತು..? ಇವನ್ಯಾರೂ ಈ ಕಡುಕಲಿಗಾಲದಲ್ಲೂ ಹೀಗೆಲ್ಲ ಮಾತನಾಡುತ್ತಿದ್ದಾನಲ್ಲ ಎಂಬ ಅನುಮಾನ ಪಡದೆ ಇವನ್ಯಾರೋ ಸಭ್ಯರಲ್ಲಿ ಸಭ್ಯ ಅಂದುಕೊಂಡು ಪ್ರೀತಿಸಿದರೆ ಆಮೇಲೆ ಗೊತ್ತಾದದ್ದು ನಾನು ಪ್ರೀತಿಸಿದ್ದು ದೆವ್ವವನ್ನು ಎಂಬುದು. ಇದೆಲ್ಲದರ ಜೊತೆಗೆ ಅನ್ಯಾಯವಾಗಿ ಕೊಲೆಗೀಡಾದ ನಾಲ್ಕು ಆತ್ಮಗಳು ದೆವ್ವವಾಗಿ ಪ್ರೇಕ್ಷಕನಿಗೆ ಸಿನಿಮಾ ಕತೆ ಹೇಳಿದ ಉದಾಹರಣೆಯೂ ನಡೆದುಹೋಯಿತಲ್ಲ. ಸತ್ತು ಬಿದ್ದ ಭಗ್ನಪ್ರೇಮಿ, ಸಹ ನಿರ್ದೇಶಕ ಒಬ್ಬ ಚಿಕ್ಕ ಹುಡುಗ.. ಎಲ್ಲರೂ ಸೇರಿಕೊಂಡು ಮನುಷ್ಯರಿಗೆ ಕತೆ ಹೇಳಿ ನಂಬಿಸಿಬಿಟ್ಟದ್ದೂ ಉಂಟು.
ಇದರ ನಡುವೆ ಒಂದೆರೆಡು ದೆವ್ವಗಳು ಮನೆಯಲ್ಲಿಯೇ ಇದ್ದು ಬಂದ ಬಂದವರನ್ನು ಹೆದರಿಸಿದ್ದೂ ಉಂಟು. ಆದರೆ ಇವುಗಳ ನಡುವೆ ಅದೊಂದು ಹೆಣ್ಣು ದೆವ್ವ ರಸ್ತೆ ನಡುವಣ ಕಲ್ಲು ಸರಿಸಿದ್ದದ್ದನ್ನೇ ನೆಪಮಾಡಿಕೊಂಡು ಭಯಂಕರ ಪ್ಲಾನ್ ಮಾಡಿ ಹತ್ತಾರು ಸರಣಿ ಕೊಲೆಗಳನ್ನು ಮಾಡಿ ಸೈ ಅನಿಸಿಕೊಂಡಿತು ನೋಡಿ. ಅದರದೂ ಒಂದು ಅಹವಾಲು.. ನನ್ನನ್ನು ಕೊಂದವರು ಯಾರು ಎಂಬುದು ಗೊತ್ತಾಗಬೇಕು ಎಂಬುದು.ಅಲ್ಲಮ್ಮಾ.. ಮನುಷ್ಯ ಮಾತ್ರದವರು ಗೊತ್ತಿಲ್ಲದೇ ಕಲ್ಲು ಸರಿಸಿ ಸಾಯಿಸಿದರೂ ಎಂಬುದನ್ನೇ ನೆಪವಾಗಿಟ್ಟುಕೊಂಡು ಕಲ್ಲು ಸರಿಸಿದವರನ್ನೆಲ್ಲಾ ಸಾಯಿಸುತ್ತೀಯಲ್ಲ ಇದೇನು ನ್ಯಾಯ.. ಹಾಗಾದರೆ ನಾವ್ಯಾಕೆ ಸತ್ತೆವು, ನಾವು ಮಾಡದ ತಪ್ಪಿಗಾಗಿ ಸುಮ್ಮನೆ ಸತ್ತೆ ಹೋದೆವಲ್ಲಾ ಎಂಬೊಂದು ಕೊರಗಿಟ್ಟುಕೊಂಡೆ ಸತ್ತ ಆ ಹತ್ತು ಜನರೂ ದೆವ್ವಗಳಾದರೆ ನಿನ್ನ ಗತಿಯೇನು..?  ಇಷ್ಟಕ್ಕೂ ತೀರಾ ಬುದ್ದಿವಂತೆಯಾದ ನೀನು ಬರೀ ಕಲ್ಲು ಜರುಗಿಸಿದವರ ಮೇಲಷ್ಟೇ ಸೇಡು ತೀರಿಸಿಕೊಳ್ಳುವುದು ಅದ್ಯಾವ ನ್ಯಾಯಾ..? ಆ ರಸ್ತೆ/ಹಾರುಸೇತುವೆಗಾಗಿ ಕೋಟ್ಯಾಂತರ ಹಣ ಸರ್ಕಾರ ಮಂಜೂರು ಮಾಡಿದ್ದರೂ ಖರ್ಚು ಮಾಡದೆ ತಮ್ಮ ಬೊಕ್ಕಸಕ್ಕೆ ಹಾಕಿಕೊಂಡು ರಾಜಕಾರಣಿಗಳು, ಆ ಎಂಜಲನ್ನು ಬಿಡದೆ ನೆಕ್ಕಿದ ಅಧಿಕಾರಿಗಳು ಮುಂತಾದವರನ್ನು ವಿಚಾರಿಸಿಕೊಂಡಿದ್ದರೆ ಮೂಲಕ್ಕೆ ಕೈ ಹಾಕಬಹುದಿತ್ತಲ್ಲ ಮತ್ತು  ಒಂದು ರಸ್ತೆಯಷ್ಟೇ ಅಲ್ಲ, ಹಲವಾರು ರಸ್ತೆಯ ಸ್ಥಿತಿಗತಿ ಚೆನ್ನಾಗಿರುತ್ತಿತ್ತಲ್ಲ ಎಂದು ಕೂರಿಸಿಕೊಂಡು ಬುದ್ದಿವಾದ ಹೇಳಬಹುದಾಗಿತ್ತು. ಏಕೆಂದರೆ ಅದೇನುತಲೆ ಬಾಚದೇ  ಕೂದಲು ಕೆದರಿಕೊಂಡು , ಎರ್ರಾಬಿರ್ರಿ ಕಾಡಿಗೆಯನ್ನು ಕಣ್ಣಿಗೆ ಬಳಿದುಕೊಂಡು ಹೆದರಿಸುವ ಅಶಿಸ್ತು ದೆವ್ವವಲ್ಲವಲ್ಲ..ಸಾವಧಾನವಾಗಿ ಕುಳಿತುಮಾತನಾಡುತ್ತಿತ್ತು.. ಆದರೆ  ಆ ಧೈರ್ಯವಿರಲಿಲ್ಲ ಯಾರಿಗೂ ಎನಿಸುತ್ತದೆ.
ಆನಂತರ ಬಂದದ್ದು ನಮ್ಮ ಸವಾಲ್ ಗೆ ಸವಾಲ್ ಎನ್ನುವ ಸ್ಟಾರ್ ಗೆ ಆಟವಾಡಿಸುವ ದೆವ್ವ. ಈ ದೆವ್ವದ್ದು ಕಾಟವಿಲ್ಲ ಬಿಡಿ. ಮೊಮ್ಮಗನನ್ನು ಒಳ್ಳೆ ದಾರಿಗೆ ತರಬೇಕು ಎನ್ನುವ ಹಪಾಹಪಿಯ ದೆವವ್ವಿದು. ಒಟ್ಟಿನಲ್ಲಿ ಈ ವರ್ಷದ ಅತ್ಯಂತ ಒಳ್ಳೆಯದೆವ್ವ ಪ್ರಶಸ್ತಿ ಇದಕ್ಕೆ ಸಿಗಬೇಕೇನೋ..? ಆನಂತರದ್ದು ಹಳೆಯ ಆಪ್ತಮಿತ್ರ ನೆನಪಿಗೆ ತರುವ ದೆವ್ವ. ಚಿಕ್ಕ ಹುಡುಗಿಯ ದೆವ್ವವಾದರೂ  ಮುಲಾಜಿಲ್ಲದೆ ದೊಡ್ಡವರನ್ನು ಕಾಡಿದ ದೆವ್ವ. ಈಗ ಸಧ್ಯಕ್ಕೆ ಉಪೇಂದ್ರ ಅವರನ್ನು ಆವರಿಸಿಕೊಂಡ ದೆವ್ವ. ಸುಮ್ಮನಿದ್ದರೂ ಅಬ್ಬರಿಸುವ ಉಪ್ಪಿ ಮೇಲೆ ದೆವ್ವ ಆವರಿಸಿದರೆ ಗತಿ ಏನು ಶಿವನೆ ಎನ್ನುವ ಹಾಗಿಲ್ಲ ಬಿಡಿ. ಈ ದೆವ್ವ  ದೇವರ ಫ್ರೆಂಡ್ಶಿಪ್ ಮಾಡಿಕೊಂಡ ದೆವ್ವ..
ಒಟ್ಟಿನಲ್ಲಿ ಏಳು ತಿಂಗಳಿನಲ್ಲಿ ಇಷ್ಟೆಲ್ಲಾ ದೆವ್ವಗಳನ್ನು ನೋಡಿದ ನಾವು ಅತ್ಯುತ್ತಮ ಒಳ್ಳೆಯ ದೆವ್ವ, ಅತ್ಯುತ್ತಮ ಕೆಟ್ಟ ದೆವ್ವ, ಪೋಷಕ ದೆವ್ವ, ನಗಿಸಿದ ದೆವ್ವ, ಅಳಿಸಿದ ದೆವ್ವ, ಬಾಲ ದೆವ್ವ .. ಹೀಗೆ ಪ್ರಶಸ್ತಿ ಕೊಟ್ಟೆ ಬಿಡುವುದಾದರೆ ನಿಮ್ಮ  ಆಯ್ಕೆ  ಯಾವುದು ಎಂಬುದನ್ನು  ಹೇಳುವ ಮುನ್ನ ಹುಷಾರು..? ದೆವ್ವಕ್ಕೆ ನಿಮ್ಮ ಆಯ್ಕೆ  ತೃಪ್ತಿ ತರದೇ ಇದ್ದರೆ ಕಾಡುವುದಿಲ್ಲ ಎನ್ನುವುದಕ್ಕೆ ಖಾತರಿಯಿಲ್ಲ..

Thursday, July 14, 2016

ಆವಾಹನೆಗೊಳಗಾದ ಸಿದ್ದಿಕಿಗಾಗಿ ಚಿತ್ರ ನೋಡಬೇಕು..

ಸರ್..ನಾನು ದೇವರೊಂದಿಗೆ  ಮಾತನಾಡುತ್ತೇನೆ, ಅವನು ಯಾರನ್ನೋ  ನನ್ನ ಬಳಿಗೆ ಕಳುಹಿಸೋ ಎನ್ನುತ್ತಾನೋ ಅವರನ್ನು ಕಳಿಸುತ್ತೇನೆ, ನಾವೆಲ್ಲಾ  ಯಮನ ಏಜೆಂಟ್ ಇದ್ದ ಹಾಗೆ. ನಿಮಗಂತೂ ಲೈಸೆನ್ಸ್ ಇದೆ. ನೀವು ಸಾಯಿಸಿದರೆ ನಿಮಗೆ ಸವಲತ್ತು ಸಿಗುತ್ತದೆ. ..ಎನ್ನುತ್ತಾನೆ ಎದುರಿಗೆ ಕುಳಿತವನು. ಅಲ್ಲಿಗೆ ಪೋಲಿಸ್ ಅಧಿಕಾರಿಗೆ ಆತ ಕೊಲೆಗಾರ ಎನಿಸುವುದಕ್ಕಿಂತ ತಿಕ್ಕಲು ಮನುಷ್ಯ ಎನಿಸುತ್ತದೆ. ಹುಚ್ಚುಹುಚ್ಚಾಗಿ ಮಾತಾಡಿ, ಸುಮ್ಮನೆ ಜೈಲಿನಲ್ಲಿ ಕುಳಿತು ತಿನ್ನೋಣ ಎಂದುಕೊಂಡಿರುವ ಹುಚ್ಚ ಎನಿಸಿ ಅವನನ್ನು ಒಂದು ಕೋಣೆಯೊಳಗೆ ಬಂಧಿಸಿ ಮರೆತುಬಿಡುತ್ತಾರೆ. ಅಲ್ಲಿಂದ ಚಿತ್ರ ತೆರೆದುಕೊಳ್ಳುತ್ತದೆ. ರಮಣ ರಾಘವ ಅಲ್ಲಿನ ಜನರನ್ನು ಪೋಲಿಸರನ್ನು ಕಾಡುವಷ್ಟೇ ನವಾಜುದ್ದೀನ್ ಸಿದ್ದಿಕಿ ನಮ್ಮನ್ನು ಕಾಡುತ್ತಾರೆ. ನಮ್ಮನ್ನು ಹೆದರಿಸುತ್ತಾರೆ. ಅದೆಲ್ಲಿ ಮಾತನಾಡುತ್ತಾ ಕಬ್ಬಿಣದ ಕೋಲಿನಿಂದ ಹೊಡೆಯುತ್ತಾನೋ ಎನಿಸುವಷ್ಟು ಭಯಾನಕ ಭಯವನ್ನು ತುಂಬುತ್ತಾರೆ.
ಈ ಹಿಂದೆ ವರ್ಮ ರಮಣ ರಾಘವ ಎನ್ನುವ ಕೊಲೆಪಾತಕನನ್ನು ಕುರಿತು ಸಿನಿಮಾ ಮಾಡಿದ್ದರು.ಹಾಗೆ ನೋಡಿದರೆ ಸರಣಿ ಹಂತಕರು, ಅತ್ಯಾಚಾರಿಗಳು ರೌಡಿಗಳು ಮುಂತಾದ ಅಪರಾಧಿಗಳ ಬಗೆಗೆ ಸಿನಿಮಾ ತಯಾರಾಗಿರುವಷ್ಟು ಮಹಾತ್ಮರ ಬಗೆಗೆ ಚಿತ್ರ ಮಾಡಿರುವುದು ಕಡಿಮೆಯೇ. ಇದು ಬಹುಶಃ ಎಲ್ಲಾ ಭಾಷೆಯಲ್ಲಿಯೂ ಸತ್ಯ. ರಮಣ ರಾಘವ 2.0 ಇಷ್ಟವಾಗುವುದು ಅದರ ಕತೆಗಿಂತಲೂ ನಾಯಕ ನವಾಜುದ್ದೀನ್ ಅವರ ಅಭಿನಯದಿಂದ. ತನ್ಮಯತೆ ಅದೂ ಇದೂ ಎಲ್ಲವನ್ನು ಬಿಟ್ಟಾಕಿ. ಆ ಪಾತ್ರವನ್ನು ತನ್ನಂತೆ ಮತ್ತು ತನಗೆ ಒಪ್ಪಿಗೆಯಾಗುವಂತೆ ಆವಾಹಿಸಿಕೊಂಡು ಅಭಿನಯಿಸುವ ಸಿದ್ದಿಕಿ ಆ ಪಾತ್ರದ ಬಗೆಗೆ ಹೇವರಿಕೆ ಕೋಪ ಬರುವಂತೆ ಮಾಡುತ್ತಾರೆ. ಹಾಗೆಯೇ ತಮ್ಮ ಅಭಿನಯದ ಬಗೆಗೆ ಮೆಚ್ಚುವಂತೆ ಅಭಿನಯಿಸುತ್ತಾರೆ.
ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರ ಎಲ್ಲಾ ಪ್ರೇಕ್ಷಕರಿಗೂ ಹೇಳಿ ಮಾಡಿಸಿದ್ದಲ್ಲ. ಚಿತ್ರವನ್ನು ತುಂಬಾ ಒರಟಾಗಿ ನಿರೂಪಿಸಿರುವ ಕಶ್ಯಪ್ ಚಿತ್ರದಲ್ಲಿನ ಕತೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿಯೇ ನಿರೂಪಿಸಿದ್ದಾರೆ. ಇಲ್ಲಿ ಹೀರೋ ಎನಿಸಿಕೊಳ್ಳುವ ಪಾತ್ರವಾಗಲಿ, ವಿಲನ್ ಎನಿಸಿಕೊಳ್ಳುವ ಪಾತ್ರವಾಗಲಿ ಇಲ್ಲ. ಸರಣಿ ಹಂತಕನ ಮನಸ್ಥಿತಿ ಅವನ ಪೈಶಾಚಿಕತೆ ಮತ್ತು  ಪೋಲೀಸರ ಹುಡುಕಾಟ ಇವಷ್ಟನ್ನೂ ಸೇರಿಸಿ ಕತೆ ಹೆಣೆದಿದ್ದಾರೆ ನಿರ್ದೇಶಕರು. ಒಂದು ಕ್ರೈಂ ಥ್ರಿಲ್ಲರ್, ಒಬ್ಬ  ಸೈಕೋಪಾತ್ ನ ಕತೆ ಇದಾಗಿದ್ದರೂ ನವಾಜುದ್ದೀನ್ ಸಿದ್ದಿಕಿ ಅವರ ಅಭಿನಯಕ್ಕಾಗಿ ನೋಡಲೇಬೇಕಾದ ಚಿತ್ರವಿದು.

Tuesday, July 12, 2016

ಸಂಭಾಷಣೆಕಾರನಿಗೂ ನಿರ್ದೇಶಕನಿಗೂ ಬಂದಾರೆ ಮುನಿಸು...

ಚಿತ್ರಗಳಿಗೆ ಸಂಭಾಷಣೆ ಬರೆಯುವ ಕೆಲಸ ಒಂತರಾ ಖುಷಿ ಕೊಡುವ ಕೆಲಸವಾದರೂ ಅದು ಸವಾಲಿನ ಕೆಲಸ.. ಯಾಕೆಂದರೆ ಕತೆಯನ್ನು ತಲೆಗೆ ಹಾಕಿಕೊಂಡು ಇರುವ ದೃಶ್ಯಕ್ಕೆ ಸಂಭಾಷಣೆಯನ್ನು, ಮತ್ತು ಇಲ್ಲದ ದೃಶ್ಯವನ್ನು ಸೃಷ್ಟಿಸಿ ಹಾಗೆಯೇ ಆ ಸಂದರ್ಭ ಮತ್ತು ದೃಶ್ಯದ ಪ್ರಾಮುಖ್ಯತೆಯನ್ನು ಮನಗಂಡು ಹಾಗೆಯೇ ದೃಶ್ಯದಲ್ಲಿ ಅನಾವರಣಗೊಳ್ಳಬೇಕಾದ ಮುಖ್ಯ ಅಂಶ ಮತ್ತು ಮತ್ತು ದೃಶ್ಯಕ್ಕೆ ಒಟ್ಟಾರೆ ಚಿತ್ರದಲ್ಲಿರಬಹುದಾದ ನಿಗದಿತ ಸಮಯ ಇವೆಲ್ಲವನ್ನೂ ಲೆಕ್ಕ ಹಾಕಿ ಸಂಭಾಷಣೆ ಬರೆಯಬೇಕಾಗುತ್ತದೆ. ಮೂಲಕತೆ ಸಂಭಾಷಣೆಕಾರನದೆ ಆದರೆ, ಅಥವಾ ಸಂಭಾಷಣೆಕಾರನೇ ಕತೆಗಾರನಾದರೆ ಅಥವಾ ನಿರ್ದೇಶಕನೇ ಕತೆಗಾರ ಸಂಭಾಷಣೆಕಾರನಾಗಿದ್ದರೆ ಅದವರ ಮರ್ಜಿಗೆ ಬಿಟ್ಟದ್ದು. ಅಥವಾ ಸಿನಿಮ ರಿಮೇಕ್ ಆಗಿದ್ದರಂತೂ ಸಂಭಾಷಣೆಯಲ್ಲಿ ಸೃಜನಶೀಲತೆ ನೆಪಮಾತ್ರ ಎನ್ನಬಹುದು. ಆದರೆ ಬೇರೆಯವರ ಕತೆಗೆ ಸಂಭಾಷಣೆ ಬರೆದು ಅದನ್ನು ಒಪ್ಪಿಸುವ ಕೆಲಸ ಸುಲಭದ್ದಲ್ಲ. ಕೆಲವೊಮ್ಮೆ ನಿರ್ದೇಶಕನ ಆಶಯ, ಕತೆಯ ಆಶಯ, ಪಾತ್ರಧಾರಿಗಳ ಪಾತ್ರಪೋಷಣೆ ಇವೆಲ್ಲವೂ ಏರುಪೇರಾಗಿ ಬಿಡುತ್ತವೆ. ಜೊತೆಗೆ ದೃಶ್ಯದಲ್ಲಿರಬಹುದಾದ ಪಾತ್ರಗಳಿಗೆ ಹೆಚ್ಚು ಪಾತ್ರಗಳಿದ್ದರೆ ಸಂಭಾಷಣೆ ಹಂಚುವ ಮತ್ತು ಅವರುಗಳ ಸ್ವಂತಿಕೆ/ಪಾತ್ರಪೋಷಣೆ ಕಾಯ್ದುಕೊಳ್ಳುವ ಕೆಲಸ ಇವೆಲ್ಲಾ ತುಂಬಾ ಜಾಗರೂಕತೆಯಿಂದ ಮಾಡುವಂತಹದ್ದು. ಅದೊಂದು ಸಿನಿಮಾಕ್ಕೆ ಸಂಭಾಷಣೆ ಬರೆಯಲು ಒಪ್ಪಿಕೊಂಡ ಸಂಭಾಷಣೆಕಾರನಿಗೆ ನಿರ್ದೇಶಕರು ಕತೆಯನ್ನು ವಿವರವಾಗಿ ಬಿಚ್ಚಿಟ್ಟಿರಲಿಲ್ಲ..ಬದಲಿಗೆ ಹೀಗೂ ಇರಬಹುದು, ಅಥವಾ ಅದನ್ನು ಹೇಗಾದರೂ ಬರೆಯಬಹುದು, ಅಥವಾ ನಿಮಗಿಷ್ಟ ಬಂದ ಹಾಗೆ ಬರೆಯಿರಿ ಸಾರ್ ಎಂದೆ ಹೇಳುತ್ತಿದ್ದರು. ಕತೆಯನ್ನು ನಿರ್ಮಾಪಕರ ಮುಂದೆ, ಕಲಾವಿದರ ಮುಂದೆ ನಿರೂಪಣೆ ಕೊಡಲು ಸಂಭಾಷಣೆಕಾರನನ್ನು ಕರೆದುಕೊಂಡು ಹೋಗುತ್ತಿದ್ದರು. ಎಲ್ಲವೂ ಸೆಟ್ ಆಯಿತು. ನಿರ್ಮಾಪಕರಿಗೆ, ಕಲಾವಿದರುಗಳಿಗೆ ಎಲ್ಲರಿಗೂ ಕತೆಯನ್ನು ಸಂಭಾಷಣೆಯನ್ನು ಒಪ್ಪಿಸುವ ಜವಾಬ್ದಾರಿಯನ್ನು ಸಂಭಾಷಣೆಕಾರ ಮಾಡಿದ್ದರು. ಆದರೆ ಅಷ್ಟೆಲ್ಲಾ ಆದ ನಂತರ ನಿರ್ದೇಶಕರಿಗೂ ಸಂಭಾಷಣೆಕಾರರಿಗೂ ಯಾವುದೋ ಕಾರಣಕ್ಕೆ ಕಿರಿಕ್ಕು ಬಂದಿತ್ತು, ಯಾವಾಗ ಕೆಲಸಗಳೆಲ್ಲವೂ ಮುಗಿದಿತ್ತೋ ನಿರ್ದೇಶಕರೂ ಸಂಭಾಷಣೆಕಾರರನ್ನು ಸ್ವಲ್ಪ ಜೋರಾಗಿಯೇ ಝಾಡಿಸಿದ್ದರು. ಇದರಿಂದ ಕೋಪಗೊಂಡ ಸಂಭಾಷಣೆಕಾರ ತಾನು ಬರೆದಿದ್ದೆಲ್ಲವನ್ನು ಒಂದು ಪುಟವನ್ನೂ ಬಿಡದೆ ತೆಗೆದುಕೊಂಡು ಮನೆಗೆ ಬಂದವರು ಸಂಭಾಷಣೆ ಬೇಕಾದರೆ ನನ್ನೊಡನೆ ರಾಜಿಯಾಗಲಿ ಎಂದರು. ಆದರೆ ನಿರ್ದೇಶಕರು ತುಟಿಕ್ ಪಿಟಿಕ್ ಎನ್ನಲಿಲ್ಲ. ಶೂಟಿಂಗ್ ದಿನಗಳು ಹತ್ತಿರ ಬಂದರೂ ಉಹೂ .. ನಿರ್ದೇಶಕರ ಪತ್ತೆಯಿಲ್ಲ. ಈಗ ಸಂಭಾಷಣೆಕಾರಿಗೆ ಆಶ್ಚರ್ಯ ಇಡೀ ಸ್ಕ್ರಿಪ್ಟ್ ನನ್ನತ್ರವೇ ಇದೆ. ಶೂಟಿಂಗ್ ಬೇರೆ ಹತ್ತಿರ ಬರುತ್ತಿದೆ. ಅದೇಗೆ ನಿರ್ದೇಶಕರು ನಿರುಮ್ಮಳವಾಗಿದ್ದಾರೆ ಎಂದು. ಆದರೆ ಶೂಟಿಂಗ್ ಪ್ರಾರಂಭವಾಗಿ ಅನಾಯಾಸವಾಗಿ ನಡೆಯತೊಡಗಿದಾಗ ಬೆಚ್ಚಿ ಬಿದ್ದ ಸಂಭಾಷಣೆಕಾರರು ಚಿತ್ರತಂಡದವರನ್ನು ಸಂಪರ್ಕಿಸಿದಾಗ ಅದು ನಿರ್ದೇಶಕರ ಕಿವಿಗೆ ಬಿದ್ದಾಗ ಅವರು ಹೇಳಿದ್ದಿಷ್ಟು. "ಎಲ್ಲಾ ತಲೇಲಿ ಇದೆಯಮ್ಮ, ಸುಮ್ನೆ ನಾನು ಕುಳಿತ್ಕೊಂಡು ಬರೆಯೋಕ್ಕಾಗಲ್ಲವಲ್ಲ ಅದಕ್ಕೆ ಬರೆಸಿದ್ದು.. "
ಚಿತ್ರರಂಗದಲ್ಲಿ  ಇದೊಂದು ಆರೋಪ ಇದ್ದೇ ಇದೆ. ಅದೊಮ್ಮೆ  ಸ್ಕೈಲೈನ್ ಸ್ಟುಡಿಯೋ ಮುಂದೆ ಸಿಕ್ಕ ಸಂಭಾಷಣೆಕಾರ-ನಿರ್ದೇಶಕ ರಾಮ್ ನಾರಾಯಣ್ ಏನೇ ಆಗಲಿ ಕಣ್ರೀ ನಾವೇನೋ ಅಷ್ಟು ಚೆನ್ನಾಗಿ ಬರೆದುಕೊಡ್ತೀವಿ.. ಆದ್ರೆ ನಿರ್ದೇಶಕರು ಅದನ್ನು ತಗೋಳ್ಲೋದೆ ಇಲ್ಲ ಬಿಡಿ.. ಏನೇನೋ ಮಾಡಿ ಬಿಡ್ತಾರೆ, ಅದಕ್ಕೆ ಒಮ್ಮೊಮ್ಮೆ ಬೇಸರ ಆಗೋಗುತ್ತೆ.. ಇನ್ಮುಂದೆ ಸುಮ್ನೆ ನಾವು ಚೆನ್ನಾಗಿ ಸಂಭಾಷಣೆ-ಸ್ಕ್ರಿಪ್ಟ್ ಬರೆದು ನಿರ್ದೇಶಕರಿಗೆ ಕೊಟ್ಟು ಅದು ಹಾಳಾಗಿ ಅವರನ್ನು ಬೈದುಕೊಳ್ಳೋದಕ್ಕಿಂತ ಸುಮ್ನೆ ನಮ್ಮ ನಮ್ಮ ಸ್ಕ್ರಿಪ್ಟ್ ನಾವೇ ಡೈರೆಕ್ಟ್ ಮಾಡೋದು ಒಳ್ಳೇದು ಎಂದಿದ್ದರು. ಇದು ನಿಜವೂ ಹೌದು. ಸಂಭಾಷಣೆಕಾರ ಮತ್ತು  ನಿರ್ದೇಶಕ ಇಬ್ಬರ ಸಮಾಗಮ ಅಷ್ಟು ಸುಲಭವಲ್ಲ. ನಿರ್ದೇಶಕನ ಆಶಯವಷ್ಟೂ ಸಂಭಾಷಣೆಕಾರನ ತಲೆಗೆ ಅಚ್ಚೋತ್ತಬೇಕು.
ಮೊನ್ನೆ ಮೊನ್ನೆ ರನ್ ಅಂಟನಿ ಚಿತ್ರದ್ದು ಅದೇ ಕತೆ. ಸಂಭಾಷಣೆಕಾರ ಹರಿ ಪಾರಖ್ ನಾನು ಬರೆದ ಸಂಭಾಷಣೆಗಳಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದರು. ನಾನು ಸಂಭಾಷಣೆಕಾರನಾಗಿ ಚಿತ್ರರಂಗ ಪ್ರವೇಶಿಸಿದ ಹೊಸತರಲ್ಲಿ ಸಂಭಾಷಣೆ ಬರೆದು ಆನಂತರ ಸಿನೆಮಾವನ್ನು ಮೊದಲ ದಿನವೇ ನೋಡಿ, ನಾವು ಬರೆದ ಸಂಭಾಷಣೆ ಎಲ್ಲಿ ಎಂಬುದನ್ನು ಹುಡುಕುವುದೇ ಆಗಿತ್ತು. ಆದರೆ ನಾವೇ ಅಂದುಕೊಂಡಿದ್ದ ಮುಖ್ಯ ಎನಿಸಿದ್ದ ಸಂಭಾಷಣೆಗಳು ಅಲ್ಲಿರದೆ ಇದ್ದಾಗ ಬೇಸರವೂ ಆಗುತ್ತಿತ್ತು. ಕೇಳಿದರೆ ಅದಿಲ್ಲ ಇದಿಲ್ಲ, ಹಾಗಲ್ಲ ಹೀಗಲ್ಲ ಎಂಬೆಲ್ಲಾ ಉತ್ತರಗಳು ಬಂದುಬಿಡುತ್ತಿದ್ದವು. ತೀರಾ ಮಾತಾಡಿದರೆ ಬರವಣಿಗೆ ನಂಬಿಕೊಂಡ ನಮ್ಮಂತವರಿಗೆ ಮುಂದಿನ ಸಿನೆಮಾಗಳಲ್ಲಿ ಅವಕಾಶಗಳು ಸಿಗುವುದಿರಲಿ, ಬೇರೆ ಸಿನೆಮಾಗಳ ಅವಕಾಶಗಳು ತಪ್ಪಿಹೋಗುತ್ತಿದ್ದವು. ಹಾಗಾಗಿ ಹಣವಷ್ಟನ್ನೇ ತಲೆಯಲ್ಲಿಟ್ಟುಕೊಂಡು ಸಂಭಾಷಣೆ ಬರೆದು ಒಪ್ಪಿಸಿಬಂದು ಕೈ ತೊಳೆದುಕೊಳ್ಳುತಿದ್ದೆವು.
ನಾನು ಒಂದು ಚಿತ್ರಕ್ಕೆ ಸಂಭಾಷಣೆ ಬರೆಯಲು ಒಪ್ಪಿಕೊಂಡಿದ್ದೆ. ಸುಮಾರು 73 ದೃಶ್ಯಗಳಿದ್ದ ಸಿನಿಮಾದಲ್ಲಿ 64 ದೃಶ್ಯಗಳನ್ನು ಬರೆದು ಒಪ್ಪಿಸಿಬಿಟ್ಟಿದ್ದೆ. ಇನ್ನುಳಿದ 9 ದೃಶ್ಯಗಳು ಹಾಸ್ಯಮಯ ದೃಶ್ಯವಾಗಿದ್ದರಿಂದ ಅದಕ್ಕೆ ಒಂದಷ್ಟು ಸಮಯ ಕೋರಿದ್ದೆ. ಇದಾದ ಸ್ವಲ್ಪ ದಿನದಲ್ಲೇ ಕರೆ ಮಾಡಿದ ನಿರ್ದೇಶಕರು ಬೇಗನೆ ಭೇಟಿಯಾಗುವಂತೆ ಹೇಳಿದಾಗ ಹೋಗಿ ಭೇಟಿಯಾಗಿದ್ದೆ. ಅಲ್ಲಿ ಕನ್ನಡದ ಈವತ್ತಿನ ಪ್ರಮುಖ ಹಾಸ್ಯನಟರಲ್ಲಿ ಒಬ್ಬರಾದವರು ಕುಳಿತಿದ್ದು ಇವರು ಹಾಸ್ಯದೃಶ್ಯಗಳನ್ನು ಬರೆಯುತ್ತಾರೆ, ನಿಮ್ಮ ಅಭ್ಯಂತರ ಇಲ್ಲವೇ ಎಂದರು ನಿರ್ದೇಶಕರು. ನಾನು ಆಗಲಿ, ಒಳ್ಳೆಯದೇ ಎಂದೆ. ಇದಾದ ನಂತರ ಪತ್ರಿಕಾಗೋಷ್ಠಿ ಯಲ್ಲಿ ಸಂಭಾಷಣೆಕಾರ ಎಂದು ಅವರ ಹೆಸರನ್ನೇ ಪ್ರಮುಖವಾಗಿ ಘೋಷಿಸಿದ್ದರು. ಆನಂತರ ವೇದಿಕೆಯ ಕೆಳಗೆ ಬಂದ ಹಾಸ್ಯನಟರು ಬೇಸರಿಸಿಕೊಳ್ಳಬೇಡಿ, ನಾನು ಎಷ್ಟು ಹೇಳಿದರೂ ನಿರ್ದೇಶಕರು ಕೇಳಲಿಲ್ಲ, ಕೇವಲ ಒಂಭತ್ತು ದೃಶ್ಯ ಬರೆದು ಇಡೀ ಸಿನಿಮಾದ ಸಂಭಾಷಣೆಯ ಕ್ರೆಡಿಟ್ ತೆಗೆದುಕೊಳ್ಳುವುದು ನನಗೂ ಸರಿಹೋಗಲಿಲ್ಲ ಎಂದು ನುಡಿದಿದ್ದರು. ಅಷ್ಟರಲ್ಲಾಗಲೇ ನನಗೆ ಅದೆಲ್ಲಾ ರೂಢಿಯಾಗಿದ್ದರಿಂದ ನಕ್ಕು ಸುಮ್ಮನಾಗಿದ್ದೆ.
ಹಾಗಾದರೆ ಬರಹಗಾರರಿಗೆ ಬೆಲೆ ಇಲ್ಲವೇ..? ಅವರಿಗೆ ಸಿಗಬೇಕಾದ ಮರ್ಯಾದೆ ಸಿಗುತಿಲ್ಲವೇ..? ಅವರ ಬರವಣಿಗೆಗೆ ಕಿಮ್ಮತ್ತಿಲ್ಲವೇ..? ಖಂಡಿತ ಇದೆ. ಆದರೆ ಅದು ಒಬ್ಬ ನಿರ್ದೇಶಕನಿಗೆ ಗೊತ್ತಿರಬೇಕಾಗುತ್ತದೆ. ಒಂದು ಸಿನಿಮಾಕ್ಕೆ ಯಾವ ಯಾವ ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು. ಏಕೆಂದರೆ ಬರಹ ಮತ್ತು ಸಂಗೀತ, ಸಾಹಿತ್ಯ ಇವು ಭಾವಕ್ಕೆ ಸಂಬಂಧಿಸಿದವು. ಶೈಲಿಗೆ ಸಂಬಂಧಿಸಿದವು. ಒಂದು ಸಿನೆಮಾವನ್ನು ನಿರ್ದೇಶಿಸಹೊರಡುವ ನಿರ್ದೇಶಕ ಮೊದಲಿಗೆ ತಾನು ಯಾವ ಕ್ಯಾಟೆಗರಿ ಸಿನಿಮಾ ಮಾಡುತ್ತಿದ್ದೇನೆ ಎಂಬುದನ್ನು ಅರಿತಿರಬೇಕು ಮತ್ತು ಅದರ ಬಗ್ಗೆ ಒಂದು ವಿಶದವಾದ ಅದ್ಯಯನ ಮಾಡಿರಬೇಕಾಗುತ್ತದೆ. ಏಕೆಂದರೆ ಪ್ರೇಮಕತೆ, ಥ್ರಿಲ್ಲರ್, ಹಾರರ್.. ಹೀಗೆ ನಾವೇನೆ ವಿಭಾಗಗಳನ್ನು ಮಾಡಿಕೊಂಡರೂ ಅದೆಲ್ಲದಕ್ಕೂ ಅದರದೇ ಆದ ನಿರೂಪಣೆಯ ಶೈಲಿ ವೇಗ, ಗತಿ ಇದ್ದೆ ಇರುತ್ತದೆ. ಇದರ ಜೊತೆಗೆ ನಿರ್ದೇಶಕನ ಶೈಲಿಯೂ ಸೇರಿಕೊಳ್ಳುತ್ತದೆ. ಅದು ಪಕ್ಕವಾದನಂತರ ನಾವು ಕಲಾವಿದರನ್ನು ಪಾತ್ರಕ್ಕೆ ತಕ್ಕಂತೆ ಹೇಗೆ ಆಯ್ಕೆ ಮಾಡುತ್ತೇವೆಯೋ ಹಾಗೆಯೇ ತಂತ್ರಜ್ಞರನ್ನೂ ಆಯ್ಕೆ ಮಾಡಬೇಕಾಗುತ್ತದೆ. ಇಲ್ಲಿ ನಿರ್ದೇಶಕ ಆಯಾ ತಂತ್ರಜ್ಞರ ಪರಣತಿಯನ್ನು ಅರಿತು ಅವರನ್ನು ಅಯ್ಕೆಮಾಡಿಕೊಳ್ಳಬೇಕಾಗುತ್ತದೆ ಅಥವಾ ಆಯ್ಕೆ ಮಾಡಿದ ತಂತ್ರಜ್ಞರಿಂದ ಇಚ್ಚಿತ ಕೆಲಸವನ್ನು ತೆಗೆದುಕೊಳ್ಳಬೇಕಾಗುತ್ತದೆ. ಎರಡೂ ಸಲ್ಲತಕ್ಕದ್ದೆ ಆದರೂ ಎರಡನೆಯದು ರಿಸ್ಕಿನ ಕೆಲಸ. ಇರಲಿ. ಅದರಲ್ಲೂ ಒಬ್ಬ ಬರಹಗಾರ, ಸಂಭಾಷಣೆಕಾರ ಎಂದಾಗ ಆತನ ವಿಶೇಷತೆ ಏನು ಎಂಬುದನ್ನು ಮನಗಾಣಬೇಕು. ಅವನ ಕಸುಬುದಾರಿಕೆಗೆ ಅವನ ಪ್ರಾವೀಣ್ಯತೆಗೆ ನಮ್ಮ ಸಿನಿಮಾದಲ್ಲಿ ಅವಕಾಶವಿದೆಯೇ, ಆತನ ಪ್ರತಿಭೆಗೆ ಸಾಟಿಯಾಗುವ ಕತೆ ನಮ್ಮ ಚಿತ್ರದ್ದೇ ಎಂಬುದನ್ನು ವಿಶ್ಲೇಷಣೆ ಮಾಡಬೇಕಾಗುತ್ತದೆ. ಆಗಾದಾಗ ಮಾತ್ರ ಅವರ ಪ್ರತಿಭೆಗೂ ನಮ್ಮ ಸಿನೆಮಾಕ್ಕೂ ಸಮಾಗಮ-ಸರಿಗಮ ಎನ್ನಬಹುದು. ಚುರುಕು ಮಾತುಗಳಿಂದ-ಬರಹಗಳಿಂದ, ತಮ್ಮ ವಿಶೇಷ ಪದಜೋಡನೆಯಿಂದ ಹೆಸರು ಮಾಡಿದವರ ಸಂಭಾಷಣೆಗೆ ಥ್ರಿಲ್ಲರ್ ಚಿತ್ರಗಳಲ್ಲಿ ಜಾಗ ಕಡಿಮೆಯೇ. ಹಾಗೆಯೇ ತುಂಬಾ ಗಂಭೀರವಾಗಿ, ವಸ್ತು ನಿಷ್ಟವಾಗಿ ಮತ್ತು ಅಂಕಿ ಅಂಶಗಳನ್ನ ಇಟ್ಟುಕೊಂಡು ಬರೆಯುವವರಿಗೆ ತಿಳಿ ಹಾಸ್ಯದ ಚಿತ್ರವನ್ನೂ ಕೊಟ್ಟುಬಿಟ್ಟರೆ ಸಿನಿಮಾದ ಕತೆ ಏನಾಗಬೇಡ ನೀವೇ ಹೇಳಿ. ಇತ್ತ ಅವರ ಪ್ರತಿಭೆಗೂ - ಸಿನಿಮಾದ ಆಶಯಕ್ಕೂ ಅಜಗಜಾಂತರವಾಗಿಬಿಡುತ್ತದೆ. ಆನಂತರ ನಿರ್ದೇಶಕರಿಗೆ ಬರೆದದ್ದು ಸಮಂಜಸ ಎನಿಸದೆ ತಮಗನ್ನಿಸಿದ್ದನ್ನು ಬರೆದುಕೊಳ್ಳುತ್ತಾರೆ. ಅಲ್ಲಿಗೆ ಮತ್ತೊಂದು ಆರೋಪ ಪಟ್ಟಿ ಶುರುವಾಗುತ್ತದೆ.
ಇದು ಕೇವಲ ಬರಹಗಾರನಿಗಷ್ಟೇ ಸಂಬಂಧಿಸಿದ್ದಲ್ಲ. ಸಂಗೀತ, ಸಾಹಿತ್ಯ, ಸಂಕಲನ, ಛಾಯಾಗ್ರಹಣ ಪ್ರತಿಯೊಂದಕ್ಕೂ ಸಂಬಂಧಿಸಿದ್ದು. ಹಾಗಾಗಿ ಮತ್ತು ಸಾಮಾನ್ಯವಾಗಿ ಎಲ್ಲರ ಆಯ್ಕೆ ನಿರ್ದೇಶಕನ ನಿರ್ಧಾರವಾದ್ದರಿಂದ ಆತನಿಗೆ ಅದರ ಸಂಪೂರ್ಣ ಅರಿವಿದ್ದರೆ ಪ್ರತಿಭೆಗೆ ನ್ಯಾಯ ಒದಗಿಸಬಹುದೇನೋ..?