Friday, July 15, 2016

ದೆವ್ವದ ಪ್ರಶಸ್ತಿ ಕೊಡೋಣ ಬನ್ನಿ...

ಕಾಲಕ್ಕೆ ತಕ್ಕಂತೆ  ದೆವ್ವಗಳು  ಬದಲಾಗಿವೆ. ಅವುಗಳಲ್ಲೂ ಕೆಟ್ಟ ದೆವ್ವಗಳು, ಒಳ್ಳೆಯ  ದೆವ್ವಗಳು  ಹುಟ್ಟಿಕೊಂಡಿವೆ, ಹಾ  ಇಲ್ಲಿ ಸತ್ತು. ! ದೇವರು  ಎಂದರೆ  ಕಿಲೋಮೀಟರ್ ದೂರ ಓಡುತ್ತಿದ್ದ  ದೆವ್ವಗಳು  ಈಗ  ದೇವರ ವಿಗ್ರಹದ ಮುಂದೆ ಕುಣಿದು ಕುಪ್ಪಳಿಸಿ  ದೇವರನ್ನೇ  ಹೊಗಳಿ ಪಟಾಯಿಸಿಕೊಳ್ಳುತ್ತಿವೆ. ದೇವರಿಂದ ಶಕ್ತಿಯನ್ನು  ಎರವಲು  ಪಡೆದುಕೊಳ್ಳುತ್ತಿವೆ. ಅದಿರಲಿ. ಸಧ್ಯಕ್ಕೆ  ಕನ್ನಡ  ಚಿತ್ರರಂಗದಲ್ಲಿ  ದೆವ್ವದ ಕಾಲ. ಅಥವಾ ದೆವ್ವಗಳ ಪರ್ವ ಕಾಲ. ತರಾವರಿ ದೆವ್ವಗಳ  ಆಟಾಟೋಪ ಖುಷಿ ಕೊಡುವಂತಹದ್ದೆ ಬಿಡಿ.
ವರ್ಷದ  ಪ್ರಾರಂಭದಲ್ಲಿ  ಬಂದ  ದೆವ್ವದ ಮೂಲ ಉದ್ದೇಶ  ಹಗೆತನವಾದರೂ ನಗಿಸಿದ್ದಂತೂ ನಿಜ. ನಮ್ಮ  ಪ್ರಿಯಾಮಣಿಯಂತಹ ಸುಂದರಿ ದೆವ್ವವಾಗಿಯೂ ಕಾಡಬಹುದು ಎಂಬುದನ್ನು ತೋರಿಸಿಕೊಟ್ಟ ಚಿತ್ರವದು. ಬಂದದ್ದೆ ದೆವ್ವ ಕಾಡಲಿಲ್ಲ. ಬದಲಿಗೆ ನಿರ್ದೇಶಕನನ್ನೇ ಬಳಸಿಕೊಂಡು ಸಿನಿಮಾದ ಒಳಗೊಂದು ಸಿನಿಮಾ ತೆಗೆಯುವ ನಾಟಕವಾಡಿ ವಿಲನ್ ನನ್ನು ಬಗ್ಗು  ಬಡಿದ ದೆವ್ವವದು. ಆಮೇಲೆ  ಕಾಣಿಸಿಕೊಂಡದ್ದು ಗಂಡು ದೆವ್ವ. ಆವರಿಸಿದ್ದು ಮಾತ್ರ ಹೆಣ್ಣನ್ನು. ಪಾಪ ಮದುವೆಯಾಗಿ ಹನಿಮೂನ್ ಮತ್ತು  ಡ್ಯೂಟಿ ಎರಡನ್ನೂ ಒಂದೇ ಕಡೆ ಮಾಡುವ ಮೂಲಕ ಸ್ವಾಮೀ ಕಾರ್ಯ ಸ್ವಕಾರ್ಯ  ಮಾಡಿಕೊಳ್ಳೋಣ ಎಂದು ನಮ್ಮ ಶಿವಣ್ಣ ಪ್ಲಾನ್ ಮಾಡಿದರೆ ಅವರ ಪತ್ನಿಗೆ ಆವರಿಸಿಕೊಳ್ಳುವುದೇ..? ಅದರಲ್ಲೂ ಮೇಲಧಿಕಾರಿಗಿಂತ ಹೆಚ್ಚಾಗಿ ಕೊಂದವನನ್ನು ಹಿಡಿಯದಿದ್ದರೆ ಅಷ್ಟೇ ಎನ್ನುವ ಧಮಕಿ ಬ್ಲಾಕ್ ಮೇಲ್ ಬೇರೆ. ತನ್ನನ್ನು ಕೊಲೆಮಾಡಿದವರು ಯಾರು ಎಂಬುದನ್ನು ತಿಳಿದುಕೊಳ್ಳಲು ಆ ದೆವ್ವ ಕಡಿಮೆ ಅಬ್ಬರಿಸಲಿಲ್ಲ ಬಿಡ್ರೀ...
ಆಮೇಲೆ ಅನಂತ್ ನಾಗ್ ಸತ್ತು ದೆವ್ವವಾಗಿ ಮತ್ತೊಂದು ಆತ್ಮಕ್ಕೆ ಕತೆ ಹೇಳಿದ್ದು ಹೊಸಬರ ಪ್ರಯತ್ನದಲ್ಲಿ. ಇಲ್ಲಿ ದೆವ್ವಕ್ಕೆ maturity ಇತ್ತು, ಹಾಗೆಯೇ ದೆವ್ವದ ಮನೆ ಆಳಾಗಿದ್ದ ಆಫ್ ಕೋರ್ಸ್ ಮತ್ತೊಂದು ದೆವ್ವ ರಾಜು ತಾಳಿಕೋಟೆ ಸಹ ಯಾವುದೇ ಕಾಟ ಕೊಡಲಿಲ್ಲ. ಆಮೇಲೆ ಒಟ್ಟೊಟ್ಟಿಗೆ ಆವರಿಸಿಕೊಂಡದ್ದು ಐದೈದು ದೆವ್ವಗಳು. ನಮಗೆ ಸರಿಯಾದ ಶ್ರಾಧ ಮಾಡಿಲ್ಲ , ನಮಗೆ ಮೋಕ್ಷ ಸಿಕ್ಕಿಲ್ಲ, ಅದಕ್ಕಾಗಿ ಮದುವೆ ಮಾಡಿಕೊ ಎಂದು ರಮೇಶ್ ಅರವಿಂದ್ ಗೆ ಕಾಡಿದ್ದು ದೆವ್ವಗಳು.  ಆಮೇಲೆ ಒಂದು ಮನೆಯೊಳಗೇ ಒಂದು ದೆವ್ವ ಕಾಡಿತ್ತಾದರೂ ಮತ್ತೊಂದು ದೆವ್ವ ತಂತ್ರ ಮಾಡಿ ಸೇಡು ತೀರಿಸಿಕೊಂಡಿತು. ಆದರೆ ಸಾಯುವ ಕಡೆಗಳಿಗೆಯಲ್ಲಿ ಸುಂದರಿ ನೋಡಿ ಪ್ರೀತಿಸಲೇ ಬೇಕೆಂಬಾಸೆಯನ್ನು ಮನಸ್ಸಿನಲ್ಲಿಟ್ಟು ಕೊಂಡು ಅತೃಪ್ತ ಆತ್ಮವಾಗಿ ಕಾಡಿದ ದೆವ್ವ ಮುಟ್ಟದೆ ಲವ್ ಮಾಡೋಣ ಅನ್ನೋದೇ. ಪಾಪ ಸುಂದರಿಗೇನು ಗೊತ್ತು..? ಇವನ್ಯಾರೂ ಈ ಕಡುಕಲಿಗಾಲದಲ್ಲೂ ಹೀಗೆಲ್ಲ ಮಾತನಾಡುತ್ತಿದ್ದಾನಲ್ಲ ಎಂಬ ಅನುಮಾನ ಪಡದೆ ಇವನ್ಯಾರೋ ಸಭ್ಯರಲ್ಲಿ ಸಭ್ಯ ಅಂದುಕೊಂಡು ಪ್ರೀತಿಸಿದರೆ ಆಮೇಲೆ ಗೊತ್ತಾದದ್ದು ನಾನು ಪ್ರೀತಿಸಿದ್ದು ದೆವ್ವವನ್ನು ಎಂಬುದು. ಇದೆಲ್ಲದರ ಜೊತೆಗೆ ಅನ್ಯಾಯವಾಗಿ ಕೊಲೆಗೀಡಾದ ನಾಲ್ಕು ಆತ್ಮಗಳು ದೆವ್ವವಾಗಿ ಪ್ರೇಕ್ಷಕನಿಗೆ ಸಿನಿಮಾ ಕತೆ ಹೇಳಿದ ಉದಾಹರಣೆಯೂ ನಡೆದುಹೋಯಿತಲ್ಲ. ಸತ್ತು ಬಿದ್ದ ಭಗ್ನಪ್ರೇಮಿ, ಸಹ ನಿರ್ದೇಶಕ ಒಬ್ಬ ಚಿಕ್ಕ ಹುಡುಗ.. ಎಲ್ಲರೂ ಸೇರಿಕೊಂಡು ಮನುಷ್ಯರಿಗೆ ಕತೆ ಹೇಳಿ ನಂಬಿಸಿಬಿಟ್ಟದ್ದೂ ಉಂಟು.
ಇದರ ನಡುವೆ ಒಂದೆರೆಡು ದೆವ್ವಗಳು ಮನೆಯಲ್ಲಿಯೇ ಇದ್ದು ಬಂದ ಬಂದವರನ್ನು ಹೆದರಿಸಿದ್ದೂ ಉಂಟು. ಆದರೆ ಇವುಗಳ ನಡುವೆ ಅದೊಂದು ಹೆಣ್ಣು ದೆವ್ವ ರಸ್ತೆ ನಡುವಣ ಕಲ್ಲು ಸರಿಸಿದ್ದದ್ದನ್ನೇ ನೆಪಮಾಡಿಕೊಂಡು ಭಯಂಕರ ಪ್ಲಾನ್ ಮಾಡಿ ಹತ್ತಾರು ಸರಣಿ ಕೊಲೆಗಳನ್ನು ಮಾಡಿ ಸೈ ಅನಿಸಿಕೊಂಡಿತು ನೋಡಿ. ಅದರದೂ ಒಂದು ಅಹವಾಲು.. ನನ್ನನ್ನು ಕೊಂದವರು ಯಾರು ಎಂಬುದು ಗೊತ್ತಾಗಬೇಕು ಎಂಬುದು.ಅಲ್ಲಮ್ಮಾ.. ಮನುಷ್ಯ ಮಾತ್ರದವರು ಗೊತ್ತಿಲ್ಲದೇ ಕಲ್ಲು ಸರಿಸಿ ಸಾಯಿಸಿದರೂ ಎಂಬುದನ್ನೇ ನೆಪವಾಗಿಟ್ಟುಕೊಂಡು ಕಲ್ಲು ಸರಿಸಿದವರನ್ನೆಲ್ಲಾ ಸಾಯಿಸುತ್ತೀಯಲ್ಲ ಇದೇನು ನ್ಯಾಯ.. ಹಾಗಾದರೆ ನಾವ್ಯಾಕೆ ಸತ್ತೆವು, ನಾವು ಮಾಡದ ತಪ್ಪಿಗಾಗಿ ಸುಮ್ಮನೆ ಸತ್ತೆ ಹೋದೆವಲ್ಲಾ ಎಂಬೊಂದು ಕೊರಗಿಟ್ಟುಕೊಂಡೆ ಸತ್ತ ಆ ಹತ್ತು ಜನರೂ ದೆವ್ವಗಳಾದರೆ ನಿನ್ನ ಗತಿಯೇನು..?  ಇಷ್ಟಕ್ಕೂ ತೀರಾ ಬುದ್ದಿವಂತೆಯಾದ ನೀನು ಬರೀ ಕಲ್ಲು ಜರುಗಿಸಿದವರ ಮೇಲಷ್ಟೇ ಸೇಡು ತೀರಿಸಿಕೊಳ್ಳುವುದು ಅದ್ಯಾವ ನ್ಯಾಯಾ..? ಆ ರಸ್ತೆ/ಹಾರುಸೇತುವೆಗಾಗಿ ಕೋಟ್ಯಾಂತರ ಹಣ ಸರ್ಕಾರ ಮಂಜೂರು ಮಾಡಿದ್ದರೂ ಖರ್ಚು ಮಾಡದೆ ತಮ್ಮ ಬೊಕ್ಕಸಕ್ಕೆ ಹಾಕಿಕೊಂಡು ರಾಜಕಾರಣಿಗಳು, ಆ ಎಂಜಲನ್ನು ಬಿಡದೆ ನೆಕ್ಕಿದ ಅಧಿಕಾರಿಗಳು ಮುಂತಾದವರನ್ನು ವಿಚಾರಿಸಿಕೊಂಡಿದ್ದರೆ ಮೂಲಕ್ಕೆ ಕೈ ಹಾಕಬಹುದಿತ್ತಲ್ಲ ಮತ್ತು  ಒಂದು ರಸ್ತೆಯಷ್ಟೇ ಅಲ್ಲ, ಹಲವಾರು ರಸ್ತೆಯ ಸ್ಥಿತಿಗತಿ ಚೆನ್ನಾಗಿರುತ್ತಿತ್ತಲ್ಲ ಎಂದು ಕೂರಿಸಿಕೊಂಡು ಬುದ್ದಿವಾದ ಹೇಳಬಹುದಾಗಿತ್ತು. ಏಕೆಂದರೆ ಅದೇನುತಲೆ ಬಾಚದೇ  ಕೂದಲು ಕೆದರಿಕೊಂಡು , ಎರ್ರಾಬಿರ್ರಿ ಕಾಡಿಗೆಯನ್ನು ಕಣ್ಣಿಗೆ ಬಳಿದುಕೊಂಡು ಹೆದರಿಸುವ ಅಶಿಸ್ತು ದೆವ್ವವಲ್ಲವಲ್ಲ..ಸಾವಧಾನವಾಗಿ ಕುಳಿತುಮಾತನಾಡುತ್ತಿತ್ತು.. ಆದರೆ  ಆ ಧೈರ್ಯವಿರಲಿಲ್ಲ ಯಾರಿಗೂ ಎನಿಸುತ್ತದೆ.
ಆನಂತರ ಬಂದದ್ದು ನಮ್ಮ ಸವಾಲ್ ಗೆ ಸವಾಲ್ ಎನ್ನುವ ಸ್ಟಾರ್ ಗೆ ಆಟವಾಡಿಸುವ ದೆವ್ವ. ಈ ದೆವ್ವದ್ದು ಕಾಟವಿಲ್ಲ ಬಿಡಿ. ಮೊಮ್ಮಗನನ್ನು ಒಳ್ಳೆ ದಾರಿಗೆ ತರಬೇಕು ಎನ್ನುವ ಹಪಾಹಪಿಯ ದೆವವ್ವಿದು. ಒಟ್ಟಿನಲ್ಲಿ ಈ ವರ್ಷದ ಅತ್ಯಂತ ಒಳ್ಳೆಯದೆವ್ವ ಪ್ರಶಸ್ತಿ ಇದಕ್ಕೆ ಸಿಗಬೇಕೇನೋ..? ಆನಂತರದ್ದು ಹಳೆಯ ಆಪ್ತಮಿತ್ರ ನೆನಪಿಗೆ ತರುವ ದೆವ್ವ. ಚಿಕ್ಕ ಹುಡುಗಿಯ ದೆವ್ವವಾದರೂ  ಮುಲಾಜಿಲ್ಲದೆ ದೊಡ್ಡವರನ್ನು ಕಾಡಿದ ದೆವ್ವ. ಈಗ ಸಧ್ಯಕ್ಕೆ ಉಪೇಂದ್ರ ಅವರನ್ನು ಆವರಿಸಿಕೊಂಡ ದೆವ್ವ. ಸುಮ್ಮನಿದ್ದರೂ ಅಬ್ಬರಿಸುವ ಉಪ್ಪಿ ಮೇಲೆ ದೆವ್ವ ಆವರಿಸಿದರೆ ಗತಿ ಏನು ಶಿವನೆ ಎನ್ನುವ ಹಾಗಿಲ್ಲ ಬಿಡಿ. ಈ ದೆವ್ವ  ದೇವರ ಫ್ರೆಂಡ್ಶಿಪ್ ಮಾಡಿಕೊಂಡ ದೆವ್ವ..
ಒಟ್ಟಿನಲ್ಲಿ ಏಳು ತಿಂಗಳಿನಲ್ಲಿ ಇಷ್ಟೆಲ್ಲಾ ದೆವ್ವಗಳನ್ನು ನೋಡಿದ ನಾವು ಅತ್ಯುತ್ತಮ ಒಳ್ಳೆಯ ದೆವ್ವ, ಅತ್ಯುತ್ತಮ ಕೆಟ್ಟ ದೆವ್ವ, ಪೋಷಕ ದೆವ್ವ, ನಗಿಸಿದ ದೆವ್ವ, ಅಳಿಸಿದ ದೆವ್ವ, ಬಾಲ ದೆವ್ವ .. ಹೀಗೆ ಪ್ರಶಸ್ತಿ ಕೊಟ್ಟೆ ಬಿಡುವುದಾದರೆ ನಿಮ್ಮ  ಆಯ್ಕೆ  ಯಾವುದು ಎಂಬುದನ್ನು  ಹೇಳುವ ಮುನ್ನ ಹುಷಾರು..? ದೆವ್ವಕ್ಕೆ ನಿಮ್ಮ ಆಯ್ಕೆ  ತೃಪ್ತಿ ತರದೇ ಇದ್ದರೆ ಕಾಡುವುದಿಲ್ಲ ಎನ್ನುವುದಕ್ಕೆ ಖಾತರಿಯಿಲ್ಲ..

No comments:

Post a Comment