Thursday, July 14, 2016

ಆವಾಹನೆಗೊಳಗಾದ ಸಿದ್ದಿಕಿಗಾಗಿ ಚಿತ್ರ ನೋಡಬೇಕು..

ಸರ್..ನಾನು ದೇವರೊಂದಿಗೆ  ಮಾತನಾಡುತ್ತೇನೆ, ಅವನು ಯಾರನ್ನೋ  ನನ್ನ ಬಳಿಗೆ ಕಳುಹಿಸೋ ಎನ್ನುತ್ತಾನೋ ಅವರನ್ನು ಕಳಿಸುತ್ತೇನೆ, ನಾವೆಲ್ಲಾ  ಯಮನ ಏಜೆಂಟ್ ಇದ್ದ ಹಾಗೆ. ನಿಮಗಂತೂ ಲೈಸೆನ್ಸ್ ಇದೆ. ನೀವು ಸಾಯಿಸಿದರೆ ನಿಮಗೆ ಸವಲತ್ತು ಸಿಗುತ್ತದೆ. ..ಎನ್ನುತ್ತಾನೆ ಎದುರಿಗೆ ಕುಳಿತವನು. ಅಲ್ಲಿಗೆ ಪೋಲಿಸ್ ಅಧಿಕಾರಿಗೆ ಆತ ಕೊಲೆಗಾರ ಎನಿಸುವುದಕ್ಕಿಂತ ತಿಕ್ಕಲು ಮನುಷ್ಯ ಎನಿಸುತ್ತದೆ. ಹುಚ್ಚುಹುಚ್ಚಾಗಿ ಮಾತಾಡಿ, ಸುಮ್ಮನೆ ಜೈಲಿನಲ್ಲಿ ಕುಳಿತು ತಿನ್ನೋಣ ಎಂದುಕೊಂಡಿರುವ ಹುಚ್ಚ ಎನಿಸಿ ಅವನನ್ನು ಒಂದು ಕೋಣೆಯೊಳಗೆ ಬಂಧಿಸಿ ಮರೆತುಬಿಡುತ್ತಾರೆ. ಅಲ್ಲಿಂದ ಚಿತ್ರ ತೆರೆದುಕೊಳ್ಳುತ್ತದೆ. ರಮಣ ರಾಘವ ಅಲ್ಲಿನ ಜನರನ್ನು ಪೋಲಿಸರನ್ನು ಕಾಡುವಷ್ಟೇ ನವಾಜುದ್ದೀನ್ ಸಿದ್ದಿಕಿ ನಮ್ಮನ್ನು ಕಾಡುತ್ತಾರೆ. ನಮ್ಮನ್ನು ಹೆದರಿಸುತ್ತಾರೆ. ಅದೆಲ್ಲಿ ಮಾತನಾಡುತ್ತಾ ಕಬ್ಬಿಣದ ಕೋಲಿನಿಂದ ಹೊಡೆಯುತ್ತಾನೋ ಎನಿಸುವಷ್ಟು ಭಯಾನಕ ಭಯವನ್ನು ತುಂಬುತ್ತಾರೆ.
ಈ ಹಿಂದೆ ವರ್ಮ ರಮಣ ರಾಘವ ಎನ್ನುವ ಕೊಲೆಪಾತಕನನ್ನು ಕುರಿತು ಸಿನಿಮಾ ಮಾಡಿದ್ದರು.ಹಾಗೆ ನೋಡಿದರೆ ಸರಣಿ ಹಂತಕರು, ಅತ್ಯಾಚಾರಿಗಳು ರೌಡಿಗಳು ಮುಂತಾದ ಅಪರಾಧಿಗಳ ಬಗೆಗೆ ಸಿನಿಮಾ ತಯಾರಾಗಿರುವಷ್ಟು ಮಹಾತ್ಮರ ಬಗೆಗೆ ಚಿತ್ರ ಮಾಡಿರುವುದು ಕಡಿಮೆಯೇ. ಇದು ಬಹುಶಃ ಎಲ್ಲಾ ಭಾಷೆಯಲ್ಲಿಯೂ ಸತ್ಯ. ರಮಣ ರಾಘವ 2.0 ಇಷ್ಟವಾಗುವುದು ಅದರ ಕತೆಗಿಂತಲೂ ನಾಯಕ ನವಾಜುದ್ದೀನ್ ಅವರ ಅಭಿನಯದಿಂದ. ತನ್ಮಯತೆ ಅದೂ ಇದೂ ಎಲ್ಲವನ್ನು ಬಿಟ್ಟಾಕಿ. ಆ ಪಾತ್ರವನ್ನು ತನ್ನಂತೆ ಮತ್ತು ತನಗೆ ಒಪ್ಪಿಗೆಯಾಗುವಂತೆ ಆವಾಹಿಸಿಕೊಂಡು ಅಭಿನಯಿಸುವ ಸಿದ್ದಿಕಿ ಆ ಪಾತ್ರದ ಬಗೆಗೆ ಹೇವರಿಕೆ ಕೋಪ ಬರುವಂತೆ ಮಾಡುತ್ತಾರೆ. ಹಾಗೆಯೇ ತಮ್ಮ ಅಭಿನಯದ ಬಗೆಗೆ ಮೆಚ್ಚುವಂತೆ ಅಭಿನಯಿಸುತ್ತಾರೆ.
ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರ ಎಲ್ಲಾ ಪ್ರೇಕ್ಷಕರಿಗೂ ಹೇಳಿ ಮಾಡಿಸಿದ್ದಲ್ಲ. ಚಿತ್ರವನ್ನು ತುಂಬಾ ಒರಟಾಗಿ ನಿರೂಪಿಸಿರುವ ಕಶ್ಯಪ್ ಚಿತ್ರದಲ್ಲಿನ ಕತೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿಯೇ ನಿರೂಪಿಸಿದ್ದಾರೆ. ಇಲ್ಲಿ ಹೀರೋ ಎನಿಸಿಕೊಳ್ಳುವ ಪಾತ್ರವಾಗಲಿ, ವಿಲನ್ ಎನಿಸಿಕೊಳ್ಳುವ ಪಾತ್ರವಾಗಲಿ ಇಲ್ಲ. ಸರಣಿ ಹಂತಕನ ಮನಸ್ಥಿತಿ ಅವನ ಪೈಶಾಚಿಕತೆ ಮತ್ತು  ಪೋಲೀಸರ ಹುಡುಕಾಟ ಇವಷ್ಟನ್ನೂ ಸೇರಿಸಿ ಕತೆ ಹೆಣೆದಿದ್ದಾರೆ ನಿರ್ದೇಶಕರು. ಒಂದು ಕ್ರೈಂ ಥ್ರಿಲ್ಲರ್, ಒಬ್ಬ  ಸೈಕೋಪಾತ್ ನ ಕತೆ ಇದಾಗಿದ್ದರೂ ನವಾಜುದ್ದೀನ್ ಸಿದ್ದಿಕಿ ಅವರ ಅಭಿನಯಕ್ಕಾಗಿ ನೋಡಲೇಬೇಕಾದ ಚಿತ್ರವಿದು.

No comments:

Post a Comment