Tuesday, June 25, 2013

ಬ್ಯಾಕ್ to ಬ್ಯಾಕ್ ಎರಡು ಚಿತ್ರಗಳು...


ಈ ಎರಡೂ ಚಿತ್ರಗಳಲ್ಲಿ ವಿಶೇಷವಿದೆ. ರಾ೦ಝನಾ ಧನುಶ್ ಅಭಿನಯದ ಮೊದಲ ಹಿಂದಿ ಚಿತ್ರ. ಸರಿ ಸುಮಾರು ಮೂವತ್ತೈದು ಕೋಟಿ ವೆಚ್ಚದಲ್ಲಿ ತಯಾರಾದ ಚಿತ್ರ. ಹಾಗೆ ಆಕ್ಷನ್ ಸುದೀಪ್ ಅಭಿನಯಿಸಿದ್ದಾರೆ ಎಂದು ಪ್ರಚಾರ ಪಡೆದ ಎರಡನೇ ತೆಲುಗು ಚಿತ್ರ. ಆದರೆ ಎರಡೂ ಚಿತ್ರಗಳೂ ತೀರಾ ನಿರಾಶಾದಾಯಕವಲ್ಲದಾದರೂ ಅದ್ಭುತ ಎನ್ನುವ ಹಾಗಿಲ್ಲ.
ರಾ೦ಝನಾ:
ಧನುಶ್ ತಮ್ಮ ಕೊಲವೇರಿ ಹಾಡಿನಿಂದ ದೇಶಾದ್ಯಂತ ಹೆಸರು ಮಾಡಿದವರು. ತಮಿಳಿನಲ್ಲಿ ತನ್ನದೇ ಆದ ಛಾಪು ಹೊತ್ತಿರುವ ಕಲಾವಿದ. ಅವರ ಕಾದಲ್ ಕೊಂದೆನ್  ಚಿತ್ರದಲ್ಲಿನ ತಣ್ಣಗಿನ ಸೈಕೊಪಾಥ್ ಪಾತ್ರವನ್ನು ಮರೆಯುವುದಾದರೂ ಹೇಗೆ.? ಅವರು ಹಿಂದಿಯಲ್ಲಿ ಅಭಿನಯಿಸುತ್ತಿದ್ದಾರೆ ಎಂದಾಗ ಬಾಲಿವುಡ್ ಚಿತ್ರರಸಿಕರಿಂದ ಹಿಡಿದು ಇಡೀ ಭಾರತೀಯ ಚಿತ್ರರಂಗವೇ ಒಮ್ಮೆ ಕಣ್ಣು ಹಾಯಿಸಿತ್ತು.
ಚಿತ್ರಕ್ಕೆ ಸಂಗೀತ ಮಾಂತ್ರಿಕ ಎ.ಆರ್ .ರಹಮಾನ್ ಸಂಗೀತ ನೀಡಿದ್ದಾರೆ. ಎರಡು ಹಾಡುಗಳಂತೂ ಸೂಪರ್. ಹಾಗೆ ಛಾಯಾಗ್ರಹಣವಂತೂ ಬನರಾಸ್ ಅನ್ನು ಇಷ್ಟು ಚೆನ್ನಾಗುದೆಯಾ ಎನ್ನುವಂತೆ ನಮ್ಮ ಮುಂದಿಟ್ಟಿದೆ. ಚಿತ್ರದೊಳಗಿನ ಕಾಲಾವಧಿ ವಿಶಾಲವಾದದ್ದು. ಬಾಲ್ಯದಿಂದ ಆತನ ತಾರುಣ್ಯದವರೆಗೆ ಹರಿದು ಬರುವ ಕಥಾ ಹಂದರ ಬದುಕಿನ ಹಲವಾರು ಘಟ್ಟಗಳು ಹಾದುಹೋಗುತ್ತವೆ. ಹಾಗಾಗಿ ಕಾಲಾಂತರದ ರೂಪಾಂತರವನ್ನು ಕ್ಯಾಮೆರಾ ಕಣ್ಣಿನ ಮೂಲಕ ವಿಶದ ಪಡಿಸುವುದು ಕಷ್ಟದ ಕೆಲಸವೇ. ಚಿತ್ರದ ಗತಿ, ಅದರಲ್ಲಿನ ವಸ್ತು, ಅದರಲ್ಲಿನ ಕಾಲ ಬದಲಾದದ್ದು ನೋಡುಗನ ಅರಿವಿಗೆ ಬಾರದಂತೆ ಅರಿವಾಗಬೇಕಾದರೆ ಅದಕ್ಕೆ ಅನುಗುಣವಾದ ಕ್ಯಾಮೆರಾ ಚಲನೆ, ನೆರಳು ಬೆಳಕಿನ ಹೊಯ್ದಾಟವಿರಬೇಕು. ಆ ವಿಷಯದಲ್ಲಿ ಕ್ಯಾಮೆರಾ ಕೆಲಸಕ್ಕೆ ಶಹಬ್ಬಾಸ್ ಹೇಳಲೆಬೇಕಾಗುತ್ತದೆ.  ಛಾಯಾಗ್ರಾಹಕ ನಟರಾಜ್ ಸುಬ್ರಮಣಿಯನ್, ವಿಶಾಲ್ ಸಿಂಹ ಅಭಿನಂದನಾರ್ಹರು. ಹಾಗೆ ತನು ವೆಡ್ಸ್ ಮನು ಚಿತ್ರ ನಿರ್ದೆಶಿಸಿದ್ದ ಆನಂದ ಎಲ್ .ರೈ  ಚಿತ್ರವನ್ನು ಪ್ರೇಮಿಯೊಬ್ಬನ ಉತ್ಕಟತೆಯನ್ನು ತೋರಿಸುವ ವಿಷಯದಲ್ಲಿ ಗೆದಿದ್ದಾರೆ. ಅಭಿನಯದಲ್ಲಿ ಚಿಕ್ಕಂದಿನಿಂದ ದೊಡ್ದವನಾಗುವವರೆಗೆ ಅಲ್ಲಿಂದ ರಾಜಕೀಯಕ್ಕೆ ಪ್ರವೇಶ ಪಡೆಯುವವರೆಗೆ ಧನುಶ್ ತಮ್ಮ ಅಭಿನಯ ಸಾಮರ್ಥ್ಯವನ್ನು ಮೆರೆದಿದ್ದಾರೆ. ಇನ್ನುಳಿದಂತೆ ಅಭಯ ಡಿಯೋಲ್, ಮೊಹಮ್ಮದ್ ಬೆಸ್ಹಾನ್ ಆಯೂಬ್, ಸ್ವರ ಭಾಸ್ಕರ್,ಸೋನಂ ಕಪೂರ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.
ಇಷ್ಟೆಲ್ಲಾ ಪ್ಲಸ್ ಗಳಿರುವ ಚಿತ್ರದ ಮೊದಲ ಹದಿನೈದು ನಿಮಿಶವಂತೂ ಅದ್ಭುತವೆನಿಸುತ್ತದೆ. ಬಾಲ್ಯದಲ್ಲೇ ಮುಸ್ಲಿಂ ಹುಡುಗಿ ಜೊಯಾಗೆ ಮನಸೋಲುವ ತಮಿಳು ಪಂಡಿತನ ಮಗ ಕುಂದನ್ ಪಂಡಿತ್ ಅವಳ ಹಿಂದೆ ಬೀಳುತ್ತಾನೆ. ಪ್ರೀತಿಸುವಂತೆ ಪರಿಪರಿಯಾಗಿ ಬೇಡುತ್ತಾನೆ. ಕಾಡುತ್ತಾನೆ. ಅದನ್ನರಿವ ಆಕೆಯ ತಂದೆ ದೂರದ ಊರಿಗೆ ಅವಳನ್ನು ಕಳಿಸಿ ಆಕೆ ವಿದ್ಯಾಭ್ಯಾಸ ಮುಗಿಸಿ ವಾಪಸ್ಸು ಬಂದಾಗಲೂ ಕುಂದನ್ ಗೆ  ಆಕೆಯ ಮೇಲಿನ ಪ್ರೀತಿ ಮರೆಯಾಗಿರುವುದಿಲ್ಲ. ಆದರೆ ಅದನ್ನೆಲ್ಲಾ ಮರೆತಿದ್ದ ಜೊಯಾಲಲ್ಲಿ ಮತ್ತೆ ಮತ್ತೆ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾನೆ. ಕಾಡುತ್ತಾನೆ. ಆದರೆ ಆಕೆ ತಾನೀಗಾಗಲೇ ಒಬ್ಬ ಹುಡುಗನನ್ನು ಪ್ರೀತಿಸುತಿರುವ ವಿಷಯವನ್ನು ಹೇಳಿದಾಗ ಆಕೆಯ ಪ್ರೇಮಕ್ಕೆ ಅದ್ದಬರಲು, ಆತನೊಂದಿಗಿನ ಮದುವೆಯನ್ನು ಮುರಿದು ಹಾಕಲು ಶತಪ್ರಯತ್ನ ಪಡುತ್ತಾನೆ. ಅದು ಸಾಧ್ಯವಾಗದಾದಾಗ ಹಠ ತೊಟ್ಟು ಆಕೆಯ ಮದುವೆಯ ದಿನವೇ ತಾನು ಮದುವೆಯಾಗುತ್ತೇನೆಂದು ಪಣತೊಡುತ್ತಾನೆ.  ಆಕೆಯ ಮದುವೆಯ ದಿನವೇ ತನ್ನ ಮದುವೆಯನ್ನು ನಿಗದಿ ಮಾಡಿಕೊಳ್ಳುತ್ತಾನೆ. ಆದರೆ ಮುಂದೆ ವಿಧಿಯಾಟ ಬೇರೆಯೇ ಇರುತ್ತದೆ. ಜೊಯ ಪ್ರೀತಿಸುತ್ತಿದ್ದ ಹುಡುಗ ಮುಸ್ಲಿಂ ಅಲ್ಲ, ಅವನೊಬ್ಬ ಮೋಸಗಾರ ಎಂದು ತಿಳಿದು ಹೊಡೆದಾಟಗಳಾಗಿ ಜೊಯಾಳ ಮದುವೆಯೂ ನಿಂತುಹೋಗುತ್ತದೆ. ಆ ಗಲಾಟೆಯಲ್ಲಿ ಕುಂದನ್ ಮದುವೆಯೂ ನಿಂತುಹೋಗುತ್ತದೆ. ಇಲ್ಲಿಯವರೆಗಿನ ಕಥೆ ತುಂಬಾ ಆಸಕ್ತಿಕರವಾಗಿ ನೋಡಿಸಿಕೊಂಡು ಹೋಗುತ್ತದೆ. ಆದರೆ ಮಧ್ಯಂತರದ ನಂತರ ಚಿತ್ರದ ದಿಕ್ಕೇ ಬದಲಾಗಿ ಚಿತ್ರ ಇದ್ದಕ್ಕಿದ್ದಂತೆ ರಾಜಕೀಯದತ್ತ ಮುಖ ಮಾಡುತ್ತದೆ. ಅಲ್ಲಿಂದ ಸೀದಾ ಸೇಡಿನತ್ತ ತಿರುಗಿಕೊಂಡು ದುರಂತವಾಗುತ್ತದೆ.
ಚಿತ್ರದ ಕಥೆಯಲ್ಲಿನ ಮಧ್ಯಂತರದ ತಿರುವುಗಳೇ ಚಿತ್ರದ ಮೊದಲಾರ್ಧದ ಅಂದವನ್ನು ತಿಂದು ಹಾಕಿದೆ ಎನ್ನಬಹುದು. ಒಬ್ಬ ಅಮರಪ್ರೆಮಿಯ ಕಥೆಯನ್ನು ನಿರೂಪಿಸಲು ಹೋಗಿ ಅವನ ಪ್ರೀತಿಯ ಉತ್ತುಂಗವನ್ನು ಮನವರಿಕೆ ಮಾಡಿಕೊಡಲು ನಿರ್ದೇಶಕರು ಮಾಡಿರುವ ಹರಸಾಹಸವೆ ಅತ್ಯುತ್ತಮ ಚಿತ್ರವನ್ನು ಸಾದಾರಣ ಚಿತ್ರ ಎಂಬ ಪಟ್ಟಕ್ಕೆ ಕೆಳಗಿಳಿಸಿದೆ.
ಆಕ್ಷನ್:
ಚಿತ್ರದಲ್ಲಿ ಕನ್ನಡದ ನಟ ಸುದೀಪ ಇದ್ದಾರೆ ಎಂಬ ಒಂದು ಆಕರ್ಷಣೆಯ ಜೊತೆಗೆ ಭಾರತದ ಮೊತ್ತ ಮೊದಲ 3ಡಿ ಹಾಸ್ಯಮಯ ಚಿತ್ರ ಎಂಬ ಹಿರಿಮೆಯೂ ಈ ಚಿತ್ರಕ್ಕಿದೆ. ಆದರೆ ಒಂದು ಅಸಮಾಧನಕರ ಅಂಶವೆಂದರೆ ಈ ಎರಡೂ ಅಂಶಗಳೂ ಚಿತ್ರದ ಕಥೆಗಾಗಲಿ, ಸಿನಿಮಾಕ್ಕಿಂತ ನಿರೀಕ್ಷೆಯನ್ನು ತಣಿಸುವುದಕ್ಕಾಗಲಿ ಸಹಾಯ ಮಾಡಿಲ್ಲ ಎಂಬುದು.
ಸುದೀಪ ತೆಲುಗಲ್ಲಿ ಅಭಿನಯಿಸಿದ ಈಗ ದೊಡ್ಡ ಯಶಸ್ಸು ಕಂಡಿತ್ತು. ಆ ಯಶಸ್ಸನ್ನೇ ಬಂಡವಾಳವಾಗಿಟ್ಟುಕೊಂಡು ಅದರ ಲಾಭ ಪಡೆದುಕೊಳ್ಳಲೆಂದೇ ನಿರ್ಮಿತವಾಗಿರುವ ಚಿತ್ರ ಆಕ್ಷನ್. ಚಿತ್ರದಲ್ಲಿ ಖಳ ಛಾಯೆಯಿರುವ ಪಾತ್ರದಲ್ಲಿ ಸುದೀಪ ಅಭಿನಯಿಸಿದ್ದಾರಾದರೂ ಅದು ಅತಿಥಿ ಪಾತ್ರ. ಈಗ ಚಿತ್ರಕ್ಕೆ ಸಂಬಂಧಿಸಿದ ಸಂಭಾಷಣೆ ಹೊಡೆದು ಶಿಳ್ಳೆ ಗಿಟ್ಟಿಸುವ ಸುದೀಪ್ ಪಾತ್ರ ಚಿತ್ರದಲ್ಲಿ ತೀರಾ ಚಿಕ್ಕದು. ಹಾಗಾಗಿ ಸುದೀಪರನ್ನು ತಲೆಯಲ್ಲಿ ಇಟ್ಟುಕೊಂಡು ಚಿತ್ರಮಂದಿರಕ್ಕೆ ಕಾಲಾಕಿದರೆ ನಿರಾಶೆ ಕಟ್ಟಿಟ್ಟ ಬುತ್ತಿ.
ಚಿತ್ರದ ವಸ್ತು ಹಾಸ್ಯಮಿಶ್ರಿತ ಸಸ್ಪೆನ್ಸ್. ನೀವೀಗಾಗಲೇ ಹಾಲಿವುಡ್ ನಲ್ಲಿ ಯಶಸ್ಸಾದ ಹ್ಯಾಂಗೊವರ್ ಸರಣಿಯ ಚಿತ್ರಗಳನ್ನು ನೋಡಿದ್ದರೆ ಅದರ ತೆಲುಗು ರೂಪವನ್ನು ಯಾಕ್ಷನ್ ಚಿತ್ರದ ಮೂಲಕ ಮತ್ತೊಮ್ಮೆ ನೋಡಬಹುದು. ರಾತ್ರಿ ಬೆಳಗಾಗುವುದರೊಳಗೆ ಏನೇನೋ ನಡೆದುಹೋಗಿರುತ್ತದೆ. ಅದರ ಕಾರಣಗಳೇನು, ಅದರ ಹಿಂದಿನ ಹುನ್ನಾರವೇನು..ಅಷ್ಟಕ್ಕೂ ರಾತ್ರಿ ನಡೆದದ್ದಾರೂ ಏನು ಎನ್ನುವ ಪ್ರಶ್ನಗೆ ಉತ್ತರ ಕಂಡುಕೊಳ್ಳಬೇಕಾದರೆ ಯಾಕ್ಷನ್ ಚಿತ್ರಕ್ಕೊಮ್ಮೆ ಲಗ್ಗೆಯಿಡಬಹುದು.
ಹ್ಯಾಂಗೊವರ್ ಕಥೆ ನಡೆಯುವುದು ಲಾಸ್ ವೇಗಸ್ ನಲ್ಲಿ. ಬ್ಯಾಚುಲರ್ ಪಾರ್ಟಿಗೆ ತೆರಳುವ ಗೆಳೆಯರು ಕುಡಿದ ಅಮಲಿನಲ್ಲಿ ಮಾಡುವ ಕಿತಾಪತಿಗಳು ಅದರಿಂದಾಗುವ ಅನಾಹುತಗಳೇ ಚಿತ್ರದ ಮುಖ್ಯ ದ್ರವ್ಯವಾಗಿತ್ತಲ್ಲದೆ ಚಿತ್ರ ಅಪಾರ ಯಶಸ್ಸು ಗಳಿಸಿತ್ತು. ಇಲ್ಲಿಯೂ ಗೆಳೆಯರು ಗೋವಾಕ್ಕೆ ಮೋಜು ಮಾಡಲು ತೆರಳುತ್ತಾರೆ. ಗೋವಾಕೆ ಏಕೆ ಎಂದೆಲ್ಲಾ ಕೇಳಬಾರದು. ಭಾರತದ ಲಾಸ್ ವೇಗಸ್ ಗೋವಾ ಎಂದುಕೊಳ್ಳಿ. ಅಲ್ಲಿ ಕುಡಿದು ತಿಂದು ಮಜಾ ಮಾಡುತ್ತಾರೆ. ಕುಡಿತದ ಅಮಲಿನಲ್ಲಿ ಪ್ರಜ್ಞೆ ಕಳೆದುಕೊಂಡು ಹೇಗೇಗೋ ಹಾಗೆಯೇ ನಿದ್ರಾದೇವಿಗೆ ಶರಣಾಗುತ್ತಾರೆ. ಆದರೆ ಬೆಳಿಗ್ಗೆ ಎದ್ದಾಗ ಕೊನೆಯಲ್ಲಿ ಹುಲಿಯಿಮ್ದು ಇರುತ್ತದೆ, ಹುಡುಗಿಯಿರುತ್ತಾಳೆ, ಮಗುವೊಂದು ಇರುತ್ತದೆ, ಗೆಳೆಯನೊಬ್ಬ ನಾಪತ್ತೆಯಗಿರುತ್ತಾನೆ. ಪ್ರಥಮಾರ್ಧಕ್ಕೆ ಇಷ್ಟು ಕಥೆ. ಮುಂದಿನರ್ಧಕ್ಕೆ ಇದರ ಹಿಂದಿನ ಕಥೆ.
ಚಿತ್ರದಲ್ಲಿರುವ ತಮಾಷೆಯ ಪ್ರಸಂಗಗಳು ನಗಿಸುತ್ತವೆ. ಆದರೇಕೋ ತೀರ ಮನರಂಜಿಸುವುದಿಲ್ಲ, ಚಿತ್ರದಲ್ಲಿ ದೊಡ್ಡ ನಟರ ಬಳಗವೇ ಇದೆ. ಚಿತ್ರವೂ ಶ್ರೀಮಂತವಾಗಿದೆ. ಸಂಗೀತದ ವಿಷಯಕ್ಕೆ ಬಂದರೆ ಬಪ್ಪಿ ಬಪ್ಪಲಹರಿಯವರ ಸಂಗೀತ ಸಾರಥ್ಯದಲ್ಲಿ ಎರಡು ಹಾಡುಗಳು ಚೆನ್ನಾಗಿವೆ. ಅಲ್ಲರಿ ನರೇಶ್ ತಮ್ಮ ಎಂದಿನ ಶೈಲಿಯ ನಟನೆಯಿಂದ ನಗಿಸುತ್ತಾರೆ. ನಾಯಕಿಯರಾದ ಸ್ನೇಹಾ ಉಳ್ಳಾಲ್, ಕಾಮನಾ ಜೇಠಮಲಾನಿ,ಶೀನ ಶಹಬಾದಿ ತಮ್ಮ ಗ್ಲಾಮರ್ ಲುಕ್ನಿಂದ ಗಮನ ಸೆಳೆಯುತ್ತಾರೆ.

ತಾಂತ್ರಿಕವಾಗಿ, ತಾರಾಗಣದ ವಿಷಯದಲ್ಲೂ ಅದ್ದೂರಿಯಾಗಿರುವ ಆಕ್ಷನ್ ಚಿತ್ರ ಎಲ್ಲಾ ಅಂಶಗಳಿದ್ದಾಗ್ಯೂ ಮತ್ತೇನೋ ಕೊರತೆಯಿದೆ ಎನಿಸಿದ್ದಕ್ಕೆ ಕಾರಣವೇನು ಎಂಬುದರ   ಅನ್ವೇಷಣೆಯನ್ನು ನಿರ್ದೇಶಕ ಅನಿಲ್ ಸುನಕರವರಿಗೆ ಬಿಟ್ಟು ಬಿಡುವುದು ಒಳ್ಳೆಯದು.
ಕೊಸರು: ಇದು 3 ಡಿ ಚಿತ್ರ. ಆದರೆ ಆ ಮೂರನೆಯ ಆಯಾಮಕ್ಕೆ ಚಿತ್ರದ ಕಥೆಯಾಗಲೀ, ಚಿತ್ರಣಗಳಾಗಲಿ ಸಹಾಯ ಮಾಡುವುದಿಲ್ಲ. ಹಾಗಾಗಿ 3ಡಿ ಪರಿಣಾಮ ಎಂಬುದು ಯಾವುದೇ ಪರಿಣಾಮ ಬೀರದೆ ಚಿತ್ರ ನೋಡುವಾಗ ಕಣ್ಣು ಭಾರವಾಗುವುದಂತೂ ಸತ್ಯ.

Monday, June 24, 2013

ನಿರರ್ಥಕ ಸಂದೇಶಮಯ ಚಿತ್ರಗಳು...



ಕೆಲವು ಚಿತ್ರಗಳು ಬಿಡುಗಡೆಯಾಗುತ್ತವೆ. ಆದರೆ ಬಿಡುಗಡೆ ಮಾಡಿದವರಿಂದ ಹಿಡಿದು ಪ್ರೇಕ್ಷಕರವರೆಗೆ ಅದರ ಬಗ್ಗೆ ಯಾರಿಗೂ ಆಸಕ್ತಿ ಖಾಳಜಿ ಇರುವುದೇ ಇಲ್ಲ. ಅದರ ಬಗ್ಗೆ ವಿಮರ್ಶೆ ಮಾಡುವುದಿರಲಿ ಮಾತೂ ಆಡಲು ಹಿಂದಡಿಯಿಡುತ್ತಾರೆ. ಅಂತಹದ್ದೇ ಒಂದು ಚಿತ್ರ ಗರ್ಭದಗುಡಿ. ಸಂದೇಶಮಯ ಚಿತ್ರಗಳು ಯಾವತ್ತಿಗೂ ಅಗತ್ಯ. ಜೀವನಚೈತ್ರ ಚಿತ್ರ ಬಂದ ಮೇಲೆ ಎಷ್ಟೋ ಊರಲ್ಲಿ ಸಾರಾಯಿ ಮಾರಾಟ ನಿಲ್ಲಿಸಿದ್ದರು.ಸೈಲೆನ್ಸ್ಡ್ ಚಿತ್ರ ಬಿಡುಗಡೆಯಾದ ನಂತರ ಸೌತ್ ಕೊರಿಯಾದಲ್ಲಿ ದೊಡ್ಡ ಆಂದೋಲನವೇ ನಡೆದಿತ್ತು.
ಮೊದಲಿಗೆ ಸುಮ್ಮನೆ ಗರ್ಭದಗುಡಿಯ ಬಗ್ಗೆ ತಿಳಿದುಕೊಳ್ಳೋಣ. ತಂಗಿ ಅಣ್ಣ ಚಿತ್ರಗಳ ನಂತರ ಓಂ ಸಾಯಿಪ್ರಕಾಶ್ ಈಗ ನೇರವಾಗಿ ಭ್ರೂಣಕ್ಕೆ ಕೈಹಾಕಿದ್ದಾರೆ. ಅಂದರೆ ಸಾಮಾಜಿಕ ಪಿಡುಗಾದ ಭ್ರೂಣಹತ್ಯೆಯನ್ನು ಕುರಿತು ಚಿತ್ರವೊಂದನ್ನು ಮಾಡಿದ್ದಾರೆ ಮತ್ತದಕ್ಕೆ ಗರ್ಭದಗುಡಿ ಎಂಬ ಹೆಸರಿಟ್ಟಿದ್ದಾರೆ. ಅಂದಮೇಲೆ ಚಿತ್ರದಲ್ಲಿ ಹೆಣ್ಣು ಮಗುವನ್ನು ಅದರ ಭ್ರೂಣಾವಸ್ಥೆಯಲ್ಲೇ ಚಿವುಟಿ ಹಾಕಲು ನೋಡುವ ಸ್ತ್ರೀದ್ವೇಷಿಗಳಿಗೆ ಅದು ತಪ್ಪು ಎಂಬ ಸಂದೇಶದ ಜೊತೆಗೆ ಹೆಣ್ಣಿನ ಹಿರಿಮೆಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಅದೆಲ್ಲ್ಲಾಸರಿ. ಅದರಲ್ಲಿ ಒಂದು ಅರ್ಥ ಗರ್ಭಿತವಾದ ಚಿತ್ರ ಮಾಡಿದ್ದಾರಾ..? ಎಂಬುದೇ ಪ್ರಶ್ನೆ.
ಚಿತ್ರದ ಆಶಯ ಚೆನ್ನಾಗಿದೆ. ಚಿತ್ರವನ್ನು ಯಾವ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ, ಯಾವ ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ಚಿತ್ರವನ್ನು ತೆರೆಗರ್ಪಿಸಲಾಗಿದೆ ಎಂಬುದು ಸ್ಪಷ್ಟ. ಏಕೆ ಹೀಗೆ ಎಂಬ ಪ್ರಶ್ನೆ ನನ್ನನ್ನು ಹಲವಾರು ಸಾರಿ ಕಾಡುತ್ತಲೇ ಇರುತ್ತದೆ.
ಒಂದು ಸಾಮಾಜಿಕ ಕಳಕಳಿಯ ಚಿತ್ರ ಎಂದಾಗ ಮೊದಲಿಗೆ ಅದು ಸಮಾಜಕ್ಕೆ ಅಂದರೆ ಜನರಿಗೆ ಮೊದಲು ತಲುಪಬೇಕು. ಆದರೆ ನಮ್ಮಲ್ಲಿ ಸಾಮಾಜಿಕ ಕಳಕಳಿಯ ಚಿತ್ರ, ಸಾಮಾಜಿಕ ಪರಿಣಾಮ ಬೀರುವ ಚಿತ್ರಗಳು ಸಮಾಜಕ್ಕೆ ತಲುಪಿಯೇ ಇರುವುದಿಲ್ಲ. ಅದು ಪ್ರಶಸ್ತಿ ಕಮಿಟಿಯ ನಾಲ್ಕು ಮಂದಿ ನೋಡಿ ಅದಕ್ಕೊಂದು ಪ್ರಶಸ್ತಿ ಕೊಟ್ಟುಬಿಟ್ಟಿರುತ್ತಾರೆ.ಆಮೇಲೆ ಸಬ್ಸಿಡಿ ಅದು ಇದು ಎಂದು ಚಿತ್ರಕರ್ಮಿಗಳ ಬಂಡವಾಳವನ್ನು ಸಂಪಾದಿಸುವ[?] ಕಾಯಕದಲ್ಲಿ ನಿರತರಾಗಿರುತ್ತಾರೆ.
ಹೆಣ್ಣು ಭ್ರೂಣ ಹತ್ಯೆ ಒಂದು ಘೋರ ಕೃತ್ಯ. ಅಂತಹುದರ ಬಗ್ಗೆ ಸಿನಿಮಾ ತೆಗೆದಾಗ ಅದು ಎಲ್ಲರಿಗೂ ಪರಿಣಾಮಕಾರಿಯಾಗಿ ತಲುಪಿದಾಗ ಕಥೆಯ ಆಶಯ ಈಡೇರಿ ಸಿನಿಮಾ ಸಾರ್ಥಕ ಎನಿಸಿಕೊಳ್ಳುತ್ತದೆ. ಉದಾಹರಣೆಗೆ ಲಗೇ ರಹೋ ಮುನ್ನಾಭಾಯಿ ಚಿತ್ರದಲ್ಲಿನ  ಗಾಂಧೀಜಿಯವರ ಶಾಂತಿ ಸಂದೇಶ. ಅದನ್ನು ಅಷ್ಟು ಚಂದವಾಗಿ ಸೊಗಸಾಗಿ ಮತ್ತು ಪರಿಣಾಮಕಾರಿಯಾಗಿ ಜನರ ಮುಂದಿಟ್ಟ ನಿರ್ದೇಶಕ ರಾಜಕುಮಾರ್ ಹಿರಾನಿಗೆ ದೊಡ್ಡ ಸಲಾಂ ಹೊಡೆಯಲೇ ಬೇಕಾಗುತ್ತದೆ. ಮುಖ್ಯವಾಹಿನಿಯಲ್ಲಿ ಸಾಮಾಜಿಕ ಕಳಕಳಿಯನ್ನು ಕುರಿತ ಚಿತ್ರಗಳು ಬರಬೇಕು...ಆಗಲೇ ಚಲನಚಿತ್ರವೆಂಬುದು ಬರೀ ಮನರಂಜನೆಯ ಮಾಧ್ಯಮವಾಗದೆ ಸಮಾಜದ ಒಂದು ಭಾಗವಾಗುತ್ತದೆ.ಮಷೀನ್ ಗನ್ ಪ್ರೀಚರ್, ಸೈಲೆನ್ಸಡ್, ಕಾಂಸ್ಟ೦ಟ್ ಗಾರ್ಡನರ್, ಹೆಲ್ಪ್ ಮುಂತಾದ ಚಿತ್ರಗಳೂ ಸಂದೇಶಮಯ ಚಿತ್ರಗಳೇ. ಅವೆಲ್ಲಾ ಸ್ವಲ್ಪ ಸಾಕ್ಷ್ಯಚಿತ್ರ ಮಾದರಿಯಲ್ಲಿ  ಇದ್ದರೂ ನಮ್ಮನ್ನು ರಂಜಿಸಿದ್ದವು..  ಚಿಂತನೆಗೆ ಒಳಪಡಿಸಿದ್ದವು. ಆದರೆ ಕನ್ನಡದಲ್ಲಿ ಇಂತಹ ಉದಾಹರಣೆಗಳು ತೀರಾ ಕಡಿಮೆ ಎನ್ನಬಹುದು. ಸಂದೇಶವಿದ್ದರೆ ಅದು ಮುಖ್ಯವಾಹಿನಿಯ ಚಿತ್ರವಾಗುವುದೇ ಇಲ್ಲ. ನಾವೇ ನಮ್ಮಲ್ಲಿನ ಪ್ರೇಕ್ಷಕರನ್ನು ವಿಂಗಡಿಸುತ್ತಿದ್ದೀವೇನೋ ಎನಿಸುತ್ತದೆ. ಮಹಿಳೆಯರ, ಪಡ್ಡೆ ಹುಡುಗರ, ಯುವಕರ ಹೀಗೆ. ಗರ್ಭದಗುಡಿ ಎಂದಾಕ್ಷಣ ಚಿತ್ರಮಂದಿರದಲ್ಲಿ ನೀವು ಹುಡುಕಿದರೂ ಒಬ್ಬೆ ಒಬ್ಬ ಕಾಲೇಜು ಹುಡುಗ ಸಿಕ್ಕುವುದಿಲ್ಲ. ಸುಮ್ಮನೆ ನಾನೇ ನನ್ನ ಗೆಳೆಯರನ್ನು ಗರ್ಭದಗುಡಿ ನೋಡಲು ಬರುತ್ತೀರಾ ಎಂದದ್ದಕ್ಕೆ ಅದೆಲ್ಲಾ ನಮಗಲ್ಲಾ ಗುರು ಎಂದು ಹೇಳಿದ್ದಲ್ಲದೆ ನನ್ನನ್ನು ನೋಡಿ ನಕ್ಕವರು ಇದ್ದಾರೆ.ಅದೆಲ್ಲಾ ಹೆಂಗಸರ ಚಿತ್ರ ಗುರು ಎಂದದ್ದಕ್ಕೆ ನಾನು ಬಿಡುತ್ತೇನೆಯೇ..? ಅಲ್ಲಾ ಮಾರಾಯಾ..ಭ್ರೂಣಹತ್ಯೆ ಎಂಬುದು ಬರೀ ಮಹಿಳೆಯರೇ ಮಾಡಿಸುವ ಕಾರ್ಯವಲ್ಲ. ಅಥವಾ ಅದರ ಬಗ್ಗೆ ಬರೀ ಹೆಂಗಸರೇ ತಿಳಿದುಕೊಳ್ಳಬೇಕಿಲ್ಲ ನಾವೂ ನೀವೂ ಅದರ ಬಗ್ಗೆ ತಿಳಿದುಕೊಳ್ಳಬೇಕು ಎಂದೆಲ್ಲಾ ಅವರಿಗೆ ಹೇಳಿದ್ದೆ. ಅದೇನೇ ಆದರೂ ಚಿತ್ರ ನೋಡಲು ಅವರ್ಯಾರು ಬರಲಿಲ್ಲ. ನನಗೋ ಅದೇನೋ ವಿಚಿತ್ರ ಕುತೂಹಲ. ಗರ್ಭದಗುಡಿ ಎಂಬ ಶೀರ್ಷಿಕೆಯಡಿ ಎಂಬತ್ತರ ಗಡಿಯಲ್ಲಿರುವ ಹಿರಿಯ ನಿರ್ದೇಶಕರು ಏನು ಮಾಡಿರಬಹುದು ಎಂದು...ಅದ್ಯಾವ ರೀತಿ ಸಂದೇಶ ಕೊಡಲು ಹೊರಟಿರಬಹುದು ಎಂದು... ಚಿತ್ರವನ್ನು ನೋಡಿದೆ. ನೋಡುತ್ತಾ ನೋಡುತ್ತಾ  ಇಷ್ಟೆಲ್ಲಾ ವಿಷಯಗಳು ಮನಸ್ಸಿನಲ್ಲಿ ಹಾದುಹೋದವು.
ಕೆಲವು ಅಂಶಗಳು:
*ಚಿತ್ರದ ಪೋಸ್ಟರ್ ನಲ್ಲಿ ಮದರ್ ತೆರೇಸಾ ಫೋಟೋ ಇದೆ. ಅದಕ್ಕೆ ಸ್ಪಷ್ಟೀಕರಣವೆಂದರೆ ಚಿತ್ರದಲ್ಲಿ ನಾಯಕಿಯ ಹೆಸರು ತೆರೇಸಾ.
*ಸ್ತ್ರೀ ಶೋಷಣೆಯ ವಿರುದ್ಧದ ಈ ಚಿತ್ರದಲ್ಲಿ ಶೋಷಣೆ ಮಾಡುವವರಲ್ಲಿ ಸ್ತ್ರೀಯರೂ ಇದ್ದಾರೆ.
*ಚಿತ್ರಮಂದಿರದಲ್ಲಿ ಚಿತ್ರದೊಳಗಿದ್ದಷ್ಟೂ ಜನರಿರಲಿಲ್ಲ.
 ಇನ್ನು ಸಿನೆಮಾದ ಕಥೆ ಏನು..? ಹೇಗಿತ್ತು ಎಂಬ ವಿಷಯಗಳು ಅಷ್ಟೇನೂ ಆಸಕ್ತಿಕರವಲ್ಲ. ಏನಂತೀರಿ.?