Tuesday, June 25, 2013

ಬ್ಯಾಕ್ to ಬ್ಯಾಕ್ ಎರಡು ಚಿತ್ರಗಳು...


ಈ ಎರಡೂ ಚಿತ್ರಗಳಲ್ಲಿ ವಿಶೇಷವಿದೆ. ರಾ೦ಝನಾ ಧನುಶ್ ಅಭಿನಯದ ಮೊದಲ ಹಿಂದಿ ಚಿತ್ರ. ಸರಿ ಸುಮಾರು ಮೂವತ್ತೈದು ಕೋಟಿ ವೆಚ್ಚದಲ್ಲಿ ತಯಾರಾದ ಚಿತ್ರ. ಹಾಗೆ ಆಕ್ಷನ್ ಸುದೀಪ್ ಅಭಿನಯಿಸಿದ್ದಾರೆ ಎಂದು ಪ್ರಚಾರ ಪಡೆದ ಎರಡನೇ ತೆಲುಗು ಚಿತ್ರ. ಆದರೆ ಎರಡೂ ಚಿತ್ರಗಳೂ ತೀರಾ ನಿರಾಶಾದಾಯಕವಲ್ಲದಾದರೂ ಅದ್ಭುತ ಎನ್ನುವ ಹಾಗಿಲ್ಲ.
ರಾ೦ಝನಾ:
ಧನುಶ್ ತಮ್ಮ ಕೊಲವೇರಿ ಹಾಡಿನಿಂದ ದೇಶಾದ್ಯಂತ ಹೆಸರು ಮಾಡಿದವರು. ತಮಿಳಿನಲ್ಲಿ ತನ್ನದೇ ಆದ ಛಾಪು ಹೊತ್ತಿರುವ ಕಲಾವಿದ. ಅವರ ಕಾದಲ್ ಕೊಂದೆನ್  ಚಿತ್ರದಲ್ಲಿನ ತಣ್ಣಗಿನ ಸೈಕೊಪಾಥ್ ಪಾತ್ರವನ್ನು ಮರೆಯುವುದಾದರೂ ಹೇಗೆ.? ಅವರು ಹಿಂದಿಯಲ್ಲಿ ಅಭಿನಯಿಸುತ್ತಿದ್ದಾರೆ ಎಂದಾಗ ಬಾಲಿವುಡ್ ಚಿತ್ರರಸಿಕರಿಂದ ಹಿಡಿದು ಇಡೀ ಭಾರತೀಯ ಚಿತ್ರರಂಗವೇ ಒಮ್ಮೆ ಕಣ್ಣು ಹಾಯಿಸಿತ್ತು.
ಚಿತ್ರಕ್ಕೆ ಸಂಗೀತ ಮಾಂತ್ರಿಕ ಎ.ಆರ್ .ರಹಮಾನ್ ಸಂಗೀತ ನೀಡಿದ್ದಾರೆ. ಎರಡು ಹಾಡುಗಳಂತೂ ಸೂಪರ್. ಹಾಗೆ ಛಾಯಾಗ್ರಹಣವಂತೂ ಬನರಾಸ್ ಅನ್ನು ಇಷ್ಟು ಚೆನ್ನಾಗುದೆಯಾ ಎನ್ನುವಂತೆ ನಮ್ಮ ಮುಂದಿಟ್ಟಿದೆ. ಚಿತ್ರದೊಳಗಿನ ಕಾಲಾವಧಿ ವಿಶಾಲವಾದದ್ದು. ಬಾಲ್ಯದಿಂದ ಆತನ ತಾರುಣ್ಯದವರೆಗೆ ಹರಿದು ಬರುವ ಕಥಾ ಹಂದರ ಬದುಕಿನ ಹಲವಾರು ಘಟ್ಟಗಳು ಹಾದುಹೋಗುತ್ತವೆ. ಹಾಗಾಗಿ ಕಾಲಾಂತರದ ರೂಪಾಂತರವನ್ನು ಕ್ಯಾಮೆರಾ ಕಣ್ಣಿನ ಮೂಲಕ ವಿಶದ ಪಡಿಸುವುದು ಕಷ್ಟದ ಕೆಲಸವೇ. ಚಿತ್ರದ ಗತಿ, ಅದರಲ್ಲಿನ ವಸ್ತು, ಅದರಲ್ಲಿನ ಕಾಲ ಬದಲಾದದ್ದು ನೋಡುಗನ ಅರಿವಿಗೆ ಬಾರದಂತೆ ಅರಿವಾಗಬೇಕಾದರೆ ಅದಕ್ಕೆ ಅನುಗುಣವಾದ ಕ್ಯಾಮೆರಾ ಚಲನೆ, ನೆರಳು ಬೆಳಕಿನ ಹೊಯ್ದಾಟವಿರಬೇಕು. ಆ ವಿಷಯದಲ್ಲಿ ಕ್ಯಾಮೆರಾ ಕೆಲಸಕ್ಕೆ ಶಹಬ್ಬಾಸ್ ಹೇಳಲೆಬೇಕಾಗುತ್ತದೆ.  ಛಾಯಾಗ್ರಾಹಕ ನಟರಾಜ್ ಸುಬ್ರಮಣಿಯನ್, ವಿಶಾಲ್ ಸಿಂಹ ಅಭಿನಂದನಾರ್ಹರು. ಹಾಗೆ ತನು ವೆಡ್ಸ್ ಮನು ಚಿತ್ರ ನಿರ್ದೆಶಿಸಿದ್ದ ಆನಂದ ಎಲ್ .ರೈ  ಚಿತ್ರವನ್ನು ಪ್ರೇಮಿಯೊಬ್ಬನ ಉತ್ಕಟತೆಯನ್ನು ತೋರಿಸುವ ವಿಷಯದಲ್ಲಿ ಗೆದಿದ್ದಾರೆ. ಅಭಿನಯದಲ್ಲಿ ಚಿಕ್ಕಂದಿನಿಂದ ದೊಡ್ದವನಾಗುವವರೆಗೆ ಅಲ್ಲಿಂದ ರಾಜಕೀಯಕ್ಕೆ ಪ್ರವೇಶ ಪಡೆಯುವವರೆಗೆ ಧನುಶ್ ತಮ್ಮ ಅಭಿನಯ ಸಾಮರ್ಥ್ಯವನ್ನು ಮೆರೆದಿದ್ದಾರೆ. ಇನ್ನುಳಿದಂತೆ ಅಭಯ ಡಿಯೋಲ್, ಮೊಹಮ್ಮದ್ ಬೆಸ್ಹಾನ್ ಆಯೂಬ್, ಸ್ವರ ಭಾಸ್ಕರ್,ಸೋನಂ ಕಪೂರ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.
ಇಷ್ಟೆಲ್ಲಾ ಪ್ಲಸ್ ಗಳಿರುವ ಚಿತ್ರದ ಮೊದಲ ಹದಿನೈದು ನಿಮಿಶವಂತೂ ಅದ್ಭುತವೆನಿಸುತ್ತದೆ. ಬಾಲ್ಯದಲ್ಲೇ ಮುಸ್ಲಿಂ ಹುಡುಗಿ ಜೊಯಾಗೆ ಮನಸೋಲುವ ತಮಿಳು ಪಂಡಿತನ ಮಗ ಕುಂದನ್ ಪಂಡಿತ್ ಅವಳ ಹಿಂದೆ ಬೀಳುತ್ತಾನೆ. ಪ್ರೀತಿಸುವಂತೆ ಪರಿಪರಿಯಾಗಿ ಬೇಡುತ್ತಾನೆ. ಕಾಡುತ್ತಾನೆ. ಅದನ್ನರಿವ ಆಕೆಯ ತಂದೆ ದೂರದ ಊರಿಗೆ ಅವಳನ್ನು ಕಳಿಸಿ ಆಕೆ ವಿದ್ಯಾಭ್ಯಾಸ ಮುಗಿಸಿ ವಾಪಸ್ಸು ಬಂದಾಗಲೂ ಕುಂದನ್ ಗೆ  ಆಕೆಯ ಮೇಲಿನ ಪ್ರೀತಿ ಮರೆಯಾಗಿರುವುದಿಲ್ಲ. ಆದರೆ ಅದನ್ನೆಲ್ಲಾ ಮರೆತಿದ್ದ ಜೊಯಾಲಲ್ಲಿ ಮತ್ತೆ ಮತ್ತೆ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾನೆ. ಕಾಡುತ್ತಾನೆ. ಆದರೆ ಆಕೆ ತಾನೀಗಾಗಲೇ ಒಬ್ಬ ಹುಡುಗನನ್ನು ಪ್ರೀತಿಸುತಿರುವ ವಿಷಯವನ್ನು ಹೇಳಿದಾಗ ಆಕೆಯ ಪ್ರೇಮಕ್ಕೆ ಅದ್ದಬರಲು, ಆತನೊಂದಿಗಿನ ಮದುವೆಯನ್ನು ಮುರಿದು ಹಾಕಲು ಶತಪ್ರಯತ್ನ ಪಡುತ್ತಾನೆ. ಅದು ಸಾಧ್ಯವಾಗದಾದಾಗ ಹಠ ತೊಟ್ಟು ಆಕೆಯ ಮದುವೆಯ ದಿನವೇ ತಾನು ಮದುವೆಯಾಗುತ್ತೇನೆಂದು ಪಣತೊಡುತ್ತಾನೆ.  ಆಕೆಯ ಮದುವೆಯ ದಿನವೇ ತನ್ನ ಮದುವೆಯನ್ನು ನಿಗದಿ ಮಾಡಿಕೊಳ್ಳುತ್ತಾನೆ. ಆದರೆ ಮುಂದೆ ವಿಧಿಯಾಟ ಬೇರೆಯೇ ಇರುತ್ತದೆ. ಜೊಯ ಪ್ರೀತಿಸುತ್ತಿದ್ದ ಹುಡುಗ ಮುಸ್ಲಿಂ ಅಲ್ಲ, ಅವನೊಬ್ಬ ಮೋಸಗಾರ ಎಂದು ತಿಳಿದು ಹೊಡೆದಾಟಗಳಾಗಿ ಜೊಯಾಳ ಮದುವೆಯೂ ನಿಂತುಹೋಗುತ್ತದೆ. ಆ ಗಲಾಟೆಯಲ್ಲಿ ಕುಂದನ್ ಮದುವೆಯೂ ನಿಂತುಹೋಗುತ್ತದೆ. ಇಲ್ಲಿಯವರೆಗಿನ ಕಥೆ ತುಂಬಾ ಆಸಕ್ತಿಕರವಾಗಿ ನೋಡಿಸಿಕೊಂಡು ಹೋಗುತ್ತದೆ. ಆದರೆ ಮಧ್ಯಂತರದ ನಂತರ ಚಿತ್ರದ ದಿಕ್ಕೇ ಬದಲಾಗಿ ಚಿತ್ರ ಇದ್ದಕ್ಕಿದ್ದಂತೆ ರಾಜಕೀಯದತ್ತ ಮುಖ ಮಾಡುತ್ತದೆ. ಅಲ್ಲಿಂದ ಸೀದಾ ಸೇಡಿನತ್ತ ತಿರುಗಿಕೊಂಡು ದುರಂತವಾಗುತ್ತದೆ.
ಚಿತ್ರದ ಕಥೆಯಲ್ಲಿನ ಮಧ್ಯಂತರದ ತಿರುವುಗಳೇ ಚಿತ್ರದ ಮೊದಲಾರ್ಧದ ಅಂದವನ್ನು ತಿಂದು ಹಾಕಿದೆ ಎನ್ನಬಹುದು. ಒಬ್ಬ ಅಮರಪ್ರೆಮಿಯ ಕಥೆಯನ್ನು ನಿರೂಪಿಸಲು ಹೋಗಿ ಅವನ ಪ್ರೀತಿಯ ಉತ್ತುಂಗವನ್ನು ಮನವರಿಕೆ ಮಾಡಿಕೊಡಲು ನಿರ್ದೇಶಕರು ಮಾಡಿರುವ ಹರಸಾಹಸವೆ ಅತ್ಯುತ್ತಮ ಚಿತ್ರವನ್ನು ಸಾದಾರಣ ಚಿತ್ರ ಎಂಬ ಪಟ್ಟಕ್ಕೆ ಕೆಳಗಿಳಿಸಿದೆ.
ಆಕ್ಷನ್:
ಚಿತ್ರದಲ್ಲಿ ಕನ್ನಡದ ನಟ ಸುದೀಪ ಇದ್ದಾರೆ ಎಂಬ ಒಂದು ಆಕರ್ಷಣೆಯ ಜೊತೆಗೆ ಭಾರತದ ಮೊತ್ತ ಮೊದಲ 3ಡಿ ಹಾಸ್ಯಮಯ ಚಿತ್ರ ಎಂಬ ಹಿರಿಮೆಯೂ ಈ ಚಿತ್ರಕ್ಕಿದೆ. ಆದರೆ ಒಂದು ಅಸಮಾಧನಕರ ಅಂಶವೆಂದರೆ ಈ ಎರಡೂ ಅಂಶಗಳೂ ಚಿತ್ರದ ಕಥೆಗಾಗಲಿ, ಸಿನಿಮಾಕ್ಕಿಂತ ನಿರೀಕ್ಷೆಯನ್ನು ತಣಿಸುವುದಕ್ಕಾಗಲಿ ಸಹಾಯ ಮಾಡಿಲ್ಲ ಎಂಬುದು.
ಸುದೀಪ ತೆಲುಗಲ್ಲಿ ಅಭಿನಯಿಸಿದ ಈಗ ದೊಡ್ಡ ಯಶಸ್ಸು ಕಂಡಿತ್ತು. ಆ ಯಶಸ್ಸನ್ನೇ ಬಂಡವಾಳವಾಗಿಟ್ಟುಕೊಂಡು ಅದರ ಲಾಭ ಪಡೆದುಕೊಳ್ಳಲೆಂದೇ ನಿರ್ಮಿತವಾಗಿರುವ ಚಿತ್ರ ಆಕ್ಷನ್. ಚಿತ್ರದಲ್ಲಿ ಖಳ ಛಾಯೆಯಿರುವ ಪಾತ್ರದಲ್ಲಿ ಸುದೀಪ ಅಭಿನಯಿಸಿದ್ದಾರಾದರೂ ಅದು ಅತಿಥಿ ಪಾತ್ರ. ಈಗ ಚಿತ್ರಕ್ಕೆ ಸಂಬಂಧಿಸಿದ ಸಂಭಾಷಣೆ ಹೊಡೆದು ಶಿಳ್ಳೆ ಗಿಟ್ಟಿಸುವ ಸುದೀಪ್ ಪಾತ್ರ ಚಿತ್ರದಲ್ಲಿ ತೀರಾ ಚಿಕ್ಕದು. ಹಾಗಾಗಿ ಸುದೀಪರನ್ನು ತಲೆಯಲ್ಲಿ ಇಟ್ಟುಕೊಂಡು ಚಿತ್ರಮಂದಿರಕ್ಕೆ ಕಾಲಾಕಿದರೆ ನಿರಾಶೆ ಕಟ್ಟಿಟ್ಟ ಬುತ್ತಿ.
ಚಿತ್ರದ ವಸ್ತು ಹಾಸ್ಯಮಿಶ್ರಿತ ಸಸ್ಪೆನ್ಸ್. ನೀವೀಗಾಗಲೇ ಹಾಲಿವುಡ್ ನಲ್ಲಿ ಯಶಸ್ಸಾದ ಹ್ಯಾಂಗೊವರ್ ಸರಣಿಯ ಚಿತ್ರಗಳನ್ನು ನೋಡಿದ್ದರೆ ಅದರ ತೆಲುಗು ರೂಪವನ್ನು ಯಾಕ್ಷನ್ ಚಿತ್ರದ ಮೂಲಕ ಮತ್ತೊಮ್ಮೆ ನೋಡಬಹುದು. ರಾತ್ರಿ ಬೆಳಗಾಗುವುದರೊಳಗೆ ಏನೇನೋ ನಡೆದುಹೋಗಿರುತ್ತದೆ. ಅದರ ಕಾರಣಗಳೇನು, ಅದರ ಹಿಂದಿನ ಹುನ್ನಾರವೇನು..ಅಷ್ಟಕ್ಕೂ ರಾತ್ರಿ ನಡೆದದ್ದಾರೂ ಏನು ಎನ್ನುವ ಪ್ರಶ್ನಗೆ ಉತ್ತರ ಕಂಡುಕೊಳ್ಳಬೇಕಾದರೆ ಯಾಕ್ಷನ್ ಚಿತ್ರಕ್ಕೊಮ್ಮೆ ಲಗ್ಗೆಯಿಡಬಹುದು.
ಹ್ಯಾಂಗೊವರ್ ಕಥೆ ನಡೆಯುವುದು ಲಾಸ್ ವೇಗಸ್ ನಲ್ಲಿ. ಬ್ಯಾಚುಲರ್ ಪಾರ್ಟಿಗೆ ತೆರಳುವ ಗೆಳೆಯರು ಕುಡಿದ ಅಮಲಿನಲ್ಲಿ ಮಾಡುವ ಕಿತಾಪತಿಗಳು ಅದರಿಂದಾಗುವ ಅನಾಹುತಗಳೇ ಚಿತ್ರದ ಮುಖ್ಯ ದ್ರವ್ಯವಾಗಿತ್ತಲ್ಲದೆ ಚಿತ್ರ ಅಪಾರ ಯಶಸ್ಸು ಗಳಿಸಿತ್ತು. ಇಲ್ಲಿಯೂ ಗೆಳೆಯರು ಗೋವಾಕ್ಕೆ ಮೋಜು ಮಾಡಲು ತೆರಳುತ್ತಾರೆ. ಗೋವಾಕೆ ಏಕೆ ಎಂದೆಲ್ಲಾ ಕೇಳಬಾರದು. ಭಾರತದ ಲಾಸ್ ವೇಗಸ್ ಗೋವಾ ಎಂದುಕೊಳ್ಳಿ. ಅಲ್ಲಿ ಕುಡಿದು ತಿಂದು ಮಜಾ ಮಾಡುತ್ತಾರೆ. ಕುಡಿತದ ಅಮಲಿನಲ್ಲಿ ಪ್ರಜ್ಞೆ ಕಳೆದುಕೊಂಡು ಹೇಗೇಗೋ ಹಾಗೆಯೇ ನಿದ್ರಾದೇವಿಗೆ ಶರಣಾಗುತ್ತಾರೆ. ಆದರೆ ಬೆಳಿಗ್ಗೆ ಎದ್ದಾಗ ಕೊನೆಯಲ್ಲಿ ಹುಲಿಯಿಮ್ದು ಇರುತ್ತದೆ, ಹುಡುಗಿಯಿರುತ್ತಾಳೆ, ಮಗುವೊಂದು ಇರುತ್ತದೆ, ಗೆಳೆಯನೊಬ್ಬ ನಾಪತ್ತೆಯಗಿರುತ್ತಾನೆ. ಪ್ರಥಮಾರ್ಧಕ್ಕೆ ಇಷ್ಟು ಕಥೆ. ಮುಂದಿನರ್ಧಕ್ಕೆ ಇದರ ಹಿಂದಿನ ಕಥೆ.
ಚಿತ್ರದಲ್ಲಿರುವ ತಮಾಷೆಯ ಪ್ರಸಂಗಗಳು ನಗಿಸುತ್ತವೆ. ಆದರೇಕೋ ತೀರ ಮನರಂಜಿಸುವುದಿಲ್ಲ, ಚಿತ್ರದಲ್ಲಿ ದೊಡ್ಡ ನಟರ ಬಳಗವೇ ಇದೆ. ಚಿತ್ರವೂ ಶ್ರೀಮಂತವಾಗಿದೆ. ಸಂಗೀತದ ವಿಷಯಕ್ಕೆ ಬಂದರೆ ಬಪ್ಪಿ ಬಪ್ಪಲಹರಿಯವರ ಸಂಗೀತ ಸಾರಥ್ಯದಲ್ಲಿ ಎರಡು ಹಾಡುಗಳು ಚೆನ್ನಾಗಿವೆ. ಅಲ್ಲರಿ ನರೇಶ್ ತಮ್ಮ ಎಂದಿನ ಶೈಲಿಯ ನಟನೆಯಿಂದ ನಗಿಸುತ್ತಾರೆ. ನಾಯಕಿಯರಾದ ಸ್ನೇಹಾ ಉಳ್ಳಾಲ್, ಕಾಮನಾ ಜೇಠಮಲಾನಿ,ಶೀನ ಶಹಬಾದಿ ತಮ್ಮ ಗ್ಲಾಮರ್ ಲುಕ್ನಿಂದ ಗಮನ ಸೆಳೆಯುತ್ತಾರೆ.

ತಾಂತ್ರಿಕವಾಗಿ, ತಾರಾಗಣದ ವಿಷಯದಲ್ಲೂ ಅದ್ದೂರಿಯಾಗಿರುವ ಆಕ್ಷನ್ ಚಿತ್ರ ಎಲ್ಲಾ ಅಂಶಗಳಿದ್ದಾಗ್ಯೂ ಮತ್ತೇನೋ ಕೊರತೆಯಿದೆ ಎನಿಸಿದ್ದಕ್ಕೆ ಕಾರಣವೇನು ಎಂಬುದರ   ಅನ್ವೇಷಣೆಯನ್ನು ನಿರ್ದೇಶಕ ಅನಿಲ್ ಸುನಕರವರಿಗೆ ಬಿಟ್ಟು ಬಿಡುವುದು ಒಳ್ಳೆಯದು.
ಕೊಸರು: ಇದು 3 ಡಿ ಚಿತ್ರ. ಆದರೆ ಆ ಮೂರನೆಯ ಆಯಾಮಕ್ಕೆ ಚಿತ್ರದ ಕಥೆಯಾಗಲೀ, ಚಿತ್ರಣಗಳಾಗಲಿ ಸಹಾಯ ಮಾಡುವುದಿಲ್ಲ. ಹಾಗಾಗಿ 3ಡಿ ಪರಿಣಾಮ ಎಂಬುದು ಯಾವುದೇ ಪರಿಣಾಮ ಬೀರದೆ ಚಿತ್ರ ನೋಡುವಾಗ ಕಣ್ಣು ಭಾರವಾಗುವುದಂತೂ ಸತ್ಯ.

1 comment:

  1. I am just movie lover working pvt. ltd. following your blog from the day one , would like to to meet in person when you are free , please reach me balu@merlinhawk.com, balu2112@gmail.com, 98455 19387 regards -balu - just to spend quality time with you

    ReplyDelete