Monday, June 24, 2013

ನಿರರ್ಥಕ ಸಂದೇಶಮಯ ಚಿತ್ರಗಳು...



ಕೆಲವು ಚಿತ್ರಗಳು ಬಿಡುಗಡೆಯಾಗುತ್ತವೆ. ಆದರೆ ಬಿಡುಗಡೆ ಮಾಡಿದವರಿಂದ ಹಿಡಿದು ಪ್ರೇಕ್ಷಕರವರೆಗೆ ಅದರ ಬಗ್ಗೆ ಯಾರಿಗೂ ಆಸಕ್ತಿ ಖಾಳಜಿ ಇರುವುದೇ ಇಲ್ಲ. ಅದರ ಬಗ್ಗೆ ವಿಮರ್ಶೆ ಮಾಡುವುದಿರಲಿ ಮಾತೂ ಆಡಲು ಹಿಂದಡಿಯಿಡುತ್ತಾರೆ. ಅಂತಹದ್ದೇ ಒಂದು ಚಿತ್ರ ಗರ್ಭದಗುಡಿ. ಸಂದೇಶಮಯ ಚಿತ್ರಗಳು ಯಾವತ್ತಿಗೂ ಅಗತ್ಯ. ಜೀವನಚೈತ್ರ ಚಿತ್ರ ಬಂದ ಮೇಲೆ ಎಷ್ಟೋ ಊರಲ್ಲಿ ಸಾರಾಯಿ ಮಾರಾಟ ನಿಲ್ಲಿಸಿದ್ದರು.ಸೈಲೆನ್ಸ್ಡ್ ಚಿತ್ರ ಬಿಡುಗಡೆಯಾದ ನಂತರ ಸೌತ್ ಕೊರಿಯಾದಲ್ಲಿ ದೊಡ್ಡ ಆಂದೋಲನವೇ ನಡೆದಿತ್ತು.
ಮೊದಲಿಗೆ ಸುಮ್ಮನೆ ಗರ್ಭದಗುಡಿಯ ಬಗ್ಗೆ ತಿಳಿದುಕೊಳ್ಳೋಣ. ತಂಗಿ ಅಣ್ಣ ಚಿತ್ರಗಳ ನಂತರ ಓಂ ಸಾಯಿಪ್ರಕಾಶ್ ಈಗ ನೇರವಾಗಿ ಭ್ರೂಣಕ್ಕೆ ಕೈಹಾಕಿದ್ದಾರೆ. ಅಂದರೆ ಸಾಮಾಜಿಕ ಪಿಡುಗಾದ ಭ್ರೂಣಹತ್ಯೆಯನ್ನು ಕುರಿತು ಚಿತ್ರವೊಂದನ್ನು ಮಾಡಿದ್ದಾರೆ ಮತ್ತದಕ್ಕೆ ಗರ್ಭದಗುಡಿ ಎಂಬ ಹೆಸರಿಟ್ಟಿದ್ದಾರೆ. ಅಂದಮೇಲೆ ಚಿತ್ರದಲ್ಲಿ ಹೆಣ್ಣು ಮಗುವನ್ನು ಅದರ ಭ್ರೂಣಾವಸ್ಥೆಯಲ್ಲೇ ಚಿವುಟಿ ಹಾಕಲು ನೋಡುವ ಸ್ತ್ರೀದ್ವೇಷಿಗಳಿಗೆ ಅದು ತಪ್ಪು ಎಂಬ ಸಂದೇಶದ ಜೊತೆಗೆ ಹೆಣ್ಣಿನ ಹಿರಿಮೆಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಅದೆಲ್ಲ್ಲಾಸರಿ. ಅದರಲ್ಲಿ ಒಂದು ಅರ್ಥ ಗರ್ಭಿತವಾದ ಚಿತ್ರ ಮಾಡಿದ್ದಾರಾ..? ಎಂಬುದೇ ಪ್ರಶ್ನೆ.
ಚಿತ್ರದ ಆಶಯ ಚೆನ್ನಾಗಿದೆ. ಚಿತ್ರವನ್ನು ಯಾವ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ, ಯಾವ ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ಚಿತ್ರವನ್ನು ತೆರೆಗರ್ಪಿಸಲಾಗಿದೆ ಎಂಬುದು ಸ್ಪಷ್ಟ. ಏಕೆ ಹೀಗೆ ಎಂಬ ಪ್ರಶ್ನೆ ನನ್ನನ್ನು ಹಲವಾರು ಸಾರಿ ಕಾಡುತ್ತಲೇ ಇರುತ್ತದೆ.
ಒಂದು ಸಾಮಾಜಿಕ ಕಳಕಳಿಯ ಚಿತ್ರ ಎಂದಾಗ ಮೊದಲಿಗೆ ಅದು ಸಮಾಜಕ್ಕೆ ಅಂದರೆ ಜನರಿಗೆ ಮೊದಲು ತಲುಪಬೇಕು. ಆದರೆ ನಮ್ಮಲ್ಲಿ ಸಾಮಾಜಿಕ ಕಳಕಳಿಯ ಚಿತ್ರ, ಸಾಮಾಜಿಕ ಪರಿಣಾಮ ಬೀರುವ ಚಿತ್ರಗಳು ಸಮಾಜಕ್ಕೆ ತಲುಪಿಯೇ ಇರುವುದಿಲ್ಲ. ಅದು ಪ್ರಶಸ್ತಿ ಕಮಿಟಿಯ ನಾಲ್ಕು ಮಂದಿ ನೋಡಿ ಅದಕ್ಕೊಂದು ಪ್ರಶಸ್ತಿ ಕೊಟ್ಟುಬಿಟ್ಟಿರುತ್ತಾರೆ.ಆಮೇಲೆ ಸಬ್ಸಿಡಿ ಅದು ಇದು ಎಂದು ಚಿತ್ರಕರ್ಮಿಗಳ ಬಂಡವಾಳವನ್ನು ಸಂಪಾದಿಸುವ[?] ಕಾಯಕದಲ್ಲಿ ನಿರತರಾಗಿರುತ್ತಾರೆ.
ಹೆಣ್ಣು ಭ್ರೂಣ ಹತ್ಯೆ ಒಂದು ಘೋರ ಕೃತ್ಯ. ಅಂತಹುದರ ಬಗ್ಗೆ ಸಿನಿಮಾ ತೆಗೆದಾಗ ಅದು ಎಲ್ಲರಿಗೂ ಪರಿಣಾಮಕಾರಿಯಾಗಿ ತಲುಪಿದಾಗ ಕಥೆಯ ಆಶಯ ಈಡೇರಿ ಸಿನಿಮಾ ಸಾರ್ಥಕ ಎನಿಸಿಕೊಳ್ಳುತ್ತದೆ. ಉದಾಹರಣೆಗೆ ಲಗೇ ರಹೋ ಮುನ್ನಾಭಾಯಿ ಚಿತ್ರದಲ್ಲಿನ  ಗಾಂಧೀಜಿಯವರ ಶಾಂತಿ ಸಂದೇಶ. ಅದನ್ನು ಅಷ್ಟು ಚಂದವಾಗಿ ಸೊಗಸಾಗಿ ಮತ್ತು ಪರಿಣಾಮಕಾರಿಯಾಗಿ ಜನರ ಮುಂದಿಟ್ಟ ನಿರ್ದೇಶಕ ರಾಜಕುಮಾರ್ ಹಿರಾನಿಗೆ ದೊಡ್ಡ ಸಲಾಂ ಹೊಡೆಯಲೇ ಬೇಕಾಗುತ್ತದೆ. ಮುಖ್ಯವಾಹಿನಿಯಲ್ಲಿ ಸಾಮಾಜಿಕ ಕಳಕಳಿಯನ್ನು ಕುರಿತ ಚಿತ್ರಗಳು ಬರಬೇಕು...ಆಗಲೇ ಚಲನಚಿತ್ರವೆಂಬುದು ಬರೀ ಮನರಂಜನೆಯ ಮಾಧ್ಯಮವಾಗದೆ ಸಮಾಜದ ಒಂದು ಭಾಗವಾಗುತ್ತದೆ.ಮಷೀನ್ ಗನ್ ಪ್ರೀಚರ್, ಸೈಲೆನ್ಸಡ್, ಕಾಂಸ್ಟ೦ಟ್ ಗಾರ್ಡನರ್, ಹೆಲ್ಪ್ ಮುಂತಾದ ಚಿತ್ರಗಳೂ ಸಂದೇಶಮಯ ಚಿತ್ರಗಳೇ. ಅವೆಲ್ಲಾ ಸ್ವಲ್ಪ ಸಾಕ್ಷ್ಯಚಿತ್ರ ಮಾದರಿಯಲ್ಲಿ  ಇದ್ದರೂ ನಮ್ಮನ್ನು ರಂಜಿಸಿದ್ದವು..  ಚಿಂತನೆಗೆ ಒಳಪಡಿಸಿದ್ದವು. ಆದರೆ ಕನ್ನಡದಲ್ಲಿ ಇಂತಹ ಉದಾಹರಣೆಗಳು ತೀರಾ ಕಡಿಮೆ ಎನ್ನಬಹುದು. ಸಂದೇಶವಿದ್ದರೆ ಅದು ಮುಖ್ಯವಾಹಿನಿಯ ಚಿತ್ರವಾಗುವುದೇ ಇಲ್ಲ. ನಾವೇ ನಮ್ಮಲ್ಲಿನ ಪ್ರೇಕ್ಷಕರನ್ನು ವಿಂಗಡಿಸುತ್ತಿದ್ದೀವೇನೋ ಎನಿಸುತ್ತದೆ. ಮಹಿಳೆಯರ, ಪಡ್ಡೆ ಹುಡುಗರ, ಯುವಕರ ಹೀಗೆ. ಗರ್ಭದಗುಡಿ ಎಂದಾಕ್ಷಣ ಚಿತ್ರಮಂದಿರದಲ್ಲಿ ನೀವು ಹುಡುಕಿದರೂ ಒಬ್ಬೆ ಒಬ್ಬ ಕಾಲೇಜು ಹುಡುಗ ಸಿಕ್ಕುವುದಿಲ್ಲ. ಸುಮ್ಮನೆ ನಾನೇ ನನ್ನ ಗೆಳೆಯರನ್ನು ಗರ್ಭದಗುಡಿ ನೋಡಲು ಬರುತ್ತೀರಾ ಎಂದದ್ದಕ್ಕೆ ಅದೆಲ್ಲಾ ನಮಗಲ್ಲಾ ಗುರು ಎಂದು ಹೇಳಿದ್ದಲ್ಲದೆ ನನ್ನನ್ನು ನೋಡಿ ನಕ್ಕವರು ಇದ್ದಾರೆ.ಅದೆಲ್ಲಾ ಹೆಂಗಸರ ಚಿತ್ರ ಗುರು ಎಂದದ್ದಕ್ಕೆ ನಾನು ಬಿಡುತ್ತೇನೆಯೇ..? ಅಲ್ಲಾ ಮಾರಾಯಾ..ಭ್ರೂಣಹತ್ಯೆ ಎಂಬುದು ಬರೀ ಮಹಿಳೆಯರೇ ಮಾಡಿಸುವ ಕಾರ್ಯವಲ್ಲ. ಅಥವಾ ಅದರ ಬಗ್ಗೆ ಬರೀ ಹೆಂಗಸರೇ ತಿಳಿದುಕೊಳ್ಳಬೇಕಿಲ್ಲ ನಾವೂ ನೀವೂ ಅದರ ಬಗ್ಗೆ ತಿಳಿದುಕೊಳ್ಳಬೇಕು ಎಂದೆಲ್ಲಾ ಅವರಿಗೆ ಹೇಳಿದ್ದೆ. ಅದೇನೇ ಆದರೂ ಚಿತ್ರ ನೋಡಲು ಅವರ್ಯಾರು ಬರಲಿಲ್ಲ. ನನಗೋ ಅದೇನೋ ವಿಚಿತ್ರ ಕುತೂಹಲ. ಗರ್ಭದಗುಡಿ ಎಂಬ ಶೀರ್ಷಿಕೆಯಡಿ ಎಂಬತ್ತರ ಗಡಿಯಲ್ಲಿರುವ ಹಿರಿಯ ನಿರ್ದೇಶಕರು ಏನು ಮಾಡಿರಬಹುದು ಎಂದು...ಅದ್ಯಾವ ರೀತಿ ಸಂದೇಶ ಕೊಡಲು ಹೊರಟಿರಬಹುದು ಎಂದು... ಚಿತ್ರವನ್ನು ನೋಡಿದೆ. ನೋಡುತ್ತಾ ನೋಡುತ್ತಾ  ಇಷ್ಟೆಲ್ಲಾ ವಿಷಯಗಳು ಮನಸ್ಸಿನಲ್ಲಿ ಹಾದುಹೋದವು.
ಕೆಲವು ಅಂಶಗಳು:
*ಚಿತ್ರದ ಪೋಸ್ಟರ್ ನಲ್ಲಿ ಮದರ್ ತೆರೇಸಾ ಫೋಟೋ ಇದೆ. ಅದಕ್ಕೆ ಸ್ಪಷ್ಟೀಕರಣವೆಂದರೆ ಚಿತ್ರದಲ್ಲಿ ನಾಯಕಿಯ ಹೆಸರು ತೆರೇಸಾ.
*ಸ್ತ್ರೀ ಶೋಷಣೆಯ ವಿರುದ್ಧದ ಈ ಚಿತ್ರದಲ್ಲಿ ಶೋಷಣೆ ಮಾಡುವವರಲ್ಲಿ ಸ್ತ್ರೀಯರೂ ಇದ್ದಾರೆ.
*ಚಿತ್ರಮಂದಿರದಲ್ಲಿ ಚಿತ್ರದೊಳಗಿದ್ದಷ್ಟೂ ಜನರಿರಲಿಲ್ಲ.
 ಇನ್ನು ಸಿನೆಮಾದ ಕಥೆ ಏನು..? ಹೇಗಿತ್ತು ಎಂಬ ವಿಷಯಗಳು ಅಷ್ಟೇನೂ ಆಸಕ್ತಿಕರವಲ್ಲ. ಏನಂತೀರಿ.?

No comments:

Post a Comment