Monday, July 1, 2013

ಪ್ರಾಣ ಕೊಡುವ, ಪ್ರಾಣ ತೆಗೆಯುವ ಪ್ರೇಮಿಗಳು...

ಆತ ಬುದ್ದಿ ನೆಟ್ಟಗಿರದವ. ಚಿತ್ರ ಪ್ರಾರಂಭವಾದ ಹತ್ತು ನಿಮಿಷಕ್ಕೆ ಇದು ನೋಡುಗನಿಗೆ ಗೊತ್ತಾಗಿ ಬಿಡುತ್ತದೆ.ಆಕೆ ಬುದ್ದಿ ಮಾಂದ್ಯ ಹೆಣ್ಣು ಮಗಳು. ಅವಳ ಪರಿಸ್ಥಿತಿಯಿಂದಾಗಿ ಆಕೆ ಮನೆಯವರಿಗೆ ಭಾರ. ಆದರೆ ಸಂಬಂಧಗಳ ಕೊಂಡಿಯಿಂದ ಸುಲಭವಾಗಿ ಕಳಚಿಕೊಳ್ಳುವುದಾದರೂ ಹೇಗೆ..ಎಂಬುದು ಮನೆಯವರ ಪ್ರಶ್ನೆ. ಇವನೋ ತನ್ನ ಹುಚ್ಚು ಹುಚ್ಚಾಟಗಳಿಂದ ಮನೆಯವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಹಿಂಸಾಜೀವಿಯಾಗಿದ್ದಾನೆ. ವಯಸ್ಸು ಮೂವತ್ತಾದರೂ ಜವಾಬ್ದಾರಿಯಿಲ್ಲ ಎಂಬುದು ಮನೆಯವರ ಆರೋಪ. ಮದುವೆಯಾಗಿಲ್ಲ.
ಅದೊಂದು ದಿನ ಅಕೆಯನ್ನು ಸಂಧಿಸುವ ಅವಕಾಶ ಆಚನಾಕ್ಕಾಗಿ ನಮ್ಮ ನಾಯಕನಿಗೆ ಒದಗಿಬರುತ್ತದೆ. ಅವರ ಮನೆಗೆ ಶುಭಾಶಯ ಕೋರಲು ಹೋಗುವವನಿಗೆ ಆ ಮನೆಯವರು ಆಕೆಯನ್ನು ದೂರತಳ್ಳುವ ಹುನ್ನಾರ ಮಾಡಿರುವುದು ಗೊತ್ತಾಗುತ್ತದೆ. ಮುಂದೆ ಆಕೆಯನ್ನು ನಾಯಕ ಸಂಧಿಸುತ್ತಾನೆ. ಇಡೀ ಚಿತ್ರ ಅಪರೂಪದ ಪ್ರೇಮಕಥೆಯ ಚಿತ್ರವಾಗಿ ಮಾರ್ಪಡುತ್ತದೆ.
2002 ರಲ್ಲಿ ಬಿಡುಗಡೆಯಾದ ಓಯಸಿಸ್ ಚಿತ್ರದ ಕಥೆ ಕೇಳುವುದರಲ್ಲಿ ಮಜಾವಿಲ್ಲ. ನೋಡುವುದರಲ್ಲಿ ಸೊಬಗಿದೆ. ಒಂದು ಅನನ್ಯವಾದ ಚಿತ್ರ ನೋಡಾದ ಮೇಲೆ ನಮ್ಮನ್ನು ಆವರಿಸುತ್ತದೆ. ಕಲಾವಿದರಿಬ್ಬರೂ ನಟಿಸಿದ್ದಾರಾ..ಅಥವಾ ಅವರು ಇರುವುದೇ ಹಾಗಾ ಎಂಬ ಅನುಮಾನ ಮೂಡುತ್ತದೆ ಎಂದರೆ ಅದು ಅತಿಶಯೋಕ್ತಿ ಎನಿಸದು.  
ಒಬ್ಬ ಒಳ್ಳೆಯ ಪ್ರೇಮಿ ಯಾರು ಎನ್ನುವ ಪ್ರಶ್ನೆ ನನ್ನನ್ನು ಆವಾಗಾವಾಗ ಕಾಡತೊಡಗುತ್ತದೆ. ಮೊನ್ನೆ ರಾ೦ಝನಾ ಚಿತ್ರವನ್ನು ನೋಡಿದಾಗ ನನಗೆ ಒಂದು ಪ್ರಶ್ನೆ ಕಾಡತೊಡಗಿತು. ಪ್ರತಿಕ್ರಿಯೆ ಬರದಿದ್ದರೂ ಒಬ್ಬ ಹುಡುಗಿಯನ್ನು ಅಂಥಾ ಪರಿ ಪ್ರೀತಿಸಬೇಕಾ.? ಎಂದು. ಈಗ ನೋಡಿ ಹಿಂದೆ ಬೀಳುವುದು ಅವಳನ್ನು ಒಲಿಸಿಕೊಳ್ಳುವುದು ಓಕೆ. ಆದರೆ ಆಕೆ ಪ್ರತಿಕ್ರಿಯಿಸದಿದ್ದಾಗ ಅಥವಾ ಸಂಪೂರ್ಣವಾಗಿ ನಾವೇ ಆಕೆಗೆ ಬೇಡದಾದಾಗ ಅಥವಾ ನಮ್ಮ ಮೇಲೆ ಅಂತಹ ಭಾವನೆ ಆಕೆಗೆ ಬರದಿದ್ದಾಗಳೂ ಆಕೆಯನ್ನು ಪ್ರೀತಿಸುವುದು, ನನ್ನನ್ನು ಪ್ರೀತಿಸಲೇ ಬೇಕೆಂದು ಹಠ ಮಾಡುವುದು ಸರಿಯಾ..? ಡರ್ರ್ ಚಿತ್ರದ ಶಾರುಕ್ ಖಾನ್ ಪ್ರೀತಿಸುವ ನೆಪದಲ್ಲಿ ಕೊಟ್ಟ ಕಿರುಕುಳ ಎಂತಹದ್ದು ನಮಗೂ ನಿಮಗೂ ಗೊತ್ತಿದೆ. ಫೋನ್ ಬಂದರೆ ಸಾಕು ಆಕೆ ಬೆಚ್ಚಿ ಬೆದರಬೇಕು ಆ ರೀತಿ ಕಾಡಿದ, ಒಂದು ಕ್ಷಣವೂ ನೆಮ್ಮದಿಯಿಂದ ಇರಲು ಬಿಡದ ಅವನನ್ನು ಪ್ರೀತಿಸುವುದಾದರೂ ಹೇಗೆ ಮತ್ತು ಏಕೆ..?
ಅಕಸ್ಮಾತ್ ಒಂದು ಹುಡುಗಿ ನಮಗೆ ಇಷ್ಟವಿಲ್ಲದಿದ್ದರೂ ನಮ್ಮ ಹಿಂದೆ ಬಿದ್ದರೆ ನಮಗೆನನ್ನಿಸುತ್ತದೆ.?
ಆ ಕಾರಣದಿಂದಾಗಿಯೇ ನನಗೆ ಕುಂದನ್ ಪಂಡಿತ್ ಗಿಂತ ಆರ್ಯ ಇಷ್ಟವಾಗುತ್ತಾನೆ. ಆಕೆಯ ಮೇಲೆ ಅಪಾರ ಮನಸಿದೆ. ಆದರೆ ಈಗಾಗಲೇ ಆಕೆ ಬೇರೆಯವರನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದಾಗ ಅವಳನ್ನು ಆಕೆಯ ಪ್ರಿಯಕರನ ಜೊತೆ ಒಂದು ಮಾಡುವುದಕ್ಕೆ ನಿಲ್ಲುವ ಆರ್ಯ ತ್ಯಾಗಮಯಿ ಎನಿಸುವುದಿಲ್ಲ, ಇಡೀ ಚಿತ್ರದಲ್ಲಿ ಆ ಪಾತ್ರ ಎಲ್ಲೂ ಸ್ವಕರುಣೆಯಿಂದ ನರಳುವುದಿಲ್ಲ.
ಆದರೆ ಕುಂದನ್ ಪಂಡಿತ್ ಜೊತೆಯಲ್ಲಿ ತಾನು ಜೊಯಳನ್ನು ಪ್ರೀತಿಸಿದ್ದಷ್ಟೇ ತನ್ನನ್ನು ಪ್ರೀತಿಸುತ್ತಿರುವ ತನ್ನ ಗೆಳತಿಯ ಕಡೆಗೆ ಗಮನವನ್ನೇ ಹರಿಸುವುದಿಲ್ಲ. ಆಕೆಯನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾನೆಯೇ ಹೊರತು ಆಕೆಯ ಪ್ರೀತಿಯನ್ನು ಕೊನೆಯವರೆಗೂ ಅರ್ಥ ಮಾಡಿಕೊಳ್ಳುವುದಿಲ್ಲ. ಜೋಯಾಳಿಗೆ ಮದುವೆ ನಿಶ್ಚಯವಾಗಿದೆ ಎಂದು ತಿಳಿದಾಕ್ಷಣವೇ ಹಠಕ್ಕಾಗಿ ಗೆಳತಿಯನ್ನು ಮದುವೆಯಾಗಲು ಸಿದ್ಧನಾಗಿ ಆಕೆಯ ಮುಂದೆ ದೊಡ್ಡ ದೊಡ್ಡ ಮಾತನ್ನಾಡುವ ಕುಂದನ್ ಜೋಯಾಳ ಮದುವೆ ನಿಂತ ಗಡಿಬಿಡಿಯಲ್ಲಿ ತನ್ನ ಮದುವೆಯನ್ನು ನಿಲ್ಲಿಸುತ್ತಾನೆ. ಪಾಪ ಆಕೆಯ ಗತಿ..? ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಕುಂದನ್ ಹೇಗೆ ಹೀರೋ ಆಗುತ್ತಾನೆ..
ಇದೆ ಕುಂದನ್ ಹಿನ್ನೆಲೆ ಸಾಧುತನದ್ದು. ಹಾಗಾಗಿ ಬಚಾವ್..ಅಕಸ್ಮಾತ್ ಒರಟು ಹಿನ್ನೆಲೆಯವನೋ, ಕಟು ಮನಸ್ಸಿನವನೋ ಆಗಿದ್ದರೆ..
ಮುಖಕ್ಕೆ ಬ್ಲೇಡ್ ಹಾಕುತ್ತಿದ್ದನಾ..?ಮುಖಕ್ಕೆ ಆಸಿಡ್ ಎರಚುತ್ತಿದ್ದನಾ..? ಸಾಧ್ಯತೆಗಳು ಇಲ್ಲ ಎನ್ನುವಂತಿಲ್ಲ.
ಇರಲಿ. ಇದೊಂದು ಸುಮ್ಮನೆ ತಲೆಹರಟೆಯ ಆಲೋಚನೆಗಳು ಮೊನ್ನೆ ಶೋಭಾ ಡೇ ಬರೆದ ಲೇಖನವನ್ನು ಓದಿದ ಮೇಲೆ ತಲೆಯಲ್ಲಿ ಹಾದುಹೋಯಿತು.
ಕೊಸರು: ಹೀಗೆ ರಸ್ತೆಯಲ್ಲಿ ಹೋಗುವಾಗ ಚಂದ್ರ ಚಿತ್ರದ ಪೋಸ್ಟರ್ ಕಣ್ಣಿಗೆ ಬಿದ್ದಿತು. ಅತ್ಯುತ್ತಮ ವಸ್ತ್ರವಿನ್ಯಾಸವನ್ನು ಹೊಂದಿರುವ ಸುಂದರಿ ಶ್ರೇಯಳನ್ನು ಹಿಂದಿನಿಂದ ಪ್ರೇಂ ಬಳಸಿರುವ ರೋಮ್ಯಾಂಟಿಕ್ ಪೋಸ್ಟರ್ ಅದು. ಎಲ್ಲಾ ಸರಿ. ಆದರೆ  ಲಹರಿಯಲ್ಲಿರುವ ಶ್ರೇಯಾಳ ಕೊರಳಿಗೆ ನಾಯಕ ನಟ ಪ್ರೇಂ, ದಂಡುಪಾಳ್ಯ ಹಂತಕನೋಪಾದಿಯಲ್ಲಿ ತನ್ನ ಖಡ್ಗವನ್ನು ಹಿಡಿದು ನಮ್ಮೆಡೆಗೆ ವೀರಾವೇಶದಿಂದ ನೋಡುತ್ತಿರುವುದು ಏನನ್ನು ಸೂಚಿಸುತ್ತದೆ ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತು.ಅಂತಹ ರೋಮ್ಯಾಂಟಿಕ್ ಮೂಡಿನಲ್ಲೂ ಕೊರಳಿಗೆ ಖಡ್ಗ ಹಿಡಿದು ಯಾರನ್ನೂ ಹೆದರಿಸುತ್ತಿರಬಹುದು ಅಥವಾ ಮೆಚ್ಚಿಸುತ್ತಿರಬಹುದು..?
ರೂಪಾ ಅಯ್ಯರ್ ಅವರನ್ನೇ ಕೇಳಬೇಕು.

No comments:

Post a Comment