Saturday, July 6, 2013

ಕಾಡುವ ಬರಹಗಾರರ ಕೃತಿಗಳು..

ನಾನು ಯಂಡಮೂರಿ ವೀರೇಂದ್ರನಾಥರ ಕಾದಂಬರಿಗಳನ್ನು ಓದುತ್ತಿದ್ದಾಗ ನನ್ನ ಹುಡುಕುವ,  ಅವರ ಕಾದಂಬರಿಗಳಿಗಾಗಿ ಪರಿತಪಿಸುವ ಪರಿ ನೋಡಿ ನನ್ನ ಗೆಳೆಯರು ನೀನು ಗ್ರೇಟ್ ಗುರು ಎನ್ನುತ್ತಿದ್ದರು. ನಾನು ಹಾಗೆಯೇ ಇದ್ದೆ. ನಾನು ಮೊದಲು ಯಂಡಮೂರಿಯವರ ಕಾದಂಬರಿ ದುಡ್ಡು ಟು ದಿ ಪವರ್ ಆಫ್ ದುಡ್ಡು ಓದಿದ್ದೆ. ಅದನ್ನು ನಾನು ಓದಿದ ಪರಿಯೇ ಹಾಗಿತ್ತು. ಬೆಳಿಗ್ಗೆ ಹತ್ತು ಘಂಟೆಗೆ ತಿಂಡಿ ತಿಂದು ಕುಳಿತವನು ಮದ್ಯಾಹ್ನ ಊಟವನ್ನೂ ಮಾಡದೆ ಸಂಜೆ ಐದು ಘಂಟೆಗೆ ಪೂರ್ತಿಯಾಗಿ ಓದಿ ಮತ್ತೆ ಪ್ರಮುಖವೆನಿಸಿದ್ದ ಇಷ್ಟವಾಗಿದ್ದ ಪುಟಗಳನ್ನ ಮತ್ತೊಮ್ಮೆ ತಿರುವಿ ಹಾಕಿದ್ದೆ. ಕಾದಂಬರಿಯ ನಿರೂಪಣೆ ಮತ್ತು ಅದರಲ್ಲಿದ್ದ ದ್ರವ್ಯ ನನ್ನನ್ನು ಹಿಡಿದು ಕೂರಿಸಿಬಿಟ್ಟಿತ್ತು. ಪಕ್ಕ ಸಿನಿಮಾ ಶೈಲಿಯ ಕಾದಂಬರಿ ಅದು. ಅಲ್ಲಿಯವರೆಗೆ ನಾನು ಎಸ್.ಎಲ್. ಭೈರಪ್ಪನವರ ಅದುವರೆವಿಗೂ ಪ್ರಕಟವಾಗಿದ್ದ ಕಾದಂಬರಿ ಎಲ್ಲವನ್ನೂ ಓದಿದ್ದೆ. ಹಾಗೆ ಆನಕೃ, ತರಾಸು, ಕೆಟಿ ಗಟ್ಟಿ,ಮಾಸ್ತಿ, ಸಾಯಿಸುತೆ, ...ಹೀಗೆ ಅಸಂಖ್ಯಾತ ಕಾದಂಬರಿಕಾರರ ಕಾದಂಬರಿಗಳನ್ನು ಓದಿದ್ದೆನಾದರೂ ಈ ರೀತಿಯ ಸಿನಿಮೀಯ ಕಾದಂಬರಿ ಓದಿರಲಿಲ್ಲ. ಆವಾಗ ಥ್ರಿಲ್ಲರ್ ಪುಸ್ತಕಗಳಲ್ಲಿ ಬರುತ್ತಿದ್ದ ನರಸಿಂಹಯ್ಯ, ಸಾಕೃ ಪ್ರಕಾಶ, ಸಾಸ್ಕಾಮೂರ್ತಿ, ಕೌಂಡಿನ್ಯ ಮುಂತಾದವರ ಇದೆ ರೀತಿಯ ಕಾದಂಬರಿಗಳನ್ನು ಓದಿದ್ದೆನಾದರೂ ಯಂಡಮೂರಿಯ ಕಾದಂಬರಿ ಕೊಟ್ಟ ಮಜಾವನ್ನು ಅದ್ಯಾವುದೂ ಕೊಟ್ಟಿರಲಿಲ್ಲ. ಅದಾದ ಮೇಲೆ ಶುರುವಾಯಿತು ಯಂಡಮೂರಿಯವರ ಕಾದಂಬರಿ ಓದುವ ಹುಚ್ಚು. ಹುಡುಕಿ ಹುಡುಕಿ ಅವರು ವರ್ಷಗಟ್ಟಲೆ ಬರೆದಿದ್ದನ್ನು ತಿಂಗಳಲ್ಲಿ ಓದಿ ಮುಗಿಸಿದ್ದೆ. ಹಾಗಾಗಿ ನನ್ನ ಬಗ್ಗೆ ಗೆಳೆಯ ಹೊಗಳಿದಾಗ ನನಗೂ ಹಾಗೆಯೇ ಅನಿಸಿತ್ತು. ಹೌದಲ್ಲ ನನ್ನಂತಹ ಯಂಡಮೂರಿಯವರ ಕಾದಂಬರಿ ಅಭಿಮಾನಿ ಜಗತ್ತಿನಲ್ಲಿಯೇ ಇರಲಿಕ್ಕೆ ಸಾಧ್ಯವೇ ಇಲ್ಲ ಎನಿಸಿತ್ತು. ನಾನು ಗರ್ವದಿಂದ ಬೀಗಿದ್ದೆ.
ಆದರೆ ಅದೊಂದು ದಿನ ಗೆಳೆಯ ಚಂದ್ರ ಅವನ ಸಹಪಾಠಿಯನ್ನು ನನಗೆ ಪರಿಚಯಿಸಿದ್ದ. ‘ಇವನೂ ಯಂಡಮೂರಿಯ ಅಭಿಮಾನಿ ..ನೋಡು ನಿನಗೆ ಜೋಡಿ ಸಿಕ್ಕಂತಾಯಿತು..” ಎಂದ. ನನಗೂ ಖುಷಿಯಾಯಿತು. ಓದಿದ ಮೇಲೆ, ನೋಡಿದ ಮೇಲೆ ಅದರ ಬಗ್ಗೆ ಮಾತನಾಡಲು ಯಾರೂ ಇರದಿದ್ದರೆ ಹೇಗೆ..? ಆದರೆ ನಾನೇ ಯಂಡಮೂರಿ ಕಾದಂಬರಿಯ ಅದ್ಭುತ ಅಭಿಮಾನಿ ಓದುಗನಾಗಿರುವುದರಿಂದ ಇವನ್ಯಾವ ಲೆಕ್ಕ ಎನಿಸದಿರಲಿಲ್ಲ. ಆದರೆ ವಿಷಯವೇ ಬೇರೆಯಿತ್ತು. ಮೈಸೂರಿನ ಪಕ್ಕದ ಆತ ಒಂದು ಯಂಡಮೂರಿಯವರ ಕನ್ನಡ ಅನುವಾದಿತ ಕೃತಿ ಓದಿದ್ದಾನೆ. ಇಷ್ಟವಾಗಿದೆ. ಆದರೆ ಅದು ಅನುವಾದ ಎಂದು ಗೊತ್ತಾದಾಗ ಅದ್ಯಾಕೋ ಒರಿಜಿನಲ್ ಎನಿಸಿಲ್ಲ. ಯಂಡಮೂರಿಯವರೇ ಬರೆದ ತೆಲುಗು ಮೂಲ ಕೃತಿಯನ್ನೇ ಓದಬೇಕೆನ್ನಿಸಿ ನಿರ್ಧರಿಸಿದ್ದೆ ತೆಲುಗು ಕಲಿಯಲು ಪ್ರಾರಂಭಿಸಿ, ಕಲಿತು ಒಂದಷ್ಟು ಓದಿ ಆನಂತರ ಯಂಡಮೂರಿಯವರ ಎಲ್ಲಾ ಕಾದಂಬರಿಯನ್ನೂ ತೆಲುಗು ಭಾಷೆಯಲ್ಲಿ ಓದಿಬಿಟ್ಟಿದ್ದ ಆಸಾಮಿ ಅದ್ಭುತ ಅಭಿಮಾನಿ ಅವನು.
ಅವನ ಬಗ್ಗೆ ಗೊತ್ತಾದ ನಂತರ ನಾನೇ ಅದ್ಭುತ ಓದುಗನೆಂದು ಕುಣಿದಾಡುತ್ತಿದ್ದ ನನಗೆ ತಕ್ಕ ಶಾಸ್ತಿಯಾದಂತೆನಿಸಿತ್ತು.
ವಿಷಯ ಅದಲ್ಲ. ಒಬ್ಬ ಬರಹಗಾರನ ತಾಕತ್ತೇ ಅಂತಹದು. ಅದಾದ ಮೇಲೆ ತುಂಬಾ ಬರಹಗಾರರ ಕಾದಂಬರಿ ಓದಿದ್ದೇನೆ. ಅವುಗಳಲ್ಲಿ ಸ್ಲಮ್ ಡಾಗ್ ಮಿಲಿಯನರ್ ಕಾದಂಬರಿಯನ್ನು ಅದೇ ರೀತಿ ಓದಿದ್ದೆ. ನನಗಿಷ್ಟವಾದದ್ದು ವಿಕಾಸ್ ಸ್ವರೂಪ್ ಶೈಲಿ ಮತ್ತು ಚಿಕ್ಕಚಿಕ್ಕ ವಿಷಯಕ್ಕೂ ಅವರು ಕೊಡುವ ವಿವರ. ಉದಾಹರಣೆಗೆ ಸ್ಲಮ್ ಡಾಗ್ ಕಾದಂಬರಿಯನ್ನು ಓದುವಾಗ ನನ್ನ ಕಣ್ಣ ಮುಂದೆಯೇ ಮುಂಬಯಿಯ ಸ್ಲಂ ಎದ್ದು ಬಂದಂತೆ ಭಾಸವಾಗಿತ್ತು. ಅದಾದ ನಂತರ ಅವರದೇ ಸಿಕ್ಸ್ ಸಸ್ಪೆಕ್ಟ್ಸ್ ಓದಿದೆ. ಅದರಲ್ಲಿ ಆರು ವಿಭಿನ್ನ ವರ್ಗದವರ ಕಥೆಯಿದೆ. ವಿಷಯ ಅದಲ್ಲ. ಆರು ಜನರ ಹಿನ್ನೆಲೆಯನ್ನು ವಿಕಾಸ್ ನಮ್ಮ ಮುಂದಿಡುವ ಪರಿ ಅದ್ಭುತ . ಒಂದು ಕಾದಂಬರಿಗಾಗಿ ಅವರ ಅದ್ಯಯನ ಇದೆಯಲ್ಲ ನಿಜಕ್ಕೂ ಮೆಚ್ಚಲಾರ್ಹ. ಹಾಗಂತ ಬರೀ ಸಂಶೋಧನೆಯೇ ಉತ್ತಮ ಕಾದಂಬರಿ ಆಗಲಾರದು. ಅದಕ್ಕೆ ತಕ್ಕಂತಹ ಸೃಜನಶೀಲತೆಯೂ ಬೇಕು.
ವಿಕಾಸ್ ಒಂದರ ಹಿಂದೆ ಒಂದರಂತೆ ಕಾದಂಬರಿ ಬರೆದವರೂ ಅಲ್ಲ. ಇದುವರೆವಿಗೂ ಬರೀ ಮೂರೇ ಕಾದಂಬರಿ ಬರೆದಿರುವ ವಿಕಾಸ್ ಪ್ರತಿ ಕಾದಂಬರಿಯ ವಸ್ತು-ವಿಷಯಕ್ಕೆ ವರ್ಷಗಟ್ಟಲೆ ಅದ್ಯಯನ ಮಾಡಿರುವುದು ಕಾದಂಬರಿ ಓದುವಾಗ ನಮಗೆ ಗೊತ್ತಾಗುತ್ತದೆ. ಅವರ ಮೊದಲ ಕಾದಂಬರಿ ಕ್ಯೂ ಅಂಡ್ ಎ [ಸ್ಲಂ ಡಾಗ್ ಮಿಲಿಯನರ್] ಬಿಡುಗಡೆಯಾದದ್ದು 2005 ರಲ್ಲಿ. ಅದಾದ ನಂತರ ಸಿಕ್ಸ್ ಸಸ್ಪೆಕ್ತ್ಸ್ 2008 ರಲ್ಲಿ ಬಿಡುಗಡೆಯಾಯಿತು. ಅದಾದ ಐದು ವರ್ಷಗಳ ನಂತರ ಅವರ ಈ ಹೊಸ ಕಾದಂಬರಿ ಆಕ್ಸಿಡೆಂಟಲ್ ಅಪ್ಪ್ರೆಂಟೈಸ್ ಬಿಡುಗಡೆಯಾಗಿದೆ. ಅಂದರೆ ಗಮನಿಸಿ ಪ್ರತಿ ಕಾದಂಬರಿಯ ನಡುವಿನ ಅಂತರವನ್ನು.ಮೊನ್ನೆ ಗೊತ್ತಾದಾಗ ಮತ್ತೆ ಓದಲಿಕ್ಕೆ ಏನೋ ಸಿಕ್ಕಿದೆ ಎನಿಸಿ ಖುಷಿಯಾದ್ದಂತೂ ನಿಜ. ಹಾಗಾಗಿ ಅದನ್ನು ಉತ್ಸುಕತೆಯಿಂದ ಓದಲು ಕಾಯುತ್ತಿದ್ದೇನೆ. ಓದಿದ ಮೇಲೆ ಬೇಕಾದರೆ ಅದರ ಬಗ್ಗೆ ಒಂದಷ್ಟು ಮಾತಾಡಬಹುದು.
ನಿಮ್ಮನ್ನು ಆ ರೀತಿ ಕಾಡಿ ಕಾಡಿ ಓದಿಸಿಕೊಂಡ ಕಾದಂಬರಿ/ಕಾದಂಬರಿಕಾರ ಯಾವುದು/ಯಾರು? 

2 comments:

  1. ನಂಗೆ ತುಂಬಾ ಇಷ್ಟ ಆಗಿ ಕಾಡಿದ್ದು Erich Segal's Nothing Lasts Forever and Doctors, Aynrand's Fountainhead
    ಕನ್ನಡದ ಸ್ವಪ್ನ ಸಾರಸ್ವಾತದಿಂದ ಇತ್ತೀಚಿಗೆ ತಮ್ಮ ಬರಹವನ್ನು ಓದಿದ ಮೇಲೆ ಓದಿದ ರೂಪದರ್ಶಿವರೆಗಿನ ಎಷ್ಟೋ ಕಾದಂಬರಿಗಳು.ಯಂಡಮೂರಿಯವರನ್ನ ಅಷ್ಟಾಗಿ ಓದಿಲ್ಲ...ಪ್ರಯತ್ನ ಮಾಡ್ತೇನೆ

    ReplyDelete
  2. Yenasmoor all novels I read and having avara prarrhana anondho bramha are nice yavdadru beka sir

    ReplyDelete