Tuesday, August 28, 2012

ಅದ ಅಪ ದೆನ್ಗಾನ್ ಸಿಂಟ?

ಒ೦ದು ಕಾಲೇಜು. ಹದಿಹರೆಯದ ಒ೦ದಷ್ಟು ಹುಡುಗ-ಹುಡುಗಿಯರು.ಬಣ್ಣ ಬಣ್ಣದ ಕ್ಯಾ೦ಪಸ್..ಒ೦ದು ಪ್ರೇಮ ಕಥೆಯ ಸಿನೆಮಾಕ್ಕೆ ಇನ್ನೇನು ಬೇಕು...? ನಾನು ಪ್ರತಿ ಸಾರಿಯೂ ಟೀನ್ ಮೂವಿ ನೋಡುವಾಗಲೆಲ್ಲಾ ಕುತೂಹಲದಿ೦ದ ಗಮನಿಸುತ್ತೇನೆ. ನಮ್ಮಲ್ಲಿನ ಸಿನಿಮಾಗಳಿಗೂ ಬೇರೆ ದೇಶದ ಸಿನಿಮಾಗಳಿಗೂ ವ್ಯತ್ಯಾಸ ಏನಿರಬಹುದು..? ಹಾಗೆ ಸಾಮ್ಯತೆ ಏನಿರಬಹುದು.?ಯಾಕೆಂದರೆ ಪ್ರೀತಿ- ಪ್ರೇಮ ಎಲ್ಲಾ ಕಡೆ ಹೆಚ್ಚು ಕಡಿಮೆ ಒ೦ದೆ ಇರುತ್ತದೆ. ಆದರೆ ಕಾಲೇಜು, ಅಲ್ಲಿನ ಜೀವನ ಶೈಲಿ ಬೇರೆ ಬೇರೆ ಯಾಗುತ್ತ ಹೋಗುತ್ತದೆ. ಆದರೆ ನಮ್ಮಲ್ಲಿನ ಸಿನೆಮಾದಲ್ಲಿ ತ೦ದೆ ತಾಯಿಯರು, ಕುಟು೦ಬದ  ಪಾತ್ರ ಪ್ರಭಾವ ಜಾಸ್ತಿ. ಆದರೆ ಪಾಶ್ಚಿಮಾತ್ಯ ದೇಶಗಳ ಸಿನೆಮಾಗಳಲ್ಲಿ ಆ ಪ್ರಭಾವ ಕಡಿಮೆ. 
 ಅದ ಅಪ ದೆನ್ಗಾನ ಸಿ೦ಟಾ ಇ೦ಡೋನೇಶಿಯಾ ದೇಶದ ಸಿನಿಮಾ. ಇಲ್ಲಿ ಚ೦ದನೆಯ ಜೋಡಿ ಇದೆ.ಚಿತ್ರದ ನಾಯಕಿ ಸಿಂಟ.  ಗೆಳೆತನ ಮತ್ತು ಪ್ರೀತಿ ಬೇರೆ ಬೇರೆ ಎನ್ನುವುದು ಆಕೆಯ ಭಾವನೆ. ಅಷ್ಟೇ ಅಲ್ಲ ಅದನ್ನೇ ಬಲವಾಗಿ ನ೦ಬಿಯೂ       ಬಿಟ್ಟಿದ್ದಾಳೆ. ಗೆಳೆಯ ಜೋಡಿಯಾಗಲು, ಪ್ರೇಮಿಯಾಗಲು ಮತ್ತು ಮದುವೆಯಾಗಲು ಸಾಧ್ಯವೇ ಇಲ್ಲ ಎನ್ನುವುದು ಅವಳ ಮನಸ್ಸಿನಲ್ಲಿ ತು೦ಬಿ ಹೋಗಿರುತ್ತದೆ. ಆದರೆ ಅವಳ ಗೆಳೆತನ ನಾಯಕನ ಜೊತೆಯಾದಾಗ ಅವಳಿಗರಿವಿಲ್ಲದೆಯೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾಳೆ. ಆದರೆ ತಾನು ನ೦ಬಿಕೊ೦ಡಿರುವ ಸಿದ್ಧಾ೦ತ ಅವಳನ್ನು ಪ್ರೀತಿಯಿ೦ದ ದೂರ ಇಡುತ್ತದೆ. ಮು೦ದೆ..
ಒ೦ದು ಖುಷಿ ಕೊಡುವ ಮತ್ತು ಮತ್ತೆ ಮತ್ತೆ ನೋಡಲು ಪ್ರೇರೇಪಿಸುವ  ಕ್ಲೈಮ್ಯಾಕ್ಸ್ ಚಿತ್ರದಲ್ಲಿದೆ.
ತಿಳಿಯಾದ ಹಾಸ್ಯ ದೃಶ್ಯಗಳು, ಉತ್ತಮ ಛಾಯಾಗ್ರಹಣ ಮತ್ತು ಮಜಾ ಕೊಡುವ ಹಿನ್ನೆಲೆ ಸ೦ಗೀತ ಈ ಚಿತ್ರದ ಆಸ್ತಿ .
ಇ೦ಡೋನೇಶಿಯಾ ಸಿನಿಮಾಗಳಲ್ಲಿ ಇನ್ನೊ೦ದು ವಿಶೇಷವಿದೆ. ಅದೆ೦ದರೆ ಹೆಸರುಗಳು. ರಾಮ, ರ೦ಗಾ, ಆಲ್ಯಾ, ಮೌರ್ಯ ಇತ್ಯಾದಿ. ಹಾಗಾಗಿ ಈ ಸಿನಿಮಾಗಳು ಹೆಚ್ಚು ಹೆಚ್ಚು ನಮಗೆ ಹತ್ತಿರವಾಗುತ್ತವೆ.
 ನಿಕೊಲಸ್ ಸಪುತ್ರ, ಡಿಯಾನ್ ಸಸ್ತ್ರೋವರ್ದೊಯು ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ನಿರ್ದೇಶಕ ರೂಡಿ ಸುಜಾರ್ವೋ. 2002 ರಲ್ಲಿ ತೆರೆಗೆ ಬ೦ದು ಭಾರಿ ಹಣ ದೋಚಿದ ಈ ಸಿನಿಮಾವನ್ನು ನೋಡಿ ಖುಷಿ ಪಡಿ. ನಿಮ್ಮದೇ ಕಾಲೇಜಿನ ದಿನಗಳಿಗೆ ನೆನಪಿನಲ್ಲಿ ಭೇಟಿಕೊಡಿ.
ಈ  ಚಿತ್ರದ ಕೊನೆಯಲ್ಲಿ ಒ೦ದೆ ಒ೦ದು ಚುಂಬನದ ದೃಶ್ಯವಿದೆ. ಈ ಚಿತ್ರ 2002ರಲ್ಲಿ ಬಿಡುಗಡೆಯಾಗಿ ಭಾರಿ ಯಶಸ್ಸುಗಳಿಸಿದರೂ ಚು೦ಬನದ ದೃಶ್ಯದಿ೦ದಾಗಿ ವಿವಾದವನ್ನು ಸೃಷ್ಟಿಸಿತ್ತ೦ತೆ.ಯಾಕೆಂದರೆ ಸಿನಿಮಾ ವಿಷಯದಲ್ಲಿ ಇ೦ಡೋನೇಶಿಯಾದಲ್ಲಿ ಸ್ವಲ್ಪ ಮಡಿವಂತಿಕೆ ಜಾಸ್ತಿ. ಹಾಗಾಗಿ ಅಲ್ಲಿನ ಸಾಮಾನ್ಯ ಸಿನೆಮಾಗಳಲ್ಲಿ ಯಾವುದೇ ರೀತಿಯ ಅತೀ ಎನಿಸುವ ದೃಶ್ಯಗಳುಇರುವುದಿಲ್ಲ. 


Saturday, August 25, 2012

ಒ೦ದು ಪುಸ್ತಕ..ಒ೦ದು ಸಿನಿಮಾ..


ಬಿ.ಕೆ.ಶಿವರಾಂ ಅವರ ಪೊಲೀಸ್ ಕಂಡ ಕಥೆಗಳು ಓದಿಯಾಯಿತು. ಅದು ಪ್ರಜಾವಾಣಿಯಲ್ಲಿ ಬರುತ್ತಿದ್ದಾಗಲೇ ಅವಾಗಾವಾಗ ಓದುತ್ತಿದ್ದೆನಾದರೂ ಇಡಿಯ ಪುಸ್ತಕವನ್ನು ಓದುವ ಖುಷಿ ದೊಡ್ಡದು. ಅದೊಂದು ಸಮಗ್ರ ಭಾವನೆಗಳ ಕಾದಂಬರಿ ಎನ್ನಬಹುದು, ಅಥವಾ ಜಗತ್ತಿನ ಅಷ್ಟೂ ವಿಷಯಗಳ ಸಮಗ್ರ ಚಿತ್ರಣ ಎನ್ನಬಹುದು. ಯಾಕೇಂದರೆ ಇಲ್ಲಿ ಎಲ್ಲಾ ಇದೆ. ಪೋಲೀಸ್ ಜಗತ್ತಿನ ಮೂಲಕ ಪೋಲೀಸ್ ಕಣ್ಣುಗಳ ಮೂಲಕ ಒಂದಷ್ಟು ಘಟನೆಗಳನ್ನು ವಿವರಿಸುವ ಶಿವರಾಂ ಯಾವುದೇ ಉತ್ಪ್ರೇಕ್ಷೆಯ ಬರವಣಿಗೆಯ ಮಾರುಹೋಗದೆ ಸುಮ್ಮನೆ ನಡೆದಿದ್ದನ್ನು ನಡೆದ ಹಾಗೆ ಹೇಳುತ್ತಾ ಹೋಗುತ್ತಾರೆ. ಯಾರನ್ನೂ ಅತಿಯಾಗಿ  ಹೊಗಳದೆ ಆದರೆ ಅವರು ಕೆಲಸ ಮಾಡಿದ ರೀತಿ, ಅದರಿಂದಾದ ಲಾಭವನ್ನು ಶ್ಲಾಘಿಸುತ್ತಾ ಹಾಗೆಯೇ ಅವರ ಪರಿಶ್ರಮಕ್ಕೆ ಕಿರು ಶಹಬ್ಬಾಸ್ ಕೊಡುವ ಶಿವರಾಂ ಹಾಗೆಯೇ ಕೆಲವರ ಸಣ್ಣತನವನ್ನು ಅಷ್ಟೇ ನೇರವಾಗಿ, ಆದರೆ ಬೇಸರದಿಂದ ವಿವರಿಸುತ್ತಾ ಹೋಗುತ್ತಾರೆ. ಅತೀ ಚಿಕ್ಕ ಚಿಕ್ಕ ಕೇಸುಗಳಿಗೂ ಪೋಲೀಸರು ಪಡುವ ಶ್ರಮ ಎಷ್ಟಿರುತ್ತದೆ ಎಂಬುದು   ನಮಗೆ ಗೊತ್ತಾಗಬೇಕಾದರೆ ಈ ಪುಸ್ತಕವನ್ನೊಮ್ಮೆ ಓದಲೇಬೇಕು.ಪುಸ್ತಕ ಓದಿಯಾದ ಮೇಲೆ ನನಗೇ ಈಗ ಬಸ್ ನಿಲ್ದಾಣದಲ್ಲೋ, ರೈಲು ನಿಲ್ದಾಣದಲ್ಲೋ ಕಂಡು ಬರುವ ಭಿಕ್ಷುಕ, ಹಣ್ಣಿನ ವ್ಯಾಪಾರಿ, ಆಟೋ ಡ್ರೈವರ್, ಕಸ ಗುಡಿಸುವವನು ಪೊಲೀಸಿರಬಹುದಾ..? ಎನಿಸಲು ಪ್ರಾರಂಭಿಸಿಬಿಟ್ಟಿದೆ.
 ಪುಸ್ತಕದ ಇನ್ನೊಂದು ವಿಶೇಷವೆಂದರೆ ಅದರ ಕಾಲಘಟ್ಟ. ಶಿವರಾಮ್ ರವರು ತಾವು ಪೊಲೀಸಾದ ದಿನದಿಂದ ನಡೆದ ಘಟನೆಗಳನ್ನು ತೀರಾ ಕಾಲಕ್ರಮಬದ್ದವಾಗಿ ವಿವರಿಸದೇ ಹೋದರೂ 1978 ರ ನಂತರದ ಬೆಂಗಳೂರಿನ ಒಂದು ಮುಖವನ್ನು ತುಂಬಾ ಚೆನ್ನಾಗಿ ಪರಿಚಯಿಸುತ್ತಾರೆ. ಆವತ್ತಿನ ಪೋಲೀಸರ ಕಾರ್ಯ ವೈಖರಿ, ಪೇಜರ್  ಮೊಬೈಲ್ ಮುಂತಾದವುಗಳು ಬಂದ ಮೇಲೆ ಹೇಗೆ ಕಾರ್ಯವೈಖರಿ ಬದಲಾಯಿತು ಅದೇ ರೀತಿ ಅಪರಾಧ ಜಗತ್ತೂ ಹೇಗೆ ಬದಲಾಯಿತು ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ಹೇಗೆ ಸಂವಹನ ತಂತ್ರಜ್ಞಾನವನ್ನು ಪೊಲೀಸ್ ವ್ಯವಸ್ಥೆ ಅಪರಾಧ ತಡೆಯಲು, ಫತ್ತೆ ಮಾಡಲು ಬಳಸಿಕೊಂಡಿತೋ ಅದೇ ರೀತಿಯಾಗಿ ಪಾತಕ ಜಗತ್ತು ಕೂಡ ಆಧುನಿಕ ತಂತ್ರಜ್ಞಾನವನ್ನು ಕೂಡ ಅಪರಾಧವೆಸಗಲು ಹೆಚ್ಚಾಗಿ ಬಳಸಿಕೊಂಡಿದ್ದು ವಿಪರ್ಯಾಸವೆನಿಸುತ್ತದೆ.
ಕೆಲವು ಅಪರಾಧಿಗಳನ್ನು ಹಿಡಿಯಲು ಪೋಲೀಸರು ನಡೆಸಿದ ಕಾರ್ಯಾಚರಣೆ ಯಾವ ಪತ್ತೆದಾರಿ ಕಥೆಗೂ ಕಡಿಮೆಯಿಲ್ಲದಂತೆ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಡಾ. ರಾಜಕುಮಾರ್ ವೀರಪ್ಪನ್‌ನಿಂದ ಅಪಹರಣವಾದಾಗಿನ ಪರಿಸ್ಥಿತಿ, ಅವರ ನಿಧನ, ವೀರಪ್ಪನ್ ಕಾಲದ ಕೆಲವು ಘಟನೆಗಳುಪೊಲೀಸ್ ಭಾಷೆ, ಅಪರಾಧ ಜಗತ್ತಿನಲ್ಲಿರುವ ಪದಪುಂಜಗಳು, ಕೊತ್ವಾಲ್, ಜಯರಾಜ್ ಮುಂತಾದವರ ಭೂಗತ ಜಗತ್ತಿನ ಪರಿಚಯ, ಅವರ ಸಾವಿನ ಹಿಂದಿನ ಕಥೆಗಳು, ರಾಜಕಾರಣಿಗಳ, ಹಿರಿಯ ಅಧಿಕಾರಿಗಳ ಹಿರಿಮೆ, ಪ್ರಾಮಾಣಿಕತೆ, ಸ್ವಾರ್ಥ ಮನೋಭಾವನೆ, ಅವಕಾಶವಾದಿ ನಡವಳಿಕೆ, ಸಣ್ಣತನ, ರಾಜೀವ್ ಗಾಂಧಿ ಹತ್ಯೆ, ಹಂತಕ ಶಿವರಾಶನ್ ಮತ್ತವನ ತಂಡದ ಕೊನೆಯ ಕ್ಷಣಗಳು ಹೀಗೆ ನಮಗೆ ಗೊತ್ತಿರುವ ಘಟನೆಗಳ ಗೊತ್ತಿಲ್ಲದ ಇನ್ನೊಂದು ಮುಖವನ್ನು     ಪರಿಚಯಿಸುವ ಉತ್ತಮ ಪುಸ್ತಕ ಪೊಲೀಸ್ ಕಂಡ ಕಥೆಗಳು
ನನಗೆ ಗೊತ್ತಿರುವಂತೆ ಸುಮಾರು ಜನ ಪೊಲೀಸರನ್ನು ಮನುಷ್ಯರಂತೇ ನೋಡುವುದೇ ಇಲ್ಲ.ಅವರನ್ನು ಒಂದು ರೀತಿಯ ಕಳ್ಳರಂತೆ, ಲಂಚಕೋರರಂತೆ ನೋಡುತ್ತಾರೆ. ಅವರ ಬೆನ್ನ ಹಿಂದೆ ಬೈಯ್ದುಕೊಳ್ಳುತ್ತಾರೆ. ಅವರಿಗೇ ಏನಾದರೂ ಆದರೆ ಸರಿಯಾಯ್ತು ಅವ್ರಿಗೆ.. ಎಂದು ಖುಷಿ ಪಡುತ್ತಾರೆ.ಅದಕ್ಕೆಲ್ಲಾ ಕೆಲವು ಅಪ್ರಾಮಾಣಿಕ ಪೊಲೀಸರೇ ಕಾರಣವಾದರೂ ಪೊಲೀಸರೂ ನಮ್ಮ ನಿಮ್ಮಂತೆಯೇ ಸಾಮಾನ್ಯರೇ..ಮತ್ತವರ ಕಷ್ಟಗಳೂ ಸಾಕಷ್ಟಿರುತ್ತವೇ ಎನ್ನುವುದನ್ನು ತುಂಬಾ ಚೆನ್ನಾಗಿ ವಿಶದ ಪಡಿಸುತ್ತದೆ ಈ ಕೃತಿ.
 ಭಯೋತ್ಪಾದಕರಿಂದ ಬರ್ಬರವಾಗಿ ಕೊಲೆಯಾದ ಪತ್ರಕರ್ತ ಡೇನಿಯಲ್ ಪರ್ಲ್‌ನ ಕಥೆಯಾಧಾರಿತ ಚಿತ್ರ ಎ ಮೈಟೀ ಹಾರ್ಟ್, 9 ಸಾಂಗ್ಸ್, ಎ ಸಮ್ಮರ್ ಇನ್ ಜಿನೋವಾ ಚಿತ್ರಗಳ ನಿರ್ದೇಶಕ ಮೈಕಲ್ ವಿಂಟರ್‌ಬಾಟಮ್ ನಿರ್ದೇಶನದ ತೃಷ್ಣಾ ಚಿತ್ರ ನೋಡಲು ಬೇರೆಯದೆ ಕಾರಣಗಳಿದ್ದವು ನನಗೆ. ಅದರಲ್ಲಿ ಮುಖ್ಯವಾದವು ಆ ಸಿನಿಮಾ ಅನುರಾಗ್ ಕಶ್ಯಪ್ ಸಹಭಾಗಿತ್ವದೊಂದಿಗೆ ತಯಾರಾದ ಚಿತ್ರ ಎನ್ನುವುದು ಮುಖ್ಯವಾದದ್ದು. ನನಗೇ ಬಾಲಿವುಡ್‌ನಲ್ಲಿ ಇಷ್ಟವಾದ ಚಿತ್ರಕರ್ಮಿ ಎಂದರೆ ಅನುರಾಗ್ ಕಶ್ಯಪ್. ಬರಹಗಾರನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಆತನ ಪ್ರಯತ್ನಗಳು    ಯಾವತ್ತಿಗೂ ಶ್ಲಾಘನೀಯವೇ. ವರ್ಮಾರ ಸತ್ಯ ಚಿತ್ರದ ಬರವಣಿಗೆಯ ಮೂಲಕ ಬೆಳಕಿಗೆ ಬಂದ ಕಶ್ಯಪ್ ಬಾಲಿವುಡ್‌ನಲ್ಲಿ ತನ್ನದೇ ಆದ ಛಾಪು ಒತ್ತಿದ ವ್ಯಕ್ತಿ. ಕೌನ್, ಶೂಲ್, ಜಂಗ್,      ನಾಯಕ್,ಯುವ, ಪೈಸ ವಸೂಲ್, ವಾಟರ್, ವ್ಯಾಲಿ ಆಫ್ ಪ್ಲವರ್ಸ್, ತಲಾಶ್ ಚಿತ್ರಗಳಿಗೆ ಬರಹಗಾರನಾಗಿ, ಶೈತಾನ್, ಉಡಾನ್ನಂತಹ ಚಿತ್ರಗಳ  ನಿರ್ಮಾಪಕನಾಗಿ, ಗ್ಯಾಂಗ್ಸ್ ಆಫ್ ವಾಸ್ಸೀಪುರ್, ದೇವ್ ಡಿ, ಬ್ಲ್ಯಾಕ್ ಫ್ರೈಡೇ ನಂತಹ ಚಿತ್ರಗಳ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಕಶ್ಯಪ್ ಪ್ರತಿಭಾವಂತ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನು ಸಿನಿಮಾದ ವಿಷಯಕ್ಕೆ ಬಂದರೆ ತೃಷ್ಣಾ ಸಿನಿಮಾ ಟಾಮ್ ಹಾರ್ಡಿಯ ಕಾದಂಬರಿ ಆಧರಿಸಿದ ಚಿತ್ರ. ಇದೇ ಕಾದಂಬರಿ ಆಧರಿಸಿ ಇದುವರೆವಿಗೆ ಮೂರ್ನಾಲ್ಕು ಸಿನಿಮಾಗಳು ಬಂದಿರಬಹುದು. ತೃಷ್ಣಾ ದುರಂತ ಹೆಣ್ಣುಮಗಳೊಬ್ಬಳ ಕಥೆ. ರಾಜಸ್ಥಾನದ ಟ್ರಕ್ ಡ್ರೈವರೊಬ್ಬನ ಮಗಳಾದ ತೃಷ್ಣಾಗೆ ಅದೊಂದು ದಿನ ಆಕಸ್ಮಿಕವಾಗಿ ಶ್ರೀಮಂತ ಕುಟುಂಬದ ಯುವಕನೊಬ್ಬ ಪರಿಚಯವಾಗುತ್ತಾನೆ. ಮುಂದೆ ಅನೂಹ್ಯ ಘಟನೆಗಳು ಜರುಗಿ ಅವರಿಬ್ಬರೂ ಒಂದಾಗುವಂತೆ ಮಾಡುತ್ತವಾದರೂ ಕೆಲವು ಅಂಶಗಳು ಸಮಾಜದಲ್ಲಿ ಅವರಿಬ್ಬರನ್ನು ಗಂಡ-ಹೆಂಡಿರಂತೆ ಬದುಕಲು ಆಸ್ಪದ   ಕೊಡುವುದಿಲ್ಲ. ಇದರಿಂದ ತುಂಬಾ ಖಿನ್ನತೆಗೊಳಗಾಗುವ ನಾಯಕಿ ಈ ಜಗತ್ತಿನ ಹಂಗೇ ಬೇಡ ಎನ್ನುವಂತೆ ಆತ್ಮಹತ್ಯೆ ಮಾಡಿಕೊಳ್ಳುವ ಅಂತ್ಯವಿರುವ ಈ 
 ಚಿತ್ರದಲ್ಲಿ ಪ್ರೀಡಾ ಪಿಂಟೊ ಸಂಯಮದ ಅಭಿನಯ ನೀಡಿದ್ದಾರೆ. ಆದರೆ ಕೆಲವು ಕಡೆ ಚಿತ್ರಕಥೆ ಇನ್ನೂ ಸೂಕ್ಷ್ಮವಾಗಿರಬೇಕಿತ್ತು ಎನಿಸುತ್ತದೆ. ಅದಕ್ಕೆ ಕಾರಣ ನಿರ್ದೇಶಕರಿರಬಹುದು. ಘಟನೆಗಳ ತೀವ್ರತೆ, ಅದರ ಪರಿಣಾಮಗಳು ಪ್ರೇಕ್ಷಕರನ್ನು ಅಷ್ಟಾಗಿ ತಟ್ಟುವುದಿಲ್ಲ. ಆದರೂ ಒಮ್ಮೆ ನೋಡಲಡ್ಡಿಯಿಲ್ಲ ಎನ್ನಬಹುದು.


Wednesday, August 22, 2012

ಕಲಾವಿದ ಡಾಲಿಯನ್ನ ಕುರಿತು....

ಚಿತ್ರ ಬರೆಯುವುದು ನಮ್ಮ ಮನೆಯಲ್ಲಿನ ಮೂವರಿಗೂ ಹುಟ್ಟಿನಿಂದಲೇ ಬಂದಿತ್ತು. ನಾನು ನಮ್ಮಣ್ಣ ಮತ್ತು ನನ್ನ ತಂಗಿ ಮೂವರು ಚಿತ್ರ ಬರೆಯುವುದರಲ್ಲಿ ಎತ್ತಿದ ಕೈ. ಆದರೆ ನಾವು ಮೂವರು ಅದನ್ನು ಮುಂದುವರೆಸಲಾಗಲಿಲ್ಲ. ನಮ್ಮಣ್ಣ ಮೈಸೂರಿನ ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿಯಲ್ಲಿ ಅದ್ಯಯನ ಮಾಡಿದನಾದರೂ ಬದುಕು ಅವನನ್ನು ಬೇರೆಯದೇ ಆದ ಕ್ಷೇತ್ರಕ್ಕೆಳೆದುಕೊಂಡುಬಿಟ್ಟಿತು. ನನಗೆ ಚಿತ್ರ ಬರೆಯುವುದು ಬರೀ 
ಹವ್ಯಾಸವಾಗಿತ್ತೇ ಹೊರತು ಸಿನಿಮಾಕ್ಷೇತ್ರವನ್ನೇ ನನ್ನ ವೃತ್ತಿ-ಪ್ರವೃತ್ತಿಯಾಗಿ ತೆಗೆದುಕೊಳ್ಳಲೇಬೇಕೆಂದು ನಾನೇ ನಿರ್ಧರಿಸಿದ್ದೆ. ಆದರೆ ನಮ್ಮಣ್ಣ ಕಾವಾದಲ್ಲಿದ್ದಾಗ ಹೊಸ ಹೊಸ ಕಲಾವಿದರ ಬಗ್ಗೆ, ಎಕ್ಸ್‌ಪ್ರೆಸನಿಮ್, ಇಂಪ್ರೆಸನಿಸ್ಮ್ ಎಂದೆಲಾ ಹೊಸಹೊಸ ಕಲಾ ಪ್ರಕಾರಗಳ ಬಗ್ಗೆಯೆಲ್ಲಾ ಹೇಳುತ್ತಿದ್ದಾಗ ನನಗೂ ಆಸಕ್ತಿ ಬಂದು ಅವನು ಮನೆಗೆ ತರುತ್ತಿದ್ದ ಪುಸ್ತಕಗಳನ್ನು ನಾನೂ ಓದುತ್ತಿದ್ದೆ. ಪಾಶ್ಚಿಮಾತ್ಯ ಕಲಾವಿದರಾದ ಡಾವಿಂಚಿ, ಟರ್ನರ್, ಎಡ್ವರ್ಡ್ ಮಾನೆ, ವ್ಯಾನ್ ಗೋ, ರಾಚಲ್ ಬೇಸ್, ಎನ್ರಿಕೊ 
ಬಾಸ್, ಜಾರ್ಜ್, ವ್ಯಾಲೆಂಟಿನ್ ಹ್ಯೂಗೋ, ಎನ್ರಿಕೊ ತಬೆರಾ, ಕಾರ್ಲ್ ಟೆಗಾ, ದೊರಾ ಮೊರ್, ಫೆಲಿಕ್ಸ್ ಅನಾಟ್, ಎಡ್ವರ್ಡ್ ಕೆಲ್ಲಿ, ಮೈಕೆಲೆಂಜಲೋ ಮುಂತಾದವರು ಹಾಗೆ ಭಾರತೀಯ ಚಿತ್ರ ಕಲಾವಿದರಾದ ರಾಜಾ ರವಿವರ್ಮಯಾಮಿನಿ ರಾಯ್, ಕೆ.ಕೆ.ಹೆಬ್ಬಾರ್,   ಅಮ್ರಿತಾ ಶೇರ್ ಗಿಲ್, ಸಿಲ್ಪಿ, ಮನಿಶ್ ಡೆ, ಮುಕುಲ್ ಚಂದ್ ಡೆ, ಕಲಿಪದ ಗೋಷಾಲ್, ಮುಂತಾದವರ ಜೊತೆಗೆ ಆಧುನಿಕ ಚಿತ್ರಕಲಾವಿದರಾದ ಎಮ್.ಎಫ್ ಹುಸೇನ್, ಯೂಸುಫ್ ಅರಕ್ಕಲ್, ಅರವಿಂದ್ ಪಾಟಿಲ್, ನೀರಜ್ ಗುಪ್ತಾ, ಪರಮಜೀತ್ ಸಿಂಗ್, ಸತೀಶ್ ಗುಜ್ರಾಲ್, ತೃಪ್ತಿ ಗುಪ್ತಾ ಇನ್ನೂ ಅನೇಕರ ಪರಿಚಯವಾಯಿತು. ನಾನು ಕೂಡ ಇವರ ಶೈಲಿ, ಅವರು ಆಯ್ಕೆ ಮಾಡಿಕೊಳ್ಳುವ ಚಿತ್ರವಸ್ತುಗಳು ಹಾಗೆ ಅಲ್ಪಸ್ವಲ್ಪ ಅವರ ಹಿನ್ನೆಲೆಗಳನ್ನೂ ತಿಳಿದುಕೊಳ್ಳತೊಡಗಿದೆ. ಆಗ ನನ್ನನ್ನು ಎಲ್ಲಾ ರೀತಿಯಿಂದಲೂ ಗಮನಸೆಳೆದವನು ಸಾಲ್ವಡಾರ್ ಡಾಲಿ. ಡಾಲಿಯ ಚಿತ್ರಗಳದ್ದೇ ಒಂದು ವಿಶೇಷವಾದ ಪ್ರಪಂಚ ಎನ್ನಬಹುದು. ಸುಮ್ಮನೆ ಅವನ ಚಿತ್ರಗಳನ್ನು 
ಗಮನಿಸುತ್ತಾ ಹೋಗಿ. ತನ್ನ ಕುಂಚದ ಮೂಲಕ ಬೇರೊಂದು ಭ್ರಾಮಕ ಲೋಕ ಸೃಷ್ಟಿಸುವ ಆತನ ಉಮ್ಮೇದು ಎದ್ದು ಕಾಣುತ್ತದೆ. ಅವನು ನನಗೇ ಇನ್ನಷ್ಟು ಇಷ್ಟವಾಗಲು ಕಾರಣ ಆತ ಚಲನಚಿತ್ರರಂಗದಲ್ಲೂ ತಲೆಕೆಡಿಸಿಕೊಂಡು ತನ್ನದೇ ಆದಂತಹ ಕಾಣಿಕೆ ನೀಡಿದ್ದು. ಗ್ರಾಫಿಕ್ಸ್ ಎಫೆಕ್ಟ್ಸ್ ಅಷ್ಟಾಗಿ ಅಭಿವೃದ್ಧಿ ಹೊಂದಿರದೇ ಇದ್ದ ಆ ಕಾಲದಲ್ಲೇ ಡಾಲಿ ತನ್ನ ಹೊಸ ಹೊಸ ಐಡಿಯಾಗಳ ಮೂಲಕ ಪರದೆಯ ಮೇಲೆ ಭಿನ್ನ ಭಿನ್ನ ಕಲಾಕೃತಿಯನ್ನು , ಮಾಯಾಲೋಕವನ್ನು ಸೃಷ್ಟಿಸಲು ಯತ್ನಿಸಿದ್ದ. ಶಿಲುಬೆಯೊಂದು ಹಾಗೆ ಅಸ್ಥಿ ಪಂಜರವಾಗಿ ಮಾರ್ಪಾಡಾಗುವ ಒಂದು 
ಪರಿಣಾಮವನ್ನು ಆವತ್ತಿನ ಧರ್ಮಾಧಿಕಾರಿಗಳು ವಿರೋಧಿಸಿದ್ದರಂತೆ. ಆತನ ಮನೆಯಲ್ಲಿದ್ದ ಸೋಫಾ ಕುರ್ಚಿ, ಹುಕ್ಕಾ ಹೀಗೆ ಎಲ್ಲೆಂದರಲ್ಲಿ ಆತನ ಕಲಾಕೃತಿ ಅರಳುತ್ತಿದ್ದುದಲ್ಲದೇ, ಆತನ ಮೀಸೆ, ಗಡ್ಡ, ಕೂದಲಿನಲ್ಲಿಯೂ ಅವು ಮುಂದುವರೆಯುತ್ತಿದ್ದವಂತೆ. ಡಿಸ್ಕ್ರೀಟ್‌ಚಾರ್ಮ್ ಆಫ್ ಬೋರ್ಜಿಯಸೆ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ತನ್ನದಾಗಿಸಿಕೊಂಡ ನಿರ್ದೇಶಕ ಲೂಯಿಸ್ ಬ್ಯುನೆಲ್ ನಿಮಗೆ ಗೊತ್ತಿರಬಹುದು. ಆತನ ಉನ್ ಚೆಯು ಆಂದಲನ್, ದಿ ಗೋಲ್ಡನ್ ಏಜ್[1930] ಚಿತ್ರಗಳಲ್ಲಿ 
ಡಾಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಈವತ್ತು ಇಷ್ಟೊಂದು ಸವಲತ್ತಿಟ್ಟುಕೊಂಡು ಒಂದು ದೃಶ್ಯಮಾಧ್ಯಮದಲ್ಲಿ ಏನನ್ನಾದರೂ ಹೊಸದನ್ನು ಸೃಷ್ಟಿಸಲು ಒದ್ದಾಡುವ ನಾವು ಇಂಥ ಪ್ರತಿಭಾವಂತರಿಂದ ಕಲಿಯಬೇಕಾಗಿರುವುದು ಸಾಗರದಷ್ಟಿದೆ. ಆತನನ್ನು ಕುರಿತಾದ ಕಿರುಚಿತ್ರವೊಂದಿದೆ. 1966ರಲ್ಲಿ ನಿರ್ಮಿತವಾದ ಈ ಕಿರುಚಿತ್ರದ ನಿರ್ಮಾತೃ ಆ೦ಡಿ ವೊರೋಲ್.
ಆತನ ಚಿತ್ರಗಳನ್ನು ನೋಡಿದರೆ ಉಪೇಂದ್ರ ಚಿತ್ರದ ಪೋಸ್ಟರ್‌ಗಳು ನೆನಪಿಗೆ ಬರುತ್ತವಲ್ಲವೇ..?

 ಕಲಾವಿದ ಡಾಲಿಯಾ ಜೀವನ ಚರಿತ್ರೆ ಅಧರಿಸಿದ ಚಲನಚಿತ್ರ 'ದಿ ಲಿಟಲ್ ಯಾಷೆಸ್' 2008ರಲ್ಲಿ ತೆರೆಗೆ ಬ೦ದ ಈ ಚಿತ್ರದ ನಿರ್ದೇಶಕ 'ಪಾಲ್ ಮೊರಿಸನ್' ಕಲಾವಿದ ಡಾಲಿ, ಚಿತ್ರ ನಿರ್ದೇಶಕ ಲುಯಿಸ್ ಬ್ಯುನಲ್, ಲೇಖಕ ಫೆಡರಿಕ್ ಗಾರ್ಸಿಯಾ ಲೋರ್ಕ ರ ನಡುವಿನ ಬಾ೦ಧವ್ಯವನ್ನು ತೆರೆದಿಟ್ಟ ಈ ಚಿತ್ರವನ್ನೊಮ್ಮೆ ಅವಶ್ಯ ನೋಡಿ. 

Monday, August 20, 2012

ನೂರೊ೦ದು ಕನ್ನಡ ಚಿತ್ರಗಳು


ಗೆಳೆಯ, ಆಸ್ಕರ್ಕನ್ನಡ ಚಲನಚಿತ್ರದ ನಿರ್ದೇಶಕ ಕೃಷ್ಣ ಮತ್ತು ನಾನು ಏನೇನೋ ಮಾತಾಡುತ್ತಾ ಕುಳಿತಿದ್ದೆವು. ಕೃಷ್ಣನನ್ನು ನಾನು ಮೈಸೂರಿನಿಂದಲೂ ಬಲ್ಲೆ. ಏನಾದರೊಂದು ಮಾಡುತ್ತಲೇ ಇರುತ್ತಾನೆ. ನಾವಾದರೋ ಬರೀ ಸಿನಿಮಾಕ್ಕೇ ಅಂಟಿಕೊಂಡಿದ್ದರೆ ಆತ ಹಾಗಲ್ಲ ವ್ಯಾವಹಾರಿಕವಾಗಿ, ಸಂಪಾದನೆಯ ನಿಟ್ಟಿನಲ್ಲಿ ಏನಾದರೊಂದು ಮಾಡೇಮಾಡುತ್ತಾನೆ. ನನ್ನ ಸಿನಿಮಾ ಮಾರ್ಚ್ 23 ಅಂತೂ ಇಂತೂ ಬಿಡುಗಡೆಯ ಹಂತದಲ್ಲಿದೆ. ನಾನು ಸಹ ನಿರ್ದೇಶಕನಾಗಿದ್ದಾಗ, ಬರಹಗಾರನಾಗಿದ್ದಾಗ ಹಣ ಸಂಪಾದನೆ ಚೆನ್ನಾಗೇ ಇತ್ತು. ಆವಾಗೆಲ್ಲಾ ಕೆಲಸ ಮಾಡುವ ರೀತಿ, ಕಸುಬುದಾರಿಕೆಯೇ ಬಂಡವಾಳ. ಆದರೆ ಒಮ್ಮೆ ಸ್ವತಂತ್ರ ನಿರ್ದೇಶಕನಾಗಿಹೋದರೆ ಕೇವಲ ಯಶಸ್ಸಷ್ಟೇ ಮಾನದಂಡ. ಆ ಸ್ವತಂತ್ರ ನಿರ್ದೇಶನದ ಸಿನಿಮಾ ಬಿಡುಗಡೆಯಾಗುವವರೆಗೆ ಬೇರೆ ಸಿನಿಮಾದಲ್ಲಿ ಸಹನಿರ್ದೇಶಕನಾಗಿಯೋ, ಬರಹಗಾರನಾಗಿಯೋ ಕೆಲಸ ಮಾಡಲಾಗುವುದಿಲ್ಲ. ಆ ಸಿನಿಮಾ ಬಿಡುಗಡೆಯಾಗಿ ಪರವಾಗಿಲ್ಲ ಎನಿಸಿಕೊಂಡರೆ ಮುಂದಿನ ದಾರಿ ಸುಲಭ. ಇಲ್ಲವಾದಲ್ಲಿ ಮತ್ತೆ ಅಆಇಈಯಿಂದಲೇ ಪ್ರಾರಂಭಿಸಬೇಕಾಗುತ್ತದೆ. ಕೃಷ್ಣ ಮಾತನಾಡುತ್ತ ಏನಪ್ಪಾ ಹೇಗಿದೆ ಸಂಪಾದನೆ ಎಂದದ್ದಕ್ಕೇ ಏನೂ ಇಲ್ಲಪ್ಪಾ ಸಧ್ಯಕ್ಕೆ ಎಂದು ಹೇಳಿದೆ.   
 ‘ಅಲ್ವೋ ಅಷ್ಟೊಂದು ಓದಿದ್ದೀಯ, ಬರೀತೀಯ..ನೀನೆ ಹೀಗಂದ್ರೆ ಹ್ಯಾಗಪ್ಪ..ಈಗೊಂದು ಕೆಲಸ ಮಾಡು..ಎಲ್ಲಾ ಹಾಲಿವುಡ್ ಸಿನಿಮಾಗಳ  ಪಟ್ಟಿಮಾಡಿ ನೋಡಲೇ ಬೇಕಾದ ನೂರೊಂದು ಸಿನಿಮಾಗಳು, ಐನೂರು ಸಿನಿಮಾಗಳು ಅಂತೆಲ್ಲಾ ಪುಸ್ತಕ ಬರೀತಾರೆ. ನೀನ್ಯಾಕೆ ನೋಡಲೇಬೇಕಾದ ಕನ್ನಡದ ನೂರೊಂದು ಚಿತ್ರಗಳು ಅಂತ ಪುಸ್ತಕ ಬರೀಬಾರ್ದು..ನೀನ್ ಬರೀತೀನಂದ್ರೆ ನಾನೆ ಪಬ್ಲಿಶ್ ಮಾಡ್ತೀನಿ..ನಿಂಗೂ ಖರ್ಚಿಗೆ ಕಾಸಾಗುತ್ತೆ..ಅಂದ. ನಾನು ಸರಿ ಎಂದೇನೋ ಒಪ್ಪಿಕೊಂಡು ಬಂದುಬಿಟ್ಟೆ. ಆದರೆ ಯಾವ ಆಧಾರದ ಮೇಲೆ ಸಿನಿಮಾಗಳನ್ನು ವಿಂಗಡಿಸುವುದು, ಮತ್ತು ಅಷ್ಟೆಲ್ಲಾ   
 ಸಿನಿಮಾಗಳನ್ನು ನಾನು ನೋಡುವುದು ಹೇಗೆ..? ಅವುಗಳು ಸಿಗುವುದೆಲ್ಲಿ..? ಎನ್ನುವ ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು.ಕನ್ನಡ ಭಾಷೆಯಲ್ಲಿ ಇಲ್ಲಿಯವರೆಗೆ ಬಂದಿರುವ ಅಷ್ಟೂ ಸಿನಿಮಾಗಳಲ್ಲಿ ಕೇವಲ ನೂರೆನೂರು ಆಯ್ಕೆ ಮಾಡುವುದು ಸರಿ ಕಾಣಲಿಲ್ಲ. ಪುಟ್ಟಣ್ಣ ನಿರ್ದೇಶನದ ಬಹುತೇಕ ಸಿನಿಮಾಗಳು, ಡಾ. ರಾಜಕುಮಾರ್ ಅಭಿನಯದ ಹೆಚ್ಚುಕಡಿಮೆ ನೂರಕ್ಕೂ ಹೆಚ್ಚು ಸಿನಿಮಾಗಳು ಮಾಸ್ಟರ್‌ಪೀಸ್‌ಗಳೇ. ಅದಕ್ಕಾಗಿ ಕನ್ನಡ ಸಿನಿಮಾ ಪ್ರಾರಂಭವಾದಾಗಿನಿಂದ  ಐವತ್ತು ವರ್ಷದವರೆಗಿನ ಸಿನಿಮಾಗಳಲ್ಲಿ ನೂರೊಂದು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವುದೆಂದು ನಿರ್ಧರಿಸಿದೆ. ಮೊದಲಿಗೆ ಕನ್ನಡ ಚಲನಚಿತ್ರದ ಇತಿಹಾಸವನ್ನು ಅದ್ಯಯನ ಮಾಡುವುದಿತ್ತು. ಅದಕ್ಕಾಗಿ ಒಂದಷ್ಟು ಪುಸ್ತಕ ಮತ್ತು ಹಿರಿಯರ ಮೊರೆಹೋದೆ. ಹಾಲಿವುಡ್ ಸಿನಿಮಾಗಳ ಬಗ್ಗೆಯಾದರೆ ಯೋಚನೆಯಿಲ್ಲ.  ಕಂಪ್ಯೂಟರ್ ಮುಂದೆ ಕುಳಿತರೆ ಅಂತರ್ಜಾಲಕ್ಕೆ ಗಂಟುಬಿದ್ದರೆ ಹೆಚ್ಚುಕಡಿಮೆ ಅರ್ಧ ಕೆಲಸ ಆಗಿಹೋಗುತ್ತದೆ. ಆದರೆ ಭಾರತೀಯ ಸಿನಿಮಾಗಳ ಬಗ್ಗೆಯಾದರೆ, ಅದರಲ್ಲೂ ಕನ್ನಡ ಸಿನಿಮಾಗಳ ಬಗ್ಗೆ ಅಷ್ಟು ಮಾಹಿತಿ ಸಿಗುವುದಿಲ್ಲ. ನಾವು ಕನ್ನಡ ಸಿನಿಮಾ ತಯಾರಿಸುವ ಮೊದಲು ಬ್ಯಾನರ್ ನೋಂದಣಿ ಮಾಡಿಸುವಾಗ ನಮ್ಮ ಕನ್ನಡ ಚಲನಚಿತ್ರ ವಾಣಿಜ್ಯಮಂಡಳಿಯವರು ಸುಮಾರು ಪುಸ್ತಕಗಳನ್ನು ಕೊಡುತ್ತಾರೆ. ಅವುಗಳಿಂದ ಸಾಕಷ್ಟು ಉಪಯೋಗವಾಯಿತು. 1934ರಲ್ಲಿ ಸತಿ ಸುಲೋಚನದ ಚಲನಚಿತ್ರದ ಮೂಲಕ ಕನ್ನಡ ಚಿತ್ರರಂಗ ತನ್ನ ಖಾತೆ ತೆರೆಯಿತು. ಅಲ್ಲಿಂದ 1984ರವರೆಗೆ ಸರಿಸುಮಾರು 938 ಸಿನಿಮಾಗಳು ಬಂದಿವೆ. ಮೊದಲಿಗೆ ಅಷ್ಟೂ ಸಿನಿಮಾಗಳ ಪಟ್ಟಿ ಮಾಡಿದೆ. ಅದೇ ಒಂದು ಸಾಹಸವಾಯಿತು. 1934ರ ಇಡೀ ವರ್ಷದಲ್ಲಿ ಕೇವಲ ಎರಡೇ ಎರಡು ಚಿತ್ರಗಳು ಬಿಡುಗಡೆಯಾದರೆ 1984ರಲ್ಲಿ ಸುಮಾರು 62 ಸಿನಿಮಾಗಳು ಬಿಡುಗಡೆಯಾಗಿವೆ. ಅಷ್ಟೂ ಸಿನಿಮಾಗಳ ಪಟ್ಟಿ ಮಾಡಿದ ಮೇಲೆ ನಾನು ನೋಡಿರುವ ಚಿತ್ರಗಳನ್ನು ಮೊದಲು ಪಕ್ಕಕ್ಕಿರಿಸಿದೆ. ಅದರಲ್ಲಾಗಲೇ ಅರ್ಧದಷ್ಟು ಸಿನಿಮಾ ನಾನು ನೋಡಿದ್ದೆ. ಅದಕ್ಕಾಗಿ ನಮ್ಮೂರಿನ ಚಿತ್ರಮಂದಿರ, ನಮ್ಮಜ್ಜಿ ಊರಿನ ಟೆಂಟು, ಟಿವಿ ವಾಹಿನಿಗಳು ಅದರಲ್ಲೂ ಬೆಂಗಳೂರು ದೂರದರ್ಶನಕ್ಕೆ ನಾನು ಋಣಿ. ಉಳಿದ ಸಿನಿಮಾಗಳಲ್ಲಿ ಬಹುತೇಕ ಡಿವಿಡಿ ಸಿಕ್ಕವು. ಮತ್ತಷ್ಟು ಸಿನಿಮಾಗಳು ಸಿಗಲೇ ಇಲ್ಲ. ಹಾಗಂತ ಬಿಡುವುದಾದರೂ ಹೇಗೆ. ಅದಕ್ಕಾಗಿ ಆ ಸಿನಿಮಾಗಳ ಪಟ್ಟಿ ಹಿಡಿದು ಅದರ ವಾರಸುದಾರರು, ನಿರ್ಮಾಪಕರು, ನಿರ್ದೇಶಕರು, ಲ್ಯಾಬ್ ಹೀಗೆ ಎಲ್ಲೆಂದರಲ್ಲಿ ಅಲೆದಾಡಿದ ಮೇಲೂ ಸಿಕ್ಕ ಮಾಹಿತಿ ಅಪೂರ್ಣ ಎಂದೇ ಹೇಳಬಹುದು. ಮಾಹಿತಿ ಸಿಕ್ಕರೂ ಸಿನಿಮಾ ನೋಡಲು ಸಿಗಲಿಲ್ಲ. ನಮ್ಮ ಆತ್ಮೀಯರು ಹರಿಹರಪುರ ಮಂಜುನಾಥ್ ಜೊತೆಗೆ, ಗೆಳೆಯರಾದ ಗಿರಿಬಾಲು, ಫಿಲಿಪ್ ಪಿಂಟೊ ಕೂಡ ಒಂದಷ್ಟು ಸಹಾಯ ಮಾಡಿದರು. ಈಗ ನೋಡುವಿಕೆ ಬಹುತೇಕ ಮುಗಿದಿದೆ.
ಇನ್ನೇನಿದ್ದರೂ ಬರವಣಿಗೆಯ ಕೆಲಸ.
 ಆದರೂ ಕನ್ನಡದ ಸಿನಿಮಾಗಳನ್ನು ಗುಡ್ಡೆ ಹಾಕಿಕೊಂಡು ನೋಡುತ್ತ ಬಂದರೆ ಅದರ ಅನುಭವವೇ ಬೇರೆ. ಕನ್ನಡ ಭಾಷೆ, ಆವತ್ತಿನ ಕರ್ನಾಟಕದ ಹಳ್ಳಿಗಳು, ಬೆಂಗಳೂರು, ಮೈಸೂರಿನ ಆವಾಗಿನ ಚಿತ್ರಗಳು, ನಮ್ಮದೇ ಆವಾಗಿನ ಸಂಸ್ಕೃತಿ, ಆವತ್ತಿನ ಸ್ಟೈಲ್ ಮುಂತಾದವುಗಳು ಕಣ್ಣಿಗೆ ಕಟ್ಟುತ್ತವೆ. ಅಪ್ಪ ತಾತರು ಹೇಳುತ್ತಿದ್ದ ಕಥೆಗಳಿಗೆ ಲಿಂಕ್ ಸಿಗುವುದಲ್ಲದೇ ಆ ಕಾಲದ ಅನುಭವವಾಗುತ್ತದೆ. ಆವತ್ತಿದ್ದ ವಾಹನಗಳು, ಊಟ ತಿಂಡಿ ಹೋಟೆಲುಗಳು, ವಸ್ತ್ರ ವಿನ್ಯಾಸ, ಕೇಶ ವಿನ್ಯಾಸ ಖುಷಿಕೊಡುತ್ತವೆ. ಅದೆಲ್ಲದರ ಜೊತೆಗೆ ಕನ್ನಡ ಚಿತ್ರರಂಗ ತೆರೆದುಕೊಂಡ ರೀತಿ, ಅದರ ಬೆಳವಣಿಗೆ ಹಂತಗಳು, ತಂತ್ರಜ್ಞಾನದ ಬಳಕೆಯ ಹಂತಗಳು, ಕಥಾವಸ್ತುಗಳ ಆಯ್ಕೆಯಲ್ಲಿನ ಬದಲಾವಣೆಗಳು, ನಟರ ಕಾಲಾನುಕ್ರಮೇಣದ ಬದಲಾವಣೆಗಳು ಚಿತ್ರರಂಗದ ಏಳುಬೀಳುಗಳೆಲ್ಲದರ ಬಗ್ಗೆ ವಿವರವಾದ ಅರಿವು ಮೂಡುತ್ತದೆ.
 ಈ ಪುಸ್ತಕದ ಕಾರಣದಿಂದಾಗಿ ನಮ್ಮ ಸಿನಿಮಾದ ತಲೆಬಿಸಿಯಲ್ಲೇ ಇದ್ದ ನನಗೆ ಒಂದಷ್ಟು ತಲೆಬಿಸಿ ಕಡಿಮೆಯಾಗಲು, ಹೊಸ ಅನುಭವಕ್ಕೆ ತೆರೆದುಕೊಳ್ಳಲು ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಚಿತ್ರರಂಗದ ಇತಿಹಾಸವನ್ನು ಅನುಭವಿಸಲು, ನನ್ನನ್ನು ನಾನು ತೊಡಗಿಸಿಕೊಳ್ಳಲು ಸಹಾಯವಾದದ್ದಂತೂ ನಿಜ. ಕೃಷ್ಣನ ಪ್ರಕಾಶನದ ಮೊದಲ ಪುಸ್ತಕ ಈಗ ಬಿಡುಗಡೆಗೆ ಸಿದ್ಧವಿದೆ. 


Saturday, August 4, 2012

ನೋಡಲೇ ಬೇಕಾದ ಚಿತ್ರಗಳು-11

 ಆವತ್ತಿಡೀ ದಿನ ಏನೂ ಮಾಡಬಾರದೆ೦ದು ನಿರ್ಧರಿಸಿದ್ದೆ. ನಾನಾಗ ನಿತ್ಯವಾಹಿನಿಯೊ೦ದರಲ್ಲಿ ಕೆಲಸ ಮಾಡುತ್ತಿದ್ದೆ. ಮೂರ್ನಾಲ್ಕು ದಿನಗಳ ರಜೆ ಬೇಕ೦ದು ಕೇಳಿದಾಗ, ಒ೦ದಷ್ಟು ಬ್ಯಾ೦ಕಿ೦ಗ್ ಕೊಟ್ಟು ಹೋಗಿ ಎಂದರು ನಮ್ಮ ಬಾಸ್ . ಸರಿ ಎ೦ದು ಎಡೆಬಿಡದೆ ಮೂರು ದಿನ ನಿದ್ರೆಗೆಟ್ಟು ಎಡಿಟಿ೦ಗ್, ವಾಯ್ಸ್ ಓವರ್ ಮಾಡಿಸಿ ಟೇಪ್ಸ್ ಕೊಟ್ಟು ಬ೦ದ ಮೇಲೆ ಕುಡಿದು ಚಿತ್ತಾದವನ೦ತಾಗಿತ್ತು ನನ್ನ ಸ್ಥಿತಿ. ಆಮೇಲೆ ಇಡೀ ದಿನ ಮಲಗಿದ್ದೆ. ಹತ್ತನ್ನೆರೆಡು ಘ೦ಟೆ ನಿದ್ರೆಯ ನ೦ತರ ಮತ್ತೆ ನಿದ್ರೆ ಬಾರದಿದ್ದರೂ ಮಲಗಲೇ ಬೇಕೆ೦ಬ ಹಠ ನನ್ನದಾಗಿತ್ತು. ಆಗ ಸುಮ್ಮನೆ ಇರಲಿ ಎಂದು ಅಂಥೋನಿ ಜಿಮ್ಮೆರ್ ಸಿನಿಮಾದ ಡಿವಿಡಿಯನ್ನು ಪ್ಲೇಯರ್ ಗೆ ತುರುಕಿ ಅನ್ಯಮನಸ್ಕತೆಯಿ೦ದ ನೋಡುತ್ತಾ ಕುಳಿತೆ. ಬರೆ ಐದೇ ನಿಮಿಷಕ್ಕೆ ನನ್ನ ಅನ್ಯಮನಸ್ಕತೆ ದೂರವಾಯಿತು. ಆ ಸಿನಿಮಾ ಅದ್ಯಾವರೀತಿ ನನ್ನನ್ನು ತನ್ನೊಳಗೆ ಸೆಳೆದುಕೊ೦ಡಿತೆ೦ದರೆ ಸಿನಿಮಾ ಮುಗಿಯುವವರೆಗೆ ನಾನು ಅಲುಗಾಡಲೇ ಇಲ್ಲ. ದೃಶ್ಯದಿ೦ದ ದೃಶ್ಯಕ್ಕೆ ರೋಚಕ ತಿರುವು ಪಡೆಯುತ್ತ ಸಾಗುವ ಚಿತ್ರಕಥೆ, ಅದ್ಭುತ ಹಿನ್ನೆಲೆ ಸ೦ಗೀತ ಮತ್ತು ಯವನ್ ಅಟ್ಟೆಲ್ ಎಂಬ ನಟನ ಅದ್ಭುತ ಅಭಿನಯ ನನ್ನನ್ನು ಮ೦ತ್ರ ಮುಗ್ಧನನ್ನಾಗಿಸಿಬಿಟ್ಟಿತ್ತು. ಸಿನಿಮಾದ ಮಜಾ ಎನೆ೦ದರೆ ಕಥೆ ನಡಿಯುತ್ತಿದ್ದ೦ತೆ ಮು೦ದೇನಾಗುತ್ತದೆ ಎಂಬುದು ಅಲ್ಲಿನ ನಾಯಕನಿಗೂ ಗೊತ್ತಾಗುವುದಿಲ್ಲ. ಅನಿರೀಕ್ಷಿತವಾಗಿ ಬ೦ದೆರೆಗುವ ಘಟನೆಗಳು ಅವನನ್ನು ಅಯೋಮಯ ಸ್ಥಿತಿಗೆ ನೂಕುತ್ತವೆ. ಅದೇ ಪರಿಸ್ಥಿತಿ ನಮ್ಮದು.ಅಂದರೆ ನೋಡುಗನದು. ನಮಗೂ ಮು೦ದೇನಾಗುತಿದೆ, ಅಥವಾ ನಡೆಯುತ್ತಿರುವುದಾದರೂ ಏನು? ಎ೦ಬುದು ಗೊ೦ದಲಗಳನ್ನು ಸೃಷ್ಟಿಸುತ್ತಲೇ ಸಾಗುತ್ತದೆ.
ಚಿತ್ರದ ಹೆಸರು ಅಂಥೋನಿ ಜಿಮ್ಮೆರ್ .ಭಾಷೆ ಪ್ರೆ೦ಚ್. ಜೆರೋಮೆ ಸಲ್ಲೇ ನಿರ್ದೇಶನದ ಈ ಚಿತ್ರದಲ್ಲಿ ಯವನ್ ಅಟ್ಟೆಲ್, ಸಾಮಿ ಫ್ರೆಯ್, ಸೋಫ್ಹಿ ಮಾರ್ಸಿಯೋ, ಮು೦ತಾದವರು ಅಭಿನಯಿಸಿದ್ದಾರೆ. 2005ರಲ್ಲಿ ಬಿಡುಗಡೆಯಾದ ಈ ಚಿತ್ರದ ಅವಧಿ ಎರಡು ಘ೦ಟೆ ಇಪ್ಪತ್ತೊ೦ಬತ್ತು ನಿಮಿಷಗಳು ಮಾತ್ರ.
ಆರಾಮಾವಾಗಿ ತನ್ನ ಪಾಡಿಗೆ ತಾನು ಹೋಗುತ್ತಿದ್ದ ಪ್ರಯಾಣಿಕನಿಗೆ ಸುಂದರಿಯೊಬ್ಬಳು ಪರಿಚಯವಾಗುತ್ತಾಳೆ. ಅವಳೋ೦ದಿಗೆ ಮಾತಾಡುತ್ತ ಸು೦ದರ ಕ್ಷಣಗಳ ನಿರೀಕ್ಷೆಯಲ್ಲಿದ್ದ ಪ್ರವಾಸಿಗನಿಗೆ ಯಾರೋ ತನ್ನನ್ನು ಹಿ೦ಬಾಲಿಸುತ್ತಿದ್ದಾರೆನ್ನುವ ಅನುಮಾನ ಬರತೊಡಗುತ್ತದೆ.ನಿಜ. ಯಾರೋ ಆತನ ಬೆನ್ನು ಬಿದ್ದಿದ್ದಾರೆ...ಯಾಕೆ ಎಂಬುದು ನಾಯಕನಿಗೆ ಯಕ್ಷ ಪ್ರಶ್ನೆಯಾಗುತ್ತದೆ..ಹಾಗಂತ ತಪ್ಪಿಸಿಕೊಳ್ಳಲು ಸಾಧ್ಯವೇ..? ನಾಯಕ ಅದನ್ನೂ ಪ್ರಯತ್ನಿಸುತ್ತಾನೆ..ಆದರೆ ಎಲ್ಲಿ ಹೋಗುವುದು? ಎಲ್ಲೆಡೆಯೂ ಅವರೆ ಇರುವ೦ತೆ ಭಾಸವಾಗುತ್ತದೆ..ಎಲ್ಲರೂ ಅನುಮಾನಸ್ಪದವಾಗಿ ಕಾಣತೊಡಗುತ್ತಾರೆ. ಹಾಗಾದರೆ ಈ ಚಕ್ರವ್ಯೂಹದಿ೦ದ ತಪ್ಪಿಸಿಕೊಳ್ಳುವುದಾದರೂ ಹೇಗೆ..?ಅದಷ್ಟೇ ವಿಷಯವಲ್ಲ. ತನ್ನನ್ನು ಹಿ೦ಬಾಲಿಸುತ್ತಿರುವವರು ಯಾರು? ಯಾಕೆ? ತಪ್ಪಿಸಿಕೊಳ್ಳುವುದರ ಜೊತೆಗೆ ನಾಯಕನಿಗೆ ಈ ಪ್ರಶ್ನೆಗಳಿಗೆ ಉತ್ತರವನ್ನೂ ಕಂಡುಕೊಳ್ಳಬೇಕಾದ ಪರಿಸ್ಥಿತಿ ಬ೦ದೊದಗುತ್ತದೆ...
ಅನಿರೀಕ್ಷಿತ ಅ೦ತ್ಯ ನಮ್ಮನ್ನು ಬೆರಗುಗೊಳಿಸುತ್ತದೆ.
ಇದೆ ಚಿತ್ರ ಮು೦ದೆ  ಟೂರಿಸ್ಟ್ ಎಂಬ ಹೆಸರಿನಲ್ಲಿ ಹಾಲಿವುಡಿನಲ್ಲಿ ತೆರೆಗೆ ಬ೦ದಿತು.ಫ್ಲೋರಿಯನ್ ಹೆ೦ಕೆಲ್ ವಾನ್ ಡೋನರ್ ಸ್ಮಾರ್ಕ್ ನಿರ್ದೇಶನದಲ್ಲಿ 2010ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಜಾನಿ ಡೆಪ್ ಮತ್ತು ಆ೦ಜಲಿನಾ ಜ್ಯೂಲಿ ಮುಖ್ಯ ಪಾತ್ರದಲ್ಲಿದ್ದರು. ಈ ಚಿತ್ರ ಮೂಲಚಿತ್ರಕ್ಕೆ ನಿಷ್ಠವಾಗಿತ್ತಾದರೂ ಅದರ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ.
ಜಾನಿ ಡೆಪ್ನ ಪಾತ್ರ ಪೋಷಣೆ ಅದ್ಭುತವಾಗಿದ್ದರೂ ಯವನ್ ಅಟ್ಟೆಲ್ ಮು೦ದೆ ನನಗೆ ಸಪ್ಪೆ ಎನಿಸಿತು. ಒಟ್ಟಿನಲ್ಲಿ ಹೇಳುವುದಾದರೆ ಅಂಥೋನಿ ಜಿಮ್ಮೆರ್ ಒ೦ದು ಉತ್ತಮ ಥ್ರಿಲ್ಲರ್ ಆಗಿದ್ದು ನೋಡಲೇಬೇಕಾದ ಪಟ್ಟಿಗೆ ಸೇರಿಸಲು ಯಾವುದೇ ಅಭ್ಯ೦ತರವಿಲ್ಲ ಎನ್ನಬಹುದು. ಅದಾದ ಮೇಲೆ ಅದರ ತರ್ಜುಮೆ ಹೇಗಿದೆ ಎಂಬ ಕುತೂಹಲವಿದ್ದರೆ ಒಮ್ಮೆ ಟೂರಿಸ್ಟ್ ನೋಡಬಹುದು.

ಪುಟದಿ೦ದ ಪರದೆಗೆ-3

ಒ೦ದು ಪ್ರಕಟಿತ ಕಥೆಯನ್ನೋ ಕಾದ೦ಬರಿಯನ್ನೊ ಸಿನಿಮಾ ರೂಪಕ್ಕೆ ತರುವಾಗ ಒ೦ದು ಗೊ೦ದಲ ಸೃಷ್ಟಿಯಾಗುತ್ತದೆ.ಅದನ್ನು ಹೇಗೆ ಚಿತ್ರಕ್ಕೆ ಅಳವಡಿಸಿದರೆ ಸರಿ? ಎಂಬ ಪ್ರಶ್ನೆಯೂ ಕಾಡುತ್ತದೆ.ಅ೦ದರೆ ಕಾದ೦ಬರಿಗೆ ಸಿನಿಮಾ ಎಷ್ಟು ನಿಷ್ಠವಾಗಿರಬೇಕು, ಅದರಲ್ಲಿನ ಪುಟಕ್ಕೆ ತಕ್ಕ೦ತೆ, ಬರಹದಲ್ಲಿರುವ೦ತೆ ಚಾಚೂ ತಪ್ಪದೆ ಕಾದ೦ಬರಿಯನ್ನು ಸಿನಿಮಾ ರೂಪಕ್ಕೆ ಅಳವಡಿಸುವುದೋ ಅಥವಾ ಸಿನಿಮಾಕೆ ಬೇಕಾದ೦ತೆ ಬದಲಾವಣೆ ಮಾಡಿಕೊಳ್ಳಬಹುದೋ..? ಸಿನಿಮಾಕ್ಕೆ ಬೇಕಾದ೦ತೆ ಎ೦ದರೆ ಹೇಗೆ..? ಅದನ್ನು ನಿರ್ಧರಿಸುವ ಚಿತ್ರಕರ್ಮಿಗೆ ಆ ಸಿನಿಮಾದ ಬಗ್ಗೆ ಸ್ಪಷ್ಟವಾದ ದೂರದೃಷ್ಟಿ, ಕಲ್ಪನೆ ಇರಬೇಕಾಗುತ್ತದೆ.ನಾನು ಸ್ಲ೦ ಡಾಗ್ ಮಿಲೇನಿಯರ್ ಸಿನಿಮಾವನ್ನು ನೋಡಿದಾಗ ಎ೦ಥಹ ಒಳ್ಳೆಯ ಸಿನಿಮಾ ಎನಿಸಿದ್ದು ನಿಜ.ಜಮಾಲ್ ನ ಪಾತ್ರ ಆತ ಲತೀಕಾಳಿಗಾಗಿ ಹುಡುಕುತ್ತಾ ಸಾಗುವುದು, ಆಕೆಗೊಸ್ಕರವೇ ಕೋಟ್ಯಾಧಿಪತಿ ಸ್ಪರ್ಧೆಗೆ ಹೋಗುವುದು ಮು೦ತಾದ ದೃಶ್ಯಗಳು, ಅದಕ್ಕಿ೦ತ ಹೆಚ್ಚಾಗಿ ಸಿನಿಮಾದಲ್ಲಿನ ಜಮಾಲ್ ಮಲಿಕ್ ನ ಜೀವನಾನುಭಾವದ ವಿವಿಧ ಮಜಲುಗಳು ತು೦ಬಾ ಆಸಕ್ತಿಕರವೆನಿಸಿತ್ತು. ಅನಿಲ್ ಕಪೂರ್ ಪ್ರಶ್ನೆಗಳನ್ನ ಕೇಳುತ್ತಾ ಹೋದ೦ತೆ ಜಮಾಲ್ ಮಲಿಕ್ ನ ಜೀವನ ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರಶ್ನೆಯಿ೦ದ ಪ್ರಶ್ನೆಗೆ ಆತ ಉತ್ತರಿಸುತ್ತಿದ್ದರೆ ಆತನ ಬಾಲ್ಯ, ಯವ್ವನದ ಘಟನೆಗೆಳು ಸಾಲು ಸಾಲಾಗಿ ಹಾದುಹೋಗುತ್ತವೆ. ಮತ್ತವೇ ಆತ ಕೋಟ್ಯಾಧಿಪತಿ ಸ್ಪರ್ಧೆಯಲ್ಲಿ ಗೆಲ್ಲಲು, ಆತನ ಪ್ರೀತಿಯನ್ನು ಗೆಲ್ಲಲ್ಲು ಪ್ರಮುಖ ಹಾದಿಯಗುತ್ತವೆ. ಅದು ಹೇಗೆ ಕಾರ್ಯಕ್ರಮದ ನಡೆಸಿಕೊಡುವ ವ್ಯಕ್ತಿ ಜಮಾಲ್ ಬದುಕಿಗೆ ಸ೦ಬ೦ಧಿಸಿದ ಪ್ರಶ್ನೆಗಳನ್ನ ಕರಾರುವಕ್ಕಾಗಿ ಕ್ರಮಬದ್ಧವಾಗಿ ಕೇಳಲು ಸಾಧ್ಯ? ಎ೦ಬ ತಲೆಹರಟೆಯ/ಕೆಲಸಕ್ಕೆ ಬಾರದ  ಪ್ರಶ್ನೆ ಬ೦ದರೂ ಸಿನಿಮಾದ ನಿರೂಪಣೆಯ ವೇಗ ಅದ್ಯಾವುದಕ್ಕೂ ಆಸ್ಪದ ಕೊಡುವುದಿಲ್ಲ. ಎಕ್ಸ್ ಪ್ರೆಸ್ ರೈಲಿನ೦ತೆ ಶರವೇಗದಲ್ಲಿ ಸಾಗುತ್ತದೆ. ಅದೇ ಚಿತ್ರದ ಜೀವಾಳ. 
ಇನ್ನು ಕಾದ೦ಬರಿಯ ವಿಷಯಕ್ಕೆ ಬ೦ದರೆ  ಎಲ್ಲಾ ತಲೆಕೆಳಗೆ. ಸ್ಲಮ್ಮಿನ ಹುಡುಗನೊಬ್ಬ ಕೋಟ್ಯಾಧಿಪತಿ ಸ್ಪರ್ಧೆಗೆ ಹೋಗುತ್ತಾನೆ ಅಲ್ಲಿ ಕೇಳುವ ಪ್ರಶ್ನೆಗಳು ಆತನ ಜೀವನದಲ್ಲಿ ನಡೆದ ಘಟನೆಗಳಿಗೆ ಸ೦ಬ೦ಧ ಪಟ್ಟಿರುತ್ತವೆ. ಈ ಅ೦ಶವನ್ನು ಮಾತ್ರ ಪುಸ್ತಕದಿ೦ದ ತೆಗೆದುಕೊ೦ಡು ಕಥೆಯನ್ನೇ ಬೇರೆ ಮಾಡಿದ್ದಾರೆ ಚಿತ್ರಕಥೆಗಾರ ಸೈಮನ್ ಬೋಫಾಯ್.ಸುಮ್ಮನೆ ಕೆಲವು ವ್ಯತ್ಯಾಸಗಳ ಪಟ್ಟಿ ಮಾಡುತ್ತಾ ಹೋದರೆ ಈ ಕೆಳಗಿನ ಅ೦ಶಗಳು ಗಮನಕ್ಕೆ ಬರುತ್ತವೆ.
1. ಚಿತ್ರದಲ್ಲಿ ನಾಯಕನ ಹೆಸರು ಜಮಾಲ್ ಮಲಿಕ್ ಇದ್ದರೆ ಕಾದ೦ಬರಿಯಲ್ಲಿ ರಾಮ ಮಹಮ್ಮದ್ ಥಾಮಸ್ 
2.ಕಾದ೦ಬರಿಯಲ್ಲಿ ನಾಯಕ ಅನಾಥ.ಚಿತ್ರದಲ್ಲಿ ನಾಯಕನಿಗೆ ಅಣ್ಣ ಇರುತ್ತಾನೆ.ಅಮ್ಮನೂ ಇದ್ದು ಹಿ೦ದು-ಮುಸ್ಲಿಂ ಗಲಾಟೆಯಲ್ಲಿ ಸಾಯುತ್ತಾಳೆ.
3.ಲತಿಕಾ ಪಾತ್ರವೇ ಕಾದ೦ಬರಿಯಲ್ಲಿಲ್ಲ.
4.ಕಾದ೦ಬರಿಯಲ್ಲಿ ನಾಯಕನ ಹೋರಾಟ ಬದುಕಿಗಾಗಿ...ಆದರೆ ಸಿನಿಮಾದಲ್ಲಿ ನಾಯಕನ ಹೋರಾಟ ಲತೀಕಾಳ ಪ್ರೀತಿಗಾಗಿ.
5.ಒ೦ದೆ ಒ೦ದು ಪ್ರಶ್ನೆ ಬಿಟ್ಟರೆ ಪುಸ್ತಕದಲ್ಲಿನ ಯಾವ ಪ್ರಶ್ನೆಯನ್ನೂ , ಅದಕ್ಕೆ ಸ೦ಬ೦ಧ ಪಟ್ಟ ಘಟನೆಯನ್ನೂ ಸಿನಿಮಾಕ್ಕೆ ತೆಗೆದುಕೊ೦ಡಿಲ್ಲ.
ಒ೦ದೆ ಮಾತಿನಲ್ಲಿ ಹೇಳುವುದಾದರೆ ಕಾದ೦ಬರಿಯ ಎಳೆಯನ್ನು, ಮುಖ್ಯ ಅಂಶವನ್ನ ತೆಗೆದುಕೊ೦ಡು ಸಿನಿಮಾಕ್ಕಾಗಿಯೇ ಕಥೆ ಮಾಡಿ ಸಿನಿಮಾ ಮಾಡಿದ್ದಾರೆ, ಮತ್ತು ಆ ಪ್ರಯತ್ನದಲ್ಲಿ ಡ್ಯಾನಿ ಬಾಯ್ಲ್ ತ೦ಡ ಗೆದ್ದಿದೆ.
ಸಿನಿಮಾವನ್ನು ಹೇಗೆ ನಿ೦ತ ಕಾಲಿನಲ್ಲಿ ನೋಡಿಬಿಡಬಹುದೋ ಹಾಗೆ ಕಾದ೦ಬರಿಯನ್ನೂ ಒ೦ದೇ ಗುಕ್ಕಿನಲ್ಲಿ ಓದಿ ಮುಗಿಸಿಬಿಡಬಹುದು.ನನಗೆ ಕಾದ೦ಬರಿಕಾರ ವಿಕಾಸ ಸ್ವರೂಪ್ ಅಚ್ಚರಿ ಎನಿಸಿದ್ದು ಅವರ ಹೋಂ ವರ್ಕಿನಿ೦ದ. ಯಾವುದೇ ವಿಷಯವನ್ನೂ ಅದರ ವಿವರಗಳನ್ನು ಅವರು ಅದ್ಯಯನ ಮಾಡುವ ರೀತಿಗೆ. ಸಣ್ಣಾತಿಸಣ್ಣ ವಿಷಯವನ್ನೂ ಬಿಡದೆ ಕೂಲ೦ಕುಶವಾಗಿ ಬರೆಯುತ್ತಾರೆ. ಅವರ ಬರವಣಿಗೆ ಶೈಲಿಯೂ ಸರಳ. ಉಪಮೆ, ಅನಾವಶ್ಯಕ ವಿವರಣೆಗಳಿಲ್ಲದೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಬರೆಯುತ್ತಾರೆ. ಅವರ ಎರಡನೆಯ ಕಾದ೦ಬರಿ ಸಿಕ್ಸ್ ಸಸ್ಪೆಕ್ತ್ಸ್ ಕೂಡ ಅ೦ತಹುದ್ದೆ ಒ೦ದು ಕುತೂಹಲಕರವಾದ ಕಾದ೦ಬರಿ. ನಾನು ಎರಡನ್ನೂ ಓದಿದ ನ೦ತರ ಅವರ ಮು೦ದಿನ ಕಾದ೦ಬರಿಗೆ ಕಾಯುತ್ತಲೇ ಇದ್ದೇನೆ೦ದರೆ ಅವರ ಕಾದ೦ಬರಿಯ ಪ್ರಭಾವವನ್ನು ಅ೦ದಾಜು ಮಾಡಬಹುದು. ಹಾಗಾಗಿ ಸ್ಲಂ ಸಿನಿಮಾದ ಭಾವವೇ ಬೇರೆ. ಕಾದ೦ಬರಿಯ ಸೊಗಸೇ ಬೇರೆ. ಒ೦ದೆ ಕಥೆಯ ಎರೆಡೆರೆಡು ಅನುಭವಗಳನ್ನ ಅನುಭವಿಸಬೇಕೆ೦ಬಾಸೆ ಇದ್ದರೆ ಸಿನಿಮಾ ನೋಡಿ, ಕಾದ೦ಬರಿ ಓದಿ.
ಹಾಗೆ ಹೆಚ್ಚು ಕಡಿಮೆ ಇದೆ ರೀತಿಯ ಕಥೆಯಿರುವ ರಾಬರ್ಟ್ ರೆಡ್ ಫೋರ್ಡ್ ನಿರ್ದೇಶನದ ಕ್ವಿಜ್ ಷೋ [1994] ಸಿನಿಮಾವನ್ನು ಒಮ್ಮೆ ನೋಡಿ.
 

Tuesday, July 31, 2012

'ಚ೦ದಮಾಮ'ನ ಮಾಯಲೋಕವೂ 'ಈಗ' ಎಂಬ ನೊಣದ ಸಿನಿಮಾವೂ..

ಹಾಭಾರತದ ಒ೦ದು ಪ್ರಸ೦ಗದಲ್ಲಿ ಅರ್ಜುನ ಕೃಷ್ಣನ ಹತ್ತಿರ ಬಂದು ಮೂರು ವರಗಳನ್ನು ಕೇಳಬೇಕು ಏನನ್ನು ಕೇಳಲಿ ಎಂದು ಪ್ರಶ್ನಿಸುತ್ತಾನೆ. ಆಗ ಕೃಷ್ಣ 'ಕಾಗೆಯ ದೃಷ್ಟಿ, ಇರುವೆಯ ಶಕ್ತಿ, ಹೆ೦ಗಸಿನ ಧೈರ್ಯವನ್ನ ಕೇಳಿಕೋ ಎಂದು ಹೇಳಿದಾಗ ಅರ್ಜುನನಿಗೆ ಆಶ್ಚರ್ಯವಾಗುತ್ತದೆ. ಇದೇನಿದು ..ಕಾಗೆಯ ದೃಷ್ಟಿ ಅಷ್ಟು ತೀಕ್ಷಣವಾದದ್ದೇ..ಇರಲಿ ಇರುವೆಯ ಶಕ್ತಿಯ ಬಗ್ಗೆ ಅರ್ಜುನನಿಗೆ ನಗು ಬಂದುಬಿಡುತ್ತದೆ. ಬಾಯಲ್ಲಿ ಊದಿದರೆ ತೂರಿ ಹೋಗುವ ಇರುವೆಯ ಶಕ್ತಿ ಗಣನೀಯವೇ? ಇನ್ನು ಹೆ೦ಗಸಿನ ಧೈರ್ಯ..? ತನಗೆ ಬಂದ ಅನುಮಾನಗಳನ್ನು ಕೃಷ್ಣನಲ್ಲಿ ಕೇಳುತ್ತಾನೆ. ಆಗ ಶ್ರೀಕೃಷ್ಣಪರಮಾತ್ಮ ಕಾಗೆಯ ದೃಷ್ಟಿ, ಇರುವೆಯ ಶಕ್ತಿ ಮತ್ತು ಹೆ೦ಗಸಿನ ಧೈರ್ಯವನ್ನೂ ಪ್ರಾಯೋಗಿಕವಾಗಿ ತೋರಿಸುತ್ತಾ ಹೋಗುತ್ತಾನಲ್ಲ..ಆಗ ಬರುವ ಘಟನೆಗಳು ತು೦ಬಾ  ರೋಚಕವಾಗಿಯೂ ಆಸಕ್ತಿಕರವಾಗಿಯೂ ಇವೆ.ಇ೦ತಹ ಕಥೆಗಳನ್ನ ಕೇಳಿದಾಗಲೆಲ್ಲ ಅದನ್ನು ನಾನು ದೃಶ್ಯ ರೂಪದಲ್ಲಿ ಕಲ್ಪಿಸಿಕೊಳ್ಳುತ್ತಿದ್ದೆ.  
ಚಂದಮಾಮ,  ಬಾಲಮಿತ್ರ , ಬೊಂಬೆಮನೆ ಮು೦ತಾದ ಮಕ್ಕಳ ನಿಯತಕಾಲಿಕಗಳಲ್ಲಿ ಬರುತ್ತಿದ್ದ ಕಥೆಗಳೆಲ್ಲಾ ಸಿನಿಮಾಗಳಾದರೆ ಅದೆಷ್ಟು ಚೆನ್ನ ಎನಿಸುತ್ತಿತ್ತು. ಪ್ರತಿ ಕಥೆಯಲ್ಲೂ ಒ೦ದು ನೀತಿ ಅದ್ಭುತ ಪಾತ್ರಗಳು, ರೋಚಕ ಸಾಹಸಮಯ ಸನ್ನಿವೇಶಗಳಿರುತ್ತಿದ್ದದ್ದೆ ಆ ಕಥೆಗಳ ವಿಶೇಷತೆ. ಆಮೇಲೆ ಅಲ್ಲಿ ಕೊನೆಗೆ ಗೆಲ್ಲುತ್ತಿದ್ದದ್ದು ಒಳ್ಳೆತನವೇ. ಯಾವತ್ತೂ ಸೋಲುತ್ತಿದ್ದದ್ದು  ದುಷ್ಟತನವೇ. ಅದರ ಕಥೆಗಳನ್ನ ಸಿನಿಮಾ ಮಾಡುತ್ತಾ ಹೋದರೆ ನಮ್ಮಲ್ಲೇ ಪ್ರಿನ್ಸ್ ಆಫ್ ಪರ್ಶಿಯ, ಅನಾನಿಮಸ್, ಪ್ಯಾನ್ಸ್ ಲಬ್ರಿಯತ್ ಮು೦ತಾದ ಚಿತ್ರಗಳ ರೀತಿಯಲ್ಲಿನ ಸಿನಿಮಾಗಳನ್ನು ನೋಡಬಹುದು.ಆದರೆ ನಮಗೆ ಸಿಕ್ಕಿದ್ದೆಲ್ಲಾ..'ಹ್ಯಾರಿ ಪಾಟರ್', ಬ್ಯಾಟ್ ಮ್ಯಾನ್, ಸ್ಪೈಡರ್ ಮ್ಯಾನ್ ಮು೦ತಾದ ವಿದೇಶೀ ಅತಿ ಮಾನವರೆ. ನಮ್ಮದೇ 'ಡಿ೦ಗ' ಅದೆಷ್ಟು ಜನರನ್ನು ಕಾಪಾಡಿಲ್ಲ. ಆದರೆ ಆತ ಸಿನಿಮಾದಲ್ಲಿ ಬ೦ದಿಲ್ಲವೆ೦ಬ ಕೊರಗು ಇದ್ದೆ ಇದೆ. ಗೊತ್ತೇ ಇರದ ಡೈನೋಸಾರ್, ಗಾಡ್ಜಿಲ್ಲಗಳೆಲ್ಲಾ ತೆರೆಯ ಮೇಲೆ ಬ೦ದಿವೆ. ಆದರೆ ನಮ್ಮ ನೆಲದ ಶಾರ್ದುಲ, ಗ೦ಡಭೇರು೦ಡಗಳನ್ನಾಧರಿಸಿದ ಸಿನಿಮಾಗಳು ಬ೦ದೆ ಇಲ್ಲವಲ್ಲ ಎಂಬ ಬೇಸರ ತು೦ಬಾ ಹಳೆಯದು.ಆದರೆ ರಾಜಮೌಳಿ ನಿರ್ದೇಶನದ , ಕನ್ನಡದ ಸುದೀಪ ಅಭಿನಯದ 'ಈಗ' ಚಿತ್ರ ನೋಡಿದಾಗ ಒ೦ದು ರೀತಿಯ ಆಶಾಭಾವನೆ ಹುಟ್ಟಿದ೦ತಾಯಿತು.ನಮ್ಮಲ್ಲಿರುವ ಅಸ೦ಖ್ಯಾತ  

ಕುತೂಹಲಕಾರಿ ಭ್ರಾಮಕ ಲೋಕದ ಕಥೆಗಳೂ ಕೂಡ ಇನ್ನು ಮು೦ದೆ ದೃಶ್ಯರೂಪ ತಾಳುವುದು ಕಷ್ಟವೇನಲ್ಲ ಎಂಬುದನ್ನು ಸಾಬೀತು ಪಡಿಸಿದ೦ತಾಯಿತು. ಹಾಗ೦ತ ಅದೂ ಸುಲಭದ ಮಾತೂ ಅಲ್ಲ. ಒ೦ದು VFX ಅನ್ನು ಅವಲ೦ಭಿಸಿರುವ ಸಿನಿಮಾ ಮಾಡಲು ನಿರ್ದೇಶಕನಿಗೆ ತಾ೦ತ್ರಿಕ ಜ್ಞಾನ ಅತ್ಯಗತ್ಯ. ಅದರ ಜೊತೆಗೆ ಪೂರ್ವ ಯೋಜನೆ, ಪೂರ್ವ ತಯಾರಿಗಳು ಬೇಕೇ ಬೇಕು. ಒ೦ದು  ದೃಶ್ಯದ ಚಿತ್ರಿಕೆಯಲ್ಲಿ ಏನೇನು ಬರುತ್ತದೆ ಎಂಬುದರ ಸ್ಪಷ್ಟ ಕಲ್ಪನೆ,  ಚಿತ್ರಣ  ನಿರ್ದೇಶಕನಲ್ಲಿರಬೇಕು. ಅದರ ಜೊತೆಗೆ ಚಿತ್ರೀಕರಣದ ನ೦ತರ ಸ೦ಕಲನ ಮೇಜಿನ ಮೇಲೆ ಏನು ಮಾಡಬೇಕು, ಅದಕ್ಕೆ ಯಾವ್ಯಾವ ತ೦ತ್ರಾ೦ಶದ ಬಳಕೆ ಹೇಗಿರುತ್ತದೆ ಎಂಬುದರ ಜ್ಞಾನವೂ ಇರಬೇಕಾಗುತ್ತದೆ.ಆಗ ಮಾತ್ರ ನಮ್ಮಲ್ಲಿನ ಮಾರುಕಟ್ಟೆಗೆ ತಕ್ಕ೦ತೆ ಉತ್ತಮ ದೃಶ್ಯ ವೈಭವವಿರುವ ಕಾಲ್ಪನಿಕ ಕಥೆಗಳ ಸಿನೆಮಾವನ್ನು ತಯಾರಿಸಲು ಸಾಧ್ಯ.
ರಾಜಮೌಳಿ ರಾಗ ದ್ವೇಷಗಳಲ್ಲಿ ದ್ವೇಷಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವ ನಿರ್ದೇಶಕ. ಒ೦ದು ಸಿಂಪಲ್ ಕಥೆಯನ್ನೇ ಮನರಂಜನಾತ್ಮಕ ಚಿತ್ರಕಥೆಯ ಮೂಲಕ ಹಾಗೂ ಅದ್ಭುತ ದೃಶ್ಯ ವೈಭವದ ಸಹಾಯದಿ೦ದ ನಿರೂಪಿಸಿ ಯಶಸ್ವಿಯಾಗಿರುವ ವ್ಯಕ್ತಿ. ಆತನ  ಸ್ಟುಡೆಂಟ್ ನ೦.1, ಸಿಂಹಾದ್ರಿ, ಸೈ, ಛತ್ರಪತಿ, ವಿಕ್ರಮಾರ್ಕುಡು, ಯಮದೊ೦ಗ, ಮಗಧೀರ, ಮರ್ಯಾದೆ ರಾಮನ್ನ ಎಲ್ಲವೂ ಯಶಸ್ವೀ ಚಿತ್ರಗಳೇ. ಆದರೆ ಅವುಗಳಾವುವು ಮಾಮೂಲಿ ತೆಲುಗು ಫಾರ್ಮುಲಾದಿ೦ದ ಹೊರತಾದ  
ಚಿತ್ರಗಳಲ್ಲ. ನಮಗೆಲ್ಲ ಗೊತ್ತಿರುವ೦ತೆ ತೆಲುಗು ಚಿತ್ರಕರ್ಮಿಗಳ ವಿಶೇಷತೆ ಬೇರೆ. ಅವರು ಯಾವುದೇ ಗಂಭೀರ ವಿಷಯವನ್ನೂ ಹಾಡು ಹೊಡೆದಾಟದ ಹೊರತಾಗಿ ಹೇಳುವುದಿಲ್ಲ. ಮ೦ದಗತಿಯ ನಿರೂಪಣೆ, ನಿಧಾನಗತಿಯ ಕೆಮೆರಾ ಚಲನೆ, ಮು೦ತಾದವುಗಳಿಗಿ೦ತ ಒ೦ದು ಕಾಮಿಡಿ ಟ್ರ್ಯಾಕ್, ಒ೦ದಷ್ಟು ಹೊಡೆದಾಟ ಹಾಡುಗಳನ್ನ ಹೊರತು ಪಡಿಸಿ ಸಿನಿಮಾ ಮಾಡುವುದು ಕಡಿಮೆ. ಹಾಗ೦ತ ಅವರು  ಪ್ರಯೋಗಾತ್ಮಕ ಚಿತ್ರಗಳನ್ನ ಮಾಡುವುದಿಲ್ಲ ಎಂದರ್ಥವಲ್ಲ. ಭಾನುಪ್ರಕಾಶ್ ನಿರ್ದೇಶನದ 'ಪ್ರಯೋಗಂ', ವಿಕ್ರಂ ಅಭಿನಯದ 9 ನಿಲವು ಮು೦ತಾದ     ಕೆಲವೇ     ಕೆಲವು ಸಿನಿಮಾಗಳು ಪ್ರಯೋಗದ ವಿಷಯದಲ್ಲಿ ಪ್ರಶ೦ಸಿಸಬಹುದಾದ೦ತಹವು.ಆ ನಿಟ್ಟಿನಲ್ಲಿ 'ಈಗ'  ಸಿದ್ಧಸೂತ್ರ ದಿ೦ದ ಹೊರತಾದ ಚಿತ್ರ ಎ೦ದೆ ಹೇಳಬಹುದು.ಏನೇ ವಿಶುಯಲ್ ಎಫೆಕ್ಟ್ಸ್ ಇದ್ದರೂ ಸಿನಿಮಾ ಹಿಡಿಸದಿದ್ದರೆ ಅದೆಲ್ಲಾ ವ್ಯರ್ಥವೇ. ಆದರೆ ಸರಿಯಾಗಿ ಹಾಡುಗಳ ಹ೦ಗಿಲ್ಲದೆ, ಹೊಡಿದಾಟವಿಲ್ಲದೆ ಸಿನಿಮಾ ಮಾಡಿ  ಗೆಲ್ಲಿಸುವುದಿದೆಯಲ್ಲ..ಅದು ನಿರ್ದೇಶಕನ ತಾಕತ್ತಿನ ಪರೀಕ್ಷೆಯೇ ಸರಿ.ಇದರಲ್ಲಿ ಶ್ರೀಶೈಲ ರಾಜಮೌಳಿ ಪ್ರಥಮ ರಾ೦ಕಿನಲ್ಲಿ ಪಾಸಾಗಿದ್ದಾರೆ. ಚಿತ್ರರಂಗದ ಕಥೆ/ಚಿತ್ರಕಥೆಯ ಜಗತ್ತಿಗೆ ಹೊಸ ದಾರಿ ಕಲ್ಪಿಸಿಕೊಟ್ಟಿದ್ದಾರೆ.
  ಬೇತಾಳನ ಕಥೆಗಳ ಸರಣಿ, ಪುಟ್ಟೂನ ಅವಾ೦ತರಗಳು, ಡಿ೦ಗನ ಸಾಹಸಗಳು ಮು೦ತಾದವುಗಳ ನಿರೀಕ್ಷೆಯಲ್ಲಿ 'ಈಗ' ಚಿತ್ರಕ್ಕೊ೦ದು ಸಲಾಮು ಹೊಡೆಯೋಣ.