Friday, February 21, 2014

ಒಂದೇ ಎಳೆ...ಅದೇ ರೀತಿ ಬೇರೆ ನೀತಿ

ಒಬ್ಬ ನಿರ್ದೇಶಕ ಸಿನಿಮಾ ಮಾಡುತ್ತಾ ಸಾಗಿದಂತೆ ತನ್ನದೇ ಶೈಲಿ ರೂಪಿಸಿಕೊಳ್ಳುತ್ತಾನೆ. ಅದರ ಜೊತೆಗೆ ತನ್ನತನವನ್ನು ಅದರಲ್ಲಿ ತೋರಿಸುತ್ತಾನೆ ಆದರೆ ಇನ್ನೂ ಸ್ವಲ್ಪ ಹೆಚ್ಚೇ ಗಮನಿಸಿದರೇ ಒಂದೇ ಕತೆ ಎಳೆಯನ್ನು ಅಥವಾ ನಿರೂಪಣೆಯ ಶೈಲಿಯನ್ನು ಅಲ್ಪ ಸ್ವಲ್ಪ ಬದಲಿಸಿರುತ್ತಾನೆ.
ಉದಾಹರಣೆಗೆ ಉಪೇಂದ್ರರ ಎ, ಓಂ, ಉಪೇಂದ್ರ ಮುಂತಾದ ಚಿತ್ರಗಳನ್ನು ಗಮನಿಸಿದರೇ ಗೊತಾಗುತ್ತದೆ. ಮೊದಲಿಗೆ ವ್ಯಕ್ತಿಯ ಘಟನೆಯ ಉಚ್ಛ್ರಾಯ ಸ್ಥಿತಿ ತೋರಿಸಿ ಆನಂತರ ಅದರ ವ್ಯತಿರಿಕ್ತವಾದ ಘಟನೆ, ಸನ್ನಿವೇಶ ಪಾತ್ರ ತೋರಿಸಿ ಮೂರನೆಯ ಭಾಗದಲ್ಲಿ ಪ್ರಸ್ತುತ ನಡೆಯುತ್ತಿರುವುದನ್ನು ತೋರಿಸಿದ್ದಾರೆ. ಅಂದರೆ ಅವರ ಚಿತ್ರದ ಕತೆಯನ್ನು/ನಿರೂಪಣೆಯನ್ನು ಮೂರು ಭಾಗಗಳಾಗಿ ಮಾಡಿದ್ದಾರೆ ಎನ್ನಬಹುದು. ಓಂ ಚಿತ್ರದಲ್ಲಿ ಮೊದಲಿಗೆ ಡಾನ್ ಆದ ಸತ್ಯ ಅಂದರೆ ರೌಡಿಸಂ ನ ಉಚ್ಛ್ರಾಯ ಸ್ಥಿತಿ ಆನಂತರ ಅದಕ್ಕೆ ವ್ಯತಿರಿಕ್ತವಾದ ದೇವಸ್ಥಾನದ ಅರ್ಚಕ, ಅಮಾಯಕ ಸತ್ಯ ಹಾಗೆ ಮೂರನೆಯ ಭಾಗದಲ್ಲಿ ಈಗ[ಆಗ] ನಡೆಯುವ ಘಟನೆಗಳನ್ನು ಪೋಣಿಸುತ್ತಾರೆ. ಎ ಕೂಡ ಹಾಗೆ. ಮೊದಲಿಗೆ ಹುಚ್ಚುಚ್ಚಾಗಿ ಆಡುವ ಪ್ರೇಮಿ ಸೂರ್ಯ ಆನಂತರ ಹೆಣ್ಣು ಪ್ರೀತಿಯೆಂದರೆ ಬೆಂಕಿಯ ಹಾಗೆ ಸಿಡುಕುವ ಸೂರ್ಯ, ಮೂರನೆಯ ಭಾಗದಲ್ಲಿ ಮತ್ತೆ ವಾಸ್ತವ ತೋರಿಸುತ್ತಾರೆ. ಸೂಪರ್ ಚಿತ್ರದಲ್ಲೂ ಹಾಗೆಯೇ ಇದೆ. 
ಹಾಗೆ ಪ್ರೇಮ್ ಚಿತ್ರಗಳಲ್ಲಿ ಹುಡುಕಾಟ ಪ್ರಮುಖ ಪಾತ್ರ ಎನಿಸುತ್ತದೆ. ಅವರ ಮೊದಲ ಚಿತ್ರ ಕರಿಯ ದಲ್ಲಿ ನಾಯಕ ನಾಯಕಿ ಒಬ್ಬರನ್ನೊಬ್ಬರು ಹುಡುಕುತ್ತಾ ಸಾಗುತ್ತಾರೆ, ಜೋಗಿ ಚಿತ್ರದಲ್ಲಿ ಅಮ್ಮ ಮಗ ಪರಸ್ಪರ ಹುಡುಕುತ್ತಾರೆ, ಎಕ್ಸ್ ಕ್ಯೂಸ್ ಮಿ ಯಲ್ಲಿ ನಾಯಕನನ್ನು ನಾಯಕಿ ಹುಡುಕುತ್ತಾಳೆ, ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದಲ್ಲಿ ಮತ್ತೆ ನಾಯಕ ನಾಯಕಿ ಹುಡುಕಾಟ ಹೀಗೆ.
ಸುಮ್ಮನೆ ಯೋಗರಾಜ್ ಭಟ್ ಅವರ ಇತ್ತೀಚಿನ ಚಿತ್ರಗಳನ್ನು ಗಮನಿಸೋಣ. ಅವರ ಕತೆಯ ಪ್ರಕಾರ ಪ್ರೀತಿ ಹುಟ್ಟ ಬೇಕಾದರೆ ಊರು ಬಿಟ್ಟು ಹೋಗಲೇಬೇಕು. ಇದ್ದ ಕಡೆ ಪ್ರೀತಿ ಹುಟ್ಟಿಸಿದ್ದು ಯೋಗರಾಜ್ ಭಟ್ ಕಡಿಮೆ. ಮುಂಗಾರು ಮಳೆ ಚಿತ್ರದಲ್ಲಿ ಇಲ್ಲಿಂದ ಮದುವೆಗೆ ಹೋದ ನಾಯಕನಿಗೆ ಅಲ್ಲಿ ಲವ್ ಆಗುತ್ತದೆ, ಗಾಳಿಪಟದಲ್ಲಿ ರಜಾ ಕಳೆಯಲು ಹೋದರೆ ಮೂರು ಜನಕ್ಕೂ ಅಲ್ಲೇ ನಾಯಕಿಯರು ಸಿಕ್ಕಿ ಪ್ರೀತಿ ಶುರುವಾಗುತ್ತದೆ, ಡ್ರಾಮಾ ಚಿತ್ರದಲ್ಲಿ ಊರು ಬಿಟ್ಟು ನಿರ್ಜನ ಪ್ರದೇಶದಂತಹ ಕಾಲೇಜಿನಲ್ಲಿ ಪ್ರೀತಿಯಾಗುತ್ತದೆ, ಮನಸಾರೆ ಚಿತ್ರದಲ್ಲಿ ಬೆಂಗಳೂರು ಬಿಟ್ಟು ದೂರದೂರಿನ ಹುಚ್ಚಾಸ್ಪತ್ರೆಯಲ್ಲಿ ಪ್ರೀತಿ ಸಿಗುತ್ತದೆ. ಪಂಚರಂಗಿಯಲ್ಲಿ ಅಣ್ಣನ ಮದುವೆಗೆ ಹೋದ ನಾಯಕನಿಗೆ ಪ್ರೀತಿ ಸಿಗುತ್ತದೆ. ಅಂದರೆ ಬೇರೆ ಊರಿಗೆ ಕಾಲಿಟ್ಟ ನಾಯಕನಿಗೆ ನಾಯಕಿ ಪ್ರೀತಿ ಸಿಗುತ್ತದೆ ಎನ್ನಬಹುದು.
ಹಿಂದಿಯ ರಾಕೇಶ್ ರೋಶನ್ ಚಿತ್ರಗಳು ಹೇಗೆ 'ಕ' ಅಕ್ಷರದಿಂದ ಶುರುವಾಗುತ್ತವೋ ಹಾಗೆಯೇ ಚಿತ್ರದ ಕತೆಯೂ ಹೆಚ್ಚು ಕಡಿಮೆ ಒಂದೇ ಇರುತ್ತದೆ. ಅವರ ಚಿತ್ರಗಳ ಕತೆಯ ಎಳೆ ಮೊದಲಾರ್ಧ ನಾಯಕ ಸುಮ್ಮನಿರುತ್ತಾನೆ, ಎರಡನೆಯ ಭಾಗದಲ್ಲಿ ಪ್ರತೀಕಾರ ಕೈಗೊಳ್ಳುತ್ತಾನೆ.
ಕೊಯ್ಲಾ ಚಿತ್ರದಲ್ಲಿ ಮೂಗನಾಗಿರುತ್ತಾನೆ ನಾಯಕ. ಮಧ್ಯಂತರದ ನಂತರ ರೊಚ್ಚಿಗೆಳುತ್ತಾನೆ. ಕಹೋನ ಪ್ಯಾರ್ ಹೈ ಚಿತ್ರದಲ್ಲಿ ಮೊದಲಾರ್ಧದ ನಾಯಕ ಮೆದು ಸ್ವಭಾವದವನು. ಅವನಿಗೆ ಅನ್ಯಾಯವಾಗುತ್ತದೆ. ಎರಡನೆಯ ಭಾಗದಲ್ಲಿ ಮತ್ತೆ ಪ್ರತೀಕಾರ. ಕ್ರಿಶ್, ಕೋಇ ಮಿಲ್ ಗಯಾ, ಕರಣ್ ಅರ್ಜುನ್  ಚಿತ್ರಗಳದ್ದೂ ಹಾಗೆಯೇ.ಆದರೆ ಇದೆ ಸೂತ್ರ ಎಲ್ಲಾ ನಿರ್ದೇಶಕರಿಗೂ ಅನ್ವಯಿಸುವುದಿಲ್ಲ. ನಮ್ಮ ಸೂರಿ ಪ್ರತಿ ಸಿನಿಮಾದಲ್ಲೂ ನಾಯಕನನ್ನು ಕೆಳಮಾಧ್ಯಮ ವರ್ಗದ ಹುಡುಗನಾಗಿ ಚಿತ್ರಿಸುತ್ತಾರೆ.ಮಠ ಗುರು ಪ್ರಸಾದ್ ಚಿತ್ರಗಳ ಮುಖ್ಯ ಪಾತ್ರಗಳಲ್ಲಿ ಉಂಡಾಡಿಗುಂಡರ ಸಂಖ್ಯೆ ಜಾಸ್ತಿ ಇರುತ್ತದೆ.ಸೂರಜ್ ಆರ್ ಬಾರ್ಜಾತ್ಯ ಇಡೀ ಸಿನಿಮಾ ಮನೆಯಲ್ಲೇ ಮದುವೆ ಸಂಭ್ರಮದಲ್ಲೇ ಮುಗಿದುಹೋಗುತ್ತದೆ.
ಹಾಗೆ ನೋಡಿದರೆ ಬರೀ ಒಬ್ಬ ನಿರ್ದೇಶಕರನ್ನು ಇಂತಹ ಸರಣಿಗಳು ಆವರಿಸುವುದಿಲ್ಲ. ಕೆಲವೊಮ್ಮೆ ಒಂದಷ್ಟು ಚಿತ್ರಗಳ ಯಶಸ್ಸೂ ಕೂಡ ಎಲ್ಲಾ ನಿರ್ದೇಶಕರಿಗೂ ಈ ರೀತಿ ಮಾಡುವಂತೆ ಮಾಡಿದ ಉದಾಹರಣೆಗಳಿವೆ. ಹೀಗೆ ಸ್ವಲ್ಪ ಕಾಲದ ಹಿಂದೆ ತೆಲುಗಿನ ಬಹುತೇಕ ಚಿತ್ರಗಳಲ್ಲಿ ನಡೆಯುತ್ತಿದ್ದ ಮ್,ಮದುವೆ ಮುರಿದುಬಿದ್ದು ವಧುವೋ ವರನೋ[ಹೆಚ್ಚಾಗಿ ವಧುವೇ] ನನಗಿವನು ಬೇಡ, ಅವನೇ ಬೇಕು ಎಂದು ಪ್ರಿಯಕರನ ಹತ್ತಿರಕ್ಕೆ ಹಾರಿ ಹೋಗಿದ್ದರು. ಅದುವರೆವಿಗೂ ನಾಯಕನೇನೂ ಬೇರೆಲ್ಲೋ ದೂರದಲ್ಲಿ ಇರುತ್ತಿರಲಿಲ್ಲ. ಅವಳ ಹಿಂದೆ ಮುಂದೆ ಸುತ್ತಾಡುತ್ತಿರುತ್ತಿದ್ದ. ಆದರೆ ನಾಯಕಿ ಮಾತ್ರ ಬಿಂಕ ತೋರಿಸಿ ಅಪ್ಪ ಅಮ್ಮನ ಕೈಲಿ ಮದುವೆ ಖರ್ಚು ಮಾಡಿಸಿ ಆನಂತರ ಹೀಗೆ ಹೇಳಿದಾಗ ಅಲ್ಲಿಯವರೆಗೆ ಅದನ್ನೇ ನಿರೀಕ್ಷಿಸುತ್ತಾ ಕುಳಿತಿದ್ದ ನಮಗೆ ಗೊತ್ತಿತ್ತು..ಆದರೂ ಮೊದಲೇ ಹೇಳಬೇಕಲ್ಲಮ್ಮ...ಈಗ ಎಷ್ಟೆಲ್ಲಾ ಖರ್ಚಾಯಿತು ಎಂದು ಸಿನೆಮಾದ ವೆಚ್ಚದ ಜೊತೆಗೆ ನಮ್ಮ ಟಿಕೆಟ್ ನ ವೆಚ್ಚವನ್ನು ಸೇರಿಸಿ ಉದ್ಗಾರ ತೆಗೆಯುತ್ತಿದ್ದದ್ದುಂಟು.
ಆದರೂ ಕೆಲ ನಿರ್ದೇಶಕರು ತಮ್ಮ ಅನನ್ಯ ಶೈಲಿಯಿಂದ ತಮ್ಮದೇ ಛಾಪು ಮೂಡಿಸಿರುವುದಂತೂ ನಿಜ. ಬರೀ ಶಾಟ್ ಗಳನ್ನೇ ನೋಡಿ ಅಥವಾ ಹಾಡುಗಳನ್ನು ಕೇಳಿ ಅಥವಾ ಪೋಸ್ಟರ್ ಗಮನಿಸಿ ಇದು ಇವರದೇ ಎಂದೇ ಹೇಳಿಬಿಡಬಹುದು. ಅದವರ ಸಾಮರ್ಥ್ಯ ಎನ್ನಬಹುದು.
ಒಬ್ಬರ ಮುಖ ಒಬ್ಬರಿಗೆ ಕಾಣದ ರೀತಿ ಕುಳಿತು ಗಂಭೀರವಾಗಿ ಮಾತನಾಡುತ್ತಿದ್ದಾರೆಂದರೆ ಅದು ರಾಮ ಗೋಪಾಲ್ ವರ್ಮ ಶೈಲಿ. ಇಲ್ಲವಾದರೆ ಆ ತರಹ ಕತ್ತಲಕೂಪದಲ್ಲಿ ಯಾರಾದರೂ ಯಾಕೆ ಕುಳಿತುಕೊಳ್ಳುತ್ತಾರೆ ಹೇಳಿ. ಮನೆ ಎಂದರೆ ಅರಮನೆ, ವಾಹನವೆಂದರೆ ಹೆಲಿಕ್ಯಾಪ್ಟರ್ ಅಂದರೆ ಅದು ಕರಣ್ ಜೋಹರ್ ಎನ್ನಬಹುದು. ಇನ್ನು ಮಣಿರತ್ನಂ ಎಂದರೆ ತೀರಾ ಮನರಂಜನೆ ನಿರೀಕ್ಷಿಸುವ ಹಾಗಿಲ್ಲ. ಹಾಗೆಯೇ ಅರಳು ಹುರಿದಂತೆ ಮಾತನಾಡುವ ಜಾಯಮಾನದ ಪಾತ್ರಗಳು ಅವರಲ್ಲಿ ಕಡಿಮೆಯೇ. ಮಾತು ಕಡಿಮೆ ಎಂದರೆ ಕಿಂ ಕಿ ಡಕ್. ಗ್ರಾಫಿಕ್ಸ್ ಎಂದರೆ ರೋಲಂಡ್ ಎಮ್ರಿಚ್. ಉದ್ದನೆಯ ಅವಧಿಯ ಚಿತ್ರ ಎಂದರೆ ಅಶುತೋಷ್ ಗೋವಾರಿಕರ್, ಶೃಂಗಾರಮಯ ಎಂದರೆ ಟಿಂಟ್ ಬ್ರಾಸ್ ಹೀಗೆ. ಅವರ ಒಟ್ಟಾರೆ ಚಿತ್ರಗಳಲ್ಲಿ  ಅಡಕವಾಗಿರುವ ಹೆಚ್ಚಿನ ದ್ರವ್ಯದ ಮೇಲೆ ಪಟ್ಟಿ ಮಾಡುತ್ತಾ ಸಾಗಬಹುದೇನೋ?
ನಾನಂತೂ ಒಂದು ಚಿತ್ರ ನೋಡಿದ ಅದು ಇಷ್ಟವಾದರೆ  ಆ ನಿರ್ದೇಶಕನ ಎಲ್ಲಾ ಚಿತ್ರಗಳನ್ನು ನೋಡಲು ಇಷ್ಟಪಡುತ್ತೇನೆ.ಅದು ಯಾವುದೇ ಭಾಷೆಯಾದರೂ ಸರಿ. ಯಾಕೆಂದರೆ ಪ್ರತಿ ನಿರ್ದೇಶಕನಲ್ಲೂ ಒಂದು ಗುರ್ತಿಸಬಹುದಾದ ಅಂಶವಿದ್ದೇ ಇರುತ್ತದೆ. ಅದೇ ಅವನ ಶಕ್ತಿ  ಎನ್ನಬಹುದು.
ನನ್ನ ಪ್ರಶ್ನೆ: ನಿಮಗೆ ಕಂಡ ನಿಮ್ಮ ನೆಚ್ಚಿನ ನಿರ್ದೇಶಕರ ಮಾಮೂಲಿ ಮತ್ತು ಶಕ್ತಿಶಾಲಿ ಅಂಶ ಯಾವುದು?

3 comments:

  1. s.narayan du..ella tamil movie inda kadiyodu common ella movies allu :D

    ReplyDelete
  2. 1) ಹಿಚ್‌ಕಾಕ್ ಚಿತ್ರಗಳಲ್ಲಿನ "ಬ್ಲಾಂಡ್ ನಾಯಕಿ" ಮತ್ತು "ಅಸಾಧಾರಣ ಸಂದಿಗ್ಧಗಳಲ್ಲಿ ಸಿಕ್ಕಿಕೊಳ್ಳುವ ಸಾಮಾನ್ಯ ಮನುಷ್ಯ"
    2) ವುಡೀ ಅಲ್ಲೆನ್ ಚಿತ್ರಗಳಲ್ಲಿನ ನ್ಯೂ ಯೋರ್ಕ್ ನಿವಾಸಿಗಳು, ಬುದ್ಧಿಜೀವಿಗಳು, ಸೈಕೊ ಆನಲಿಸ್ಟ್ ಗಳು, ಜ್ಯೂಯಿಶ್ ಐಡೆಂಟಿಟೀ
    3) ಇಂಗ್ಮರ್ ಬರ್ಗ್ಮನ್ ಚಿತ್ರಗಳಲ್ಲಿನ ಧಾರ್ಮಿಕತೆಯಲ್ಲಿ ಉತ್ತರ ಹುಡುಕಲು ಒದ್ದಾಡುವ ನೊಂದ ಜೀವಗಳು
    4) ಯೋಗರಾಜ್ ಭಟ್ಟರ ಚಿತ್ರಗಳಲ್ಲಿನ ಉಡಾಫೆ ನಾಯಕರು
    5) ಎಸ್. ನಾರಾಯಣ್ ಚಿತ್ರಗಳಲ್ಲಿ ವಾಕರಿಕೆ ಬರುವಷ್ಟರ ಮಟ್ಟಿಗೆ "ಹೆಂಗಸರ ಮುಟ್ಟು" ಪ್ರಸ್ತಾಪ ಮತ್ತು ಅದರ ವೈಭವೀಕರಣ ;)

    ReplyDelete
  3. Naagashekar filmsnalli yenthadde kaarana idru Hero/Heroine badukoke saadhyane illa, They should die otherwise they should depart

    ReplyDelete