Monday, July 1, 2013

ಚಿತ್ರಗಳು..ವಿಚಿತ್ರಗಳು..

ಕಳೆದವಾರ ಕನ್ನಡದಲ್ಲಿ ನಾಲ್ಕು ಚಿತ್ರಗಳು ಬಿಡುಗಡೆಯಾದವು. ಬಿಡಲಾರೆ ಎಂದೂ ನಿನ್ನ, ಚಂದ್ರ, ನಮ್ ದುನಿಯಾ ನಮ್ ಸ್ಟೈಲ್ ಮತ್ತು ಸೈಕಲ್  ಹಾಗೂ ಹಿಂದಿಯಲ್ಲಿ  ಘನ್ ಚಕ್ಕರ್. ಹಠಕ್ಕೆ ಬಿದ್ದು ಐದೂ ಚಿತ್ರಗಳನ್ನು ಒಂದೂವರೆ ದಿನದಲ್ಲಿ ನೋಡಿಯಾದ ಮೇಲೆ ಐದೂ ಚಿತ್ರಗಳು ತಲೆಯಲ್ಲಿ ಕುಣಿಯತೊಡಗಿದ್ದವು.ಘನ ಚಕ್ಕರ್ ಒಂದೊಳ್ಳೆ ಕಥಾ ಎಳೆಯಿರುವ ಚಿತ್ರ. ನಿರ್ದೇಶಕ ರಾಜಕುಮಾರ್ ಗುಪ್ತ ತಮ್ಮ ನೋ ಒನ್ ಕಿಲ್ಲೆಡ್ ಜೆಸ್ಸಿಕಾ ಚಿತ್ರದಲ್ಲೇ ತಮ್ಮ ಖದರ್ ತೋರಿಸಿದ್ದವರು. ಘನಚಕ್ಕರ್ ಕೂಡ ಅವರಲ್ಲಿನ ಕಥೆಯ ಆಲೋಚನೆಯ ನಾವೀನ್ಯತೆಗೆ ಸಾಕ್ಷಿಯಾಗುವ ಚಿತ್ರ.
ಒಂದು ದರೋಡೆಯ ನಂತರ ಹಣವನ್ನೆಲ್ಲಾ ಒಬ್ಬನ ಕೈಗೊಪ್ಪಿಸಿ ಅದನ್ನು ಪಾಲು ಮಾಡಿಕೊಳ್ಳಬೇಕು ಎಂದಾಗ ಆತ ನನಗ್ಯಾವುದೂ ನೆನಪಿಲ್ಲ ಎಂದು ಬಿಟ್ಟರೆ..? ಇಲ್ಲೂ ಅದೇ ಆಗುತ್ತದೆ. ಮೊದಲಿಗೆ ಈ ದರೋಡೆಕೋರ ಘಜಿನಿಯನ್ನ ಅವನ ಸಹಚರರು ನಂಬುವುದಿಲ್ಲ. ಆದರೆ ಹೇಗೆ ಬಾಯಿ ಬಿಡಿಸುವುದು. ಅವರು ಮಾಡುವ ಪ್ರಯತ್ನಗಳು.. ಮೊದಲಾರ್ಧ ಚಿತ್ರ ಸೂಪರ್. ಆದರೆ ತದನಂತರ ಸ್ವಲ್ಪ ಮಟ್ಟಗಿನ ದಾರಿ ತಪ್ಪುವ ನಿರ್ದೇಶಕರು ಬರು ಬರುತ್ತಾ ಚಿತ್ರದ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಳ್ಳುತ್ತಾರೆ. ಮುಂದೆ..ಸುಮ್ಮನೆ ಒಮ್ಮೆ ನೋಡಲು ಮೋಸವಲ್ಲದ ಚಿತ್ರ.
ಇದೆ ಮಾತನ್ನು ಕನ್ನಡದ ನಾಲ್ಕೂ ಚಿತ್ರಗಳಿಗೆ ಹೇಳಲಾಗುವುದಿಲ್ಲ. ಹೋಲಿಸಿದರೆ ಬಿಡಲಾರೆ ಎಂದೂ ನಿನ್ನ ಚಿತ್ರ ಸಿದ್ಧ ಸೂತ್ರದಿಂದ ಒಂದು ಚೂರು ಆಚೆ ಸರಿಯದ ಚಿತ್ರ. ಆದರೆ ಬಜೆಟ್ ಕಡಿಮೆಯಿರುವುದರಿಂದ ಇರುವುದನ್ನೇ ಬಡಿಸಬೇಕೆನ್ನುವುದು  ನಿರ್ದೇಶಕನ ಆಶಯ. ಅದು ಅನಿವಾರ್ಯ ಕೂಡ. ಹೆಸರಲ್ಲಿ ಕಥೆಯಿದೆ. ಅವಳು ಸಿಕ್ಕಳು, ನಕ್ಕಳು ಪ್ರೀತಿಸಿದಳು, ಒಪ್ಪದಿದ್ದಾಗ ಸತ್ತಳು, ಮತ್ತೆ ದೆವ್ವವಾದಳು..ಇದಿಷ್ಟೇ ಕಥೆ.
ಇನ್ನು ಚಂದ್ರನನ್ನು ಯಾವರೀತಿಯಿಂದಲೂ ಭರಿಸಲು ನನಗೆ ಸಾಧ್ಯವಾಗಲಿಲ್ಲ. ಅಪ್ಪಾ ಚಿತ್ರವೇ ಮುಂದಕ್ಕೆ ಹೋಗುವುದಿಲ್ಲ. ಅವರು ಅಲ್ಲೇ ಅದೇ ಮಾತು. ಇಬ್ಬರೂ ಚಂದ್ರರೇ..ಪ್ರೀತಿಸಿದರು. ರಾಜಕುಮಾರಿ ಮತ್ತು ಮೇಸ್ಟರ ಮಗ. ಆಮೇಲೆ..ಬರೀ ಸ್ವಲ್ಪ ಮಟ್ಟಗಿನ ಶ್ರೀಮಂತನ ಮಗಳಿಗೆ ಲೈನು ಹೊಡೆದರೆ ಬಿಡುವುದಿಲ್ಲ..ಇನ್ನೂ ರಾಜಕುಮಾರಿಯನ್ನು ಪ್ರೀತಿಸಿದರೆ ಯಾರು ಒಪ್ಪುತ್ತಾರೆ..ವಿರೋಧ, ಪ್ರತಿರೋಧ. 
ನಮ್ ದುನಿಯಾ ನಮ್ ಸ್ಟೈಲ್. ಕನ್ನಡದ ಮಟ್ಟಿಗೆ ಎಲ್ಲವೂ ಇರುವ ಏನೂ ಇಲ್ಲದ ಚಿತ್ರ.ಮೂರು ಜನ ನಾಯಕರು ಎಂದಾಗ ನಾವೆಲ್ಲಾ ದಿಲ್ ಚಾಹತಾ ಹಾಯ್, 3 ಈಡಿಯಟ್ ಸ್ ಗುಂಗಿನಲ್ಲಿರುತ್ತೇವೆ. ಹಾಗಂತ ಪ್ರೀತಂ ಗುಬ್ಬಿ ಇರಬೇಕಲ್ಲ. ಅವರು ಇಲ್ಲೇ ಇದ್ದಾರೆ. ಸುಮ್ಮನೆ ಹುಡುಗಿಯರನ್ನು ಕಂಡ ತಕ್ಷಣ ನಮ್ಮ ಜನ್ಮ ವೆ ಪ್ರೀತಿಸುವುದಕ್ಕೋಸ್ಕರ ಎಂದು ತಿಳಿದಿರುವ ಮೂರು ಜನರು ನಾಯಕಿಯರ ಹಿಂದೆ ಮುಂದೆ ಓಡಾಡಿ ಪ್ರೀತಿಸುತ್ತಾರೆ ಎಂಬುದನ್ನು ಯಾವುದೇ ಸ್ವಾರಸ್ಯವಿಲ್ಲದೆ ನೀರಸವಾಗಿ ಬೋರಾಗಿ ಬೇಸರವಾಗುವಂತೆ ಪ್ರೀತಂ ಗುಬ್ಬಿ ನಮ್ಮ ಮುಂದಿಟ್ಟಿದ್ದಾರೆ.
ಸ್ಸೈಕಲ್ ತುಳಿಯುವುದಕ್ಕೆ ಮಾತ್ರವಲ್ಲ ಧಮ್ ಬೇಕಿರುವುದು ನೋಡುವುದಕ್ಕೂ ಎನ್ನುವುದನ್ನು ಸೂಕ್ತ ಉದಾಹರಣೆ, ಉಪಕಥೆಗಳ ಮೂಲಕ ಸಾಧಿಸಿ ತೋರಿಸುವ ಚಿತ್ರ.
** ನಾಯಕಿಗೆ ನಾಯಕನ ಮೇಲೆ ಪ್ರಾಣ. ಹಾಗಾಗಿ ಹಾಡಿನಲ್ಲಿ ಕನಸಿನ ಲೋಕಕ್ಕೆ ತೆರಳಿ ಒಂದು ಸುತ್ತು ಕುಣಿಯುತ್ತಾಳೆ.  ಆದರೆ ಉಪನಾಯಕಿಗೆ ಪಕ್ಕದಲ್ಲೇ ಅತ್ತೆ ಮಗನಿದ್ದಾನೆ ಮತ್ತವನ ಜೊತೆ ಆಕೆ ಚೆನ್ನಾಗಿದ್ದು ಮದುವೆಗೂ ಒಪ್ಪಿಕೊಂಡಿದ್ದಾಳೆ. ಆದರೂ ಇರಲಿ ಎಂಬಂತೆ ಇನ್ನರ್ಧ ಹಾಡಿನಲ್ಲಿ ನಾಯಕನ ಜೊತೆ ತಾನೂ ಕುಣಿಯುತ್ತಾಳೆ.
**ಮಲೇಶಿಯಾದಲ್ಲಿ ಜಾಸ್ತಿ ತಮಿಳರಿದ್ದಾರೆ ಎಂದು ಅಲ್ಲಿಗೆ ಹೋಗಿ ಬಂದವರು ಹೇಳುತ್ತಾರೆ. ಆದರೆ ನಮ್ಮ ನಾಯಕರ ಅದೃಷ್ಟಕ್ಕೆ ಮಲೇಶಿಯಾದಲ್ಲಿ ಸಿಗುವವರೆಲ್ಲರೂ ಕನ್ನಡಿಗರೇ. ಮೂವರಲ್ಲಿ ಒಬ್ಬ ನಿರ್ದೇಶಕರನ್ನೇ ಹೇಗಾದರೂ ಯಾಮಾರಿಸಬೇಕು ಎಂದು ಮಲೇಷಿಯಾದ ಹುಡುಗಿಯನ್ನೇ ಪ್ರೀತಿಸಿದರೂ ಅವಳ ತಂದೆ ಕನ್ನಡಿಗನನ್ನೇ ಮಾಡಿ ನಿರ್ದೇಶಕರು ಹುಬ್ಬೇರಿಸುತ್ತಾರೆ.
**ಅದು ಕಲಾತ್ಮಕ ಇದು ಕಮರ್ಷಿಯಲ್ ಎಂದು ತನ್ನ ಎರಡೂ ಚಿತ್ರಗಳನ್ನು ವಿಂಗಡಿಸಿದ್ದರು ರೂಪಾ ಅಯ್ಯರ್. ಹಾಗಾದರೆ ಕಮರ್ಷಿಯಲ್ ಅಂದರೆ ಮನರಂಜನೆ ಎಂದು ನಾವೆಲ್ಲಾ ತಿಳಿದುಕೊಂಡಿರುವುದು ತಪ್ಪೇ ಎಂಬ ಪ್ರಶ್ನೆ ನಮ್ಮನ್ನು ನಿಮ್ಮನ್ನು ಚಿತ್ರ ನೋಡಿದ ಮೇಲೆ ಕಾಡದೆ ಇರದು.
**ಬೆಂಗಳೂರೆಂದರೆ ಇಡೀ ಪಾತಕ, ರೌಡಿಗಳ ಲೋಕವೇ..? ಹೌದು ಎನ್ನುತ್ತಾರೆ ನಮ್ಮ ನಿರ್ದೇಶಕರು. ಅದಕ್ಕೆ ಎಲ್ಲಾ ಬಿಟ್ಟು ಬೆಂಗಳೂರಿಗೆ ಬಂದವರು ಬೇಗನೆ ರೌಡಿಯಾಗಿಬಿಡುತ್ತಾರೆ...
ಕೊನೆಯ ಮಾತು:
ಕೆಲವೊಮ್ಮೆ ಚಿತ್ರವನ್ನು ಕೆಲವು ಮಾರ್ಜಿನ್ ಕೊಟ್ಟು ಸಿನಿಮಾ ನೋಡಬೇಕಾಗುತ್ತದೆ. ಆದರೆ ಒಂದು ಚಿತ್ರಕ್ಕೆ ಸಾಮಾನ್ಯವಾಗಿ ಎಲ್ಲವೂ ಇದ್ದರೂ ಕಥೆಯಲ್ಲಿ ಮಾತ್ರ ತಿರುಳಿಲ್ಲ ಎಂದಾಗ ದುಡ್ಡು ಕೊಟ್ಟದ್ದಕ್ಕೆ ದಿನವನ್ನು ವ್ಯರ್ಥ ಮಾಡಿದ್ದಕ್ಕೆ ಬೇಸರವಾಗುತ್ತದೆ. ಕೆಟ್ಟ ಸಿನೆಮಾಗಲಿಲ್ಲದ ಚಿತ್ರರಂಗವಿಲ್ಲ. ಆದರೆ ಸುಖಾ ಸುಮ್ಮನೆ ಚಿತ್ರ ಮಾಡುವುದು ಅದೆಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಇಟ್ಟುಕೊಂಡು ಇದನ್ನು ಬರೆದಿದ್ದೇನೆ.
ಈ ಪ್ರಶ್ನೆ ನಿಮಗೆ.
 ಮೇಲಿನವುಗಳಲ್ಲಿ  ಯಾವ ಚಿತ್ರವನ್ನು ನೀವು ನೋಡಿದಿರಿ..? ನಿಮಗೇನನ್ನಿಸಿತು..?

1 comment:

  1. ಯಾವುದನ್ನೂ ನೋಡಿಲ್ಲ. ಘನ್ ಚಕ್ಕರ್ ವಿದ್ಯಾ ಬಾಲನ್ಗೋಸ್ಕರ ನೋಡೋಣ
    ನಿಮ್ಮ ಅಭಿಪ್ರಾಯ ನೋಡಿದಮೇಲೆ ಉಳಿದದನ್ನ ನೋಡೋ ಧೈರ್ಯ ಇಲ್ಲ

    ReplyDelete