Friday, April 12, 2013

ತೆರೆಯ ಹಿಂದೆ...

ದ್ವೀಪ ಚಿತ್ರದ ಎಲ್ಲಾ ತಯಾರಿಯಾಗಿತ್ತು. ಅದರ ಬರಹದ ಕೆಲಸವೆಲ್ಲಾ ತೃಪ್ತಿಕರವಾಗಿ ಬಂದಿತ್ತು. ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಮಳೆಯ ಅವಶ್ಯಕತೆ ಅಗತ್ಯವಿತ್ತು. ಯಾಕೆಂದರೆ ದ್ವೀಪ ಚಿತ್ರದಲ್ಲಿ ಮಳೆ ಒಂದು ಪ್ರಮುಖವಾದ ಭಾಗ ಎನ್ನಬಹುದು. ಹಾಗಾಗಿ ಚಿತ್ರೀಕರಣವನ್ನು ಆಗಸ್ಟ್ ತಿಂಗಳಿನಿಂದ ಪ್ರಾರಂಭಿಸುವ ಯೋಜನೆಹಾಕಿ ಎಲ್ಲ ತಂತ್ರಜ್ಞರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಆಗಸ್ಟ್ ತಿಂಗಳಲ್ಲಿ ಸಿದ್ಧವಾಗಿರುವಂತೆ ಹೇಳಿಯೂ ಆಗಿತ್ತು. ಆದರೆ ಅಷ್ಟರಲ್ಲೇ ಡಾ.ರಾಜ್ ಕುಮಾರ್ ರವರ ಅಪಹರಣವಾಯಿತು. ಮತ್ತದು ಸುಲಭಕ್ಕೆ ಮುಗಿಯದೆ ನೂರೆಂಟು ದಿನಗಳವರೆಗಿನ ಜಗ್ಗಾಟವಾಯಿತು. ಪ್ರಹಸನ ಸುಖಾಂತ್ಯವಾದರೂ ಮಳೆಗಾಲ ಮುಗಿದುಹೋಗಿದ್ದರಿಂದ ಚಿತ್ರೀಕರಣವನ್ನು ಮತ್ತೆ ಪ್ರಾರಂಭಿಸಲು ಮತ್ತೆ ಮಳೆಗಾಲವನ್ನು ಕಾಯುವ ಸಂದರ್ಭ ಚಿತ್ರತಂಡಕ್ಕೆ ಎದುರಾಯಿತು.
ಗಿರೀಶ್ ಕಾಸರವಳ್ಳಿಯವರು ತಮ್ಮ ತಬರನ ಕಥೆ ಚಿತ್ರ ಮಾಡುವಾಗ ಅದರ ಚಿತ್ರಕಥೆ ಆದ ಮೇಲೆ ಅದನ್ನು ಅವಲೋಕನಕ್ಕೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರಿಗೆ ಕೊಟ್ಟಾಗ ಓದಿ ಖುಷಿಯಾದ ಪೂಚಂತೆಯವರು ಚಿತ್ರಕ್ಕೆ ನಾನೇ ಸಂಭಾಷಣೆ ಬರೆಯುತ್ತೇನೆ ಎಂದರಂತೆ. ಖುಷಿಯಾದ ಕಾಸರವಳ್ಳಿಯವರು ಆ ಜವಾಬ್ದಾರಿಯನ್ನು ಅವರಿಗೆ ವಹಿಸಿದರು.ದಿನಗಳು ಕಳೆದವು. ಪೂಚಂತೆಯವರು ಕೇಳಿದಾಗಲೆಲ್ಲಾ ಈವತ್ತು ಬರೆಯುವೆ, ನಾಳೆ ಬರೆಯುವೆ ಎನ್ನುತ್ತಲೇ ಹೋದರು.ಚಿತ್ರೀಕರಣದ ಎಲ್ಲಾ ಸಿದ್ಧತೆ ಮುಗಿದರೂ ಸಂಭಾಷಣೆ ಮಾತ್ರ ಸಿದ್ಧವಾಗಿಲ್ಲ. ಗಿರೀಶರವರು ಹೋದಾಗಲೆಲ್ಲಾ 'ನಾಳೆ ಬರೆಯುತ್ತೇನೆ..ಈಗ ಮೀನು ಹಿಡಿಯಲು ಹೋಗಬೇಕು..ತೋಟದಲ್ಲಿ ಕೆಲಸವಿದೆ ಎಂದೆಲ್ಲಾ ಹೇಳುವುದನ್ನು ಮುಂದುವರೆಸಿದಾಗ ಕಾಸರವಳ್ಳಿಯವರಿಗೆ ದಿಕ್ಕೇ ತೋಚದಂತಾಯಿತಂತೆ. ಕೊನೆಗೆ ಬೇರೆ ದಾರಿ ಕಾಣದೆ ತಾವೇ ಚಿತ್ರದ ಸಂಭಾಷಣೆ ಬರೆದು ಅದನ್ನು ಪೂಚಂತೇಯವರ ಮುಂದಿಟ್ಟಾಗ ಅದನ್ನು ಓದಿದ ಪೂಚಂತೇ ಅದರ ಮೇಲೆ 'ಸಂಭಾಷಣೆಯನ್ನ ಪೂರ್ತಿ ನೀವೇ ಬರೆಯಬಹುದು' ಎಂದು ಬರೆದುಕೊಟ್ಟರಂತೆ.
 ನಾನು ಚಿತ್ರವೊಂದಕ್ಕೆ ಚಿತ್ರಕಥೆ ಬರೆಯುತ್ತಿದ್ದೆ. ಅದೊಂದು ಮಹಿಳಾಪ್ರಧಾನ ಚಿತ್ರ. ಕಥೆ ಚೆನ್ನಾಗಿತ್ತು. ನಾಯಕಿಯ ಕಡೆಯವರೇ ನಿರ್ಮಾಪಕರೂ ಆಗಿದ್ದರು. ಸಂಪೂರ್ಣ ಚಿತ್ರಕಥೆ ಮುಗಿದ ಮೇಲೆ ನಿರ್ಮಾಪಕರು ಮತ್ತು ನಾಯಕಿಯ ಮುಂದೆ ಅದನ್ನು ಸಾದರ ಪಡಿಸಿದೆ. ನಾಯಕಿ ಖುಷಿಯಾದರು. ಆಮೇಲೆ ಅವರೊಂದು ಸಲಹೆ ಕೊಟ್ಟರು. ಅವರು ಹಿಂದಿ ಚಿತ್ರವೊಂದರ ನೃತ್ಯದ ದೃಶ್ಯಕ್ಕೆ ಮಾರುಹೋಗಿದ್ದರು.ಹಾಗಾಗಿ ಆ ದೃಶ್ಯವನ್ನು ಹಗಲು ರಾತ್ರಿ ಅಭ್ಯಾಸ ಮಾಡಿಬಿಟ್ಟಿದ್ದರು. ಅದನ್ನು ನನಗೆ ಚಿತ್ರದಲ್ಲಿ ಯಾವುದಾದರೂ ಒಂದು ಮೂಲೆಯಲ್ಲಿ ಸೇರಿಸುವಂತೆ ಒತ್ತಾಯ ಮಾಡತೊಡಗಿದರು. ನನಗೀಗ ಪೀಕಲಾಟಕ್ಕಿಟ್ಟುಕೊಂಡಿತು. ಸಂದರ್ಭ ಸರಿಯಿಲ್ಲದೆ ಅದೇಗೆ ಸುಖಾ ಸುಮ್ಮನೆ ಒಂದು ಅನಾವಶ್ಯಕ, ಕಥೆಗೆ ಪೂರಕವಲ್ಲದ ದೃಶ್ಯ ವನ್ನ ಸೇರಿಸುವುದು. ನಾನು ಖಡಾಖಂಡಿತವಾಗಿ ಸಾಧ್ಯವಿಲ್ಲ ಎಂದುಬಿಟ್ಟೆ. ಆದರೆ ಆಕೆ ಅಷ್ಟಕ್ಕೇ ಬಿಡಲಿಲ್ಲ. ಸೇರಿಸಲೆಬೇಕೆ೦ದು ಒಂದೆ ಹಠಕ್ಕೆ ಬಿದ್ದರು. ನಾನು ಒಪ್ಪಲಿಲ್ಲ. ಹಾಗಾಗಿ ಆ ಚಿತ್ರದಿಂದ ಹೊರಬೀಳಬೇಕಾಯಿತು.
ನಮ್ಮ  ಹಿರಿಯ ನಿರ್ದೇಶಕರೊಬ್ಬರ ಸಿನೆಮಾ ಅದು. ನಿರ್ಮಾಪಕರು ತಾನು ಚಿಕ್ಕದಾದರೂ ಸರಿ ಒಂದು ಪಾತ್ರ ಮಾಡೇ ಮಾಡುತ್ತೇನೆಂದು ಹಠಕ್ಕೆ ಬಿದ್ದರಂತೆ. ನಿರ್ದೇಶಕರಿಗೆ ವಿಧಿಯಿಲ್ಲ. ಹಾಗಂತ ಪಾತ್ರ ಕೊಟ್ಟರೆ ಆ ಪಾತ್ರವನ್ನೂ, ಆ ಮೂಲಕ ಸಿನೆಮಾವನ್ನೂ ಹಾಳು ಮಾಡುವುದು ಗ್ಯಾರಂಟೀ. ಹಾಗಾಗಿ ಯಾವುದಕ್ಕೂ ಇರಲಿ ಎಂದು ಒಂದು ಪೋಲಿಸ್ ಪೇದೆಯ ಪಾತ್ರವನ್ನ ನಿರ್ಮಾಪಕರಿಗೆ ಕೊಟ್ಟರು. ಚಿತ್ರದಲ್ಲಿ ಒಂದು ಸಾವಾಗುತ್ತದೆ. ಅದನ್ನು ಮಹಜರು ಕಾರ್ಯದಲ್ಲಿ ಬರುವ ಪೋಲಿಸ್ ಪೇದೆಯ ಪಾತ್ರ ಅದು. ಯಾವುದೇ ಸಂಭಾಷಣೆಯಿರಲಿಲ್ಲ.  ನಿರ್ದೇಶಕರು ತಾನು ಗೆದ್ದೆ ಎಂದು  ಬೀಗಿದರು. ನಿರ್ಮಾಪಕರು ತಾವು ಕೂಡ ಒಂದು ಪಾತ್ರವನ್ನ ಮಾಡುತ್ತಿದ್ದೇನೆಂದು ತನ್ನ ಗೆಳೆಯರಿಗೆಲ್ಲಾ ಹೇಳಿದಾಗ ಅದ್ಯಾರೋ ಅವರ ಆತ್ಮೀಯರು ಪೋಲಿಸ್ ಪೇದೆಯ ಪಾತ್ರ ಚಿಕ್ಕದಾಯಿತು. ಅದಕ್ಕಿಂತ ದೊಡ್ಡ ಪಾತ್ರ ಮಾಡು...ಎಂದು ಸಲಹೆ ಕೊಟ್ಟರು. ನಿರ್ಮಾಪಕರು ಪೇದೆಗಿಂತ ದೊಡ್ಡ ಪಾತ್ರವೆಂದರೆ ಇನ್ಸ್ ಪೆಕ್ಟರ್ ಅದಕ್ಕಿಂತ ದೊಡ್ಡದೆಂದರೆ ಎಸಿಪಿ ಎಂದು ಅರ್ಥೈಸಿಕೊಂಡವರೇ ಆ ಸಮವಸ್ತ್ರವನ್ನು ಅಂದರೆ ಎ.ಸಿ.ಪಿ. ಸಮವಸ್ತ್ರವನ್ನು ಬಾಡಿಗೆಗೆ ತರಿಸಿ ಆ ದೃಶ್ಯವನ್ನು ನಿರ್ದೇಶಕರ ಅಸಹನೆಯ ನಡುವೆಯೂ ಚಿತ್ರೀಕರಿಸಿಬಿಟ್ಟರು. ಒಂದು ಚಿಕ್ಕ ಹಳ್ಳಿಯಲ್ಲಿ ಸಾಮಾನ್ಯ ಸಾವೊಂದರ ಮಹಜರು ಕಾರ್ಯವನ್ನ ಎ.ಸಿ.ಪಿ ಮಾಡುವ ದೃಶ್ಯ ಅದೆಷ್ಟು ನಗೆಪಾಟಲು ನೀವೇ ಯೋಚಿಸಿ...

ಚಿತ್ರರಂಗದ ಕಥೆಗಳನ್ನ ಕೇಳುತ್ತಿದ್ದರೆ ಅದೇ ಒಂದು ವರ್ಣಮಯ ಸಿನೆಮಾವಾಗುತ್ತದೆ. ನಾನು ಯಾರೇ ಚಿತ್ರರಂಗದ ಹಿರಿಯರು ಸಿಕ್ಕರೂ ಅದು ಇದು ಮಾತಾಡುತ್ತ ಅವರ ನೆನಪುಗಳನ್ನು, ಆ ಕಾಲದ ಘಟನೆಗಳನ್ನ ಕೇಳುತ್ತೇನೆ. ಅವೆಲ್ಲಾ ತುಂಬಾ ಆಸಕ್ತಿಕರವಾಗಿರುತ್ತವೆ.

3 comments:

  1. namma manege obru bartaare. avarU prati sala mukta mukta serial nalli avara part bandaagaella sms maaDtaare ivattu nannannu serial nalli kaaNabahudu anta. namma maneli TV illa adakkeondu dina avara sma bandamele kutuhala hattikkalarade innobbarannu phone maadi keLde. Enittu avara role anta...'enilla court room nalli summane prekshakaraagi nilluva drashya...:-( adaralle avarige kushi...:-)
    malathi s

    ReplyDelete
  2. ಸಿನೆಮಾಕಿ೦ತ ಅದರ ಹಿ೦ದಿನ ಕಥೆಗಳೇ ಸ್ವಾರಸ್ಯಕರವಾಗಿದೆ. 8 1/2 :)

    ReplyDelete