Tuesday, April 30, 2013

ವಿಶೇಷ ಚಿತ್ರ...26

ಸ್ಪೆಷಲ್ 26 ಚಿತ್ರ ನಿಜಕ್ಕೂ ವಿಶೇಷವಾದ ಚಿತ್ರ ಎನ್ನಬಹುದು. ಕಥೆ, ನಿರೂಪಣೆಯ ದೃಷ್ಟಿಯಿಂದಾಗಿ, ಕಲಾವಿದರ ಅಭಿನಯದ ದೃಷ್ಟಿಯಿಂದಾಗಿ ಈ ಚಿತ್ರ ನೋಡಲೇಬೇಕಾದ ಚಿತ್ರ ಎನಿಸಿಕೊಳ್ಳುತ್ತದೆ.1987ರ ಮಾರ್ಚ್ ತಿಂಗಳಲ್ಲಿ  ಮುಂಬೈನಲ್ಲಿ ನಡೆದ ಸುಳ್ಳು ತೆರಿಗೆ ದಾಳಿಯನ್ನಾಧರಿಸಿದ ಚಿತ್ರ ಇದು. ನಿಜ ಕಥೆಯ ಚಿತ್ರವಾದರೂ ನಿರ್ದೇಶಕ ಇದನ್ನು ಒಂದು ಸಾಕ್ಷ್ಯಚಿತ್ರವನ್ನು ಮಾಡಲು ಹೋಗಿಲ್ಲ. ಒಂದು ಪರಿಪೂರ್ಣ ಮನರಂಜನೆಯ ಚಿತ್ರಕ್ಕೇ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ತುಂಬಿಸಿರುವುದರಿಂದ ಚಿತ್ರ ಕುತೂಹಲ ಕೆರಳಿಸುತ್ತಾ ಸಾಗುತ್ತದೆ.
ಚಿತ್ರದ ಕಥೆ ಇಂತಿದೆ. ಆವತ್ತು ಜನವರಿ ಇಪ್ಪತ್ತಾರು. ಅಲ್ಲಿನ ಪೋಲೀಸ್ ಸ್ಟೇಷನ್ನಿಗೆ ಕರೆಯೊಂದು ಬರುತ್ತದೆ. ಅದನ್ನು ತೆಗೆದುಕೊಳ್ಳುವ ಪೋಲೀಸ್ ಅಧಿಕಾರಿಗೆ ಅತ್ತಲಿನ ಧ್ವನಿಯೊಂದು ತಾವು ಸಿ.ಬಿ.ಐ.ನವರು, ಈಗ ಒಬ್ಬ ಗಣ್ಯವ್ಯಕ್ತಿಯ ಮನೆಗೆ ದಾಳಿಗೆ ಹೋಗುತ್ತಿದ್ದೇವೆ, ಅದಕ್ಕೆ ಪೋಲೀಸ್ ಸಹಕಾರ ಬೇಕು ಎಂದಾಗ ಪೋಲೀಸ್ ಅಧಿಕಾರಿ ಒಪ್ಪಿಕೊಳ್ಳುತ್ತಾನೆ. ಒಬ್ಬ ಮಂತ್ರಿಯ ಮನೆಗೆ ನುಗ್ಗಿ ದಾಳಿ ನಡೆಸಿ ಅವನಲ್ಲಿದ್ದ ಹಣ, ಚಿನ್ನವನ್ನೆಲ್ಲಾ ದಸ್ತಗಿರಿಮಾಡುವ ಸಿ.ಬಿ.ಐನವರು ವಂಚಕರು ಎಂಬುದು ಆನಂತರ ಗೊತ್ತಾಗುತ್ತದೆ. ಈಗ ಅವರು ದೋಚಿರುವ ಸಂಪತ್ತು ಕಪ್ಪುಹಣವಾದ್ದರಿಂದ ಮಂತ್ರಿ ಅದನ್ನು ಸಾರ್ವಜನಿಕರ ಗಮನಕ್ಕೆ ತರಲು ಮನಸ್ಸುಮಾದುವುದಿಲ್ಲ. ಆದರೆ ಇದರಿಂದಾಗಿ ಪೋಲೀಸ್ ಆಫ಼ೀಸರ್ ಸಸ್ಪೆಂಡ್ ಆಗಬೇಕಾಗಿಬರುತ್ತದೆ. ಆತ ತನಿಖೆ ಮಾಡುತ್ತಾ ಸಾಗಿದಂತೆ ಇದೇ ತರಹದ ನಕಲಿ ದಾಳಿಗಳು ಸುಮಾರು ಕಡೆ ನಡೆದಿರುವುದು ತಿಳಿದುಬರುತ್ತದೆ. ಈ ಕೇಸಿನ ತನಿಖೆಯನ್ನು ನಿಷ್ಠಾವಂತ ದಕ್ಷ ಪೋಲೀಸ್ ಅಧಿಕಾರಿಗೆ ವಹಿಸಲಾಗುತ್ತದೆ.
ಇತ್ತ ವಂಚಕರ ಗುಂಪು ಈ ಸಾರಿ ಅದಕ್ಕಿಂತಲೂ ದೊಡ್ದ ಯೋಜನೆಯನ್ನು ಹಾಕಿಕೊಳ್ಳುತ್ತಾರೆ. ಆದರೆ ಅದು ಆ ಪೋಲೀಸಗೆ ತಿಳಿಯುತ್ತದೆ. ಅವರನ್ನು ನಕಲಿದಾಳಿ ಮಾಡುತ್ತಿರುವಾಗಲೇ ಹಿಡಿಯಬೇಕೆಂದು ಆ ಅಧಿಕಾರಿ ಪ್ಲಾನ್ ಮಾಡುತ್ತಾನೆ. ಇದಾವುದೂ ಗೊತ್ತಿರದ ಅವರು ತಮ್ಮ ಕಾರ್ಯವನ್ನು ಕೈಗೊಳ್ಳಲು ಮುಂದಾಗುತ್ತಾರೆ. ಮುಂದೆ,,?
ಚಿತ್ರ ಶರವೇಗದಲ್ಲಿ ಸಾಗುತ್ತದೆ. ಕೊನೆಯವರೆಗೂ ತನ್ನ ಕುತೂಹಲವನ್ನು ಉಳಿಸಿಕೊಳ್ಳುವ ಚಿತ್ರ ಕೊನೆಯಲ್ಲಿ ನೋಡುಗನಿಗೆ ಶಾಕ್ ಕೊಡುತ್ತದೆ.
ಚಿತ್ರದಲ್ಲಿನ ಸಂಭಾಷಣೆ ಮತ್ತು  ಚಿತ್ರಕಥೆ ಚಿತ್ರವನ್ನು ಹೆಚ್ಚು ಆಸಕ್ತಿಕರವನ್ನಾಗಿ ಮಾಡಿವೆ. ಅದರಲ್ಲೂ ಎಲ್ಲೂ ಸುಳಿವು ಬಿಟ್ಟುಕೊಡದ ಚಿತ್ರಕಥೆಯೇ ೨೬ರ ಹೈಲೈಟ್. ಹಾಗೆ ಹಿನ್ನೆಲೆ ಸಂಗೀತ ಸಿನಿಮಾದ ಗತಿಗೆ ಸಹಕಾರಿಯಾಗಿದೆ.
ವಂಚಕರ ನಾಯಕನಾಗಿ ಅಕ್ಶಯಕುಮಾರ್ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಗುಂಪಿನ ಸದಸ್ಯನಾಗಿ ಅನುಪಮ್ ಖೇರ್ ರದು ಪಾತ್ರೋಚಿತ ಅಭಿನಯ. ಚಿತ್ರದಲ್ಲಿ ನಮಗಿಷ್ಟವಾಗುವುದು ಮನೋಜ್ ಬಾಜಪೇಯಿ. ದಕ್ಷ ಪೋಲೀಸ್ ಅಧಿಕಾರಿಯಾಗಿ ಕಡಕ್ಕಾಗಿ ಪಾತ್ರ ನಿರ್ವಹಿಸಿದ್ದಾರೆ ಮನೋಜ್. ಹಾಗೆ ಮತ್ತೊಂದು ಮಹತ್ವದ ಪಾತ್ರ ನಿರ್ವಹಿಸಿರುವ ಜಿಮ್ಮಿ ಶೇರ್ ಗಿಲ್ ಕೂಡ ತಮ್ಮ ನಟನೆಯಿಂದಾಗಿ ಗಮನಸೆಳೆಯುತ್ತಾರೆ.
ಎ ವೆಡ್ನೆಸ್ ಡೇ ತರಹದ ಪ್ರಸ್ತುತ ಭಯೋತ್ಪಾದಕ ವಿರೋಧಿ ಥ್ರಿಲ್ಲರ್ ಚಿತ್ರ ನೀಡಿದ್ದ ನೀರಜ್ ಪಾಂಡೆಯವರ ನಿರ್ದೇಶನ ನಿಜಕ್ಕೂ ಅಭಿನಂದನಾರ್ಹ. ಒಮ್ಮೆ ನೋಡಿ ಎಂದು ಧೈರ್ಯವಾಗಿ ಶಿಫ಼ಾರಸ್ಸು ಮಾಡಬಹುದಾದ ಚಿತ್ರ ಸ್ಪೆಶಲ್ 26

1 comment:

  1. ನಿರ್ದೇಶಕನ ಚಿತ್ರ. ಹೀರೋಯಿಸ೦ನಿ೦ದ ಬೇಸತ್ತ ನಮಗೆ ಒ೦ದು ಒಳ್ಳೆಯ ಚಿತ್ರ ಸಿಕ್ಕಿದೆ. ಇನ್ನೂ ಇ೦ಪ್ರೂವ್ ಮಾಡಬಹುದಿತ್ತು.

    ReplyDelete