Tuesday, April 30, 2013

ವಿಕ್ಷಿಪ್ತತೆ, ಸೂರಿ ಮತ್ತು ಕಡ್ಡಿಪುಡಿ ಸಿನಿಮಾ..

 ವಿಕ್ಷಿಪ್ತ ಮತ್ತು ವಿಕೃತದ ನಡುವಿನ ಅಂತರ ಬಹಳ ದೊಡ್ಡದು ಎಂದು ಕೆಲವೊಮ್ಮೆ ಅನಿಸಿದರೆ ಕೆಲವೊಮ್ಮೆ ಎರಡರ ನಡುವಿನ ಅಂತರ ತುಂಬಾ ಚಿಕ್ಕದು ಅಥವಾ ಸಣ್ಣ ಎಳೆ ಎನಿಸುತ್ತದೆ.ಅದರಲ್ಲೂ ಸಿನಿಮಾ ವಿಷಯಕ್ಕೆ ಬಂದಾಗ ಕೆಲವು ನಿರ್ದೇಶಕರ ವಿಕ್ಷಿಪ್ತ ಮನಸ್ಥಿತಿ ಅಥವಾ ಅವರ ಕಥೆಯಲ್ಲಿನ ವಿಕ್ಷಿಪ್ತ ದೃಷ್ಟಿ ಅಚ್ಚರಿ ಮೂಡಿಸದೇ ಇರದು. ನಾವು ನೋಡುವ ದೃಷ್ಟಿಗೂ ಅವರು ತೋರಿಸುವ ಜಗತ್ತಿನ ಸೃಷ್ಟಿಗೂ ಅಜಗಜಾಂತರ ವ್ಯತ್ಯಾಸವಿರುವುದು ಕಂಡುಬರುತ್ತದೆ. ಆದರೆ ಎಲ್ಲರೂ ಜಗತ್ತನ್ನು ವಾರೆಗಣ್ಣಿಂದ ನೋಡಲು ಸಾಧ್ಯವಿಲ್ಲ. ಅದರಲ್ಲೂ ಒಂದು ಮಾಧ್ಯಮದಲ್ಲಿರುವ ಮರುಸೃಷ್ಟಿಗೆ ಅವಕಾಶವಿರುವ ಸೃಜನಶೀಲ ವ್ಯಕ್ತಿಗಳ ಬರಹ, ಚಿತ್ರಣ ಅಥವಾ ಒಟ್ಟಾರೆಯಾಗಿ ಅವರ ಸೃಷ್ಟಿ ನಮಗೊಂದು ಭಿನ್ನವಾದ‘ಲೋಕವನ್ನೇ ದರ್ಶಿಸುವುದು ನಿಜ.
ಇನ್ನು ಸಿನಿಮಾದ ವಿಷಯಕ್ಕೆ ಬಂದಾಗ ಒಬ್ಬ ನಿರ್ದೇಶಕ ತಾನು ನೋಡಿದ ಅಥವಾ ತನಗಿಷ್ಟವಾದದ್ದನ್ನೇ ತೆರೆಯ ಮೇಲೆ ತಂದರೆ ಅದು ಅತ್ಯುತ್ತಮವಾಗಿರುತ್ತದೆ ಅಷ್ಟೇ ಅಲ್ಲ.ಆ ಕಥಗೊಂದು ನ್ಯಾಯ ಸಿಗುತ್ತದೆ. ಬಲವಂತವಾಗಿ, ಸೂಕ್ತ ಅದ್ಯಯನವಿಲ್ಲದೇ ಒಂದು ಭಿನ್ನ ಕಥೆಯನ್ನು ನಿರೂಪಿಸಹೊರಟಾಗ ಸಾಕಷ್ಟು ಅಪಸವ್ಯವಾಗುವುದು ಸತ್ಯ. 
ನಿರ್ದೇಶಕ ಬಾಲಾರ ಯಾವುದೇ ಸಿನಿಮಾ ತೆಗೆದುಕೊಳ್ಳಿ. ಅದು ವಿಕ್ಷಿಪ್ತ ಎನ್ನಬಹುದು. ಅವರು ಜಗತ್ತನ್ನು ನೋಡಿರುವ ಅಥವಾ ನೋಡುವ ರೀತಿಯೇ ಭಿನ್ನವಾದದ್ದು. ಅವರ ಚಿತ್ರಗಳಲ್ಲಿ ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳೂ ಇರುತ್ತವೆ. ಹಾಸ್ಯ, ಹಾಡು, ಹೊಡೆದಾಟ, ಕೊಲೆ ಹೀಗೆ ಆದರೆ ಚಿತ್ರ ಮಾಮೂಲಿ ಮಸಾಲೆ ಸಿನಿಮಾ ಎನಿಸುವುದಿಲ್ಲ. 
ಕನ್ನಡದಲ್ಲಿ ಸೂರಿ ನಿರ್ದೇಶನದ ,ದುನಿಯಾ’ ಚಿತ್ರ ಬಂದಾಗ ನನ್ನಂತಹ ಯುವ ನಿರ್ದೇಶಕರಿಗೆ ಪುಳಕವಾದದ್ದಂತೂ ನಿಜ.ದುನಿಯಾ ಚಿತ್ರದಲ್ಲಿನ ದೃಶ್ಯರಚನೆ, ದೃಶ್ಯ ಜೋಡನೆ, ಪಾತ್ರ ಪೋಷಣೆ ಮತ್ತು ನಿರೂಪಣೆ ಮೆಚ್ಚುವಂತಹದ್ದು. ನಮ್ಮ ನಡುವಿನ ಜಗತ್ತನ್ನು ವಿಕ್ಷಿಪ್ತವಾಗಿ ತೋರಿಸಿದ್ದರು ಸೂರಿ. ಆದರೆ ಅದಾದ ಮೇಲೆ ಸೂರಿ ಬಲವಂತವಾಗಿ ತಮ್ಮ ಚಿತ್ರಗಳಲ್ಲಿ ಜಗತ್ತನ್ನು ವಿಭಿನ್ನವಾಗಿ ತೋರಿಸಲು ಪ್ರಯತ್ನಿಸಿದರೇನೋ..? ಹಾಗಾಗಿಯೇ ಅವರ ಮುಂದಿನ ಚಿತ್ರಗಳಲ್ಲಿ ಭಿನ್ನತೆಗಿಂತ
ಕ್ರೌರ್ಯ ಭೀಭತ್ಸಗಳು ರೌದ್ರಾವತಾರ ತಾಳಿದ್ದವು. ಎಲ್ಲವನ್ನು ಬೇರೊಂದು ದೃಷ್ಟಿಕೋನದಿಂದ ನೋಡಲೇಬೇಕು, ಪ್ರೇಕ್ಷಕ ಸೂರಿ ಸಿನಿಮಾಗಳಿಂದ ಬೇರೇನೋ ನಿರೀಕ್ಷಿಸುತ್ತಾನೆ ಎಂದು ಅವರಂದುಕೊಂಡರೇನೋ ಎಂಬಂತೆ ಅವರ ತದನಂತರ ಚಿತ್ರಗಳ ದೃಶ್ಯಗಳು, ಪಾತ್ರಗಳು ಅವುಗಳ ಹಿನ್ನೆಲೆ ಮುಂತಾದವುಗಳು ತೀರಾ ಸಾಮಾನ್ಯವಾಗಿರಲಿಲ್ಲ. ಅಷ್ಟೆಲ್ಲಾ ಮಾತನಾಡುವ ದುನಿಯಾದಲ್ಲಿನ ರಂಗಾಯಣ ರಘು ಪಾತ್ರವನ್ನು ಇತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಏಕಾಏಕಿ ಮೂಕನನ್ನಾಗಿಸಿದರು.ಹಾಗೆ ಮುಂದುವರೆದರೆ ಜಾಕಿ ಚಿತ್ರದಲ್ಲಿ ಹೆಣ ಇಟ್ಟುಕೊಂಡು ಅಪಹಾಸ್ಯ ಮಾಡುವ, ಅಣ್ಣಾಬಾಂಡ್ ನಲ್ಲೂ ಅದನ್ನೇ ಮುಂದುವರೆಸಿದರು. ಬಹುಶ ಅದೇ ಅವರ ಹಿನ್ನೆಡೆಗೆ ಕಾರಣವಿರಬಹುದು.
ಚಿತ್ರದಲ್ಲಿನ ಕಥೆಯಲ್ಲಿ ವಿಕ್ಷಿಪ್ತತೆಯನ್ನು ಬಲವಂತವಾಗಿ ಕಟ್ಟಿಕೊಡುವ ಪ್ರಯತ್ನದಿಂದಾಗಿಯೇ ಸೂರಿ ಚಿತ್ರಗಳು ಇಷ್ಟೇನಾ ಎನ್ನುವ ಹಣೆಪಟ್ಟಿ ಪಡೆದುಕೊಂಡವು ಎನ್ನಬಹುದು.
ಈಗ ಕಡ್ಡಿಪುಡಿ ಚಿತ್ರ ತೆರೆಗೆ ಬರುವ ಹಂತದಲ್ಲಿದೆ. ಅದರ ಪ್ರೋಮೋ ಕೂಡ ಅಲ್ಲಲ್ಲಿ ಹರಿದಾಡುತ್ತಿದೆ. ಬರೀ ಪ್ರೋಮೋ ನೋಡಿ ಯಾವುದನ್ನೂ ತೀರ್ಮಾನಿಸಲಾಗುವುದಿಲ್ಲವಾದರೂ ಮತ್ತೊಂದು ಸೂರಿ ಶೈಲಿಯ ಚಿತ್ರ ಎನ್ನುವುದರಲ್ಲಿ ಸಂಶಯ ಬರುವುದಿಲ್ಲ.ಚಿತ್ರದ ಸ್ತಿಲ್ಸ್ ಕೂಡ ಅದೇ ಕಥೆಯನ್ನು ಹೇಳುತ್ತವೆ. ಪ್ರೋಮೋದಲ್ಲಿನ ದೃಶ್ಯ ನನಗೆ ಸಿಟಿ ಆಫ಼್ ಗಾಡ್ ಚಿತ್ರದಲ್ಲಿನ ದೃಶ್ಯವೊಂದನ್ನು ನೆನಪಿಸಿತು. ಜಂಗ್ಲಿಯ ಮೊದಲ ದೃಶ್ಯ ಕೂಡ ಪಲ್ಪ್ ಫಿಕ್ಷನ್ ಚಿತ್ರದಲ್ಲಿನ ದೃಶ್ಯಕ್ಕೆ ಹೋಲಿಕೆಯಾಗುತ್ತಿತ್ತು.ಜಂಗ್ಲಿ ಚಿತ್ರದಲ್ಲಿ ಕಾರಿನ ಹಿಂಬದಿಯಲ್ಲಿ ಕೊಲೆ ಮಾಡಬೇಕಾಗಿರುವ ವ್ಯಕ್ತಿಯನ್ನಿಟ್ಟುಕೊಂಡು ಅದೊಂದು ವಿಷಯ ಬಿಟ್ಟು ಬೇರೆಲ್ಲಾ ಉಡಾಫೆಯ ತಮಾಷೆಯ ಮಾತಾಡಿಕೊಂಡು ಹೋಗುತ್ತಾರೆ, ಅದೇ ರೀತಿಯಲ್ಲಿ ಪಲ್ಪ್ ಪಿಕ್ಷನ್ ಚಿತ್ರದಲ್ಲಿ ಕೊಲೆ ಮಾಡಲು ಸಿದ್ಧರಾಗಿ ಹೋಗುವ ಜಾನ್ ಟ್ರವೋಲ್ಟ ಮತ್ತು ಸಾಮುವೆಲ್ ಜಾಕ್ಸನ್ ಆ ವಿಷಯವೊಂದನ್ನು ಬಿಟ್ಟು ಬೇರೆಲ್ಲಾ ಮಾತಾಡಿಕೊಂಡು ಹೋಗುತ್ತಾರೆ. ಸ್ಪೂರ್ತಿ ಏನೇ ಇರಲಿ. ಕನ್ನಡದ ಮಟ್ಟಿಗೆ ಬಹು ನಿರೀಕ್ಷೆಯ ನಿರ್ದೇಶಕ ಸೂರಿ. ಆದರೆ ದುನಿಯಾ ನಂತರದ ಅವರ ಯಾವ ಚಿತ್ರವೂ ಪ್ರೇಕ್ಷಕರನ್ನು ಸಂಪೂರ್ಣ ತಣಿಸಿಲ್ಲ. ಆದರೂ ಚಿತ್ರದಿಂದ ಚಿತ್ರಕ್ಕೆ ನಿರೀಕ್ಷೆ ಇಮ್ಮಡಿಯಾಗುತ್ತಲೇ ಇದೆ. ಇನ್ನು ಚಿರಯುವಕ ಶಿವರಾಜ್ ಕುಮಾರ್ ರವರ ಇತ್ತೀಚಿನ ಚಿತ್ರಗಳು ಯಾವುವೂ ಯಶಸ್ಸಿನ ಹಾದಿ ಹಿಡಿದಿಲ್ಲ. ಈ ಚಿತ್ರ ಶಿವಣ್ಣರಿಗೆ ಯಶಸನ್ನ ತಂದುಕೊಟ್ಟು, ಸೂರಿ ಮೇಲಿನ ಭರವಸೆಯನ್ನುಳಿಸಿ  ಪ್ರೇಕ್ಷಕರ ನಿರೀಕ್ಷೆಯನ್ನು ಜೀವಂತವಾಗಿಡಬೇಕಾಗಿದೆ.
ಹಾಗಾಗಿ ಕಡ್ಡಿಪುಡಿಯ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ

1 comment:

  1. kaDDi puDi anEka reetiyalli oLLeya chitra endenisidaroo, ee prayatnadalli nanage praamaaNikate kammi anstu... inti ninna preetiyaa aada mEle naanoo kooDa soori avara "uninfluenced" sinimaa nODalu kaayuttalE iddeeni

    ReplyDelete