Monday, January 21, 2013

ಷಾ ಬಹದ್ದೂರ್ ಎಂಬ ನರಹಂತಕನ ಕಥೆ

ಸರ್ಕಸ್ ಕಂಪನಿಯಲ್ಲಿದ್ದ ಹುಲಿ ಬಹದ್ದೂರ್ ಷಾ ಗೆ ಯಾವತ್ತೂ ಹೊಟ್ಟೆ ತುಂಬಾ ಊಟ ಕೊಡದಿರುವುದಕ್ಕೆ ಬಹು ಮುಖ್ಯ ಕಾರಣವೆಂದರೆ ತೀರಾ ಹೊಟ್ಟೆ ತುಂಬಾ ತಿಂದು ಹುಲಿ ಮೈಬಿಳೆಸಿಕೊಂಡರೆ ಸರ್ಕಸ್ಸಿನಲ್ಲಿನ  ಚಮತ್ಕಾರಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂಬುದು.. ಅದರಲ್ಲೂ ಹುಲಿಗಿರುವ ಚಮತ್ಕಾರವೆಂದರೆ ಬೆಂಕಿಯ ಉಂಗುರದಿಂದ ಆ ಕಡೆಯಿಂದ ಈ ಕಡೆಗೆ,ಈ ಕಡೆಯಿಂದ  ಆ ಕಡೆಗೆ ಹಾರುವುದು. ಅದು ಸರಾಗವಾಗಿ ಮತ್ತು ಚುರುಕಾಗಿ ಹಾರಬೇಕೆಂದರೆ ಅದು ಸಣ್ಣದಿದ್ದಾಗಷ್ಟೇ ಸಾಧ್ಯ.ಸರ್ಕಸಿನ ಆಟ ಮುಗಿದ ಮೇಲೆ ಇಡೀ ಸರ್ಕಸ್ ಕುಟುಂಬ ಒಂದೆಡೆ ಸೇರಿ ತಮಗೆ ಖುಷಿಕೊಡುವ ಕಾರ್ಯಗಳಲ್ಲಿ ತೊಡಗಿಕೊಂಡರೆ ಪ್ರಾಣಿ ಪಕ್ಷಿಗಳಿಗೆ ತೂಕಡಿಸುವುದಷ್ಟೇ  ಕೆಲಸ.
ಆವತ್ತು ಎಂದಿನಂತೆ ಸರ್ಕಸ್  ಇನ್ನೂ ಪ್ರಾರಂಭವಾಗಿರಲಿಲ್ಲ. ಮದ್ಯಾಹ್ನದ ಸಮಯ.ಎಲ್ಲರೂ ತಮ್ಮ ತಮ್ಮ ಗುಡಾರಗಳಲ್ಲಿ ತಮ್ಮ ಚಮತ್ಕಾರದ ತರಬೇತಿಗಳಲ್ಲಿದ್ದರು..ಎಲ್ಲಾ ಕಡೆ ಒಮ್ಮೆ ಇಣುಕಿ ಹಾಕಿದ ಮುದುಕ ಯಜಮಾನ, ಪ್ರಾಣಿಗಳಿದ್ದ ಕಡೆಗೊಂದು ಸುತ್ತು ಹಾಕಿ ತನ್ನ ಗುಡಾರದ ಕಡೆ ಹೊರಟಿದ್ದ. ದೂರದಲ್ಲಿ ಯಾವುದೋ ಪ್ರಾಣಿ ಕೂಗಿದ, ಒಂದಷ್ಟು ಗೂಬೆಗಳ ಸದ್ದು ಬಿಟ್ಟರೆ ಮತ್ಯಾವ ಸದ್ದೂ ಇರಲಿಲ್ಲ. ಸರ್ಕಸ್ ಆಟಕ್ಕೆ ಮಾಲೀಕನಿಗೆ ಕೊಟ್ಟಿದ್ದ ಜಾಗ ಊರಾಚಿನ, ಕಾಡಿಗೆ ಹತ್ತಿರವಾದ ಜಾಗವಾದ್ದರಿಂದ ಮೊಲ, ಹಾವುಗಳು ಎಗ್ಗಿಲ್ಲದೆ ನೋಡಲು ಸಿಗುತ್ತಿದ್ದವು.ಆದರೆ ಬಹದ್ದೂರ್ ಷಾ ಹುಲಿಯ ಬೋನಿನ ಬಾಗಿಲ ಚಿಲಕ ಸಡಿಲವಾದದ್ದನ್ನು ಮಾಲೀಕ ಆವತ್ತು ಗಮನಿಸಿರಲಿಲ್ಲ.
ಅದಾದ ಒಂದು ಘಂಟೆಯ ನಂತರ ಮಾಲೀಕನ ಹೆಂಡತಿಗೆ ಏನೋ ಸದ್ದಾಯಿತು. ಯಾವುದೋ ಗುರ್ರ್ ಗುರ್ರ್ ಎನುವ ಸದ್ದು ಕೇಳಿಬಂದಿತಾದರೋ ದಿನ ಪ್ರಾಣಿ ಪಕ್ಷಿಗಳ ಜೊತೆ ಇದ್ದದ್ದರಿಂದ ಅದೇನೂ ವಿಶೇಷ ಎನಿಸಿರಲಿಲ್ಲ. ಹಿಂದಿನಿಂದ ಗಂಡನ ಕೂಗಿನ ಶಬ್ದ ಕೇಳಿಸಿದಾಗ ಆಕೆಗೆ ಭಯವಾಗಿ ಎದು ಹೊರಗಡೆ ಓಡಿ ಬಂದವಳು ಅಲ್ಲಿನ ದೃಶ್ಯ ಕಂಡು ಕಿಟಾರನೆ ಕಿರುಚಿ ಮೂರ್ಛೆಹೋಗಿದ್ದಳು. ಅಲ್ಲಿತ್ತು ಮಾಲೀಕನ ಹೆಣ. ಓಡಿ ಬಂದು ಕಿರುಚಿ ಕುಸಿದು ಬೀಳುತ್ತಿದ್ದ ಮಾಲೀಕನ ಹೆಂಡತಿಯನ್ನೇ ನೋಡುತ್ತಾ ರಾಜ ಗಾಂಭೀರ್ಯದಿಂದ ಕಾಡಿನ ಕಡೆಗೆ ಹೊರಟು ಹೋಗಿತ್ತು ಷಾ ಬಹದ್ದೂರ್. ಮಾಲೀಕನ ಹೆಣ ಅದೆಷ್ಟು ವಿರೂಪವಾಗಿತ್ತೆಂದರೆ ಬರೀ ಮಾಂಸ, ರಕ್ತಗಳ ಮಿಶ್ರಣ ಮುದ್ದೆ ಬಿಟ್ಟರೆ ಅದು ಮಾಲೀಕನದೆ ಹೆಣ ಎಂಬುದಕ್ಕೆ ಬೇರ್ಯಾವ ಪುರಾವೆ ಇರಲಿಲ್ಲ.
ಅದಾದ ನಂತರ ಆ ಊರಿಗೆ ಅಂಟಿಕೊಂಡೇ ಇದ್ದ ಕಾಡಿನಲ್ಲಿ ಒಂದು ರೀತಿಯ ಭಯದ ವಾತಾವರಣ ಶುರುವಾಗಿತ್ತು. ಆ ಕಾಡಿನಲ್ಲಿ ಮರದ ದಿಮ್ಮಿಗಳನ್ನು ಕತ್ತರಿಸುವ, ಸಾಗಿಸುವ ಕೆಲಸ ನಡೆಯುತ್ತಿದ್ದರಿಂದ ಕೆಲಸಗಾರರು ಅಲ್ಲಲ್ಲಿ ಬೀಡು ಬಿಟ್ಟಿದ್ದರು. ಈ ಒಂದು ಘಟನೆ ಅವರನ್ನು ಅಧೀರರನ್ನಾಗಿ ಮಾಡಿತ್ತು.ಆದರೆ ಅಲ್ಲಿನ ಕೆಲಸಗಾರನನ್ನು ಅದೇ ರೀತಿ ಬೇಟೆಯಾಡಿದ ನಂತರ ನರಹಂತಕ ಬಹದ್ದೂರ್ ಷಾ ಬಗ್ಗೆ ಎಲ್ಲರಲ್ಲೂ ಭಯ ಮೂಡಿದ್ದಷ್ಟೇ ಅಲ್ಲ ಅದೆಷ್ಟು ಅಪಾಯಕಾರಿ ಎಂಬುದರ ಅರಿವೂ ಆಯಿತು. ಅದಲ್ಲದೆ ಆ ಕೆಲಸಗಾರನನ್ನು ಕೊಂದ ಹುಲಿ ಹೆಣವನ್ನು ಅಲ್ಲೇ ಬಿಟ್ಟುಹೋಗಿದ್ದದ್ದು ಅ ಹೆಣದ ಸ್ವರೂಪ ಇಡೀ ದೃಶ್ಯವನ್ನು ಭೀಭತ್ಸಕರವನ್ನಾಗಿಸಿತ್ತು. ಹೆಣವನ್ನ ಹೊತ್ತೊಯ್ಯುವಷ್ಟು ಹುಲಿ ಇನ್ನೂ ಶಕ್ತಿಯುತವಾಗಿರಲಿಲ್ಲ. ಆದರೆ ನರಮಾಂಸದ ರುಚಿ ಮಾತ್ರ ಷಾ ಬಹದೂರಿಗೆ ಹತ್ತಿತ್ತು.
ಈಗ ಅಲ್ಲಿನ ಕೆಲಸಗಾರರಿಗೆ ರಾತ್ರಿಗಳೆಂದರೆ ಯಮನ ಸಾನಿಧ್ಯದಂತೆ ಭಾಸವಾಗತೊಡಗಿತ್ತು. ಎಲ್ಲರೂ ಒಂದೆಡೆ ಸೇರಿ ತಮ್ಮ ಗುಡಿಸಲುಗಳ ಸುತ್ತ ಬೆಂಕಿ ಹಚ್ಚಲು ನಿರ್ಧರಿಸಿದರು. ಸಾಮಾನ್ಯವಾಗಿ ಯಾವುದೇ ಪ್ರಾಣಿಗಳು ಬೆಂಕಿಗೆ ಹೆದರುವುದು ಸಹಜ. ಆದರೆ ಬಹದ್ದೂರ್ ಷಾ ಉರಿಯುವ ಬೆಂಕಿಯ ಉಂಗುರದೊಳಗಿಂದ ಹಾರಿ ಅಭ್ಯಾಸವಿದ್ದದ್ದು ಅವರಿಗೇನು ಗೊತ್ತಿತ್ತು.  ಇದಾದ ಐದು ದಿನದ ನಂತರ ಬಹದ್ದೂರ್ ಷಾ ಉರಿಯುವ ಬೆಂಕಿಯ ನಡುವೆಯೇ ಹಾರಿ ಒಬ್ಬನನ್ನು ಕೊಂದು ಹೆಣ ಹೊತ್ತೊಯ್ಯುವ ವಿಫಲ ಪ್ರಯತ್ನ ನಡೆಸಿದಾಗ ಜನ ಹೌಹಾರಿದ್ದರು. ಬೆಂಕಿಗೂ ಹೆದರದ ನರಹಂತಕನನ್ನು ಹೆದರಿಸುವುದಾದರೂ ಹೇಗೆ?
ನಂತರ ನರಹಂತಕ ಬಹದ್ದೂರ್ ಷಾ ನದ್ದು ನರಮೇಧ ಎಂದೆ ಹೇಳಬಹುದು. ರಾತ್ರಿಯಾಯಿತೆಂದರೆ ಹೊರಗೋಗಿದ್ದವರು ಮನೆಗೆ ಬರಲಿಲ್ಲವೆಂದರೆ ಷಾ ಬಹದ್ದೂರ್ ಗೆ ಆಹುತಿಯಾಗಿದ್ದಾರೆಂದು ಜನ ನಿಸ್ಸಂದೇಹವಾಗಿ ಹೇಳುತ್ತಿದ್ದರು. ಹಗಲು, ರಾತ್ರಿ, ಸಂಜೆ ಹೀಗೆ ಎಲ್ಲೆಂದರಲ್ಲಿ ಷಾ ಬಹದ್ದೂರ್ ತನ್ನ ಬೇಟೆಯಾಡುತ್ತಿತ್ತು. ಈಗ ಷಾ ಬಹದ್ದೂರನನ್ನು ಬೇಟೆಯಾಡಲು ಶಕ್ತ ಶಿಕಾರಿವೀರಣ ಅವಶ್ಯಕತೆ ಬಂದೆ ಬಂದಿತು. ಶಿಕಾರಿಯಲ್ಲಿ ಧೈರ್ಯ, ತಾಳ್ಮೆ, ಸಾಹಸದ ಜೊತೆಗೆ ಅದೃಷ್ಟವೂ ಪಾತ್ರ ವಹಿಸುತ್ತದೆ. ದಿನಗಟ್ಟಲೆ ಮೈಯೆಲ್ಲಾ ಕಣ್ಣಾಗಿ ಕಾಯುತ್ತ ಕುಳಿತುಕೊಳ್ಳಬೇಕಾಗುತ್ತದೆ. ಅಂತಹ ಧೀರನೊಬ್ಬ ಬೇಕೇ ಬೇಕು. ಯಾಕೆಂದರೆ ಒಮ್ಮೆ ನರಮಾಂಸದ ರುಚಿ ನೋಡಿದ ಹುಲಿ ಮನುಷ್ಯರ ಪಾಲಿಗೆ ಅಪಾಯಕಾರಿ.
ಈ ವಿಷಯ ಶರವೇಗದಲ್ಲಿ ಊರಲ್ಲೆಲ್ಲಾ ಪಸರಿಸಿತು. ಕಾಡಲ್ಲಿ ನೆಲೆಸಿದ್ದ ಕೆಲಸಗಾರರು ಜಾಗ ಬಿಟ್ಟು ಬೇರೆಡೆಗೆ ವಲಸೆ ಹೋಗಲು ನಿರ್ಧಾರವನ್ನೂ ಮಾಡಿದರು.ಇದೆಲ್ಲದಕ್ಕೂ ಕಾರಣನಾಗಿದ್ದ ಷಾ ಬಹದ್ದೂರ್ ಮಾತ್ರ ತನ್ನ ನರಮೆಧವನ್ನು ಯಾವ ಎಗ್ಗಿಸಿಗ್ಗಿಲ್ಲದೆ ನಡೆಸಿಕೊಂಡೇ ಇತ್ತು.ಆದರೆ ಎಲ್ಲದಕ್ಕೂ ಎಲ್ಲರಿಗೂ ಒಂದು ಅಂತ್ಯ ಇರಲೇಬೇಕಲ್ಲವೇ. ಹಾಗೆ ಷಾ ಬಹದ್ದೂರನ ಅಟ್ಟಹಾಸಕ್ಕೆ ಅಂತ್ಯಕಾಲ ಕೂಡಿ ಬಂದದ್ದು ಒಬ್ಬ ಹೆಂಗಸಿನ ರೂಪದಲ್ಲಿ.
ಶಿಕಾರಿ ಕುರಿತಾದ ಕಥೆಗಳ ಪರಿಚಯವಾದದ್ದು ಮೊದಲು ನನಗೆ ಕೆ.ಪಿ.ಪೂರ್ಣ ಚಂದ್ರ ತೇಜಸ್ವಿಯವರಿಂದ.ಅವರ ಜಿಮ ಕಾರ್ಬೆಟ್, ಕೆನೆತ್ ಅಂಡರ್ಸನ್ರ ಕಥೆಗಳಿಂದಾಗಿ. ಬಯಲು ಸೀಮೆಯಲ್ಲಿ ಹುಟ್ಟಿದ ನನ್ನಂಥವರಿಗೆ ಶಿಕಾರಿ ಮುಂತಾದವುಗಳೆಲ್ಲಾ ಪುಸ್ತಕದ ಮೂಲಕವೇ ಪರಿಚಯವಾಗುವುದೇ ಹೊರತು ಸ್ವಾನುಭವದಿಂದ ಸಾಧ್ಯವಿಲ್ಲ. ಯಾರೋ ಮೊಲ ಹಿಡಿಯುವವರೇ ದೊಡ್ಡ ಬೇಟೆಗಾರರು ಎನಿಸಿತ್ತು. ಆದರೆ ರುದ್ರಪ್ರಯಾಗದ ನರಭಕ್ಷಕ, ಕೆನೆತ್ ಅಂಡರ್ಸನ್ ರವರ ಕಥೆಗಳನ್ನ ಓದಿದಾಗ ಆದ ರೋಮಾಂಚನ ಥ್ರಿಲ್ಲರ್ ಕಾದಂಬರಿ ಓದಿದಷ್ಟೇ ಆಗಿತ್ತು. ನಿನ್ನೆ ಹ್ಯೂ ಗಾಂಜರ್ ಬರೆದ ದಿ ಸ್ಕಾರ್ಲೆಟ್ ಟೈಗರ್ ಅಂದ ಅದರ್ ಸ್ಟೋರೀಸ್ ಓದಿದಾಗ ಮತ್ತೆ ಅದೇ ಅನುಭವವಾಯಿತು.ಹ್ಯೂ ಮೂಲತಹ ಪ್ರವಾಸಿಗ.ಅದಕ್ಕೂ ಮುನ್ನ ಭಾರತೀಯ ನೌಕಾಪಡೆಯಲ್ಲಿ ಕೆಲಸದಲ್ಲಿದ್ದ. ಆನಂತರ ವಕೀಲನಾಗಿ, ಶಿಪ್ಪಿಂಗ್ ಕಂಪನಿಯೊಂದರಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ನಿರ್ವಹಿಸಿದ್ದ.ವರ್ಷದಲ್ಲಿ ಆರು ತಿಂಗಳು ಪ್ರವಾಸದಲ್ಲಿ ಕಳೆಯುತ್ತಿದ್ದ ಗಾಂಜರ್,ಉಳಿದ ದಿನಗಳನ್ನ ಹಿಮಾಲಯದಲ್ಲಿ ಕಳೆಯುತ್ತಿದ್ದ. ಇಲ್ಲಿ ರುವ ಕಥೆಗಳು ಶಿಕಾರಿಗಳದ್ದೆ ಆದರೂ ಯಾವುದು ಸ್ವಾನುಭಾವವಲ್ಲ. ಹಾಗೆ ಇರುವ ಏಳು ಕಥೆಗಳೂ ಎಲ್ಲೋ ಒಂದು ಕಡೆ ಯಾರೋ ಒಂದು ನರಹಂತಕ ಹುಲಿಯನ್ನೂ ಚಿರತೆಯನ್ನೋ ಶಿಕಾರಿಯಾಡಿದ ಕಥೆಯೂ ಅಲ್ಲ. ಬದಲಿಗೆ ಶಿಕಾರಿಯ ಸ್ವರೂಪ, ಅದರ ಹಿನ್ನೆಲೆ ಮತ್ತು ಅದು ನಡೆದ ರೀತಿಗಳನ್ನು ವಿವರಿಸುವ ಆ ಮೂಲಕ ರೋಮಾಂಚಕ ನೈಜ ಘಟನೆಗಳನ್ನ ತೆರೆದಿಡುವ ಪ್ರಯತ್ನ. ಒಮ್ಮೆ ಓದಿ.

2 comments:

  1. ನಿಮ್ಮ ವಿವರಣೆ ನಿಜಕ್ಕೂ ಆಸಕ್ತಿದಾಯಕ

    ReplyDelete
  2. very good narration sir. thank you for yur write ups.

    ReplyDelete