Saturday, January 12, 2013

ಜನವರಿ 12 ರಂದು..

ಒಮ್ಮೆ ಹಿಂದಿರುಗಿ 2012 ನ್ನೊಮ್ಮೆ ಅವಲೋಕಿಸಿದರೆ:
ಪ್ರಾರಂಭದಲ್ಲಿ ಏನೇನೋ ಅನಿಸಿತ್ತು. ಸುಮಾರು ಯೋಜನೆಗಳಿದ್ದವು.ಹಾಗೆ ಕನಸುಗಳೂ ಆಶಾದಾಯಕವಾಗಿದ್ದವು.. ನನ್ನ ಸಿನೆಮಾ ಮಾರ್ಚ್ 23 ಈ ವರ್ಷ ಬಿಡುಗಡೆಯಾಗಿಬಿಡುತ್ತದೆ. ಏನೋ ಒಂದಾಗುತ್ತದೆ. ಎಲ್ಲವೂ ಫಲಪ್ರದವಾಗುತ್ತದೆ ಎಂದೆನಿಸಿತ್ತು.
ಆದರೆ ನೋಡನೋಡುತ್ತಾ 2012 ಹಾಗೆಯೇ ಕಳೆದುಹೋಯಿತು. ನನ್ನ ಯಾವೊಂದು ಕೆಲಸಗಳು ಸಂಪೂರ್ಣವಾಗಲಿಲ್ಲ. ನಮ್ಮ ಸಿನೆಮಾದ ಕೆಲಸಗಳು ಕಾರಣಾಂತರಗಳಿಂದ ತಡವಾಗಿ ತಡವಾಗಿ ಸಂಪೂರ್ಣವಾಗಲು ವರ್ಷಾಂತ್ಯ ಬೇಕಾಯಿತು. ಚಿತ್ರ ಮುಗಿದು ಎಲ್ಲಾ ಕಡೆ ಪ್ರಸಂಶೆ ಬಂದರೂ ಯಾರೂ ಸ್ಟಾರ್ ಗಳಿರದ ಕಾರಣ ಚಿತ್ರವನ್ನ ಬಿಡುಗಡೆ ಮಾಡಲು ಯಾರು ಮುಂದೆ ಬರಲಿಲ್ಲ. ಹೀಗೆ..ಒಂದೇ ಒಂದು ಚಿತ್ರವನ್ನೂ ಕೈಯಲ್ಲಿ ಹಿಡಿದುಕೊಂಡು ಅದರ ಬಿಡುಗಡೆಗೆ ಕಾಯುತ್ತ ಕುಳಿತ ನನ್ನ ಇಡೀ ವರ್ಷದ ಸಂಪಾದನೆ ನೆನಪಿಸಿಕೊಂಡರೆ ..
ಕಳೆದ ವರ್ಷ ನಾನು ಮಾಡಬೇಕೆಂದುಕೊಂಡ ಕೆಲಸಗಳು ಹಲವಾರು, ಭೇಟಿ ಮಾಡಿದ ವ್ಯಕ್ತಿಗಳು ನೂರಾರು ಆದರೆ ಯಾವುದೂ ಕೆಲಸಕ್ಕೆ ಬರಲಿಲ್ಲ. ದಿನಗಳು ಕಣ್ಣ ಮುಂದೆಯೇ ನಿರಾಶಾದಾಯಕವಾಗಿ, ಏನೂ ಲಾಭವಿಲ್ಲದೆ ಕಳೆದುಹೋದವು.
ಈ ವರ್ಷದ ಹಾದಿಯಲ್ಲಿ ನನಗೆ ಎಲ್ಲಾ ಕೆಲಸಗಳ ಫಲಿತಾಂಶ ಕಾದಿದೆ. ನನ್ನ ಪುಸ್ತಕ ಬಿಡುಗಡೆಯಾಗುವುದರಲ್ಲಿದೆ..ಅದರ ಫಲಿತಾಂಶ ಏನು ನೋಡಬೇಕು. ನಮ್ಮ ಸಿನೆಮಾ ಕೂಡ ಬಿಡುಗಡೆಯಾಗುತ್ತದೆ ಅದರ ಭವಿಷ್ಯ ನನ್ನ ಭವಿಷ್ಯವನ್ನ ಹೊತ್ತು ನಿಂತಿದೆ.
'ಸರ್ವ ವಸ್ತು೦ ಭಯಾನ್ವಿತಂ
ಭುವಿನೃಣಾ೦  ವೈರಾಗ್ಯ ಮೇವಭಯಂ '
ಇದು ಸ್ವಾಮೀ ವಿವೇಕಾನಂದರಿಗೆ ಇಷ್ಟವಾದ ನುಡಿ. ಇದು ನನಗೂ ಇಷ್ಟವಾದದ್ದು ಯಾಕೋ ನನಗೆ ಗೊತ್ತಿಲ್ಲ. ಅದರ ತಾತ್ಪರ್ಯ ಮಾತ್ರ ನನ್ನ ಮನದಾಳದಲ್ಲಿ ಉಳಿದುಬಿಟ್ಟಿತ್ತು. ನಾನಾಗ ಕಾಲೇಜಿಗೆ ಹೋಗುತ್ತಿದ್ದೆ. ಬೆಳಿಗ್ಗೆ ಒಂಬತ್ತಕ್ಕೆ ಕಾಲೇಜು   ಪ್ರಾರಂಭವಾದರೂ ನಾನು ಮನೆಯನ್ನ ಆರು ಘಂಟೆಗೆ ಬಿಡುತ್ತಿದ್ದೆ. ಯಾಕೆಂದರೆ ನಮ್ಮೂರಿನಿಂದ ನಂಜನಗೂಡಿಗೆ ಕೇವಲ ಮುಕ್ಕಾಲು ಘಂಟೆಯ ಹಾದಿಯಾದರೂ ಬಸ್ಸುಗಳು ಮಾತ್ರ ಇದ್ದದ್ದು ಕೆಲವೇ ಕೆಲವು. ಅವುಗಳಲ್ಲಿ ಹಿಂದಿನ ಊರಿನಲ್ಲಿ ಜನ ತುಂಬಿದ್ದರೆ ನಮ್ಮ ಊರಿನಲ್ಲಿ ನಿಲ್ಲಿಸುತ್ತಿರಲಿಲ್ಲ. ಹಾಗಾಗಿ ಬೆಳಿಗ್ಗೆಯೇ ಎದ್ದು ಹೊರಟು ಬಿಡುತ್ತಿದ್ದೆ. ಏಳು ಘಂಟೆಗೆ ನಂಜನಗೂಡು. ಲೈಬ್ರರಿ ತೆರೆಯುವುದು ಎಂಟು ಘಂಟೆಗೆ. ಹಾಗಾಗಿ ಒಂದು ಘಂಟೆ ಅಲ್ಲಿ ಪತ್ರಿಕೆಗಳನ್ನೂ ವಿತರಿಸುವವರನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ದೆ. ಆಮೇಲೆ ಬೇಸರ ಕಳೆಯಲು ಪಕ್ಕದಲ್ಲಿದ್ದ ದೇವಸ್ಥಾನಕ್ಕೆ ಹೋಗಿ ಕುಳಿತುಕೊಂಡು ಸುಮ್ಮನೆ ಹೋಗಿ ಬರುವವರನ್ನು ನೋಡುತ್ತಿದ್ದೆ. ಯೋಚಿಸುತ್ತ ಯೋಚಿಸುತ್ತಾ ಯಾಕೋ ಈ ಬದುಕೇ ವ್ಯರ್ಥ ಎನಿಸುತ್ತಿತ್ತು. ಎಲ್ಲವನ್ನೂ ತೊರೆದು ಹೋಗಿಬಿಡಬೇಕು ಎನಿಸುತ್ತಿತ್ತು. ಯಾಕಾಗಿ ಇಷ್ಟೆಲ್ಲಾ ಹೋರಾಡಬೇಕು ಎನಿಸುತ್ತಿತ್ತು. ನನ್ನ ಕಾಲೇಜು ಜೀವನದಲ್ಲಿ ನನ್ನ ತರಗತಿಯಲ್ಲಿದ್ದ ವಿದ್ಯಾರ್ಥಿಗಳಲ್ಲಿ ನಾನೊಬ್ಬನೇ ಹುಡುಗ. ಉಳಿದವರೆಲ್ಲರೂ ಹುಡುಗಿಯರೇ. ಹಾಗಾಗಿ ನನಗೆ ಗೆಳೆಯರೇ ಇರಲಿಲ್ಲ. ಸಿನಿಮಾಕ್ಕೆ, ಸುತ್ತಾಡಲು ಎಲ್ಲದಕ್ಕೂ ನಾನೊಬ್ಬನೇ. ತರಗತಿಗೆ ಬಂದಾಗ ನಾನು ಮುಂದೆ ಕುಳಿತುಕೊಳ್ಳುತ್ತಿದ್ದರೆ ನನ್ನ ಹಿಂದೆ ಹುಡುಗಿಯರ ಹಿಂಡು ಕುಳಿತುಕೊಳ್ಳುತ್ತಿತ್ತು..ನನಗೋ ಎಂಥದೋ ಮುಜುಗರವಾಗಿತ್ತಿತ್ತು. ಅವರವರಲ್ಲಿ  ಏನಾದರೂ ಮಾತಾಡಿಕೊಂಡು ನಕ್ಕರೆ ನನಗೆ ಏನೋ ಕಸಿವಿಸಿಯಾಗುತ್ತಿತ್ತು. ಆದರೆ ನಮ್ಮ ತರಗತಿಯ ವಿದ್ಯಾರ್ಥಿನಿಯರು ಒಳ್ಳೆಯವರಿದ್ದರು. ನಾನೊಬ್ಬನೇ ಹುಡುಗ ಎಂಬ ಕನಿಕರ ಅವರಲ್ಲಿತ್ತು. ತಮ್ಮ ಪಾಡಿಗೆ ತಾವಿರುತ್ತಿದ್ದರು.ಇಡೀ ಬಿ..ಎಸ್ಸಿ. ಹೀಗೆ ಕಳೆಯಿತು. ಗೆಳೆಯರಿಲ್ಲದೆ, ಸುತ್ತಾಟವಿಲ್ಲದೆ ಒಂಟಿಯಾಗಿ. ಆ ಸಮಯದಲ್ಲಿ ನಾನು ಸ್ವಾಮೀ ವಿವೇಕಾನಂದರ ಭಕ್ತನಾಗಿದ್ದು. ಎಲ್ಲಾ ಆಸೆಯನ್ನೂ ಬಿಡಬೇಕು ಎಂದು ನಿರ್ಧರಿಸಿದ್ದೆ. ನನ್ನ ಬಗ್ಗೆಯೇ ಪ್ರಯೋಗಗಳನ್ನು ಮಾಡಿಕೊಳ್ಳಲು ನಿರ್ಧರಿಸಿದ್ದೆ. ಮುಖದಲ್ಲಿ ಮೊಡವೆ ಬರುತ್ತಿದ್ದರಿಂದ ಮುಖ ನೋಡಿದಾಗ ಚಿಂತೆಯಾಗುತ್ತದೆಂದು ಆರು ತಿಂಗಳು ನನ್ನ ಮುಖವನ್ನೂ ಕನ್ನಡಿಯಲ್ಲಿ, ಎಲ್ಲೇ ಆಗಲಿ ನಾನು ನೋಡಿರಲಿಲ್ಲ. ಸ್ನಾನ ಮಾಡಿ ಒಂದು ಅಂದಾಜಿಗೆ ತಲೆ ಬಾಚಿಕೊಳ್ಳುತ್ತಿದ್ದೆ. ಹೆಚ್ಚು ಅದ್ಯಾತ್ಮಿಕ ಪುಸ್ತಕ ಓದಲು ಪ್ರಾರಂಭಿಸಿದ್ದೆ. ಅವರ ನುಡಿಗಳು ತಲೆಯಲ್ಲಿತ್ತು. ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ಕೋಪವನ್ನು ಕಡಿಮೆಮಾಡಿಕೊಂಡೆ.ಎಲ್ಲವನ್ನೂ ಎಲ್ಲಾ ಸಂದರ್ಭದಲ್ಲೂ ವಿವೇಚನೆಯಿಂದ, ತಾಳ್ಮೆಯಿಂದ ವರ್ತಿಸುವುದನ್ನು ಕಲಿತೆ.ನನಗೆ ಇದಕ್ಕೆ ಸಾಥ್ ನೀಡಿದ್ದು ಯಂಡಮೂರಿಯವರ 'ಅಂತರ್ಮುಖ ' ಕಾದಂಬರಿ. ಅದನ್ನು ಸುಮಾರಿ ಸಾರಿ ಓದಿದೆ. ಸ್ವಕರುಣೆಯನ್ನು ಮನಸ್ಸಿನಿಂದ ಕಿತ್ತುಹಾಕಿದೆ.
ಹಾಗಾಗಿ ನನಗೆ ಸ್ವಾಮೀ ವಿವೇಕಾನಂದರ ಬದುಕು ಸ್ಫೂರ್ತಿಯಾಯಿತು.ಯಾವುದನ್ನೂ ಹೀಗೆಳೆಯದ, ಪ್ರತಿಯೊಂದಕ್ಕೂ ಅದರದೇ ಬೆಲೆಯಿದೆ ಎನ್ನುವ ಸಿದ್ಧಾಂತ ನನಗೂ ಮನದಟ್ಟಾಯಿತು.
ಅವರಿಗೆ, ಅವರ ಜನ್ಮದಿನವಾದ ಜನವರಿ 12 ರಂದು ನನ್ನ ಶುಭಾಶಯಗಳು.
ಇನ್ನೊಂದು ವಿಷಯ, ಜನವರಿ 12 ನನ್ನ ಜನ್ಮ ದಿನವೂ ಹೌದು.

6 comments:

  1. nice... wish you happy birthday. and i like ur way of telling ur pasts...

    ReplyDelete
  2. ಸ್ವಾಮಿ ವಿವೇಕಾನಂದರು ಅಲ್ಲದಿದ್ದರೂ you seem to be an interesting personality...ಯಾವತ್ತಿನ ಹಾಗೆ ಆತ್ಮೀಯ ಬರಹ
    good luck
    :-)
    ms

    ReplyDelete
  3. I am been following your blog for nearly a year now. You write so regularly and very article touches me one way or the other. I wish you all the best for your movie, and I sincerely hope you to change the stagnant Kannada film industry. All the best.

    Keshav (www.kannada-nudi.blogspot.com

    ReplyDelete
  4. ಹುಟ್ಟು ಹಬ್ಬದ ಶುಭಾಶಯಗಳು..

    ReplyDelete
  5. Hi
    I read ur blog since many days. each article is so different and every times gives me insight of one other.
    hope and wish ur movie will do gr8 and wish u all the best
    Manju

    ReplyDelete
  6. belated bday wishes to you.
    ನಿಮ್ಮ ಎಂದಿನ ಬರಹಗಳಿಗಿಂತ ಆಪ್ತ ಎನಿಸಿತು

    ReplyDelete