Saturday, April 8, 2017

ಕಾಟ್ರು ವೆಲಿಯಾಡು:

ಸುಮ್ಮನೆ ಯಾರನ್ನಾದರೂ ಮಣಿರತ್ನಂ ಅವರ ಚಿತ್ರ ಚೆನ್ನಾಗಿದೆಯಾ..?
ಎಂದು ಕೇಳಿ. ಒಂದೇ ಶಬ್ಧದಲ್ಲಿ ಉತ್ತರ ಬರುವುದೇ ಇಲ್ಲ. ಬದಲಿಗೆ ಫೋಟೋಗ್ರಫಿ,ಹಾಡುಗಳು.. ಅದೂ ಇದೂ ಎಂದು ಮಾತು ಮುಂದುವರೆಯುತ್ತದೆ. ಅದೆಲ್ಲ ಇರಲಿ ಗುರು ಸಿನಿಮಾ ಹೇಗಿದೆ..?
ಸ್ವಲ್ಪ ಓಕೆ.....ಎನ್ನಲು ಸಿನಿರಸಿಕ ತಡಕಾಡುತ್ತಾನೆ.
ಮಣಿರತ್ನಂ..ಸಿನಿಮಾಗಳು ಲಯ ಕಳೆದುಕೊಂಡು ದಶಕಗಳಾಗಿವೆ. ಆದರೆ ಮಣಿರತ್ನಂ ಬಗೆಗೆ ಅಷ್ಟು ಸುಲಭವಾಗಿ ಕೇವಲವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಭಟ್ಟರನ್ನು ಸಾರಾಸಗಟಾಗಿ ಆಡಿಕೊಂಡಂತೆ, ರಾಮಗೋಪಾಲ್ ವರ್ಮರನ್ನು ನಿವಾಳಿಸಿ ಎಸೆದಂತೆ ಮಣಿರತ್ನಂನನ್ನು ಅವರ ಚಿತ್ರಗಳನ್ನು ಸಿನಿಕರ್ಮಿಗಳು ಎಸೆಯುವುದಿಲ್ಲ. ಅದಕ್ಕೆ ಕಾರಣಗಳೇನು..? ರೋಜಾ ನಂತರ ಮಣಿರತ್ನಂ ಚಿತ್ರಗಳನ್ನು ತೆಗೆದುಕೊಳ್ಳಿ. ಹಾಗೆಯೇ ರೋಜಾ ಚಿತ್ರದ ಹಿಂದಿನ ಚಿತ್ರಗಳನ್ನೂ ತುಲನೆ ಮಾಡಿ. ಮಣಿರತ್ನಂ ಒಬ್ಬ ಪ್ರಾಮಾಣಿಕ ವಸ್ತು ನಿಷ್ಠ ನಿಖರತೆಯ ನಿರ್ದೇಶಕ. ಪ್ರತಿದೃಶ್ಯದ ಶೃಂಗಾರ, ಅದಕ್ಕೊಪ್ಪುವ ತಾಂತ್ರಿಕ ಅಂಶದ ಜೊತೆಗೆ ಕಲಾವಿದರ ಕಟ್ಟುನಿಟ್ಟಾದ ಅಭಿನಯವನ್ನು ತುಂಬದೆ ದೃಶ್ಯವನ್ನು ಫೈನಲ್ ಮಾಡುವುದಿಲ್ಲ. ಮಳೆ ಇಲ್ಲ ಎಂದರೆ ಮಳೆಗಾಗಿ ವರ್ಷಗಟ್ಟಲೆ ಕಾಯುವ, ಸಿನಿಮಾ ನೋಡಿದ ನಂತರ ಇಷ್ಟವಾಗದಿದ್ದರೆ ಮುಲಾಜಿಲ್ಲದೆ ಕತ್ತರಿಸಿ, ಪುನರ್ಚಿತ್ರಿಸುವ ಛಾತಿ ಅವರದ್ದು.
ಕನ್ನಡ, ಮಲಯಾಳಂ, ತಮಿಳು ಭಾಷೆಗಳಲ್ಲಿ ತಲಾ ಒಂದೊಂದು ಚಿತ್ರ ನಿರ್ದೇಶಿಸಿದ ಮಣಿರತ್ನಂ ಮೂರು ಚಿತ್ರಗಳಲ್ಲಿ ಸೋಲನ್ನುಂಡವರು. ಆದರೆ ಅವರ ಬೆನ್ನಲ್ಲೇ ನಿರ್ಮಾಪಕ ಸಂಬಂಧಿಗಳಿದ್ದರು, ಸ್ವತಃ ತಾವೇ ನಿರ್ಮಾಪಕರು ಆದ್ದರಿಂದ ಅವರ ಚಿತ್ರಯಾತ್ರೆಗೆ ಧಕ್ಕೆ ಬರಲಿಲ್ಲ.ಆನಂತರ ಇದಯ ಕೊವಿಲ್ ಚಿತ್ರದ ಮೂಲಕ ಯಶಸ್ಸು ಕಂಡ ಮಣಿರತ್ನಂ ಸತತ ಹಿಟ್ ಚಿತ್ರಗಳನ್ನು ಕೊಟ್ಟು ಜೊತೆಗೆ ಪ್ರಶಸ್ತಿಗಳನ್ನು ಬಾಚಿ ಕೊಂಡವರು. ಆನಂತರ ಮತ್ತೆ ಅವರ ಗ್ರಾಫ್ ಇಳಿಮುಖವಾದರೂ ದಳಪತಿ ಕಮರ್ಷಿಯಲ್ ಗಾದಿಗೆ ಅವರನ್ನು ತಂದು ನಿಲ್ಲಿಸಿದರೆ, ರೋಜಾ ಅವರನ್ನು ಉತ್ತುಂಗಕ್ಕೆ ಏರಿಸಿದ ಚಿತ್ರ. ಆನಂತರ ಮಣಿರತ್ನಂ ತಿರುಗಿನೋಡಿದ್ದು ಕಡಿಮೆಯೇ. ಅವರ ಅಂದುಕೊಂಡದ್ದನ್ನು, ಅವರಿಗೆ ಇಷ್ಟ ಆದದ್ದನ್ನು ಮಾಡುತ್ತಲೇ ಹೋದರು, ಆದರೆ ಆನಂತರ ಹೆಚ್ಚು ಹೆಚ್ಚು ತಮ್ಮ ಹೆಸರಿಗೆ, ಅದಕ್ಕಿರುವ ಪ್ರಸಿದ್ಧಿಗೆ ಬೆಲೆ ಕೊಟ್ಟ ಮಣಿರತ್ನಂ ಸಿನಿಮಾ ಕಸುಬುದಾರಿಕೆ, ಕುಸುರಿಗೆ ಒತ್ತುಕೊಟ್ಟರು. ಅಷ್ಟರಲ್ಲಾಗಲೇ ಮಣಿರತ್ನಂ ಸಿನಿಮಾ ಎಂದರೆ ಅದು ಬೇರೆ ಏನೋ ಎನ್ನುವ ಹೆಸರು ಗಳಿಸಿದ್ದರಿಂದ ಸಿನಿಮಾ ಸೋತರೂ ಬಂಡವಾಳಕ್ಕೆ ಮೋಸವಿಲ್ಲ ಎನ್ನುವಂತಾಗಿತ್ತು. ಇತ್ತೀಚಿಗೆ ಕಡಲ್ ಎನ್ನುವ ಚಿತ್ರ ಮಾಡಿದ್ದರು. ಅರ್ಧಘಂಟೆ ಆಕಳಿಸದೆ ಸಿನಿಮಾ ನೋಡಲು ಸಾಧ್ಯವೇ...?
ಸಧ್ಯಕ್ಕೆ ಕಾಟ್ರು ವಲಿಯಾಡು. ಮಣಿರತ್ನಂ ಸ್ಪಷ್ಟವಾಗಿದ್ದಾರೆ. ಆದರೆ ನೋಡುತ್ತ ನೋಡುತ್ತಾ ಪಾತ್ರಗಳು ಒಳಕ್ಕಿಳಿಯುವುದು ಕಷ್ಟವೇ..? ಪ್ರತಿಸಾರಿಯೂ ಇದು ಮಣಿರತ್ನಂ ಚಿತ್ರ ಎಂದುಕೊಂಡೋ ಏನೋ ಒಂದು ಇರುತ್ತದೆ ಎಂದುಕೊಂಡೋ ಸಿನಿಮಾ ನೋಡುವ ಸಿನಿಕರ್ಮಿಗೂ, ಮನರಂಜನೆಗಾಗಿ ಸಿನಿಮಾ ನೋಡುವ ಸಿನಿರಸಿಕನಿಗೂ ವ್ಯತ್ಯಾಸ ಇದ್ದೇ ಇರುತ್ತದೆ. ಹಾಗಾಗಿ ಕಾಟ್ರು ನೋಡುತ್ತಾ ನೋಡುತ್ತಾ ಹಿಂಸೆಯಾಗಿಬಿಡುತ್ತದೆ. ದೇಶಗಳ ಸಂಘರ್ಷದಿಂದ ಪ್ರಾರಂಭವಾಗುವ ಚಿತ್ರ ಎರಡು ಹೃದಯಗಳ ಸಂಘರ್ಷಕ್ಕೆ ತೆರೆದುಕೊಳ್ಳುತ್ತದೆ. ಆದರೆ ದೃಶ್ಯಗಳು, ನಿರೂಪಣಾ ತಂತ್ರ ಖುಷಿ, ಮುದ ಎರಡೂ ನೀಡದೆ ಆಕಳಿಕೆ ತರಿಸುತ್ತದೆ. ಕೊನೆ ಕೊನೆಗೆ ಸಿನಿಮಾ ಮುಗಿಯುವುದು ಯಾವಾಗ ಎನಿಸಿಬಿಡುತ್ತದೆ.

ಅನಿಸಿದ್ದನೆಲ್ಲಾ ಹಿಂದೆ ಮುಂದೆ ನೋಡದೆ ಯೋಚನೆ ಮಾಡದೆ ಅಧ್ಯಯನ ಮಾಡದೆ ಸಿನಿಮಾ ಮಾಡಿ ಮೂಲೆಗುಂಪಾದದ್ದು ರಾಮ್ ಗೋಪಾಲ್ ವರ್ಮ. ಇಮೇಜ್ ಗೆ ಕಟ್ಟು ಬೀಳದೆ ಸಿನಿಮಾ ಮಾಡಿದ್ದು, ಅದರಲ್ಲಿ ಇಮೇಜ್ ಪಡೆದುಕೊಂಡದ್ದು, ಇಡೀ ಬಾಲಿವುಡ್ ಒಂದು ದಿಕ್ಕಾದರೆ ವರ್ಮರದ್ದೆ ಮತ್ತೊಂದು ಬಾಲಿವುಡ್ ಎನ್ನುವಂತಾದದ್ದು ಅವರ ವಿಶೇಷ. ಆದರೆ ಅವರ ಆ ಕಾರ್ಯವೇ ಕೊನೆ ಕೊನೆಗೆ ಅವರ ಬಾಲಿವುಡ್ ಬಿಟ್ಟು ತೆಲುಗಿಗೆ ಅಲ್ಲಿಗೆ ಇಲ್ಲಿಗೆ ನೆಲೆಯಿಲ್ಲದಂತೆ ಓಡಾಡಿದ್ದಾಯಿತು. ಆದರೆ ಮಣಿರತ್ನಂ ಘನತೆ ಗಾಂಭೀರ್ಯ ಕಾಯ್ದುಕೊಂಡವರು. ಆದರೆ ಅವರು ಸಾಮಾನ್ಯ ಪ್ರೇಕ್ಷಕರನ್ನು ಗಣನೆಗೆ ತೆಗೆದುಕೊಳ್ಳದೆ, ಅಂತರರಾಷ್ಟ್ರೀಯ ವೀಕ್ಷಕರನ್ನು, ಪ್ರೌಢವೀಕ್ಷಕರನ್ನು ಜ್ಯೂರಿಗಳನ್ನಷ್ಟೇ ತಲೆಯಲ್ಲಿಟ್ಟುಕೊಂಡು ಸಿನಿಮಾ ಮಾಡುತ್ತಾರೆನೋ ಎನಿಸಿಬಿಡುತ್ತದೆ. ಅದಕ್ಕೆ ಉದಾಹರಣೆಯಾಗಿ ಕಡಲ್, ಓಕೆ ಕಣ್ಮಣಿ, ಕಾಟ್ರು ವೆಲಿಯಾಡು, ರಾವಣ್ ಇಂಬು ಒದಗಿಸುತ್ತವೆ.

1 comment: