Thursday, March 10, 2016

ಸಾಲು ಸಾಲು ಚಿತ್ರಗಳ ನಡುವೆ ನೋಡಬೇಕಾದದ್ದು..

ಪೂಚಂತೇ ಬರಹಗಳು ನನ್ನನ್ನು ಓದಿಸಿಕೊಂಡಿದ್ದು ಬಹಳ. ಅದೆಷ್ಟೇ ಸಲ ಓದಿದ್ದರೂ ಮತ್ತೊಮ್ಮೆ ಓದುವ ಎನ್ನುವಂತೆ ಮಾಡುವುದು ಅವರ ಬರಹಗಳ ವಿಶೇಷ. ಅವರ ಪರಿಸರದ ದಿನಗಳು ಮೊನ್ನೆ ಎಲ್ಲೋ ಹೋದಾಗ ಕೈ ಸಿಕ್ಕಿ ಅದೆಷ್ಟು ಆನಂದವಾಯಿತು ಎಂದರೆ ಅದನ್ನು ಇದಾಗಲೇ ಲೆಕ್ಕವಿಲ್ಲದಷ್ಟು ಸಲ ಓದಿದ್ದರೂ ಮತ್ತೊಮ್ಮೆ ಓದಿ ಆವಾಂತರ ಸೀನಪ್ಪ, ಮಾಸ್ತಿ ಭೈರ ಮುಂತಾದವರನ್ನು ಮನ'ತುಂಬಿಸಿಕೊಂಡದ್ದಾಯಿತು. ಪೂಚಂತೇ ಕಾದಂಬರಿಗಳು ಕತೆಗಳು ಸಿನಿಮಾ ರೂಪ ತಾಳಿವೆ. ಅವರ ತಬರನ ಕತೆ ಈವತ್ತಿಗೂ ಮನ ಮಿಡಿಸುತ್ತದೆ. ಅವರ ಜುಗಾರಿ ಕ್ರಾಸ್ ಸೂಪರ್ ಥ್ರಿಲ್ಲರ್. ಆ ನಿಟ್ಟಿನಲ್ಲಿ ಕಿರಗೂರಿನ ಗಯ್ಯಾಳಿಗಳು ನೀಳ್ಗತೆ ಒಂದು ಜಾಲಿ ರೈಡ್ ಎನ್ನಬಹುದು. ಅಲ್ಲಿನ ಸಂಭಾಷಣೆ ಮತ್ತು ನಡೆಯುವ ಘಟನೆಯೇ ಚಿತ್ರದ ಕತೆಯ ಹೈ ಲೈಟ್. ಅದು ಸಿನಿಮಾ ರೂಪಕ್ಕೆ ಬರುತ್ತಿರುವುದು ಮತ್ತು ಚಿತ್ರಕ್ಕೆ ನಿರ್ದೇಶಕಿ ಆಯ್ಕೆ ಮಾಡಿಕೊಂಡಿರುವ ತಾರಾಗಣ ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚು ಮಾಡಿದೆ. ಹಾಗೆಯೇ ಎಂಟು ನಿಮಿಷಗಳ ಟ್ರೈಲರ್ ಮೂಲಕ ಮನಗೆದ್ದ ಸುನಿ ಅವರ ಸಿಂಪಲ್ ಆಗ್ ಇನ್ನೊಂದ್ ಲವ್ ಸ್ಟೋರಿ. ಅವರ ಮೊದಲ ಸಿನಿಮಾ ತೆರೆಗೆ ಬಂದಾಗ ಸ್ವಲ್ಪ ಅಗತ್ಯಕ್ಕಿಂತ ಜಾಸ್ತಿಯೇ ಅಬ್ಬರಿಸಿದ್ದ ಚಿತ್ರತಂಡವದು. ಒಮ್ಮೊಮ್ಮೆಗೆ ತಮ್ಮ ಬ್ಯಾನರ್ ನ ಐದಾರು ಚಿತ್ರಗಳನ್ನು ಘೋಷಣೆ ಮಾಡಿ ಹುಬ್ಬೇರಿಸುವಂತೆ ಮಾಡಿದ್ದ ಸುನಿ ಬಹುಪರಾಕ್ ನಂತರ ತೀರಾ ಮಂಕಾದದ್ದು ವಿಪರ್ಯಾಸ. ಅವರದೇ ನಿರ್ಮಾಣದ ಮತ್ತೊಂದು ಚಿತ್ರ ಉಳಿದವರು ಕಂಡಂತೆಯೇ ಚಿತ್ರದ ಸೋಲು ಅವರನ್ನು ಪೂರ್ತಿಯಾಗಿ ಹಳ್ಳ ಹಿಡಿಸಿದ್ದು ಸತ್ಯ. ಹಾಗೆ ನೋಡಿದರೆ ಎರಡೂ ಚಿತ್ರಗಳು ಹೊಸ ಪ್ರಯೋಗಗಳೇ. ಆದರೆ ಅದೆಲ್ಲೋ ಹಣಕಾಸಿನ ಲೆಕ್ಕಾಚಾರ ಉಲ್ಟಾ ಆಯಿತೇನೋ? ಆ ಎರಡು ಸಿನಿಮಾ ಗೆದ್ದಿದ್ದರೆ ಕನ್ನಡಕ್ಕೆ ಮತ್ತಷ್ಟು ಹೊಸ ನಿರ್ದೇಶಕರ ಪರಿಚಯವಾಗುತ್ತಿತ್ತೇನೋ? ಈಗ ಸದ್ದಿಲ್ಲದೇ ಸುನಿ ಮಾತ್ತೊಂದು ಸಿನಿಮಾ ತಂದಿದ್ದಾರೆ. ಅದರದ್ದೂ ಮಾರುದ್ದದ ಟ್ರೈಲರ್ ಬಿಟ್ಟಿದ್ದರೂ ಆ ಸಿನಿಮಾ ಮಾಡಿದ ಮೋಡಿಯನ್ನು ಈ ಸಿನಿಮಾ ಮಾಡಿಲ್ಲ. ಆದರೂ ಭರವಸೆಯಂತೂ ಇದ್ದೆ ಇದೆ.
ವಾರಕ್ಕೆ ಆರಾರು ಚಿತ್ರಗಳು ಬಿಡುಗಡೆಯಾಗುತ್ತಿದೆ. ಒಂದು ಸಿನಿಮಾ ಮಾಡುವುದು ವರ್ಷಗಟ್ಟಲೆ ಸಮಯದ ನೂರಾರು ಜನರ ಶ್ರಮದ ಮತ್ತು ಕೋಟ್ಯಾಂತರ ರೂಪಾಯಿಗಳ ಖರ್ಚಿನ ವಿಷಯ. ಆದರೆ ಕೆಲವೊಮ್ಮೆ ಅದನ್ನೂ ಅಷ್ಟೇ ಸುಲಭವಾಗಿ ಮಾಡಿಬಿಡುವ ನಿರ್ದೇಶಕರಿಗೆ ಒಂದೊಂದು ದೊಡ್ಡ ಸಲಾಂ ಹೊಡೆಯಲೇ ಬೇಕಾಗುತ್ತದೆ. ಫೆಬ್ರವರಿ ತಿಂಗಳಿನಲ್ಲಿ ಭಾಗ್ಯರಾಜ್, ದೇವರ ನಾಡಲ್ಲಿ, ಗಜಪಡೆ, ಜ್ವಲಂತಂ, ನಾನಿಲ್ದೆ ನೀನಿರ್ತೀಯ, ಪ್ರಿಯಾಂಕ, ಶಿವಯೋಗಿ ಪುಟ್ಟಯ್ಯಜ್ಜ, ಬನವಾಸಿ, ಪ್ರೀತಿಯಲ್ಲಿ ಸಹಜ, ಶಿವಲಿಂಗ, ಆಕ್ಟರ್, ಭಲೆಜೋಡಿ, ಮಧುರ ಸ್ವಪ್ನ, ನನ್ನ ಲವ್ ಟ್ರ್ಯಾಕ್, ರಾಜ್ ಬಹದ್ದೂರ್, ಯು ದಿ ಎಂಡ್ ಎ, 400, ಗೇಮ್. ಕೃಷ್ಣರುಕ್ಕು, ಮರೆಯಲಾರೆ, ಪ್ರೀತಿ ಕಿತಾಬು, ವಾಟ್ಸ್ ಅಪ್ ಲವ್ ಬಿಡುಗಡೆಯಾಗಿವೆ. ಅಂದರೆ ವಾರಕ್ಕೆ ಆರು ಚಿತ್ರಗಳು. ಅದರಲ್ಲಿ ಯಾವುದೂ ಗಮನ ಸೆಳೆದಿಲ್ಲ. ನೋಡುಗ ವಾರಕ್ಕೆರೆಡು ನೋಡಿದರೂ ಸಿನಿಮಾಗಳು ದಂಡಿಯಾಗಿ ಬಾಕಿ ಉಳಿಯುತ್ತವೆ. ಇವುಗಳಲ್ಲಿ ಕೆಲವಂತೂ ಕೆಲವು ಊರನ್ನು ಕಾಣುವುದೇ ಇಲ್ಲ. ಬೆಂಗಳೂರಿನ ಒಂದೆರೆಡು ಚಿತ್ರಮಂದಿರಗಳಲ್ಲಿ ಕಾಣಿಸಿಕೊಂಡರೆ ಆಮೇಲೆ ಅವನ್ನು ನಾವು ನೋಡುವುದಕ್ಕೂ ಸಾಧ್ಯವಿಲ್ಲ. ಮೊದಲೆಲ್ಲಾ ಮಿಸ್ಸಾದರೆ ಟಿವಿಯಲ್ಲಿ ಬರುತ್ತೆ ಎನ್ನಬಹುದಾಗಿತ್ತು. ಈಗ ಟಿವಿಯಲ್ಲಿ ಬರುವುದಿಲ್ಲ. ಬೇರೆ ತಾಲೂಕು, ಹೋಬಳಿ, ದೊಡ್ಡ ಊರುಗಳ ಟೆಂಟ್ ನಲ್ಲಿ ಕಾಣಿಸುವುದಿಲ್ಲ. ಹಾಗಾಗಿ ಬಂದದ್ದಷ್ಟೆ.. ಹೋದದ್ದಷ್ಟೇ. ಆನಂತರ ಆ ಸಿನಿಮಾ, ಆ ನಿರ್ದೇಶಕ, ಆ ನಿರ್ಮಾಪಕ, ಆ ಹಣ ಎಲ್ಲವೂ ಮಂಗಮಾಯ. ಆದರೂ ಸಿನೆಮಾವನ್ನು ಅಧ್ಯಯನ ಮಾಡದಯೇ ಕಣ್ಮುಚ್ಚಿಕೊಂಡು ಸಿನಿಮಾ ಮಾಡುವ ಅದನ್ನು ಬಿಡುಗಡೆ ಮಾಡುವವರಿಗೇನೂ ಕಡಿಮೆಯಿಲ್ಲ ಎನ್ನುವುದು ಬೇಸರದ ಸಂಗತಿ. ಹಾಗೆಯೇ ಈ ವಾರವೂ ಸಿನಿಮಾಗಳಿವೆ. ಎಲ್ಲವನ್ನೂ ನೋಡುವ ಎನಿಸಿದರೂ ಎ ಎರಡು ಚಿತ್ರಗಳು ಭರವಸೆ ಹುಟ್ಟಿಸಿವೆ.

No comments:

Post a Comment